ಪುಟ:ಭಾರತ ದರ್ಶನ.djvu/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೯೧

ಅತ್ಯದ್ಭುತವಿದೆ. ಶೀಘ್ರದಲ್ಲೇ ಚೇತರಿಸಿಕೊಂಡು ಮುಂದೆ ನುಗ್ಗುತ್ತದೆ. ನೈಸರ್ಗಿಕ ಮತ್ತು ಆರ್ಥಿಕ ಶಕ್ತಿಯಲ್ಲಿ ಯುರೇಷಿಯ ಖಂಡದಲ್ಲಿ ಅದರ ಎದುರು ನಿಲ್ಲುವವರು ಯಾರೂ ಇಲ್ಲ. ರಾಜ್ಯ ವಿಸ್ತರಣ ಮನೋಭಾವನೆ ಈಗಾಗಲೇ ಅದಕ್ಕೂ ಬರುತ್ತಿದೆ. ಸಾರ್ ಸಾಮ್ರಾಜ್ಯದಂತೆಯೇ ಸ್ವಲ್ಪ ಹೆಚ್ಚು ಕಡಮೆ ಅದೂ ರಾಜ್ಯ ವಿಸ್ತಾರ ಮಾಡುತ್ತಿದೆ. ಇದು ಎಷ್ಟು ದೂರ ಹೋಗುವುದೋ ಹೇಳಲು ಸಾಧ್ಯವಿಲ್ಲ. ಅದರ ಸಮಾಜವಾದಿ ಆರ್ಥಿಕ ನೀತಿಗೆ ರಾಜ್ಯ ವಿಸ್ತರಣ ಒಂದು ಅವಶ್ಯಕತೆಯಲ್ಲ, ಏಕೆಂದರೆ ಅದನ್ನೆ ಸ್ವಯಂ ಸಂಪೂರ್ಣಮಾಡಬಹುದು. ಆದರೆ ಇತರ ಶಕ್ತಿಗಳು, ಹಳೆಯ ಸಂಶಯಗಳು ಮಧ್ಯೆ ಬಂದು ಪುನಃ ಹಿಂದಿನ ಅಷ್ಟದಿಗ್ರಂಧನ ಭಯ ಹುಟ್ಟಿಸಿವೆ. ಏನೆ ಆಗಲಿ ಯುದ್ಧದ ವಿನಾಶಕೃತ್ಯ ಸರಿಪಡಿಸಿಕೊಳ್ಳುವುದಕ್ಕೆ ಸೊವಿಯಟ್ ರಷ್ಯಕ್ಕೆ ಅನೇಕವರ್ಷ ಹಿಡಿಯುತ್ತವೆ. ಆದರೂ ರಾಜ್ಯವಿಸ್ತಾರ ಅಲ್ಲದಿದ್ದರೂ ಇತರ ರೀತಿಯ ವಿಸ್ತರಣ ಮನೋಭಾವ ಬೆಳೆಯುತ್ತಿದೆ. ಈಚಿನ ಅಲ್ಲಿನ ಕೆಲವು ಘಟನೆಗಳು ರಷ್ಯದ ಪ್ರಶಂಸಕರಿಗೆ ಭೀಕರ ಕಂಡರೂ ರಾಜಕೀಯ ಮತ್ತು ಆರ್ಥಿಕ ಸಮತೋಲನೆಯಲ್ಲಿ ರಷ್ಯದಷ್ಟು ಭದ್ರವಾದ ದೇಶ ಇನ್ನೊಂದಿಲ್ಲ. ಇಂದಿನ ಅದರ ನಾಯಕರನ್ನು ಪ್ರಶ್ನೆ ಮಾಡುವವರೇ ಇಲ್ಲ; ಅವರ ದೃಷ್ಟಿಯನ್ನೇ ಎಲ್ಲ ಭವಿಷ್ಯ ಅವಲಂಬಿಸಿದೆ.

