ಪುಟ:ಭಾರತ ದರ್ಶನ.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೩೯೯

೧೯೩೯ನೆ ಸೆಪ್ಟೆಂಬರ್‌ನಲ್ಲಿ ಯುದ್ಧ ಆರಂಭವಾದಾಗ ಈ ಪ್ರಶ್ನೆ ಏಳಲೂ ಇಲ್ಲ ; ನಾವು ಚರ್ಚೆ ಮಾಡಲೂ ಇಲ್ಲ. ೧೯೪೦ನೆಯ ಬೇಸಗೆಯಲ್ಲಿ ಮಾತ್ರ ಯಾವ ಹಿಂಸಾತ್ಮಕ ಯುದ್ಧದಲ್ಲೂ ಭಾಗಿಯಾಗಲು ತಮ್ಮಿಂದ ಸಾಧ್ಯವಿಲ್ಲವೆಂದೂ ಕಾಂಗ್ರೆಸ್ ಸಹ ಅದೇ ನೀತಿ ಅನುಸರಿಸಿದರೆ ತಮಗೆ ಇಷ್ಟವೆಂದೂ ತಿಳಿಸಿದ್ದರು. ಯುದ್ಧದಲ್ಲಿ ಶಸ್ತ್ರಸಜ್ಜಿತರಾಗಿ ಪ್ರತ್ಯಕ್ಷ ಹೋರಾಟದಲ್ಲಿನ ಸಹಾಯ ಒಂದನ್ನು ಬಿಟ್ಟು ಸೈನಿಕ ಮತ್ತು ಇತರ ಎಲ್ಲ ಬೆಂಬಲ ಕೊಡಲು ತಮ್ಮ ಒಪ್ಪಿಗೆ ಇದೆ ಎಂದರು. ಸ್ವತಂತ್ರ ಭಾರತವು ಸಹ ಅಹಿಂಸಾ ತತ್ತ್ವದಿಂದಲೇ ನಡೆಯುವುದೆಂದು ಕಾಂಗ್ರೆಸ್ಸು ತನ್ನ ನೀತಿಯನ್ನು ಸ್ಪಷ್ಟಪಡಿಸಬೇಕೆಂದರು. ದೇಶದಲ್ಲಿ ಕಾಂಗ್ರೆಸೇತರರಲ್ಲದೆ ಕಾಂಗ್ರೆಸ್ಸಿನಲ್ಲಿ ಸಹ ಅನೇಕರಿಗೆ ಅಂಹಿಸಾತತ್ಯದಲ್ಲಿ ನಂಬಿಕೆ ಇರಲಿಲ್ಲವೆಂದು ಅವರಿಗೆ ತಿಳಿದಿತ್ತು. ದೇಶದ ರಕ್ಷಣೆಯ ಪ್ರಶ್ನೆ ಬಂದಾಗ, ಸೈನ್ಯ, ನಾವೆ ಮತ್ತು ವಿಮಾನದಳ ರಚಿಸುವಾಗ ಸ್ವತಂತ್ರ ಭಾರತದ ಸರಕಾರ ಅಹಿಂಸಾ ತಮ್ಮ ಬಿಡುವುದೆಂದು ಸಹ ತಿಳಿದಿದ್ದರು. ಸಾಧ್ಯವಾದರೆ ಕಾಂಗ್ರೆಸ್ಸು ಸಂಸ್ಥೆಯಾದರೂ ಅಹಿಂಸೆಯ ಧ್ವಜ ಇಳಿಸದೆ ಜನರಿಗೆ ಒಂದು ಮಾನಸಿಕ ಶಿಕ್ಷಣ ಕೊಟ್ಟು, ಹೆಚ್ಚು ಶಾಂತಿ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕೆಂದು ಅವರ ಇಚ್ಛೆಯಾಗಿತ್ತು. ಭಾರತವನ್ನು ಶಸ್ತ್ರಸಜ್ಜಿತ ಮಾಡಲು ಅವರಿಗೆ ಇಷ್ಟವಿರಲಿಲ್ಲ. ಭಾರತವು