ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೮೭

ಅಣ್ಣನೂ ಆಮೇಲೆ ತಮ್ಮನಾದ ರಾಮಕೃಷ್ಣ ಪರಮಹಂಸರೂ ಪೂಜಾರಿಯ ಕೆಲಸವನ್ನು ವಹಿಸಬೇಕಾಯ್ತು. ಇಲ್ಲಿ ಪೂಜೆಮಾಡುತ್ತ ಅನನ್ಯವಾದ ಭಕ್ತಿಯಿಂದ ಜಗನ್ಮಾತೆಯ ರೂಪವಾಗಿ ಅಲ್ಲಿ ನೆಲೆಸಿದ್ದ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡರು. ಇದಾದ ಮೇಲೆ ಕ್ರಮವಾಗಿ ವೈಷ್ಣವ, ವೇದಾಂತ, ಯೋಗ, ತಾಂತ್ರಿಕ, ಮಹಮ್ಮದೀಯ, ಕ್ರೈಸ್ತ ಮುಂತಾದ ನಾನಾ ಮಾರ್ಗಗಳನ್ನು ಅನುಸರಿಸಿ ಅದೇ ಅನುಭವವನ್ನು ಪಡೆದು “ಏಕ೦ಸದ್ವಿಪ್ರಾ ಬಹುಧಾ ವದಂತಿ" ಎಂಬುದನ್ನು ತಿಳಿದುಕೊಂಡರು. ಈ ಹನ್ನೆರಡುವರ್ಷ ಸಾಧನಕಾಲದಲ್ಲಿ ಅವರೊಡನೆ ಹುಟ್ಟಿದ ಗುರುಭಾವವು ಕ್ರಮೇಣ ವಿಕಸಿತವಾಗಿ ಪ್ರಫುಲ್ಲವಾಯಿತು. ಇದರಲ್ಲಿ ವಿಶೇಷವಾದ ಸಂಗತಿ ಏನೆಂದರೆ ಅವರಿಗೆ ಯಾವ ಕಾಲದಲ್ಲಿ ಯಾವ ಮಾರ್ಗವನ್ನು ಅಭ್ಯಾಸಮಾಡಬೇಕೆಂದು ಮನಸ್ಸಿಗೆ ಬರುತ್ತಿತ್ತೋ ಆ ಕಾಲಕ್ಕೆ ತಕ್ಕಹಾಗೆ ವೇದಾಂತ ಪಂಡಿತನಾಗಲಿ, ಯೋಗಿಯಾಗಲಿ, ವಿಷ್ಣು ಭಕ್ತನಾಗಲಿ, ಖಾಜಿಯಾಗಲಿ ಬಂದುಬಿಡುತ್ತಿದ್ದರು. ಬಂದವರೆಲ್ಲರೂ ಇವರು ಮಹಾತ್ಮರೆಂದೂ ಅವತಾರಪುರುಷರೆಂದೂ ಹೊಗಳಿ ತಮಗೆ ತಿಳಿದಿದ್ದನ್ನು ಸ್ವಲ್ಪ ಸೂಚಿಸುತ್ತಲೇ ಪರಮಹಂಸರು ಎಲ್ಲಿವನ್ನೂ ಗ್ರಹಿಸಿಬಿಡುತ್ತಿದ್ದರು. ಕೊನೆಗೆ ಗುರುಗಳೇ ಶಿಷ್ಯನಿಂದ ಎಷ್ಟೋ ವಿಷಯಗಳನ್ನು ಕಲಿತುಕೊಂಡು ತಾವು ಧನ್ಯರಾಗಿ ಹೊರಟುಹೋದರು.

ಗುರುವೆಂದರೇನು? ಸಂಸಾರಸಾಗರದಿಂದ ಪಾರುಮಾಡಿ. ಮಾಯಾಪಾಶವನ್ನು ಕಡಿದುಹಾಕಿ, ನಮಗೆ ಮೋಕ್ಷಮಾರ್ಗವನ್ನು ತೋರಿಸತಕ್ಕವನೇ ಗುರು. ಇಂಥವನು ಈಶ್ವರನೊಬ್ಬನೇ ಹೊರತು ಮಾಯಾಪಾಶದಲ್ಲಿ ಸಿಕ್ಕಿ ನರಳುತ್ತಿರುವ ಮನುಷ್ಯನೆಂದಿಗೂ ಆಗಲಾರನು. ಮನುಷ್ಯನು ಮನುಷ್ಯನಿಗೆ ಈ ವಿಚಾರದಲ್ಲಿ ಸಹಾಯ ಮಾಡುವುದೆಂದರೆ "ಅಂಧೇನೈವನೀಯಮಾನಾಯಥಾಂಧಾಃ" (ಕುರುಡನು ಕುರುಡನಿಗೆ ದಾರಿತೋರಿಸಿದ ಹಾಗೆ) ಎಂಬಂತಾಗುವುದು.