ಕಬ್ಬಿಣದ ಕಡಲೆಯ ತಿಂದನು, ಕಳವಳದ ಕಂಬನಿ ಕುಡಿದನು, ಮುಳ್ಳಿನ ಮಾಲೆಯ ಧರಿಸಿದನು, ಬೆಂಕಿಯ ಅಂಕವನ್ನಲಂಕರಿಸಿದನು. ಅದರ ವಿವರಗಳನ್ನು ಮುಂದಿನ ಆರನೆಯ 'ಅಲೆ'ಯಲ್ಲಿ ಕಾಣಬಹುದು. ಇಲ್ಲಿ ಅದರ ಒಂದೆರಡು ಅಂಶಗಳನ್ನು ಅರುಹಿ ಮುಂದುವರಿಯುವೆ.
ಬಸವಣ್ಣನು ಭಕ್ತಿಸಾಧನವನ್ನು ಪ್ರಾರಂಭಿಸಿದ ಕೂಡಲೆ ಅವನಿಗೆ ಮನೋವಿಕಾರ- ಇಂದ್ರೀಯವಿಕಾರಗಳು ಕಾಡತೊಡಗಿದವು. ಆಗ ಆತನು ಅವುಗಳೊಡನೆ ಹೋರಾಡಿ, ಸೋತು, ಸಂಗನನ್ನು ಈ ರೀತಿ ಮೊರೆಯಿಟ್ಟನು:
ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದೆ.
ಮತಿಗೆಟ್ಟೆನು ಮನದ ವಿಕಾರದಿಂದ
ದೃತಿಗೆಟ್ಟೆನು ಕಾಯವಿಕಾರದಿಂದ.
ಶರಣುವೊಕ್ಕೆನು ಕೂಡಲಸಂಗಮದೇವಾ!
ಸುಚಿತ್ತದಿಂದಲೇ ಮನವು
ನಿಮ್ಮ ನೆನೆಯಲೊಲ್ಲದು, ಎಂತಯ್ಯಾ?
ಎನಗಿನ್ನಾವುದು ಗತಿ? ಎಂತಯ್ಯಾ?
ಎನಗಿನ್ನಾವುದು ಮತಿ? ಎಂತಯ್ಯಾ?
ಹರ ಹರಾ! ಕೂಡಲಸಂಗಮದೇವಾ! ಮನವ ಸಂತೈಸೆನ್ನ!
ಈ ಬಗೆಯ ಕಳವಳದ ಕಡಲೊಳಗಿಂದ ಹಾಗೂ ಅವನು ಶಿವಕರುಣದಿಂದ ಆಚೆಯ ದಂಡೆಯನ್ನು ತಲುಪಿದನು. ತನ್ನ ದೃಢವಾದ ನಿಷ್ಠೆಯ ಬಲದಿಂದ ಮಹೇಶನ ದರ್ಶನವನ್ನು ಪಡೆದನು, ಮಾಹೇಶನಾದನು. ಅದರ ಜತೆಯಲ್ಲಿ ಆತನ ಕೆಲ ಅತೀಂದ್ರಿಯ ಸಿದ್ಧಿಗಳನ್ನು ಪಡೆದನು.
ವಚನರಚನೆ:
ಮಾಹೇಶ ಬಸವಣ್ಣನು, "ಶಿವನೇ ಸರ್ವೋತ್ತಮ, ಆತನೊಬ್ಬನೇ ಪರದೈವ! ಆತನ ಭಕ್ತಿಯೇ ಮಿಗಿಲಾದುದು. ಅದನ್ನುಳಿದ ಬಾಳು