ಪುಟ:ಪ್ರೇಮ ಮಂದಿರ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚ್ಛೇದ.

ವಿಮೋಚನ !

“ಹಾ! ರಕ್ಷಿಸಿ! ರಕ್ಷಿಸಿ! ಯಾರಾದರೂ ಓಡಿ ಬಂದು ನನ್ನ ಪ್ರಾಣವನ್ನು ಉಳಿಸಿರಿ!” ಯಾವಳೋ ಒಬ್ಬ ತರುಣಿಯು ಅತ್ಯಂತ ಕರುಣಸ್ವರದಿಂದ ಈ ಪ್ರಕಾರವಾಗಿ ಒದರುತ್ತಿದ್ದಳು. ಅವಳ ಆಕ್ರೋಶದಿಂದ ಕನಕಗಡದ ಸುತ್ತುಮುತ್ತಲಿನ ಗುಡ್ಡಗಾಡ ಪ್ರದೇಶವೆಲ್ಲ ಪ್ರತಿಧ್ವನಿತವಾಯಿತು! ಪರ್ವತದ ಪ್ರತಿಯೊಂದು ದರಿಯಲ್ಲಿಯೂ ಕಂದರ ದಲ್ಲಿಯೂ ಆ ಕರುಣಸ್ವರವು ತುಂಬಿ ಹೋಯಿತು.

ತರುಣಿಯು ಈ ಪ್ರಕಾರ ಆರ್ತಸ್ವರದಿಂದ ಕೂಗಿಕೊಳ್ಳುತ್ತಿದ್ದ ಸ್ಥಳದಿಂದ ಸ್ವಲ್ಪ ಅಂತ ರದ ಮೇಲೆ ಗಡ್ಡದೊಳಗೆ ಒಂದು ದಾರಿಯು ಹೋಗಿತ್ತು; ಆ ದಾರಿಯ ಪಕ್ಕದಲ್ಲಿ ಒಂದು ಝರಿಯು ಮಂದವಾಗಿ ಹರಿಯುತ್ತಿತ್ತು, ಪ್ರವಾಸದ ಶ್ರಮದಿಂದ ದಣಿದು ತೃಷಾರ್ತನಾದ ಇಒಬ್ಬ ತರುಣುಪಾಯಿಯು ಆ ಝರಿಯ ದಂಡೆಯ ಮೇಲೆ ಕುಳಿತು ತನ್ನ ನೀರಡಿಕೆಯನ್ನು ಶಾಂತಮಾಡಿಕೊಳ್ಳುತ್ತಿದ್ದನು. ಆತನು ಇಂದು ಬಹುದೂರದ ಪ್ರವಾಸವನ್ನು ಮಾಡಿದ್ದ ನೆಂಬಂತೆ ತೋರುತ್ತಿತ್ತು. ಆತನು ತೀರ ನಿಸ್ತೇಜನಾಗಿದ್ದನು. ಆತನ ಮುಖಮಂಡಲವು ಬೆವರಿನಿಂದ ತೊಯ್ದು ಹೋಗಿದ್ದರೂ ಒಣಗಿ ಹೋದ ಕಮಲದ ಹಾಗೆ ಕಾಣುತ್ತಿತ್ತು, ನೀರಡಿಕೆಯಿಂದ ವ್ಯಾಕುಲಿತನಾಗಿ ನೀರಿಗೋಸ್ಕರ ಇತ್ತಲು ಬಹುಕಾಲದವರೆಗೆ ಸುತ್ತಿದ ಕಟ್ಟಕಡೆಗೆ ಅವನು ಆ ಝರಿಯನ್ನು ಕಂಡನು. ಕೂಡಲೇ ಅದರ ದಂಡೆಗೆ ಬಂದು ಬೊಗಸೆಯನ್ನು ತುಂಬಿ ಒಂದೆರಡು ಗುಟುಕು ನೀರನ್ನು ಕುಡಿಯುವಷ್ಟರಲ್ಲಿಯೇ ಮೇಲೆ ಹೇಳಿದ ತರುಣಸ್ತ್ರೀಯ ಆರ್ತವಾದ ಕಂಠಸ್ವರವು ಪರ್ವತಪ್ರದೇಶವನ್ನೆಲ್ಲ ನಿನಾದಿತವಾಗಿ ಮಾಡಿ ಆತನ ಕರ್ಣರಂಧ್ರವನ್ನು ಪ್ರವೇಶಿಸಿತು. ಆಗಲಾ ತರುಣನು ನೀರು ಕುಡಿಯುವು ದನ್ನು ಅಷ್ಟಕ್ಕೇ ಬಿಟ್ಟನು. ಬೊಗಸೆಯೊಳಗಿನ ನೀರನ್ನು ಹಾಗೆಯೇ ಕೆಳಗೆ ಎಸೆದು ನಮ್ಮ ತಿಪಾಯಿಯು ಎದ್ದು ನಿಂತುಕೊಂಡನು.