ಪುಟ:ಭಾರತ ದರ್ಶನ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೯೩

ಬಳಕೆಗೆ ಬರಲು ಅನೇಕ ಶತಮಾನಗಳು ಬೇಕಾದವು. ಮೊಟ್ಟ ಮೊದಲು ಉಪಯೋಗಿಸಿದ್ದು ೧೧೩೪ರ ಸಿಸಿಲಿ ನಾಣ್ಯದಲ್ಲಿ, ಇಂಗ್ಲೆಂಡಿನಲ್ಲಿ ಮೊದಲು ಉಪಯೋಗಕ್ಕೆ ಬಂದದ್ದು ೧೪೯೦ರಲ್ಲಿ.
ರಾಯಭಾರಿಗಳು ಕ್ರಮವಾಗಿ ಗ್ರಂಥಗಳನ್ನು ತೆಗೆದುಕೊಂಡು ಹೋಗಿ ಪ್ರಚಾರ ಮಾಡುವ ಮುಂಚೆಯೇ ಯಾವುದೋ ಒಂದು ರೀತಿಯಲ್ಲಿ ಭಾರತೀಯ ಗಣಿತ ಶಾಸ್ತ್ರವು, ಅದರಲ್ಲೂ ಮುಖ್ಯ ವಾಗಿ ಸಂಖ್ಯೆಗಳ ಸ್ಥಾನ ನಿರ್ದೆಶ ಜ್ಞಾನವು 'ಪಶ್ಚಿಮ ಏಷ್ಯಕ್ಕೆ ಹರಡಿತ್ತು ಎನ್ನುವುದು ಸ್ಪಷ್ಟವಿದೆ. ಗ್ರೀಕ್ ವಿದ್ವಾಂಸರು ಸಿರಿಯನ್‌ರನ್ನು ಅವಹೇಳನ ದೃಷ್ಟಿಯಿಂದ ನೋಡುತ್ತಿದ್ದರು. ಗ್ರೀಕ್ ವಿದ್ವಾಂಸರ ಅವಹೇಳನದಿಂದ ನೊಂದ ಸಿರಿಯನ್ ವಿದ್ವಾಂಸ ಯೋಗಿಯೊಬ್ಬನ ದೂರಿನಲ್ಲಿ ಒಂದು ವಿಚಿತ್ರ ಸಂಗತಿ ಇದೆ. ಆತನ ಹೆಸರು ಸವರಸ್ ಸೆಬೂಕ್ ಎಂದು, ಯಪ್ರಟೀಸ್ ನದಿಯ ದಡದ ಒಂದು ಮಠದಲ್ಲಿ ವಾಸಮಾಡುತ್ತಿದ್ದನು. ಕ್ರಿಸ್ತಶಕ ೬೬೨ ರಲ್ಲಿ ಬರೆದ ಅವನ ಗ್ರಂಥದಲ್ಲಿ ಸಿರಿಯನರು ಗ್ರೀಕರಿಗಿಂತ ಯಾವ ರೀತಿ ಯಲ್ಲ ಕಡಮೆ ಇರಲಿಲ್ಲವೆಂದು ಹೇಳುತ್ತಾನೆ, ಉದಾಹರಣೆ ಗಾಗಿ ಭಾರತೀಯರ ವಿಷಯ ಪ್ರಸ್ತಾಪಿಸುತ್ತಾನೆ “ ಹಿಂದೂಗಳ ವಿಜ್ಞಾನದ ವಿಷಯ ಯಾವ ಚರ್ಚೆ ಯನ್ನೂ ನಾನು ಮಾಡುವುದಿಲ್ಲ, ಅವರು ಸಿರಿಯನರಲ್ಲ. ಖಗೋಳಶಾಸ್ತ್ರದಲ್ಲಿ ಅದ್ಭುತ ಸಂಶೋಧನೆ ಮಾಡಿದ್ದಾರೆ. ಅವರ ಸಂಶೋಧನೆಗಳು ಗ್ರೀಕರ ಮತ್ತು ಬ್ಯಾಬಿಲೋನಿಯನ್ ಜನರ ಸಂಶೋಧನೆ ಗಳೆಲ್ಲಕ್ಕಿಂತ ಅತಿ ಸೂಕ್ಷ ಇವೆ. ಅವರ ಗಣಿತ ಜ್ಞಾನವನ್ನು ವರ್ಣಿಸಲು ಯಾರಿಂದಲೂ ಸಾಧ್ಯ ವಿಲ್ಲ. ವಿಜ್ಞಾನ ಶಾಸ್ತ್ರದಲ್ಲಿ ಪಾರಮ್ಯ ಪಡೆದಿರುವೆವೆಂದು ಗ್ರೀಕ್‌ರಲ್ಲಿ ನಂಬಿರುವವರು ಇದನ್ನು ತಿಳಿದುಕೊಂಡರೆ ತಮ್ಮಂತೆ ಇತರರೂ ಬುದ್ದಿವಂತರಿದ್ದಾರೆಂದು ಗೊತ್ತಾಗುತ್ತದೆ” ಎಂದಿದ್ದಾನೆ.
ಭಾರತೀಯ ಗಣಿತ ಶಾಸ್ತ್ರವನ್ನು ಪ್ರಸ್ತಾಪಿಸುತ್ತ ಈಚಿನ ಒಬ್ಬ ಮಹಾವ್ಯಕ್ತಿಯನ್ನು ನೆನಪಿಗೆ ತಂದುಕೊಳ್ಳಬೇಕಾಗುತ್ತದೆ. ಆತನ ಹೆಸರು ಶ್ರೀನಿವಾಸ ರಾಮಾನುಜಂ, ದಕ್ಷಿಣ ಭಾರತದ ಒಂದು ಬಡಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಸರಿಯಾದ ವಿದ್ಯಾರ್ಜನೆಗೆ ಅನುಕೂಲವಿಲ್ಲದೆ ಮದ್ರಾಸ್ ಪೋರ್ ಟ್ರಸ್ಟ್ ನಲ್ಲಿ ಗುಮಾಸ್ತನಾದನು. ಆದರೆ ಅದುಮಲಾಗದೆ ಉಕ್ಕಿ ಬರುತ್ತಿರುವ ಯಾವುದೋ ಒಂದು ಅಂತಶ್ಯಕ್ತಿಯ ಪ್ರತಿಭೆಯಿಂದ ತನ್ನ ವಿರಾಮ ಕಾಲದಲ್ಲಿ ಸಂಖ್ಯೆ ಮತ್ತು ಸಮಿಾಕರಣ ಪ್ರಶ್ನೆಗಳಲ್ಲಿ ನಿರತನಾಗುತ್ತಿದ್ದನು. ಅದೃಷ್ಟವಶಾತ್ ಒಬ್ಬ ಗಣಿತ ಶಾಸ್ತ್ರಜ್ಞನ ಕಣ್ಣಿಗೆ ಬಿದ್ದು ದರಿಂದ ಆತನ ಲೇಖನಗಳು ಇಂಗ್ಲೆಂಡಿನಲ್ಲಿ ಕೇಂಬ್ರಿಡ್ಜ್‌ಗೆ ಹೋದವು. ಗುಮಾಸ್ತಗಿರಿಯನ್ನು ಬಿಟ್ಟು ಕೇಂಬ್ರಿಡ್ಜ್ ಸೇರಿ ಅತ್ಯಲ್ಪ ಕಾಲದಲ್ಲಿ ಅಸಾಧಾರಣ ಪಾಂಡಿತ್ಯದ ಅಮೂಲ್ಯ ಸಂಶೋಧನೆಗಳನ್ನು ನಡೆಸಿದನು. ಇಂಗ್ಲೆಂಡಿನ ರಾಯಲ್ ಸೊಸೈಟಿಯವರು ತಮ್ಮ ಸಂಪ್ರದಾಯವನ್ನು ಅತಿಕ್ರಮಿಸಿ ಆತನನ್ನು ಫೆಲೋ ಆಗಿ ಮಾಡಿಕೊಂಡು ಗೌರವಿಸಿದರು. ಆದರೆ ಇದಾದ ಎರಡೇ ವರ್ಷಗಳಲ್ಲಿ ಪ್ರಾಯಶಃ ತನ್ನ ೩೩ನೆಯ ವರ್ಷದಲ್ಲಿ ಆತನು ಕ್ಷಯರೋಗಕ್ಕೆ ಆಹುತಿಯಾದನು. ಜೂಲಿಯನ್ ಹಕ್ಷಲೇ ಎಲ್ಲೋ ಒಂದೆಡೆಯಲ್ಲಿ ಈ ಶತಮಾನದ ಅತಿ ಶ್ರೇಷ್ಠ ಗಣಿತ ಶಾಸ್ತ್ರಜ್ಞನೆಂದರೆ ರಾಮಾನುಜಂ ಎಂದು ಹೇಳಿದ್ದಾನೆ.


