ಬಂಗಾರ ಬಳೆಯಿಟ್ಟು ಬೈಬ್ಯಾಡ ಬಡವರನ

ವಿಕಿಸೋರ್ಸ್ದಿಂದ

ಜನಪದ ತ್ರಿಪದಿಗಳನ್ನು ರಚಿಸಿದವರು ಅಜ್ಞಾತ ಕವಿಗಳುರಚಿಸಿದ್ದಾರೆ. ಯಾರು ಯಾವಾಗ ರಚಿಸಿರಬಹುದೆಂಬುದು ನಿಖರವಾಗಿ ಹೇಳಲಾಗದ ಸಾಮೂಹಿಕ ಸೃಷ್ಟಿಯ ರಚನೆಗಳಿವು. ಜನಪದ ಸಾಹಿತ್ಯದ ಪ್ರಕಾರಗಳಲ್ಲಿ ತ್ರಿಪದಿ ಅತ್ಯಂತ ಜನಪ್ರಿಯವಾದುದು, ಗೇಯಗುಣವನ್ನು ಪ್ರಧಾನವಾಗುಳ್ಳ ರಚನೆಗಳು ಸಾವಿರಾರು ವರ್ಷಗಳ ಹಿಂದಿನ ಜನರ ಸಂಸ್ಕೃತಿಯನ್ನು ಬಿತ್ತರಿಸುತ್ತವೆ.

ಸಾರಾಂಶ : ಜಾನಪದ ತ್ರಿಪದಿಗಳಲ್ಲಿ ತಾಯಿ-ತವರು , ಬಡತನ – ಸಿರಿತನ ಮುಂತಾದ ವಿಚಾರಗಳ ಅಭಿವ್ಯಕ್ತಿಇದೆ. ಮಕ್ಕಳನ್ನುಲಾಲಿಸುವ ಪಾಲಿಸುವ ಸುಂದರವಾದ ವಾತ್ಸಲ್ಯಗೀತೆಗಳೂ ಇವೆ.

ಬಂಗಾರ ಬಳೆಯಿಟ್ಟು ಬೈಬ್ಯಾಡ ಬಡವರನ|
ಬಂಗಾರ ನಿನಗೆ ಸ್ಥಿರವಲ್ಲ| ಮಧ್ಹ್ಯಾನದ|
ಬಿಸಿಲು ಹೊಳ್ಳೋದು ತಡವಲ್ಲ ||1||

ಶ್ರೀಮಂತಿಕೆ ಬಂದಾಗ ಬಂಗಾರದ ಬಳೆಯನ್ನು ಕೈಗೆ ತೊಟ್ಟು ಬಡತನದಲ್ಲಿರುವವರ ಅಸಹಾಯಕತೆಯನ್ನು ನಿಂದಿಸಬಾರದು. ಬಡವರನ್ನು ಬೈಯಬಾರದು, ಬಂಗಾರ ಯಾರಲ್ಲೂ ಸ್ಥಿರವಾಗಿರುವುದಿಲ್ಲ. ಅದು ಬಂದಷ್ಟೇ ವೇಗವಾಗಿ ನಮ್ಮಿಂದ ದೂರಾಗಬಹುದು. ಮಧ್ಯಾಹ್ನನ ಬಿಸಿಲು ಸ್ವಲ್ಪಹೊತ್ತು ಇರುತ್ತದೆ ಬಿಸಿಲು ಇಳಿದು ನೆರಳು ಬರುವಂತೆ ಶ್ರೀಮಂತಿಕೆ ಇದೆಯೆಂದು ಬೀಗಿ ಬಡವರನ್ನು ಬಯ್ಯುವುದು ಸರಿಯಲ್ಲ. ಶ್ರೀಮಂತಿಕೆ ಅಶಾಶ್ವತ ಎಂದು ತಿಳಿದಿದ್ದರೂ ಬೀಗುವುದೇಕೆ ಎಂದು ಜನಪದರು ಪ್ರಶ್ನಿಸಿದ್ದಾರೆ.

