ಪುಟ:ಭಾರತ ದರ್ಶನ.djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೩೮೭

ಸಹದ್ಯೋಗಿಗಳು ಎಂದು ನಮ್ಮನ್ನು ಕಾಣಲು ಅವರು ಸಿದ್ಧರಿರಲಿಲ್ಲ; ಅವರು ಹೇಳಿದಂತೆ ಕೇಳುವ ದಾಸರಾಗಿ ನಾವು ಉಳಿದಿರಬೇಕೆಂದೇ ಅವರ ಇಷ್ಟವೆಂದು ಸ್ಪಷ್ಟವಾಯಿತು. 'ಸಹಕಾರ' ಎಂಬ ಪದಕ್ಕೆ ಅವರ ಅರ್ಥವೇ ಬೇರೆಯಾಯಿತು, ನಮ್ಮದೇ ಬೇರೆ ಆಯಿತು. ನನಗೆ ಸಹಕಾರವೆಂದರೆ ಸಮಾನ ವ್ಯಕ್ತಿಗಳ ಮತ್ತು ಸ್ನೇಹಿತರ ಸಹಕಾರ; ಅವರಿಗೆ ಸಹಕಾರವೆಂದರೆ ಅವರು ಆಜ್ಞೆ ಮಾಡುವುದು, ನಾವು ತುಟಿಪಿಟ್ಟಿನ್ನದೆ ಅವರ ಆಜ್ಞೆ ಪಾಲಿಸುವುದು. ಯಾವುದಕ್ಕಾಗಿ ನಮ್ಮ ಜೀವಮಾನವೆಲ್ಲ ಹೋರಾಡಿದ್ದೆವೊ ಮತ್ತು ಯಾವುದು ನಮ್ಮ ಜೀವನಕ್ಕೊಂದು ಅರ್ಥ ಕೊಟ್ಟಿತ್ತೊ ಆ ಉನ್ನತ ಆದರ್ಶವನ್ನು ಮಣ್ಣು ಗೂಡಿಸದೆ, ಅದಕ್ಕೆ ದ್ರೋಹಮಾಡದೆ ಅವರಂತೆ ನಡೆಯಲು ಸಾಧ್ಯವಿರಲಿಲ್ಲ. ನಮ್ಮಲ್ಲಿ ಕೆಲವರು ಒಪ್ಪಿದರೂ ಜನರು ಮಾತ್ರ ನಮ್ಮ ನೀತಿಯನ್ನೆಂದೂ ಒಪ್ಪುತ್ತಿರಲಿಲ್ಲ. ರಾಷ್ಟ್ರೀಯ ಆಂದೋಲನದಿಂದ ನಮ್ಮನ್ನು ಹೊರದೂಡಿ ರಾಷ್ಟ್ರ ಘಾತಕರೆಂದು ಬಹಿಷ್ಕರಿಸುತ್ತಿದ್ದರು. ಅಲ್ಲದೆ ನಮ್ಮ ಅಂತರರಾಷ್ಟ್ರೀಯ ನೀತಿಯೂ ಮಣ್ಣುಗೂಡುತ್ತಿತ್ತು.

