ಪುಟ:ಭಾರತ ದರ್ಶನ.djvu/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೬

ಭಾರತ ದರ್ಶನ

ಕಾರ್ಯದರ್ಶಿಗಳ ಕೈಗೊಂಬೆಯಾಗಿತ್ತು. ಅಧಿಕಾರವೆಲ್ಲ ವೈಸರಾಯ್ ಕೈಯಲ್ಲೇ ಕೇಂದ್ರೀಕೃತವಾಗಿತ್ತು. ಶಾಸನ ಮಾಡಿ ಬದಲಾವಣೆ ಮಾಡಲು ಕಾಲಾವಕಾಶ ಬೇಕೆಂದೂ ಅರಿತಿದ್ದೆವು; ಆದ್ದರಿಂದ ಅದಕ್ಕೆ ಒತ್ತಾಯಪಡಿಸದೆ ವೈಸರಾಯ್ ಈ ಸಲಹಾಮಂಡಲಿಯನ್ನೇ ಮಂತ್ರಿ ಸಂಪುಟವೆಂದು ಭಾವಿಸಿ ಅವರ ತೀರ್ಮಾನಗಳಿಗೆ ಒಪ್ಪುವ ಒಂದು ಸಂಪ್ರದಾಯ ಸ್ಥಾಪಿಸಬೇಕೆಂದು ಕೇಳಿದೆವು. ಈಗ ಅದು ಸಾಧ್ಯವಿಲ್ಲವೆಂದೂ, ತತ್ವಶಃ ಮತ್ತು ಕಾರ್ಯತಃ ವೈಸರಾಯ್ ಅಧಿಕಾರದಲ್ಲಿ ಯಾವ ವ್ಯತ್ಯಾಸವೂ ಮಾಡಲು ಅಸಾಧ್ಯವೆಂದೂ ತಿಳಿಸಿದನು. ನಮ್ಮ ಹಿಂದಿನ ಸಂಭಾಷಣೆಗಳೆಲ್ಲ ಬೇರೆ ಮಟ್ಟದಲ್ಲಿ ನಡೆದಿದ್ದು ಇಂದಿನ ಪರಿಸ್ಥಿತಿಯೇ ವಿಚಿತ್ರವಾಗಿತ್ತು. ಈ ವ್ಯತ್ಯಾಸ ನಂಬುವುದೇ ಕಷ್ಟವಾಯಿತು.

ಭಾರತವು ಹೆಚ್ಚು ಸಾಮರ್ಥ್ಯದಿಂದ ಯಾವ ರೀತಿ ಎದುರಿಸಬಹುದೆಂದು ಚರ್ಚೆ ಮಾಡಿದೆವು. ಭಾರತದ ಸೈನ್ಯವೂ ಒಂದು ರಾಷ್ಟ್ರೀಯ ಸೈನ್ಯ ಎಂಬ ಭಾವನಾ ದೃಷ್ಟಿ ಕೊಟ್ಟು, ಯುದ್ಧ ಪ್ರಯತ್ನದಲ್ಲಿ ದೇಶ ವಾತ್ಸಲ್ಯ ಭಾವನೆ ಹುಟ್ಟಿಸಲು ಕಾತರರಿದ್ದೆವು. ಮುತ್ತಿಗೆಯೇ ಒದಗಿದರೆ ಒಳನಾಡಿನ ರಕ್ಷಣೆಗೆ ಹೊಸ ಸೈನ್ಯ ಪಡೆಗಳನ್ನೂ ಮಿಲಿಷಿಯ ಅಥವ ಗೃಹ ರಕ್ಷಕ ಪಡೆಗಳನ್ನೂ ನಿರ್ಮಿಸಲು ಸಿದ್ಧರಿದ್ದೆವು; ಇವೆಲ್ಲ ಸೇನಾಧಿಪತಿಯ ಅಧೀನದಲ್ಲೇ ಇರಬಹುದೆಂದು ಒಪ್ಪಿ ಸಲಹೆ ಮಾಡಿದೆವು. ಅದೆಲ್ಲ ಸಾಧ್ಯವಿಲ್ಲವೆಂದು ಉತ್ತರ ದೊರೆಯಿತು. ಭಾರತದ ಸೈನ್ಯವು ಬ್ರಿಟಿಷ್ ಸೈನ್ಯದ ಒಂದು ಅಂಶವಾಗಿರುವಾಗ ರಾಷ್ಟ್ರೀಯ ಸೈನ್ಯವೆಂದು ಕರೆಯಲು ಅಥವ ಪರಿಗಣಿಸಲು ಸಾಧ್ಯವಿರಲಿಲ್ಲ. ಮಿಲಿಷಿಯ ಅಥವ ಗೃಹರಕ್ಷಕ ಪಡೆಗಳ ಹೊಸ ಸೈನ್ಯ ನಿರ್ಮಿಸಲು ನಮಗೆ ಅವಕಾಶ ಕೊಡುವುದೂ ಅನುಮಾನವಾಗಿತ್ತು.

