ಉದ್ಯೋಗಪರ್ವ: ೦೪. ನಾಲ್ಕನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಕರ್ಣಾಟ ಭಾರತ ಕಥಾಮಂಜರಿ, ಉದ್ಯೋಗಪರ್ವ: ೦೪/ನಾಲ್ಕನೆಯ ಸಂಧಿ[ಸಂಪಾದಿಸಿ]

---ॐॐॐ---

ಸೂಚನೆ||ಮುನಿವರನ ಕರುಣದಲಿ ಕೌರವ
ಜನಪನಮಳ ಬ್ರಹ್ಮವಿದ್ಯೆಯ
ನನುಕರಿಸಿ ಚರಿತಾರ್ಥಭಾವದಲಿರುಳನೂಕಿದನು||


ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಭೋದೆಗಂಧನೃ
ಪಾಲನಂತಃಕರಣಶುದ್ಧಿಯನೆಯ್ದಿದನು ಬಳಕ|
ಹೇಳು ಹೇಳಿನ್ನಾತ್ಮವಿದ್ಯೆಯ
ಮೂಲ ಮಂತ್ರಾಕ್ಷರದ ಬೀಜವ
ನಾಲಿಸುವೆನೆನೆ ನಗುತ ಕೈಮುಗಿದೆಂದನಾವಿದುರ||೧||

ಅವಧರಿಸು ಪರತತ್ವ ವಿದ್ಯಾ
ವಿವರ ಭೇದವನನ್ಯಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೋದಯದಲಹುದು
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ||೨||

ಒಬ್ಬನೇ ಬಲ್ಲವನು ಲೋಕದೊ
ಳಿಬ್ಬರಿಲ್ಲ ಸನತ್ಸುಜಾತನು
ಸರ್ವಗುಣಸಂಪೂರನಾತನ ಭಜಿಸಿದೊಡೆ ನೀನು
ಸಭ್ಯನಹೆಯೆನಲಾ ಮುನಿಯ ಕ
ರ್ತವ್ಯಭಾವನೆಯೊಳರಸನಿರಲಾ
ವಿರ್ಭವಿಸಿದನು ವಿಪ್ರಕುಲಕಮಲಾರ್ಕನಾ ಕ್ಷಣಕೆ ||೩||

ನೆನೆಯಲೊಡನೆ ಸನತ್ಸುಜಾತನು
ಮನೆಗೆಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಜನಿತವೆನಲರುಹಿದನು ಪರಲೋಕಸಾಧನವ ||೪||

ಚಿತ್ತವಿಸು ಧೃತರಾಷ್ಟ್ರ ನೃಪ ಪರ
ತತ್ವವಿದ್ಯಾವಿಷಯ ಭೇದವ
ಬಿತ್ತರಿಸುವೆನು ಸಕಲ ಸಚರಾಚರದೊಳಗೆ ನೀನು
ಉತ್ತಮಾಧಮವೆನ್ನದೇ ಕಾ
ಣುತ್ತ ಹರುಷ ವಿಷಾದದಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆಂದ ||೫||

ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿ ಅಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿ ಓಷಧಿಗಳಿಂ
ದವತರಿಸಿತಾ ನಾದಿಪುರುಷ ಪ್ರಕೃತಿ ವಿಕೃತಿಗಳು ||೬||

ನೇತ್ರ ನಾಸಿಕ ಪಾದ ಪಾಣಿ
ಶೋತ್ರವೆಂಬಿವು ತಮ್ಮೊಳೊಂದೇ
ಸೂತ್ರದಲಿ ಸಂಸೃಷ್ಟವಾಗಿ ಸಮಾನಬುದ್ಧಿಯಲಿ
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ ||೭||

ಸೃಷ್ಟಿ ಸಂಹಾರದಲಿ ಭೂತದ
ಕಟ್ಟಳೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲಕರ್ಮವ
ಮೆಟ್ಟಿ ನಿಲೆ ಭಗವಂತನೆನಿಸುವೆ ರಾಯ ಕೇಳೆಂದ ||೮||

ಅಣುವಿನಲಿ ಲಘುವಿನಲಿ ಗುರುವಿನ
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ
ಭಣಿತೆಯಲಿ ಶೀಲತ್ವದಲಿ ವೆಂ
ಟಣಿಸಿ ರೇಚಕ ಪೂರಕದ ರಿಂ
ಗಣವನರಿವುದು ಯೋಗಸಿದ್ಧಿಗೆ ಲಕ್ಷಣವನೆಂದ ||೯||

ತ್ಯಜಿಸುವುದು ದುಸ್ಸಂಗವನು ನೀ
ಸೃಜಿಸುವುದು ಸತ್ಸಂಗವನು ಗಜ
ಬಜಿಸದಿರಹೋರಾತ್ರಿಯಲಿ ಧರ್ಮವನೆ ಸಂಗ್ರಹಿಸು
ಭಜಿಸು ನಿತ್ಯಾನಿತ್ಯವಸ್ತುವ
ವಿಜಯನಹೆ ಇಹಪರಕೆ ತತ್ವದ
ನಿಜವಿದೆಲೆ ಧೃತರಾಷ್ಠ್ರ ಚಿತ್ತೈಸೆಂದನಾ ಮುನಿಪ ||೧೦||
ಕಾಯವಿದು ನೆಲೆಯಲ್ಲ ಸಿರಿ ತಾ
ಮಾಯಾರೂಪಿನ ಮೃತ್ಯುದೇವತೆ
ಬಾಯ ಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿದು ಮಹಾತ್ಮರಿದಕೆ ಸ
ಹಾಯ ಧರ್ಮವ ರಚಿಸುವುದು ನಿ
ರ್ದಾಯದಲಿ ಕೈಸೂರೆಗೊಂಬುದು ಮುಕುತಿ ರಾಜ್ಯವನು ||೧೧||

ಕೆಟ್ಟ ಮಾರ್ಗದಲಿಂದ್ರಿಯಂಗಳ
ಚಿಟ್ಟುಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯಸಂಸಾರದ ಸುಖಕ್ಕೆಳಸಿ
ಹುಟ್ಟು ಸಾವಿನ ವಿಲಗದಲಿ ಕಂ
ಗೆಟ್ಟು ನಾನಾ ಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ ||೧೨||
ಹಲವು ವರ್ಣದೊಳೆಸೆವ ಗೋ ಸಂ
ಕುಲದೊಳೊಂದೇ ವರ್ಣದಲಿ ಕಂ
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ
ಹೊಲಬುಗೆಟ್ಟ ಚರಾಚರಂಗಳ
ಸುಳಿವಿನಲಿ ಸುಳಿದಡಗಿ ಕಡೆಯಲಿ
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ ||೧೩||

ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದೊಳವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ ||೧೪||

ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀನನ್ಯರುಗಳಲ್ಲಿ
ಯುಕುತಿಯಿಂದದಮಾಡದಿರು ನಿ
ರ್ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ ||೧೫||

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿ ಭ್ರಾಂತಿಯಲಿ ಮನ
ಸಂದು ಸಮ್ಯಗ್ಜ್ಞಾನದುದಯದ ನೆಲೆಯ ಕಾಣಿಸದೆ
ದಂದುಗಂಬಡುತಿಹುದು ತತ್ವದ
ಹಿಂದುಮುಂದರಿಯದೆ ಮಹಾತ್ಮರು
ಬಂದ ಪಥದಲಿ ಬಾರದೇ ಕೆಡುತಿಹುದು ಜಗವೆಂದ ||೧೬||

ಪ್ರಣವದೊಂದಾ ವರ್ಣಮೂರರ
ಗುಣವಿಡಿದು ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು
ಹಣಿದು ಬೀಳಲು ಹೊಳೆವ ಜ್ಯೋತಿ
ರ್ಗಣದವೊಲು ತೊಳತೊಳಗಿ ಬೆಳಗುವ
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ ||೧೭||

ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿಜಾತಿಗಿ
ಳುಲಿವುವೈತಂದೊಂದು ವೃಕ್ಷವನೇರಿ ರಾತ್ರಯನು
ಕಕ್ಷೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರೀದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ ||೧೮||

ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುಲೋಹಿತ
ರೇಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಖವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯನರಿಯದೆ ಕೆಡುವುದೀ ಜಗವೆಂದನಾ ಮುನಿಪ ||೧೯||

ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು
ಉಜ್ಜ್ವಲಿತ ಭಕ್ತಿಯಲಿ ಬಹಳ ವಿ
ತರ್ಜೆಯಲಿ ಮೂಢಾತ್ಮರಿಕ್ಕಿದ
ಹಜ್ಝೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ||೨೦||

ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯನೆಂಬುದ
ತಿಳಿದಹೋರಾತ್ರಿಯಲಿ ಸಂಖ್ಯೆಯ ಸಲುಗೆಯಂಕಿಸದೆ
ಬಳಸುವುದು ಸನ್ಮಾರ್ಗದಲಿ ಮುಂ
ಕೊಳಿಸುವುದು ಸದ್ಧರ್ಮದಲಿ ಕಳ
ವಳಿಸದಿರು ಷಡುವರ್ಗದಲಿ ಕೇಳೆಂದನಾ ಮುನಿಪ ||೨೧||