ಬಡತನ ಬಂದರ ಬಡಿಬ್ಯಾಡ ಬಾಲರನ
ಅಡ್ಯಾಡಿ ಬಂದು ತೊಡಿಮ್ಯಾಲ| ಆಡಿದರ|
ಬಡತನವೆಲ್ಲ ಬಯಲಾಗೆ ||2||

ಬಡತನವಿದೆಯೆಂದು ಮನೆಯಲ್ಲಿರುವ ಮಕ್ಕಳನ್ನು ಹಿಡಿದು ಬಡಿಯಬಾರದು. ಬಡತನವನ್ನು ತಂದವರು ಅವರಲ್ಲ. ಬಡತನದ ನೋವನ್ನು ಮರೆಸುವ ಶಕ್ತಿ ಮಕ್ಕಳಿಗಿದೆ. ನಾವುದುಃಖ –ಚಿಂತೆಯಲ್ಲಿರುವಾಗ ಆಡುತ್ತಾ ಮಕ್ಕಳು ಬಂದ ತೊಡೆಯಮೇಲೆ ಕುಳಿತು ಬಾಲಲೀಲೆಗಳನ್ನು ಪ್ರದರ್ಶಿಸಿದರೆ ಸಾಕು ನಮ್ಮ ಬಡತನದ ಚಿಂತೆ ದುಃಖ ಕಷ್ಟ- ನೋವುಗಳೆಲ್ಲ ಓಡಿಹೋಗುತ್ತವೆ. ಇಂತಹ ಶಕ್ತಿಯಿರುವ ಬಾಲರನ್ನು ಬಡತನವೆಂದು ಬಡಿಯುವುದು ತರವಲ್ಲ ಎಂದು ಈ ತ್ರಿಪದಿಯಲ್ಲಿ ನೀತಿಬೋಧೆ ಮಾಡಲಾಗಿದೆ.

ಉತ್ತಮರ ಗೆಳೆತನ ಪುತ್ಥಳಿ ಬಂಗಾರ
ಮತ್ತ ಹೀನರ ಗೆಳೆತನ ಮಾಡಿದರ
ಹಿತ್ತಾಳೆಗಿಂತ ಬಲು ಹೀನ ||3||


ಸಹವಾಸವೆಂಬುದು ತುಂಬಾ ಮುಖ್ಯ. ನಾವು ಯಾರೊಂದಿಗೆ ಸ್ನೇಹ ಬೆಳೆಸುತ್ತೇವೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವದ ಬೆಳವಣಿಗೆ ಅವಲಂಬಿಸಿರುತ್ತದೆ. ಆದ್ದರಿಂದ ಜನಪದರು ಉತ್ತಮರ ಗೆಳೆತನ ಮಾಡಿದರೆನಮ್ಮ ವ್ಯಕ್ತಿತ್ವಕ್ಕೆ ಅಪ್ಪಟ ಬಂಗಾರದ ಬೆಲೆ ಲಭಿಸುತ್ತದೆ. ಅದನ್ನು ಬಿಟ್ಟು ಬುದ್ಧಿಹೀನರೊಂದಿಗೆ ಗೆಳೆತನ ಮಾಡಿದರೆ ನಾವು ಹಿತ್ತಾಳೆ ಗಿಂತಲೂ ಬಲು ಹೀನರಾಗುತ್ತೇವೆ , ಕಳೆ ಗುಂದುತ್ತೇವೆ. ಎಂದಿದ್ದಾರೆ (ಸಜ್ಜನರ ಸಹವಾಸ ಹೆಜ್ಜೇನ ಸವಿದಂತೆ ದುರ್ಜನರ ಒಡನಾಟ ಬಚ್ಚಲಿನ ರೊಚ್ಚಿನಂತಿಹುದು ಸರ್ವಜ್ಞ)

