ಪುಟ:ಪರಂತಪ ವಿಜಯ ೨.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೮

೬೫


ಗಜ ಅಂತರಾಳವನ್ನು ಬಿಟ್ಟು ನಿಲ್ಲಿಸಿದರು. ಎರಡು ಕಡೆಯ ಪಂಚಾಯಿತರ ಅನುಮತಿಯಿಂದ, ಸಭಾಧ್ಯಕ್ಷನಾದ ಸಮರಸಿಂಹನು ಯುದ್ದ ನಿಯಮಗಳನ್ನು ಓದಿದನು. ಭಟರಿಬ್ಬರೂ ನಿಯಮಕ್ಕನುಸಾರವಾಗಿ ನಡೆಯುವುದಾಗಿ ಒಪ್ಪಿದರು. ಆಗ ಸಮರಸಿಂಹನು ಅವರಿಬ್ಬರನ್ನೂ ನೋಡಿ “ಎಲೈ ವೀರರೇ! ನಿಮ್ಮಿಬ್ಬರಲ್ಲಿ ಯಾರೇ ಆಗಲಿ- ಈಗ `ಪಂಚಾಯಿತರಿಂದ ನಿರ್ಣಯಿಸಲ್ಪಟ್ಟ ನಿಯಮಗಳಿಗನುಸಾರವಾಗಿ ನಡೆಯದೆ ಅತಿಕ್ರಮಿಸಿದಲ್ಲಿ, ಈ ವಿಷಯವನ್ನು ಪಂಚಾಯಿತರ ತೀರ್ಪಿಗೆ ಹಾಕಿ ಅವರಲ್ಲಿ ಹೆಚ್ಚು ಜನರ ಅನುಮತಿಯಂತೆ ಯಾರು ತಪ್ಪಿತವುಳ್ಳವರೋ ಅವರನ್ನು ಕೊಲ್ಲುತ್ತೇನೆ. ಇದೋ ಅದಕ್ಕಾಗಿಯೇ ನಾನು ಕೈಯಲ್ಲಿ ಪಿಸ್ತೂಲನ್ನು ಹಿಡಿದಿರುತ್ತೇನೆ. ಜೋಕೆ! ಎಚ್ಚರವಾಗಿರಿ!” ಎಂದು ಹೇಳಲು, ಅದಕ್ಕೆ ಅವರಿಬ್ಬರೂ ಅನುಮತಿಸಿ, ಪಂಚಾಯಿತರ ತೀರ್ಮಾನದಂತೆ ಅಧರ್ಮ ಪ್ರವೃತ್ತರಾದವರು ಶಿಕ್ಷೆಗೆ ಗುರಿಯಾಗುವುದಾಗಿ ಒಪ್ಪಿಕೊಂಡು, ಯುದ್ಧ ಸನ್ನದ್ದರಾಗಿ ನಿಂತರು. ಆಗ ಶಂಬರನು ಪರಂತಪನನ್ನು ನೋಡಿ "ಎಲೈ ದುರಾತ್ಮನಾದ ಪರಂತಪನೆ! ನೀನು ಬಹು ದುಷ್ಟನು ಏನೋ ತಂತ್ರಗಳನ್ನು ಮಾಡಿ ಮಾಧವನ ಸ್ವತ್ತುಗಳನ್ನು ಅಪಹರಿಸಿದ್ದಲ್ಲದೆ, ನನಗೊಸ್ಕರ ನಿಶ್ಚಯಿಸಲ್ಪಟ್ಟಿದ್ದ ಕಾಮಮೋಹಿನಿಗೆ ದುರ್ಬೋಧನೆಯನ್ನು ಮಾಡಿ ಅವಳನ್ನೂ ಸ್ವಾಧೀನಪಡಿಸಿಕೊಂಡು ವಿವಾಹ ಕಂಟಕನಾದೆ. ಈ ದುಷ್ಕೃತ್ಯಕ್ಕೆ ತಕ್ಕ ಶಿಕ್ಷೆಗೆ ಗುರಿಯಾಗುವೆ.” ಎಂದನು.
ಪರಂತಪ- ಎಲೈ ನೀಚನೇ ! ವೃಥಾ ವಾಗಾಡಂಬರದಿಂದ ಪ್ರಯೋಜನವೇನು ? ನಮ್ಮಿಬ್ಬರ ನ್ಯಾಯಾನ್ಯಾಯಗಳು ಇನ್ನು ಸ್ವಲ್ಪ ಹೊತ್ತಿನೊಳಗಾಗಿಯೇ ಗೊತ್ತಾಗುವುವು. ಮಾಧವನು ಸ್ವಹಸ್ತದಿಂದ ರುಜು ಹಾಕಿ ಬರೆದಿರುವ ಉಯಿಲನ್ನೂ, ಅದಕ್ಕೆ ಸಾಕ್ಷಿಭೂತರಾಗಿ ರುಜು ಮಾಡಿರುವ ಅಧಿಕಾರಿಗಳ ವಾಙ್ಮೂಲವನ್ನೂ ತೆಗೆದು ಚೆನ್ನಾಗಿ ಪರಿಶೀಲನೆ ಮಾಡಿದರೆ, ಮಾಧವನ ಆಸ್ತಿಯು ನನಗೆ ತಂತ್ರದಿಂದ ಪ್ರಾಪ್ತವಾಯಿತೋ ಅಥವಾ ಮಾಧವನ ವಿಷಯದಲ್ಲಿ ನೀನು ಮಾಡಿದ ಕೃತಘ್ನತೆಯಿಂದ ನನಗೆ ಲಭ್ಯವಾಯಿತೋ - ಚೆನ್ನಾಗಿ ಗೊತ್ತಾಗುವುದು. ಇದಿರಲಿ; ಕಾಮಮೋಹಿನಿಯನ್ನು ನಾನು ಅಪಹರಿಸಿಕೊಂಡು ಬಂದೆನೆ? ನಿನ್ನ ಕೆಟ್ಟ ಶೀಲಸ್ವಭಾವಗಳೇ ಅವ