ಪುಟ:ಪರಂತಪ ವಿಜಯ ೨.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೧೬

ಪರಂತಪ ವಿಜಯ


ಅಧ್ಯಾಯ ೧೫
----

ಶಂಬರನೂ ಅರ್ಥಪರನೂ ಪರಂತಪನನ್ನು ಕಾರಾಗೃಹದ ಒಂದು ಕೊಟ್ಟಡಿಯಲ್ಲಿ ಸೇರಿಸಿ ಹೊರಟುಹೋದರಷ್ಟೆ! ಆಗ ಪರಂತಪನು ತನ್ನಲ್ಲಿ ತಾನೇ ಹೀಗೆ ಯೋಚಿಸಿಕೊಂಡನು:-ಇದು ದುಷ್ಪ್ರವೇಶವಾದ ದುರ್ಗವು. ಇದು ಭೂತ ಪ್ರೇತ ಪಿಶಾಚಾದಿಗಳಿಂದ ವಾಸಮಾಡ್ಪಟ್ಟಿರುವುದೆಂದು ಸತ್ಯ ಶರ್ಮಾದಿಗಳು ಹೇಳುತ್ತಿದ್ದರು. ಅವರ ಮಾತು ಸುಳ್ಳೆಂದು ನಾನು ಹೇಳುತಿದ್ದೆನು. ಶಂಬರ ಮೊದಲಾದ ಭೂತಗಳಿಂದ ಈ ದುರ್ಗವು ವ್ಯಾಪ್ತವಾಗಿರುವುದು. ನಾನು ಈ ಶಂಬರನ ಕೈಗೆ ಸಿಕ್ಕಿದೆನು. ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು, ದೈವಗತಿಯಿಂದ ಸಾಧ್ಯವಾಗಬೇಕೇ ಹೊರತು, ಮನುಷ್ಯ ಪ್ರಯತ್ನಕ್ಕೆ ಸಾಧ್ಯವಾಗುವಂತೆ ತೋರುವುದಿಲ್ಲ. ಹೀಗೆ ಈ ಕಾರಾಗೃಹದಲ್ಲಿರುವುದಕ್ಕಿಂತಲೂ, ಇಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿ ಆ ಪ್ರಯತ್ನದಲ್ಲಿ ಸಾಯುವುದಾದರೂ ಮೇಲು. ಅರ್ಥಪರನು ಸತ್ಯವಂತನೆಂದು ನಂಬಿದ್ದೆನು. ಇವನು ಮಹಾ ದ್ರೋಹಿಯಾಗಿ ಪರಿಣಮಿಸಿದನು. ಶಂಬರನನ್ನೂ ಅರ್ಥಪರನನ್ನೂ ನಿಗ್ರಹಿಸುವುದಕ್ಕೆ ಉಪಾಯವಾವುದೂ ತೋರುವುದಿಲ್ಲ. ಇದಕ್ಕೆ ಏನುಮಾಡುವುದು? ಇಂಥ ವಿಪತ್ಕಾಲದಲ್ಲಿ ಧೈಠ್ಯವನ್ನೂ ಪೌರುಷವನ್ನೂ ಅವಲಂಬಿಸಿದವರಿಗೆ ದೈವಸಹಾಯವೂ ಉಂಟಾಗಬಹುದು. ಅಂಥ ದೈವಸಹಾಯವು ಉಂಟಾದರೂ ಆಗಲಿ; ಅಥವಾ ಪುರುಷಪ್ರಯತ್ನದಲ್ಲಿ ಈ ದೇಹವನ್ನಾದರೂ ಬಿಡುವೆನು.
  ಈ ರೀತಿಯಲ್ಲಿ ಯೋಚಿಸುತ್ತ, ಕೈಕಾಲುಗಳಿಗೆ ಹಾಕಿದ್ದ ಬೇಡಿಯನ್ನು ಬಹು ಶ್ರಮಪಟ್ಟು ಕತ್ತರಿಸಿದನು. ಹಾಗೆಯೇ ಜೇಬಿಗೆ ಕೈಹಾಕಿ ನೋಡಲು, ಒಂದು ಗಡಿಯಾರವೂ ಒಂದು ದೀಪದ ಕಡ್ಡಿ ಪೆಟ್ಟಿಗೆಯೂ ಸಿಕ್ಕಿದುವು. ಇವನನ್ನು ಕೂಡಿದ್ದ ಕೊಟ್ಟಡಿಗೆ ಸ್ವಲ್ಪವೂ ಬೆಳಕು ಬೀಳುತ್ತಿರಲಿಲ್ಲ. ದೀಪದ ಕಡ್ಡಿಯನ್ನು ಹಚ್ಚಿ, ಆ ಕೊಟ್ಟಡಿಯನ್ನು ಪರೀಕ್ಷಿಸಿದನು. ಅದು ಹತ್ತು ಅಡಿ ಚದರವುಳ್ಳದಾಗಿ, ಎಂಟು ಅಡಿ ಎತ್ತರವುಳ್ಳದಾಗಿ, ಒಂದು ದೊಡ್ಡ ಬಂಡೆಯಲ್ಲಿ ಕೊರೆಯಲ್ಪಟ್ಟ ಗವಿಯಾಗಿತ್ತು. ಇದರ