ಪುಟ:ಸಂತಾಪಕ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ೦ತಾಪಕ.

೨೧


ದರೂ ಯೋಚಿಸದೆ " ಜಗನ್ಮಾತೆಯ ಪಾದಸಾಕ್ಷಿಯಾಗಿಯೂ ನಿನ್ನನ್ನೇ
ಮದುವೆಯಾಗುವೆನು. "ಎಂದುತ್ತರವಿತ್ತಳು. ಇಬ್ಬರಿಗೂ ಕೊನೆಮೊದ
ಲಿಲ್ಲದ ಮಾತುಗಳು ಅನೇಕವಾಗಿ ನಡೆದುವು. ಯುವಕನು ಅವಳ ಕಿವಿ
ಯಲ್ಲಿ ಒಂದೆರಡುಮಾತುಗಳನ್ನಾಡಿ ಅಲ್ಲಿ ನಿಲ್ಲದೆ ಹೊರಟುಹೋದನು.
ಕುಮಾರಿಯು ಏನನ್ನೋ ಆಲೋಚಿಸುತ್ತೆ ಮಲ್ಲಿಗೆಯಹೂವನ್ನು ಕೊಯ್ದು
ಅದರೆಸಳನ್ನು ಒಂದೊಂದನ್ನಾಗಿ ಕಿತ್ತು ಬಿಸುಡುತ್ತೆ ತಿರುಗಾಡುತ್ತಿದ್ದಳು.
ಪುಷ್ಕರಿಣಿಗೆ ಈಶಾನ್ಯಭಾಗದಲ್ಲಿ ಕುಮಾರಿಯ ವಿಹಾರಭವನವೊ೦ದಿದ್ದಿತು.
ಕುಮಾರಿಯು ಆಗಾಗ ಈಭವನದಲ್ಲಿ ತನ್ನ ಸಖಿಯರೊಡನೆ ಸೇರಿ ವಿನೋದ
ವಾಗಿ ಕಾಲಹರಣಮಾಡುತ್ತಿದ್ದಳು. ಈ ದಿನ ಆ ಯುವಕನು ಹೊರಟು
ಹೋದ ತತ್‌ಕ್ಷಣವೇ ವಿಹಾರಭವನದ ಬಾಗಿಲು ತೆರೆಯಲ್ಪಟ್ಟಂತೆ ಶಬ್ದ
ವಾಯಿತು. ಕುಮಾರಿಯು ತಲೆಯೆತ್ತಿನೋಡಿದಳು. ನಮ್ಮ ಪಾಠಕರಿಗೆ
ಪೂರ್ವಪರಿಚಿತನಾದ ವಿಜಯವರ್ಮನು ಕುಮಾರಿಯ ಸಮೀಪಕ್ಕೆ ಬಂದನು.
ಕುಮಾರಿಯು ಬೇಸರಗೊಂಡು ಪುಷ್ಕರಿಣಿಯ ಕಡೆಗೆ ತಿರುಗಿದಳು.
ವಿಜಯವರ್ಮನು, "ಕಮಲೇ ! ಇನ್ನೂ ನಿನಗೆ ನನ್ನಲ್ಲಿ ದಯೆಯುಂಟಾಗ
ಲಿಲ್ಲವೇ ? "ಎಂದು ಕೇಳಿದನು. ಕುಮಾರಿಯು ಉತ್ತರವನ್ನು ಕೊಡಲಿಲ್ಲ.
ವಿಜಯವರ್ಮನು, "ಕಮಲೆ ! ಇಷ್ಟುದಿವಸಗಳಿಂದ ನಿನ್ನ ಅನುರಾಗವನ್ನು
ಸಂಪಾದಿಸಬೇಕೆಂದು ನಾನು ಪ್ರಯತ್ನಿಸಿದುದಕ್ಕೆ ಇದೇಯೋ ಪ್ರತಿಫಲ ? "
ಎಂದು ಕೇಳಿದನು. ಅದಕ್ಕೂ ಉತ್ತರವಿಲ್ಲ. ವಿಜಯವರ್ಮನು ಅವಳ
ಕೈಯ್ಯನ್ನು ಹಿಡಿದುಕೊಳ್ಳಲೆಳಸಿದನು. ಕುಮಾರಿಗೆ ಬಹು ಕೋಪಬಂದಿತು.
ಅವಳು "ಎಲೈ ವಿಜಯವರ್ಮನೆ ! ನೀನು ನನ್ನಲ್ಲಿ ಸೋದರಿಯ ಭಾವ
ವನ್ನಿಡದೆ ಈ ರೀತಿಯಾಗಿ ವರ್ತಿಸುವುದು ಬಹಳ ತಪ್ಪು, ನನಗೆ ನಿನ್ನಲ್ಲಿರುವ
ಅಭಿಮಾನವು ಶಾಶ್ವತವಾಗಿರಬೇಕಾದರೆ ಈಗ ನನ್ನನ್ನು ಕಾಡದೆ ಹೊರಟು
ಹೋಗು "ಎಂದಳು.
ವಿಜಯ :- ಹಾಗಾದರೆ ಮತ್ತಾವಾಗ ಬರಲಿ ?
ಕಮಲೆ :- ನನ್ನನ್ನು ಕಾಣುವುದರಿಂದ ನಿನಗಾಗಬೇಕಾದುದೇನು ?
ವಿಜಯ :- ನೀನು ನನ್ನನ್ನೇ ಮದುವೆಯಾಗಬೇಕು.
ಕಮಲೆ :- ಅದಾಗಲಾರದು. ಈ ದೇಹವನ್ನು ಮನಃಪೂರ್ವಕವಾಗಿ
ಮತ್ತೊಬ್ಬನಿಗೆ ಸಮರ್ಪಿಸಿರುವೆನು.