ಧ್ಯಾನ ಶ್ಲೋಕಗಳು ಅರ್ಥಸಹಿತ

ವಿಕಿಸೋರ್ಸ್ದಿಂದ
ಭಗವದ್ಗೀತ : ಕುರುಕ್ಷೇತ್ರ ನಲ್ಲಿ ಕೃಷ್ಣ ಮತ್ತು ಅರ್ಜುನ, 18-19 ನೇ ಶತಮಾನದ ವರ್ಣಚಿತ್ರದ ಜೋಡಣೆ.
  • ಶ್ರೀಮದ್ ಭಗವದ್ಗೀತಾ ಧ್ಯಾನ ಶ್ಲೋಕಗಳು

ಅದ್ಯಯನ ಕ್ರಮ[ಸಂಪಾದಿಸಿ]


  • ಸಾಮಾನ್ಯವಾಗಿ ಎಲ್ಲರೂ ಗೀತಾ ಪಠಣದ ಆರಂಭದಲ್ಲಿ ಒಂಭತ್ತು ಧ್ಯಾನ ಶ್ಲೋಕಗಳನ್ನು ಹೇಳುವ ರೂಢಿ ಇದೆ. ಇವು ಸೊಗಸಾದ ಭಾಷಾ ಸೌಂದರ್ಯವುಳ್ಳ , ಲಯಬದ್ಧವಾದ, ಭಕ್ತಿಪೂರ್ಣವಾದ ಶ್ಲೋಕಗಳಾಗಿವೆ. ವೈಷ್ಣವರಲ್ಲಿ ಧ್ಯಾನ ಶ್ಲೋಕದ ಪ್ರಸಿದ್ಧವಾದ ಒಂಭತ್ತನೆಯ ಶ್ಲೋಕವನ್ನು ಮಾತ್ರಾ ಹೇಳುವ ರೂಢಿ ಇದೆ. ಹೆಚ್ಚಾಗಿ ಮೊದಲಿಗೆ,
ಗೀತಾ ಸುಗೀತಾ ಕರ್ತವ್ಯಾ | ಕಿಮನ್ಯೈಃ ಶಾಸ್ತ್ರ ವಿಸ್ತರೈಃ ||
ಯಾ ಸ್ವಯಂ ಪದ್ಮನಾಭಸ್ಯ | ಮುಖ ಪದ್ಮಾ ದ್ವಿನಿಃ ಸೃತಾ ||
  • ಎಂಬ ಶ್ಲೋಕ ಹೇಳಿ ನಂತರ ಧ್ಯಾನ ಶ್ಲೋಕಗಳನ್ನು ಹೇಳಿ ಗೀತಾ ಪಠಣ ಮಾಡುತ್ತಾರೆ.
  • ಕೆಲವರು ಗೀತಾ ಪಠಣದ ಕೊನೆಯಲ್ಲಿ ವರಾಹ ಪುರಾಣ ದಲ್ಲಿರುವ ಗೀತಾ ಮಹಾತ್ಮ್ಯವನ್ನು ಪಠಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಹೃದಯಾದಿ ಕರಷಡಂಗ ವಿನ್ಯಾಸದೊಂದಿಗೆ ಮುಗಿಸುತ್ತಾರೆ; ಆದರೆ ಅದು ಕಡ್ಡಾಯವಲ್ಲ ; ಏಕೆಂದರೆ ಜ್ಞಾನಿಗಳಾದ ಭಾಷ್ಯಕಾರರು ಯಾರೂ ಹಾಗೆ ಹೇಳಿಲ್ಲ. ಅದನ್ನು ಕೆಲವೇ ಸಂಪ್ರಾದಾಯದವರು ಅನುಸರಿಸುತ್ತಾರೆ. ಕೆಲವರಲ್ಲಿ ಸ್ಕಂದ ಪುರಾಣದ ಗೀತಾ ಮಹಾತ್ಮ್ಯ ಹೇಳಿ/ ಓದಿ ಧ್ಯಾನ ಶ್ಲೋಕ ಹೇಳಿ ಕರಷಡಂಗ ವಿನ್ಯಾಸ ಮಾಡಿ ಮುಕ್ತಾಯ ಮಾಡುತ್ತಾರೆ. ಪಾರಾಯಣ ಪೂಜೆ ಮಾಡುವವರು ಆರತಿ ಪದ್ಯ ಗಳನ್ನು ಹೇಳುತ್ತಾರೆ. ಆದರೆ ಜ್ಞಾನಿಗಳಾದ ಭಾಷ್ಯಕಾರರು ಯಾರೂ ಹಾಗೆ ಮಾಡಲು ಹೇಳಿಲ್ಲ. ಕೊನೆಯಲ್ಲಿ ಕೆಲವು ಜನಪ್ರಿಯ ಸ್ತೋತ್ರ ಹೇಳುವ ರೂಢಿಯೂ ಇದೆ.

