ಪುಟ:ಕರ್ನಾಟಕ ಗತವೈಭವ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬ ನೆಯ ಪ್ರಕರಣ – ಉಪಸಂಹಾರ

೧೨೩




೧೬ನೆಯ ಪ್ರಕರಣ


ಉಪಸಂಹಾರ

ನ್ನಡಿಗರೇ ! ಈ ಬಗೆಯಾಗಿ, ನಮಗೆಲ್ಲರಿಗೂ ಅತ್ಯಂತ ಪ್ರಿಯವಾಗಿರುವ ಈ ಕರ್ನಾಟಕದ ಗತವೈಭವವನ್ನು ವಿಹಂಗಮ ದೃಷ್ಟಿಯಿಂದ-ಅಲ್ಲ- ಆಕಾಶಯಾನ ದೃಷ್ಟಿಯಿಂದ ನಾವು ನಿಮ್ಮ ಅವಲೋಕನಕ್ಕೆ ತಂದು ಕೊಟ್ಟಿರುವವು. ಇನ್ನೂ ಅನೇಕ ಸಂಗತಿಗಳು ಹೇಳದೆ ಉಳಿದಿರುತ್ತವೆ. ಆಗಿನ ಕಾಲದ ಬಂದರಗಳು, ನಾಣ್ಯಗಳು, ರಾಜ್ಯ ಪದ್ಧತಿ, ವ್ಯಾಪಾರೋದ್ಯೋಗ, ರೀತಿ ನೀತಿ ಮುಂತಾದ ಅನೇಕ ಮಹತ್ವದ ವಿಷಯಗಳ ಬಗ್ಗೆ ಅನೇಕ ಬೋಧಪ್ರದವಾದ ಮತ್ತು ಅಭಿಮಾನಾಸ್ಪದವಾದ ಸಂಗತಿಗಳನ್ನು ನಾವು ನಮ್ಮ ಇತಿಹಾಸದಲ್ಲಿ ಕಾಣಬಹುದು. ಆದರೆ, ಈ ಪ್ರಬಂಧವು ಈಗಾಗಲೇ ಅನಪೇಕ್ಷಿತವಾಗಿ ಬೆಳೆದಿರುವುದರಿಂದ, ಅವುಗಳ ಬಗ್ಗೆ ನಮಗೆ ಗೊತ್ತಾಗಿರುವ ಅಲ್ಪ ಸ್ವಲ್ಪ ಸಂಗತಿಗಳನ್ನೂ ಹೇಳದೆ ಕೈ ಬಿಗಿ ಹಿಡಿಯಬೇಕಾಗಿರುತ್ತದೆ.

ಬರೇ, ಅರಸರ ನಾಮಾವಳಿಯನ್ನೂ ರಾಜವಂಶಗಳ ಪರಂಪರೆಯನ್ನೂ ಹಲಕೆಲವು ಸಂಗತಿಗಳ ತಿಥಿ ವಾರಗಳನ್ನೂ, ಕೆಲವು ಪುಸ್ತಕ ಮತ್ತು ಕವಿಗಳ ಹೆಸರುಗಳನ್ನೂ, ಹೇಳಿದ ಮಾತ್ರಕ್ಕೆ ಇತಿಹಾಸವಾಗಲಿಲ್ಲವೆಂಬುದನ್ನು ನಾವು ಸಂಪೂರ್ಣವಾಗಿ ಅರಿತಿರುವೆವು. ನಮ್ಮ ಪೂರ್ವಜರು ಇಷ್ಟೊಂದು ವೈಭವವನ್ನು ಹೇಗೆ ಪಡೆದರು, ಅವರ ವಿಚಾರಗಳ ಉತ್ಕ್ರಾ೦ತಿಯು ಯಾವ ಬಗೆಯಿಂದ ಆಯಿತು, ಅವರ ಧರ್ಮವು ಏಕೆ ಉನ್ನತಿಯನ್ನು ಹೊಂದಿತು, ಅವರ ವಿಚಾರಗಳು ಏಕೆ ವಿಕಾಸವಾಗಿದ್ದುವು ಇವೇ ಮೊದಲಾದ ಸಂಗತಿಗಳನ್ನು ಸಾದ್ಯಂತವಾಗಿ ವಿವರಿಸುವುದೇ ನಿಜವಾದ ಇತಿಹಾಸವು. ಆದರೆ ಅಂಥ ಇತಿಹಾಸವನ್ನು ಬರೆಯುವುದು ನಮ್ಮ ಉದ್ದೇಶವಲ್ಲ, ಅದು ನನಗೆ ಇಷ್ಟರಲ್ಲಿ ಸಾಧ್ಯವೂ ಇಲ್ಲ. ಕನ್ನಡಿಗರಲ್ಲಿ ಅಭಿಮಾನವೂ ಕುತೂಹಲವೂ ಜಿಜ್ಞಾಸೆಯೂ ಜಾಗೃತವಾಗಲಿಕ್ಕೆ ಹಿಂದೆ ಹೇಳಿದ ಸಂಗತಿಗಳು ಸಾಕೆಂದೂ ಹೆಚ್ಚಿಗೆ ಹೇಳುವುದರಿಂದ ಅಪಚನವಾಗಬಹುದೆಂದೂ ನಾವು ಬಗೆಯುತ್ತೇವೆ. ನಮ್ಮ ಇತಿಹಾಸದ ಬಗ್ಗೆ ಈ ಮುಖ್ಯ