ಪುಟ:ಭಾರತ ದರ್ಶನ.djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೩೮೫

ನೀತಿಯನ್ನು ಬಿಡಬೇಕು........... ಪ್ರಜಾಪ್ರಭುತ್ವ ಪಡೆದ ಸ್ವತಂತ್ರ ಭಾರತವು ಆಕ್ರಮಣ ವಿರೋಧಕ್ಕಾಗಿ ಮತ್ತು ಆರ್ಥಿಕ ಸಹಕಾರಕ್ಕಾಗಿ ಇತರ ಸ್ವತಂತ್ರ ರಾಷ್ಟ್ರಗಳೊಡನೆ ಪರಸ್ಪರ ಸಹಕರಿಸಿ ನಡೆಯಲು ಸಂತೋಷದಿಂದ ಒಪ್ಪುತ್ತದೆ. ಪ್ರಪಂಚದ ಜ್ಞಾನ ಮತ್ತು ಪ್ರಕೃತಿ ಸಂಪತ್ತನ್ನು ಮಾನವ ಕುಲದ ಪ್ರಗತಿ ಮತ್ತು ಅಭ್ಯುದಯಕ್ಕಾಗಿ ಉಪಯೋಗಿಸಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಹೊಸದೊಂದು ಪ್ರಪಂಚದ ನಿರ್ಮಾಣಕ್ಕೆ ಭಾರತವು ದುಡಿಯಲು ಸದಾ ಸಿದ್ಧವಿದೆ” ಎಂದು ತಿಳಿಸಿದೆವು.

