ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೬)

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: ೬ ನೆಯ ಸಂಧಿ[ಸಂಪಾದಿಸಿ]

ಸೂಚನೆ:-[ಸಂಪಾದಿಸಿ]

ಕದನ ಮುಖದಲಿ ಖೋಡಿಯಿಲ್ಲದೆ
ಬೆದರದೊದಗಿದ ನರಗೆ ಕಾರು
ಣ್ಯದಲಿ ಕಾಮವಿರೋಧಿ ಕೊಟ್ಟನು ಪಾಶುಪತಶರವ ||ಸೂಚನೆ||
ಪದವಿಭಾಗ-ಅರ್ಥ:ಕದನ ಮುಖದಲಿ(ಯುದ್ಧಮಾಡುವ ಮೂಲಕ) ಖೋಡಿಯಿಲ್ಲದೆ((ತಪ್ಪು ಇಲ್ಲದೆ)) ಬೆದರದೆ+ ಒದಗಿದ ನರಗೆ(ಅರ್ಜುನನಿಗೆ) ಕಾರುಣ್ಯದಲಿ ಕಾಮವಿರೋಧಿ ಕೊಟ್ಟನು ಪಾಶುಪತ ಶರವ.
ಅರ್ಥ:ಕಾಮದೇವನ ವಿರೋಧಿಯಾದ ಪರಶಿವನು ಅರ್ಜುನನೊಡನೆ ಯುದ್ಧಮಾಡುವ ಮೂಲಕ, ತಪ್ಪು ಇಲ್ಲದೆ ತನಗೆ ಹೆದರದೆ ಎದುರಿಸಿದ ಅರ್ಜುನನಿಗೆ ಕರುಣೆಯಿಂದ ಪಾಶುಪತ ಅಸ್ತ್ರವನ್ನು ಕೊಟ್ಟನು.[೧][೨] [೩] [೪][೫]

ಅರ್ಜುನ ಕಿರಾತ ಸಂವಾದ[ಸಂಪಾದಿಸಿ]

ಏಲೆ ಕಿರಾತ ಮದೀಯ ಬಾಣದ
ಬಲೆಗೆ ನೀಮೃಗವಾಗದಿರು ನಿ
ನ್ನಳವ ಮರೆಯಾ ಬನದನರಿಮೊಲ ಹುಲ್ಲೆ ಹರಿಣದಲಿ |
ಗೆಲಿದ ಗರುವನು ನೀನು ನಿನ್ನ
ಗ್ಗಳಿಕೆಗಾ೦ಜುವೆವು ನಿನ್ನೀ
ದಳಕೆ ಪತಿಯು೦ಟಾದಡಾತನ ಕೊ೦ಡು ಬಾಯೆ೦ದ || ೧ ||
ಪದವಿಭಾಗ-ಅರ್ಥ:ಏಲೆ ಕಿರಾತ ಮದೀಯ(ನನ್ನ) ಬಾಣದ ಬಲೆಗೆ ನೀ ಮೃಗವಾಗದಿರು, ನಿನ್ನ+ ಅಳವ(ಶಕ್ತಿಯ) ಮರೆಯಾ ಬನದ(ಕಾಡಿನ) ನರಿ ಮೊಲ ಹುಲ್ಲೆ ಹರಿಣದಲಿ ಗೆಲಿದ ಗರುವನು(ಸೊಕ್ಕನ್ನು), ನೀನು ನಿನ್ನ+ ಅಗ್ಗಳಿಕೆಗೆ(ಸಾಮರ್ಥ್ಯ) ಅ೦ಜುವೆವು ನಿನ್ನ+ ಈ ದಳಕೆ ಪತಿಯು೦ಟಾದಡೆ (ಒಡೆಯನಿದ್ದರೆ) ಆತನ ಕೊ೦ಡು ಬಾಯೆ೦ದ.
ಅರ್ಥ:ಅರ್ಜುನನು ಶಬರನನ್ನು ಕುರಿತು,'ಏಲೆ ಕಿರಾತನೇ ನನ್ನ ಬಾಣದ ಬಲೆಗೆ ನೀನು ಮೃಗವಾಗಿ ಸಾಯಬೇಡ; ನಿನ್ನ ಶಕ್ತಿಯನ್ನು ನೀನು ಮರೆತುಬಿಡು. ಈ ಕಾಡಿನ ನರಿ, ಮೊಲ, ಹುಲ್ಲೆ, ಜಿಂಕೆಗಳನ್ನು ಗೆದ್ದ ಸೊಕ್ಕನ್ನು ಮರೆತುಬಿಡು. ನೀನು ನಿನ್ನ ಹೆಚ್ಚುಗಾರಿಕೆಗೆ ಅ೦ಜುವೆವು- ಗೌರವಿಸುತ್ತೇನೆ. ನಿನ್ನ ಈ ಬೇಡರ ದಳಕ್ಕೆ ಒಡೆಯನಿದ್ದರೆ ಆತನ ಕರೆದುಕೊಂಡು ಬಾ,'ಎ೦ದ.
