ಪುಟ:Mrutyunjaya.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೧೪೭

ಪಾಠ ಮುಗಿಸಿ ರಾಜಗೃಹದಿಂದ ಮರಳಿದ ಈ ಹುಡುಗರ ತಂಡವನ್ನು
ಊರಿನ ಜನ ಕೌತುಕದ ನೋಟದಿಂದ ಕಂಡರು.
ಒಳಗಿನ ಸಂಕಟವನ್ನು ಮರೆಮಾಚಲು ಶಾಲಾ ಕಟ್ಟಡದ ಮಾತನ್ನು
ಅಪೆಟ್ ಆಡಿದ್ದ. ಇಪ್ಯುವರ್‌ಗೂ ಅದು ಅರ್ಥವಾಗದ್ದಲ್ಲ. ಎಂದಿನಂತೆ
ಮೆನೆಪಾಟಾ ರಾಜಗೃಹಕ್ಕೆ ಬಂದಾಗ ಅಪೆಟ್ ಹೇಳಿದ್ದನ್ನು ಇಪ್ಯುವರ್
ಅವನಿಗೆ ತಿಳಿಸಿದ.
"ಶಾಲೆಗೆ ಕಟ್ಟಡ ಮಂದಿರದ ಪಕ್ಕದಲ್ಲಿ ಅರ್ಚಕರು ಗೆರೆ ಹಾಕಿ
ಕೊಡ್ತಾರೆ. ಅಡಿಪಾಯದ ಕೆಲಸ ಶುರುವಾಗ್ಲಿ." ಎಂದು ಮೆನೆಪ್ಟಾ ಖ್ನೆಮ್
ಹೊಟೆಪ್‌ಗೆ ತಿಳಿಸಿದ.
ಹತ್ತಾಳು ಸಿದ್ದರಾದರು ; ಒಬ್ಬ ಕಾಪೀರು ನಿಯೋಜಿತನಾದ.
ವಿದ್ಯೆಗೆ ಸಂಬಂಧಿಸಿದ ಕಟ್ಟಡ ಎಂಬುದನ್ನು ತಿಳಿದ ಆಳುಗಳೆಂದರು :
"ಇವತ್ತಿನ ಕೆಲಸಕ್ಕೆ ವೇತನ ಬೇಡ. ನಾಳೆಯಿಂದ ಲೆಕ್ಕ ಇಟ್ಟರೆ
ಸಾಕು."

****

ನೀಲನದಿಯ ಮೂಲ ನೀರಾನೆ ಪ್ರಾಂತದಿಂದ ಹತ್ತಾರು ದಿನಗಳ
ದೋಣಿ ಪ್ರವಾಸದ ದೂರ. ಅಲ್ಲಿ ಮಳೆಗಾಲ ಸನ್ನಿಹಿತವಾಗಿದೆ ಎಂದು
ಸಾರಿತ್ತು, ಸೊಥಿಸ್ ನಕ್ಷತ್ರ. ಗಿರಿ ಕಂದರ ಕಾನನಗಳ ವಿಸ್ತಾರ ಪ್ರದೇಶದಲ್ಲಿ
ನೀರು ಸಂಗ್ರಹವಾಗಿ ನದಿಯನ್ನು ಸೇರಬೇಕು. ಏಳು ಮಹಾ ತಿರುವುಗಳಲ್ಲಿ
ಹರಿದು, ಐಗುಪ್ತದ ಮರಳುಗಾಡಿಗೆ__ಬಯಲಿಗೆ__ಬರಬೇಕು. ಪ್ರವಾಹ
ಉಕ್ಕೇರಿದಾಗ ಕೊಚ್ಚಿತಂದ ಫಲವತ್ತಾದ ಕರಿಯ ಮಣ್ಣೆಲ್ಲ ಇಕ್ಕೆಲಗಳಲ್ಲೂ
ವಿಸ್ತಾರ ಹೊಲಗಳ ಸಾಲು. ನಾಲ್ಕು ತಿಂಗಳು ಹಾಗೆಯೇ ನಿಂತ ಮಹಾ
ಪೂರ ಇಳಿದ ಮೇಲೆ ಬೇಸಾಯ.
ಭೂಮಾಲಿಕರ ಪಲಾಯನದಿಂದ ಹಬ್ಬದ ಸಂಭ್ರಮಕ್ಕೆ ಕಳೆಕಟ್ಟಿತು.
"ಬಿತ್ತನೆ ವೇಳೆಗೆ ಇವರು ವಾಪಸು ಬರೋದೆಲ್ಲ ಸುಳ್ಳು," ಎಂದರು
ಜನ.
ಹಬ್ಬದಂದು ಅಪರಾಹ್ನ ಹಿರಿಯರ ಸಮಿತಿಯ ಸಭೆಯ ಮುಂದೆ ಖ್ನೆಮ್