ಈ ಪುಟವನ್ನು ಪರಿಶೀಲಿಸಲಾಗಿದೆ
ತಾನೇ ಇಷ್ಟವಿಲ್ಲ? ಅರಮನೆಯ ಬೇರೆ ಕೆಲ ಅಧಿಕಾರಿಗಳಿಗೂ ಅವನು ಪರಿಚಿತನಾದ.
ನಡಳಿತದ ಚೌಕಮಣೆಯ ಕಾಯಿಗಳನ್ನೇನೋ ಗುರುತಿಸಿದ್ದ. ಹೇಗಾದರೂ ಮಾಡಿ ಅವನ್ನು ಸರಿಸಲು ಶಕ್ತನಾದೆನೆಂದರೆ ತನ್ನ ಉನ್ನತಿ ಖಚಿತ_ ಎಂದುಕೊಂಡ. ಆ ಆಟದ ನಿಯಮಗಳನ್ನು ಅವನು ಕಲಿತುದು ಅಮಾತ್ಯನ ಹಿರಿಯ ಲಿಪಿಕಾರ ಸೆನೆಬ್ನಿಂದ. ನುಟ್ಮೊಸ್ಗೆ ಅಮಾತ್ಯರ ಭೇಟಿ ಲಭಿಸಿದ್ದೂ ಅವನ ಪ್ರಯತ್ನದಿಂದಲೇ. ಅಮಾತ್ಯನೊಡನೆ ಆತ ಸೆನೆಬ್ ಹೇಳಿಕೊಟ್ಟಂತೆಯೇ ವರ್ತಿಸಿದ. ಅಮಾತ್ಯ: "ಈ ಕಾಣಿಕೆಗಳನ್ನೆಲ್ಲ ಯಾಕೆ ತಂದಿರಿ?" ನುಟ್ಮೋಸ್: "ನನ್ನ ಕಥೆ ಮುಗಿಯೋದಕ್ಕೆ ಮುಂಚೆ ಈ ಅಲ್ಪ ಕಾಣಿಕೆ_" "ಕಥೆ?" "ಇನ್ನೇನು, ನಮ್ಮ ಆಸ್ತಿಪಾಸ್ತಿ ಎಲ್ಲ ಹೋಯ್ತಲ್ಲ?" "ನೀವು ನೀರಾನೆ ಪ್ರಾಂತಕ್ಕೆ ವಾಪ್ಸು ಯಾಕೆ ಹೋಗ್ಬಾರ್ದು?" "ಅಲ್ಲಿ ನನ್ನನ್ನು ಜೀವದಿಂದ ಬಿಡ್ತಾರಾ? ಸ್ವತಃ ತಾವೇ ಬಂದರೂ_" "ಜೀವದಿಂದ ಬಿಡೋದಿಲ್ಲ, ಅಲ್ಲವೆ?....ಬಂಡಾಯಕ್ಕೆ ಕಾರಣ ಏನು?" "ನಾನು ಆಬ್ಟು ಯಾತ್ರೆಗೆ ಹೋಗಿದ್ದೆ." "ಗೊತ್ತಿದೆ. ಪೆರೋನ ಬೋಯಿಯಾಗಿದ್ರಿ." "ಹೆಹ್ಹೆ!.... ಆದರೆ ನಾನು ರಾಜಧಾನಿಗೆ ವಾಪಸು ಬರೋದರೊಳಗೆ ಅಲ್ಲಿ ಬಂಡಾಯವಾಯ್ತು." "ಯಾಕೆ ಆಯ್ತೂಂತ?" "ಯಾಕೆ ಅಂದರೆ_ (ಸೆನೆಬ್ ಹೇಳಿಕೊಟ್ಟುದನ್ನು ಸ್ಮರಿಸಿಕೊಳ್ಳುತ್ತ ) ಹಿರಿಯ ಅಧಿಕಾರಿ ಟೆಹುಟ ಸ್ವಲ್ಪ ಖಾರವಾಗಿ ಮಾತಾಡಿದ್ರು. ಈಗಾಗಲೇ ಗೇಬು ಅವರಿಂದ ಈ ವಿಷಯ ನಿಮಗೆ ತಿಳಿದಿರಬೌದು. ಸ್ವಲ್ಪ ನಯವಾಗಿ ವರ್ತಿಸಿದ್ದರೆ_" "ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿರಲಿಲ್ಲ. ಗೇಬು ಅದನ್ನೂ ಹೇಳಿದ್ದಾರೆ.”