ಮಂದಿಮಕ್ಕಳೊಳಗ ಛಂದಾಗೊಂದಿರಬೇಕು
ನಂದೀಯ ಶಿವನ ದಯದಿಂದ ಹೋಗಾಗ
ಮಂದಿ ಬಾಯಾಗ ಇರಬೇಕ ||4||

ಸಮಾಜದಲ್ಲಿ ಹೇಗೆ ಹೊಂದಾಣಿಕೆಯಿಂದ ಬದುಕಬೇಕು ಎಂಬುದನ್ನು ವ್ಯಕ್ತಪಡಿಸುವ ಈ ತ್ರಿಪದಿಯು ವ್ಯಕ್ತಿ ಬದುಕಿರುವಾಗ ಅಕ್ಕಪಕ್ಕದ ಜನರೊಂದಿಗೆ , ಮಕ್ಕಳು ಮರಿಗಳೊಂದಿಗೆ ಚೆನ್ನಾಗಿ ಹೊಂದಿಕೊಂಡ ಬಾಳಬೇಕು ಆಗ ಅಂತಹ ಮನುಷ್ಯ ಸತ್ತಾಗ ಜನ ಸ್ಮರಿಸುತ್ತಾರೆ. ದೇವರದಯೆಯಿಂದ ನಾವು ಸತ್ತಮೇಲೂ ಜನರ ಬಾಯಲ್ಲಿ ಜೀವಿಸುವುದೇ ಸಾರ್ಥಕವಾದ ಜೀವನ ಎಂಬ ಆಶಯ ಇಲ್ಲಿದೆ.

ಇದ್ದರ ಇರಬೇಕು ಬುದ್ಧಿವಂತರ ನೆರೆಯ
ಖುದ್ದರಗೇಡಿ ಕುಲಗೇಡಿ ನೆರೆಯಿದ್ದು
ಇದ್ದುಟ್ಟು ಬುದ್ಧಿ ಕಳಕೊಂಡ ||5||

ನಾವು ಬದುಕುತ್ತಿರುವ ವಾತಾವರಣದಲ್ಲಿ ಅಕ್ಕಪಕ್ಕದಲ್ಲಿ ಎಂತಹ ಜನರಿರುತ್ತಾರೆ ಎಂಬುದು ಅತಿಮುಖ್ಯ. ಬುದ್ಧಿವಂತರು ನಮ್ಮ ನೆರೆಯಲ್ಲಿ ವಾಸಿಸಿದರೆ ಅವರಿಂದ ಉಪಯೋಗವಾಗುವುದು. ಅದಲ್ಲದೆ ದುಷ್ಟರು ನಮ್ಮ ನೆರೆಯಲ್ಲಿದ್ದರೆ ನಾವು ಇರುವ ಬುದ್ಧಿಯನ್ನು ಕಳಕೊಂಡು ಅವರಂತೆಯೇ ದುಷ್ಟಬುದ್ಧಿಬೆಳೆಸಿಕೊಳ್ಳುತ್ತೇವೆ. ಆದ್ದರಿಂದ ನಮಗೆ ಒಳ್ಳೆಯ ನೆರೆ ಹೊರೆಯವರ ಸಹವಾಸ ಅತಿ ಅಗತ್ಯ.


ಹುಟ್ಟುವಾಗ ತರಲಿಲ್ಲ ಹೋಗುವಾಗೊಯ್ಯಲಾರೆ
ಸುಟ್ಟು ಸುಟ್ಟು ಸುಣ್ಣದಹರಳಾಯ್ತು ದೇಹವು
ಕಷ್ಟವನು ಬಿಡಿಸೋ ಸೃಷ್ಟಿಗೊಡೆಯ||6||

