ಪುಟ:ಪರಂತಪ ವಿಜಯ ೨.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ಪರಂತಪ ವಿಜಯ


ವುದಾಗಿ ಹೇಳುವಾಗ, ಇಂಥ ಉದಾರಸ್ವಭಾವವುಳ್ಳ ನಿನ್ನ ವಿಷಯದಲ್ಲಿ ಯಾರುತಾನೆ ಶ್ರದ್ದೆಯಿಂದ ಕಾರ್ಯಗಳನ್ನು ನಡೆಯಿಸಲಾರರು ? ನೀನು ಹೇಳುವ ಕಾರ್ಯಗಳನ್ನೆಲ್ಲ ಕೃತಜ್ಞನಾಗಿ ನೆರವೇರಿಸುವೆನು.
   ಅರ್ಥಪರನು ಈರೀತಿಯಲ್ಲಿ ಒಪ್ಪಿಕೊಂಡ ಕೂಡಲೆ, ಮಾಧವನು ತನ್ನ ಆಸ್ತಿಯ ವಿನಿಯೋಗದ ವಿವರವನ್ನು ಬರೆಯಿಸಿ, ಆ ಉಯಿಲಿನಂತೆ ಜಾರಿ ಮಾಡತಕ್ಕ ಭಾರವನ್ನೂ ಆತನಿಗೇ ಒಪ್ಪಿಸಿದನು. ಅರ್ಥಪರನೂ ಕೂಡ ಈ ಕಾರ್ಯಗಳನ್ನೆಲ್ಲ ನೆರವೇರಿಸಿದ ಮೇಲೆ ತನಗೆ ಸಲ್ಲತಕ್ಕೆ ಧನವನ್ನು ತಾನು ತೆಗೆದುಕೊಳ್ಳುವುದಾಗಿ ಒಪ್ಪಿಕೊಳ್ಳಲು, ಮಾಧವನು ಅರ್ಥಪರನನ್ನು ಅವನ ಕೆಲಸಕ್ಕೆ ಕಳುಹಿಸಿ, ಪರಂತಪನನ್ನು ಕರೆಯಿಸಿಕೊಂಡು, ಅಯ್ಯಾ ! ಪರಂತಪನೆ ! ನನಗೆ ಪ್ರಾಣೋತ್ಕ್ರಮಣಕಾಲವು ಸಮಿಾಪಿಸಿತು. ನಾನು ಹೇಳಿದುದನ್ನೆಲ್ಲ ನೀನು ತಪ್ಪದೆ ನಡೆಯಿಸುವೆಯೆಂದು ನಾನು ನಂಬಿದ್ದೇನೆ ಎಂದನು.
ಪರಂತಪ-ಅಯ್ಯಾ ! ಮಾಧವನೆ ! ನೀನು ಹೇಳಿದುದನ್ನೆಲ್ಲ ಅವಶ್ಯವಾಗಿ ನಡೆಯಿಸುವೆನು ; ಅಥವಾ ಆ ಪ್ರಯತ್ನದಲ್ಲಿ ಪ್ರಾಣವನ್ನಾದರೂ ಒಪ್ಪಿಸುವೆನು.
ಮಾಧವ-ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನಾನು ಸ್ವರ್ಗಸ್ಥನಾಗುವೆನು. ನನ್ನ ಶವವನ್ನು ಕಲ್ಯಾಣನಗರಕ್ಕೆ ತೆಗೆಸಿಕೊಂಡು ಹೋಗು. ಅಲ್ಲಿ ನನ್ನ ಸಹೋದರನಾದ ಸುಮಿತ್ರನಿರುವನು. ನಾನು ನಿನ್ನ ಕೈಯಲ್ಲಿ ಕೊಟ್ಟಿರುವ ವಜ್ರದ ಉಂಗುರವನ್ನು ತೋರಿಸಿದರೆ, ಆಗ ಅವನು ನಿನ್ನನ್ನು ನನ್ನಂತೆಯ ವಿಶ್ವಾಸದಿಂದ ನೋಡುವನು. ನನ್ನ ಈ ವೃತ್ತಾಂತವನ್ನೆಲ್ಲ ಅವನಿಗೆ ತಿಳಿಯಿಸಿ, ನನ್ನ ಉತ್ತರಕ್ರಿಯಾದಿಗಳನ್ನು ಸಾಂಗವಾಗಿ ನೆರವೇರಿಸುವಂತೆ ಮಾಡು, ಇದೋ ಈ ಯೆರಡು ಕಾಗದಗಳನ್ನು ಅವನಿಗೆ ಕೊಡು. ಇದರಲ್ಲಿ ಒಂದು ನನ್ನ ಆಸ್ತಿಯ ವಿನಿಯೋಗ ವಿಷಯಕವಾದ ಉಯಿಲು ; ಮತ್ತೊಂದು ನಾನು ಅವನಿಗೆ ಬರೆದಿರುವ ಕಾಗದ. ಇವುಗಳನ್ನು ಅವನಿಗೆ ರಹಸ್ಯವಾಗಿ ತಲಪಿಸು. ನಾನು ಬರೆದಿರುವ ಅಂಶಗಳನ್ನು ಆತನೇ ನಿನಗೆ ತಿಳಿಯಿಸುವನು. ನನ್ನ ಕೈ ಪೆಟ್ಟಿಗೆಯಲ್ಲಿ ಒಂದು ಕೋಟಿ ವರಹಾಗಳನ್ನು ಇಟ್ಟಿರುವೆನು. ಇದರಲ್ಲಿ ನಿನ್ನ ಪ್ರಯಾಣ ನನ್ನ ದೇಹಸಂಸ್ಕಾರ ಮೊದ