ಪುಟ:ಪರಂತಪ ವಿಜಯ ೨.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೧

ಅಧ್ಯಾಯ ೩


ಲಾದುವುಗಳಿಗೆ ೧ ಲಕ್ಷ ವರಹಾ ಗಳನ್ನು ಉಪಯೋಗಿಸಿಕೊಂಡು, ಅರ್ಥಪರನು ಉಯಿಲನ್ನು ಬರೆದು ಅದರಂತೆ ನಡೆಸಿದ ಮೇಲೆ ಅವನಿಗೆ ಹತ್ತು ಸಾವಿರ ವರಹಾಗಳನ್ನು ಕೊಡು. ಉಳಿದ ಹಣದಲ್ಲಿ ೫೦ ಲಕ್ಷವನ್ನು ನನ್ನ ಅನುರಾಗಕ್ಕೆ ವಿಷಯಳಾಗಿದ್ದ ಕಾಮಮೋಹಿನಿಗೆ ಕೊಡು. ಉಳಿದುದನ್ನು ನಿನ್ನ ಸ್ಪಂತಕ್ಕೆ ಉಪಯೋಗಿಸಿಕೊ. ಇದಲ್ಲದೆ, ದುರ್ಬುದ್ಧಿಯ ಆಸ್ತಿಯು ೫೦ ಕೋಟಿಗಳವರೆಗೂ ಆಗಬಹುದು. ದ್ಯೂತದಲ್ಲಿ ಮಾಡಿಕೊಂಡಿದ್ದ ನಿರ್ಣಯದ ಪ್ರಕಾರ, ಅದೆಲ್ಲವೂ ನನಗೆ ಸೇರತಕ್ಕುದಾಗಿದೆ. ಇದೆಲ್ಲವನ್ನೂ ರಾಜ್ಯಾಧಿಕಾರಿಗಳ ವಶಕ್ಕೆ ಮೂಲಧನವಾಗಿ ಕೊಟ್ಟು, ಅದರ ಬಡ್ಡಿಯನ್ನು, ದ್ಯೂತ, ವ್ಯಭಿಚಾರ, ಪರಸ್ವಾಪಹಾರ ಮೊದಲಾದ ದುಷ್ಕೃತ್ಯಗಳಿಂದ ಲೋಕ ಕಂಟಕಭೂತರಾದವರನ್ನು ನಿಗ್ರಹಿಸುವುದಕ್ಕೆ ಉಪಯೋಗಿಸಿಕೊಳ್ಳುವಂತೆ ಮಾಡಬೇಕು. ಇದಲ್ಲದೆ, ನನ್ನ ಮನೆಯಲ್ಲಿ ಕಬ್ಬಿಣದ ಪೆಟ್ಟಿಗೆಯೊಂದಿರುವುದು. ಅದರಲ್ಲಿ ೧೦ ಕೋಟಿ ದ್ರವ್ಯದವರೆಗೆ ಸಿಕ್ಕುವುದು; ಮತ್ತು, ನನಗೆ ಭೂಸ್ಥಿತಿಯೂ ಬೇಕಾದಷ್ಟಿರುವುದು. ನನಗೆ ಸೇರಿದ ರತ್ನಾಕರವೆಂಬ ಪ್ರದೇಶದಲ್ಲಿ, ವಿಶೇಷವಾಗಿ ಚಿನ್ನದ ಗಣಿಗಳ ರತ್ನದ ಖನಿಗಳೂ ಇರುವುವು. ಅವುಗಳಲ್ಲಿ ಕೆಲಸಮಾಡಿಸಿ ರತ್ನಗಳನ್ನು ತೆಗೆಯುವ ಪ್ರಯತ್ನಗಳನ್ನು ಮಾಡು, ಅದರಿಂದ ಕುಬೇರನ ಐಶ್ವರ್ಯವನ್ನು ಪಡೆಯಬಹುದು. ಈ ಸಮಸ್ತ ಆಸ್ತಿಯನ್ನೂ ಉಯಿಲಿನಲ್ಲಿ ನಿನ್ನ ಹೆಸರಿಗೆ ಬರೆದಿರುವೆನು. ಇದೆಲ್ಲವನ್ನೂ ನಿನ್ನ ಸ್ವಾಧೀನಪಡಿಸಿಕೊಂಡು, ಅದರಲ್ಲಿ ಒಂಭತ್ತು ಕೋಟಿ ದ್ರವ್ಯವನ್ನು, ದುಷ್ಟನಿಗ್ರಹ ಶಿಷ್ಟಪರಿಪಾಲನಕ್ಕಾಗಿಯೂ, ವರ್ತಮಾನಪತ್ರಿಕೆಗಳ ಮೂಲಕ ಪ್ರಜೆಗಳಲ್ಲಿ ಐಕಮತ್ಯವನ್ನು ಕಲ್ಪಿಸುವುದಕ್ಕಾಗಿಯೂ, ವಿದ್ವಜ್ಜನರನ್ನು ಪ್ರೋತ್ಸಾಹಿಸುವುದಕ್ಕಾಗಿಯೂ ವಿನಿಯೋಗಿಸು. ನನ್ನ ಹಿರಿಯಣ್ಣನ ಮಗನಾದ ಶಂಬರನು ಬಹಳ ದುರಾತ್ಮನು. ಇವನು, ತನ್ನ ಆಸ್ತಿಯನ್ನೆಲ್ಲ ದುರ್ವ್ಯಯದಿಂದ ಕಳೆದುಕೊಂಡು, ಈಗ ನನ್ನ ಸರ್ವಸ್ವಕ್ಕೂ ತಾನೇ ಭಾಗಿಯಾಗಬೇಕೆಂದು ಬಹುಸಾಹಸ ಮಾಡುತಿರುವನು. ಇವನೇ, ನನ್ನಲ್ಲಿ ಕಾಮಮೋಹಿನಿಗೆ ಇದ್ದ ಅನುರಾಗವನ್ನು ತಪ್ಪಿಸಿ ಇಂಥ ಅವಸ್ಥೆಯನ್ನು ನನಗೆ ಉಂಟುಮಾಡಿದವನು. ಆದುದರಿಂದ, ನಿನಗೆ ನನ್ನ ಆಸ್ತಿಯನ್ನೆಲ್ಲ ಬರೆದಿರುವೆನು. ಇದರಿಂದ, ಅವನಿಗೆ ನಿನ್ನ ಮೇಲೆ