ಸಂಚಿಕೆ-೯/ಪಾದುಕಾ ಕಿರೀಟಿ

ವಿಕಿಸೋರ್ಸ್ದಿಂದ
<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<


ಸಂಚಿಕೆ 9 – ಪಾದುಕಾ ಕಿರೀಟಿ


“ಮೈಥಿಲಿ, ಗಿರೀಂದ್ರನಾಸ್ಥಾನದಂತೆಸೆಯುವೀ

ಕಾನನಶ್ರೀಯನಿದೊ, ನೋಡು, ಹಬ್ಬಿಹುದೆಂತು,

ಪ್ರಾತಃಸಮಯ ಸೂರ್ಯರಶ್ಮಿಸೂತ್ರಂಗಳಿಂ

ಕಯ್ಗಯ್ದ ಕಾನ್ತಿವಸನವನಾಂತು, ನೋಳ್ಪರ್ಗೆ

ರತಿ ಸಂಜನಿಸುವಂತು. ಕೇಳಾಲಿಸದೊ, ಭದ್ರೆ,

ರೋಮಹರ್ಷಣಕರಂ, ಮಂಜುಳ ಮನೋಹರಂ,

ಸಹೃದಯ ಸುಪೂಜಿತಂ ಬಹು ವಿಹಂಗಮ ತುಮುಲ

ರತ ಕೂಜಿತಂ ! ತೇಲುತಿದೆ ಗರಿಹಗುರಮಾಗಿ

ಪರ್ಣವರ್ಣಾರ್ಣವದ ವಿಸ್ತೀರ್ಣದೊಳ್ ಮನಂ

ಪೂವಾಗಿ, ತಳಿರಾಗಿ, ಬಿಳಿದಾಗಿ, ಕೆಂಪಾಗಿ, ೧೦

ಪಸುರಾಗಿ, ಪಳದಿ ನೀಲಿಗಳಾಗಿ, ತನಗೆ ತಾಂ

ರಂಗುರಂಗಿನೊಳಲೆವ ತರತರದಲೆಗಳಾಗಿ.

ಮರೆಯುತಿದೆ ಮನ್ಮನಮಯೋಧ್ಯೆಯಂ; ಮರೆಯುತಿದೆ

ಪುಟ್ಟಿದಿಳೆಯಂ ಬಿಟ್ಟ ದುಃಖಮಂ; ಮರೆಯುತಿದೆ

ಪುಟ್ಟುಗೆಳೆಯರನುಳಿದಳಲ ಬೇಗೆಯಂ. ಕಾಂತೆ,

ನೀಂ ಬಳಿಯಿರಲ್ಕೆ ಕಾಂತಾರಮಿದು ನಿನ್ನುಮಂ

ಮೀರ್ದಪುದು ಚೆಲ್ವಿನೊಳ್. ದಿಟಕೆ ಮಚ್ಚರಮೇಕೆ ?

ನೋಡು ಅದೊ, ಪೊಳೆಯುತಿಹುದೆಂತುಟೆಳಬಿಸಿಲೊಳಾ

ಮಲೆಯ ಮಂಡೆಯ ಬಂಡೆಯಾಗಿರ್ಪ ರತ್ನಶಿಲೆ !

ವಾರಿಧಾರಾ ಕೇಸರಂಗಳಂ ಕೆದರುತದೊ ಕೇಳ್ ೨೦

ಸಿಂಹಗರ್ಜನೆಯುಡುಗೆ ಘೋಷಿಸುತ್ತಿಹುದರ್ಬ್ಬಿ

ಧುಮ್ಮಿಕ್ಕಿ, ಬಾ, ರಮಣಿ, ನೋಳ್ಪಮಾ ದೃಶ್ಯಮಂ,

ಭೀಷ್ಮ ಸಂಮ್ಮೋಹಮಂ, ಕಣಿವೆಗಿಳಿದದರಡಿಗೆ

ಸಾರ್ದು ! ಕಮನೀಯಳಲ್ತೆ ಭಯಂಕರಾ ಪ್ರಕೃತಿ ?”

ತೇಜಸ್ವಿ ರಾಮಚಂದ್ರಂ ಚಂದ್ರಚಾರುಮುಖಿ

ಲಾವಣ್ಯವತಿಗೆ, ಸೀತಾ ಸತಿಗೆ, ತೋರುತ್ತೆ

ಚಿತ್ರಶೈಲದ ವಿಪಿನ ವಿಭವಮಂ ಬರಬರಲ್

ಮುಂದೆ ಮೆರೆದತ್ತು ಮಂದಾಕಿನಿಯ ಕರ್ವೊನಲ್,

ಕಣ್ಗಪ್ಪು ನೀರಾಯ್ತೊ, ಬಾನ್ನೀಲಿ ತೊರೆಯಾಯ್ತೊ,

ಗಿರಿವನ ಶ್ಯಾಮಲತೆ ಸೋರಿ ಕಣಿವೆಯ ಸೇರಿ ೩೦

ವಾರಿರೂಪಿಂದೆ ಪರಿದಪ್ಪುದೆಂಬಂತೆವೋಲ್.

ದೃಶ್ಯ ಸೌಂದರ್ಯದಿಂದುದ್ದೀಪನಂಗೊಂಡು

ಗಿರಿವನಪ್ರಿಯ ಜನಕಜಾಪ್ರಿಯಂ ನಲ್ಲೆಯಂ

ನುಡಿಸಿದನು ಚುಬುಕಾಗ್ರಮಂ ಮುಟ್ಟಿ ಮುದ್ದಾಡಿ,

ಗಾನಗೈಯುವ ಮುನ್ನಮೊಯ್ಯನೆಯೆ ವೈಣಿಕಂ

ಬೀಣೆಯಂ ಮಿಡಿವವೋಲ್ : “ಜೇನ್ದಿಂಗಳೊಂದಾಯ್ತು

ನಾವಿಲ್ಲಿಗೈತಂದು, ಕೇಳ್ ಚೆನ್ನೆ, ಮನದನ್ನೆ.

ತಿಂಗಳೊಂದಾದೊಡಂ, ಜತೆಗೂಡಿ ನಲಿದಾಡಿ

ರಾಜಧಾನಿಯೊಳೆಮ್ಮ ಬಾಳ್ದುದು ಇನ್ನೊರ್ಮೆ

ಬಾಳ್ವಾಸೆ ಮೂಡುತಿದೆ ಮನಕೆ, ಮಂದಾಕಿನಿಯ ೪೦

ನೋಟದಿಂ : ಒಲವು ಬಳಿಯಿರೆ ಚೆಲುವು ಬೇಟಮಂ

ಕೊನರಿಸುವುದಲ್ತೆ ? ನಿನ್ನಂತೆವೋಲ್ ಚೆಲ್ವೆಯೀ

ಸ್ರೋತಸ್ವಿನೀ. ನೀರಸೀರೆಯ ತೆರೆಯ ನಿರಿ ಮೆರೆವ

ತೊರೆನೀರೆಯೀಕೆಯಂ ಕಂಡು ಕರುಬದಿರೆನ್ನ

ಮಾವನ ಮುದ್ದುಮಗಳೆ !”

“ಕರುಬೇತಕೆರ್ದೆಯನ್ನ ?

ಪೊಳೆಯ ಕನ್ನಡಿಯೊಳಗೆ ನಾನೆ ಮಾರ್ಪೊಳೆಯಲದೆ

ನಿನಗೆ ಬೆಮೆಯೀಯುತಿದೆ ! ನಾನಲ್ಲದನ್ಯರಂ

ಕಾಣಬಲ್ಲನೆ ನನ್ನ ರಾಮಚಂದ್ರಂ ಪ್ರಕೃತಿ

ಲೋಕದಲಿ ?” ಮಡದಿಯಾ ನುಡಿ ಕಿವಿಗೆ ಜೇನಾಗೆ

ತೂಣಗೊಂಡುದು ರಘುಜಹೃದಯಂ ರತೋತ್ಸವಕೆ ೫೦

ನಿಮಿರಿ.

“ನೋಡದೊ, ನಿತಂಬಿನಿ, ತೊರೆಯ ನಡುವಣಾ

ನಿನ್ನ ಮೈಬಣ್ಣದ ಪುಳಿನಪುಂಜದೆಡೆಯಲ್ಲಿ

ಬೆಳ್ದಾವರೆಯ ಬೆಳ್ಪು ಕನ್ನೈದಿಲೆಯ ಕರ್ಪು

ಕೆಂದಾವರೆಯ ಕೆಂಪುಗಳ್ ಬಣ್ಣಬಣ್ಣಂ ಕೋದು

ಬಾಸಿಂಗಮಂ ನೆಯ್ದವೋಲೆಸೆಯುವಾ ರಾಸಿ

ಹೂ ಹಸೆಯಮೇಲೆ ನಿನ್ನೆರ್ದೆಗಳೋಲಂತವಳಿ

ಜಕ್ಕವಕ್ಕಿಗಳೆಂತು ಕೊಕ್ಕು ಕೊಕ್ಕಂ ಮುಟ್ಟೆ

ಮುದ್ದಾಡಿ, ಮುದ್ದಿನಿಂಚರಗೈದು ಲಲ್ಲೆಯಿಂ

ಮಾತಾಡಿ, ತೋರುತಿವೆ ಸಾರುತಿವೆ ಬೀರುತಿವೆ

ರತಿಕೇಳಿಯಾಸಕ್ತಿಯಂ ! ನಾಣ್ಚದಿರ್, ನಲ್ಲೆ ; ೬೦

ನಿನ್ನ ನಾಚಿಕೆಯರ್ಥವೇನೆಂಬುದನ್ ಬಲ್ಲೆ.

ಬಾ, ನೀರೆ, ನೀರ್ಗಿಳಿದು ನೀರಾಟವಾಡುವಂ.

ನೋಡಲ್ಲಿ : ಹಳದಿಗೆಂಪಿನ ಹೂವಿನೆಸಳುದುರಿ

ಹೊಳೆಯ ಓಕುಳಿಯಾಡೆ ಕರೆಯುತಿದೆ. ಬಾ, ರಮಣಿ,

ನಾಮಲ್ಲಿಗೈದುವಂ ಸವಿಯೆ ನಲ್‌ಮೀಹಮಂ, ಬಾ.”

ನೀರಿಗಿಳಿದರು ರಾಮಸೀತೆಯರು. ಕಣ್ಣಾಯ್ತು

ಶೈಲಕಾನನಪೃಥಿವಿ ತಾನಾ ಸ್ನಾನದರ್ಶನಕೆ :

ಮಹಿಮೆ ತಾಂ ಮಾಳ್ಪುದನಿತುಂ ಮಹತ್‌ಕಲೆಯಲ್ತೆ !

ಮುಳುಗಿದರ್; ಮೂಡಿದರ್; ಸರಸಕ್ಕೆ ಕಾಡಿದರ್;

ಬಯಸಿ ನಿಡುನೋಡಿದರ್ ; ಬೆನ್ನಟ್ಟುತೋಡಿದರ್; ೭೦

ಸುಖಖನಿಯ ತೋಡಿದರ್; ನೀರಾಟವಾಡಿದರ್ :

ಹೃದಯ ಮಧುವನದಿ ಸುಧೆ ಹರಿವಂತೆ ಮಾಡಿದರೊ

ರಾಗರತಿ ಮಿಗುವ ಮಾನಸ ಭೋಗ ಯೋಗಿಗಳ್

ಸಂಯಮಿಗಳಾ ದೇವ ದಂಪತಿಗಳಿರ್ವರುಂ

ನಗಮೇಖಲಾ ನಿಮ್ನಗೆಯ ತಣ್ಪುತೀರ್ಥದೊಳ್

ಮನದಣಿಯೆ ಮಿನ್ದು ! ಘೋರಾಟವಿಯ ದೂರದಿಂ,

ಗಿರಿಭುಜ ಪ್ರತ್ಯಂತದಿಂ, ಕರೆದ ಲಕ್ಷ್ಮಣನ

ಕೊರಳುಲಿಯನಾಲಿಸಿದನಂತರಂ, ನಡುಬಾನ್ಗೆ

ಪಗಲೇರ್ದುದು ಭೋಂಕನೆಯೆ ತಿಳಿಯುತೆಳ್ಚರ್ತು,

ಸಲಿಲಕೇಳೀನಿರತರಾ ಇರ್ವರುಂ ಚೆಚ್ಚರಿಂ ೮೦

ದಡಕಡರಿದರ್. ನಾರುಡೆಯನುಟ್ಟು, ಸುಖಮನದಿಂದೆ

ಗಿರಿಯೇರಿದರ್ ಲೆಕ್ಕಿಸದೆ ತನುವಿನಾಯಾಸಮಂ.

