ಪುಟ:ಕರ್ನಾಟಕ ಗತವೈಭವ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೧೬೮-


೨. ಈಗ ಮೂರು ನಾಲ್ಕು ವರ್ಷಗಳಲ್ಲಿ ಮಂಡಲದ ಸಭಾಸದರು ಪುಸ್ತಕಗಳ ರೂಪದಿಂದಲೂ, ಲೇಖಗಳ ರೂಪದಿಂದಲೂ, ಭಾಷಣಗಳ ರೂಪದಿಂದಲೂ ಇತಿಹಾಸದ ಅಭಿಮಾನವನ್ನು ಜಾಗೃತಿಗೊಳಿಸಿರುವ ಸಂಗತಿಯು ಸರ್ವರಿಗೂ ಈಗ ಗೊತ್ತೇ ಇದೆ. ಮಂಡಲದ ಉಚ್ಛ ಧ್ಯೇಯವನ್ನರಿತು ಮುಂಬಯಿ- ಮದ್ರಾಸ-ಮೈಸೂರ-ವಾಯವ್ಯ ಪ್ರಾಂತಗಳ ಸರಕಾರದವರು ತಮ್ಮ ಆರ್ಕಿಯಾಲಾಜಿಕಲ್ ರಿಪೋರ್ಟುಗಳನ್ನು ಮಂಡಲಕ್ಕೆ ಉಚಿತವಾಗಿ ಕಳುಹಿಸುತ್ತಿರುವರು. ಪುಣೆಯ ಭಾರತ-ಇತಿಹಾಸ-ಸಂಶೋಧಕ-ಮಂಡಲದವರು ಈ ಮಂಡಲದ ಸಂಗಡ ಸಹಕಾರದಿಂದ ಕೆಲಸಮಾಡಲು ಒಪ್ಪಿಕೊಂಡಿದ್ದಾರೆ. ಧುಳೆಯ ಸತ್ಕಾರ್ಯೋತ್ತೇಜಕ ಸಭೆಯ ಪತ್ರಿಕೆಯಲ್ಲಿ ಈ ಮಂಡಲದ ಬಗ್ಗೆ ಪ್ರಶಂಸನಾ ಪರ ಲೇಖವು ಬಂದಿದೆ.
೩. ಮಂಡಲದ ಸಂಗ್ರಹದಲ್ಲಿ ಕರ್ನಾಟಕ-ಇತಿಹಾಸಕ್ಕೆ ಸಂಬಂಧ ಪಟ್ಟ ಗ್ರಂಥಗಳೂ, Epigraphia Indica, Mythic Society Journal, Hyderabad Archælogical Society Journal, इतहिहास व ऐतहिहासिक ಮುಂತಾದ ಪತ್ರಿಕೆಗಳೂ ಇರುತ್ತವೆ. ಕೆಲವು ಮಹನೀಯರ ಮುಖಾಂತರ ಸಂಪಾದಿಸಿದ ತಾಮ್ರ ಪಟಗಳೂ, ಕನ್ನಡಗೀತೆಯ ಮೂರು ಹಸ್ತಲಿಖಿತ ಪ್ರತಿಗಳೂ, ಚಾವುಂಡರಾಯ ಪುರಾಣದ ತಾಡುವಲಿಯ ಒಂದು ಅಪರೂಪ ಪ್ರತಿಯೂ, ಮತ್ತೂ ಅನೇಕ ಹಸ್ತಲಿಖಿತ ಪ್ರತಿಗಳೂ ಶಿಲಾಲಿಪಿಗಳ ಅನೇಕ ಮುದ್ರಣಗಳೂ ಮಂಡಲಕ್ಕಾಗಿ ದೊರೆತಿವೆ. ತಾಮ್ರ ಪಟಗಳಾಗಲಿ, ಮಹತ್ವದ ಕಾಗದ ಪತ್ರಗಳಾಗಲಿ ಸಂಗ್ರಹದಲ್ಲಿದ್ದವರು ಅವನ್ನು ಮಂಡಲಕ್ಕೆ ಕಳಿಸಿದರೆ, ಮಂಡಲದವರು ಅವುಗಳ ಉಪಯೋಗವನ್ನು ಮಾಡಿಕೊಂಡು ಬೇಕಾದರೆ, ಅವ ರವರ ವಸ್ತುಗಳನ್ನು ಅವರಿಗೆ ತಿರುಗಿ ಕಳಿಸಿ ಕೊಡುವರು. ಹಳ್ಳಿಗಳಲ್ಲಿ ಶಾಲೆಯ ಮಾಸ್ತರರು ತಮ್ಮ ಊರಿನ ಇತಿಹಾಸದ ಬಗ್ಗೆ ವಿಶೇಷ ಸಂಗತಿಗಳನ್ನು ತಿಳಿಸಿದರೆ, ಮಂಡಲವು ಅವರಿಗೆ ಅತ್ಯಂತ ಋಣಿಯಾಗುವುದು.