ನಮ್ಮ ಪ್ರಾಂತ ಸರಕಾರಗಳ ಪರಿಸ್ಥಿತಿ ಬಹಳ ಚಿಂತಾಜನಕವಾಯಿತು. ನಿತ್ಯ ಗೌರ್ನರ್ ಅಥವ ವೈಸರಾಯ್ ಮಧ್ಯೆ ಪ್ರವೇಶಿಸಿದುದಕ್ಕೆ ಸಮ್ಮತಿಸಬೇಕು ಅಥವ ಅವರೊಂದಿಗೆ ಹೋರಾಟ ನಡೆಸಬೇಕು. ಉನ್ನತ ಅಧಿಕಾರಿಗಳೆಲ್ಲ ಗೌರ್ನರ್ ಕಡೆ, ಮಂತ್ರಿಗಳನ್ನೂ ಶಾಸನ ಸಭೆಗಳನ್ನೂ ಮೊದಲಿಗಿಂತ ಈಗ ಇನ್ನೂ ಹೆಚ್ಚು ಪರಕೀಯರಂತೆ ಕಂಡರು. ನಿರಂಕುಶ ರಾಜ ಅಥವ ರಾಜ ಪ್ರತಿನಿಧಿಗಳಿಗೂ ಪಾರ್ಲಿಮೆಂಟಿಗೂ ನಡೆದ ಘಟನಾತ್ಮಕ ಹೋರಾಟದಂತೆ ಇಲ್ಲಿಯೂ ಹೋರಾಟ ಆರಂಭವಾಯಿತು. ಒಂದು ವ್ಯತ್ಯಾಸವೆಂದರೆ ಇಲ್ಲಿ ಆ ರಾಜ ಮತ್ತು ರಾಜಪ್ರತಿನಿಧಿಗಳು ಪರಕೀಯರು ಮತ್ತು ಅವರ ಶಕ್ತಿ ಎಲ್ಲ ಅವರ ಸೈನ್ಯಶಕ್ತಿಯಲ್ಲಿ. ಹನ್ನೊಂದು ಪ್ರಾಂತಗಳಲ್ಲಿ ಬಂಗಾಳ, ಪಂಜಾಬ್ ಮತ್ತು ಸಿಂಧ್ ಈ ಮೂರು ಪ್ರಾಂತಗಳನ್ನು ಇದು ಎಂಟು ಪ್ರಾಂತ್ಯಗಳ ಕಾಂಗ್ರೆಸ್ ಸರಕಾರಗಳು ಪ್ರತಿಭಟಿಸಿ ರಾಜೀನಾಮೆ ಕೊಡಬೇಕೆಂದು ತೀರ್ಮಾನಿಸಿದೆವು. ಕೆಲವರು ಗೌರ್ನರ್‌ ತಾನಾಗಿ ಮಂತ್ರಿಮಂಡಲ ವಿಸರ್ಜಿಸುವವರೆಗೆ ಅಧಿಕಾರ ನಡೆಸ ಬೇಕೆಂದರು. ದಿನದಿನವೂ ಘರ್ಷಣೆ ಹೆಚ್ಚುತ್ತ ಬಂದ ಕಾರಣ ರಾಜೀನಾಮೆ ಕೊಡದಿದ್ದರೆ ಗೌರರ ಮಂತ್ರಿಮಂಡಲ ವಿಸರ್ಜಿಸುವುದು ಖಂಡಿತವೆಂದು ಸ್ಪಷ್ಟವಾಯಿತು. ವಿಧಾನ ರೀತಿಯಲ್ಲಿ ರಾಜೀನಾಮೆ ಕೊಟ್ಟು ಶಾಸನ ಸಭೆಗಳನ್ನು ರದ್ದುಗೊಳಿಸಿ ಹೊಸ ಚುನಾವಣೆ ನಡೆಸಲು ಅವಕಾಶ ಕಲ್ಪಿಸಿದೆವು. ಕಾಂಗ್ರೆಸ್ ಮಂತ್ರಿಮಂಡಲಗಳಿಗೆ ಬಹುಮತವಿದ್ದುದರಿಂದ ಬೇರೆ ಮಂತ್ರಿಮಂಡಲ ರಚನೆಯು ಸಾಧ್ಯವೇ ಇರಲಿಲ್ಲ. ಗೌರ್ನರುಗಳಿಗೆ ಹೊಸ ಚುನಾವಣೆ ಬೇಕಿರಲಿಲ್ಲ. ಪುನಃ ಕಾಂಗ್ರೆಸ್ಸಿಗೆ ಇನ್ನೂ ಹೆಚ್ಚಿನ ಬಹುಮತ ದೊರೆಯುವುದೆಂದು ಅವರಿಗೆ ತಿಳಿದಿತ್ತು. ಆದ್ದರಿಂದ ಶಾಸನ ಸಭೆ ವಿಸರ್ಜಿಸದೆ ಪ್ರಾಂತ ಸರ್ಕಾರದ ಮತ್ತು ಶಾಸನ ಸಭೆಗಳ ಅಧಿಕಾರವನ್ನೆಲ್ಲ ತಮ್ಮ ಕೈಗೇ ತೆಗೆದುಕೊಂಡರು. ಪ್ರಾಂತಗಳಲ್ಲಿ ಅವರೇ ಸರ್ವಾಧಿಕಾರಿಗಳಾಗಿ ಯಾವ ಶಾಸನ ಸಭೆಯ ಅಥವ ಸಾರ್ವಜನಿಕ ಅಭಿಪ್ರಾಯದ ಅಂಕೆಯೂ ಇಲ್ಲದೆ ಮನಸ್ಸು ಬಂದ ಶಾಸನ ಮಾಡಿ, ತೀರ್ಪುಕೊಟ್ಟು ನಿರಂಕುಶಾಧಿಕಾರ ನಡೆಸಲು ತೊಡಗಿದರು.

