ಪುಟ:ಮಾತೃನಂದಿನಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40

ಸತೀಹಿತೈಷಿಣೀ

ಗಿರಬೇಕಾದರೆ, ಸಮಸ್ತ ಭಾಷೆಗಳಿಗೂ ಉತ್ಪತ್ತಿಸ್ಥಾನವಾದ ದೇವಭಾಷೆ (ಸಂಸ್ಕೃತ)ಯೇ ಜೀವಾನಂದದಾಯಕವಾದ ಕಲ್ಪಭೂರುಹವೆಂದು ತಿಳಿ ! ಈ ನಮ್ಮ ಆರ್ಯಮಹಿಳಾವರ್ಗಕ್ಕೆ ದೇಶಭಾಷೆಯೂ ದೇವಭಾಷೆಯೂ ಅತ್ಯವಶ್ಯವಾಗಿ ಅನುಷ್ಠೇಯವಾಗಿರಬೇಕು.

ನಂದಿನಿ:- ಹಾಗಿದ್ದರೆ, ಉಳಿದ ಭಾಷೆಗಳ ಅಗತ್ಯವಿಲ್ಲವಷ್ಟೆ ? ಅವನ್ನೇಕೆ ನನಗೆ ಅಡಿಗಡಿಗೂ ತಿಳಿಸುತ್ತಿರುವೆ?

ಅಚಲ: ಅವುಗಳು ಬೇಕಾದುವಲ್ಲವೆಂದು ಹೇಳಬಾರದು. ಅಗತ್ಯವಾಗಿ ಬೇಕು. ಆದರೆ, ಅವನ್ನೇ ನಿತ್ಯಾನುಸಂಧಾನವಾಗಿಡಬೇಕೆಂದಲ್ಲ! ದೇಶಭಾಷೆಯ ಮತ್ತು ದೇವಭಾಷೆಯ ಗುಣೋತ್ಕೃಷ್ಟತೆಯನ್ನು ಪ್ರಸಾರಕ್ಕೆ ತರಬೇಕಾದರೆ, ಉಳಿದ ಭಾಷೆಗಳ ಪರಿಶ್ರಮವು ತಕ್ಕಷ್ಟೂ ಉಂಟಾಗಿರಬೇಕು.

ನಂದಿನಿ:- ಇಲ್ಲದಿದ್ದರೆ ನಷ್ಟವೇನು ?

ಅಚಲ:-ನಷ್ಟವೇನೆಂಬೆಯೋ ? ವಿಚಾರಮಾಡುವಲ್ಲಿ, ನಮ್ಮೀ ದೇಹದ ಪ್ರತ್ಯಂಗಗಳೂ ಬೇರೆಬೇರೆ ಕಾರ್ಯದಲ್ಲಿ ನಿಯಮಿತವಾಗಿರುವುವಾದರೂ, ಅವುಗಳೆಲ್ಲ ಪರಸ್ಪರ ಸಾಮರಸ್ಯದಿಂದ ಇರದೆಹೋದರೆ, ದೇಹಕ್ಕೂ ಆತ್ಮನಿಗೂ ಕ್ಷೋಭೆಯುಂಟಾಗುವುದಿಲ್ಲವೇ ? ಹಾಗೆಯೇ, ನಮ್ಮೀ ಭಾರತಮಾತೆಯ ಸಂತಾನರಾದ ನಾವೆಲ್ಲರೂ ಐಕ್ಯಮತ್ಯದಿಂದಿರದಿದ್ದರೆ, ದೇಶವೂ ಉನ್ನತ ಸ್ಥಿತಿಗೆ ಬರಲಾರದು. ಹಾಗಾಗದೆ, ನಮ್ಮನಮ್ಮಲ್ಲಿ ಪರಸ್ಪರ ಬಂಧುಪ್ರೇಮವನ್ನು ಹೆಚ್ಚಿಸಿ, ನಮ್ಮ ಭ್ರಾರ್ತೃವರ್ಗದಲ್ಲಿಯೂ, ನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಇರಬಹುದಾದ ವಿಶೇಷ ಗುಣಗಳನ್ನು ನಾವೂ ಸಂಗ್ರಹಿಸಿ, ಆಮೂಲಕ ಈಗ ಅನ್ಯಾಕ್ರಾಂತವಾಗಿ ನರಳು ತ್ತಿರುವ ದೇಶಭಾಷಾ ಮಾನಿನಿಯ ಪುನರುಜ್ಜೀವನಕಾರ್ಯವು ಸುಲಭವಾಗಿ ಸಿದ್ದಿಸುವಂತೆ ಮಾಡಬೇಕಾದರೆ, ನನಗೆ ಭ್ರಾತೃಭಾಷಾಪರಿಶ್ರಮವೂ ಮುಖ್ಯವಾಗಿರಬೇಕು. ಇದಕ್ಕೆಂದೇ ಅವಕಾಶ ದೊರೆತಾಗಲೆಲ್ಲಾ ನಿನಗೆ ಸ್ವಲ್ಪಸ್ವಲ್ಪವಾಗಿ ತಿಳಿಸುತ್ತಿರುವುದು.

ನಂದಿನಿ:-ಅಣ್ಣ! ನನಗೂ ಆಶೇಯೇನೋ ಇದೆ. ಆದರೆ ಅದರೊಡನೆಯೇ ಭಯ-ಸಂಶಯಗಳೂ ಇರುತ್ತಿದ್ದು, ನನ್ನನ್ನು ಹಿಂದುಮಾಡುತ್ತಿವೆ.