ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮರಾಟರ ಅವನತಿ,

೧೪೩

—————————————————————————————

ಹೊಂದಿತು. ಆಯಿತು! ಕಪಿಲಾಷಷ್ಠಿಯ ಯೋಗವೇ ಕೂಡಿದಂತಾಯಿತು!!
ಆಗ ಆತನು ಪಾದಚಾರಿಯಾಗಿ ಖಡ್ಗವನ್ನು ನೆಗಹಿ ದುರಾಣೀಜನರ ದಟ್ಟಣೆಯಲ್ಲಿ
ಸೇರಿದನು. ಆತನು ಸಾವಿರಾರುಜನ ಪಠಾಣರ ರುಂಡಗಳನ್ನು ಕಡಿಯುತ್ತ ಕಡಿ
ಯುತ್ತ ಸಾಗಿರಲು ಒಮ್ಮಿಂದೊಮ್ಮೆ ಕಾಣದಂತಾದನು. ಜನಕೋಜಿಯೂ ಆಸ್ಥ
ನಾದನು. ಆಗ ನಿಶಾನಿಯವನು ಗಾಬರಿಯಾಗಿ ಭಾವೂಸಾಹೇಬನನ್ನು ಗೊತ್ತು
ಹಚ್ಚುವದಕ್ಕಾಗಿ ಅತ್ತಇತ್ತ ಓಡಾಡುತ್ತಿರಲು, ಅವನೂ ಕತ್ತಿಯಬಾಯಿಗೆ ಆಹುತಿ
ಯಾದನು, ನಿಶಾನೆಯು ಅಧಾರತಪ್ಪಿ ನೆಲಕ್ಕೆ ಬಿದ್ದಿತು. ಹೀಗೆ ನಿಶಾನಿಯು ಬಿದ್ದ
ದ್ದನ್ನು ಕಂಡು ಪಠಾಣರು ಜಯಭೇರಿಯನ್ನು ಹೊಡೆದರು. ಮರಾಟರು ಚದರಿ
ಓಡತೊಡಗಿದರು, ಕಾಳಗವು ಗಕ್ಕನೆ ನಿಂತುಬಿಟ್ಟಿತು. ಆಗ ತಾಸುರಾತ್ರಿಯ
ಸಮಯವಾಗಿರಬಹುದು. ಮುಂಜಾನೆ ಮೂರುತಾಸು ಹೊತ್ತು ಏರಿದಾಗ ಪ್ರಾರಂ
ಭವಾದಕಾಳಗವು ನಡುವೆ ವಿರಾಮವಿಲ್ಲದೆ ಸಂಜೆಯ ತಾಸುರಾತ್ರಿಯವರೆಗೆ ನಡೆದು
ಕಡೆಗೆ ಮರಾಟರನ್ನು ದುಃಖಾ೦ಧಕಾರದಲ್ಲಿ ನೂಕಿಬಿಟ್ಟಿತು. ಇಂದಿನವರೆಗೆ
ಭರತಖಂಡದ ಏಕಛತ್ರಾಧಿಪತ್ಯವನ್ನು ಅಪೇಕ್ಷಿಸುತ್ತಿದ್ದ ಮರಾಟರ ಏಳ್ಗೆಯು
ಕಳೆಗುಂದಿ ಇಂದಿನದಿನ ಅವರ ಅವನತಿಯ ಅಸ್ತಿವಾರಕ್ಕೆ ಪ್ರಾರಂಭವಾಯಿತು.