“ತಮ್ಮನದೊ ಕಾಯುತಿರ್ಪನ್ ನಿಡಿದು ಪೊಳ್ತಿಂದೆ,

ಮರಗಳಿಡುಕುರ್ ನಡುವಣಾ ಕಲ್ಲರೆಯ ಮೇಲೆ.

ನಲ್ಲುಣಿಸುಗಳನಟ್ಟು ತಂದಿಹನ್. ಬಾ, ಅಣುಗಿ,

ಬೇಗ ಬಾ. ನಿನ್ನ ದೆಸೆಯಿಂದೆನಿತು ತಡವಾಯ್ತೊ ?

ತಮ್ಮನೇನೆಂದಪನ್ !”

“ಆಃ ! ಜಾಣ್ಣುಡಿದಿರಲ್ತೆ?

ತಳುವಿದುದಕಾನೆ ಕಾರಣಮಪ್ಪೆನಾದೊಡಂ

ನನ್ನಿಂದೆ ತಡಮಾಯಿತೆಂಬುದದು ದಿಟಮೆ, ಪೇಳ್,

ಸತ್ಯನಿಧಿ ?” ಎನುತೆ ಕಡೆಗಣ್ಣೆಸೆದ ತಿರೆಮಗಳ ೯೦

ತಾತ್ಪರ್ಯಮಂ ತಿಳಿಯುತೆಳನಗೆ ಸುಳಿಸಿ ದಾಶರಥಿ :

“ತರ್ಕಸಿಂಹಿಣೆ, ಸಾಲ್ಗುಮೀ ಜಾಣ್ಮೆ ; ಬೇಗ ಬಾ !”

ಎನುತೋಡುತಡರಿದನ್ ಲಕ್ಷ್ಮಣನೆಡೆಗೆ. ದೇವಿಯುಂ

ಪಿಂತಣಿಂದೇದುತೈತರೆ, ಸುಮಿತ್ರಾತ್ಮಜಂ :

“ಅತ್ತಿಗೆಯನೇಕಿಂತು ದಣಿಸುವಿರಿ, ಅಣ್ಣಯ್ಯ,

ಕಾಡು ಕೊರಕಲನಲೆಸಿ ?” ಎನೆ, ಸೀತೆ “ಮೈದುನನೆ,

ನೆಳಲಿಗೇನ್ ನಡೆವವನ ತೊಂದರೆಯೆ?” ಎಂದೊಡನೆ

ಗಂಡನ ಕಡೆಗೆ ತಿರುಗಿ, ಸಿಡುಕುಮೋರೆಯ ಮಾಡಿ,

ನೆಲಗುಡುಗಿನಂತಾಡಿದಳ್ : “ಗಂಡು ಬರಿಹೊಟ್ಟೆ !

ಕೂಳಿರ್ಪೆಡೆಗೆ ಹರಣ ಹೋದುದನ್ ಲೆಕ್ಕಿಸದೆ ೧೦೦

ಹಾರಿ ನುಗ್ಗಿದಪುದೇಂ ನಾಣ್ಗೇಡೊ !”

“ಚೆನ್ನರಸಿ,

ನೋಡಿಲ್ಲಿ :” ರಾಮನೆಂದನು ತೋರಿ, “ನೋಡಿಲ್ಲಿ !

ಮುನಿಸನೆಲ್ಲವನಳಿಸುವಿನಿದಾದ ಹೊಸತು ಜೇನ್

ಹೊಳೆಯುತಿಹುದೆಂತೆಲೆಯ ದೊನ್ನೆಯಲಿ ! ಇದೊ ನೋಡು :

ಹೊಸ ಹಾಲು, ಹೊಸ ಹಣ್ಣು, ಹೊಸ ಕಂದಮೂಲಗಳ್ !

ಮೃದು ಪಲಾನ್ನವಿದೊ ಕಮ್ಮಗೆ ಮೂಗನೊಲಿಸುತಿದೆ;

ಮನವನೆಳೆಯುತಿದೆ ಭೋಜನ ಭೋಗಕೆಳಸಿ. ಕೊಳ್,

ಮುಗ್ಧೆ, ಕುಡಿ ಮೊದಲೊಳೀ ದುಗ್ಧಮಂ. ತರುವಾಯ

ತಿನಲೀವೆನೀ ಹೊಚ್ಚ ಹೊಸ ಹಣ್ಗಳಂ….”

ಭೋಂಕನೆಯೆ

ಬೆದರಿ ನಿಂದಳ್ ಸೀತೆ : ಧಾವಿಸಿತ್ತತಿ ಜವದಿ ೧೧೦

ಕಡವೆ ಹಿಂಡೊಂದು ಕಣಿವೆಯೊಳನತಿ ದೂರದಲಿ !

ಲೆಕ್ಕಿಸದೆ ಹೆಚ್ಚೇನನವರು ಮತ್ತುಣತೊಡಗಿರಲ್

ಕಿರುವೊತ್ತಿನೊಳೆ, ಮತ್ತೆ ಕಾಡುಹಂದಿಗಳೊಂದು

ತಂಡವೋಡಿತು ನುಗ್ಗಿ ಹೂಂಕರಿಸಿ ! ಬೆಕ್ಕಸದಿ

ಸೋಜಿಗಂಬಡುತಿರ್ದರನಿತರೊಳ್ ಮತ್ತೊಂದು

ಮಿಗವಿಂಡು ಬೆದರಿ ನುಗ್ಗುತ್ತೋಡಿ ಮರೆಯಾಯ್ತು !

“ಏನಿದಿಂತೇಕೆ ಜಂತುಗಳಿಂದು ಕೆಟ್ಟೋಡುತಿವೆ ;

ಹಳುನುಗ್ಗಿ ಬೇಂಟೆಗಾರರ್ ಸೋವಿದಡವಿಯಂ

ತೊರೆದೋಡುವಂತೆ ?” ಎನೆ ರಾಮನೆಂದಳು ಸೀತೆ,

“ಕಾಣಲ್ಲಿ, ಪ್ರಾಣೇಶ, ಹೇರಾನೆಗಳ ಹಿಂಡು !” ೧೨೦

ಕಂಡು ಲಕ್ಷ್ಮಣನೆಂದನಿನಿತಳುಕಿ “ಅಣ್ಣಯ್ಯ,

ಧಾವಿಸುತ್ತಿಹವೆಂತು ಪರ್ವತಾಗ್ರದಿನಯ್ಯೊ

ಬಂಡೆಗಳುರುಳುವಂತೆ ! ದೇವಿಯರಿಗೋಸುಗಂ

ಪರ್ಣಕುಟಿಯೆಡೆಗೆ ನಡೆವಂ !” ಮೂವರಲ್ಲಿಂದೆ

ಬೇಗಬೇಗನೆ ನಡೆದರಾ ಕ್ಷೇಮದೆಲೆವನೆಯ

ತಾಣಕ್ಕೆ : ತುಡುಕಿದುದು ಲಕ್ಷ್ಮಣನ ಕೈ ಧನುರ್

ಬಾಣಂಗಳಂ ! ನೋಳ್ಪನಿತರೊಳ್ ನಡುಗಿದತ್ತಡವಿ

ಸಿಂಹ ಘರ್ಜನೆಯಿಂದೆ, ವ್ಯಾಘ್ರನಾರ್ಭಟೆಯಿಂದೆ,

ಗಜದ ಘೀಂಕೃತಿಯಿಂದೆ, ಸೂಕರಂಗಳ ಘೋರ

ಹೂಂಕಾರದಿಂದೆ ! ಸೋದರನ ಕೋದಂಡದಿಂ ೧೩೦

ಸಿಡಿಲೆಳ್ದ ಸಿಂಜಿನಿಯ ಠಂಕಾರಮಂ ನಿಲಿಸಿ

ಸನ್ನೆಗೈಯಿಂದೆ, ಕಿವಿಗೊಟ್ಟಾ ರಘೂದ್ವಹಂ

ಕಣ್ಣಾಲಿಯಾಗಿ ನಿಟ್ಟಿಸಿ ನುಡಿದನಿಂತೆಂದು :

“ನೆಲನಡುಗೊ ? ಬಾನ್ಗುಡುಗೊ ? ಕೇಳದೊ ಮಹಾಸ್ವನಂ

ಮೊಳಗುತಿದೆ, ದೂರದ ಸಮುದ್ರಘೋಷಮೆನಲ್ಕೆ.

ಹತ್ತೆ ಸಾರುತಿಹುದದೊ ಮತ್ತೆ ಮತ್ತುರ್ಬಿತೆನೆ,

ತುಮುಲ ಭೀಮಸ್ತನಿತಮತಿ ಭೈರವಂ ರವಂ !

ದಸ್ಯುಕೈರಾತ ಘೋಷವೊ ? ರಕ್ಕಸರ ರಣದ

ದೈತ್ಯಕೋಲಾಹಲವೊ ? ಕಾಣೆನೇನೆಂಬುದಂ.

ಕಾಣದೊ, ಗಗನಕೇಳುವಾ ಧೂಳಿ ಗಾಳಿಯಲಿ ೧೪೦

ಹಬ್ಬುತಿದೆ; ಬೆಟ್ಟವೆರಡರ ನಡುವೆ ಕಣಿವೆಯಂ

ಮುಸುಗಿ ತಬ್ಬುತಿದೆ. ಕಾರಣವನರಿ, ಸೋದರನೆ,

ಕಾಣ್ಬೆಳ್ತರವನೇರ್ದು.”

ಏರಿದನು ಸೌಮಿತ್ರಿ.

ಸಂತ್ವರಿತ ಮಾನಸಂ, ಪ್ರೋದ್ದೀಪ್ತತೇಜಸಂ,

ವಿರಳ ಪರ್ಣದ್ರುಮದ ಪುಷ್ಪಿತ ಶರೀರದಾ

ಸ್ವರ್ಗಚುಂಬಿತ ಸಾಲದುನ್ನತ ಶಿರದ ಕರದ

ಗೋಪುರಕೆ. ಪಕ್ಷಿರಾಜನ ತೀಕ್ಷ್ಣದಕ್ಷಿಯೋಲ್

ನೋಡಿದನು ಕಣ್ಣಟ್ಟಿ ದಿಗ್ದೇಶಮಂ. ನೋಡಿ,

ಮೂಡಣಿಂ ಬಡಗಣ್ಗೆ ಮೊಗಮಾಗೆ, ಕಚ್ಚೆದೆಯ

ಕಲಿ ಬೆಚ್ಚಿದನ್; ಕಂಡನಮಿತ ದಲ ಪದದಲನಮಂ, ೧೫೦

ಸಮುದ್ಭೂತ ರೇಣುಪ್ರವಾಹಮಂ. ಕಾತರದಿ

ಕೂಗಿ ಹೇಳಿದನತ್ತ ನಟ್ಟ ದಿಟ್ಟಿಯನಿತ್ತ

ಹೊರಳಿಸದೆ : “ಆರಿಸಗ್ನಿಯನಣ್ಣ ಶೀಘ್ರದಿ !

ಗುಹಾಂತರದಿ ದೇವಿಯಂ ಬೈತಿಟ್ಟು ಬಾ ! ಜವದಿ

ತೊಡು ಕವಚಮಂ ! ಚಾಪಮಂ ಪಿಡಿ ! ನಿಷಂಗದಿಂ

ತೆಗೆ, ನಿಶಿತ ನಾರಾಚ ಮೃತ್ಯುವಂ !” “ಏನ್ ? ಏನ್ ?”

