ಈ ಪುಟವನ್ನು ಪರಿಶೀಲಿಸಲಾಗಿದೆ
________________
೧೨೩
ಕೃಷ್ಣನ ಕುಹಕವ ನೋಡಲ್ಲಿ !
ಏನನು ನೋಡುವೆ ? ತಡೆಯುವೆ ಏಕೆ ?
ಕೌರವರಾಯನು ಮಡಿಯಲೆ ಬೇಕೆ ?
ಯುವಕನೆ ತುಡುಕು ಕಠಾರಿಯನು !
ಹೊಡೆ ರಣಭೇರಿಯನು !
ನಡೆ, ನಡೆ, ಊದು ತುತ್ತೂರಿಯನು !
ಕರೆ, ರಣಮಾರಿಯನು !
ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು !
ಕಲಿ ಕೆಚ್ಚಾಗುವನು !
ಕವಿ ಹುಚ್ಚಾಗುವನು !
- ಕವಿ:ಕೆ. ವಿ. ಪುಟ್ಟಪ್ಪ
೩೦.
- ಕನ್ನಡನಾಡಿನ ಸ್ಥಿತಿಯನ್ನು ನೆನೆದು
- ಹರಿದು ತುಂಡಾಗಿಹುದು ಇಂದು ಕನ್ನಡನಾಡು ;
- ಅಣ್ಣ ತಮ್ಮದಿರು ತಾವಣ್ಣ ತಮ್ಮದಿರೆಂದು
- ತಿಳಿಯಲಾರರು ನಡೆಯಲಾರರು; ಬಾ ಬಂಧು
- ಎಂದು ಕರೆಯಲು, ಸ್ವಾಮಿ ನನ್ನೂರು ಧಾರ್ವಾಡ
- ನನ್ನೂರು ಮೈಸೂರು, ನನ್ನೂರು ಎರಕಾಡು
- ಮರ್ಯಾದೆಯಿಂದ ಕರೆಯಿರಿ ನನ್ನ ಎನ್ನುವರು,
- ಕನ್ನಡದ ನಾಡ ಜನವೆಲ್ಲವೂ ನನ್ನವರು,
- ಬಡಗ ತೆಂಕಣ ಮೂಡ ಕೊಡಗ ತೌಳವ ತೋಡ
- ಇನ್ನೆಲ್ಲ ಕನ್ನಡಿಗರೆನ್ನವರು ಎನ್ನುಸಿರು,
- ನಾವೆಲ್ಲ ಒಂದು ಮನೆಯವರಣ್ಣ ತಮ್ಮದಿರು,
- ನಮ್ಮೆಲ್ಲರನು ಪಡೆದುದೊಂದೆ ನಾಡಿನ ಬಸಿರು,
- ಎಂದು ನಾವರಿದೆವೇ ನಮಗೆ ಇನ್ನಾರೆದುರು !
- ಹಾ ನನ್ನ ಸೋದರರೆ ಬನ್ನಿ ಒಂದಾಗಿ ;
- ಜಯವಧುವ ನಿಮ್ಮ ತೋಳಿನೊಳಿಟ್ಟು ತೂಗಿ.
- ಕವಿ:ಶ್ರೀನಿವಾಸ (ಮಾಸ್ತಿ ವೆಂಕಟೇಶ ಐಯಂಗಾರ್)