ಕಾಂಗ್ರೆಸ್ ಕಾರ್ಯಸಮಿತಿಯ ದೃಷ್ಟಿಯು ಪೂರ್ಣ ರಾಷ್ಟ್ರೀಯವಿದ್ದರೂ ತನ್ನ ಅಂತರರಾಷ್ಟ್ರೀಯ ದೃಷ್ಟಿಯನ್ನೂ ಅದರಲ್ಲಿ ವ್ಯಕ್ತಗೊಳಿಸಿತು. ಶಸ್ತ್ರಸಜ್ಜಿತ ಸೈನ್ಯಗಳ ಹೋರಾಟ ಮಾತ್ರ ಯುದ್ಧವಲ್ಲ ಎಂದು ಹೇಳಿತು. “ಯೂರೋಪಿಗೆ ಒದಗಿರುವ ಗಂಡಾಂತರ ಯೂರೋಪಿನದು ಮಾತ್ರವಲ್ಲ; ಅದು ಇಡೀ ಮಾನವ ಪ್ರಪಂಚದ್ದು. ಈ ಯುದ್ಧ ಇತರ ಯುದ್ದಗಳಂತೆ, ಗಂಡಾಂತರಗಳಂತೆ ಇಂದಿನ ಪ್ರಪಂಚವನ್ನು ಈಗಿರುವಂತೆಯೇ ಬಿಡುವುದಿಲ್ಲ. ಒಳ್ಳೆಯದಕ್ಕೂ ಕೆಟ್ಟುದಕ್ಕೂ ಪ್ರಪಂಚದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನೇ ವ್ಯತ್ಯಾಸಗೊಳಿಸುತ್ತದೆ. ಕಳೆದ ಮಹಾ ಯುದ್ಧದಿಂದ ಈಚೆಗೆ ವಿಶೇಷ ಬೆಳೆದ ರಾಜಕೀಯ ಮತ್ತು ಸಾಮಾಜಿಕ ದ್ವೇಷ ಮತ್ತು ಘರ್ಷಣೆಗಳ ಅನಿವಾರ್ಯ ಪರಿಣಾಮವೇ ಈ ಯುದ್ಧ. ಈ ದ್ವೇಷಾಸೂಯೆ ಮತ್ತು ತಿಕ್ಕಾಟ ನಿರ್ಮೂಲವಾಗಿ ಪ್ರಪಂಚದಲ್ಲಿ ಒಂದು ಹೊಸ ಸಮತೋಲನೆ ಬರುವವರೆಗೂ ಈ ಅಪಾಯ ಮುಂದೆಯೂ ತಪ್ಪಿದ್ದಲ್ಲ ಆ ಸಮತೋಲನ ದೃಷ್ಟಿ ಬರಬೇಕಾದರೆ ಪರರಾಷ್ಟ್ರಗಳ ಆಕ್ರಮಣ ಮತ್ತೂ ಸುಲಿಗೆಗಳು ನಿಲ್ಲಬೇಕು ; ಸರ್ವರ ಸುಖಕ್ಕಾಗಿ ನ್ಯಾಯಬದ್ಧ ತಳಹದಿಯ ಮೇಲೆ ಹೊಸ ಆರ್ಥಿಕ ನೀತಿ ಏರ್ಪಡಬೇಕು. ಭಾರತವೇ ಈ ಪ್ರಶ್ನೆಯ ಮುಖ್ಯ ಒರೆಗಲ್ಲು; ಆಧುನಿಕ ಸಾಮ್ರಾಜ್ಯ ನೀತಿಯ ದವಡೆಯಲ್ಲಿ ಸಿಕ್ಕಿ ನರಳುತ್ತಿರುವ ರಾಷ್ಟ್ರಗಳಲ್ಲಿ ಅದೇ ಮುಖ್ಯ ನಿದರ್ಶನ. ಭಾರತದ ಸಮಸ್ಯೆ ಪರಿಹಾರವಾಗುವವರೆಗೆ ಪ್ರಪಂಚದ ಸಮಸ್ಯೆಗಳ ಪರಿಹಾರಕ್ಕೆ ಯಾವ ಹೊಸ ಯೋಜನೆಯೂ ಯಶಸ್ವಿಯಾಗಲು ಸಾಧ್ಯವಿಲ್ಲ. ಅಪಾರ ಪ್ರಕೃತಿ ಸಂಪತ್ತು ಇರುವ ಭಾರತವು ಪ್ರಪಂಚ ವ್ಯವಸ್ಥೆಯಲ್ಲಿ ಯೋಗ್ಯ ಪಾತ್ರ ವಹಿಸಲೇಬೇಕು. ಆದರೆ ಈ ಮಹತ್ಸಾಧನೆಯಲ್ಲಿ ಯೋಗ್ಯರೀತಿ ಶ್ರಮಿಸಬೇಕಾದರೆ ಭಾರತದ ಬಂಧನಗಳೆಲ್ಲ ಕಳಚಬೇಕು ; ಗರಿಗೆದರಿ ಹೊಸ ಚೈತನ್ಯದಿಂದ ಭಾಗವಹಿಸಲು ಅನುಕೂಲವಾಗ ಬೇಕಾದರೆ ಸ್ವತಂತ್ರ ರಾಷ್ಟ್ರವಾದರೆ ಮಾತ್ರ ಸಾಧ್ಯ. ಸ್ವಾತಂತ್ರವು ಇಂದು ಅಖಂಡವಿದೆ. ಸಾಮ್ರಾಜ್ಯ ಹಿಡಿತದ ಭದ್ರತೆಗೆಂದು ಹೂಡಿದ ಪ್ರಯತ್ನವು ಯಾವುದೇ ಇರಲಿ, ಪ್ರಪಂಚದ ಯಾವ ಭಾಗದಲ್ಲೇ ಇರಲಿ ಅದರಿಂದ ಹೊಸ ವಿಪತ್ತು ಖಂಡಿತ” ಎಂದು ಸಾರಿದೆವು.

