ಪುಟ:ಹಳ್ಳಿಯ ಚಿತ್ರಗಳು.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೦

ಹಳ್ಳಿಯ ಚಿತ್ರಗಳು

ಜ್ಞಾಪಕ ಬಂದಿತು. ಎಂಟು ರೂಪಾಯಿನ ರುಮಾಲನ್ನು ಅನ್ಯಾಯವಾಗಿ ಕೆಸರಿನಲ್ಲಿ ನೆನಸಿಬಿಟ್ಟನಲ್ಲಾ ಎಂದು ನನಗೆ ಯೋಚನೆ ಹತ್ತಿತ್ತು. ಆ ವೇಳೆಗೆ ತೋಟದ ಕಡೆಯಿಂದ “ರಾಮ” ಎಂಬುದಾಗಿ ಒಂದು ಕೂಗು ಬಂದಿತು. ಅದು ಭಟ್ಟನ ಧ್ವನಿಯೆಂಬುದನ್ನು ತಿಳಿಯಲು ಕಷ್ಟವಾಗಲಿಲ್ಲ. ಆದರೆ ಅದರಲ್ಲಿ ಭಯವೂ ಗಾಬರಿಯ ತುಂಬಿಕೊಂಡಿದ್ದವು. ನನಗಂತೂ ಆ ಧ್ವನಿಯನ್ನು ಕೇಳಿ, ರಾಮಬಾಣದಿಂದ ಹತನಾದ ಮಾರೀಚನು "ಹಾ ಲಕ್ಷಣ" ಎಂದು ಕಿರಚಿದುದು ಜ್ಞಾಪಕಕ್ಕೆ ಬಂದಿತು. ಧ್ವನಿಯು ಬಂದಕಡೆ ಓಡಿದೆ. ಅಲ್ಲೇ ಕೊಳವು ಕಣ್ಣಿಗೆ ಬಿದ್ದಿತು. ಆದರೆ ಭಟ್ಟನು ಅಲ್ಲಿರಲಿಲ್ಲ. ಕೊಳದಲ್ಲಿ ಮುಳುಗಿರಬಹುದೆಂದು ನನಗೆ ಭಯವಾಗಲಿಲ್ಲ. ಏಕೆಂದರೆ ಈಜುವುದರಲ್ಲಿ ಅವನು ಪ್ರಚಂಡ. ನಾನು ಏನುಮಾಡುವುದಕ್ಕೂ ತಿಳಿಯದೆ ಭಟ್ಟನ ಹೆಸರನ್ನು ಹಿಡಿದು ಕೂಗಬೇಕೆಂದು ಯೋಚಿಸುತ್ತಿರುವಾಗ, ಮತ್ತೆ ಸಮೀಪದಲ್ಲಿಯೇ ಭಟ್ಟನ ಧ್ವನಿಯು ಕೇಳಿಸಿತು. ಅದೊಂದು ಕೆಸರಿನಿಂದ ಕೂಡಿದ ಪಾಚಿ ಬೆಳೆದ ಕೊಳ. ಜೊಂಡು ಸುತ್ತಲೂ ಒಂದು ಆಳುದ್ದ ಎತ್ತರವಾಗಿ ಬೆಳೆದುಬಿಟ್ಟಿತು. ಜೊಂಡಿನ ಆಚೆ ಕೊಳವಿರುವದೇ ಯಾರಿಗೂ ಗೊತ್ತಾಗುವಂತಿರಲಿಲ್ಲ. ಭಟ್ಟನ ಧ್ವನಿಯು ಅದರ ಒಳಗಿನಿಂದ ಬಂದಿತು. ಜೊಂಡನ್ನು ಮರೆಮಾಡಿ ನೋಡಿದೆ. ಭಟ್ಟನು ಪಾಚಿ ತುಂಬಿದ ನೀರಿನೊಳಗೆ ನಿಂತಿದ್ದರು. ನೀರು ಸೊಂಟದಿಂದ ಮೇಲಕ್ಕೆ ಇದ್ದಿತು. ಅವನ ಮುಖದಲ್ಲಿ ನಾಚಿಕೆಯೂ ಗಾಬರಿಯೂ ತೋರುತ್ತಿದ್ದುವು. ಅವನ ರುಮಾಲು ಹೆಗಲಿನ ಮೇಲೆ ಬಿದ್ದಿತ್ತು. ಒಂದು ಕೈಯನ್ನು ಕೋಟಿನ ಒಳ ಜೇಬಿಗೆ ಹಾಕಿಕೊಂಡು, ಅದರಲ್ಲಿದ್ದ ಕಾಗದಗಳೂ ನೋಟುಗಳೂ ನೆನೆಯದಂತೆ ಹಿಡಿದಿದ್ದನು. ನಾನು "ಇದೇನೋ ಈ ಅವಸ್ಥೆ?” ಎಂದೆ. ಭಟ್ಟನು ಮೊದಲು "ಇದನ್ನು ಆಚೆಗೆ ಇಡು" ಎಂಬುದಾಗಿ ಹೇಳಿ ಜೇಬಿನಲ್ಲಿದ್ದ ಕಾಗದಪತ್ರಗಳನ್ನೂ ೧೦ ರೂಪಾಯಿನ ನಾಲ್ಕು ನೋಟುಗಳನ್ನೂ ನನ್ನ ಕೈಗೆ ಕೊಟ್ಟನು. ನಾನು ನೀರಿನೊಳಗೆ ಇಳಿಯದೆ ದಡದಲ್ಲಿಯೇ ನಿಂತುಕೊಂಡು ಅವುಗಳನ್ನು ತೆಗೆದು ನನ್ನ ಜೇಬಿಗೆ ಹಾಕಿಕೊಂಡೆ. ಅನಂತರ ಭಟ್ಟನು ಕೈಯಲ್ಲಿದ್ದ ಗಡಿಯಾರವನ್ನು ಬಿಚ್ಚಿಕೊಟ್ಟನು. ಗಡಿಯಾರವು ನಿಂತುಹೋಗಿದ್ದಿತು. "ಇದ್ಯಾಕೊ?” ಎಂದು ಕೇಳಿದೆ. ಅವನು