ಪುಟ:ಭಾರತ ದರ್ಶನ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಭಾರತ ದರ್ಶನ

ಜೀವನದ ಗುರಿ ಏನು ಎಂದು ವಿಜ್ಞಾನ ತಿಳಿಸುವುದು ಅತ್ಯಲ್ಪ; ಅಥವಾ ಏನನ್ನೂ ಹೇಳುವುದೇ ಇಲ್ಲ, ಈಗ ಅದರ ಮೇರೆಯೂ ವಿಶಾಲಗೊಳ್ಳುತ್ತಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಈ ಅದೃಶ್ಯ ಪ್ರಪಂಚ ವನ್ನು ಅದು ಧಾಳಿಮಾಡಬಹುದು, ಸ್ಕೂಲವಾಗಿ ಜೀವನದ ಗುರಿಯನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಬಹುದು ; ಅಥವ ಮಾನವನ ಅಸ್ತಿತ್ವದ ಸಮಸ್ಯೆಗಳ ಮೇಲೆ ಬೆಳಕು ಬೀರುವ ಕೆಲವು ಕಿರುನೋಟಗಳನ್ನೂ ಒದಗಿಸಿಕೊಡಬಹುದು.

ಧರ್ಮವು ಯೋಗ, ಅಧ್ಯಾತ್ಮ ಮತ್ತು ದರ್ಶನಗಳಲ್ಲಿ ಮಿಳಿತವಾಗಿದೆ. ಹಲವು ಆಕರ್ಷಕ ವ್ಯಕ್ತಿಗಳಿದಾರೆ, ಮಹಾಯೋಗಿಗಳಿದ್ದಾರೆ, ಅವರನ್ನೆಲ್ಲ ಆತ್ಮವಂಚಕರಾದ ಮೂಢರು ಎಂದು ತ್ಯಜಿಸಲು ಸಾಧ್ಯವಿಲ್ಲ. ಆದರೂ ಯೋಗವೆಂದರೆ (ಸಂಕುಚಿತ ದೃಷ್ಟಿಯಲ್ಲಿ ನನ್ನ ಮೈ ಮುಳ್ಳಾಗುತ್ತದೆ. ಕಟ್ಟು ನಿಟ್ಟಾದ ಮನೋನಿಗ್ರಹವಿಲ್ಲದೆ ಭಾವಜೀವನಕ್ಕೆ ಮಾರುಹೋಗುವುದು, ಉನ್ಮಾದ ಅನುಭವಗಳ ತೆರೆಗಳ ಮೇಲೆ ಜೀವಿಸುವುದು, ಅಸ್ಪಷ್ಟ, ಅಸ್ತವ್ಯಸ್ತ ಮೃದುಜೀವನ-ಇದು ಯೋಗ. ಒಂದೊಂದು ವೇಳೆ ಈ ಅನುಭವ ನಮ್ಮ ಆಂತರಿಕ ಅಗೋಚರ ವಿಧಾನಗಳಿಗೆ ಒಂದು ಒಳನೋಟ ತೋರಬಹುದು. ಆದರೆ ಅದರಿಂದ ಆತ್ಮವಂಚನೆಯೇ ಹೆಚ್ಚು ಸಂಭವ.

