ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಥಕಳಿ / ೨೦೯

ವಸ್ತ್ರಧಾರಣದಲ್ಲಿಯೂ ಆಯಾ ಮುಖವರ್ಣ, ಕಿರೀಟಭೇದಗಳಿಗೆ ತಕ್ಕಂತೆ ಬೇರೆ ಬೇರೆ ವರ್ಣಗಳ ವಸ್ತ್ರಗಳನ್ನು ಉಪಯೋಗಿಸುತ್ತಾರೆ. ನಡುವಿಗೆ ಸುತ್ತುವ ಕಚ್ಛವಸ್ತ್ರವು ಹೆಚ್ಚಾಗಿ ಬಿಳಿಬಣ್ಣದ್ದಿರುತ್ತದೆ. ಅದರ ಎಡೆಎಡೆಗಳಲ್ಲಿ ಇತರ ಬಣ್ಣದ ವಸ್ತ್ರಗಳನ್ನು ಅಂತರಂತರವಾಗಿ ಉಪಯೋಗಿಸುವ ಕ್ರಮವಿದೆ. ನಡುವಿಗೆ ಸುತ್ತಿದ್ದ ವಸ್ತ್ರದ ಮೇಲೆ ಇದಿರುಭಾಗದಲ್ಲಿ, ಸೊಂಟದಿಂದ ಕೆಳಗೆ 'ಮುನ್ನಿ' ಎಂಬ ವರ್ಣದ ಪಟ್ಟಿಯನ್ನು ಇಳಿಬಿಡುತ್ತಾರೆ. ಎಲ್ಲ ವೇಷಗಳೂ ಚಲ್ಲಣ ಕುಪ್ಪುಸಗಳನ್ನು ತೊಡುತ್ತವೆ. ಅದರ ಮೇಲೆ ಬಿಳಿ, ಕೆಂಪು, ಹಳದಿ, ನೀಲವರ್ಣದ ಒಲ್ಲಿಗಳನ್ನು ಹೆಗಲಿಂದ ಇಳಿಬಿಡುತ್ತಾರೆ. ನೀಚ ರಾಕ್ಷಸ ಸ್ತ್ರೀಯರ ಮತ್ತು ಕಿರಾತ, ಮೇಚ್ಛ ಪಿಶಾಚಾದಿ ಹೀನ ವೇಷಗಳಿಗೆ ಕಪ್ಪು ಬಣ್ಣದ ಉಡುಗೆಯಿರುತ್ತದೆ. ಬಿಳಿಗಡ್ಡದ ಮತ್ತು ಕೆಂಪು ಗಡ್ಡದ ವೇಷಗಳಿಗೆ ಹಿಂಭಾಗದಲ್ಲಿ ಬೆನ್ನ ಮೇಲೆ ಉದ್ದವಾದ ಚಾಮರ (ಕೇಶಭಾರ)ವನ್ನು ಇಳಿಬಿಡುತ್ತಾರೆ. ಕಪ್ಪು ಚವರಿಗಳನ್ನು ಹೊಸದು ಮಾಡುವ ಈ ಕೇಶಭಾರವು, ಅಗಲವಾದ ಬಟ್ಟಲು ಕಿರೀಟಗಳಿಗೆ ಬಂಧಿಸಿಕೊಂಡೇ ಇರುವುದಾಗಿ, ಈ ಕಿರೀಟಗಳಿಗೆ 'ಕೇಶಭಾರತ್ತಟ್ಟೆ'ಗಳೆಂದು ಹೆಸರಾಗಿದೆ.
ಇನ್ನು ಭೀಕರ ಸನ್ನಿವೇಶಗಳಲ್ಲಿ ಮಾತ್ರ ಉಪಯೋಗಿಸುವ 'ನಿಣಮಣಿ ವೇಷ'ವೆಂಬ ರಚನೆಯಿರುತ್ತದೆ. ಅರಸಿನ, ಸುಣ್ಣ, ಅಕ್ಕಿಹಿಟ್ಟುಗಳನ್ನು ನೀರಿನಲ್ಲಿ ಕಲಸಿ ರಕ್ತದಂತೆ ಮಾಡಿ ಅದರಲ್ಲಿ ತೋಯಿಸಿದ ವಸ್ತ್ರಗಳನ್ನು ಇದಕ್ಕೆ ಉಪಯೋಗಿಸುತ್ತಾರೆ. ಮತ್ತು ತೆಂಗಿನ ಮರದ ಎಳೆಗರಿಗಳಿಂದ ತಯಾರಿಸಿದ 'ಚಟ್ಟಿ'ಗಳನ್ನೂ ಉಪಯೋಗಿಸುತ್ತಾರೆ. ಶೂರ್ಪನಖಿಯ ಕುಚಚ್ಛೇದನ ದೃಶ್ಯಗಳಲ್ಲಿ ಈ 'ನಿಣಮಣಿ' ಪ್ರಯೋಗವಿರುವುದು. ವೇಷಗಳ ವಿಶೇಷ ಆಭರಣಗಳೆಂದರೆ- ಎದೆಗೆ ಅಡಕವಾಗಿರುವ ವರ್ಣರಂಜಿತವಾದ 'ಕೊರಳಾರ', ಭುಜಗಳಿಗೆ 'ದಂಬ' ಎಂಬ 'ಭುಜಕೀರ್ತಿ' ಅಥವಾ ಭುಜ ಮುಳ್ಳು, ಕೈಗಳಿಗೆ ಕಡಗ, ಕಂಕಣ, ತೋಳ್ಳಳೆ, ಕಿವಿಗೆ ಕುಂಡಲಗಳು ಮತ್ತು ಕಿವಿಮುಚ್ಚುವ 'ಚೆವಿಪೂ ಇತ್ಯಾದಿಗಳಿರುತ್ತವೆ.