ಎನಲು ನಕ್ಕನು ಶ೦ಭು ಭಕ್ತನ
ಮನದ ದೃತಿಯನು ಭುಜ ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ |
ನೆನೆದು ನುಡಿದನಿದೇನು ತಮ್ಮಡಿ
ನಿನಗೆ ತಪದಲಿ ಖಡ್ಗವೇಕೀ
ಧನು ಶರಾವಳಿಯೇಕೆ ನಿನ್ನ೦ಗವಣೆ ಯೇನೆ೦ದ || ೨ ||
ಪದವಿಭಾಗ-ಅರ್ಥ:ಎನಲು ನಕ್ಕನು ಶ೦ಭು ಭಕ್ತನ ಮನದ ದೃತಿಯನು, ಭುಜ ಬಲವನು+ ಆತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ, ನೆನೆದು ನುಡಿದನು+ ಇದೇನು ತಮ್ಮ+ ಅಡಿ(ಪಾದ - ಪಾದದಲ್ಲಿ ಅರಿಕೆ; ತಮ್ಮ ಬಳಿ), ನಿನಗೆ ತಪದಲಿ ಖಡ್ಗವೇಕೀಧನು ಶರಾವಳಿಯೇಕೆ ನಿನ್ನ೦ಗವಣೆ ಯೇನೆ೦ದ
ಅರ್ಥ:ಅರ್ಜುನನು ಹೀಗೆ ಎನ್ನಲು,'ಶಬರಶಂಕರನು ನಕ್ಕನು. ಶ೦ಭುವು ಭಕ್ತನ ಮನಸ್ಸಿನ ದೃಡತೆಯನ್ನು, ಭುಜ ಬಲವನ್ನು ಆತನ ಪರಾಕ್ರಮ ಲಕ್ಷ್ಮಿಯನ್ನು, ಪಾರ್ವತಿಗೆ ತೋರಿಸುತ್ತಾ, ತನ್ನ ಉದ್ದೇಶವನ್ನು ನೆನೆದು ನುಡಿದನು, ತಮ್ಮ ಅಡಿ- ತಮ್ಮ ಬಳಿ ಇದೇನು? ನಿನಗೆ ತಪಸ್ಸಿನಲ್ಲಿ ಖಡ್ಗವೇಕೆ ಈ ಧನಸ್ಸು, ಶರಗಳ ಬತ್ತಳಿಕೆ ಏಕೆ? ನಿನ್ನ ಈ ಕಾರ್ಯದ ಉದ್ದೇಶ ಏನು ಎಂದ.
ಏಕೆ ನಿನಗೀತಪದ ಚಿ೦ತೆ ವಿ
ವೇಕ ಶಾಸ್ರ್ತ ವಿಚಾರವಿದು ವಿಪಿ
ನೌಕಸರಸ೦ಹಾರ ವಿದ್ಯಾವೃತ್ತಿ ನಿನ್ನದಲೆ |
ಆಕೆವಾಳರ ಕರೆಸು ನೀನೆ
ಕಾಕಿ ನಿನ್ನಲಿ ಹರಿಯದಾಹವ
ವೇಕೆ ನಿನಗೀಗೆ೦ದು ಕಪಟ ಕಿರಾತನನು ಜರೆದ || ೩ ||
ಪದವಿಭಾಗ-ಅರ್ಥ:ಏಕೆ ನಿನಗೆ+ ಈ ತಪದ ಚಿ೦ತೆ, ವಿವೇಕ ಶಾಸ್ರ್ತ ವಿಚಾರವು+ ಇದು ವಿಪಿನಕೆ+ ಓಸರ ಸ೦ಹಾರ ವಿದ್ಯಾವೃತ್ತಿ ನಿನ್ನದಲೆ, ಆಕೆವಾಳರ(ವೀರ, ಪರಾಕ್ರಮಿ) ಕರೆಸು ನೀನು+ ಏಕಾಕಿ ನಿನ್ನಲಿ ಹರಿಯದು ಆಹವವು(ಯುದ್ಧ), ಏಕೆ ನಿನಗೆ ಈಗ+ ಎಂದು ಕಪಟ ಕಿರಾತನನು ಜರೆದ.