ಕಷ್ಟದಿಂದ ಪಾರು ಮಾಡಬೇಕೆಂದು ಸೃಷ್ಟಿಗೊಡೆಯನಾದ ದೇವರಲ್ಲಿ ಜನಪದರು ಮೊರೆಯಿಡುವ ಚಿತ್ರಣ ಇಲ್ಲಿದೆ. ಹುಟ್ಟುವ ಮೊದಲು ಈ ದೇಹ ಇರಲಿಲ್ಲ ಹುಟ್ಟಿದ ಮೇಲಷ್ಟೇ ಈ ದೇಹ ದೊರೆತಿದೆ. ಅದೇರೀತಿ ಸತ್ತಾಗಲೂ ಈ ದೇಹವನ್ನು ಭೂಮಿಯ ಮೇಲೆ ಬಿಟ್ಟು ಹೋಗುತ್ತೇವೆಯೇ ಹೊರೆತು ಹೊತ್ತು ಕೊಂಡು ಹೋಗುವುದಿಲ್ಲ. ಆದರೆ ಹುಟ್ಟಿದಾಗಿನಿಂದ ಸಾಯುವವರೆಗಿನ ಅವಧಿಯಲ್ಲಿ ಜೀವನ ನಡೆಸಲೇ ಬೇಕಿರುವುದರಿಂದ ಆ ಬದುಕಿನಲ್ಲಿ ಕಷ್ಟಗಳು ಬಂದಾಗ ಬಿಡಿಸಿ ಸಲಹಬೇಕೆಂದು ದೇವರಲ್ಲಿ ಪ್ರಾರ್ಥಿಸಿದ್ದಾನೆ. (ಜನಪದರು ಹುಟ್ಟುವಾಗ ಏನನ್ನೂ ತರದೆ,ಭೂಮಿಗೆ ಬಂದ ಜೀವ ಈ ಭೂಮಿಯಲ್ಲಿ ಗಳಿಸಿದ್ದೆಲ್ಲವನ್ನು ಸತ್ತಾಗ ಬಿಟ್ಟುಹೋಗಬೇಕು ಎಂಬ ಸತ್ಯವನ್ನು ಜನರಿಗೆ ತಿಳಿಸುತ್ತಿದ್ದಾರೆ)

ಬ್ಯಾಸಗಿ ದಿವಸಕ ಬೇವಿನ ಮರ ತಂಪ
ಭೀಮರತಿಯೆಂಬ ಹೊಳಿ ತಂಪ ಹಡೆದವ್ವ
ನೀ ತಂಪ ನನ್ನ ತವರೀಗಿ ||7||

ತಾಯಿಮನೆ ಅಥವಾ ತವರನ್ನು ನೆನೆದು ಹೆಣ್ಣೊಬ್ಬಳು ಹಾಡಿದ ತ್ರಿಪದಿಯಿದು. ಬೇಸಗೆಯ ದಿನಗಳಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಬೇವಿಮರಗಳಿಂದ ಉಂಟಾದ ತಂಪಾದ ಹವೆ ಹಿತಕರವಾಗಿರುತ್ತದೆ. ಅದೇರೀತಿ ಭೀಮರತಿ ಎಂಬ ಹೊಳೆಯ ನೀರು ತಣ್ಣಗಿರುತ್ತದೆ. ಅಂತೆಯೇ ತವರಿನಲ್ಲಿರುವ ತಾಯಿಯ ನೆನಪು ಮಗಳಿಗೆ ತಂಪಾಗಿ ಕಂಡಿದೆ.

ಕಣ್ಣೆಂಜಲ ಕಾಡೀಗಿ ಬಾಯೆಂಜಲ ವೀಳ್ಯಾವ
ಯಾರೆಂಜಲುಂಡು ನನಮನವ ಹಡೆದೌವ್ನ
ಬಾಯೆಂಜಲುಂಡು ಬೆಳೆದೇನ ||8||