ಪ್ರಾಂತ ಸರಕಾರಗಳಿಗೆ ರಾಜಿನಾಮೆ ಕೊಡ ಹೇಳಿ ಕಾಂಗ್ರೆಸ್ ಕಾರಸಮಿತಿಯು ಸರ್ವಾಧಿಕಾರ ತೋರಿಸಿತು ಎಂದು ಬ್ರಿಟಿಷ್ ಪ್ರಮುಖರು ಕಾಂಗ್ರೆಸ್ಸನ್ನು ದೂರಿದ್ದಾರೆ. ಫ್ಯಾಸಿಸ್ಟ್ ಮತ್ತು ನಾಜಿ ದೇಶಗಳನ್ನು ಬಿಟ್ಟರೆ ಬೇರೆ ಎಲ್ಲೂ ಕಾಣದ ನಿರಂಕುಶ ಸರ್ವಾಧಿಕಾರದಿಂದ ಆಡಳಿತ ನಡೆಸಿದವರೇ ಈ ರೀತಿ ದೂರುವುದೂ ಒಂದು ವಿಚಿತ್ರ. ಶಾಸನ ಸಭೆಗಳ ಚುನಾವಣೆಗಳಲ್ಲಿ ಭಾಗವಹಿಸಿ, ಚುನಾಯಿತರಾಗಿ ಬಂದ ಮೇಲೆ ಪ್ರಾಂತಾಡಳಿತ ಸ್ವಾತಂತ್ರದಲ್ಲಿ ಗವರ್ನರ್ ಆಗಲಿ ವೈಸರಾಯ್ ಆಗಲಿ ಪ್ರವೇಶಿಸುವುದಿಲ್ಲ ಎಂದು ವೈಸರಾಯ್ ಕೊಟ್ಟ ಭರವಸೆಯ ಮೇಲೆಯೇ ಕಾಂಗ್ರೆಸ್ಸು ಪ್ರಾಂತಗಳಲ್ಲಿ ಮಂತ್ರಿ ಮಂಡಲ ರಚಿಸಿ ಅಧಿಕಾರ ವಹಿಸಿಕೊಂಡು ಇತ್ತು. ಆ ಭರವಸೆಯೇ ಕಾಂಗ್ರೆಸ್ ನೀತಿಯ ಆಧಾರವಾಗಿತ್ತು. ಈಗ ಹೆಜ್ಜೆ ಹೆಜ್ಜೆಗೂ ಅಡ್ಡ ಬರುವುದೇ ನಿತ್ಯ ವಿಧಿಯಾಯಿತು. ೧೯೩೫ನೇ ಇಂಡಿಯಾ ಶಾಸನದ ಪ್ರಕಾರ ಪ್ರಾಂತಸರಕಾರಗಳಿಗಿದ್ದ ಅಲ್ಪ ಅಧಿಕಾರವನ್ನೂ ಕಿತ್ತುಕೊಂಡರೂ ಯುದ್ಧ ಕಾರ್ಯಗಳಿಗೆಂದು