ಪುಟ:Mahakhshatriya.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯.ಪಾಪವು ಪರಿಹಾರವಾಯಿತೆ?

ಸಮೀಪದಲ್ಲಿ ಅಜ್ಞಾತರಾಗಿ ನಿಂತಿದ್ದ ಅಗ್ನಿವಾಯುಗಳು ಮೂರ್ಛಿತವಾಗಿ ಬಿದ್ದಿದ್ದ ದೇವರಾಜನನ್ನು ಕೂಡಲೇ ಹಾಗೆಯೇ ಹೊತ್ತುಕೊಂಡು ಬಂದು ಶಚಿಯ ಅಂತಃಪುರದಲ್ಲಿ ಇಳಿಸಿದರು. ಬಿಟ್ಟಕಣ್ಣು ಬಿಟ್ಟುಕೊಂಡು ನಿಶ್ಚೇಷ್ಟನಾಗಿ ಬಿದ್ದಿರುವ ದೇವಪತಿಯು ಮತ್ತೆ ಸಚೇತನನಾಗಲು ಅಷ್ಟು ಹೊತ್ತಾಯಿತು. ಶಚಿಯು ಸ್ವಂತವಾಗಿ ಉಪಚಾರಮಾಡಿ, ಆತನಿಗೆ ಬಲತರವಾದ ಆಸವಾದಿಗಳನ್ನು ಕೊಟ್ಟು ಪೂರ್ವದಂತೆ ಮಾಡಿದಳು.

ಆದರೂ ಆತನಿಗೆ ಆ ಭ್ರಾಂತಿಯು ಬಿಟ್ಟಿಲ್ಲ. “ಅದೋ ! ವಿಶ್ವರೂಪನು ಬಂದನು! ನನಗೆ ಶಾಪ ಕೊಡುವುದಾಗಿ ಹೆದರಿಸುತ್ತಿದ್ದಾನೆ. ಯಾರಲ್ಲಿ? ಮೊದಲು ಅವನನ್ನು ಹೊರ ನೂಕಿ! ಹೊರ ನೂಕಿ” ಎಂದು ಕಿರುಚುತ್ತಾನೆ.

ಆ ಕೂಡಲೇ ಅಲ್ಲಿ ಬೃಹಸ್ಪತ್ಯಾಚಾರ್ಯನು ಕಾಣಿಸಿಕೊಂಡನು. ಕೈಯಲ್ಲಿ ಅಭಿಮಂತ್ರಿತವಾದ ಉದಕವುಳ್ಳ ಕಲಶವನ್ನೂ ದರ್ಭಕೂರ್ಚಗಳನ್ನೂ ತೆಗೆದುಕೊಂಡು ಶಾಂತಿಮಂತ್ರವನ್ನು ಪಠಿಸುತ್ತಾ ದೇವರಾಜನಿಗೆ ಆ ಕಲಶೋದಕದಿಂದ ಮಾರ್ಜನವನ್ನು ಮಾಡಿದನು. ಆತನಿಂದ ಧೂಮರೂಪವಾಗಿ ಒಂದು ಆಕೃತಿಯೆದ್ದು ಬಂದು ಹೊರಗೆ ನಿಂತಿತು. ಅದನ್ನು ನೋಡುತ್ತಿದ್ದ ಹಾಗೆಯೇ ಯಾರೂ ಹೇಳದೆ, ಅದರ ವಿಕಟಾಕೃತಿಯಿಂದಲೇ, ಇದು ಪಾಪ ಪರುಷ ಎಂದು ಗೊತ್ತಾಗುವಂತಿತ್ತು. ಕೂಡಲೇ ಬೃಹಸ್ಪತಿ ಪ್ರಚೋದನದಿಂದ ಇಂದ್ರನೆದ್ದು ಅದನ್ನು ತನ್ನ ಖಡ್ಗದಿಂದ ನಾಲ್ಕು ಪಾಲು ಮಾಡಿದನು. ಪೂರ್ವದಲ್ಲಿಯೆ, ಗೊತ್ತಾಗಿದ್ದಂತೆಯೇ ಭೂಮಿ, ಜಲ, ವೃಕ್ಷ, ಸ್ತ್ರೀದೇವಿಯರು ಬಂದು ಅದನ್ನೂ ಅದಕ್ಕಿಂತ ಉಜ್ವಲವಾಗಿ ಬೆಳಗುತ್ತಿದ್ದ ವರಗಳನ್ನೂ ತೆಗೆದುಕೊಂಡು ಹೋದರು. ಇಂದ್ರನಿಗೆ ಮನಸ್ಸು ಸ್ವಸ್ಥವಾಯಿತು.

ಮತ್ತೆ ಬೃಹಸ್ಪತ್ಯಾಚಾರ್ಯನು ಇಂದ್ರನಿಂದ ನಾರಾಯಣ ಬಲಿಯನ್ನು ಮಾಡಿಸಿದನು. ಇಂದ್ರನು ರಾಹುಮುಕ್ತನಾದ ಚಂದ್ರನಂತೆ, ತನ್ನ ಪೂರ್ವದ ತೇಜಸ್ಸಿನಿಂದ ಕೂಡಿದನು.

ಆದರೂ ಇಂದ್ರನಿಗೆ ಆ ತಲೆಗಳ ಯೋಚನೆಯು ತಪ್ಪಲಿಲ್ಲ. ಅರಮನೆಯ