ತಾಯಿಯ ವಾತ್ಸಲ್ಯ ತಾಯಿ ತನ್ನ ಮಗುವಿಗೆ ದೃಷ್ಟಿತಾಗಬಾರದು ಎಂದು ಕಾಡಿಗೆಯನ್ನು ಮಗುವಿನ ಕೆನ್ನೆಗೋ , ಹಣೆಗೋ ಹಚ್ಚಿ ಮಗುವನ್ನು ಕಾಪಾಡುತ್ತಾಳೆ. ಅಂತೆಯೇ ಎಲೆ ಅಡಿಕೆಯನ್ನು ದೃಷ್ಟಿತೆಗೆಯುವಾಗ ಥೂ,ಥೂ ಥೂ ಎಂದು ಉಗುಳಿ ದೃಷ್ಟಿತೆಗೆಯುತ್ತಾಳೆ. ಹೀಗಾಗಿ ಜನಪದರು ತಾಯಿಯ ಕಣ್ಣೆಂಜಲು , ಉಗುಳೆಂಜಲು ಉಂಡು ಮಗು ಬೆಳೆಯುತ್ತದೆ ಎಂದಿದ್ದಾರೆ. ತಾಯಿ ಮಕ್ಕಳಲ್ಲಿ ಬೇಧವಿಲ್ಲ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.( ತಾಯಿಯ ಕಣ್ಣಲ್ಲಿ ಮಗು ಜಗತ್ತನ್ನು ಕಾಣುತ್ತಿರುವುದು + ತಾಯಿ ಶಬರಿಯಂತೆ ಮೊದಲು ರುಚಿನೋಡಿ ಒಳ್ಳೆಯದನ್ನು ತನ್ನಮಗುವಿಗೆ ನೀಡುವುದು ಬಾಯೆಂಜಲು ಎಂದಿರಬಹುದೇ?)

ಯಾರು ಇದ್ದರೂ ನನ್ನ ತಾಯವ್ವನ ಓಲ್ಹರು
ಸಾವಿರ ಕೊಳ್ಳಿ ಒಲಿಯಾಗ ಇದ್ದರ
ಜ್ಯೋತಿ ನಿನ್ಯಾರ ಹೋಲರ ||9||

ತಾಯಿಗಿಂತ ದೊಡ್ಡ ಬಂಧು ಇನ್ನೊಬ್ಬರಿಲ್ಲ. ಆದ್ದರಿಂದ ಅವಳ ಸ್ಥಾನವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ. ಯಾರಿದ್ದರೂ ತಾಯಿ ಇದ್ದಂತೆ ಆಗುವುದಿಲ್ಲ. (ಹೆಂಡತಿ ಸತ್ತರೆ ಇನ್ನೊಬ್ಬ ಹೆಂಡತಿ ತರಬಹುದು, ಇನ್ನೊಬ್ಬ ಹೆತ್ತ ಅಮ್ಮನನ್ನು ತರಲಾಗದು) ಅವಳ ಸ್ಥಾನವನ್ನು ಯಾರೂ ತುಂಬಲಾಗದು. ಒಲೆಯಲ್ಲಿ ಸಾವಿರ ಕೊಳ್ಳಿ ಉರಿಯುತ್ತಿದ್ದರೂ ಅವು ದೇವರಕೋಣೆಯಲ್ಲಿ ಬೆಳಗುವ ಹಣತೆಯ ಜ್ಯೋತಿಗೆ ಸಮನಲ್ಲ. ಎಂದು ಈ ತ್ರಿಪದಿಯಲ್ಲಿ ಹೇಳಲಾಗಿದೆ.

ಹೆಣ್ಣು ಮಕ್ಕಳ ದುಃಖ ಹೆತ್ತವ್ವ ಬಲ್ಲಳು
ಹುತ್ತದ ಒಳಗಿರೋ ಸರುಪನ ಬೇಗೆಯ
ನೆತ್ತಿ ಮೇಲಿರುವ ಶಿವಬಲ್ಲ ||10||

ಹೆಣ್ಣುಮಕ್ಕಳ ದುಃಖವನ್ನು ತಾಯಿಮಾತ್ರವೇ ಅರ್ಥಮಾಡಿಕೊಳ್ಳಬಲ್ಲಳು. ತಂದೆಗಾಗಲಿ , ಗಂಡನಿಗಾಗಲಿ ಹೆಣ್ಣುಮಕ್ಕಳ ದುಃಖದ ತೀವ್ರತೆಯ ಅರಿವಾಗುವುದಿಲ್ಲ. ಹುತ್ತದಲ್ಲಿರುವ ಸರ್ಪದ ನೋವನ್ನು ನೆತ್ತಿಮೇಲಿರುವ ಶಿವನಿಗೆ ತಿಳಿಯುವಂತೆ ಹೆಣ್ಣುಮಕ್ಕಳ ದುಃಖ ಹೆತ್ತ ತಾಯಿಗೇ ಅರ್ಥವಾಗುವುದು. ಎಂದಿದ್ದಾರೆ.