“ಏನೆ ? ಬರುತಿದೆ ಸೇನೆ : ಕಾಲಾಳು ಹೇರಾನೆ

ತೇರು ಕುದುರೆಯ ಮಾರಿಬೇನೆ ! ವೈರಿಯೆ ದಿಟಂ;

ಸಾರುತಿದೆ ಕೈದುಗಳ ಕಾಂತಿ. ನುಗ್ಗುತಿಹರದೊ

ರಾವುತರ್ ಮಾವುತರ್ ಲಗ್ಗೆಗೊಳ್ವಂತೆ. ಹಾ, ೧೬೦

ತಡೆ ತಡೆ, ಅದೇನದಾ ಕೋವಿದಾರಧ್ವಜಂ !

ಆರ್ಯ, ಸಂದೇಹಮಣಮಿಲ್ಲಯ್; ಮಹೋನ್ನತಂ

ಭೀಮಕಾಯಂ ವಿಟಪಿಯಗ್ರದಿ ತೂಗಿ ಬರ್ಪುದದೊ

ರವಿಕುಲದ ಕೇತನಂ, ಮಂಗಳ ನಿಕೇತನಂ,

ನಿತ್ಯಪರಿಚಿತ ಕೋವಿದಾರಧ್ವಜಂ !-

“ಅಯ್ಯೊ,

ಕೇಡು ಬಂದತ್ತಾರ್ಯ ! ತಿಳಿದೆನಿದರರ್ಥಮಂ

ಮೇಣೆಮ್ಮನರ್ಥಮಂ : ಪೂರ್ವಾಪಕಾರಿಯಾ

ರಾಜ್ಯಕಾಮುಕೆ ಕೈಕಯೀಸುತಂ ದುಷ್ಟಮತಿ

ಬಂದನಾ ಭರತಂ ದುರುದ್ದೇಶದಿಂ, ತನ್ನ

ರಾಜ್ಯಮಂ ನಿಷ್ಕಂಟಕಂಗೆಯ್ಯಲೋಸುಗಂ, ೧೭೦

ತಳುವಿದೊಡೆ ಕೇಡೆಮಗೆ, ಬೇಗದಿಂದೀ ಗಿರಿಯ

ದುರ್ಗಪ್ರದೇಶವೊಂದಂ ಸೇರ್ದು, ರಕ್ಷೆಗಾಂ

ಯುದ್ಧಕಣಿಯಾಗುವಂ…. ಹಸ್ತಿಭಗ್ನದ್ರುಮಕೆ

ಸಮನಪ್ಪನಿಂದವನ್, ಮತ್ತವನ ಸೇನೆಯುಂ !”

ಕುಟಜ ಕೂಟದಿನಿಳಿದು ಧುಮ್ಮಿಕ್ಕಿದನು ಧರೆಗೆ

ಸೌಮಿತ್ರಿ ತಾನುಳ್ಕೆಯೋಲ್.

“ತಾಳ್ಮೆ, ವತ್ಸಾ, ತಾಳ್ಮೆ ;

ದುಡುಕದಿರ್, ಭರತದೇವಂ ಪ್ರಾಜ್ಞನವನಿಪತಿ ;

ಮರೆಯದಿರ್. ಪ್ರಜೆಗಳಾಮೆಂಬುದಂ ನೆನೆ. ಹಿಂಸೆ

ಸಲ್ಲದಯ್, ನನ್ನಿಗಾಗಿಯೆ ನೆಲನನಿತ್ತೆಮಗೆ.

ಭರತನಂ ಕೊಂದರಪವಾದವಲ್ಲದೆ ಬೇರೆ ೧೮೦

ಫಲವುಂಟೆ ? ನಿನ್ನವೋಲೆನಗಾತನುಂ ಪ್ರಿಯಂ.

ನೆಲದ ಸಿರಿ ತಾನ್ ಒಲುಮೆಗೋಸುಗವಲ್ತೆ ? ಕೊಂದದಂ

ಸಿರಿಗರಸರಾಗೆ ಮರುಭೂಮಿಯೊಡೆತನಮಲ್ತೆ ?

ಸಾಗರಾಂಬರೆ ಪೃಥ್ವಿಯೆನ್ನಯ ಪರಾಕ್ರಮಕೆ

ದುರ್ಲಭಳೆ? ಪ್ರಾಣಕಿಂ ಪ್ರಿಯತರಮೆನಗೆ ಧರ್ಮಂ.

ಕ್ರೋಧಮೂರ್ಛಿತನಾಗುತಾರೋಪಣಂ ಗೆಯ್ವೆ ನೀಂ

ಭ್ರಾತೃವತ್ಸಲ ಭರತನಿಗೆ ದುರಭಿಸಂಧಿಯಂ.

ನಿನಗಾತನಾವಗಂ ನುಡಿದುದಿಲ್ಲಹಿತಮಂ.

ಧರ್ಮಶೀಲಂಗೇಕೆ ನಿಂದೆ ? – ಬಂದಿಹನೇನೊ

ನೆಲವನೊಪ್ಪಿಸಲೆಮಗೆ ? ಮೇಣೆಮ್ಮನೂರಿಂಗೆ ೧೯೦

ಮರಳಿಸಲ್ ಕರೆದುತಂದನೊ ತಂದೆಯಂ ? ಮತ್ತೆ

ಮೈಥಿಲಿಯನತ್ಯಂತ ಸುಖಸೇವಿನಿಯನೆಂತೊ

ಕಾನನಕ್ಲೇಶದಿಂದೊಯ್ಯಲೈತಂದಿಹನೊ ? -

ನೋಡು, ವಾಹಿನಿಮುಖದೊಳೆಮ್ಮಯ್ಯನೊಲಿದಾನೆ

ರಾಜಗಾಂಭೀರ್ಯದಿಂದೆಂತು ಶತ್ರುಂಜಯಂ

ಬರುತಲಿದೆ ! ಸೌಮಿತ್ರಿ, ತೋರದೇತಕೊ ಏನೊ

ಲೋಕಪೂಜಿತ ದೇವ ದಶರಥ ಸಿತಾತಪತ್ರಂ !

ಮನಕೇನೊ ಸಂಭವಿಸುತಿದೆ ಸಂಶಯಂ…. ಭದ್ರೆ,

ಕೈಮುಗಿವಮಿಲ್ಲಿಂದೆ ಪಿತೃಪದ ಪಯೋರುಹಕೆ.

ವತ್ಸ ಲಕ್ಷ್ಮಣ, ಅಯ್ಯೊ ಹನಿ ತುಂಬುತಿದೆ ಕಣ್ಗೆ; ೨೦೦

ಕಾರಣವನರಿಯೆನೇತಕೊ ಕಂಠಕೊದಗುತಿದೆ

ಶಿಶುಗದ್ಗದಂ : ತಾಯಿತಂದೆಯರನಿನ್ನೊರ್ಮೆ

ಕಾಣ್ಬೆವೆಂಬುಲ್ಲಾಸಮದೆ ದಿಟಂ ಕಾರಣಂ !”

ಮೌನಿಯಾದನು ರಾಮನಿಂತೆಂದು. ಲಕ್ಷ್ಮಣಂ

ಲಜ್ಜಾವಿಷಾದಮಂ ತುಳಿದಿಕ್ಕಿ, ಮೋದದಿಂ

ಕಣ್ಣಾದನತ್ತಣ್ಗೆ. ಪತಿಯ ಕೆಲದಲಿ ಸೀತೆ

ನಿಂತು ನೋಡಿದಳಾತನಾತ್ಮದನುಕಂಪನಕೆ

ಪ್ರತಿಕಂಪಿಸುವ ವೀಣೆಯುಜ್ವಲ ತಂತ್ರಿಯಂತೆ.

ತೋರೆನಗೆ, ಗುರುವೆ, ಮುಂದಣ ಕಥಾಲೋಕಮಂ,

ದಶರಥಾತ್ಮಜ ಮಹಾಶೋಕಮಂ. ಪೇಳೆನಗೆ ೨೧೦

ಚಿತ್ರಕೂಟಕೆ ಭರತನಾಗಮನ ವಾರ್ತೆಯಂ,

ರಾಮಚರಣಕ್ಷೇತ್ರಯಾತ್ರೆಯಂ : – ನಗರಮಂ

ಪರ್ವಿದುದೊ ಭರತದೇವಂ, ಭ್ರಾತೃವತ್ಸಲಂ,

ಪೊಡವಿ ಪಟ್ಟವನೊಲ್ಲದೆಯೆ ರಾಮಚಂದ್ರನಂ

ಮರಳಿಸಿ ಪುರಕೆ ಮರಳಿ ಕರೆತರಲರಣ್ಯಮಂ

ನಡೆವನೆಂಬಾ ಶುಭಂ. ನಾ ಮುಂದೆ ತಾ ಮುಂದೆ

ಎಂದು ಸಂದಣಿಸಿತೈ ಮಂದಿ ಭರತನ ಹಿಂದೆ

ದಂಡುಗೊಂಡಂತೆ. ನಡೆಗೊಂಡುದಿಂತುಟಯೋಧ್ಯೆ.

ದಟ್ಟಡವಿಯೊಳ್ ಬಟ್ಟೆಯಂ ಕೊರೆಯುತಂ, ಕಟ್ಟಿ

ಕೆರೆ ಕಟ್ಟೆ ಬಾವಿಯಂ ಬೆಟ್ಟಿತು ನೆಲದೊಳಿರ್ಪು ೨೨೦

ಪುಟ್ಟುವಂತೆಸಗುತಂ, ಪಳ್ಳಕೊಳ್ಳಂಗಳಿಗೆ

ಸೇತುಗಟ್ಟುತೆ ದಾಂಟಿ ನಡೆಯುತಂ, ಕ್ರಮದಿಂದೆ

ಪಯಣ ಪಯಣಂಗೊಟ್ಟು ಬೀಡು ಬೀಡಂ ಬಿಟ್ಟು,

ರವಿಕುಲದ ನಾಗರಿಕತೆಯೆ ವಿಪಿನದೇಶಮಂ

ವಿಕ್ರಮದೊಳಾಕ್ರಮಿಸಿತೆನೆ, ಪರಿದುದು ಅಯೋಧ್ಯೆ,

ದುಃಖಿ ಭರತನ ಹಿಂದೆಯುಕ್ಕಿ ನೂಂಕುತೆ ಮುಂದೆ

ರಾಮಚಂದ್ರೋನ್ಮಾದದಿಂದೆ ! ಗುಹನಂ ಬೆರಸಿ,

ಜಾಹ್ನವಿಯನುತ್ತರಿಸಿ, ಋಷಿ ಭರದ್ವಾಜಂಗೆ

ಪಿರಿಯತಿಥಿಯಾಗಿ ನಿಂದಾತನಂ, ಜತೆಗೂಡಿ

ವಿಪಿನಸರಣಿಯನೊರೆಯುತೈತಂದನಂ, ಬೀಳ್ಕೊಂಡು ೨೩೦

ನಡೆಯೆ ಭರತಂ, ಕರೆದು ಮೆರೆದುದಾ ಚಿತ್ರಕೂಟಂ,

ನೀಲಮೇಘಶ್ಯಾಮ ರಘುರಾಮ ಸಂಗದಿಂ

ಘನವಿಪಿನ ರೋಮ ತನು ನೀಲಿಮೆಯೆ ತಾಂ ಘನಿತು

ನಿಂದಂತೆವೋಲ್. ದೊರೆಯ ಮನವರಿತು ಜನಸೇನೆ,

ಮಂತ್ರಾಜ್ಞೆಯಿಂ ಮೊರೆಗಡಲ್ ಮೋನವಪ್ಪಂತೆ,

ನಿಶ್ಶಬ್ದವಾದುದಯ್ : ಪೂಜ್ಯ ಸಾನ್ನಿಧ್ಯಮಿರೆ

ಚಂಚಲತೆಯುಂ ಸುಸ್ಥಿರತೆಯಪ್ಪುದಚ್ಚರಿಯೆ ?