ಆಹಿಂಸಾ ನೀತಿಯ ಸಂಕೇತವೂ ಆದರ್ಶವೂ ಆಗಿ, ಆ ತನ್ನ ಆದರ್ಶದ ಪ್ರಭಾವವನ್ನು ಪ್ರಪಂಚದ ಇತರ ರಾಷ್ಟ್ರಗಳ ಮೇಲೆ ಬೀರಿ, ಅವುಗಳನ್ನು ಯುದ್ಧ ಮತ್ತು ಹಿಂಸಾಮಾರ್ಗಗಳಿಂದ ತಿರುಗಿಸಿ ಶಾಂತಿ ಮಾರ್ಗದಲ್ಲಿ ಕರೆದೊಯ್ಯಬೇಕೆಂದು ಅವರ ಕನಸಾಗಿತ್ತು. ಭಾರತವೆಲ್ಲ ಸಂಪೂರ್ಣ ಈ ತತ್ತ್ವ ಒಪ್ಪದಿದ್ದರೂ ಕಾಂಗ್ರೆಸ್ ಮಾತ್ರ ತನ್ನ ಸತ್ವ ಪರೀಕ್ಷೆ ಕಾಲದಲ್ಲಿ ಹಿಂದೆಗೆಯುವುದು ಅವರಿಗೆ ಇಷ್ಟವಿರಲಿಲ್ಲ.

ನಮ್ಮ ಸ್ವಾತಂತ್ರ್ಯದ ಹೋರಾಟ ಮತ್ತು ರಾಷ್ಟ್ರದ ಐಕ್ಯತೆಗಳ ಸಾಧನೆಗಾಗಿ ಅಹಿಂಸಾ ತತ್ವವನ್ನೂ ಮಾರ್ಗವನ್ನೂ ಬಹಳ ದಿನಗಳ ಮುಂಚೆಯೇ ಕಾಂಗ್ರೆಸ್ ಒಪ್ಪಿತ್ತು. ಅದಕ್ಕಿಂತ ಹೆಚ್ಚು ಮುಂದೆ ಎಂದೂ ಹೋಗಿರಲಿಲ್ಲ; ಹೊರಗಿನ ಆಕ್ರಮಣ ಪ್ರತಿಭಟನೆ ಅಥವ ಒಳದಂಗೆಯ ಉಪಶಮನಗಳಲ್ಲಿ ಈ ಮಾರ್ಗ ಯಾವಾಗಲೂ ಒಪ್ಪಿರಲಿಲ್ಲ. ಭಾರತೀಯ ಸೈನ್ಯದ ಬೆಳೆವಣಿಗೆಯಲ್ಲಿ ಕಾಂಗ್ರೆಸ್ಸು ತೀವ್ರ ಆಸಕ್ತಿ ವಹಿಸಿತ್ತು; ಸೈನ್ಯದ ಅಧಿಕಾರಿವರ್ಗವೆಲ್ಲ ಭಾರತೀಯರೇ ಇರಬೇಕೆಂದು ಪದೇ ಪದೇ ಒತ್ತಾಯಮಾಡಿತ್ತು. ಕೇಂದ್ರ ಶಾಸನ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಈ ವಿಷಯ ಅನೇಕ ನಿರ್ಣಯಗಳನ್ನು ಮಂಡಿಸಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ನಾಯಕರಾಗಿ ನನ್ನ ತಂದೆಯವರು ಭಾರತೀಯ ಸೈನ್ಯದ ಭಾರತೀಕರಣ ಮತ್ತು ಪುನರ್ವ್ಯವಸ್ಥೆಗಾಗಿ ಏರ್ಪಟ್ಟು ಸ್ಕೀನ್ ಸಮಿತಿಯಲ್ಲಿ ಸದಸ್ಯರಾಗಿ ಕೆಲಸಮಾಡಿದ್ದರು. ಆಮೇಲೆ ಅವರು ರಾಜೀನಾಮೆ ಕೊಟ್ಟರೂ ಅದು ರಾಜಕೀಯ ಕಾರಣಗಳಿಗಾಗಿ ವಿನಾ ಅಹಿಂಸಾತತ್ವಕ್ಕಾಗಿ ಅಲ್ಲ. ೧೯೩೭-೩೮ರಲ್ಲಿ ಕಾಂಗ್ರೆಸ್ ಪ್ರಾಂತಸರ್ಕಾರಗಳ ಅಭಿಪ್ರಾಯ ಪಡೆದು ಭಾರತೀಯ ಸೈನ್ಯದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿಸಬೇಕೆಂದೂ, ಯಂತ್ರಸಜ್ಜಿತಗೊಳಿಸಬೇಕೆಂದೂ ಸಣ್ಣ ಆಟಿಕೆಗಳಂತಿದ್ದ ಭಾರತೀಯ ನಾವಿಕಾಪಡೆ ಮತ್ತು ವಿಮಾನಪಡೆಗಳನ್ನು ವಿಸ್ತರಿಸಬೇಕೆಂದೂ ಕ್ರಮೇಣ ಭಾರತದ ಸೇನೆಯ ಬ್ರಿಟಿಷ್ ಅಧಿಕಾರಿಗಳ ಸ್ಥಾನಗಳಲ್ಲಿ ಭಾರತೀಯರನ್ನೇ ನೇಮಿಸಬೇಕೆಂದೂ ಕಾಂಗ್ರೆಸ್ ಪಕ್ಷವು ಕೇಂದ್ರ ಶಾಸನ ಸಭೆಯಲ್ಲಿ ಸಲಹೆಮಾಡಿತ್ತು. ಬ್ರಿಟಿಷ್ ಸೈನ್ಯಗಳ ವೆಚ್ಚವು ಭಾರತೀಯ ಸೈನ್ಯದ ನಾಲ್ಕರಷ್ಟು ಇತ್ತು. ಬ್ರಿಟಿಷ್ ಸೈನ್ಯಗಳ ಬದಲು ಭಾರತೀಯ ಸೈನ್ಯವೇ ಇದ್ದರೆ ಯಾವ ಹೆಚ್ಚಿನ ವೆಚ್ಚವೂ ಇಲ್ಲದೆ ಸೈನ್ಯವನ್ನು ಯಂತ್ರ ಸಜ್ಜಿತಮಾಡಲು ಸಾಧ್ಯವಿತ್ತು. ಮೂನಿಚ್ ಘಟನೆಯ ಸಮಯದಲ್ಲಿ ಭಾರತೀಯರ ವಿಮಾನಪಡೆ ಹೆಚ್ಚಿಸಲು ಒತ್ತಾಯಮಾಡಿದ್ದಕ್ಕೆ ನಿಪುಣರ ಅಭಿಪ್ರಾಯಕ್ಕೆ ಅದು ವಿರುದ್ಧ ಎಂದು ಸರಕಾರವು ಉತ್ತರಕೊಟ್ಟಿತ್ತು. ೧೯೪೦ರಲ್ಲಿ ಕಾಂಗ್ರೆಸ್ ಪಕ್ಷವು ಉದ್ದೇಶಪಟ್ಟು ಕೇಂದ್ರಶಾಸನಸಭೆಗೆ ಹೋಗಿ ಅದೇ ವಾದ ಹೂಡಿ ಭಾರತರಕ್ಷಣೆಯ ಜವಾಬ್ದಾರಿ ವಹಿಸಲು ಇಂಡಿಯ ಸರಕಾರವೂ ಅದರ ಸೈನ್ಯಖಾತೆಯೂ ತೀರ ಅಸಮರ್ಥ ಎಂದು ಖಂಡಿಸಿತ್ತು.

ನನಗೆ ಗೊತ್ತಿರುವಮಟ್ಟಿಗೆ ಸೈನ್ಯ, ನಾವಿಕಾಪಡೆ, ವಿಮಾನಪಡೆ, ಮತ್ತು ಪೋಲೀಸ್ ಪಡೆಗಳ ಸಂಬಂಧದಲ್ಲಿ ಅಹಿಂಸಾತತ್ವ ಸಾಧ್ಯವೆಂದು ನಾವು ಯಾವಾಗಲೂ ಯೋಚಿಸಿ ಸಹ ಇರಲಿಲ್ಲ. ನಮ್ಮ