ರಾಮಾನುಜಂನ ಅಲ್ಪಕಾಲಿಕ ಜೀವ ಮತ್ತು ಸಾವು ಭಾರತದ ಇಂದಿನ ಪರಿಸ್ಥಿತಿಯ ಸಂಕೇತ. ಕೋಟ್ಯನುಕೋಟಿ ಭಾರತೀಯರಲ್ಲಿ ವಿದ್ಯಾರ್ಜನೆ ಮಾಡುವವರೇ ಅತಿ ವಿರಳ. ಹಸಿವಿನಿಂದ ಸಾಯುವವರೇ ಹೆಚ್ಚು ಜನ. ಸ್ವಲ್ಪ ವಿದ್ಯಾರ್ಜನೆ ಮಾಡಿದವರಿಗೂ ದೊರೆಯುವುದು ಇಂಗ್ಲೆಂಡಿನಲ್ಲಿ ನಿರಾಶ್ರಿತರಿಗೆ ಕೊಡುವ ಭಿಕ್ಷೆಗೂ ಕೀಳಾದ ಯಾವುದೋ ಒಂದು ಕಚೇರಿಯ ಗುಮಾಸ್ತೆ ಕೆಲಸ ಜೀವನದ ಹೆಬ್ಬಾಗಿಲು ತೆರೆದರೆ, ಹೊಟ್ಟೆ ತುಂಬ ಆಹಾರ, ಆರೋಗ್ಯಕರವಾದ ಜೀವನ ಸೌಕರ್ಯ, ವಿದ್ಯಾಭ್ಯಾಸ, ಬೆಳವಣಿಗೆಗೆ ಅವಕಾಶ ಇವೆಲ್ಲ ದೊರೆತರೆ ಇವರಲ್ಲನೇಕರು ಪ್ರತಿಭಾವಂತ ವಿಜ್ಞಾನಿ ಶಿಕ್ಷಣ ಶಾಸ್ತ್ರವೇತ್ತರು, ಉದ್ಯೋಗ ಕುಶಲರು, ಕೈಗಾರಿಕಾ ಪ್ರಮುಖರು, ಲೇಖಕರು, ಕಲಾವಿದರು ಗಳು, ಆಗಿ ನವಭಾರತದ ಮತ್ತು ನೂತನ ಪ್ರಪಂಚದ ಸೃಷ್ಟಿಗೆ ಸಹಾಯಕರಾಗುತ್ತಾರೆನ್ನುವದರಲ್ಲಿ ಸಂಶಯವಿಲ್ಲ.

13