ಇನ್ನು ಪ್ರಯೋಗವನ್ನು ಆರಂಭಿಸುವ 'ರಂಗಸಂಪ್ರದಾಯ' ಕ್ರಮದಲ್ಲಿ, ಎಲ್ಲದಕ್ಕೂ ಪೂರ್ವಭಾವಿಯಾಗಿ ಎಲ್ಲ ವಾದ್ಯಗಳನ್ನೂ ರಂಗಕ್ಕೆ ತಂದು ಹಾಡಿಲ್ಲದೆ ಕೆಲಹೊತ್ತು ಬಾರಿಸುವ ಕ್ರಮವಿದೆ. ಇದಕ್ಕೆ 'ಕೇಳಿಕೊಟ್ಟು' ಎಂದು ಹೆಸರು. ನಾಟ್ಯಶಾಸ್ತ್ರದಲ್ಲಿ ಇದಕ್ಕೆ 'ಆಶ್ರಾವಣಾ ವಿಧಿ' ಎಂದು ಹೇಳಲಾಗಿದೆ. ಆಮೇಲೆ ರಂಗಸ್ಥಳದಲ್ಲಿ ಕಾಲುದೀಪವನ್ನಿಟ್ಟು 'ಕೇಳಿಕ್ಕಯ್ಯು' ಅಥವಾ 'ಶುದ್ಧ ಮದ್ದಳಂ' ಎಂಬ ಎರಡನೇ ವಾದ್ಯವಿಧಿ ನಡೆಯುವುದು. ಇದರಲ್ಲಿ ಚೆಂಡೆಯನ್ನು ಬಾರಿಸುವ ಕ್ರಮವಿಲ್ಲ. ಶುದ್ಧ ಮದ್ದಳ, ಇಲತ್ತಾಳ, ಚೆಂಗಲ ಈ ಮೂರನ್ನು ಮಾತ್ರ ದೀಪದ ಮುಂದೆ ಬಾರಿಸುತ್ತಾರೆ.
ಇದಾದ ಮೇಲೆ ತೆರೆ ಸೀರೆಯ ಹಿಂದೆ, ಎಳೆವಯಸ್ಸಿನ ಎರಡು 'ಕುಟ್ಟಿ ವೇಷ'ಗಳು ಸ್ತುತಿಗೀತೆಗಳಿಗೆ ನರ್ತಿಸುತ್ತಾರೆ. ಇದಕ್ಕೆ 'ತೋಡಯಂ' ಎಂದು ಹೆಸರು. ಆರಂಭದ ಸ್ತುತಿ ಎಂದರ್ಥ. ಕೊಟ್ಟಾಯಂನ ಮಹಾರಾಜನು ರಚಿಸಿದ ಮಂಗಲ ಶ್ಲೋಕಗಳನ್ನೂ, ಗೀತೆಗಳನ್ನೂ ಇಲ್ಲಿ ಹಾಡುವ ಸಂಪ್ರದಾಯವಿರುವುದು. 'ಹರಿಹರ ವಿಧಿನುತ ಅಮರ ಪೂಜಿತರೇ ವಾಮನ ರೂಪ...' ಎಂಬ ವಿಶ್ಲೇಶ್ವರ ಸ್ತುತಿಪದ್ಯದಿಂದ ಇದು ಆರಂಭ ವಾಗುತ್ತದೆ. ಸಂಸ್ಕೃತ ನಾಟಕಗಳ ಪೂರ್ವರಂಗಕ್ಕೆ ನಾಟ್ಯಶಾಸ್ತ್ರದಲ್ಲಿ ಹೇಳುವ ಆಂತರ್ಯವನಿಕಾ ಪ್ರಯೋಗದ ಅಂಗವಾಗಿಯೇ ಈ 'ತೋಡಯಂ' ನಡೆಯುವುದಾಗಿದೆ. 14 ಕೊಟ್ಟಾಯಮ್ಮಿನ ರಾಜನೇ ಈ ಕ್ರಮವನ್ನು ಅಳವಡಿಸಿದವನೆಂದು ಹೇಳಲಾಗಿದೆ. ಈ