ಪುಟ:ಭಾರತ ದರ್ಶನ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೨

ಭಾರತ ದರ್ಶನ

ಭಾಷೆಗಳೂ ಬೆಳೆದವು ಮತ್ತು ಅವುಗಳಲ್ಲಿ ಸಾಹಿತ್ಯ ಸೃಷ್ಟಿಯಾಯಿತು. ಇಷ್ಟೆಲ್ಲ ಆಘಾತಗಳು ಒದಗಿದರೂ ಸಂಸ್ಕೃತವು ಮುಂದುವರಿಯಿತು ; ಆದರೆ ಅದರ ಮಟ್ಟ ಸ್ವಲ್ಪ ಕೆಳಗೆ ಇಳಿಯಿತು. ಡಾಕ್ಟರ್ ಎಫ್. ಎಫ್. ಥಾಮಸ್ ೧೯೩೭ ರಲ್ಲಿ ತಿರುವಾಂಕೂರಿನಲ್ಲಿ ನಡೆದ ಪ್ರಾಚ್ಯ ಸಮ್ಮೇಳನದ ಅಧ್ಯಕ್ಷರಾಗಿ ತಮ್ಮ ಅಧ್ಯಕ್ಷ ಭಾಷಣದಲ್ಲಿ ಭಾರತದಲ್ಲಿ ಸಂಸ್ಕೃತವು ಎಂತಹ ಅದ್ಭುತ ಸಂಘಟನ ಶಕ್ತಿಯಾಗಿತ್ತು, ಈಗಲೂ ಎಷ್ಟು ಪ್ರಚಂಡ ಶಕ್ತಿಯಾಗಿದೆ ಎಂದು ತೋರಿಸಿದ್ದಾರೆ. ಇಂದಿನ ಭಾರತಕ್ಕೆ ಸಹ ಒಂದು ಬಗೆಯ ಸರಳ ಸಂಸ್ಕೃತ, ಮೂಲ ಸಂಸ್ಕೃತ ರಾಷ್ಟ್ರೀಯ ಭಾಷೆಯಾಗಲು ಪ್ರೋತ್ಸಾಹಿಸ ಬೇಕೆಂದು ಸೂಚಿಸಿರುತ್ತಾರೆ! * ಅನೇಕ ಸಾಮಾಜಿಕ ವಿಪ್ಲವಗಳೂ, ಧರ್ಮ ಸುಧಾರಣೆಗಳೂ, ವಿದೇಶೀಯರ ದಂಡಯಾತ್ರೆಗಳಾದರೂ ಇಂದಿನ ಭಾರತಕ್ಕೂ ಪ್ರಾಚೀನ ಭಾರತಕ್ಕೂ ನಿಕಟವೂ ಗಾಢವೂ ಆದ ಬಾಂಧವ್ಯವಿದೆ. ಈಗಲೂ ಭಾರತಾದ್ಯಂತ ಮಾತನಾಡುವ ಏಕಮಾತ್ರ ಭಾಷೆ ಎಂದರೆ ಸಂಸ್ಕೃತ, ಇಂಗ್ಲೀಷರ ಆಳ್ವಿಕೆ, ಇಂಗ್ಲೀಷ್ ಶಿಕ್ಷಣ ನಡೆಯುತ್ತ ಒಂದು ಶತಮಾನ ಗತಿಸಿದಾಗ್ಯೂ ಈಗಲೂ ' ದಾಂತೆ' ಕಾಲದಲ್ಲಿ ಯೂರೋಪಿನ ಜನರಿಗೆ ಲ್ಯಾಟಿನ್ ತಿಳಿದುದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಜನರಿಗೆ ಸಂಸ್ಕೃತವು ತಿಳಿದಿದೆ ” ಎಂದು ಮ್ಯಾಕ್ಸ್ ಮುಲ್ಲರ್ ಬಹು ಹಿಂದೆಯೆ ವ್ಯಕ್ತ ಪಡಿಸಿದ ಅಭಿಪ್ರಾಯವನ್ನು ಒಪ್ಪಿ ಉದ್ದರಿಸಿದರು.