ನಷ್ಟಿಯಿದು ಸಂಸಾರದೊಳಗು
ತ್ಕೃಷ್ಟವಿದು ಮನ್ವಾದಿ ಮಾರ್ಗದ
ದೃಷ್ಟವಿದು ಲೋಕಾಂತರದ ಸುಖದುಃಖದೇಳಿಗೆಯ
ಹುಟ್ಟುಮೆಟ್ಟಿನ ಕಾಲಕರ್ಮದ
ಕಟ್ಟಳೆಯಿದೆಂದರಿದು ನಡೆವಂ
ಗಿಟ್ಟಣಿಸುವುದದಾವುದೈಹೇಳೆಂದನಾ ಮುನಿಪ ||೨೨||

ಶಿಲೆಯ ರೂಹನು ಮೂಢರುಗಳ
ಗ್ಗಳೆಯ ಪಾವಕನನು ಮಹೀಸುರ
ರಿಯೊಳಗೆ ಪರಮಾತ್ಮನೇ ಪರದೈವ ತಾನೆಂದು
ಒಲಿದು ಪೂಜಿಸುತಿಹರು ಹೃದಯಾಂ
ಗದೊಳಗೆ ವರಯೋಗಿಗಳು ಕೈ
ವಳಸುವುದು ಜನವೀ ಪ್ರಕಾರದೊಳರಸ ಕೇಳೆಂದ ||೨೩||

ಜ್ಞಾನಿಗಳನೊಡಬಡಿಸಬಹುದ
ಜ್ಞಾನಿಗಳನಹುದೆನಿಸಬಹುದು
ಜ್ಞಾನಲವವನು ಕೂಡಿಕೊಂಡಿಹ ದುರ್ವಿಗ್ಧರನು
ಏನ ತಿಳುಹಲುಬಹುದು ವಿಷ್ವ
ಕ್ಸೇನಗಳವಲ್ಲರಸ ಮಿಕ್ಕಿನ
ಮಾನವರ ಪಾಡಾವುದೆಂದನು ಮುನಿ ನೃಪಾಲಂಗೆ ||೨೪||

ದಾನವೊಂದಾ ಪಾಲನೆಯ ಫಲ
ದಾನವೊಂದೇ ಉಭಯವಿದರೊಳು
ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು
ದಾನವೇ ಸಂಸಾರ ಸಾಧನ
ದಾನದಿಂ ಪಾಲನೆಯ ಫಲಕಿ
ನ್ನೇನನೆಂಬೆನು ಕಡೆಯೊಳಚ್ಯುತ ಪದವಿ ಫಲವೆಂದ ||೨೫||

ಅರಸನೊಡೆಯನು ದಂಡನಾಥನು
ಗೈರು ಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ನಾಮಂಗಳಲಹಂ
ಕರಿಸುವರು ಜೀವಾತ್ಮ ತೊಲಗಿದ
ಮರುದಿವಸ ಹೆಣನೆನ್ನರೇ ಹೇಳೆಂದನಾ ಮುನಿಪ||೨೬||

ವರುಷ ಮೂರರೊಳು ಮಾಸ ಮೂರರೊ
ಳಿರದೆ ಪಕ್ಷತ್ರಯದೊಳಗೆ ಬಂ
ದರುಹುವುದು ಲಿನ ಮೂರರಲಿ ಸಂದೇಹಬೇಡಿದಕೆ
ಧರೆಯೊಳುತ್ಕಟಪುಣ್ಯ ಪಾಪೋ
ತ್ಕರದ ಫಲವಿದು ತಪ್ಪಬಾರದು
ಮರಳುವುದು ಪರಲೋಕದೆಸೆಗವನೀಶ ಕೇಳೆಂದ ||೨೭||

ಒಂದು ಭೂಪಿಂಡದಲಿ ನಾನಾ
ಚಂದದಿಂ ಪ್ರಾಣಿಗಳು ಜನಿಸುವು
ವೊಂದು ಜ್ಯೋತಿಸ್ಸಿನಲಿ ನಾನಾ ಜ್ಯೋತಿಯುದಿಸುವುವು
ಒಂದು ಪರವಸ್ತುವಿನ ಬಳಿಯಲಿ
ಬಂದುದಬುಜಭವಾಂಡ ಕೋಟಿಗ
ಳೆಂದೊಡವು ಬೇರಿಲ್ಲ ಸರ್ವವು ವಿಷ್ಣುಮಯವೆಂದ ||೨೮||

ತಾನಿದಿರು ಹಗೆ ಕೆಳೆ ವಿವೇಕ
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ದಲಿ
ದಾನ ಧರ್ಮ ಪರೋಪಕಾರ ವಿ
ಧಾನ ದೀಕ್ಷಾಕರ್ಮನಿಷ್ಠರು
ಮಾನನೀಯರಲೇ ಮಹೀಪತಿ ಕೇಳು ನೀನೆಂದ ||೨೯||

ಕರಣ ಗುಣ ಸಂಹಣ ಸಂಧ್ಯಾಂ
ತರದವಸ್ಥಾಂತರದಲೋಕೋ
ತ್ಕರದ ತಾಪತ್ರಯದ ಲಕ್ಷಣಲಕ್ತಿತವನರಿದು
ಪರಿವಿಡಿಯ ಮೂರ್ತಿತ್ರಯಂಗಳ
ಗುರು ಲಘುವನಾರೈದು ನಡೆವಂ
ಗರಿದೆನಿಸುವುದದಾವುದೈ ಹೇಳೆಂದನಾ ಮುನಿಪ ||೩೦||

ವೇದ ನಾಲ್ಕಾಶ್ರಮವು ತಾ ನಾ
ಲ್ಕಾದಿಮೂರುತಿ ನಾಲ್ಕು ವರ್ಣ ವಿ
ಭೇದ ನಾಲ್ಕಾ ಕರಣ ನಾಲುಕುಪಾಯ ನಾಲ್ಕರಲಿ
ಭೇದಿಸಲು ಪುರುಷಾರ್ಥ ನಾಲ್ಕರ
ಹಾದಿಯರಿದು ವಿಮುಕ್ತ ನಾಲುಕ
ನೈದುವನು ಸಂದೇಹವೇ ಹೇಳೆಂದನಾ ಮುನಿಪ ||೩೧||

ಭೂತ ವರ್ಣಸ್ಥಾನ ಸರ್ಗ ನಿ
ಪಾತವದರೊಳು ಕೃತ್ಯಗಳ ಸಂ
ಜಾತಮುಖವಾವರಣಶರಸಂಗತಿಯ ಸೋಹೆಗಳ
ಧಾತು ಮೂಲಾದಿಗಳನರಿವುದು
ಪ್ರೀತಿಯಿಂದಿಹಪರವ ಗೆಲುವುದು
ಭೂತಳದೊಳುತ್ತಮವಲೇ ಭೂಪಾಲ ಕೇಳೆಂದ ||೩೨||

ಆರು ಗುಣ ಋತುವರ್ಣ ವರ್ಗವ
ದಾರು ದರ್ಶನ ಪಾತ್ರವಂಗವ
ದಾರು ಭೇದದ ಬಗೆಯನರಿವುದು ಶಿಷ್ಟಮಾರ್ಗದಲಿ
ತೋರುವೀ ಮಾಯಾ ಪ್ರಪಂಚವ
ಮೀರಿ ಕೇಡಿಲ್ಲದ ಪದವ ಕೈ
ಸೂರೆಗೊಂಬುದು ಪರಮ ಮಂತ್ರವಿದೆಂದನಾ ಮುನಿಪ ||೩೩||

ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪ ಸರ್ಪಾ
ವಳಿ ಮುನೀಶ್ವರರುಗಳ ಧಾತು ಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರಸಿಕೊಂಬರು ಮುಕ್ತಿ ರಾಜ್ಯವನು ||೩೪||

ಕಾಯ ದಿಗ್ಬಂಧ ಪ್ರಣಾಮ ವಿ
ಧೇಯವರ್ಚನೆ ಯೋಗಸಿದ್ಧಿ ನಿ
ಕಾಯ ನಾಲ್ಕರ ಇಂದ್ರಿಯಸ್ಥಿತಿ ಗತಿಯನಾರೈದು
ಆಯವನು ವಿವರಿಸುತ ಮೇಲಣ
ಬೀಯವಿದು ತನಗೆಂಬುದನು ನಿ
ರ್ದಾಯದಲಿ ನಿಶ್ಚಯಿಸಬೇಹುದು ರಾಯ ಕೇಳೆಂದ ||೩೫||

ನವ ನವ ವ್ಯೂಹಂಗಳಬುಜೋ
ದ್ಭವನ ಪಾಳಿ ವಿಖಂಡ ನವರಸ
ನವವಿಧಗ್ರಹ ನಾಟಕಂಗಳ ಲಕ್ಷಣವನರಿದು
ನವವಿಧಾಮಳ ಭಕ್ತಿರಸವನು
ಸವಿದು ನಿತ್ಯಾನಿತ್ಯವಸ್ತುವ
ನವರಸವನಾರೈದು ನಡೆವುದು ಭೂಪ ಕೇಳೆಂದ ||೩೬||