ತಾಯವ್ನ ನೆನೆಯೂದು ಯಾಯಾಳಿ ಯಾಹೊತ್ತ
ಊರೆಲ್ಲ ಉಂಡು ಮಲಗಾನ ಬೆಳ್ಳಿಚಿಕ್ಕಿ
ಹೊಂದಾಗ ಹಡೆದವ್ನ ನೆನೆದೇನ ||11||

ಹೆತ್ತ ತಾಯಿಯನ್ನು ನೆನಪಿಸಿಕೊಳ್ಳಲು ಕಾಲದ ಪರಿಮಿತಿ ಇರುವುದಿಲ್ಲ. ಯಾವವೇಳೆಯಲ್ಲಾದರೂ ಯಾವಸ್ಥಳದಲ್ಲಾದರೂ ನೆನಪಿಸಿಕೊಳ್ಳಬಹುದು. ಆದರೂ ಇಲ್ಲಿ ಜಾನಪದ ಕವಯಿತ್ರಿಯು ಊರೆಲ್ಲ ಉಂಡು ಮಲಗಿದಮೇಲೆ, ಮುಂಜಾನೆ ಬೆಳ್ಳಿಚುಕ್ಕಿ (ಶುಕ್ರಗ್ರಹ) ಮೂಡಿದ ಸಮಯದಲ್ಲಿ ತನ್ನ ತಾಯಿಯನ್ನು ನೆನೆಯುವುದಾಗಿ ಹೇಳುತ್ತಾಳೆ.

ತಾಯವ್ನ ಬೈಬ್ಯಾಡ ತಿಳಿಗೇಡಿ ನನತಮ್ಮ
ಬಾಳದಿನದಾಕಿ ಹಡೆದವ್ವನ ಬೈದರ
ಭಾಳ ಮರುಗ್ಯಾಳ ಮನದಾಗ ||12||

ಅಣ್ಣ ಅಥವ ಅಕ್ಕ ತನ್ನ ತಮ್ಮನಿಗೆ ಹೇಳಿದ ಬುದ್ಧಿಮಾತು ಇಲ್ಲಿದೆ. ಸಾಮಾನ್ಯವಾಗಿ ಚಿಕ್ಕವರಲ್ಲಿ ವಯೋವೃದ್ಧರ ಬಗ್ಗೆ ಸಲ್ಲದ ತಾತ್ಸಾರ ಇರುತ್ತದೆ. ಮಾತು ಮಾತಿಗೂ ವಯಸ್ಸಾದ ತಂದೆ-ತಾಯಿಯರನ್ನು ದೂಷಿಸುತ್ತಲೇ ಇರುತ್ತಾರೆ. ಆದ್ದರಿಂದ ತಮ್ಮನಿಗೆ ಬುದ್ಧಿಹೇಳುತ್ತ ಬುದ್ಧಿಇಲ್ಲದವರಂತೆ ತಾಯಿಯನ್ನು ಬೈಯದಿರು, ಅಕೆ ಹಿರಿಯಳು ಚಿಕ್ಕವನಾದ ನೀನು ಬೈದರೆ ಅವಳು ಮನದೊಳಗೇ ದುಃಖಿಸುತ್ತಾ ಕೊರಗಬಹುದು.