ಒಟ್ಟಿನಲ್ಲಿ ಈಗಿರುವ ಸರ್ಕಾರ ರಚನೆ ಮೊದಲಿನಂತೆಯೇ ಮುಂದುವರಿಯಬೇಕು, ವೈಸರಾಯನ ನಿರಂಕುಶಾಧಿಕಾರವೆಲ್ಲ ಹಾಗೇ ಉಳಿಯಬೇಕು, ನಮ್ಮಲ್ಲೂ ಕೆಲವರು ಆತನ ಕೈಗೊಂಬೆಗಳಂತಿದ್ದು ಉಪಾಹಾರ ಗೃಹಗಳು ಮುಂತಾದುವನ್ನು ನೋಡಿಕೊಂಡು ಅಲಂಕಾರದ ಮಂತ್ರಿಗಳಾಗಿ ಇರಬಹುದಿತ್ತು, ಹದಿನೆಂಟು ತಿಂಗಳ ಹಿಂದಿನ ಅಮೆರಿ ಸಲಹೆಗೂ ಇದಕ್ಕೂ ಕೂದಲೆಳೆಯಷ್ಟೂ ವ್ಯತ್ಯಾಸ ತೋರಲಿಲ್ಲ. ಅಮೆರಿ ಸಲಹೆಗಳು ಭಾರತಕ್ಕೆ ಅಗೌರವವೆಂದು ತಿರಸ್ಕರಿಸಿದ್ದೆವು. ಈಚಿನ ಘಟನೆಗಳು ಬ್ರಿಟಿಷ್ ಅಧಿಕಾರಿಗಳ ಮೇಲೆ ಒಂದು ಮಾನಸಿಕ ಪರಿವರ್ತನೆ ಮಾಡಬಹುದೆಂದೂ, ವೈಯಕ್ತಿಕ ಪ್ರತಿಭೆಯಿಂದ ಆ ಪರಿವರ್ತನೆ ಸುಲಭವೆಂದೂ ನಾವು ಅರಿತಿದ್ದೆವು. ವೈಸರಾಯ್ ಸಿಂಹಾಸನದ ಸುತ್ತ ಕುರಿಗಳಂತಿದ್ದ ಜನರ ಬದಲು ಶಕ್ತರೂ, ದೃಢಮನಸ್ಕರೂ ಆದ ವ್ಯಕ್ತಿಗಳು ಮಂತ್ರಿಗಳಾದರೆ ಪರಿಸ್ಥಿತಿ ವ್ಯತ್ಯಾಸಗೊಳ್ಳಬಹುದೆಂದೂ ತಿಳಿದಿದ್ದೆ. ಆದರೆ ಬೇರೆ ಕಾಲದಲ್ಲಿ ಹಾಗಿರಲಿ, ಈ ವಿಷಮ ಕಾಲದಲ್ಲಿ ಸಹ ಆ ಸಲಹೆ ಒಪ್ಪಲು ಅಸಾಧ್ಯವೆನಿಸಿತು; ಯೋಚಿಸಲು ಸಹ ಸಾಧ್ಯ ಇರಲಿಲ್ಲ. ಆರೀತಿ ಏನಾದರೂ ನಾವು ಒಪ್ಪಿದ್ದರೆ ಜನರೇ ನಮ್ಮನ್ನು ಹೊರದೂಡಿ ಬಹಿಷ್ಕರಿಸುತ್ತಿದ್ದರು. ವಿವರಗಳೆಲ್ಲ ಕ್ರಮೇಣ ತಿಳಿದ ಮೇಲೆ ಈ ಸಂಧಾನಗಳಲ್ಲಿ ನಾವು ಅಷ್ಟು ತಗ್ಗಿ ನಡೆದುದೇ ತಪ್ಪೆಂದು ಅನೇಕರು ಟೀಕೆ ಮಾಡಿದರು.

