ಭಕ್ತ ಕನಕದಾಸ - ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ

ವಿಕಿಸೋರ್ಸ್ದಿಂದ

ಸಾಹಿತ್ಯ: ಕನಕದಾಸರು


ಈ ಸಾಹಿತ್ಯವನ್ನು ಭಕ್ತ ಕನಕದಾಸ ಚಲನಚಿತ್ರದಲ್ಲಿ ಉಪಯೋಗಿಸಲಾಗಿದೆ

ಗಾಯನ: ಪಿ.ಬಿ.ಶ್ರೀನಿವಾಸ್
ಸಂಗೀತ: ಎಂ.ವೆಂಕಟರಾಜು



ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವಿಚಾರಿಸಲು ಮತಿ ಹೀನ ನಾನು
ಮಹಾಮಹಿಮ ಕೈವಲ್ಯ ಪತಿ ನೀನು
ಏನ ಬಲ್ಲೆನು ನಾನು? ಮೆರೆ ಸುಜ್ಞಾನಮೂರುತಿ ನೀನು
ನಿನ್ನ ಸಮಾನರುಂಟೆ ದೇವಾ?
ರಕ್ಷಿಸು ನಮ್ಮ ಅನವರತ
ದೇವಾ!
ದೇವಾ!
ದೇವಾ!

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ |೨|
ಕೂಗಿದರೂ ದನಿ ಕೇಳಲಿಲ್ಲವೇ
ನರಹರಿಯೇ ಬಾಗಿಲನು ತೆರೆದು

ಪರಮಪದದೊಳಗೆ ವಿಷಧರನತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ
ಆದಿ ಮೂಲ ಎಂದು
ಕರೆಯಾಲಾಕ್ಷಣ ಬಂದು
ಒದಗಿದೆಯೋ
ನರಹರಿಯೇ ಬಾಗಿಲನು ತೆರೆದು

ಕಡುಕೋಪದಿಂ ಖಳನು
ಖಡ್ಗವನೆ ಪಿಡಿದು
ನಿನ್ನೊಡೆಯ ಎಲ್ಲಿಹನೆಂದು ನುಡಿಯೇ
ಧೃಢ ಭಕುತಿಯಲಿ ಶಿಶುವು
ಬಿಡದೆ ನಿನ್ನನು ಭಜಿಸೇ
ಸಡಗರದಿ ಸ್ತಂಭದಿಂದೊಡೆದೆ
ನರಹರಿಯೇ ಬಾಗಿಲನು ತೆರೆದು

ಯಮಸುತನ ರಾಣಿಗೆ ಅಕ್ಷಯ ವಸನವನಿತ್ತೆ
ಸಮಯದಲಿ ಅಜಮಿಳನಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೇ
ಬಾಗಿಲನು ತೆರೆದು |೩|
ಸೇವೆಯನು ಕೊಡೊ ಹರಿಯೇ!

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