ಪುಟ:Mahakhshatriya.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

‘ವಿಜಯೀ....’ ಎನ್ನುವಲ್ಲಿಗೆ ನಿಂತುಬಿಟ್ಟಿತು. ದೇವೇಂದ್ರನೂ ಋಷಿಗಣದ ಪ್ರಶ್ನಕ್ಕೆ ಉತ್ತರವನ್ನು ಚಿಂತಿಸುತ್ತಿದ್ದವನು ತನ್ನ ಭಾವವನ್ನು ಬದಲಿಸಲಿಲ್ಲ. ಎಂದಿನಂತೆ ವಿನಯದಿಂದ ಅವರ ಆಶೀರ್ವಾದವನ್ನು ಪ್ರತೀಕ್ಷಿಸುತ್ತ ನಮ್ರನಾಗಿ ಏಳುವ ಬದಲು, ಗಂಭೀರಮುದ್ರೆಯಲ್ಲಿದ್ದುಬಿಟ್ಟನು. ತಾನು ತಳೆದಿರುವ ಅನುಗ್ರಹ ಮುದ್ರೆಯನ್ನು ಬದಲಾಯಿಸಿ ಅನುಗ್ರಾಹ್ಯಮುದ್ರೆಯನ್ನು ಧರಿಸಿದರೆ ಮತ್ತೆ ಪೂರ್ವಮುದ್ರೆಯು ಬರುವುದೋ ಇಲ್ಲವೋ ಎಂದು ಸಂಶಯಿಸುವವನಂತೆ ಹಾಗೆ ಇದ್ದುಬಿಡಲು, ದೇವಗುರುವು ಅದು ತನಗೆ ಅವಮಾನವಾಯಿತು ಎಂದುಕೊಂಡನು. ‘ತಾನು ಆಗಾಗ ಅಕಾಲದಲ್ಲಿ ದೇವಸಭೆಗೆ ಬರುತ್ತಿದ್ದುದುಂಟು. ಆಗಲೆಲ್ಲ ಉಪಚಾರಗಳಿಂದ ತನ್ನನ್ನು ಗೌರವಿಸುತ್ತಿದ್ದ ಇಂದ್ರನಿಂದೇಕೆ ಹೀಗೆ ವಿಮುಖನಾಗಿರುವನು?’ ಎಂದು ಆಶ್ಚರ್ಯಪಟ್ಟನು. ಆತನಿಗೆ ಏಕೋ ಅಭಿಮಾನವು ವಿಜೃಂಭಿಸಿ ತನಗೆ ಇದು ಅಪಮಾನ ಎನ್ನಿಸಿತು. ಕೂಡಲೇ ಆ ಭಾವವೂ ಬೆಳೆಯಿತು. ಕೋಪವು ಬಂತು. ಆ ಕೋಪದಲ್ಲಿ ಸಭಾಪ್ರವೇಶಮಾಡಿದ್ದೇನೆ ಎಂಬುದನ್ನೂ ಮರೆತು ಅಲ್ಲಿಯೇ ಅಂತರ್ಧಾನವನ್ನು ಹೊಂದಿದನು.

ಇಂದ್ರನು ಏನು ಮಾಡಬೇಕು? “ತಾನು ಯಾವ ಭಾವದಲ್ಲಿರುವೆನೆಂಬುದನ್ನು ಪರೀಕ್ಷಿಸದೆ ದೇವಗುರುವು ಹೀಗೆ ಹೊರಟುಹೋದನು” ಎಂದು ಆತನಿಗೂ ಕೋಪವು ಬಂತು. ಆದರೂ ಸಭಾಮರ್ಯಾದೆಯನ್ನು ಮೀರಬಾರದೆಂದು ತನ್ನ ಸುತ್ತಲೂ ನಿಂತಿದ್ದ ಮರುತರಲ್ಲಿ ಜ್ಯೇಷ್ಠನಾದವನ ಮುಖವನ್ನು ನೋಡಿದನು. ಆತನು ಕೂಡಲೇ ಅಣ್ಣನ ಭಾವವನ್ನು ಗ್ರಹಿಸಿ, ದೇವಗುರುಗಳನ್ನು ಹುಡುಕಿಕೊಂಡು ಹೋದನು. ಇಂದ್ರನು ಋಷಿಗಣಗಳ ಪ್ರಶ್ನಕ್ಕೆ ಸಮಾಧಾನವನ್ನು ಹೇಳಹೊರಟನು.

ತಪೋಧನರೆ, ತಾವು ಈ ಪ್ರಶ್ನವನ್ನು ದೇವಸಭೆಗೆ ತಂದಿರುವಿರಿ. ಇದು ಅಧಿಕಾರಕ್ಷೇತ್ರ. ಇಲ್ಲಿ ರಜೋಗುಣವು ತಾನೇ ತಾನಾಗಿರುವುದು. ಆದರೆ ಅದೃಷ್ಟ ವಿಶೇಷದಿಂದ ಇಂದು ಇಲ್ಲಿ ಲೋಕಾಲೋಕಗಳ ವಿಚಾರವು ಯಾವುದೂ ಬಂದಿಲ್ಲವಾಗಿ, ತಮ್ಮ ಪ್ರಶ್ನಕ್ಕೆ ಉತ್ತರವನ್ನು ಹೇಳೋಣ. ಸಾವಧಾನವಾಗಿ ಕೇಳಿ.”

“ತಮ್ಮ ಪ್ರಶ್ನವು ಬಹು ಸುಲಭವಾದುದು. ತಾವು ವಿಚಾರಮಾಡಿರುವುದು ಮನೋಬುದ್ಧಿಗಳಿಂದ. ಅವೆರಡೂ ದೇಹವೃಕ್ಷದ ಅಂಗಗಳೇ ಹೊರತು ಬೇರೆಯಲ್ಲ. ಅದರಿಂದ ಅವು ದೇಹಬಂಧನವನ್ನು ದಾಟುವ ಮಾರ್ಗವನ್ನು ತೋರಿಸಲಾರವು. ಅದರಿಂದ, ಅವುಗಳನ್ನು ಗೆಲ್ಲುವುದಕ್ಕಾಗಿ ಅವಸ್ಥಾತ್ರಯವನ್ನು ಅವಲಂಬಿಸಿ.”

“ಹಿಂದೊಮ್ಮೆ ಪ್ರಜಾಪತಿಯು ತನ್ನಲ್ಲಿ ಅಜರವನ್ನೂ ಅಮರವನ್ನೂ