-

  • ಭಗವದ್ಗೀತೆಯ ಒಂದೇ ಅಧ್ಯಾಯ ಓದುವವರು ಮುಂದಿನ ಅಧ್ಯಾಯದ ಮೊದಲ ಶ್ಲೋಕ ಓದಿ (ಪಠಿಸಿ) ನಂತರ ಧ್ಯಾನ ಶ್ಲೋಕಗಳನ್ನು ಹೇಳಿ ಮುಕ್ತಾಯ ಮಾಡುತ್ತಾರೆ. ಕಾಲಾವಕಾಶ ವಿರದಿದ್ದಲ್ಲಿ ಕೊನೆಯ (೯) ಧ್ಯಾನ ಶ್ಲೋಕದಿಂದ ಆರಂಬಿಸಿ ಪಠನಾ ನಂತರ ಅದನ್ನೇ ಹೇಳಿ ಮುಗಿಸಬಹುದು.

ಪಾಠ[ಸಂಪಾದಿಸಿ]


ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ,
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |
ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಮ್
ಅಂಬ ತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್ || ೧ ||
  • ಟೀಕೆ : ಅಮ್ಮ (ಅಂಬ) ಭಗವದ್ಗೀತೆ , ಭಗವಂತನಾದ ನಾರಾಯಣನು ತಾನೇ ಅರ್ಜುನನಿಗೆ ಹೇಳಿದ್ದಾಗಿಯೂ, ಪುರಾಣಗಳನ್ನು ಬರೆದ ಋಷಿಗಳಾದ ವ್ಯಾಸರು ಮಹಾಭಾರತದ ನಡುವೆ ಪೋಣಿಸಿದ್ದಾಗಿಯೂ, ಅದ್ವೈತವೆಂಬ ಅಮೃತ ಮಳೆಯನ್ನು ಸುರಿಸುವಳಾಗಿಯೂ , ಭಗವತ್ಸ್ವರೂಪಳಾಗಿಯೂ, ಹದಿನೆಂಟು ಅಧ್ಯಾಯ ಉಳ್ಳವಳಾಗಿಯೂ, ಸಂಸಾರ ದುಃಖವನ್ನು ಹೋಗಲಾಡಿಸತಕ್ಕವಳಾಗಿಯೂ ಇರುವ ನಿನ್ನನ್ನು ಧ್ಯಾನಿಸುತ್ತೇನೆ. ||೧ ||

-

ನಮೋ‌sಸ್ತು ತೇ ವ್ಯಾಸ ವಿಶಾಲಬುದ್ಧೆ ಫುಲ್ಲಾರವಿಂದಾಯತಪತ್ರನೇತ್ರ |
ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ || ೨ ||
  • ಟೀ : ಭಾರತವೆಂಬ ಸಮೃದ್ಧಿಯಾದ ಎಣ್ಣೆಯುಳ್ಳ ಜ್ಞಾನಮಯವೆಂಬ ದೀಪವನ್ನು ಹಚ್ಚಿದವರಾಗಿಯೂ , ಅರಳಿದ ಕಮಲದಂತೆ ಅಗಲವಾದ ಕಣ್ಣುಳ್ಳವರಾಗಿಯೂ , ವಿಸ್ತಾರವಾದ ಬುದ್ಧಿಯುಳ್ಳವರಾಗಿಯೂ , ಇರುವ ವ್ಯಾಸರೇ ನಿಮಗೆ ನಮಸ್ಕಾರ. || ೨ ||