ಅಮೆರಿಕದ ಅಪಾರ ವಸ್ತು ನಿರ್ಮಾಣ ಶಕ್ತಿ ಮತ್ತು ಸಂಘಟನ ಶಕ್ತಿಗಳಿಂದ ಪ್ರಪಂಚ ಬೆರಗುಗೊಂಡಿದೆ. ಯುದ್ಧದಲ್ಲಿ ಈ ರೀತಿ ಒಂದು ಪ್ರಮುಖಪಾತ್ರ ವಹಿಸಿದ್ದಲ್ಲದೆ ತನ್ನ ಆರ್ಥಿಕ ನೀತಿಯಲ್ಲೇ ಅಂತರ್ಗತ ಇರುವ ಒಂದು ನೂತನ ಶಕ್ತಿಯನ್ನು ಪ್ರಚೋದಿಸಿದೆ. ತಮ್ಮ ಎಲ್ಲ ಕೌಶಲವನ್ನೂ ಶಕ್ತಿಯನ್ನೂ ಉಪಯೋಗಿಸಿ ಆ ಶಕ್ತಿಯನ್ನು ಒಂದು ಮಿತಿಯಲ್ಲಿಡುವುದು ಅವರಿಗೆ ಒಂದು ಹೊಸ ಸಮಸ್ಯೆ. ಒಳಗೂ ಹೊರಗೂ ಪ್ರಬಲ ಘರ್ಷಣೆಗೆ ಇಂದಿನ ಆರ್ಥಿಕ ರಚನೆಯ ಮಿತಿಯಲ್ಲಿ ಅದನ್ನು ಹೇಗೆ ಬಗೆಹರಿಸುತ್ತಾರೋ ನಾನು ಹೇಳಲಾರೆ. ಅಮೆರಿಕ ತನ್ನ ಏಕಾಂತ ನೀತಿ ತ್ಯಜಿಸಿದೆ ಎಂದು ಹೇಳುತ್ತಿದಾರೆ. ಬೇರೆ ವಿಧಿಯೇ ಇಲ್ಲ. ಏಕೆಂದರೆ ಪರದೇಶಗಳ ರಫ್ತು ವ್ಯಾಪಾರವಿಲ್ಲದೆ ಅದು ಉಳಿಯುವಂತೆ ಇಲ್ಲ. ಯುದ್ಧಕ್ಕೆ ಪೂರ್ವ ಅತ್ಯಲ್ಪವಿದ್ದು ಅಲಕ್ಷೆ ಮಾಡಬಹುದಾಗಿದ್ದ ರಫ್ತು ವ್ಯಾಪಾರ ಇಂದು ಅದರ ಪ್ರಮುಖ ಸಮಸ್ಯೆಯಾಗಿದೆ. ಯುದ್ಧ ಸಾಮಗ್ರಿಯ ಬದಲು ಶಾಂತಿ ಸಮಯದ ವಸ್ತು ನಿರ್ಮಾಣ ಆರಂಭಿಸಿದರೆ ಘರ್ಷಣೆ ಇಲ್ಲದೆ, ಹೋರಾಟವಿಲ್ಲದೆ ಆ ವಸ್ತುಗಳನ್ನು ರಫ್ತು ಮಾಡುವುದು ಎಲ್ಲಿಗೆ? ಯುದ್ಧದಿಂದ ಹಿಂದಿರುಗುವ ಲಕ್ಷಾಂತರ ಸೈನಿಕರನ್ನು ಉಪಯೋಗಿಸಿಕೊಳ್ಳುವುದೆಂತು? ಪ್ರತ್ಯಕ್ಷ ಯುದ್ಧದಲ್ಲಿ ತೊಡಗಿರುವ ಪ್ರತಿಯೊಂದು ದೇಶಕ್ಕೂ ಈ ಸಮಸ್ಯೆ ಇದ್ದರೂ ಸಂಯುಕ್ತ ಸಂಸ್ಥಾನಗಳಿಗೆ ಇರುವಷ್ಟು ಬೇರೆ ಯಾವ ದೇಶಕ್ಕೂ ಇಲ್ಲ. ವಸ್ತು ನಿರ್ಮಾಣ ಕಾರ್ಯದಲ್ಲಿ ನಡೆದಿರುವ ಔದ್ಯೋಗಿಕ ಸಂಶೋಧನೆಗಳ ಫಲವಾಗಿ ಅಪಾರ ವಸ್ತು ನಿರ್ಮಾಣ ಆಗಲೇಬೇಕು, ಅಥವ ಸಾಮೂಹಿಕ ನಿರುದ್ಯೋಗ ಹೆಚ್ಚಬೇಕು. ಸಾಮಾಜಿಕ ನಿರುದ್ಯೋಗವನ್ನು ಯಾರೂ ಸಹಿಸುವುದಿಲ್ಲ. ಅದಕ್ಕೆ ಅವಕಾಶ ಕೊಡುವುದಿಲ್ಲವೆಂದು ಅಮೆರಿಕ ಸಂಯುಕ್ತ ಸಂಸ್ಥಾನ ಸರಕಾರ ಸಾರಿದೆ. ಹಿಂದಿರುಗುವ ಸೈನಿಕರನ್ನು ಉಪಯುಕ್ತ ಕಾರ್ಯಗಳಲ್ಲಿ ನಿಯೋಜಿಸಿ ಲಾಭದಾಯಕ ಕೆಲಸಗಳಲ್ಲಿ ಸೇರಿಸಿ, ನಿರುದ್ಯೋಗ ತಡೆಗಟ್ಟಲು ಈಗಾಗಲೇ ಪ್ರಯತ್ನ ನಡೆಯುತ್ತಿವೆ. ನಾಡಿನ ಒಳ ಸಮಸ್ಯೆ ಏನೆ ಇರಲಿ ಮೂಲ ಪರಿವರ್ತನೆಯಾಗದಿದ್ದರೆ ಆ ಪ್ರಯತ್ನ ಇನ್ನೂ ಕಠಿಣವೇ ಆಗುತ್ತದೆ. ಅದರ ಅಂತರ ರಾಷ್ಟ್ರೀಯ ದೃಷ್ಟಿಯು ಅತಿ ಮುಖ್ಯವಾದುದು.

ಸಾಮೂಹಿಕ ವಸ್ತು ನಿರ್ಮಾಣದ ಇಂದಿನ ಆರ್ಥಿಕ ಪರಿಸ್ಥಿತಿಯು ಎಷ್ಟು ವಿಚಿತ್ರವಿದೆ ಎಂದರೆ ಪ್ರಪಂಚದ ಮಹಾ ಶಕ್ತಿಯುತ ಸಂಪತ್ಸಮೃದ್ಧಿ ರಾಷ್ಟ್ರವಾದ ಅಮೆರಿಕ ಸಂಯುಕ್ತ ಸಂಸ್ಥಾನ ಸಹ ತನ್ನ ಹೆಚ್ಚಿನ ಸಮಾನುಗಳ ಮಾರಾಟಕ್ಕೆ ಇತರ ರಾಷ್ಟ್ರಗಳನ್ನು ಅವಲಂಬಿಸಬೇಕಾಗುತ್ತದೆ. ಯುದ್ಧದ ನಂತರ ಕೆಲವು ವರ್ಷ ಯೂರೋಪ್, ಚೀಣಾ ಮತ್ತು ಭಾರತಗಳಲ್ಲಿ ಯಂತ್ರ ಸಾಮಗ್ರಿಗಳಿಗೆ ಮತ್ತು ನಯಮಾಲುಗಳಿಗೆ ದೊಡ್ಡ ಗಿರಾಕಿ ಇರುತ್ತದೆ. ತನ್ನ ವಿಶೇಷ ವಸ್ತುಗಳ ಮಾರಾಟಕ್ಕೆ ಅದರಿಂದ ಅಮೆರಿಕೆಗೆ ತುಂಬ ಸಹಾಯವಾಗುತ್ತದೆ. ಆದರೆ ಪ್ರತಿಯೊಂದು ರಾಷ್ಟ್ರವೂ ತನಗೆ ಬೇಕಾಗುವ ಸಾಮಾನುಗಳನ್ನು ತಾನೇ ಬೇಗ ತಯಾರಿಸಿಕೊಳ್ಳುವ ಶಕ್ತಿ ಪಡೆಯಲು ಪ್ರಯತ್ನ