ಯೂರೋಪಿನ ಪ್ರಜಾಪ್ರಭುತ್ವದ ರಕ್ಷಣೆಗೆಂದು ನಾಮುಂದೆ ತಾಮುಂದೆ ಎಂದು ಹಾತೊರೆಯುತ್ತಿದ್ದ ಭಾರತದ ಸಂಸ್ಥಾನಗಳ ರಾಜರುಗಳಿಗೆ “ನಿರಂಕುಶ ಸರ್ವಾಧಿಕಾರ ತಾಂಡವವಾಡುತ್ತಿರುವ ನಿಮ್ಮ ಸಂಸ್ಥಾನಗಳಲ್ಲಿ ಮೊದಲು ಪ್ರಜಾಪ್ರಭುತ್ವ ಸ್ಥಾಪಿಸಿ ಎಂದು ಕಾಂಗ್ರೆಸ್ ಕಾರ್ಯಸಮಿತಿ ಸೂಚನೆಕೊಟ್ಟಿತು.

ಸಾಧ್ಯವಾದ ಎಲ್ಲ ರೀತಿಯ ಸಹಾಯಕೊಡಲು ಕಾರ್ಯ ಸಮಿತಿ ಕಾತರವಿದೆ ಎಂದೂ, ಆದರೆ "ಇಂದಿನ ಮತ್ತು ಹಿಂದಿನ ಬ್ರಿಟಿಷ್ ಕಾರ್ಯನೀತಿಯಲ್ಲಿ ಪ್ರಜಾಪ್ರಭುತ್ವ ಅಥವ ಸ್ವಯಂ ನಿರ್ಣಯಾಧಿಕಾರ ಸ್ಥಾಪನೆಗೆ ಯಾವ ಪ್ರಯತ್ನವೂ ಕಾಣುವುದಿಲ್ಲವೆಂದೂ, ಬ್ರಿಟಿಷ್ ಸರಕಾರದ ಇಂದಿನ ಯುದ್ಧ ಘೋಷಣೆಯ ಆದರ್ಶಗಳನ್ನೂ ಭಾರತದಲ್ಲಿ ಕಾರ್ಯರೂಪಕ್ಕೆ ತರಲಾಗುತ್ತದೆ ಅಥವ ತರುವ ಉದ್ದೇಶವಿದೆ ಎಂಬ ಯಾವ ಭರವಸೆಯೂ ಇಲ್ಲವೆಂದೂ” ತಿಳಿಸಲಾಯಿತು. “ಇಂದಿನ ಪರಿಸ್ಥಿತಿಯ ಉತ್ಕಟಾ ವಸ್ಥೆಯನ್ನೂ ದೈನಂದಿನ ಘಟನೆಗಳು ಮನೋವೇಗದಿಂದ ಅತಿ ರಭಸದಲ್ಲಿ ಒಂದರಮೇಲೊಂದು ಸಂಭವಿಸುತ್ತಿರುವುದನ್ನೂ ಗಮನಿಸಿ ಕಾರ್ಯ ಸಮಿತಿಯು ಈಗಲೇ ಅಂತ್ಯ ತೀರ್ಮಾನಕ್ಕೆ ಬರುವುದಿಲ್ಲವೆಂದೂ ಯುದ್ಧದ ನಿಜವಾದ ಸಮಸ್ಯೆಗಳೇನು, ಗುರಿಗಳೇನು, ಈಗ ಮತ್ತು ಮುಂದೆ ಭಾರತದ ಸ್ಥಾನಮಾನವೇನು ಎಂಬ ಪೂರ್ಣ ವಿವರಣೆಗೆ ಕಾಯುವುದೆಂದೂ” ತಿಳಿಸಿತು. ಆದ್ದರಿಂದ “ಬ್ರಿಟಿಷ್ ಸರಕಾರ ಪ್ರಜಾಪ್ರಭುತ್ವ, ಸಾಮ್ರಾಜ್ಯನೀತಿ, ಪ್ರಪಂಚದ ಹೊಸ ವ್ಯವಸ್ಥೆ ಇವುಗಳ ವಿಷಯದಲ್ಲಿ ತಮ್ಮ ಯುದ್ಧನೀತಿ

27