ಪುಟ:ಶ್ರೀ ಕೃಷ್ಣ ಲೀಲೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦ಕೃಷ್ಣಲೀಲೆ

ನಿನ್ನನ್ನೂ , ಜರಾಸಂಧ, ಶಿಶುಪಾಲ, ದಂತವಕ್ತ್ರಾದಿಗಳನ್ನೂ ಸಂಹ
ರಿಸುವುದಕ್ಕಾಗಿ ಶ್ರೀಮನ್ನಾರಾಯಣನು ನಿನ್ನ ತಂಗಿಯಾದ ದೇವಕಿಗೆ
ಪುತ್ರನಾಗಿ ಅವತರಿಸುವನು. ರಾಕ್ಷಸ ನಾಶನಾರ್ಥವಾಗಿ ದೇವತೆಗಳೆಲ್ಲ
ರೂ ಈ ರೂಪವಾಗಿ ಅವತರಿಸುವರೆಂದು ತಿಳಿ. ನಿಮ್ಮ ತಂದೆಯಾದ
ಉಗ್ರಸೇನನು ಸಹ ದೇವತೆಗಳ ಪಕ್ಷದವನು. ಬಹಳ ಹೊತ್ತು ಮಾ
ತನಾಡುವುದಕ್ಕೆ ನನಗೆ ಸಾವಕಾಶವಿಲ್ಲವು. ನಾನಿನ್ನು ತೆರಳುವೆನು.
ಎಚ್ಚರಿಕೆ! [ಎಂದು ಹೇಳುತ್ತ ನಾರದರು ತೆರಳುವರು.]

ಕಂಸ:-(ತನ್ನಲ್ಲಿ) ಆಹಾ ! ದೇವತೆಗಳೆಷ್ಟು ರಹಸ್ಯವಾಗಿ ಕಾರ್ಯ
ಗಳನ್ನು ನಡಿಸುತ್ತಿರುವರು, ಈ ಯಾದವರೆಲ್ಲರೂ ದೇವತೆಗಳೆಂತಲೂ,
ದಾನವ ವೈರಿಯಾದ ವಿಷ್ಣುವು ನನ್ನ ತಂಗಿಯ ಗರ್ಭದಲ್ಲಿ ಅವತರಿಸುವ
ನೆಂತಲೂ ನಾರದರು ಹೇಳಿದ ಮಾತು ಸತ್ಯವು, ಲೇಶವಾದರೂ ಸಂಶ
ಯವಿಲ್ಲ, ಆ ದಿವಸ ಅಶರೀರವಾಣಿಯೂ ಇದೇ ಮಾತನ್ನೇ ಸೂಚಿಸಿತು.
ಈಗಿನ ಸಂದರ್ಭದಲ್ಲಿ ಎಲ್ಲರೂ ನನಗೆ ಶತ್ರುಗಳಾಗಿಯೇ ಇರುವರು.
ನನ್ನ ತಂದೆಯೇ ನನಗೆ ಪ್ರತಿಪಕ್ಷಿಯಾಗಿರುವನು. (ಸ್ವಲ್ಪ ಹೊತ್ತು
ತಲೆಬಾಗಿ ಯೋಚಿಸಿ) ಆದರೇನಾಯಿತು ? ಸರ್ವಾನರ್ಥಗಳಿಗೂ ಮೂ
ಲಕಾರಣರಾದ ದೇವಕೀ ವಸುದೇವರನ್ನೂ, ನನ್ನ ತಂದೆಯಾದ ಉಗ್ರ
ಸೇನನನ್ನೂ ಈಗಲೇ ಪಿಡಿದು ಕಾರಾಗೃಹದಲ್ಲಿ ಬಂಧಿಸುವೆನು. ಎಂಟ
ನೇ ಗರ್ಭದಿಂದಲ್ಲವೇ ನನಗೆ ಹಾನಿಯುಂಟಾಗುವುದೆಂಬ ಅಲಕ್ಷಭಾವ
ದಿಂದ ನಾನಿನ್ನು ಸುಮ್ಮನಿರಕೂಡದು. ಬಹಳ ಜಾಗ್ರತೆಯಿಂದಿರಬೇಕು.
ಯಾವ ಕ್ಷಣದಲ್ಲಿ ಏನು ವಿಪತ್ತು ಸಂಭವಿಸುವುದೋ ? ಈ ಸಂದರ್ಭ
ದಲ್ಲಿ ನನ್ನ ಮಿತ್ರರಾದ ಅಘಾಸುರ, ಧೇನುಕಾಸುರ, ಪ್ರಲಂಬಾಸುರ,
ವಾತ್ಸಾಸುರ, ಬಕಾಸುರ, ತೃಣಾವರ್ತ, ಶಕಟ, ಚಾಣೂರ, ಮುಷ್ಟಿಕ,
ಜರಾಸಂಧ, ಶಿಶುಪಾಲ, ದಂತವಕ್ತ್ರಾದಿಗಳೆಲ್ಲರಿಗೂ ಈ ವಿಚಾರವನ್ನು
ತಿಳಿಸುವುದು ಶ್ರೇಯಸ್ಕರವು. ಈಕ್ಷಣದಲ್ಲಿಯೇ ಉಗ್ರಸೇನ-ದೇವ
ಕೀ ವಸುದೇವರನ್ನು ಸೆರೆಯಲ್ಲಿ ಬಂಧಿಸಿ, ನನಗೆ ಪರಮಾಪ್ತರಾದವರ
ನ್ನಲ್ಲಿ ಕಾವಲಿಟ್ಟು, ನನ್ನ ಕಾರ್ಯದಲ್ಲಿ ನಾನು ಜಾಗರೂಕನಾಗಿರುವೆನು!
[ಎಂದು ಕಂಸನು ಅಂತಃಪುರಕ್ಕೆ ತೆರಳುವನು.]