ಅಧ್ಯಾತ್ಮವಿದ್ಯೆ ಮತ್ತು ದರ್ಶನಶಾಸ್ತ್ರ ಅಥವ ಆಧ್ಯಾತ್ಮಿಕ-ದರ್ಶನಶಾಸ್ತ್ರ ನನ್ನ ಮನಸ್ಸಿಗೆ ಹೆಚ್ಚು ಹಿಡಿಯುತ್ತದೆ. ಇವಕ್ಕೆ ತುಂಬ ಚಿಂತನ, ತರ್ಕಶಾಸ್ತ್ರದ ಪ್ರಯೋಗ, ವಿಚಾರವಿಮರ್ಶೆ, ಅತ್ಯವಶ್ಯಕ. ಸತ್ಯವಿರಲಿ, ಇಲ್ಲದಿರಲಿ ಕೆಲವು ವಿಷಯಗಳು ಸ್ವತಃಸಿದ್ದ ಎಂದು ನಂಬಿ, ಆ ಕೆಲವು ಆಧಾರಗಳ ಮೇಲೆಯೇ ಆ ಚಿಂತನ, ತರ್ಕ ಮತ್ತು ವಿಚಾರ ವಿಮರ್ಶೆ, ಎಲ್ಲ ವಿಚಾರಪರ ವ್ಯಕ್ತಿಗಳೂ ಸ್ವಲ್ಪ ಹೆಚ್ಚು ಕಡಮೆ ಅಧ್ಯಾತ್ಮದಲ್ಲಿ ದರ್ಶನಶಾಸ್ತ್ರದಲ್ಲಿ ಕೈ ಹಾಕುತ್ತಾರೆ. ಕೈ ಹಾಕದಿರುವುದೆಂದರೆ ಈ ನಮ್ಮ ವಿಶ್ವದ ಅನೇಕ ಪ್ರಶ್ನೆಗಳನ್ನು ಅಲಕ್ಷ ಮಾಡಿದಂತೆ. ಕೆಲವರಿಗೆ ಇತರರಿಗಿಂತ ಅವುಗಳಲ್ಲಿ ಹೆಚ್ಚು ಆಸಕ್ತಿ ಇರಬಹುದು ; ಅಥವ ಕಾಲಕ್ಕನುಗುಣವಾಗಿ ಅವುಗಳ ಪ್ರಾಮುಖ್ಯತೆ ಹೆಚ್ಚು ಕಡಮೆಯಾಗಬಹುದು, ಏಷ್ಯ ಯೂರೋಪುಗಳೆರಡರಲ್ಲೂ ಹಿಂದಿನ ಕಾಲದಲ್ಲಿ ಬಾಹ್ಯ ಪ್ರಪಂಚದ ವಸ್ತುಗಳಿಗಿಂತ ಅಂತರ್ಮುಖ ಜೀವನವೇ ಉತ್ತಮವೆಂದು ಪ್ರಾಮುಖ್ಯತೆ ಕೊಡಲಾಗುತ್ತಿತ್ತು. ಇದರಿಂದ ಅಧಾತ್ಮವಿದ್ಯೆ ಮತ್ತು ದರ್ಶನಶಾಸ್ತ್ರದ ಬೆಳೆವಣಿಗೆಗೆ ಸಹಾಯವಾಯಿತು. ಆಧುನಿಕ ಮಾನವನು ಬಾಹ್ಯ ಪ್ರಪಂಚದ ವಸ್ತುಗಳಲ್ಲಿ ಹೆಚ್ಚು ಮಗ್ನನಾಗಿದ್ದಾನೆ. ಆದರೂ ಅವನೂ ಸಹ ಉತ್ಕಟಸನ್ನಿ ವೇಶದಲ್ಲಿ, ಮಾನಸಿಕ ಕ್ಲೇಶದಲ್ಲಿ ಆಧ್ಯಾತ್ಮದ ಕಡೆಗೆ, ದಾರ್ಶನಿಕ ದೃಷ್ಟಿ ಯ ಕಡೆಗೆ ತಿರುಗುತ್ತಾನೆ.

