ಪುಟ:Mahakhshatriya.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಡುವ ಆತ್ಮವಿದ್ಯೆಯುಂಟು, ಅದನ್ನು ತಿಳಿದವರು ಅಜರರೂ, ಅಮರರೂ ಆಗುವರು ಎಂದು ಘೋಷಿಸಿದನು. ಅದನ್ನು ತಿಳಿದುಬರಲು ದೆವತೆಗಳು ನನ್ನನ್ನೂ, ದೈತ್ಯರು ವಿರೋಚನನನ್ನೂ ಕಳುಹಿಸಿಕೊಟ್ಟರು. ಅತನು ಆತ್ಮವಿದ್ಯೆಯನ್ನು ಬೋಧಿಸಿದುದು ಹೀಗೇ ಅವಸ್ಥಾತ್ರಯಗಳನ್ನು ಹಿಡಿದು. ಅದನ್ನೇ ಈಗ ನಾನು ತಮಗೆ ಹೇಳುತ್ತಿರುವೆನು.” “ಆಯಿತು. ದೇವರಾಜನು ಪ್ರಸನ್ನನಾಗಲಿ. ಅವಸ್ಥಾತ್ರಯವನ್ನು ಹಿಡಿಯುವುದು ಎಂದರೇನು?”

“ಕೇಳಿ, ಜಾಗ್ರತ್ತಿನಲ್ಲಿರುವವರೆಗೂ ಬುದ್ಧಿಮನಸ್ಸುಗಳು ಏಕೆ ಹೀಗೆ ಮಡುತ್ತಿವೆ? ಹೀಗೆ ಮಾಡು ಎಂದು ಯಾರು ಇವನ್ನು ಪ್ರೇರೇಪಿಸಿದರು ಎಂದು ಪರೀಕ್ಷೆ ಮಾಡುತ್ತಿರುವುದು. ಜಾಗ್ರದವಸ್ಥೆಯು ಅಹಂಕಾರ ಸ್ಥಾನವು. ರಜೋಗುಣದ ಆವೇಶವುಳ್ಳದು. ಅದರಿಂದ ಅಲ್ಲಿ ಅಹಂಕಾರವನ್ನು ವಿಜೃಂಭಿಸದಂತೆ ತಡೆದು, ರಜಸ್ಸಿನ ಆವೇಶಕ್ಕೆ ಎಡೆಗೊಡದೆ, ಎಚ್ಚರವಾಗಿರಬೇಕು. ಹಾಗಿರುವುದೇ ಜಾಗ್ರತ್ತಿನ ಅನ್ವೇಷಣವು.”

“ಇದರಿಂದ ಏನಾಗುವುದು ಮಹಾದೇವ?”

“ಇದರಿಂದ ತನ್ನ ಸುತ್ತಲೂ ತುಂಬಿರುವ ಪ್ರಾಣದ ಪರಿಚಯವಾಗುವುದು. ಪ್ರಾಣವೇನು ಎನ್ನುವಿರಾ? ಆತ್ಮನ ನೆರಳೇ ಪ್ರಾಣವು. ಪ್ರಾಣವನ್ನು ನೋಡುತ್ತ ಅದರ ಹಿಂದಿರುವ ಆತ್ಮನ ಜಾಡೆ ಹಿಡಿದು ಭೇದಿಸಿದರೆ, ಬ್ರಹ್ಮಸಾಕ್ಷಾತ್ಕಾರವಾಗುವುದು.”

“ದೇವದೇವ, ಬ್ರಹ್ಮಸಾಕ್ಷಾತ್ಕಾರವಾಗುವುದು ಎಂದರೇನು?”

“ಬ್ರಹ್ಮವು ಅತೀಂದ್ರಿಯವು. ಇಂದ್ರಿಯಗೋಚರವಾಗುವುದಲ್ಲ ಎಂಬುದು ಸಿದ್ಧಾಂತವಾಗಿ ಮನಸ್ಸಿಗೆ ಹಿಡಿಯುವುದೇ ಬ್ರಹ್ಮಸಾಕ್ಷಾತ್ಕಾರವು. ಶ್ರವಣಕಾಲದಲ್ಲಿ ಅದು ಶಾಸ್ತ್ರೋಕ್ತಿಯಾಗಿ ಗ್ರಹಣವಾಗುವುದು. ಮನನ ಕಾಲದಲ್ಲಿ ಸತತವಾಗಿ ಅನುಚಿಂತಿತವಾಗುತ್ತ ಬೇರೆ ಬೇರೆ ಯುಕ್ತಿಗಳಿಂದ ಸಿದ್ಧವಾಗುತ್ತಿರುವುದು. ನಿಧಿಧ್ಯಾಸನ ಕಾಲದಲ್ಲಿ ಅದು ಸಿದ್ಧಾಂತವಾಗಿ, ಭೂಮಿಯಲ್ಲಿರುವ ನಿಧಿಯಂತೆ ಸಾಕ್ಷಾತ್ಕಾರವಾಗಿರುವುದು. ಅಲ್ಲಿಯವರೆಗೂ ದೇಹೋವಹಂಭ್ರಾಂತಿಯು ಬಿಟ್ಟುದ್ದಲ್ಲ. ಈ ಭ್ರಾಂತಿನಿರಸನವಾಗಲು ಮುಮುಕ್ಷು-ಜನರು ನನ್ನನ್ನು ಉಪಾಸನ ಮಾಡುವರು.”

“ಬ್ರಹ್ಮ ವಿದ್ಯಾಸಂಪ್ರದಾಯಕರ್ತೃವೆಂದು ನಿನ್ನನ್ನು ಬಲ್ಲವರು ಹೊಗಳುವ ಕಾರಣವು ಈಗ ತಿಳಿಯಿತು. ಬ್ರಹ್ಮನ್, ಇನ್ನು ಸುಷುಪ್ತಿಯ ವಿಚಾರವು ಅಪ್ಪಣೆಯಾಗಬೇಕು.”