ಹತ್ತು ಮುಖದಲಿ ಲೋಕದೊಳಗು
ತ್ಪತ್ತಿಯಾದ ಚರಾಚರಂಗಳ
ಲುತ್ತಮಾಧಮರೆನ್ನದೇ ಹರಿ ಸರ್ವಗತನಾಗಿ
ಸುತ್ತುವನು ನಾನಾ ತೆರದಲಿ ವಿ
ಚಿತ್ರಚರಿತನು ಕಪಟ ನಾಟಕ
ಸೂತ್ರಧಾರಕನೆಂದರಿದು ಸುಖಿಯಾಗು ನೀನೇಂದ ||೩೭||

ಲೇಸು ಮಾಡಿದಿರೆನ್ನ ಚಿತ್ತದ
ಬೇಸರಿಕೆ ಬಯಲಾಯ್ತು ನಿಮ್ಮುಪ
ದೇಶದಿಂದ ಕೃತಾರ್ಥನಾದೆನು ಗೆಲಿದೆನಿಹಪರವ
ಗಾಸಿಯಾದುದು ರಾಗ ಲೋಭದ
ಮೀಸಲಳಿದುದು ನಿಮ್ಮ ದೆಸೆಯಿಂ
ದೇಸು ಧನ್ಯರೊ ನಾವು ಚಿತ್ತೈಸೆಂದನಾ ಭೂಪ ||೩೮ ||

ಸ್ವರ್ಗವಾವುದು ನರಕವಾವುದು
ವಿಗ್ರಹದಲಹ ಸಿದ್ಧಿ ಯಾವುದ
ನುಗ್ರಹಿಸಲೇನಹುದು ಪಾತ್ರಾಪಾತ್ರವೆಂದರೇನು
ಉಗ್ರವಾವುದು ದೈವದೊಳಗೆ ಸ
ಮಗ್ರವಾವುದು ಧರ್ಮದೊಳಗ
ವ್ಯಗ್ರದಿಂದುಪದೇಶಿಸಲು ಬೇಕೆಂದನಾ ಭೂಪ ||೩೯||

ಸುಲಭನತಿ ಸಾಹಿತ್ಯ ಮಂಗಳ
ನಿಳಯನಗಣಿತ ಮಹಿಮನನ್ವಯ
ತಿಲಕನನುಪಮಚರಿತ ದೈವಾಪರನು ಪುಣ್ಯನಿಧಿ
ಕುಲಯುತನು ಕೋವಿದನು ಕರುಣಾ
ಜಲಧಿ ಕೌತುಕ ಯುಕ್ತಿವಿದನೆಂ
ದಿಳೆ ಹೊಗಳುತಿರಲದುವೆ ಕೇಳೈ ಸ್ವರ್ಗ ತಾನೆಂದ ||೪೦||

ಪಾಯಕನು ಪತಿತನು ಕೃತಘ್ನನು
ಘಾತಕನು ಮರ್ಮನು ದುರಾಢ್ಯನ
ಭೀತಕನು ದೂಷಕನು ದುರ್ಜನನಪ್ರಯೋಜಕನು
ನೀತಿಹೀನನು ಜಾತಿಧರ್ಮ ಸ
ಮೇತ ದೈವದ್ರೋಹಿಯೆಂಬುದು
ಭೂತಳದೊಳೇ ನರಕ ಚಿತ್ತೈಸೆಂದನಾ ಮುನಿಪ ||೪೧||

ದೇಹವಿಡಿದಿಹ ಧರ್ಮವದು ನಿ
ರ್ದೇಹದಲಿ ದೊರಕುವುದೆ ಮಾನವ
ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ
ಐಹಿಕಾಮುಷ್ಮಿಕದ ಗತಿ ಸಂ
ಮೋಹಿಸುವುದು ಶರೀರದಲಿ ಸಂ
ದೇಹವೇ ಧೃತರಾಷ್ಟ್ರಚಿತ್ತೈಸೆಂದನಾ ಮುನಿಪ ||೪೨||

ಗರುಡ ಪಂಚಾಕ್ಷರಿಯೊಳಲ್ಲದೆ
ಗರಳ ಭಯವಡಗುವುದೆ ವಿಷ್ಣು
ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ
ಹಿರಿದು ಸಂಸಾರಾಂಬುಧಿಯನು
ತ್ತರಿಸುವೊಡೆ ಗುರುಮುಖದೊಳಲ್ಲದೆ
ನಿರತಿಶಯವಿನ್ನಾವುದೈ ಹೇಳೆಂದನಾ ಮುನಿಪ ||೪೩||

ತನ್ನ ಮನೆಯಲಿ ಮೂರ್ಖನತಿ ಸಂ
ಪನ್ನ ಪೂಜ್ಯನು ಭೂಮಿಪಾಲನು
ತನ್ನ ದೇಶದೊಳಧಿಕ ಸ್ವಗ್ರಾಮದಲಿ ಪ್ರಭು ಪೂಜ್ಯ
ಭಿನ್ನವಿಲ್ಲದೆ ಹೋದ ಠಾವಿನೊ
ಳನ್ಯವೇನಿಸದೆ ವಿಶ್ವದೊಳು ಸಂ
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ ||೪೪||

ಒಬ್ಬನಹನೈ ಶೂರ ನೂರರೊ
ಳೊಬ್ಬನಹ ಸಾವಿರಕೆ ಪಂಡಿತ
ನೊಬ್ಬನಹನೈ ವಕ್ತ ಶತಸಾವಿರಕೆ ಲೋಕದಲಿ
ಒಬ್ಬ ದಾನಿಯ ಕಾಣೆ ನಾನಿ
ನ್ನೊಬ್ಬರೊಬ್ಬರಿಗೊಂದು ಗುಣವದು
ಸರ್ಬಗುಣ ಸಂಪನ್ನರೈ ವಿದ್ವಾಂಸರುಗಳೆಂದ ||೪೫||

ಸತಿಯರಿಗೆ ಗತಿ ಯಾವುದೈ ನಿಜ
ಪತಿಗಳಲ್ಲದೆ ವಿಪ್ರಜಾತಿಗೆ
ಹುತವಹನು ವರ್ಣತ್ರಯಕೆ ಭೂದೇವರುಗಳಿರಲು
ಕ್ಷಿತಿಯೊಳತಿಶಯವಾವುದೈ ಭೂ
ಪತಿಯೆ ಕೇಳಿಹಪರಕೆತ ಸುಖಸಂ
ಗತಿಯನೊಲುವಡೆ ಪೂಜಿಸುವುದೈ ಬ್ರಾಹ್ಮಣೋತ್ತಮರ ||೪೬||

ಚೋರನನು ಕಂಟಕನ ಹಿಸುಣನ
ಜಾರನನು ಷಂಡನನು ಸಮಯ ವಿ
ಕಾರ ಭೇದಿನಿಯನಿಂತರುವರನು ಕಂಡು ಮನ್ನಿಸದೆ
ದೂರದಲಿ ವರ್ಜಿಸವುದು ಬಹಿ
ಷ್ಕಾರಿಗಳು ಸರ್ವಕ್ಕಿವರುಗಳು
ಸಾರಿದುದು ಸರ್ವೇಶ್ವರನ ಮತವರಸ ಕೇಳೆಂದ ||೪೭||

ಮೊದಲಲಾ ಮಾಹಿಷಿಕನ ಮ
ಧ್ಯದಲಿ ವೃಷಲೀವಲ್ಲಭನನಂ
ತ್ಯದಲಿ ವಾಗ್ಧೋಷಕನ ಕಂಡವರುಗಳ ಭಾಗ್ಯನಿಧಿ
ಕದಡಿ ಹರಿವುದು ಕಂಡ ಮುಖದಲಿ
ಸದಮಳಿತ ಶಾಸ್ತ್ರಾರ್ಥ ನಿಶ್ಚಯ
ವಿದನರಿದು ನಡಿವುದು ನಯವು ಭೂಪಾಲ ಕೇಳೆಂದ ||೪೮||

ಕುಲಮಹಿಷಿ ದುರ್ಮಾರ್ಗ ಮುಖದಲಿ
ಗಳಿಸಿದರ್ಥವನುಂಡು ಕಾಲವ
ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬವರು
ಇಳೆಯೊಳವರೊಡನಾಡಿದವದಿರು
ಗಳಿಗೆ ನರಕಾರ್ಣವದೊಳಾಳುತ
ಮುಳುಗುತಿರುತಿಹುದಲ್ಲದೇ ಗತಿಯಿಲ್ಲ ಕೇಳೆಂದ ||೪೯||