ತಾಯಿಯಿಲ್ಲದ ತವರೀಗಿ ಹೋಗದಿರು ನನ ಮನವೇ
ನೀರಿಲ್ಲದ ಕೆರಿಗೆ ಕರುಬಂದು ತಿರುಗಾಗ
ಆಗ ನೋಡವರ ದುಃಖಗಳ ||13||

ತಾಯಿ ಇದ್ದರೇ ತವರಲ್ಲಿ ಪ್ರೀತಿ ವಿಶ್ವಾಸ, ಆದರ , ಗೌರವ ಇತ್ಯಾದಿ. ತಾಯಿ ಯಿಲ್ಲದ ತವರನ್ನು ನೆನೆವ ಮನಕ್ಕೆ ಬುದ್ಧಿವಾದ ಹೇಳುತ್ತಿರುವ ಹೆಣ್ಣೊಬ್ಬಳು ತಾಯಿಯಿಲ್ಲದ ತವರಿಗೆ ಹೋಗಬೇಡ! ನೀರಿಲ್ಲದ ಕೆರೆಗೆ ನೀರನ್ನು ಅರಸುತ್ತಾ ಬಂದ ಬಾಯಾರಿದ ಕರು ಬೇಸರದಿಂದ ಹಿಂದಿರುಗಿ ಹೋಗುವಂತೆ ನಿನಗೆ ಕೂಡ ನಿರಾಸೆ, ದುಃಖಉಂಟಾಗುತ್ತದೆ. ಎಂದಿದ್ದಾಳೆ.

ಉಂಗೂರ ಉಡದಾರ ಮುರಿದರೆ ಮಾಡಿಸಬಹುದು
ಮಡದಿ ಸತ್ತರ ತರಬಹುದು| ಹಡೆದಂಥ
ತಂದಿ ತಾಯೆಲ್ಲಿ ಸಿಕ್ಕಾರ||14||

ತಂದೆ-ತಾಯಿಗಳು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುಗಳಲ್ಲ. ನಾವು ತೊಟ್ಟುಕೊಳ್ಳುವ ಉಂಗುರ ಮುರಿದುಹೋದರೆ, ಸೊಂಟದ ಉಡುದಾರ ಕಿತ್ತುಹೋದರೆ ಸರಿಮಾಡಿಕೊಂಡು ಮತ್ತೆ ಧರಿಸಬಹುದು. ಆದರೆ ತಂದೆ-ತಾಯಿಗಳನ್ನು ಕಳೆದುಕೊಂಡರೆ ತಿರುಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವರಿರುವಾಗಲೇ ಪ್ರೀತಿಯಿಂದ ಅವರ ಆರೈಕೆ ಮಾಡಬೇಕು ಎಂಬ ಬುದ್ಧಿವಾದ ಇಲ್ಲಿದೆ.

ಹಾಲುಂಡ ತವರೀಗಿ ಏನೆಂದು ಹರಸಲಿ
ಹೊಳೆದಂಡಿಲಿರುವ ಕರಕೀಯ ಕುಡಿಹಾಂಗ
ಹಬ್ಬಲಿ ಅವರ ರಸಬಳ್ಳಿ||15||

ಅತ್ಯಂತ ಜನಪ್ರಿಯವಾದ ಈ ತ್ರಿಪದಿಯು ಒಳ್ಳೆಯದನ್ನು ಬಯಸುವ ಹೆಣ್ಣುಮಗಳೊಬ್ಬಳ ಹೃದಯವೈಶಾಲ್ಯತೆಯನ್ನು ಇಲ್ಲಿ ತೋರಿಸುತ್ತಿದೆ. ತಾನು ಹಾಲುಕುಡಿದು ಬೆಳೆದಂತ ತವರಿಗೆ ಏನೆಂದು ಹರಸಲಿ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವ ಬಾಲೆ ಹೊಳೆಯ ದಂಡೆಯಮೇಲೆ ಇರುವಂತಹ ಗರಿಕೆಯ ಹುಲ್ಲಿನಂತೆ ನನ್ನ ತವರಿನ ವಂಶವೂ ಬೆಳೆಯಲಿ ಎಂದುಮನದುಂಬಿ ಹಾರೈಸಿದ್ದಾಳೆ.[೧]

ಬಾಹ್ಯ ಕೊಂಡಿಗಳು[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಹಬ್ಬಲಿ ಅವರ ರಸಬಳ್ಳಿ