ಭಾವದಿಂ ಭರತಂಗೆ ಮಾತು ತೊದಲಾಯ್ತಂತೆ

ನಡುಗು ಮೊದಲಾಯ್ತೊಡಲಿಗಂತೆ ಕೊರಲಿಗೆ ದೀನ

ಗದ್ಗದಂ ತೊಡಗಿದುದು. ಸಕಲರಂ ನಿಲವೇಳ್ದು, ೨೪೦

ಬಿಯದರರಸಂ ಗುಹನನಂತೆ ಶತ್ರುಘ್ನನಂ

ಮೇಣಾ ಸುಮಂತ್ರನಂ ತನ್ನೊಡನೆ ಬರವೇಳ್ದು,

ಚೀರವಲ್ಕಲವುಟ್ಟು ಜಡೆವೊತ್ತ ದೀನಮುಖಿ,

ತಾರುಣ್ಯಕಡಿಯಿಡುವ ಕೌಮಾರಮೂರ್ತಿಯಾ

ಬಾಲಋಷಿ ಕಾಡನೇರಿದನು ರಾಮಾಶ್ರಮಕೆ,

ಮಾತೃವಕ್ಷವನರಸುತರ್ಭಕನಡರುವಂತೆ.

ನಡುವಗಲ ಸುಡುಬಿಸಿಲ್ಗೆಲೆಗೊಡೆಯನೊಟ್ಟಯ್ಸಿ

ನೆಳಲ ಕುತ್ತುರೊಲಿರ್ದ ಪಳುವದೊಳ್ ನಡೆದಿರಲ್,

ಕಾಣಿಸಿತ್ತಂಬರದ ಬೆಳ್ಮುಗಿಲ್ಗಿದಿರೆಳ್ದ

ಧೂಮವಿನ್ಯಾಸದಗ್ನಿಧ್ವಜಂ ನಿಕಟದಾ ೨೫೦

ಗಿರಿತಟದಟವಿಯಿಂದೆ : ಬಯಕೆ ಬಾವುಟವೆತ್ತಿ

ಕರೆದಪುದೊ? ಪಿರಿಯ ಪಿತೃಕೃಪೆ ಪರಕೆಗೈಯಲ್ಕೆ

ಕೈವೀಸಿದಪುದೊ? ರಾಮನನರಸುತೈತಂದು

ತನ್ನೊಡಲನುರಿಗೆ ಬೇಳ್ದಾ ದೇವಿ ಮಂಥರೆಯ

ಪುಣ್ಯಾಂತರಾತ್ಮಪ್ರಣಯಲಕ್ಷ್ಮಿ ಭರತಂಗದೇಂ

ಕೌಸಲೆಯ ಕುವರನೆಡೆಯಂ ಪೊಗೆವೆರಳ್ ನೀಡಿ

ಸುಟ್ಟಿದೋರ್ದಪಳೊ? ಎನೆ ಕಂಡುದಾ ಕರ್ವಟ್ಟೆ

ಹೊಗೆಯ ಹಳವಿಗೆಯನಾ. ನಲ್ ಮೂಡಿ ಮುಂಬರಿಯೆ

ಮುಟ್ಟಿ ಬಂದುದು ಮುಂದೆ ಮಂದಾಕಿನಿಯ ತುಂಬು

ನೀರ್‌ದಾರಿ, ಕಟ್ಟಲಾಳ್ಗಳ್ ಕಟ್ಟಿಗೆಯನೊಟ್ಟಿ, ೨೬೦

ತೇಲ್ದುದೋಡಂ ದಡಕೆ ಆ ಕಡೆಯಾ. ನಾವೆಯೊಳ್

ನಿಂದ ಭರತಂ ಧೂಮಲೇಖೆಯನೆ ನೋಡುತಂ

ತನ್ನೊಳಗೆ ತಾನ್ : “ಆರ ವದನಾರವಿಂದಮಂ

ನೋಡಿ, ಮಕರಂದಮಂ ಹೀರಿ, ಜನ ನಯನಾಳಿ

ತೃಪ್ತಿಯರಿಯವೊ ಅದನ್ನೊಸೆದು ನೋಳ್ಪನ್ನೆಗಂ

ಶಾಂತಿಯಿಲ್ಲೆನಗೆ. ಮತ್ತಾರ ಮಂಜುಳ ಮಧುರ

ಕಂಠದ ವಿಪಂಚಿಕಾ ನಾದಮಂ ಸವಿಸವಿದು

ಕಿವಿತಣಿಯವೋ ಅದನ್ನಾಲಿಪನ್ನೆಗಮಣಂ

ಶಾಂತಿಯಿಲ್ಲೆನಗೆ. ಮೇಣಾರಡಿಯ ನೈದಿಲೆಯ

ನೀಲಸಾನ್ನಿಧ್ಯದೊಳ್ ತೇಲಿ ತೇಂಕಾಡುವಾ ೨೭೦

ಸೊಗಸಿಗುಳಿದೆಲ್ಲ ಸೊಗಮಂ ಬಿಟ್ಟು ಬೀಸಾಡಿ

ಬಂದಳೊ ವಸುಂಧರಾನಂದನೆ ಅದಂ ಪಿಡಿದು

ಮುಡಿಯೊತ್ತುವನ್ನೆಗಂ ಶಾಂತಿಯಿಲ್ಲೆನಗೆ. ದೊರೆ

ಪಿರಿಯಂಗೆ ತಿರೆಯಿತ್ತು ಪೊರೆಯಿಳಿಸುವನ್ನೆಗಂ

ಕುಸಿದು ಕುಗ್ಗಿದ ಬಾಳ್ಗೆ ಶಾಂತಿಯಿಲ್ಲೆನಗೆ.” ಇಂತು

ಧೂಮ ಪ್ರತೀಕದಿಂ ರಾಮನಂ ಭಾವಿಸಿರೆ

ಬಂದು ಮುಟ್ಟಿತ್ತೋಡಮಾ ಪಾರಮಂ, ಶೈಲ

ಚರಣತಲ ವನಸೀಮೆಯಂ : ನಮಿಸಿದನು ಮುಟ್ಟಿ

ಮೃತ್ತಿಕೆಯನಾ ರಾಮ ಚರಣ ಸ್ಪರ್ಶ ಪೂಜ್ಯಮಂ.

“ಶತ್ರುಘ್ನ, ಇದೆ ತಾಣಮಿರವೇಳ್ಕುಮದೊ ಅಲ್ಲಿ ೨೮೦

ತೋರ್ಪುದಾ ಮನುಜ ಸಂಚಾರ ಸೂಚಕ ಚಿಹ್ನೆ :

ಕಾಡುಬೆರಣಿಯನಾರೊ ರಾಸಿಗೈದಿಹರಲ್ತೆ

ಚಳಿಗೋಸುಗಂ?” ಭರತನೆನೆ, ಗುಹಂ, ಕರಿಮೆಯ್ಯ

ಭೀಮಗಾತ್ರಂ, ಕಾಡನಿನ್ನೊಂದು ತನಗೆ ಪಿರಿ

ಮೆಯ್ಯಾಗಿ ತಿಳಿದವಂ : “ದಿಟಮಯ್ಯ ; ದಿಟಮೂಹೆ.

ಒಂದೇತಕೆನ್ನ ಕಣ್ಣಿಗೆ ಕಾಣ್ಬವೆನಿತೆನಿತೊ

ನರ ಕರ ಚರಣ ಚಿಹ್ನೆಗಳ್. ನೋಡಿಮಾ ಮುರಿದ ಹರೆ

ಸಾಲ್ಗೊಂಡು ಬಿದ್ದಿಹವು ಹೊದೆಹೊದೆಯೆಡೆಯೆ ಹಾದಿ

ಗುರುತಾಗಿ. ಕಾಣಿಮಾಳ್ಪಜ್ಜೆ, ತೊಯ್ದಾ ನೆಲದಿ….

ನಿಡುವುಲ್ಗಳಿರ್ಕಡೆಗೆ ಬಾಗಿರ್ಪವಾ ಪದಂ ೨೯೦

ಮೃಗಪದಕ್ರಮವಲ್ತು…. ನೋಡಿಮಾ ಬಣಗು ಪೊದೆ.

ಸಹಜ ಮೃತಿಯಲ್ತಾರೊ ಬುಡಗಡಿದರದನೇಕೊ,

ನಿನ್ನೆ, ತಪ್ಪಿತೊ ಮೊನ್ನೆ. ಓ ಈಗಳರಿವಾಯ್ತು :

ಹೊದೆಯ ಮೊದಲೊಳಗಿರ್ದ ನೂಲೆಯ ಗೆಣಸಿಗಾಗಿ

ಬಳ್ಳಿಗಳನಗೆದು ತೆಗೆದಿರ್ಪರದೊ ಕೆಮ್ಮಣ್ಣು

ಬಳಿಯೊಳೆಯೆ ರಾಸಿ ಬಿದ್ದಿದೆ ! ನೋಡಿ ಓ ಅಲ್ಲಿ

ಬಿದಿರುಮೆಳೆಯೆಡೆ ಹುತ್ತಕೊತ್ತಿದೆ ಸವುದೆಗಟ್ಟು….

ಬಟ್ಟೆಯರಿಯಲದೊ ಕುಶಚೀರಗಳನಲ್ಲಲ್ಲಿ

ಕಟ್ಟಿಹರು, ಕೊಂಬೆ ಕೊಂಬೆಗೆ, ಕಣ್ಣ ಕುರುಹಾಗಿ….

ಇದೊ ಇಲ್ಲಿ ಹೂಗೊಯ್ದು ಹೋಹಾಗಳುದುರಿದಾ ೩೦೦

ಒಂದು ಹೂವಲ್ತೆರಡು ಮೂರು ನಾಲ್ಕೈದಾರು !

ಚೆಲ್ಲಿ ಹೋಗಿಹರಯ್ಯೊ !…. ಇತ್ತಲಿತ್ತಲ್ ಬನ್ನಿ ;

ಅತ್ತ ಸರು, ಅತ್ತ ದರಿ. ಕಾಣಿರಿದೊ, ಇದೆ ಹಾದಿ

ಬಳಿಯಿರ್ಪುದಾಶ್ರಮಂ ! ಕಂಪಿಂದೆ ಬೇಂಟೆನಾಯ್

ಮಿಗದಿರ್ಕೆಯರಿವಂತೆ ಅರಿತೆ ನಾನ್ ! ಅದೊ ಅಲ್ಲಿ,

ಆ ಎಳ್ತರದೊಳಾರೊ ಹೊಳೆದವೋಲಾಯ್ತೆನಗೆ !

ಭ್ರಾಂತಿಯೇಂ ? ಭ್ರಾಂತಿಯಿನ್ನೆಲ್ಲಿಯದು ? ಶಿವಶಿವಾ

ಅಗೊ ಅಲ್ಲಿ, ಅಗೊ ದೇವ ರಾಮಚಂದ್ರಂ ! ಅಲ್ಲಿ

ಕಾಣಿರೇಂ ? ದೇವಿ ಸೀತಾಮಾತೆ ! ಅದೊ ಅಲ್ಲೆ,

ದೇವ ಸೌಮಿತ್ರಿ !”

ಕಂಡನ್ ; ನೋಡಿದನ್ ; ನುಗ್ಗಿ ೩೧೦

ಮುಂದೋಡಿದನ್ ಭರತನುನ್ಮಾದವೇರ್ದನೊಲ್,

ಬೆಟ್ಟ ತಲೆಕೆಳಗಾಗಲುರುಳ್ವಂತೆವೋಲದರ

ತುಂಗ ಶೃಂಗಕ್ಕೆ ! ಅಣ್ಣಯ್ಯ ಓ ಎಂದೊಂದೆ

ಸೊಲ್ಲೊರಲ್ದಡಿಯನೆಯ್ದುವ ಮುನ್ನಮೆ ಸಡಿಲ್ದು

ದೊಪ್ಪನೆ ಕೆಡೆದನಿಳೆಗೆ, ತನ್ನ ಭಾರಕೆ ತಾನೆ

ಬೇರು ಬಳಲಿದ ತರುಣತರು ಬೀಳುವಂತೆ : ಹಾ,

ಪ್ರಿಯ ವಿಯೋಗದ ನೋವಿಗೆಣೆಯುಂಟೆ ? ಕಬ್ಬುನಂ

ಕರಗಿದಪುದಲರವೊಲ್ ಬಾಡುವುದು ವಜ್ರಮುಂ.