-

ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೆ |
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ || ೩ ||
  • ಟೀ : ಶರಣರಿಗೆ ಕಲ್ಪವೃಕ್ಷವಾದವನೂ , ಒಂದುಕೈಯಲ್ಲಿ ಚಾಟಿಯಿಂದ ಕೂಡಿದ ಬೆತ್ತ ಹಿಡಿದಿರುವವನೂ, ಜ್ಞಾನೋಪದೇಶ ಲಕ್ಷಣವನ್ನು ತೋರಿಸುವ ಹಸ್ತಮುದ್ರೆಯುಳ್ಳವನೂ, ಗೀತೆಯೆಂಬ ಅಮೃತವನ್ನು ಕರೆಯುತ್ತಿರುವವನೂ ಆದ ಕೃಷ್ಣನಿಗೆ ಅಡ್ಡಬೀಳುತ್ತೇನೆ (ನಮಸ್ಕರಿಸುತ್ತೇನೆ). ||೩||

-

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ|
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||೪||
  • ಟೀ : ಎಲ್ಲಾ ಉಪನಿಷತ್ ಗಳೂ ಆಕಳುಗಳು ; ಗೋಪಾಲ ನಂದನನಾದ ಶ್ರೀಕೃಷ್ಣ ಹಾಲು ಕರೆಯುವವನು. ಅರ್ಜುನನು ಕರು. ಹಾಲು ಕುಡಿಯುವವರು ಪಂಡಿತರು ; ಶ್ರೇಷ್ಟವಾದ ಗೀತಾಮೃತವು ಹೀಗೆ ಕರೆದ ಹಾಲು.||೪||

-

ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || ೫ ||
  • ಟೀ : ವಸುದೇವನ ಮಗನಾಗಿಯೂ , ದೇವತಾ ಸ್ವರೂಪನಾಗಿಯೂ, ಕಂಸ ಚಾಣೂರ ಮೊದಲಾದವರನ್ನು ಕೊಂದವನಾಗಿಯೂ, ದೇವಕಿಗೆ ಬಹು ಸಂತೋಷವನ್ನು ಉಂಟುಮಾಡುವವನಾಗಿಯೂ , ಜಗತ್ತಿಗೆಲ್ಲಾ ಧರ್ಮವನ್ನು ತಿಳಿಸುವವನಾಗಿಯೂ, ಇರುವ ಕೃಷ್ಣನಿಗೆ ಎರಗುತ್ತೇನೆ. ||೫||

-

ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯಗ್ರಾಹವತೀ ಕ್ರಪೇಣ ವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ || ೬ ||

-

ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗಂಧೋತ್ಕಟಮ್
ನಾನಾಖ್ಯಾನಕಕೇಸರಂ ಹರಿಕಥಾಸಂಬೋಧನಾಬೋಧಿತಮ್ |
ಲೋಕೆ ಸಜ್ಜನಷಟ್ಪದೈರಹರಹಃ ಪೇಪೀಯಮಾನಂ ಮುದಾ
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ || ೭ ||
  • ಟೀ : ಪರಾಶರರ ಮಗನಾದ ವ್ಯಾಸರ ಮಾತುಗಳೆಂಬ ಸರೋವರದಲ್ಲಿ ಹುಟ್ಟಿದ್ದಾಗಿಯೂ , ನಿರ್ಮಲವಾಗಿಯೂ, ಗೀತೆಯೆಂಬ ಶ್ರೇಷ್ಠವಾದ ಗಂಧವನ್ನುಳ್ಳದ್ದಾಗಿಯೂ, ಅನೇಕ ಉಪಕಥೆ ಗಳೆಂಬ ಎಸಳುಗಳನ್ನುಳ್ಳದ್ದಾಗಿಯೂ, ಹರಿಕಥೆಯೆಂಬತಿಳಿವಿನಿಂದ ಅರಳಿದ್ದಗಿಯೂ, ಜಗತ್ತಿನಲ್ಲಿ ಸಜ್ಜನರೆಂಬ ಭ್ರಮರಗಳು ಯಾವಾಗಲೂ ಸಂತೋಷದಿಂದ ಕುಡಿಯುತ್ತಿರುವುದಾಗಿಯೂ , ಕಲಿಯುಗದ ದೋಷವನ್ನು ಕಳೆಯುವುದಾಗಿಯೂ ಇರುವ ಭಾರತವೆಂಬ ಕಮಲವು ನಮಗೆ ಶ್ರೇಯಸ್ಸನ್ನುಂಟುಮಾಡಲಿ ||೭ ||