ದೈವದಾಧೀನದಲಿ ಜಗವಾ
ದೈವ ಮಂತ್ರಾಧೀನ ಮಂತ್ರವು
ಭೂವಿಬುಧರಾದೀನವಾಗಿಹುದಾಗಿ ಲೋಕದಲಿ
ದೈವವೇ ಬ್ರಾಹ್ಮಣನದಲ್ಲದೆ
ಭಾವಿಸಲು ಬುಧರಿಂದಧಿಕವ
ದೈವವೆಂಬುದಾವುದೈ ಹೇಳೆಂದನಾ ಮುನಿಪ ||೫೦||

ಕೆಲಸ ಗತಿಯಲಿ ಕಡೆದ ಶಿಲೆಯನು
ಕಲುಕುಟಿಕನಿಳುಹುವನದಲ್ಲದೆ
ಹಲವು ಪರಿಯಿಂದದನು ಲೋಕಕೆ ದೈವವನು ಮಾಡಿ
ಸಲಿಸುವವರುಂಟೇ ಸುರಾಸುರ
ರೊಳಗೆ ವಿಪ್ರೋತ್ತಮರುಳಿಯೆ ಜಗ
ದೊಳಗೆ ದೈವವದಾವುದೈ ಹೇಳೆಂದನಾ ಮುನಿಪ ||೫೧||

ಎಣಿಸಬಹುದೂರ್ವರೆಯ ಸೈಕತ
ಮಣಿಯನೊಯ್ಯಾರದಲಿ ಗಗನಾಂ
ಗಣದೊಳೈತಹ ವೃಷ್ಟಿಬಿಂದುವ ಲೆಕ್ಕಗೊ ಳಬಹುದು
ಎಣಿಸಬಾರದದೊಂದು ದಿವಿಜರ
ಗಣಕೆಗೋಚರವಾಗಿ ಸದ್ಬ್ರಾ
ಹ್ಮಣನೊಳೊಬ್ಬನ ರಕ್ಷಿಸಿದ ಫಲವರಸ ಕೇಳೆಂದ ||೫೨||

ಜಾತಿಧರ್ಮವನನುಸರಿಸಿ ವರ
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತ ಪರಗುಣಸ್ತುತಿ ನಿಂದೆಗಳನುಳಿದು
ಭೂತನಾಥನ ಭಕುತಿಯಲಿ ವಿ
ಖ್ಯಾತವಹ ಗುರುದೈವದಲಿ ಭಯ
ಭೀತಿ ಹಿರಿದಿರಲದುವೆ ಕೇಳ್ ಸುಕೃತಕಕೆ ಕಡೆಯೆಂದ ||೫೩||

ಅರ್ಥದಿಂದಹ ಸಿದ್ಧಿ ಯಾವುದ
ನರ್ಥವೆಂಬುದದೇನು ತನಗೆ
ಸ್ವಾರ್ಥವಾರು ಪರಾರ್ಥದಿಂದಹುದಾವುದವನಿಯಲಿ
ತೀರ್ಥವಾವುದು ವಿಪ್ರರೊಹಳಗೆ ಸ
ಮರ್ಥರಾರು ಸುಧಾತ್ರಿಯೊಳಗೆಯು
ವ್ಯರ್ಥಜೀವಿಗಳಾರು ಚಿತ್ತೈಸೆಂದನಾ ಮುನಿಪ ||೫೪||

ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ
ಧನಿಕನಂತೆ ಸಮಸ್ತ ಸುಖ ಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ||೫೫||

ವ್ಯರ್ಥರುಗಳೊಡನಾಟ ತಮ್ಮ
ಸ್ವಾರ್ಥವಿಲ್ಲದರುಗಳ ಕೂಟ ಪ
ರಾರ್ಥದಿಂದುಜ್ಜೀವಿಸಿದವನ ಬದುಕು ಲೋಕದಲಿ
ಅರ್ಥವಿಲ್ಲದ ಸಿರಿಯ ಸಡಗರ
ಅರ್ಥಿಯಿಲ್ಲದ ಬಾಳುವೆಗಳಿವ
ನರ್ಥ ಪಾರಂಪರೆಯಲೇ ಕೇಳೆಂದನಾ ಮುನಿಪ ||೫೬||

ಮಾಡುವುದು ಧರ್ಮವನು ಸುಜನರ
ಕೂಡುವುದು ಪರಪೀಡೆಯೆಂಬುದ
ಮಾಡಲಾಗದು ಕರಣ ಮೂರರೊಳಲ್ಲದಾಟವನು
ಆಡಲಾಗದು ದಸ್ಯುಜನವನು
ಕೂಡಲಾಗದಿದೆಂಬ ಮಾರ್ಗವ
ನೋಡಿ ನಡೆವುದು ತನಗೆ ಪರಮ ಸ್ವಾರ್ಥಕರವೆಂದ ||೫೭||

ಕರಿತುರಗ ಮೊದಲಾದ ವಸ್ತುಗ
ಳರಮನೆಗಳಲಿ ಪುತ್ರಮಿತ್ರರು
ತರುಣಿಯರು ಸಹಭವರು ಗೋತ್ರಜರಡವಿಯೊಳಗಿಕ್ಕಿ
ತಿರುಗುವರು ನಿಜಸುಕೃತ ದುಷ್ಕೃತ
ವೆರಡು ಬೆಂಬಿಡವಲ್ಲದುಳಿದುದ
ನರಸ ಬಲ್ಲವರಾರು ಧರ್ಮರಹಸ್ಯ ವಿಸ್ತರವ ||೫೮||

ಧರ್ಮದಾಧಾರದಲಿಹುದು ಜಗ
ಧರ್ಮವುಳ್ಳನನಾಶ್ರಯಿಸುವುದು
ಧರ್ಮವೇ ನೂಕುವುದು ಜನ್ಮಾಂಯರದ ಪಾತಕವ
ಧರ್ಮವೇ ಸರ್ವ ಪ್ರತಿಷ್ಠಿತ
ಧರ್ಮವೆಂಬುದು ಪರಮಪದವಾ
ಧರ್ಮವನು ಬಿಟ್ಟಿಹುದು ಬದುಕಲ್ಲರಸಕೇಳೆಂದ ||೫೯||

ಪರಿಪರಿಯ ಯಜ್ಞವನು ವಿರಚಿಸಿ
ಸುರಪತಿಯ ಸಂತುಷ್ಟಿಬಡಿಸಲು
ಸುರಿವನವ ಸಂಪೂರ್ಣವಾಗಿ ಸುವೃಷ್ಟಿಯನು ಜಗಕೆ
ಹರಿಹಯನು ಸಸ್ಯಾಧಿಕಂಗಳ
ಹೊರೆಯಲೋಸುಗ ಮೈಗೆ ಮೈಯಾ
ಗಿರುತಿಹನು ಭುವನದೊಳವನೀಶ ಕೇಳೆಂದ ||೬೦||

ಎತ್ತಲಾನು ಸುತೀರ್ಥವೆಂಬುದ
ಚಿತ್ತವಿಸುವೊಡೆ ಸರ್ವ ತೀರ್ಥದ
ಸತ್ವವನು ಸನ್ನಿಹಿತವಾಗವಧರಿಸು ನೀನದನು
ವಿಸ್ತರಿಸುವೆನು ವಿಪ್ರಪಾದ ವಿ
ಮುಕ್ತ ವಿಮಳೋದಕವನಾವನು
ನೆತ್ತಿಯಲಿ ಧರಿಸಿದವನವನು ಕೃತಾರ್ಥನಹನೆಂದ ||೬೧||

ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ ||೬೨||

ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆ ||೬೩||

ವೇದಪುರುಷನ ವಿಗ್ರಹದಲಿ ವಿ
ಭೇದವಿಲ್ಲದೆ ಬಿಸಜ ಸಂಭವ
ನಾದಿಯಾದ ಸಮಸ್ತ ದೇವರು ನೆಲೆವನೆಗಳಾಗಿ
ನೇದುಕೊಂಡಿಹರಂತು ಕಾರಣ
ವಾದಿಸದೆ ವಿಪ್ರೋತ್ತಮರನಭಿ
ವಾದಿಸುವುದುತ್ತಮವಲೇ ಕೇಳೆಂದನಾ ಮುನಿಪ ||೬೪||

ಯುವತಿಯರು ಗಾಯಕರು ಕವಿಗಳು
ತವತವಗೆ ಕೈವಾರಿಸುವರಾ
ವವನವನೆ ಯಾವಗಲು ದೂಷಕನಿಹಪರಂಗಳಿಗೆ
ಇವರು ಮೂವರು ನಿಂದಿಸುವರಾ
ವವನವನು ಸರ್ವಜ್ಞನೆನಿಸುವ
ನವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ ||೬೫||

ಜ್ಞಾತವಾವ್ದಜ್ಞಾತವಾವುದು
ನೀತಿ ಯಾವುದನೀತಿ ಯಾವುದು
ದ್ವೈತವಾವ್ದದ್ವೈತವಾವುದು ವೈದಿಕಾಂಗದಲಿ
ಖ್ಯಾತಿಯಾವ್ದಖ್ಯಾತಿ ಯಾವುದು
ಜಾತಿಯಾವುದಜಾತಿ ಯಾವುದು
ಭೂತಳದೊಳವನೀಶ ಚಿತ್ತೈಸೆಂದನಾ ಮುನಿಪ ||೬೬||