ಇಷ್ಟವಿರಹಕೆ ಮಿಗಿಲ್ ಸಂಕಟದ ಶಿಕ್ಷೆಯಂ

ಸೃಜಿಸಬಲ್ಲನೆ ನರಕ ಶಿಕ್ಷಾಚಾರ್ಯನಾದೊಡಂ ? ೩೨೦

ಮಣಿವುದು ಮಹಾ ಶೈಲಮುಂ ತಾಂ ಲತಾಂಘ್ರಿಗೆ

ಶಿರಂಬಾಗಿ, ಬೇರೆ ಕೋರೆಗಳೇಕೆ ನರಕದಾ

ವ್ಯಾಘ್ರಂಗೆ, ನರಹೃದಯ ರಕ್ತಮಾಂಸವನೀಂಟಿ

ತಿಂದು ತೇಗುವ ನಾಶದೌತಣಕೆ ?

ಹಿರಿಯನಿಗೆ,

ಕಿರಿಯರಿಗೆ, ದೂರದಿಂದಲೆ ಮಣಿದನೆಂಬಂತೆ

ಮೂವರಿಗೆ, ಭರತಂ ಯುಗಾಂತ ಭಾಸ್ಕರ ಸಮಂ

ದೀನಂ ವಿವರ್ಣವದನಂ ಕೃಶಂ ದಿಂಡುರುಳೆ,

ಪ್ರಸ್ವಿನ್ನ ಚೀರ ವಲ್ಕಲ ಜಟಾ ಜಟಿಲನಂ

ಕಷ್ಟದಿಂ ಗುರುತಿಸಿ ಮಹಾಕಾಶ ಸಂಕಾಶನಾ

ನೀಲೋತ್ಪಲ ನಿಭಾಂಗನಾ ರಾಮಚಂದ್ರಂ ಕೂಡೆ ೩೩೦

ಬಿಡದೋಡಿ ಬಂದು ಪಿಡಿದೆತ್ತಿದನ್ ; ಸುಯ್ಯೆರ್ದೆಗೆ

ತಮ್ಮನಂ ಬಿಗಿದಪ್ಪುತೊತ್ತಿದನ್ ; ಮಂಡೆಯಂ

ಮುಂಡಾಡಿ ಪಣೆಗೆ ಮುತ್ತೊತ್ತಿದನ್. ಗದ್ಗದಿಸಿ

ಗುಬ್ಬಳಿಸಿದನೆನಲ್ಕೆ ನುಡಿಸಿದನ್, ಸಂಗಮಿಸೆ

ತನ್ನ ಕಣ್‌ಗಂಗೆ ತಮ್ಮನ ಕಣ್ಣ ಜಗುನೆಯಂ :

“ಏನಿದೇನವರಜನೆ ? ತಂದೆಗಸುಖವೆ ? ನೆಲಕೆ

ಕಂಟಕವೆ ? ನೆಮ್ಮದಿಯ ಕೇಡೆ ತಾಯಂದಿರಿಗೆ ?

ಬಾಧೆಯೇನಾದುದೇನೆಮ್ಮ ಕೋಸಲ ಜನಕೆ ?

ಚೀರವಸನವಿದೇಕೆ ? ಜಟೆಯೇಕೆ ? ಮುಖವೇಕೆ

ಕಳೆಗುಂದಿಹುದು ? ಮಲಿನಮಯ ಕೃಶತೆಯೇಕೀ ಮೆಯ್ಗೆ ? ೩೪೦

ಅಯ್ಯೊ ಈ ದುರ್ದರ್ಶ ಸಂಕಟಾಕೃತಿಯೇಕೆ ?

ನಿನಗೇಕೆ ? ಏಕೆ ಹೇಳಯ್ಯ, ಓ ಸೋದರನೆ,

ನನ್ನುಸಿರ ಸೋದರನೆ ?” ಕುದಿದಪ್ಪಿದಣ್ಣನಾ

ತೋಳ್ತಳ್ಕೆ ತಾಯ ಮಡಿಲಾದುದೆನೆ ಭರತಂ

ಬಳಲ್ದ ಶಿಶು ನೋವಂ ಮರೆತು ನೆಮ್ಮದಿಯನರಿತು

ಮುಗ್ಧ ನಿದ್ರಾಮುದ್ರೆಯಪ್ಪಂತೆ, ಜನಕಜಾ

ರಮಣ ಧೀರೋದಾತ್ತ ವಕ್ಷವಾರ್ಧಿಯ ನೀಲ

ನಾವೆಯೊಳ್ ತೇಲಿದನು ಶಾಂತಿಯ ತುರೀಯಕೆ !

ಮೈಮರೆತ ತಮ್ಮನಂ ಕರುಣೆಯಕ್ಕರೆಯುಕ್ಕಿ

ಮೇಲೆತ್ತುತಾ ರಾಮನೆಲೆವನೆಗೆ ನಡೆದನಯ್, ೩೫೦

ಸೀತೆ ಸೌಮಿತ್ರಿ ಶತ್ರುಘ್ನ ಗುಹರೊಡನೊಡನೆ

ನೆರವಾಗಿ ನಡೆಯೆ :

ದೇವಾಸುರರ ಮಂದರದ ಮೇಣ್

ವಾಸುಕಿಯ ಮಥನ ದೈತ್ಯತೆಗೆಂತು ಮುನ್ನೊಮ್ಮೆ

ತಾನುಕ್ಕಿತಂತೆ, ಭೂ ಜರಠ ಜಠರಾಂತರದ

ಪಲ್ಲಟದ ಪರಿಣಾಮದಿಂದಂ ಪ್ರಕೋಪಿಸುತೆ

ಭೋರ್ಗುದಿದು ಮೇಲ್ವಾಯ್ವುದಟ್ಲಾಂಟಿಕಾಂಭೋಧಿ

ಪೆಸಿಫಿಕಂಬುಧಿಯೊಡನೆ ಢಿಕ್ಕಿ ಹೊಡೆದುಕ್ಕಿ. ಆ

ಕಡಲೆರಡರೊಡಲೊಡಲ ನೀರವ್ವಳಿಕೆಗಡಿಯೆ

ಮೇಲಾದವೋಲೋಕರಿಪುದದ್ರಿಸಮ ಊರ್ಮಿ

ಮಾಲಾ ಭಯಂಕರ ಸಮುದ್ರಂ, ತಿಮಿಂಗಿಲಂ ೩೬೦

ತೃಣದ ಕಣವಾಯಿತೆಂಬಂತೆ. ಪೊರಪೊಣ್ಮುತ್ತೆ

ಗೋಚರಿಪುದೊಂದ್ಧುತಂ ದ್ವೀಪಖಂಡಮದೊ

ಸಸ್ಯಹೀನಂ ಪ್ರಾಣರಹಿತಂ. ಸಮುದ್ರಾಂಬೆ ತಾಂ

ದ್ವೀಪ ಪ್ರಸವವೇದೆಯಿಂದೊಯ್ಯನುತ್ತರಿಸಿ

ನೋಳ್ಪಳಾ ತನ್ನ ಪೊಸ ಪೆತ್ತ ಸಿಸುದೀವಿಯಂ,

ತಾಯ್ಮಳಲ ಬರುನೆಲದ ಬತ್ತಲೆಯ ಬೇಸರದ

ನಿರ್ಜೀವಿಯಂ. ಸುಯ್ದು ಮರುಗಿದಪಳಲೆಯಳ್ಳೆ

ತಿದಿಯೊತ್ತಿದೋಲೇಳುಬೀಳಾಗೆ ಮೋಹವಶೆ

ಮುದ್ದಾಡುವಳ್ ತರಂಗಮ ಪರಿಷ್ವಂಗದಿಂ,

ಫೇನ ಮೃದು ಚುಂಬನೋಚ್ಛ್ವಾಸದಿಂ, ತನ್ನುಸಿರ ೩೭೦

ಚೇತನವನಾ ದ್ವೀಪವತ್ಸನ ದೇಹಕೆಳ್ಚರಿಸೆ

ನೋಂತು, ಸಂವತ್ಸರಗಳಾ ತಪೋದೀಪಕ್ಕೆ

ತಮ್ಮ ಜೀವನ ತೈಲಮಂ ಧಾರೆಯೀಯುತ್ತೆ

ಹರಿಯುವುವು ಕಾಲದಾಚೆಯ ನಿತ್ಯತೆಯ ನಿಧಿಗೆ,

ಬ್ರಹ್ಮಸನ್ನಿಧಿಗೆ. ಇಂತು ಯುಗಶತಂ ಗತವಾಗೆ,

ಕಡಲಮ್ಮನಾ ನೋಂಪಿ ಕೈಗೂಡಿದಪುದಹಾ

ದೀವಿಯೊಡಲೊಳಗುಸಿರ್ ಮಿಂಚು ಸಂಚರಿಸಿ ! ಅದೊ

ಹೊಮ್ಮಿದಾ ಸಸ್ಯದೈಸಿರಿ ಪಸುರ್ ಚಿಮ್ಮುತಿದೆ

ತನ್ನ ಸೃಷ್ಟಿಗೆ ತಾನೆ ಬೆರಗಾಗಿ ! ತುಂಬಡವಿ

ಕಳಕಳಿಸಿ ಮೆರೆಯುತಿದೆ ದೀವಿಯೊಡಲಂ ಮುಚ್ಚಿ ೩೮೦

ಸಿಂಗರಿಸಿ. ಕಣ್ದೆರೆದರೇನಂತೆ, ಜೀವಕ್ಕೆ

ಬಾಯ್ದೆರೆಯದಿನ್ನುಮೆಂತೆನೆ, ಹಕ್ಕಿಮಿಗಗಳ್ಗೆ

ಹುಟ್ಟು ಮೂಡಿಲ್ಲದುದರಿಂದೆಸೆವುದಾ ದೀವಿ

ಮೂಗುವಟ್ಟಂತೆವೋಲ್.

ಶಿಶಿರೋಪಚಾರಕ್ಕೆ

ಕಣ್ದೆರೆದನಾ ಭರತನಣ್ಣನಾಲಿಂಗನದ

ನೀಲದೋಲದೊಳೊಂದು ನುಡಿಮೊಳೆಯದೆಳಹಸುಳೆ.

ಬೆಸಗೊಳೆ ನುಡಿಯಲಾರದಳುವಣುಗದಮ್ಮನಾ

ಮೌನಮುಖ ದೈನ್ಯದೊಳ್ ಸುಳಿಯೆ ಛಾಯಾಮೃತ್ಯು

ಛಾಯೆ, ಕಂಪಿಸಿ ಕಂಡು ದಾಶರಥಿ ನೋಡಲ್ಕೆ

ಶತ್ರುಘ್ನನಂ, ಆತನುಂ ಮೋರೆಯನಿಳಿಕೆಗೆಯ್ಯೆ, ೩೯೦

ಮಂತ್ರಿಯ ಕಡೆಗೆ ತಿರುಗಲಾತನುಂ ಗದ್ಗದಿಸೆ,

ರಾಮನಿಂಗಿತವರಿತು ತುಟಿದೆರೆದನಾ ಗುಹಂ

ವಾರ್ತಾಕಠೋರಮಂ, ಪಿತೃದೇವ ಮರಣಮಂ,

ಭರತ ಸಂತಾಪಮಂ, ವ್ರತಮಂ, ಪ್ರತಿಜ್ಞೆಯಂ

ವನಚರ ಸಹಜ ವಚನ ಕಾರ್ಪಣ್ಯದಿಂದಂತೆ

ಭಾವಮಯ ರಚನೆಯೌದಾರ್ಯದಿಂ : ಧೀರನೆದೆ

ಧಿಗಿಲೆಂದುದವನಿಜೆಗೆ ಕಣ್ಗತ್ತಲಾದತ್ತು ;