ಸರ್ ಸ್ಟಾಫರ್ಡ್ ಕ್ರಿಪ್ಸ್ ಜೊತೆಗೆ ನಡೆಸಿದ ಈ ಎಲ್ಲ ದೀರ್ಘ ಸಂಭಾಷಣೆಯಲ್ಲಿ ಅಲ್ಪ ಸಂಖ್ಯಾತರ ಪ್ರಶ್ನೆಯಾಗಲಿ ಕೋಮುವಾರು ಪ್ರಶ್ನೆಯಾಗಲಿ ಚರ್ಚೆಗೆ ಬರಲೇ ಇಲ್ಲ, ಯೋಚಿಸಲೂ ಇಲ್ಲ. ರಾಜ್ಯಾಂಗ ಪರಿವರ್ತನೆ ಚರ್ಚಿಸುವಾಗ ಅದು ಮುಖ್ಯವಾದ ವಿಷಯವೇನೋ ನಿಜ; ಆದರೆ ಬ್ರಿಟಿಷ್ ಸಲಹೆಗಳ ಮೇಲೆ ನಮ್ಮ ಮೂಲ ಅಭಿಪ್ರಾಯವೇ ಆರೀತಿ ಬೇರೆ ಇದ್ದಾಗ ಈ ಪ್ರಶ್ನೆಗಳನ್ನೆಲ್ಲ ಉದ್ದೇಶಪಟ್ಟು ಬದಿಗಿಟ್ಟೆವು. ರಾಷ್ಟ್ರೀಯ ಸರಕಾರಕ್ಕೆ ನಿಜವಾದ ಅಧಿಕಾರ ವಹಿಸಿಕೊಡುವ ತತ್ವ ಒಪ್ಪಿದ್ದರೆ ಆಮೇಲೆ ಅದರಲ್ಲಿ ಯಾವ ಯಾವ ಪಕ್ಷಗಳ ಸದಸ್ಯ ಸಂಖ್ಯಾಬಲ ಎಷ್ಟು ಇರಬೇಕೆಂಬ ಪ್ರಶ್ನೆ ಉದ್ಭವಿಸುತ್ತಿತ್ತು. ಆದರೆ ಮೂಲ ತತ್ವ ಒಪ್ಪುವ ಘಟ್ಟವನ್ನೇ ನಾವು ಮುಟ್ಟದಿರುವಾಗ ಉಳಿದ ಪ್ರಶ್ನೆಗಳು ಏಳಲೂ ಇಲ್ಲ, ಅವುಗಳನ್ನು ಯೋಚಿಸಲೂ ಇಲ್ಲ. ಪ್ರಮುಖ ಪಕ್ಷಗಳ ವಿಶ್ವಾಸ ಪಡೆದ ರಾಷ್ಟ್ರೀಯ ಸರಕಾರವೇ ನಮ್ಮ ಮುಖ್ಯ ಗುರಿಯಾಗಿತ್ತು; ಪಕ್ಷ ಪ್ರತಿಪಕ್ಷಗಳ ಸಂಖ್ಯಾ ಬಲ ತೊಂದರೆ ಕೊಡುವುದೆಂದು ನಾವು ಎಣಿಸಿಯೆ ಇರಲಿಲ್ಲ. ಮೌಲಾನಾ ಅಬ್ದುಲ್ ಕಲಾಮ ಅಜಾದರು ಸರ್ ಸ್ಟಾಫರ್ಡ್ ಕ್ರಿಪ್ಸ್ಗೆ ಬರೆದ ಒಂದು ಪತ್ರದಲ್ಲಿ “ನಾವು ಮಾಡಿರುವ ಸಲಹೆಗಳು ನಮ್ಮದು ಮಾತ್ರವಲ್ಲದೆ, ಭಾರತದ ಜನತೆಯ ಒಮ್ಮತದ ಬೇಡಿಕೆ