ಧರಣಿಯಮರರ ಸೇವೆಯನು ವಿ
ಸ್ತರಿಸಿ ಸತ್ಕಾರದಲವರನಾ
ದರಿಸಿ ಬಹುಮಾನವನು ವಿರಚಿಸಿದನಾ ಮಹಾತ್ಮರಿಗೆ
ಎರವಹುದೆ ಸ್ವರ್ಗಾಪವರ್ಗದ
ಸಿರಿಯದೆಂಬುದನರಿದು ನಡೆವಂ
ಗರಿದೆನಿಸುವದದಾವುದೈ ಹೇಳೆಂದನಾ ಮುನಿಪ ||೬೭||

ಯೋನೀಮುಖವೆಂಬತ್ತುನಾಲ್ಕು ನ
ವೀನ ಜನ್ಮಂಗಳೊಳಗುದಯಿಸಿ
ಹಾನಿ ವೃದ್ಧಿಗಳರಿದು ಜ್ಞಾನದ ಕಡೆಯ ಕಣೆಯದಲಿ
ಮಾನವರ ಬಸುರಿನಲಿ ಬಂದ
ಜ್ಞಾನತರರಾಗಳಿವುದಿದು ಕ
ಕರ್ಮಾನುಗತವಾಗಿಹುದಲೇ ಭೂಪಾಲ ಕೇಳೆಂದ ||೬೮||

ಪಾನದಿಂ ಸೂಕರನು ಬುಧರವ
ಮಾನದಿಂ ಕ್ಷಯರೋಗಿ ಗುರುಜನ
ಹಾನಿಯಿಂದವೆ ಕುಷ್ಠಿ ಗರ್ವದಿ ಕುಕ್ಕುಟಾಹ್ವಯನು
ಹೀನಗತಿಯಿಂದುರಗ ನಾನಾ
ಯೋನಿಗಳಲಿ ಚರಾಚರವು ಕ
ರ್ಮಾನುಗತವಾಗುದಯಿಸುವುದವನೀಶ ಕೇಳೆಂದ ||೬೯||

ಪರರ ಪಟುತರವಾದದಲಿ ಮೂ
ಗರವೊಲಿಹ ಪರ ವಚನದುತ್ಕಟ
ವೊರೆಗೆ ಬಧಿರತ್ವವನು ಪರಗುಣ ದೋಷ ದರುಶನವು
ದೊರಕಿದೊಡೆ ಜಾತ್ಯಂಧನೆನಿಸುವ
ಪುರುಷನಾವವನವನು ಸಾಕಕ್ಷಾ
ತ್ಪರಮಪುರುಷೋತ್ತಮನಲೇ ಭೂಪಾಲ ಕೇಳೆಂದ ||೭೦||

ಇಷ್ಟಸಂತರ್ಪಣವ ಮಾಡಿ ವಿ
ಶಿಷ್ಟಪೂಜಾಪಾತ್ರರನು ಸಂ
ತುಷ್ಟಿಬಡಿಸಿ ಸಧರ್ಮದಲಿ ರಾಜ್ಯವನು ರಕ್ಷಿಸುತ
ಕೊಟ್ಟವರ ಕೊಂಡವರ ಮತ್ತೊಡ
ಬಟ್ಟವರನನುಜಾತ್ಮಜರನೊಳ
ಗಿಟ್ಟುಕೊಂಡಿಹುದುಚಿತವದು ಭೂಪಾಲ ಕೇಳೆಂದ ||೭೧||

ನುಡಿದುದನು ಪೂರೈಸಿ ಕಾಲದ
ಕಡೆಯ ಕಾಣಿಸಿ ಹೋಹವರ ಬೀ
ಳ್ಕೊಡುತ ಹಳೆಯರನಾಪ್ತರನು ಮನ್ನಿಸುತ ತನ್ನುವನು
ಹಿಡಿದು ಸೇವೆಯ ಮಾಡುವವರನು
ಬಿಡದೆ ನಾನಾ ತೆರದ ಪದವಿಯ
ಕೊಡುತಲಿಹುದಿದು ನೀತಿ ಚಿತ್ತೈಸೆಂದನಾ ಮುನಿಪ ||೭೨||

ವಿಲಗ ಸಾಗರನಾಗಿ ದೇಶವ
ಹಿಳಿದು ಹಿಂಡುತ ದಾನ ಧರ್ಮವ
ನುಳಿದು ದೇವ ಬ್ರಾಹ್ಮರೆನ್ನದೆ ಕಂಡವರನೆಳೆದು
ಗಳಿಗೆ ಸಂಖ್ಯೆಗೆ ದಂಡ ದೋಷವ
ಕೊಳುತ ಕಡೆಯಲಧೋಗತಿಗಳೊಳ
ಗಿಳಿದು ಹೋಹುದನೀತಿ ಚಿತ್ತೈಸೆಂದನಾ ಮುನಿಪ ||೭೩||

ಯೋನಿಯಲ್ಲದ ಠಾವುಗಳಲಿ ವಿ
ಯೋನಿಯಹ ವಿಷಯಂಗಳಲಿ ಪಶು
ಯೋನಿಯಲಿ ಸಂಭೋಗಿಸುವ ಪಾತಕರ ಪರಿವಿಡಿಯ
ಏನ ಹೇಳಲು ಬಹುದು ನರಕ ವಿ
ತಾನದೊಳಗೋಲಾಡಿ ಬಳಿಕಾ
ಶ್ವಾನ ಯೋನಿಯೊಳವರು ಜನಿಸುವರೆಂದನಾ ಮುನಿಪ ||೭೪||

ಜೀವ ಪರಮನಭೇದವನು ಸಂ
ಭಾವಿಸದೆ ವೇದಾಂತ ಶಾಸ್ತ್ರವಿ
ದಾವ ಮುಖವೆಂದರಿಯದೆಯೆ ದಾಸೋಹವೆಂದೆನುತ
ಕೋವಿದರ ಸಂಗವನುಳಿದು ಮಾ
ಯಾ ವಿಲಾಸದ ನೆಲೆಯ ನೋಡದೆ
ಸಾವುತಿಹುದೇ ದ್ವೈತ ಚಿತ್ತೈಸೆಂದನಾ ಮುನಿಪ ||೭೫||

ಉತ್ತಮರ ಸಂಗದೊಳಗೋಲಾ
ಡುತ್ತ ದುರ್ವಿಷಯಂಗಳನು ಮುರಿ
ಯೊತ್ತಿ ಸಕಲ ಚರಾಚರದ ಸುಖ ದುಃಖವನು ತಾನು
ಹೊತ್ತು ನಡೆವುತ ಪುಣ್ಯ ಪಾಪವಿ
ದೆತ್ತಣದು ತನಗೆಂಬ ಕಾಣಿಕೆ
ಯುತ್ತರೋತ್ತರ ಸಿದ್ಧಿ ಚಿತ್ತೈಸೆಂದನಾ ಮುನಿಪ ||೭೬||

ಪೊಡವಿಯೊಳಗೆ ಪುರೋಹಿತರನವ
ಗಡಿಸಿ ಧರ್ಮದ ಬಲದಿ ನಾಕಕೆ
ನಡೆವ ರಾಯರ ಹೊಯಿದಿಳಿಯಲಿಕ್ಕು ವರಧೋಗತಿಗೆ
ಕೆಡಿಸುವರು ರಾಷ್ಟ್ರವನು ಕ್ಷಾತ್ರವ
ತಡೆಗಡಿಸಿ ಚತುರಂಗಬಲವನು
ಹುಡುಹುಡಿಯ ಮಾಡುವರು ನಿರ್ಜರರರಸ ಕೇಳೆಂದ ||೭೭||

ಬಲಿಯ ರಾಜ್ಯವ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲುಹು ಹನುಮಾನುವಿನ ಭುಜಬಲ ವೀರ ರಾಘವನ
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ ||೭೮||

ಇರುಳು ಹಗಲನವರತ ಪತಿ ಪರಿ
ಚರಿಯವನು ಮಾಡುತ್ತ ಪರಪುರು
ಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ
ಇರುತ ದೇವ ಬ್ರಾಹ್ಮರನು ತಾ
ನಿರುತ ಸತ್ಕರಿಸುತ್ತಲಂತಃ
ಪುರದಲೆಸೆಯೆ ಗೃಹಸ್ಥೆಯೆನಿಸುವಳರಸ ಕೇಳೆಂದ ||೭೯||

ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣದ ದಿಟ್ಟೆ ಹತ್ತನು
ಹಡೆದೊಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ ||೮೦||

ಮುಡಿಯನೋಸರಿಸುತ್ತ ಮೇಲುದ
ನಡಿಗಡಿಗೆ ಸರಿವುತ್ತ ಮೌನವ
ಹಿಡಿದಧೋಮುಖಿಯಾಗಿ ಕಿಗ್ಗಣ್ಣಿಕ್ಕಿ ಕೆಲಬಲನ
ಬಿಡದೆ ನೋಡುತ ಮುಗುಳು ನಗೆಯಲಿ
ಜಡಿದು ಜಾರುವ ಜಾರವನಿತೆಯ
ಗೊಡವೆಗೊಳಗಾಗದವರುತ್ತಮಪುರುಷರುಗಳೆಂದ ||೮೧||