ಚಳಿಗೆ ಮೆಯ್ ನಡುಗಿದತ್ತಂತೆ ಬೆಮರ್ದುದು ಸೆಕೆಗೆ

ಕದಡಿತು ಮನಂ ; ಬೆದರಿತಾತ್ಮಂ ; ರಘೂದ್ವಹಂ

ಸುಯ್ದೊರಗಿದನ್ ಗುಹನ ತೋಳ್ಗಳಿಗೆ. ಬಂಡೆಯಿಂ ೪೦೦

ಬನದ ತೊರೆ ಸೋರ್ದುದೆನೆ ಕಣ್ಮುಚ್ಚಿದೆವೆಗಳಿಂ

ಸ್ರವಿಸಿದತ್ತಶ್ರು ಶೋಕದ ಸಿಂಧುಶುಕ್ತಿಯಿಂ

ನಿಶ್ಶಬ್ದತಾ ಬಿಂದು ಮುಕ್ತಾಫಲಗಳುಕ್ಕಿ

ಸುರಿವಂತೆ. ಮೈತಿಳಿದೊಡಂ ರಾಮನನುಜಂಗೆ

“ತಂದೆ ಹೋದನೆ, ತಮ್ಮ, ಸೌಮಿತ್ರಿ ?” ಎನುತೆನುತೆ

ಮೈಥಿಲಿಯ ಮೊಗನೋಡಿ ಸುಯ್ದು ಕುಸಿದನು ಮತ್ತೆ

ವಿಸ್ಮೃತಿಗೆ. ಶೋಕಾಗ್ನಿಯುರಿಯ ಹೊಯ್ಲಿಗೆ ಸಿಲ್ಕಿ

ಸಿಡಿಮಿಡಿಗೊಳುತಲಿರ್ದನಂ ಭರತನಪ್ಪಿದಂ ;

ನುಡಿದನೆಂತಾನುಂ ಸಮಾಧಾನಮಂ. ಪೇಳ್ದ

ಮಾತಿನರ್ಥಕ್ಕಲ್ತು, ತಮ್ಮನೊಲ್ಮೆಯ ದನಿಯ ೪೧೦

ಸುಪ್ರೀತಿಗೆರ್ದೆಯ ಕುದಿಹಂ ತವಿದುದಣ್ಣಂಗೆ :

“ಏಳ್, ಅಯ್ಯಗೆಳ್‌ನೀರೀಯಲಣ್ಣದೇವನೆ ಏಳು !”

ತಮ್ಮನೆಂದೊಳ್ನುಡಿಗೆ ಮಂತ್ರಶಾನ್ತನ ತೆರದಿ

ಮೇಲೆಳ್ದನಮೃತತ್ವದರಿವಾದನೋಲ್.

ಮಂತ್ರಿ

ಕಯ್ಯಾಂತು ಕರೆದೊಯ್ದನಿಳಿಸಿದನು ರಘುಜರಂ

ಮಂದಾಕಿನಿಯ ಪುಣ್ಯತೀರ್ಥಕ್ಕೆ. ನದೀದೇವಿ

ಮೊರೆಯಿಂದೆ ಲಲ್ಲಯ್ಸಿ, ತೆರೆಯಿಂದೆ ಸಂತಯ್ಸಿ

ಪರಿದಳು ಚಿರಶ್ಯಾಮಲಾರಣ್ಯಗಳ ಮಧ್ಯೆ,

ತುಂಬಿ ! ಕರ್ದಮ ರಹಿತ ತಟನಿಕಟ ವಾರಿಯಂ

ಮಿಂದರುದಕಂಗೊಟ್ಟರಯ್ಯಂಗೆ : “ಪಿತೃದೇವ, ೪೨೦

ಕೊಳ್ಳಿದಂ ಕುಸುಮ ಸುಂದರ ಸದಾ ರಮಣೀಯ,

ಶೀತಲ ಸುಗಂಧಮಯ, ಮಂದಾಕಿನಿಯ ದಿವ್ಯ

ತೀರ್ಥಮಂ. ವಿಮಲ ತೋಯಮಿದು, ನೃಪಶಾರ್ದೂಲ,

ಪಿತೃಲೋಕದೊಳಗಕ್ಕೆ ನಿನಗಕ್ಷಯಂ.” ಶ್ರದ್ಧೆ ತಾಂ

ಸಪ್ರಾಣವಾಗುವೋಲಮೃತ ತರ್ಪಣವಿತ್ತು

ತೀರಕೇರ್ದನ್ ಸಹೋದರ ಸಹಿತ ತೇಜಸ್ವಿ ; ಮೇಣ್

ಬದರಿಯ ಫಲಂಬೆರಸಿದಿಂಗುಳದ ಹಿಂಡಿಯಂ

ದರ್ಭಾಸ್ತರದೊಳಿಟ್ಟು ಪಿಂಡವಿತ್ತನ್ : “ತಂದೆ,

ತಾನುಂಬುದೇನಿಹುದೊ ತನ್ನಿಷ್ಟದೇವತೆಗೆ

ತಾನದೆ ನಿವೇದನಂ. ನಮ್ಮುಣಿಸನೆಯೆ ನಿನಗೆ

ಕೊಡುವೆವಡವಿಯ ಬಡತನದ ಬಿರ್ದ್ದನೊಪ್ಪಿಸಿಕೊ, ೪೩೦

ಪೂಜ್ಯ ಹೇ ಕೋಸಲಾಧೀಶ.”

ತದನಂತರಂ

ಏರಿದರ್ ದುಃಖಿಗಳ್ ಪರ್ಣಕುಟಿಯಿರ್ದೆಡೆಗೆ,

ರಮ್ಯ ಸಾನು ಮಹೀಧರೋನ್ನತಿಗೆ. ಅನಿತರೊಳ್

ಗುರು ವಸಿಷ್ಠಂವೆರಸಿ ಪರಜನರ್, ಪರಿಜನರ್,

ಗುರುಜನರ್, ಕೌಸಲೆ ಸುಮಿತ್ರೆಯರ್ ಮೇಣ್ ಕೈಕೆ

ಮೊದಲಪ್ಪ ಮಾತೆಯರ್, ಮಹಿಳೆಯರ್, ಕಾಲ್‌ನಡೆದೆ

ಬಂದರಲ್ಲಿಗೆ ; ಕಂಡು ರಾಮನಿರವಂ ಸುಯ್ದು

ಗೋಳಿಟ್ಟರಿನ್ನೊಂದು ಪರಿದುದೆನೆ ಮಂದಾಕಿನಿ.

ಮಿಂದನು ರಘೂದ್ವಹಂ ಮತ್ತೊಮ್ಮೆ, ಹೃದಯದಿಂ ೪೪೦

ಹೊಮ್ಮಿಹರಿದಾ ಕಣ್ಣ ಹೊಳೆಯಲ್ಲಿ. ಶೋಕಿಸುತೆ

ಕೌಸಲ್ಯೆಯಡಿಗೆರಗಲಾ ಬೆಂದೆದೆಯ ತಾಯಿ,

ಮಲಿನ ವಸನದ ಮಲಿನ ವದನದ ಕರುಣಮೂರ್ತಿ,

ಬಿಕ್ಕಿ ಬಿಕ್ಕಳುತಳುತೆ ತಬ್ಬಿದಳ್ ಕಂದನಂ,

ಪೋದಾಸೆ ಬರ್ಪಾಸೆಯಂ ತಬ್ಬುವೋಲ್. ಅಂತೆ

ನಮಿಸಿದರ್ ಸೌಮಿತ್ರಿಯುಂ ಜನಕಜಾತೆಯುಂ.

ಪಿರಿಯ ತಾಯಾತನಂ ಪರಸಿ, ಸೊಸೆಯಂ ನೋಡಿ

ಮುಂಡಾಡಿ ಗೋಳಿಟ್ಟಳರಸುಕುವರಿಯ ಗತಿಗೆ.

ರಘುಜಂ ಸುಮಿತ್ರೆಗಭಿವಂದಿಸಿ, ಹುಡುಕಿ ನೋಡಿ,

ದೂರದೊಳ್ ತಲೆಬಾಗಿ ನಿಂದ ಪಶ್ಚಾತ್ತಾಪ ೪೫೦

ಶೋಕ ಭಾರಾಕ್ರಾಂತ ಗಾತ್ರೆಯಂ, ಕೈಕೆಯಂ,

ಕಿರಿಯಮ್ಮನಂ ಭರತನಂಬೆಯಂ ಕಂಡೊಡನೆ

ಬಳಿಗೆಯ್ದಿದನ್ ಕರುಣಿ. ಪಾಪಿಯಂ ಬೆಂಬಿಡದೆ

ಹಿಂಬಾಲಿಸಟ್ಟಿ ಹಿಡಿಯುವ ಕೃಪಾಕೇತುವೋಲ್

ಮುಟ್ಟಿಹಿಡಿದನು ಪಾದಯುಗ್ಮಮಂ. ಕೆಡೆದಳಾ

ಕೇಕಯ ನೃಪಕುಮಾರಿ ರಾಮಾಂಘ್ರಿಗಂಘ್ರಿಪಂ

ಸಗ್ಗದಗ್ಗಿಯ ಹೊಯ್ಲಿನುರುಬೆಗೆ ಸಿಡಿಲ್ದುರುಳಿ

ಬೀಳ್ವಂತೆ. ಪಿಡಿದೆತ್ತಿದನು ರಾಮನಾಕೆಯಂ,

ಭಕ್ತನಾತ್ಮವನೆತ್ತುವಂತೆ ಭಗವತ್‌ಪ್ರೀತಿ.

ದಿವ್ಯಮಾ ಪ್ರೇಮಹಸ್ತಸ್ಪರ್ಶಕಾ ಕೈಕೆ ತಾಂ ೪೬೦

ಕಂಡಳೇನನೊ ? ಶಾಂತವಾದಳ್ ! ಮಗನನೆಕ್ಕಟಿ

ಸನ್ನೆಗಣ್ಣಿಂ ಕರೆದು, ರಾಮ ಯತಿ ರೂಪಮಂ

ನಿಡಿದುನೋಡಿ ಕೈಮುಗಿದಳಲ್ಲಿ ಕಂಡವರೆಲ್ಲ

ಬೆರಗು ಬಿಲ್ಲಾಗೆ. ಮಾತೆಯ ಮೌನವೀಣೆಯನೆ

ಮಿಡಿವನೆಂಬೋಲ್ ಭರತನಾಡಿದನ್, ತೋಡಿದನ್

ತನ್ನೆದೆಯ ಭಾವಾಭಿಲಾಷೆಯ ಸರೋವನಂ

ಕೋಡಿವರಿಯಲ್ಕೆ. ಕೇಳ್ದಾ ವನೌಕಸರಿಗೆರ್ದೆ

ಮರುಗಿದತ್ತಂತೆ ನಲಿದತ್ತು, ದಾರುಣ ಕಥೆಗೆ

ಮೇಣಾ ಕಥನ ಕಲೆಯ ರಮ್ಯತೆಗೆ.

ಋಷಿಗೋಷ್ಠಿ

ಮೌನಮಿರೆ, ಜನಸಮೂಹಂ ಮೂಕಮಿರೆ, ಗಗನ ೪೭೦

ನೀಲ ನಯನಂ ಸಾಕ್ಷಿಯಾಗಿರೆ, ಗಿರಿಶ್ರೇಣಿ

ಕೇಳುತಿರೆ, ವನಪಂಕ್ತಿಯಾಲಿಸಿರೆ, ನಲಿಯಲಾ

ತ್ರಿಭುವನಂ ಭರತನೊರೆದನು ವಚನವೇದಮಂ ;

ರಾಮನಾಲೈಸಿದನು ಲೋಕ ರೋಮಾಂಚಕರ

ವಾಣಿಯಿಂ ಭವಿಸಿದಾ ಧರ್ಮದಾಮೋದಮಂ !