ನಮ್ಮಲ್ಲನೇಕರು ಸ್ವಲ್ಪವೂ ಯೋಚಿಸದೆ ನಮ್ಮ ತಲೆಮಾರಿನ ಮತ್ತು ಸನ್ನಿವೇಶಕ್ಕೆ ಅನ್ವಯಿಸುವ ಸಾಮಾನ್ಯ ದೃಷ್ಟಿಯನ್ನು ಒಪ್ಪಿಕೊಂಡರೂ, ನಮ್ಮಲ್ಲಿ ಎಲ್ಲರಿಗೂ ಯಾವುದೋ ಸ್ಪಷ್ಟ ಅಥವ ಅಸ್ಪಷ್ಟ ಜೀವನ ದರ್ಶನವೊಂದಿದೆ. ಕೆಲವು ಅಧ್ಯಾತ್ಮಿಕ ಭಾವನೆಗಳನ್ನು ನಾವು ಹುಟ್ಟಿ ಬೆಳೆದ ಮತ ಧರ್ಮದ ಭಾಗವೆಂದೂ ಒಪ್ಪುತ್ತೇವೆ. ಅಧ್ಯಾತ್ಮಕ್ಕೆ ನಾನು ಮನಸೋತಿಲ್ಲ. ಅಸ್ಪಷ್ಟ ಚಿಂತನೆ ನನಗೆ ಯಾವಾಗಲೂ ರುಚಿಸದು. ಆದರೂ ಪೂರ್ವಿಕರ ಮತ್ತು ಈಗಿನ ಕಾಲದ ದಾರ್ಶನಿಕರ ಅಧ್ಯಾತ್ಮಿಕ ದಾರ್ಶನಿಕ ದೃಷ್ಟಿಯ ಕಡಿದಾದ ದಾರಿಯಲ್ಲಿ ನಡೆಯಲು ಪ್ರಯತ್ನ ಪಟ್ಟು ನನಗೂ ಒಂದೊಂದು ಬಾರಿ ಒಂದು ವಿಧವಾದ ಬೌದ್ಧಿಕ ವಿಸ್ಮಯ ಉಂಟಾಗಿದೆ. ಆದರೆ ಅಲ್ಲಿ ಮನಶ್ಯಾಂತಿ ಎಂದೂ ದೊರೆತಿಲ್ಲ; ಅದರ ಮಾಯಾಜಾಲದಿಂದ ಹೊರಗೆ ಬಂದಾಗ ಮನಸ್ಸಿಗೊಂದು ತೃಪ್ತಿಯಾಗಿದೆ.

ಮುಖ್ಯವಾಗಿ, ನನಗೆ ಈ ಪ್ರಪಂಚದಲ್ಲಿ ಈ ಜೀವನದಲ್ಲಿಯೇ ಆಸಕ್ತಿ ; ಯಾವುದೋ ಬೇರೆ ಪ್ರಪಂಚ ಅಥವ ಭವಿಷ್ಯ ಜೀವನದಲ್ಲಿಲ್ಲ. ಆತ್ಮವೆಂಬುದು ಒಂದು ಇದೆಯೆ, ಸತ್ತನಂತರ ಪುನರ್ಜನ್ಮ ಇದೆಯೆ ಇಲ್ಲವೆ ನನಗೆ ತಿಳಿಯದು. ಈ ಪ್ರಶ್ನೆಗಳೆಲ್ಲ ಅತಿ ಪ್ರಾಮುಖ್ಯವಾದರೂ ಅವು ಸ್ವಲ್ಪವೂ ನನ್ನನ್ನು ಬಾಧಿಸುವುದಿಲ್ಲ. ನಾನು ಬೆಳೆದ ಸನ್ನಿವೇಶದಲ್ಲಿ ಆತ್ಮವಿದೆ, ಕಾಠ್ಯ ಕಾರಣಸಿದ್ಧಾಂತದ ಕರ್ಮವಾದದಂತೆ ಪುನರ್ಜನ್ಮವಿದೆ ಎಂಬ ನಂಬಿಕೆ ಇದೆ. ಅದರ ಪ್ರಭಾವ ನನ್ನ ಮೇಲೂ ಇದೆ. ಆದ್ದರಿಂದ ಈ ಮೂಲನಂಬಿಕೆಯಲ್ಲಿ ನನಗೂ ಸ್ವಲ್ಪ ವಿಶ್ವಾಸವಿದೆ. ಭೌತಿಕ ದೇಹ ನಶಿಸಿದಮೇಲೆ