-

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾಂದಂ ಮಾಧವಂ ||೮|| (* ಯತ್ ಕೃಪಾ ತಮಹಂ)
  • ಟೀ : ಯಾರ ಕೃಪೆಯು ಮೂಕನನ್ನು ಮಾತಾಳಿಯನ್ನಾಗಿಯೂ , ಕುಂಟನನ್ನು ಪರ್ವತವನ್ನು ದಾಟುವವನನ್ನಾಗಿಯೂ , ಮಾಡುವುದೋ ಆ ಪರಮಾನಂದ ಸ್ವರೂಪನಾದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ. ||೮||

-

ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಃ ಸ್ತುನ್ವಂತಿ ದಿವ್ಯೈ ಸ್ತವೈಃ |
ವೇದೈಃ ಸಾಂಗಪದಕ್ರಮೋಪನಿಷದೈ ರ್ಗಾಯಂತಿ$ ಯಂ ಸಾಮಗಾಃ ||
ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ |
ಯಸ್ಯಾಂತಂ ನ ವಿದುಃ ಸುರಾಸುರಾ ಗಣಾ ದೇವಾಯ ತಸ್ಮೈ ನಮಃ ||೯||
  • ಯಾವನನ್ನು ಬ್ರಹ್ಮನೂ ವರುಣನೂ ಇಂದ್ರನೂ ಮರುತ್ತುಗಳೂ ದಿವ್ಯವಾದ ಸ್ತೋತ್ರಗಳಿಂದ ಹೊಗಳುತ್ತಾರೋ, ಯಾವನನ್ನು ಸಾಮ ಗಾಯಕರು ಪದಗಳಿಂದಲೂ, ಕ್ರಮಗಳಿಂದಲೂ ಕೂಡಿರುವ ವೇದಗಳಿಂದ ಗಾನಮಾಡುತ್ತಾರೋ, ಯಾವನನ್ನು ಯೋಗಿಗಳು ಧ್ಯಾನದಲ್ಲಿ ಮನಸ್ಸನ್ನು ಒಮ್ಮಖವಾಗಿ ಮಾಡಿಕೊಂಡು ನೋಡುವರೋ, ಯಾರ ಆಳವನ್ನು ದೇವತೆಗಳೂ, ರಾಕ್ಷಸರೂ, ಯಾರೂ ತಿಳಿಯರೋ, ಆ ದೇವನಿಗೆ ನಮಸ್ಕಾರ.
  • ಟಿಪ್ಪಣಿ $ : (೧ ವೇದ ಮಂತ್ರಗಳನ್ನು - ಪದ, ಕ್ರಮ, ಜಟೆ , ಘನ ಈ ವಿಶಿಷ್ಟ ವಿಧಾನದಲ್ಲಿ ಪಠಿಸುವರು)

[೧] [೨]

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಗವದ್ಗೀತೆ -ಅನಾಸಕ್ತಿಯೊಗ -ಲೇ.ಗಾಂಧೀಜಿ;
  2. ಭಗವದ್ಗೀತೆ- ಗೀತಾ ಪ್ರೆಸ್ ಘೋರಕಪುರ.