ತಾನಯೋಧ್ಯೆಯನುಳಿದ ದಿನದಿಂ ಮೊದಲ್ಮಾಡಿ

ಚಿತ್ರಕೂಟಕೆ ಭರತನಾಗಮನದಾ ವರೆಗೆ

ಕತೆಗೇಳ್ದನಶ್ರುವಿಗಳಿತ ಕಮಲ ಲೋಚನಂ,

ನಡುನಡುವೆ ನಿಡುಸುಯ್ದುಸುಯ್ದು. ಮಾರುತ್ತರದ

ಪನಿಮಳೆಗೆ ಜನಮನ ನಿರೀಕ್ಷಣಾ ಚಾತಕಂ ೪೮೦

ತುದಿವೆರಳ ಮೇಲೆ ಕೊರಳೆತ್ತಿ ನಿಂತಿರೆ, ಮೌನಿ

ರಾಮನ ಮನಂ ಮಗ್ನಮಾದತ್ತು ಚಿಂತಾಬ್ಧಿ

ತಲಕೆ. ಪಿತೃವಾಕ್ಯ ಪರಿಪಾಲನಾ ನಿಗಳದಿಂ

ಧರ್ಮದಾಲಾನಕ್ಕೆ ಕಟ್ಟುಗೊಂಡಿನಕುಲನ

ಧೈರ್ಯದೈರಾವತಂ ಹೋರಾಡುತಿರ್ದುದಂ

ಕಾಣುತೆ ಗುರು ವಸಿಷ್ಠನಾಡಿದನ್, ಮಾವುತಂ

ತೋತ್ರದಿ ತಿವಿಯುವಂತೆ : “ನೆನೆ ನೈಜಧರ್ಮಮಂ

ಜನ್ಮದುದ್ದೇಶಮಂ, ತಪನಕುಲ ನೃಪಸೂನು.

ಕೆಡಿಸುವೆಯೊ ಕಾಡೊಳಲೆದಾಯುಃಪ್ರಯಾಣಮಂ ?

ಲೋಕದುದ್ಧಾರಕ್ಕೆ ಮೇಣಾತ್ಮ ಸಂಸ್ಕೃತಿಗೆ ೪೯೦

ನೈವೇದ್ಯವಾಗುವೆಯೊ ? ನೆನೆ !” ಶಿಷ್ಯನಾತ್ಮಮಂ

ಪೊಕ್ಕುದಾಚಾರ್ಯನಾ ವಾಗಿಂಗಿತಂ. ಸ್ವಪ್ರಜ್ಞೆ

ಪ್ರೋಜ್ವಲಿಸಿದತ್ತಸ್ಥಿರತೆ ಮಾಣ್ದುದಾತ್ಮದೊಳ್

ಮೂಡಿದತ್ತದ್ಭುತಂ ವಜ್ರಸುಸ್ಥಿತ ದೃಢತೆ.

ತಿರುಗಿದುದು ಬಿದಿಯ ಮೊನೆಯಂಕುಶದ ತಿವಿತಕ್ಕೆ

ರಾವಣಾರಿಯ ಮನದ ಮದಕರಿ ಅಯೋಧ್ಯೆಯಿಂ

ತೆಂಕಣಕ್ಕೆಸೆವ ಲಂಕೆಯ ಲಲಾಟದ ಲಿಪಿಗೆ

ಕಾಲಕಪಿಯಾಗಿ. ತಾಯಂದಿರುಂ ಗುರುಗಳುಂ,

ಪರಿಜನಪ್ರಜೆಗಳುಂ, ನೆರೆದಿರ್ದ ಋಷಿಗಳುಂ,

ಬಾಲಋಷಿ ಭರತನುಂ ಕೇಳುತಿರೆ, ಋತದರ್ಶಿ ತಾಂ ೫೦೦

ನುಡಿದನಪ್ರತಿವಾದ ವೇದಮಂ, ಸಮಹೃದಯ

ಸಂವೇದ್ಯಮಂ :

“ಧನ್ಯನಾಂ ನಿಮ್ಮ ಕರುಣಶಿಶು.

ಪೂಜ್ಯರಾಶೀರ್ವಾದ ಹಸ್ತದೋಲದಿ ಸದಾ

ಸುಕ್ಷೇಮಿ; ಕಲಿ, ಬಲಿ, ಸುಖಿ ನಿರಂತರಂ; ಮತ್ತೆ

ಧರ್ಮ ಸಂಪ್ರೇಮಿ. ಪಿತೃದೇವನಾ ದೈನ್ಯಮಂ

ದುಃಖಮಂ ನಿಧನಮಂ ಕೇಳ್ದೆನ್ನ ರಿಕ್ತಮತಿ

ತತ್ತರಿಸಿತಾದೊಡಂ, ಮಾತೃ ಶೋಕಾಗ್ನಿಯಂ

ಮುಟ್ಟಿದೆದೆ ಬೇಯುತಿಹುದಾದೊಡಂ, ಪ್ರಜೆಗಳೀ

ಪ್ರೀತಿಗಾತ್ಮಂ ಅಯೋಧ್ಯಾ ನಗರದತ್ತಣ್ಗೆ

ತೇಲುತಿಹುದಾದೊಡಂ, ಸರ್ವಕೆ ಮಿಗಿಲೆನಲ್ಕೆ ೫೧೦

ಭರತ ಬಂಧುಪ್ರೇಮ ಫಣಿ ನನ್ನ ಸರ್ವಮಂ

ಬಿಗಿದೊತ್ತಿ ಸುತ್ತಿ ನುಂಗುತ್ತಿರ್ಪುದಾದೊಡಂ,

ಪಿತೃವಾಕ್ಯ ಪರಿಪಾಲನಾರ್ಥಮಾಂ ವನವಾಸಿ

ಪದಿನಾಲ್ಕು ಬರಿಸಂಬರಂ. ತಂದೆ ತೀರ್ದೊಡೇಂ

ತೀರ್ದುದೆ ತಂದೆಯಾಜ್ಞೆ ? ತಂದೆಗಿಂ ಪೆರ್‌ತಂದೆ ದಲ್

ಧರ್ಮಂ ; ಚಿರಂಜೀವಿ ಮೇಣ್ ! ವಿಧಿಯ ನಿಯತಿಯ ಪವಿಯ

ಘಾತಕೆ ಸಿಲುಕಿ ತಂದೆ ನನ್ನನಡವಿಗೆ ನೊಂದು

ಕಳುಹಿ ಬೆಂದುರಿದಳಿದನೈಸಲೆ ? ಜಿತೇಂದ್ರಿಯಂ

ತಾನಂತೆಸಗುವೋಲೆಸಗಿದತ್ತಾ ವಜ್ರವಿಧಿ !

ಕುಬ್ಜೆ ಮಂಥರೆ ಬರಿಯ ಹುಲುನೆವಂ : ಮೂಡುವುದೆ ೫೨೦

ಲೋಕ ಲಾವಣ್ಯನಿಧಿ ಮಾತೆ ಕೈಕೆಯ ಮನದಿ

ಕುಚರ ಬುದ್ಧಿಯ ಕುರೂಪಂ ? ಪೊಣ್ಮುವುದೆ ವಿಕೃತಿ

ಸೌಂದರ್ಯದಿಂ ? ಚೆಲ್ವಿನಭಿಲಾಷೆ ತಾನೇಗಳುಂ

ಚೆಲ್ವಿಂಗೆ ತಾಯ್. ಧರ್ಮದೇವತಾ ಕ್ರೌರ್ಯಕ್ಕೆ

ಕರುಣೆಯಲ್ಲದೆ ಬೇರೆ ಗುರಿಯಿಹುದೆ ? ಕಿರಿಯ ತಾಯ್

ನಿಯತಿ ಹಸ್ತದೊಳೊಂದು ಕೈದು ತಾಂ. ಕೀರ್ತಿಯಂ

ಮೇಣ್ ಜನಪ್ರೀತಿಯಂ ತೆತ್ತಾಕೆ ತಾಂ ಧನ್ಯೆ,

ದೇವ ಸನ್ಮಾನ್ಯೆ : ಮೆರೆವುದೆ ತುದಿಯೊಳಾ ನನ್ನಿ !

ಕಜ್ಜಮಾವುದಕಾಗಿ ನೀಗಿದನೊ ತಂದೆಯಸುವಂ,

ತನ್ನ ತೇಜವನೆಲ್ಲ ತಾನೀಡಾಡಿದಳೊ ತಾಯಿ, ೫೩೦

ದೇವದೇವತೆಗಳಾ ವ್ಯೂಹ ಸಂಯೋಜನೆಗೆ

ಬನ್ನಮೆನ್ನಿಂದಾಗದಯ್. ಕೇಳ್, ಸಹೋದರನೆ :

ರಾಮನೀ ಪೂಣ್ಕೆ ದಲ್ ಸುಸ್ಥಿರಂ ಮೇರುವೋಲ್ !”

ಘೋಷಿಸಲ್ ಗೋಪುರಾಗ್ರದ ಗುಡಿಯ ಹೆಗ್ಗಂಟೆ,

ಆ ಲೌಹ ಭೀಮನಾದಂ ವಾಯುಮಂಡಲಕೆ

ಕಂಪ್ರನವನಿತ್ತುರ್ವಿ ಕೊರ್ವುತೊಯ್ಯನೆಯೆಂತು

ನಿಶ್ಶಬ್ದತಾ ಲೀನವಹುದೊ ಆ ಮಾಳ್ಕೆಯಿಂ

ನಿಂದುದಾ ಮಂದ್ರಗಂಭೀರ ಮೇಘಧ್ವನಿಯ

ಧೀರ ಸೀತಾನಾಥ ಭಾಷಣಂ. ಕಂದರದ

ದೂರದಿಂದೇರಿ ಬಂದತ್ತು ಮಂದಾಕಿನಿಯ ೫೪೦

ಮೊರೆ. ಭಂಗಿಸಿತು ಭರತನಳುವ ಸುಯ್ಯುಸಿರೊಂದೆ

ಆ ವನ್ಯನೀರವತೆಯಂ, ಮತ್ತೆ ಮೌನಮಂ

ಜನಸಂಘದಾ.

“ಮುನ್ನಮೊರೆದನಿಲ್ಲವೆ ನಿನಗೆ

ಜಾಬಾಲಿ ? ರವಿಯನಸ್ತಾದ್ರಿಯಿಂ ಮೂಡೆಂದು

ಪೀಡಿಪೊಲೆ ಕಾಡಿಸುತ್ತಿಹೆ ರಾಮಚಂದ್ರನಂ,

ಭರತೇಂದ್ರ. ವಿಶ್ವಶಕ್ತಿಸ್ಫೂರ್ತನೀತನುಂ

ತಿಳಿಯೆ ವಿಶ್ವವ್ಯಕ್ತಿ. ಶುಕ್ತಿಕೆ ಸಮುದ್ರಮಂ

ಒಳಕೊಳ್ವುದೇನ್ ? ಕೋಸಲಾಕಾಶವಿಸ್ತಾರಮೀ

ರಾಮನಾತ್ಮದ ವಿರಾಟ್ ಪಕ್ಷ ವಿಸ್ಫಾಲನೆಗೆ

ಸಾಲದಲ್ಪಂ. ಅನಂತಾಕಾಶಯಾತ್ರಿ, ಕೇಳ್, ೫೫೦

ರಾಮನಿಚ್ಛಾ ವೈನತೇಯಂ. ಅನಂತಮಂ

ಸಾಂತದಲ್ಪಕ್ಕೆಳೆವ ಸಾಹಸಂ ಸಾಲ್ಗುಮಿನ್. ಏಳ್,

ಶೋಕಮಂ ಬಿಟ್ಟೆನ್ನ ಪೇಳ್ವುದಂ ಗೆಯ್. ಮುಂದೆ

ತಾನಪ್ಪುದೊಳ್ಪು, ಕೇಳ್, ಲೋಕಕೆ, ನಿನಗೆ, ಕೋಸಲಕೆ.”