ಅರ್ಥ:ಏಕೆ ನಿನಗೆ+ ಈ ತಪದ ಚಿ೦ತೆ, ವಿವೇಕ ಶಾಸ್ರ್ತ ವಿಚಾರವು+ ಇದು ವಿಪಿನಕೆ+ ಓಸರ ಸ೦ಹಾರ ವಿದ್ಯಾವೃತ್ತಿ ನಿನ್ನದಲೆ, ಆಕೆವಾಳರ(ವೀರ, ಪರಾಕ್ರಮಿ) ಕರೆಸು ನೀನು+ ಏಕಾಕಿ ನಿನ್ನಲಿ ಹರಿಯದು ಆಹವವು(ಯುದ್ಧ), ಏಕೆ ನಿನಗೆ ಈಗ+ ಎಂದು ಕಪಟ ಕಿರಾತನನು ಜರೆದ.
ನೀವು ಬಲ್ಲಿರಿ ಶಾಸ್ತ್ರದಲಿ ಶ
ಸ್ತ್ರಾವಳಿಯಲಾವಿ೦ದು ಪಕ್ಷಿ ಮೃ
ಗಾವಳಿಯ ಬೇ೦ಟೆಯಲಿ ಬಲ್ಲೆವು ಜಾತಿ ಧರ್ಮ ವಿದು |
ನೀವು ಬಲುಹುಳ್ಳವರುನಿಮ್ಮೊಡ
ನಾವು ಸೆಣಸುವರಲ್ಲ ನಿಮ್ಮೊವೊ
ಲಾವ ಋಷಿ ಶಸ್ತ್ರಜ್ಞನಾತನ ಬಿರುದ ತಡೆಯೆ೦ದ || ೪ ||
ಪದವಿಭಾಗ-ಅರ್ಥ:ನೀವು ಬಲ್ಲಿರಿ ಶಾಸ್ತ್ರದಲಿ, ಶಸ್ತ್ರ+ ಆವಳಿಯಲಿ(ಬಹಳ,ಸಮೂಹ)+ ಆವು(ನಾವು)+ ಇಂದು ಪಕ್ಷಿ ಮೃಗಾವಳಿಯ ಬೇ೦ಟೆಯಲಿ ಬಲ್ಲೆವು ಜಾತಿ ಧರ್ಮವು+ ಇದು; ನೀವು ಬಲುಹುಳ್ಳವರು(ಪರಾಕ್ರಮ ಉಳ್ಳವರು) ನಿಮ್ಮೊಡನೆ+ ಆವು ಸೆಣಸುವರಲ್ಲ; ನಿಮ್ಮೊವೊಲು+ ಆವ ಋಷಿ ಶಸ್ತ್ರಜ್ಞನು+ ಆತನ ಬಿರುದ ತಡೆಯೆ೦ದ.
ಅರ್ಥ:ಶಬರ ಶಿವನು ಅರ್ಜುನನಿಗೆ,'ನೀವು ಶಾಸ್ತ್ರದಲ್ಲಿ ತಿಳುವಳಿಕೆಯುಳ್ಳವರು; ನಾವು ಶಸ್ತ್ರಗಳನ್ನು ಬಲ್ಲವರು; ಇಂದು ಪಕ್ಷಿ ಮೃಗಗಳ ಗುಂಪನ್ನು ಬೇಟೆಯಲ್ಲಿ ಹೊಡೆಯಲು ಬಲ್ಲೆವು; ಇದು ನಮ್ಮ ಜಾತಿ ಧರ್ಮವು, ನೀವು ಬಹಳ ಪರಾಕ್ರಮ ಉಳ್ಳವರು ನಿಮ್ಮೊಡನೆ ನಾವು ಸೆಣಸುವರಲ್ಲ- ಯುದ್ಧಮಾಡುವವರಲ್ಲ; ನಿಮ್ಮಂತೆ ಯಾವ ಋಷಿ ಶಸ್ತ್ರಜ್ಞನು ಇದ್ದಾನೆ? ಇದ್ದರೂ ಆತನ ಬಿರುದನ್ನು ತಡೆಯುವಿರಿ- ಮೀರಿಸುವಿರಿ,' ಎಂದನು.
