ಪುಟ:ಭಾರತ ದರ್ಶನ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ಭಾರತ ದರ್ಶನ

ಸೊಗಸಾಗಿವೆ. ಅನೇಕ ವೇಳೆ ಗುರುಶಿಷ್ಯರಲ್ಲಿ ನಡೆದ ಪ್ರಶ್ನೆ ಮತ್ತು ಉತ್ತರಗಳ ರೂಪ ಕ್ಲಿಷ್ಟವಾಗಿದೆ. ಉಪನಿಷತ್ತುಗಳು ಗುರುಗಳ ಉಪನ್ಯಾಸದ ಅಥವ ಶಿಷ್ಯರು ಬರೆದುಕೊಂಡ ಟಿಪ್ಪಣಿಗಳು ಎಂದು ಕೆಲವರು ಸೂಚಿಸುತ್ತಾರೆ. ಪ್ರೊಫೆಸರ್ ಡಬ್ಬು , ಥಾಮಸ್ 'ಭಾರತದ ಆಸ್ತಿ' (Legacy of India) ಎಂಬ ಗ್ರಂಥದಲ್ಲಿ “ ಉಪನಿಷತ್ತುಗಳಿಗೆ ಒಂದು ಗುಣ ವೈಶಿಷ್ಟ್ಯ ಮತ್ತು ನಿಶ್ಯ೦ಕಿತ ಮಾನ ವೀಯತೆಯ ದೃಷ್ಟಿಯನ್ನು ಕೊಡುವುದು ಅದರ ಮಾತಿನ ಉತ್ಕಟ ಪ್ರಾಮಾಣಿಕತೆ, ಅದು ಒಂದು ಮಹಾಸಮಸ್ಯೆಯ ವಿಚಾರದಲ್ಲಿ ಸ್ನೇಹಿತರು ಮಾಡುವ ಆ ಸ್ವಾಲೋಚನೆಯಂತೆ ಇದೆ ಎಂದಿದ್ದಾನೆ. ಅವುಗಳ ವಿಷಯದಲ್ಲಿ ಸಿ. ರಾಜಗೋಪಾಲಾಚಾರರು “ ವಿಶಾಲಭಾವನೆ, ಗ೦ಭೀರಭಾವನಾಲಹರಿ, ಸತ್ಯಾನ್ವೇಷಣೆಯ ದಾಹ ಇವುಗಳ ಉದ್ವೇಗದಿಂದ ಉದ್ಗತವಾದ ನಿರ್ಭಯಶೋಧನಾವೃಷ್ಟಿ ಯಿಂದ ಉಪನಿಷತ್ತುಗಳ ಗುರುಶಿಷ್ಯರು ವಿಶ್ವದ ಸ್ಪಷ್ಟ ರಹಸ್ಯವನ್ನು ಆಗೆಯುವುದನ್ನು ನೋಡಿದರೆ ಪ್ರಪಂಚದ ಈ ಪವಿತ್ರ ಪುರಾತನ ಗ್ರಂಥಗಳು ಈಗಲೂ ಅತ್ಯಾಧುನಿಕವೂ ಸರ್ವಾದರಣೀಯವೂ ಆದ ಗ್ರಂಥ ಗಳಾಗಿವೆ.”

ಉಪನಿಷತ್ತುಗಳ ಮುಖ್ಯ ಗುಣ ಸತ್ಯಾವಲಂಬನೆ, “ ಸತ್ಯಮೇವ ಜಯತೇ ನಾನೃತಂ ಸತ್ಯೇನ ಪಂಥಾ ವಿತತೋ ದೇವಯಾನಃ ” (ಗೆಲುವು ಸತ್ಯಕ್ಕೆ, ಅಸತ್ಯಕ್ಕಲ್ಲ. ಸತ್ಯವೇ ದೇವಮಾರ್ಗ). ಸರ್ವಶ್ರೇಷ್ಠ ಪ್ರಾರ್ಥನೆ ಬೆಳಕಿಗಾಗಿ ಮತ್ತು ಜ್ಞಾನಕ್ಕಾಗಿ, “ ಅಸತ್ಯದಿಂದ ಸತ್ಯಕ್ಕೆ ನಡೆಸು. ಕತ್ತಲೆ ಯಿಂದ ಬೆಳಕಿಗೆ ನಡೆಸು. ಮರಣದಿಂದ ಅಮೃತತ್ವಕ್ಕೆ ನಡೆಸು ” ಎಂದು.

“ ಅಸತೋ ಮಾಂ ಸದ್ಗಮಯ
ತಮಸೋ ಮಾಂ ಜ್ಯೋತಿರ್ಗಮಯ
ಮೃತ್ಯೋರ್ಮಾಮೃತಂ ಗಮಯ ”