ಗುರುವಿನಲಿ ತಂದೆಯಲಿ ತಾಯಲಿ
ಹಿರಿಯರಲಿ ದೈವದಲಿ ಪಾಪದ
ಇರುಬಿನಲಿ ಗೋವಿನಲಿ ತೀರ್ಥದಲಿಮಿಗೆ ತನ್ನುವನು
ಹೊರೆವ ದಾತಾರನಲಿ ಮಂತ್ರದ
ಪರಮ ಸೇವೆಗಳಲ್ಲಿ ಧರಣೀ
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ ||೮೨||

ನೀತಿವಿದನಲ್ಲದ ಕುಮಂತ್ರಿ ವಿ
ನೀತಿಪರನಲ್ಲದ ಪುರೋಹಿತ
ನೇತಕವರಿಂದಾವ ಪುರುಷಾರ್ಥಂಗಳೆಯ್ದುವುವು
ಕಾತರಿಸಿ ಸಮರಾಂಗಣಕೆ ಭಯ
ಭೀತನಹ ಭೂಭುಜನ ದೆಸೆಯಿಂ
ಬೀತು ಹೋಗದೆ ಸಕಲಸಂಪದವರಸ ಕೇಳೆಂದ ||೮೩||

ಧರ್ಮವಾವುದು ಮೇಣು ಜಗದೊಳ
ಧರ್ಮವಾವುದು ರಾಜ ಮಂತ್ರದ
ಧರ್ಮವಾವುದು ಮಾರ್ಗವಾವುದಮಾರ್ಗವೆಂದೇನು
ಕರ್ಮವಾವುದು ವಿಧಿವಿಹಿತ ದು
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಾ ಸಾಕೆಂದು ಬಿನ್ನಹ ಮಾಡಿದನು ಭೂಪ ||೮೪||

ಸತಿಸಹಿತ ವಿರಚಿಸಿದ ಧರ್ಮ
ಸ್ಥಿತಿ ಸಮೃದ್ಧಿಕವಾಗಿ ಸಲುವುದು
ಪತಿಗಳಲ್ಲದೆ ತನ್ನ ಸ್ವಾತಂತ್ರ್ರ್ಯದಲಿ ಮಾಡಿದುದು
ಅತಿಶಯವನೆಯ್ದದು ಕಣಾ ಭೂ
ಪತಿಯೆ ಕೇಳಿಹಪರದ ಗತಿ ನಿಜ
ಸತಿಯ ದೆಸೆಯಿಂದಲ್ಲದೆ ಫಲಿಸುವುದು ಹುಸಿಯೆಂದ ||೮೫||

ಅತಿಥಿ ಪೂಜೆಯನುಳಿದ ಜೀವ
ಸ್ಥಿತರ ಧರ್ಮಸ್ಥಿತಿಯನಪಹರಿ
ಸುತ ಬಲದಲವನಿಯಲಿ ನಿರಿಯಣದ ಕಾಲದಲಿ
ಗತಿಗೆಡಿಸಿ ಕೊಂಡೊಯ್ದು ವೈವ
ಸ್ವತನು ನಾಯಕನರಕದೊಳಗ
ದ್ದುತ ಬಹನು ಕುಲಕೋಟಿಸಹಿತವನೀಶ ಕೇಳೆಂದ||೮೬||

ತಮ್ಮ ಕಾರ್ಯ ನಿಮಿತ್ತ ಗರ್ವವ
ನೆಮ್ಮಿದರೆ ತದ್ಗರ್ವದಿಂದುರೆ
ದಿಮ್ಮಿತಹುದಾ ಕಾರ್ಯ ಮರ್ತ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಶ್ರುತಿ
ಗುಮ್ಮಹವನೈದುವವೊಲೌಕುವ
ಮರ್ಮಿಗಳನೊಳಹೊಯ್ದು ಕೊಂಬುದು ಭೂಪ ಕೇಳೆಂದ ||೮೭||

ಅರಸ ಕೇಳೈ ಮಾರ್ಗ ಮೂರಾ
ಗಿರುತಿಹವು ಸಂಪೂರ್ಣ ಧನ ಗುರು
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು
ತಿರುಗಿ ಬಂದೊಡೆ ನಾಲ್ಕನೆಯ ಮತ
ದೊರಕಲರಿವುದೆ ಕಲೆಗಳನು ಸಂ
ವರಿಸುವ ನರೋತ್ತಮರಿಗವನೀಪಾಲ ಕೇಳೆಂದ ||೮೮||

ಕಾದುದಕದಾಸ್ನಾನ ಸಿದ್ಧಿಯ
ವೈದಿಕಾಂಗದ ಮಂತ್ರ ಸಾಧನ
ವೇದ ಹೀನರಿಗಿತ್ತ ಫಲವಾ ಶ್ರಾದ್ಧ ಕರ್ಮದಲಿ
ಐದದಿಹ ದಕ್ಷಿಣೆಗಳೆಂಬಿವು
ಬೂದಿಯಲಿ ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ಭೂಪ ಕೇಳೆಂದ ||೮೯||

ಇಹಪರದ ಗತಿ ದಾನ ಧರ್ಮದ
ಬಹುಳತಿಗಳನು ತತ್ತ್ವಭಾವದ
ವಿಹಿತಪುಣ್ಯದ ಬೆಳವಿಗೆಯ ಫಲವೊಂದು ನೂರಾಗಿ
ಬಹುದು ಸದ್ವಂಶದಲಿ ಜನಿಸಿಹ
ಮಹಿಮನಿರೆ ಲೋಕಾಂತರದ ಸುಖ
ವಹುದು ಸಂತಾನಾಭಿವೃದ್ಧಿಯು ನೃಪತಿ ಕೇಳೆಂದ ||೯೦||

ಚೋರನನು ಕಾಣುತ್ತ ಮರಳಿದು
ಚೋರನೆಂದೊಡೆ ಪತಿತನನು ನಿ
ಷ್ಟೂರತನದಿಂ ಪತಿತನೆಂದೊಡೆ ಸಾಮ್ಯದೋಷವದು
ಸಾರುವುದು ಮಿಥ್ಯೋತ್ತರದಲಿ ವಿ
ಚಾರಿಸದೆ ನುಡಿದವರಿಗಿಮ್ಮಡಿ
ನಾರಕದ ಫಲ ತಪ್ಪಧವನೀಪಾಲ ಕೇಳೆಂದ ||೯೧||

ವಿನುತ ಮಧುಕೈಟಬರ ಮೇಧ
ಸ್ಸಿನಲಿ ಮೇದಿನಿಯಾದುದಿದ ನೀ
ನನುಭವಿಸುವೊಡೆ ಪುಣ್ಯಕೀರುತಿಯೆಂಬ ಪರಿಮಳದ
ಹೊನಲಿನಲಿ ತರವಿಡಿದು ಲೇಸಾ
ಗನುಭವಿಸುವುದದಲ್ಲದಿದ್ದೊಡೆ
ಮನುಜ ಮಾಂಸವ ಭಕ್ಷಿಸಿದ ಫಲವರಸ ಕೇಳೆಂದ ||೯೨||

ತನ್ನ ದಾನವಪಹರಿಸಿ ಕೊಂ
ಡನ್ಯರಿತ್ತುದಕಡ್ಡ ಬೀಳುವ
ಧನ್ಯರುಗಳರವತ್ತು ಸಾವಿರ ವರುಷ ಪರಿಯಂತ
ಖಿನ್ನವಹ ವಿಷ್ಠೆಯೊಳು ಕ್ರಿಮಿಗಳ
ಜನ್ಮದಲ್ಲಿಹರಿದನರಿದು ನೀ
ನಿನ್ನು ಕೊಟ್ಟುದನುಳುಹಿಕೊಂಬುದು ಧರ್ಮವಲ್ಲೆಂದ ||೯೩||

ಕರಣ ಮೂರರೊಳಿತ್ತ ವಸ್ತುವ
ನಿರಿಸಿಕೊಂಡರೆ ಮಾಸಮಾಸಾಂ
ತರದೊಳೊಂದಕೆ ನೂರು ಗುಣದಲಿ ಕೋಟಿ ಪರಿಯಂತ
ಹಿರಿದಹುದು ದಾನ ಪ್ರಶಂಸೆಯ
ನಿರಿಸಿಕೊಂಡಿಹ ದಾನ ನರಕವ
ನೆರಡಕೊಂದೇ ದಾನ ಕಾರಣವೆಂದನಾ ಮುನಿಪ ||೯೪||

ದ್ಯೂತದಲಿ ಮದ್ಯದಲಿ ಘನ ಕಂ
ಡೂತಿಯಲಿ ನಿದ್ರೆಯಲಿ ಕಲಹ ವಿ
ಘಾತಿಯಲಿ ಮೈಥುನದಲಾಹಾರದಲಿ ಬಳಿಸಂದು
ಕೈತವದ ಉದ್ಯೋಗದಲಿ ದು
ರ್ನೀತಿಯಲಿ ಪರಸತಿಯರಲಿ ಸಂ
ಪ್ರೀತಿ ಬಲಿವುದು ಬೆದಕ ಬೆದಕಲು ಭೂಪ ಕೇಳೆಂದ ||೯೫||

ದುಷ್ಕೃತವನೆಸಗುವರು ಫಲದಲಿ
ಕಕ್ಕುಲಿಸುವರು ಸುಕೃತವೆಂಬುದ
ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು
ಇಕ್ಕದೆರೆಯದೆ ಬಿತ್ತಿ ಬೆಳೆಯದೆ
ಪುಕ್ಕಟೆಯ ಸ್ವರ್ಗಾದಿ ಭೋಗವು
ಸಿಕ್ಕಲರಿವುದೆ ರಾಯ ಚಿತ್ತೈಸೆಂದನಾ ಮುನಿಪ ||೯೬||

ವರ ಶ್ರುತಿ ಸ್ಮೃತಿಗಳು ಕಣಾ ಭೂ
ಸುರರ ದೃಷ್ಟಿಗಳಿವರೊಳೊಂದಕೆ
ಕೊರತೆಯಾಗಲು ಕಾಣನೆನಿಸುವನೆರಡನರಿಯದಿರೆ
ನಿರುತವಿದು ಜಾತ್ಯಂಧನೆನಿಸುವ
ನರಸ ಕೇಳೀ ಮಾಂಸ ದೃಷ್ಟಿಗ
ಳೆರವಲೇ ಸರ್ವತ್ರ ಸಾಧಾರಣವು ಲೋಕದಲಿ ||೯೭||

ವಾಚಿಸದೆ ವೇದಾರ್ಥ ನಿಚಯವ
ನಾಚರಿಸದಾಲಸ್ಯದಿಂದು
ತ್ಕೋಚನಾಗಿ ಪರಾನ್ನ ಪೂರಿತ ತಪ್ತ ತನುವಾದ
ನೀಚನಹ ಭೂಸುರನ ಕರುಳನು
ತೋಚುವಳಲೈ ಮೃತ್ಯುವವನನು
ನಿಶಾಚರನು ದ್ವಿಜನಲ್ಲ ಚಿತ್ತೈಸೆಂದನಾ ಮುನಿಪ ||೯೮||

ಸರಸಿಜಾಕ್ಷನ ವಿಷ್ಣು ನಾಮ
ಸ್ಮರಣೆಯಲಿ ಶ್ರುತಿಮೂಲ ವಾಕ್ಯೋ
ತ್ಕರುಷೆಯಲಿ ಭೂತಕ್ಕೆ ಹಿತವಹ ನಡವಳಿಯನರಿದು
ಪರವಚನವನು ತ್ರಿಕರಣದೊಳು
ಚ್ಚರಿಸಲಾಗದು ಸರ್ವಥಾ ಸ
ತ್ಪುರುಷರಭಿಮತವಿದು ಚಿತ್ತೈಸೆಂದನಾ ಮುನಿಪ ||೯೯||

ಲೋಕಸಮ್ಮತವಾದುದನು ನಿ
ರಾಕರಿಸುವವರುಗಳು ತಾವೇ
ನಾಕೆವಾಳರೆ ಜಗಕೆ ತಮ್ಮನದಾರು ಬಲ್ಲವರು
ಬೇಕು ಬೇಡೆಂಬುದಕೆ ತಾವವಿ
ವೇಕಿಗಳು ಮೊದಲಿಂಗೆ ಪ್ರಾಮಾ
ಣೀಕರುಗಳವರಲ್ಲ ಚಿತ್ತೈಸೆಂದನಾ ಮುನಿಪ ||೧೦೦||

ಉತ್ತಮರುಗಳ ನಿಂದಿಸುತ ದು
ರ್ವೃತ್ತನಾಗಿಯಧರ್ಮ ಕೋಟಿಯೆ
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು
ಎತ್ತಲೆಂದರಿಯದೆ ಜಗಕ್ಕೆ ಜ
ಡಾತ್ಮರಾಗಿಹ ವೇದಬಾಹ್ಯರ
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ ||೧೦೧||

ಲೋಕದೊಳಗಣ ಪುಣ್ಯ ಪಾಪಾ
ನೀಕವನು ಯಮರಾಜನಾಲಯ
ದಾಕೆವಾಳಂಗರುಹುವರು ಹದಿನಾಲ್ಕು ಮುಖವಾಗಿ
ನಾಲ್ಕು ಕಡೆಯಲಿ ಕವಿದು ಬರಿಸುವ
ರೌಕಿ ದಿನದಿನದಲ್ಲಿ ಗರ್ವೋ
ದ್ರೇಕದಲಿ ಮೈಮರೆದು ಕೆಡಬೇಡೆಂದನಾ ಮುನಿಪ ||೧೦೨||

ಚಕ್ರಿಯೊಬ್ಬಗೆ ಹತ್ತು ಕಡಿಕರ
ಲೆಕ್ಕವಂತಾ ಚಕ್ರಿ ಹತ್ತರ
ಲೆಕ್ಕದೊಳಗಾ ಧ್ವಜಿ ಕಣಾ ಧ್ವಜಿ ಹತ್ತರ ಸಮಾನ
ಮಿಕ್ಕ ವೇಸಿಗೆ ವೇಸಿ ಹತ್ತರ
ಲೆಕ್ಕವೊಬ್ಬರಸಂಗೆ ಪಾತಕ
ವೊಕ್ಕಲಿಕ್ಕುವುದರಸುತನ ಸಾಮಾನ್ಯವಲ್ಲೆಂದ ||೧೦೩||

ಬಲುಕರಿಸಿ ಭೂಮಿಯೊಳಗೊಂದಂ
ಗುಲವನೊತ್ತಿದವಂಗೆ ಪಶು ಸಂ
ಕುಲದಲೊಂದೇ ಗೋವನಪಹರಿಸಿದ ದುರಾತ್ಮಂಗೆ
ಅಳುಪಿ ಕನ್ಯಾರತ್ನದೊಳಗೊ
ಬ್ಬಳನು ಭೋಗಿಸಿದಂಗೆ ನರಕದೊ
ಳಿಳಿವುದಲ್ಲದೆ ಬೇರೆ ಗತಿಯಿಲ್ಲೆಂದನಾ ಮುನಿಪ ||೧೦೪ ||

ದಾನವಿರಹಿತರಾಗಿ ಜನಿಸಿದ
ಮಾನವರು ದಾರಿದ್ರರದರಿಂ
ಹೀನಸುಕೃತಿಗಳಾಗಿಯದರಿಂ ಘೋರತರ ನರಕ
ಆ ನರಕದಿಂ ಮರಳಿ ಪಾತಕ
ಯೋನಿ ಮರಳಿ ದರಿದ್ರವದು ತಾ
ನೇನ ಮಾಡಿಯು ಬೆನ್ನಬಿಡದವನೀಶ ಕೇಳೆಂದ ||೧೦೫||

ಪಾಕಶಾಸನನೈದಿ ವೃತ್ರನ
ಢಾಕುಗೆಡಸಿ ದಧೀಚಿಯಸ್ಥಿಯ
ಲೌಕಿ ಹೊಯ್ಯಲು ದಾನವನ ತನು ನೀರೊಳಡಗೆಡೆಯೆ
ತೂಕ ಕುಂದಿ ಜಲಾಧಿದೇವತೆ
ಯಾ ಕಪರ್ದಿಯ ಕರುಣದಲಿ ದ
ರ್ಭಾಕೃತಿಯ ಕೈಕೊಂಡುದವನೀಶ ಕೇಳೆಂದ ||೧೦೬||

ಆದಿಯಲಿ ಕಮಲಾಸನನು ಮಧು
ಸೂದನನು ಮಧ್ಯದಲಿ ಮೇಲಣ
ಹಾದಿಯಲಿ ಗಿರಿಜೇಶನಿರೆ ತ್ರೈಮೂರ್ತಿಮಯವಾಗಿ
ಕಾದುಕೊಂಡಿಹರಖಿಳ ಲೋಕವ
ನೈದೆ ದರ್ಭಾಂಕುರದ ಮಹಿಮೆಯ
ಭೇದವನು ಬಣ್ಣಿಸುವನಾವನು ಭೂಪ ಕೇಳೆಂದ ||೧೦೭||

ಬೆರಳ ಮೊದಲಲಿ ಭೂಸುರರು ನಡು
ವೆರಳೆಡೆಗಳಲಿ ಪಾರ್ಥಿವರು ತುದಿ
ವೆರಳೊಳಗೆ ವೈಶ್ಯರುಗಳೀ ಕ್ರಮದಲಿ ಪವಿತ್ರವಿದು
ಧರಿಸಬೇಹುದು ದಕ್ಷಿಣ ಕರಾಂ
ಬುರುಹದಲಿ ದಿನದಿನದ ಸಂಧ್ಯಾಂ
ತರದ ಸಮಯದಲರಸ ಚಿತ್ತೈಸೆಂದನಾ ಮುನಿಪ ||೧೦೮||

