ವಿಷಯಕ್ಕೆ ಹೋಗು

ಮನವ ಮರೆದು ಮಾಡಿದಡೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಮನವ ಮರೆದು ಮಾಡಿದಡೆ ಲಿಂಗರೂಪವಾಯಿತ್ತು. ಧನವ ಮರೆದು ಮಾಡಿದಡೆ ಜಂಗಮರೂಪವಾಯಿತ್ತು. ತನುವ ಮರೆದು ಮಾಡಿದಡೆ ಪ್ರಸಾದರೂಪವಾಯಿತ್ತು. ಇಂತೀ ತ್ರಿವಿಧವನರಿದು ಮಾಡಿದಡೆ ಬಯಲು ರೂಪವಾಯಿತ್ತು. ಮನವನರಿಯನಾಗಿ
ಲಿಂಗವನರಿತ. ಧನವನರಿಯನಾಗಿ ಜಂಗಮವನರಿತ. ತನುವನರಿಯನಾಗಿ ಪ್ರಸಾದವನರಿತ_ ಈ ತ್ರಿವಿಧಸುಖವ ಮರೆದನಾಗಿ ಬಯಲೆಂದರಿತ. ಮನವ ಲಿಂಗ ಒಳಕೊಂಡಿತ್ತು. ಧನವ ಜಂಗಮ ಒಳಕೊಂಡಿತ್ತು. ತನುವ ಪ್ರಸಾದ ಒಳಕೊಂಡಿತ್ತು. ಇಂತೀ ತ್ರಿವಿಧರೂಪವನು ಬಯಲು ಒಳಕೊಂಡಿತ್ತು ಗುಹೇಶ್ವರಾ.