ಶಾಂತಿಯಿಲ್ಲದ ಮನಸ್ಸು ಸದಾ ಪ್ರಶ್ನಿಸುತ್ತ, ಸದಾ ಅನ್ವೇಷಣೆ ಮಾಡುತ್ತ ಪುನಃ ಪುನಃ ಹೊರಗೆ ಇಣಿಕಿ ನೋಡುತ್ತದೆ. “ ಮನಸ್ಸು ತನ್ನ ನೆಲೆ ಸೇರುವುದು. ಯಾವ ಆಣತಿಯಂತೆ ? ಪ್ರಪ್ರಥಮ ಜೀವೋತ್ಪತ್ತಿಯಾದ ಆಣತಿಯಿಂದ ? ಕಣ್ಣುಗಳು ನೋಡುವಂತೆ, ಕಿವಿ ಕೇಳುವಂತೆ ಆಜ್ಞೆ ಮಾಡಿದ ದೇವರು ಯಾರು ? ವಾಯು ಅಚಲವಾಗಿ ನಿಲ್ಲದೇಕೆ ? ಮನುಷ್ಯನ ಮನಸ್ಸಿಗೆ ಶಾಂತಿ ಏಕೆ ಇಲ್ಲ ? ನೀರು ಒಂದು ಕ್ಷಣವೂ ನಿಲ್ಲದಂತೆ ಹರಿಯುವುದೇಕೆ ? ಏನನ್ನು ಅರಸುತ್ತ ಹರಿಯುತ್ತಿದೆ. ಇದು ಮಾನವನ ಮನಸ್ಸಿನ ಅನಂತಕರೆ. ಮಾರ್ಗ ಮಧ್ಯೆ ವಿಶ್ರಾಂತಿಯೂ ಇಲ್ಲ, ಮಾರ್ಗಕ್ಕೆ ಕೊನೆಯ ಇಲ್ಲ. ಐತರೇಯ ಬ್ರಾಹ್ಮಣದಲ್ಲಿ ನಾವು ಕೈಗೊಳ್ಳಬೇಕಾದ ಈ ಅನಂತ ಯಾತ್ರೆಯ ವಿಷಯವಾಗಿ ಒಂದು ಮಂತ್ರವಿದೆ. ಪ್ರತಿ ಶ್ಲೋಕದ ಕೊನೆಯಲ್ಲ ಚರೈವೇತಿ, ಚರೈವೇತಿ-ಎಲೈ ದಾರಿಗನೆ ಮುಂದೆಸಾಗು, ಮುಂದೆಸಾಗು ! ” ಎಂದಿದೆ.

ಈ ಅನ್ವೇಷಣೆಯಲ್ಲಿ ಸಾಮಾನ್ಯವಾಗಿ ಎಲ್ಲ ಮತಗಳಲ್ಲೂ ಕಾಣಬಹುದಾದ ಸರ್ವಶಕ್ತ ದೇವರ ಎದುರಿನಲ್ಲಿ ತೋರುವ ದೈನ್ಯತೆ ಇಲ್ಲ. ಸುತ್ತಲಿನ ಸನ್ನಿವೇಶಗಳನ್ನೂ ಜಯಿಸುವ ಮನಸ್ಸನ್ನು ಕಾಣುತ್ತೇವೆ. “ ನನ್ನ ದೇಹ ಸುಟ್ಟು ಬೂದಿಯಾಗುತ್ತದೆ. ನನ್ನ ಉಸಿರು ಅವಿಶ್ರಾಂತವೂ ಅಮೃತವೂ ಆದ ವಾಯುಮಂಡಲವನ್ನು ಸೇರಿಕೊಳ್ಳುತ್ತದೆ ; ಆದರೆ ನಾನೂ ನನ್ನ ಕರ್ಮಗಳೂ ಅಲ್ಲ. ಎಲೈ ಮನಸ್ಸೆ ಇದು ಸದಾ ನಿನ್ನ ಸ್ಮರಣೆಯಲ್ಲಿರಲಿ, ಸದಾ ಸ್ಮರಣೆಯಲ್ಲಿರಲಿ.” ಒಂದು ಪ್ರಾತಃಸ್ಮರಣೆಯಲ್ಲಿ ಸೂರನನ್ನು ಕುರಿತು “ ಎಲೈ ದೇದೀಪ್ಯಮಾನನಾದ ದಿವ್ಯ ಪ್ರಭೆಯುಳ್ಳ ಸೂರನೆ, ನಿನಗೆ ಕಾಂತಿ ಯನ್ನು ಕೊಟ್ಟವನು ನಾನೇ” ಎಂದು ಇದೆ. ಎಂತಹ ಉನ್ನತ ಆತ್ಮವಿಶ್ವಾಸ,

ಆತ್ಮ ಎಂದರೇನು ? ನಿಷೇದಾರ್ಥಕವಾಗಿ ಅಲ್ಲದೆ ಅದನ್ನು ವಿವರಿಸಲು, ಅಥವ ನಿರ್ದೆಶಿಸಲು ಸಾಧ್ಯವಿಲ್ಲ ; “ ಇದಲ್ಲ, ಇದಲ್ಲ ” ಎಂದು ಅಥವ “ ಅದೇ ನೀನು” ಎಂದು. ಪ್ರಜ್ವಲಿತ ಅಗ್ನಿ ಯಿಂದ ಹೊರಟು ಪುನಃ ಅಗ್ನಿ ಯನ್ನೇ ಸೇರುವ ಕಿಡಿಯಂತೆ ಜೀವಾತ್ಮ ಪರಮಾತ್ಮನ ಒ೦ದು ಕಿಡಿಮಾತ್ರ. ಅಗ್ನಿಯು ಪ್ರಪಂಚದಲ್ಲಿ ಯಾವ ವಸ್ತುವನ್ನು ದಹಿಸುತ್ತದೆಯೋ ಆ ವಸ್ತುವಿನ ಆಕಾರವನ್ನು ತಾಳು