ಮಂರೆದಪ್ಪಿದ ಜಪ ಸುಕಲ್ಪಿತ
ಧಾರೆಯುಡುಗಿದ ದಾನ ದರ್ಭಾ
ಕಾರ ವಿರಹಿತವಾದ ಸಂಧ್ಯಾವಂದನಾದಿಗಳು
ಪಾರವೆಯ್ದದ ಶೌಚ ವಿನಯ ವೀ
ಹಾರವಿಲ್ಲದ ಪೂಜೆಗಳುಪ
ಕಾರವಹುದೇ ರಾಯ ಚಿತ್ತೈಸೆಂದನಾ ಮುನಿಪ ||೧೦೯||

ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ಗುರುಸದನದಲಿ ನದಿಯಲಿ ತಟಾಕದಲಿ
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ಮುನಿಪ ||೧೧೦||

ದೆಸೆಗಳೇ ವಾಸಸ್ಸು ರಾಜ್ಯ
ಪ್ರಸರಣವು ನಿರ್ಲಜ್ಜೆ ಜಟೆ ರಂ
ಜಿಸುವ ಧೂಳೀ ದೂಸರದ ಗಂಗಾಧರನವೋಲು
ಎಸೆವ ಸುತರುಗಳಿಲ್ಲದಿರೆ ಶೋ
ಭಿಸುವುದೇ ಸಂಸಾರವೆಂಬುದು
ವಸುಧೆಯೊಳು ಪುಣ್ಯಾಧಿಕರುಗಳಿಗಲ್ಲದಿಲ್ಲೆಂದ ||೧೧೧||

ಗುರುಸುತನವೋಲಾಯು ನೀಲಾಂ
ಬರನವೊಲುಬಲ ದಶರಥನವೋಲ್
ಸಿರಿ ನದೀಜನವೋಲು ಶೌರ್ಯವು ರಘುಪತಿಯವೋಲು
ಅರಿವಿನಾಶನ ನಹುಷನವೊಲೈ
ಶ್ವರಿಯ ಮಾರುತಿಯವೊಲು ಗತಿ ಸಂ
ವರಿಸುವುದು ಶಿವನೊಲಿದವರುಗಳಿಗಲ್ಲದಿಲ್ಲೆಂದ ||೧೧೨||

ಕ್ಷಿತಿಯವೊಲು ಪಾವನತೆ ಕುರು ಭೂ
ಪತಿಯವೋಲಭಿಮಾನ ಲಕ್ಷ್ಮೀ
ಪತಿಯವೊಲು ಸತ್ಕೀರ್ತಿ ವಿದುರನವೋಲು ವಿಜ್ಞಾನ
ಕ್ಷಿತಿಯವೊಲು ಸೈರಣೆ ಸುಹೃತ್ಸಂ
ತತಿಯವೊಲು ಪರಿಣಾಮ ಕುಂತೀ
ಸುತರವೊಲು ಸತ್ಯಾಧಿಕರು ಲೋಕದೊಳಗಿಲ್ಲೆಂದ ||೧೧೩||

ಗಗನದಗಲದಿನುಗುವವೃಷ್ಟಿಯೊ
ಳೊಗೆದ ಕೀಲಾಲವು ಸಮುದ್ರವ
ಹೊಗುವ ನದಿ ನಾನಾ ಪ್ರಕಾರದ ರೂಪುಗಳಲೆಸೆವ
ಒಗುಮಿಗೆಯ ದೈವದ ಪದಾಂಬುಜ
ಯುಗಳದರ್ಚನೆ ಪೂಜನೆಗಳಿವು
ಜಗದುದರನನು ಮುಟ್ಟವೇ ಭೂಪಾಲ ಕೇಳೆಂದ ||೧೧೪||

ಜಲದೊಳಗೆ ವಾರಾಹ ವಿಷ್ಣು
ಸ್ಥಳದೊಳಗೆ ವಾಮನನು ವನ ಸಂ
ಕುಳದೊಳಗೆ ನರಸಿಂಹನಾಗಿಯೆ ಭಕ್ತನಿಕರವನು
ಸಲಹುತಿಹನೊಮ್ಮೆಯು ಜಗತ್ರಯ
ದೊಳಗು ಹೊರಗೆನ್ನದನುದಿನ
ಜಲರುಹಾಕ್ಷನು ಕೃಷ್ಣ ಕೇಶವನಲ್ಲದಿಲ್ಲೆಂದ ||೧೧೫||

ಕತ್ತಲೆಯ ಕಾಲಾಟ ಸೂರ್ಯನ
ನೊತ್ತುವುದೆ ದುಷ್ಕರ್ಮ ಕೋಟಿಗ
ಳೆತ್ತ ಮುಟ್ಟುವುವೈ ಮಹಾಪುರುಷರನು ಖಗಪತಿಯ
ತತ್ತುದೇ ವಿಷ ಕೃಷ್ಣರಾಯನ
ಭಕ್ತರುಗಳನುಭವಿಸುವುದು ತಾ
ಪಥ್ಯವೇ ಜಡಜೀವರಿಗೆ ಹೇಳೆಂದನಾ ಮುನಿಪ ||೧೧೬||

ಅರುಹಬಾರದು ಮುಂದೆ ಬಹ ದಿನ
ಬಿರಿಸು ನೀನೆಚ್ಚೆತ್ತು ನಡೆ ಮೈ
ಮರೆಯದಿರು ನಿನ್ನಾತ್ಮಜರ ವೈರಾನುಬಂಧದಲಿ
ಬರಿದಹುದು ಬ್ರಹ್ಮಾಂಡ ನೀನದ
ನರಿಯೆ ಮೇಲಣ ತಾಗು ಬಾಗಿನ
ಹೊರಿಗೆ ದೈವಾಧೀನವಾಗಿಹುದೆಂದನಾ ಮುನಿಪ ||೧೧೭||

ತೆರಹುಗುಡದೆ ಧರಿತ್ರಿಯೊಳಗೀ
ಡಿರಿದ ದೈತ್ಯ ಸಹಸ್ರ ಕೋಟಿಯ
ನಿರಿದು ಭೂಭಾರವನಿಳುಹಿ ನಿರ್ಜರರ ದುಗುಡವನು
ಹರಿದು ಹಾಯಿಕಿ ಭಕ್ತರನು ನೆರೆ
ಮೆರೆಯಲೋಸುಗ ಜನಿಸಿದನು ಹರಿ
ಯರಿಯಲಾ ಶ್ರೀಕೃಷ್ಣರಾಯನು ಮನುಜನಲ್ಲೆಂದ ||೧೧೮||

ಆತನಾ ಪಾಂಡವರ ಹರಿಬವ
ನಾತು ಪಾರ್ಥನ ರಥಕೆ ತಾನೇ
ಸೂತನಾದನು ನಿಮಗೆ ಜಯವೆಲ್ಲಿಯದು ಭೂಪತಿಯೆ
ಭೂತಳವನೊಪ್ಪಿಸುವುದಸುರಾ
ರಾತಿಯನು ಮರೆಹೊಕ್ಕು ಬದುಕುವು
ದೀ ತತುಕ್ಷಣವಲ್ಲದಿರ್ದೊಡೆ ಕೆಡುವಿರಕಟೆಂದ ||೧೧೯||

ಜಲಧಿಯೊಳು ದುಗ್ಧಾಭ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ
ಜಲರುಹಾಕ್ಷನೆ ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ ||೧೨೦||

ಈ ಪರಿಯ ಬೋಧೆಯಲಿ ನೃಪನನು
ತಾಪವನು ಮಾಣಿಸಿ ಕುಬುದ್ಧಿ
ವ್ಯಾಪಕನು ಧೃತರಾಷ್ಟ್ರನೆಂಬಪಕೀರ್ತಿಯನು ಬಿಡಿಸಿ
ಕಾಪಥಂಗಳ ನಿಲಿಸಿ ತತ್ವ ಕ
ಳಾಪ ವಿಮಲ ಜ್ಞಾನದುದಯದ
ರೂಪು ತಾನೆಂಬಂತೆ ಸೂರ್ಯೋದಯವ ಕಾಣಿಸಿದ ||೧೨೧||

ಧರಣಿಪನ ಸಂತೈಸಿದನು ಮುನಿ
ವರನು ತನ್ನಾಶ್ರಮಕೆ ತಿರುಗಿದ
ನುರುತರ ಪ್ರೇಮದಲಿ ಧೃತರಾಷ್ಟ್ರಾವನೀಶ್ವರನು
ಹರಿಯದಮಳಾನಂದ ರಸದಲಿ
ಹೊರೆದು ಹೊಂಪುಳಿಯೋಗಿ ಲಕ್ಷ್ಮೀ
ಧರನ ನೆನೆದು ರಾಯ ಗದುಗಿನ ವೀರನರಯಣನ ||೧೨೨||

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರ್ವ[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