ಸಂತೈಸಿದನ್ ಗುರುವಸಿಷ್ಠನೆಂತಾದೊಡಂ

ಇಂತಿಂತುಟಾ ಕೈಕೆಯ ಕುಮಾರನಂ. ಇಭಂ

ದಂತದಿಂದಿರಿದೊಡಂ ಸೊಂಡಿಲಿಂದಪ್ಪಿತೆನೆ,

ರಾಮನುಂ ನುಡಿಪನೆಯಿನಿರಿದೊಡಂ ತೋಳ್ಗಳಿಂ

ತಬ್ಬಿದನ್ ತಾವಿರ್ವರೊಂದೆಂದು ತೋರ್ಪಂತೆ,

ಮತ್ತೆ ಗುರುವಾಕ್ಯದೊಳ್ ಶ್ರದ್ಧೆ ಸಂಭವಿಪಂತೆ ೫೬೦

ಸೋದರಗೆ. ಮೇಲೆ ಮುನಿಯಾದೇಶಮಂ ವರಿಸಿ,

ರಾಮಪಾದ ಸ್ಪರ್ಶ ಮಹಿಮಾನ್ವಿತಂಗಳಂ

ದಿವ್ಯಪಾದುಕೆಗಳಂ, ದೇವನಡಿ ದೇವಂಗೆ

ಪಡಿಯೆನುತೆ, ಮುಡಿಗೇರಿಸುತ್ತೆ ಭರತಂ :

“ಆಲಿಸಿಂ,

ಅಮರರಿರ ಗಗನ ಗಿರಿ ನದಿ ವನಸ್ಥಳಗಳಿರ,

ಮುನಿಗಳಿರ, ಆಚಾರ್ಯರಿರ, ಧರ್ಮದೇವರಿರ,

ಮಾತೃದೇವತೆಗಳಿರ, ಪರಿಜನ ಪ್ರಜೆಗಳಿರ,

ಪೂಜ್ಯ ಪಾದುಕೆಗಳಂ ಪೂಜ್ಯಪಾದಂ ಗೆತ್ತು

ಸಿಂಹಾಸನದೊಳಿಟ್ಟು ಪೂಜಿಸುವೆನಾಂ. ಸೇವೆ

ಭ್ರಾತೃದೇವಂಗೆಂದು ತಿರೆವೊಲಪೊರೆಯನಾನುವೆಂ ೫೭೦

ಸಂವತ್ಸರ ಚತುರ್ದಶಂ ಬರಂ. ಮರುದಿನಂ,

ದೊರೆಕೊಳ್ಳದಿರಲೆನಗೆ ಶ್ರೀರಾಮದರ್ಶನಂ,

ಬೆಂಕೆಗೊಡಲಂ ನಿವೇದಿಪೆನಣ್ಣದೇವನಂ

ಸಂದರ್ಶಿಸಲ್ಕಾತ್ಮ ಲೋಕದಲಿ. ಅನ್ನೆಗಂ

ವ್ರತಿಯಾಂ ಜಟಾವಲ್ಕಲಾನ್ವಿತಂ. ನಿಚ್ಚಮುಂ

ರಾಮಾಭ್ಯುದಯ ತಪೋಮಗ್ನನಪ್ಪೆನಗೆ ನೀಂ

ಕರುಣಿಸಿಂ. ಪರಕೆಗೆಯ್ಯಿಂ !”

ಮಿಂಚಿತಾ ರಾತ್ರಿ

ಚಿತ್ರಕೂಟದೊಳವನಿಜಾರಮಣ ಸನ್ನಿಧಿಯ

ಶಾಂತಿಯಲಿ. ಕಟ್ಟುವನೊ ಕೃಪೆಯ ಪಾಥೇಯಮಂ

ಪದಿನಾಲ್ಕು ವರುಷದಾ ನಗರವನವಾಸದಾ ೫೮೦

ದೀರ್ಘತರಯಾತ್ರೆಗೆನೆ, ಕೈಕೆಯ ತನೂಭವಂ

ತೊಯ್ಯುತಿರೆ ರಾಮಸಂಗದ ಸೊದೆಯ ಸೋನೆಯೊಳ್,

ಪ್ರಾಣಮಯ ಪೃಥಿವಿಯಾ ನವಜೀವನವ್ರತಕೆ

ಜೀವನ ನವೀನ ಚೇತನ ತೀರ್ಥಮೆರೆಯಲ್ಕೆ

ಕುಂಕುಮ ಕನಕ ನವ್ಯ ನವರತ್ನಕಾಂತಿಯಿಂ

ತೀವಿ ಮಿನುಗುವ ಕನತ್ಕಲಶಮಂ ಕೈಲಾಂತು

ಮೂಡುವೆಟ್ಟಿನ ಕೋಡನೊಯ್ಯನೆಯೆ ಏರಿದಳೊ

ಚಿರ ನೂತನಾ ಸೃಷ್ಟಿಲಕ್ಷ್ಮಿಯೆನೆ, ರತುನ ರವಿ

ರುಚಿಸಿದನು ಕೋಟೀರ ಕೋಟಿ ಕಿರಣ ಕಿರೀಟಿ

ತಾನಾಗಿ. ಪೊರಮಟ್ಟನಾ ಚಿತ್ರಶೈಲದಿಂ ೫೯೦

ಭರತೇಂದ್ರನುಂ ರಾಜನಗರಾಭಿಮುಖನಾಗಿ,

ಪೂಜ್ಯಪಾದನ ಪೂಜ್ಯಪಾದುಕಾ ಕೋಟೀರ

ತೇಜದಿಂ ಸಮ್ರಾಜನಾಗಿ. ಸುಯ್ಪನಿವೆರಸಿ

ಬೀಳ್ಕೊಂಡರೊರ್ವರೊರ್ವರನಳಲ್ ವೆಂಕೆಯಿಂ

ದಹಿಸಿ. ಗೋತ್ರಸ್ಕಂಧಮಂ ಮೆಟ್ಟಿ ಕಣ್ದಿಟ್ಟಿ

ಮುಟ್ಟುವನ್ನೆಗಮಟ್ಟಿ ನೋಡುತಿರೆ ಸೌಮಿತ್ರಿ ಮೇಣ್

ರಾಮಸೀತೆಯರೊಡನೆ ನಿಂದ ಮುನಿಸಂಕುಲಂ,

ಭರತವಾಹಿನಿ ದಾಂಟಿದತ್ತು ಮಂದಾಕಿನಿಯ

ವಾಹಮಂ; ಘೋಷಮೊಯ್ಯನೆ ನಿಂದುದಾಲಿಸಿರೆ;

ಮೇಣ್ ಕಣ್ಗೆ ಮರೆಯಾಯ್ತು ಸೈನ್ಯಧೂಳೀ ಪಥಂ, ೬೦೦

ಬೆಟ್ಟಸಾಲ್ಗಳ ನಡುವೆ ಕಣಿವೆವಟ್ಟೆಯ ಕೊನೆಯ

ದಿಗ್ದೂರಮಂ ಮರ್ಬುಗೈದು.

ಋಷ್ಯಾಶ್ರಮಂ

ಬಳಿಗೆವರೆ, ಗುರು ಭರದ್ವಾಜನಡಿಗಳಿಗೆರಗಿ,

ನಡೆದುದಂ ಬಿನ್ನಯ್ಸಿ, ಪರಕೆಯಂ ಕೈಕೊಂಡು,

ಮುಂಬರಿದು, ಸೂರ್ಯತನಯೆಯನುತ್ತರಿಸಿ, ಮತ್ತೆ

ದಾಂಟಿ ಸುರನಿಮ್ನಗೆಯನಾ ಶೃಂಗಿಬೇರಮಂ

ಪೊಕ್ಕು, ಗುಹನಾತಿಥ್ಯಮಂ ಗ್ರಹಿಸುತಾತನಿಂ

ಬೀಳ್ಕೊಳುತ್ತಲ್ಲಿಂದೆ ಮುಂದೆ ನಡೆದುದು ಯಾತ್ರೆ

ಕೋಸಲಕೆ.

ಹಾ ! ಭಾಗ್ಯಹೀನ ದೀನ ಅಯೋಧ್ಯೆ,

ನಿನಗುಂ ಅರಣ್ಯಗತಿಯಾಯ್ತಲಾ ರಾಮನಾ ೬೧೦

ವನವಾಸದಿಂ, ದಶರಥನ ನಿಧನದಿಂ ಮೇಣ್

ಭರತನಾ ಪರಿತ್ಯಾಗದಿಂ ! ಶ್ರೇಷ್ಠರಿಲ್ಲದಿರೆ,

ಏನಿರ್ದರೇನಂತೆ, ಮಸಣಮಾ ಪತ್ತನಂ

ತತ್ತ್ವ ವಿದ್ಯಾ ಕಲಾ ಸಂಗೀತ ಸಾಹಿತ್ಯ

ಸಕಲ ಸಂಸ್ಕೃತಿಗೆ. ಬಿತ್ತರದ ಬೀದಿಗಳೆರಡು

ಕೆಲದಿ ಮುಗಿಲಂ ಮುಟ್ಟಿ ಮೆರೆದೊಡೇಂ ಸ್ಪರ್ಧೆಯಾ

ಪ್ರಾಸಾದ ಪಂಕ್ತಿ ? ರಂಜಿಸಿದೊಡೇಂ ರಜನಿಯಂ

ಪಗಲುಗೈದಾಗಸದ ಚುಕ್ಕಿಗಳನೇಳಿಸುತೆ

ಕಿಕ್ಕಿರಿದು ಕಣ್ಬೆರಗುಗೊಳಿಸಿ ಗೊಂಚಲ್ಗೊಂಡು

ಉರಿವ ವಿದ್ಯುದ್ದೀಪ ರಾಜಿ ? ಬಣ್ಣದ ಬುಗ್ಗೆ ೬೨೦

ಕಣ್ಗೆ ಕಾಮನ ಬಿಲ್ಗಳಂಗನೆಯರಾಟವೆನೆ

ಸಾಲ್ಗೊಂಡು ವಿವಿಧಗತಿಯಾ ಕಲಾಕೃತಿಯಿಂದೆ

ರಂಗುರಂಗಿನ ತೋಂಟರಂಗದಿ ಮನಂಗೊಳಿಸಿ

ಕುಣಿದೊಡೇಂ ? ಪ್ರಾಸಛಂದಃಪೂರ್ಣಮಪ್ಪುದೇಂ

ಪುರುಷಾರ್ಥ ಶಾಶ್ವತದ ರಾಸಲೀಲಾ ಬೃಂದೆ ?

ಜನಮನೋಮಂದಿರದ ಸುಸ್ವಪ್ನಗೋಪುರದ

ಕಲಶಂ ನಭಶ್ಚುಂಬಿಯಾಗದಿರೆ, ಋಷಿಹೃದಯ

ಮಂಗಳಾರತಿ ಬಾಳಿನಂಧತೆಯನಳಿಸದಿರೆ,

ಕವಿಕೃತಿಯ ವರ್ಣಗಾನಂ ಮಹನ್‌ನಿತ್ಯತಾ

ಸ್ವರ್ಣಸುಂದರ ಇಂದ್ರಿಯಾತೀತ ನಂದನದಿ ೬೩೦

ನವರಸಾಪ್ಸರಿಯರಂ ನರ್ತನಂಗೈಸದಿರೆ, ಪೇಳ್,

ಏನಿರ್ದುಮೇನ್ ಅನಾಗರಿಕತಾ ಶ್ರೀ, ದಿಟಂ

ಮಸಣಮಾ ಪತ್ತನಮಯೋಧ್ಯೆ ತಾನಾದೊಡಂ !

ಪ್ರೇತವನಮಂ ಪುಗುವನೇಂ ಪೂಜ್ಯಪಾದುಕಾ

ಚೇತನಂ ? ಪಾಳ್ಮಸಗಿದಾ ದುಃಸ್ಮೃತಿಯ ನಿಧಿಗೆ

ಬೆನ್ದಿರುಹಿ, ಬಳಿಯ ನಂದಿಗ್ರಾಮಕೈತಂದು,

ಪಾದುಕಾ ಪಟ್ಟಾಭಿಷೇಕಮಂ ಗೆಯ್ದವುಗಳನೆ

ಪೂಜ್ಯಾಗ್ರಜಂ ಗೆತ್ತು, ರಾಜ್ಯಭಾರವ್ರತದಿ

ನಿಂದನಯ್ ಭರತನನಿಶಂ ಶ್ರೀರಾಮ ಸುಕ್ಷೇಮ

ಚಿಂತನಾ ಪ್ರಾರ್ಥನೆಗೆ ತೆತ್ತು ತನ್ನಾತ್ಮಮಂ. ೬೪೦


>>  ಮುಂದಿನ ಸಂಚಿಕೆ-೧೦/ಅತ್ರಿಯಿಂದಗಸ್ತ್ಯಗೆ    <<


<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<