ಪುಟ:ನಡೆದದ್ದೇ ದಾರಿ.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿಡುಗಡೆ | ಅನಾಥ ೨೬೫ ಘೋಷಿಸಿದರು. ಭಗಿನೀ ಸೇವಾ ಸಮಾಜಕ್ಕಾಗಿ ಸಭಾಗೃಹವೊಂದನ್ನು ಕಟ್ಟಿಸಲೆಂದು ಅಂಬುಜಮ್ಮ ತುಂಬ ಕಷ್ಟಪಟ್ಟು ಸಂಗ್ರಹಿಸುತ್ತಿರುವ ನಿಧಿಗೆ ತಮ್ಮ ವೈಯಕ್ತಿಕ ಕಾಣಿಕೆಯೆಂದು ಆಗಲೇ ಒಂದು ಸಾವಿರ ರೂಪಾಯಿಯ ವಾಗ್ದಾನ ಮಾಡಿದರು. ಭಾಷಣ ಮುಗಿಸಿ ನೀರು ಕುಡಿದು ಆತ ಕೂತಾಗ ಜನ ತುಂಬ ಹೊತ್ತು ಚಪ್ಪಾಳೆ ಬಾರಿಸಿದರು. ಅಂದಿನ ಸಭೆಗೆ ಊರಿನ ಗಣ್ಯ ನಾಗರಿಕರು, ಸರಕಾರಿ ಅಧಿಕಾರಿಗಳು ವಿಶೇಷ ಸಂಖ್ಯೆಯಲ್ಲಿ ಬಂದಿದ್ದು ಸಭೆಗೆ ಶೋಭೆಯನ್ನು ತಂದಿದ್ದರಿಂದ ಅಂಬುಜಮ್ಮನಿಗೆ ತುಂಬ ಉತ್ಸಾಹ ಉಕ್ಕಿ ಬಂದಿತ್ತು. ಅತಿಥಿಗಳ ಭಾಷಣದ ನಂತರ ಅಧ್ಯಕ್ಷೆಯಾಗಿದ್ದ ಆಕೆ ಎದ್ದು ನಿಂತು ನೆರೆದ ಮಹಾಜನಗಳೆದುರು ಭಗಿನೀ ಸೇವಾ ಸಮಾಜದ ಹಕ್ಕಿ ನೋಟವನ್ನು ಪ್ರಸ್ತುತಪಡಿಸಿದಳು. ತನಗೆ ಅಧಿಕಾರ ಬಂದ ನಂತರ ಸಮಾಜದ ಒಳ್ಳೆಯದಕ್ಕಾಗಿ ತಾನು ಕೈಕೊಂಡ ಹೊಸ ಹೊಸ ಸುಧಾರಣೆಗಳು, ಹುಡುಗಿಯರ ಬಗೆಗೆ ತನಗೂ ಇತರ ಆಡಳಿತ ವರ್ಗದ ಸಿಬ್ಬಂದಿಗೂ ಇರುವ ಅಪರಿಮಿತ ಪ್ರೇಮ. ಈ ಸಮಾಜವನ್ನು ಅತ್ಯಂತ ಆದರ್ಶ ಸಂಸ್ಥೆಯನ್ನಾಗಿ ಮಾರ್ಪಡಿಸಬೇಕೆನ್ನುವ ತನ್ನ ಕನಸು ಕುರಿತು ವಿವರಿಸಿದಳು. ಹುಡುಗಿಯರಿಗೆ ಪ್ರತಿದಿನ ಮುಂಜಾನೆ ಸಿರಾ-ಹಾಲು, ಮಧ್ಯಾಹ್ನ ಚಪಾತಿ ಪಲ್ಯ ಅನ್ನ, ಸಂಜೆ ಹಣ್ಣು, ರಾತ್ರಿ ಅನ್ನ-ಸಾರು, ಹಬ್ಬಗಳಲ್ಲಿ ಸಿಹಿ ತಿಂಡಿ ನೀಡುತ್ತಿರುವದನ್ನು ತಿಳಿಸಿ ಅವರಿಗೆ ಹೊಸ ಉಡುಗೆ, ಪುಕ್ಕಟೆ ಆತ್ಯುತ್ತಮ ಶಿಕ್ಷಣ, ಅವರ ವ್ಯಕ್ತಿತ್ವದ ಸರ್ವಾಂಗೀಣ ವಿಕಾಸಕ್ಕೆ ಎಲ್ಲ ಬಗೆಯ ಸಹಾಯ ಮಾಡುತ್ತಿರುವದನ್ನು ಕುರಿತು ಮಾತನಾಡಿದರು. ಕೆಲವು ತಾಯಿ-ತಂದೆಗಳಿಗಂತೂ ತಮ್ಮ ಮಕ್ಕಳನ್ನೂ ಇಲ್ಲೇ ತಂದು ಬಿಡಬಾರದೇಕೆ ಅನಿಸಿದ್ದರೂ ಅನಿಸಿದ್ದೀತು. ಕೊನೆಯಲ್ಲಿ ಶಿವರಾಮ ರೆಡ್ಡಿಯಿಂದ ಆಭಾರ ಮನ್ನಣೆ. ಎಲ್ಲ ಹೆಣ್ಣುಮಕ್ಕಳು ಲಕ್ಷ್ಮಿಯ ಸ್ವರೂಪ, ತಾಯಿಯ ಸಮಾನ ಅಂತ ತನ್ನ ನಂಬಿಗೆ : ಅನಾಥ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸುವ ಅಪೂರ್ವ ಪುಣ್ಯಯೋಗ ತನಗೆ ಒದಗಿ ಬಂದದ್ದಕ್ಕಾಗಿ ದೇವರಿಗೆ ತಾನು ಕೃತಜ್ಞ : ಈ ಪವಿತ್ರ ಕರ್ತವ್ಯವನ್ನು ಜೀವವಿರುವವರೆಗೂ ಲೋಪ ಬಾರದಂತೆ ನಡೆಸಿಕೊಂಡು ಹೋಗಬೇಕೆನ್ನುವುದು ತನ್ನ ಬಾಳಿನ ಏಕಮೇವ ಧೈಯ. - ಚಪ್ಪಾಳೆಗಳ ಮೇಲೆ ಚಪ್ಪಾಳೆ, ಎಲ್ಲರ ಬಾಯಲ್ಲೂ ಭಗಿನೀ ಸೇವಾ ಸಮಾಜದ ಬಗ್ಗೆ ಪ್ರಶಂಸೆಯ ಮಾತು. ಸಭೆಯ ನಂತರ ರೋಟರಿಯವರು ಬಿಸ್ಕಿಟ್ ಪ್ಯಾಕೆಟ್ ಹಂಚಿದಾಗ ಹುಡುಗಿಯರಿಗೆ ಖುಷಿಯೋ ಖುಷಿ. ಹಂಚಲೆಂದು ಅವುಗಳನ್ನು ಅಂಬುಜಮ್ಮನ ವಶಕ್ಕೆ ಕೊಡದೆ ನೇರವಾಗಿ ನೆರೆದ ಹುಡುಗಿಯರಿಗೇ ತಲುಪಿಸಿದಾಗ ಹುಡುಗಿಯರು ಕುಣಿದು ಕುಪ್ಪಳಿಸಿದರು.