ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೭೮ ಚಿರಸ್ಮರಣೆ
ಇನ್ನೂ ಎರಡು ನಿಮಿಷ. ಸೆರೆಮನೆಯೊಳಗಿಂದ ಜನಯೋಧರ ಗೀತ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಕೇಳಿ ಬಂತು. * * * ಕಲೆಕ್ಟರ್ ಮುಖದ ಮೇಲೆ ಸಿಡುಕು ಭಾವ ತೋರಿದರು. ಅಧಿಕಾರಿ ಕೈಗಡಿಯಾರವನ್ನೇ ನೋಡಿದ. ಕೆಳಗೆ ಕಂದಕ.ಅದಕ್ಕೆ ಅನಿಸಿ ನಾಲ್ಕು ಹಲಿಗೆಗಳು.ಮೇಲುಗಡೆ ತೂಗಾಡುತ್ತಿದ್ದ ಉರುಳುಗಳು. "ಮುಖಗಳಿಗೆ ಮುಸುಕು ಹಾಕಿ!" "ಇಲ್ಲ ನಮಗೆ ಮುಸುಕು ಬೇಕಾಗಿಲ್ಲ!" ಉರುಳು ಒಂದೊಂದು ಕೊರಳಿಗೂ ಆಭರಣವಾಯಿತು. ಉಚ್ಚಕಂಠದಿಂದ ಚಿರುಕಂಡ ಕೂಗಿದ: " ಇಂಕ್ವಿಲಾಬ್-" ಅಪ್ಪು, ಕುಂಬು, ಅಬೂಬಕರ್ ಉತ್ತರವಿತ್ತರು: ಜಿಂದಾಬಾದ್!" "ಸಾಮ್ರಾಜ್ಯಶಾಹಿ--" "ನಾಶವಾಗಲಿ!" "ಕ್ರಾಂತಿಗೆ--" "ಜಯವಾಗಲಿ!" ಅಧಿಕಾರಿ ಸನ್ನೆ ಮಾಡಿದ. ಉರುಳುಗಳು ಕತ್ತನ್ನು ಹಿಸುಕಿದುವು; ಹೊರಡಲು ಸಿದ್ಧವಾಗಿದ್ದ ಸ್ವರಗಳನ್ನು ತಡೆದುವು. ಹಲಿಗೆಗಳನ್ನು ಅರೆಕ್ಷಣದೆಲ್ಲಿ ತಪ್ಪಿಸಿದ್ದಾಯಿತು. ಆ ನಾಲ್ಕು ದೇಹಗಳೂ ಕಂದಕದಲ್ಲಿ ತೂಗಾಡಿದುವು. ಉರುಳು ಮತ್ತಷ್ಟು ಮತ್ತಷ್ಟು ಬಿಗಿಯಾಯಿತು. 'ಸಾಯುವವರೆಗೂ ನೇಣು..." ತೂಗಾಡುತ್ತಿದ್ದ ಜೀವಗಳಿಂದ ಸ್ವರ ಹೊರಡುತ್ತಿಲ್ಲ, ಆದರೆ ಸೆರೆಮನೆಗೆ ಸೆರೆಮನೆಯೇ ಘೋಷಗಳಿಂದ ಪ್ರತಿಧ್ವನಿಸುತ್ತಿದೆ. ಬೆಳಗಾಗಿತ್ತು. ಸೂರ್ಯ ತೋರಿಸಿಕೊಳ್ಳಬೇಕಾದ ಹೊತ್ತು. ಆದರೂ ಯಾಕೋ ಆವನ ಸುಳಿವಿಲ್ಲ.