'ದಾಂತೆ' ಕಾಲದಲ್ಲಿ ಯುರೋಪಿನಲ್ಲಿ ಲ್ಯಾಟಿನ್ ಎಷ್ಟು ಜನರಿಗೆ ತಿಳಿದಿತ್ತೊ ನಾನರಿಯೆ. ಈಗ ಸಂಸ್ಕೃತವು ಎಷ್ಟು ಜನರಿಗೆ ತಿಳಿದಿದೆ ಎಂಬುದು ಗೊತ್ತಿಲ್ಲ. ಆದರೂ ಈಗಲೂ ಸಂಸ್ಕೃತ ಬಲ್ಲವರು, ಅದರಲ್ಲು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ, ಅನೇಕರಿದ್ದಾರೆ ಎಂದು ಮಾತ್ರ ಬಲ್ಲೆ. ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ ಮುಂತಾದ ಮಾತನಾಡುವ ಸುಲಭ ಸಂಸ್ಕೃತ ಜನ್ಯ ಭಾಷೆ ಗಳನ್ನು ಮಾತನಾಡುವವರಿಗೆ ಸಂಸ್ಕೃತವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಇಂದಿನ ಉರ್ದು ಭಾಷೆಯು ಅದೇ ಒಂದು ಇಂಡೋ ಆಲ್ಯ ಭಾಷೆಯಾಗಿ ಅದರಲ್ಲೂ ಶೇಕಡ ೮೦ರಷ್ಟು ಸಂಸ್ಕೃತಜನ್ಯ ಶಬ್ದಗಳಿವೆ. ಪಾರಸಿ ಮತ್ತು ಸಂಸ್ಕೃತ ಭಾಷೆಗಳ ಮೂಲರೂಪ ಒಂದೇ ಇರುವದರಿಂದ ಒಂದು ಶಬ್ದ ಸಂಸ್ಕೃತದಿಂದ ಹುಟ್ಟಿದ್ದೆ ಅಥವ ಪಾರಸಿ ಭಾಷೆಯಿಂದ ಹುಟ್ಟಿದ್ದೆ ಹೇಳುವುದು ಬಹು ಕಷ್ಟ, ದಕ್ಷಿಣ ಭಾರತದ ದ್ರಾವಿಡ ಭಾಷೆಗಳು ಮೂಲದಲ್ಲಿ ಬೇರೆಯಾದರೂ ಸಂಸ್ಕೃತದಿಂದ ಅನೇಕ ಶಬ್ದಗಳನ್ನು ಮೂಲರೂಪದಲ್ಲೋ, ರೂಪಾಂತರಿಸಿಯೋ ಬಳಸಿಕೊಂಡಿವೆ. ಅವುಗಳ ಶಬ್ದ ಕೋಶದಲ್ಲಿ ಅರ್ಧದಷ್ಟು ಸಂಸ್ಕೃತಶಬ್ದ ಗಳಿವೆ. - ಸಂಸ್ಕೃತದಲ್ಲಿ ನಾಟಕಗಳ ನಾನಾ ವಿಷಯಗಳ ಮೇಲೆ, ಮಧ್ಯಯುಗದಲ್ಲಿ ಮತ್ತು ಈಚೆಗೆ ವಿಪುಲ ಗ್ರಂಥರಾಶಿಯು ಬೆಳೆದಿದೆ. ಗ್ರಂಥಗಳು ಮತ್ತು ಸಂಸ್ಕೃತ ಮಾಸಪತ್ರಿಕೆಗಳು ಈಗಲೂ ಬರುತ್ತಿವೆ. ಮಟ್ಟವು ಮಾತ್ರ ಉನ್ನತವಾಗಿಲ್ಲ ಮತ್ತು ಸಂಸ್ಕೃತ ಸಾಹಿತ್ಯದ ಪ್ರೌಢಿಮೆಗೆ ಅವು ಗಳಿಂದ ಏನೂ ಪ್ರಯೋಜನವಿಲ್ಲ, ಆದರೆ ಅಷ್ಟು ದೀರ್ಘಕಾಲದಿಂದ ಈಗಲೂ ಸಹ ಸಂಸ್ಕೃತವು ಜನರನ್ನು ಮುಗ್ಧಗೊಳಿಸಿರುವುದೇ ಅತ್ಯಾಶ್ಚರ್ಯ. ವಿದ್ವಾಂಸರ ಕೆಲವು ಮಹಾ ಸಭೆಗಳಲ್ಲಿ ಈಗಲೂ ಸಂಸ್ಕೃತದಲ್ಲಿ ಭಾಷಣಗಳಾಗುತ್ತವೆ.
ಈ ರೀತಿ ಸಂಸ್ಕೃತವು ಅವಿಚ್ಛಿನ್ನವಾಗಿ ಬಳಕೆಯ ಭಾಷೆಯಾಗಿ ಬಂದುದರಿಂದ ಆಧುನಿಕ ಭಾರತೀಯ ಭಾಷೆಗಳು ಪುಷ್ಟಿಗೊಂಡು ಬೆಳೆಯಲು ಅವಕಾಶವಾಗಲಿಲ್ಲ. ವಿದ್ವಾಂಸರು ಅವುಗಳನ್ನು ಅಶ್ಲೀಲಭಾಷೆಗಳು, ಸ್ವತಂತ್ರ ಕಾವ್ಯಗಳ ಅಥವ ಪ್ರೌಢ ಗ್ರಂಥಗಳ ರಚನೆಗೆ ಯೋಗ್ಯವಾದವುಗಳಲ್ಲ ಎಂದು ಭಾವಿಸಿದ್ದರು. ಈ ಬಗೆಯ ಪ್ರಬಲ ವಿರೋಧವಿದ್ದರೂ ಕಾಲಕ್ರಮೇಣ ದೇಶೀಯ ಭಾಷೆಗಳು ರೂಪುಗೊಂಡು, ವಿವಿಧ ಸಾಹಿತ್ಯ ಸೃಷ್ಟಿಯಿಂದ ತಮ್ಮ ಸಾಹಿತ್ಯ ಶ್ರೀಯನ್ನು ಬೆಳೆಸಿಕೊಂಡವು.
ಆಧುನಿಕ ತಾಯ್ ಲ್ಯಾಂಡ್ ನಲ್ಲಿ ಪಾರಿಭಾಷಿಕ, ವೈಜ್ಞಾನಿಕ, ರಾಜಕೀಯ ವಿಷಯಗಳಿಗೆ ಹೊಸ ಶಬ್ದಗಳನ್ನು ಹುಡುಕಬೇಕಾಗಿ ಬಂದಾಗ ಅವರು ಅನೇಕ ಶಬ್ದಗಳನ್ನು ಸಂಸ್ಕೃತದಿಂದಲೇ ತೆಗೆದು ಕೊಂಡಿರುವುದು ಒಂದು ವಿಶೇಷ.