ಕಟಕಿಯೇಕೆ ಪುಳಿ೦ದ ನಾವು
ಬ್ಬಟೆಯ ತಪಸಿಗಳೆ೦ಬುದಿದು ವಿ
ಸ್ಪುಟವಲೇ ತಪ್ಪೇನು ನಿನ್ನೊಡನೆ೦ದು ಫಲವೇನು |
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನು ಶರ ಖಡ್ಗದಲಿ ಧೂ
ರ್ಜಟಿ ಯಿಹನು ನಾವವರ ಶಿಷ್ಯರು ಶಬರ ಕೇಳೆ೦ದ || ೫ ||
ಪದವಿಭಾಗ-ಅರ್ಥ:ಕಟಕಿಯು(ಚುಚ್ಚುಮಾತು, ಅಪಹಾಸ್ಯ)+ ಏಕೆ ಪುಳಿ೦ದ(ಬೇಡರವನೇ), ನಾವು+ ಉಬ್ಬಟೆಯ(ಅತಿಶಯ) ತಪಸಿಗಳೆ೦ಬುದು+ ಇದು ವಿಸ್ಪುಟವಲೇ, ತಪ್ಪೇನು ನಿನ್ನೊಡನೆ+ ಎ೦ದು ಫಲವೇನು? ಜಟೆ ಮೃಗಾಜಿನ ಭಸ್ಮದೊಡನೆ+ ಉತ್ಕಟದ ಧನು ಶರ ಖಡ್ಗದಲಿ ಧೂರ್ಜಟಿಯು+ ಇಹನು ನಾವವರ ಶಿಷ್ಯರು, ಶಬರ ಕೇಳೆ೦ದ.
ಅರ್ಥ:ಅರ್ಜುನನು ಕಿರಾತ ಶಿವನಿಗೆ,'ಪುಳಿ೦ದನೇ ನೀನು ಚುಚ್ಚಿ ಮಾತನಾಡುವುದು ಏಕೆ? ನಾವು ಕಠೀಣತಮ ತಪಸ್ವಿಗಳೆ೦ಬುದು ಸ್ಪಷ್ಟವಾಗಿಯೇ ಇದೆ; ತಪ್ಪೇನು: ನಿನ್ನೊಡನೆ ವಾದಮಾಡಿ ಫಲವೇನು? ಜಟೆ ಮೃಗಾಜಿನ ಭಸ್ಮದೊಡನೆ, ಬಲಿಷ್ಠವಾದ ಧನು ಶರ ಖಡ್ಗವನ್ನು ಧರರಿಸಿ ಧೂರ್ಜಟಿಯಾದ ಶಿವನು ಇದ್ದಾನೆ. ನಾವು ಅವರ ಶಿಷ್ಯರು, ಶಬರನೇ ತಿಳಿದುಕೋ,'ಎ೦ದ.
ಲೋಕ ಶಿಕ್ಷಕ ರಲ್ಲಲೇ ನಮ
ಗೇಕೆ ನಿಮ್ಮಯ ತಪದ ಚಿ೦ತೆ ಪಿ
ನಾಕಧರನಡಹಾಯ್ದರೆಯು ಬೀಡೆವೆಮ್ಮ ವಾಸಿಗಳ |
ಈ ಕಳ೦ಬವಿದೆಮ್ಮ ದೆನುತ ವ
ನೌಕಹದ ನೆಳಲಿನಲಿ ನಿ೦ದು ಪಿ
ನಾಕಿ ನುಡಿದನು ಕದಡಿತೀತನ ಸೈರಣೆಯ ಮನವ || ೬ ||
ಪದವಿಭಾಗ-ಅರ್ಥ:ಲೋಕ ಶಿಕ್ಷಕ ರಲ್ಲಲೇ ನಮಗೇಕೆ ನಿಮ್ಮಯ ತಪದ ಚಿ೦ತೆ, ಪಿನಾಕಧರನ+ ಅಡಹಾಯ್ದರೆಯು ಬೀಡೆವು+ ಎಮ್ಮ(ನಮ್ಮ) ವಾಸಿಗಳ (ಕೆಚ್ಚು, ಸ್ಥೈರ್ಯ, ಘನತೆ) ಈ ಕಳ೦ಬವು (ಬಾಣ)+ ಇದು+ ಎಮ್ಮದು+ ಎನುತ ವನೌಕಹದ (ವನ+ ಓಕಹದ- ಓಕಸ?; ಓಕಸ= ಆಶ್ರಯ ಬೀಡು ಮನೆ) ನೆಳಲಿನಲಿ ನಿ೦ದು ಪಿನಾಕಿ ನುಡಿದನು ಕದಡಿತು+ ಈತನ(ಅರ್ಜುನನ) ಸೈರಣೆಯ ಮನವ.
ಅರ್ಥ:ಆಗ ಬೇಡ ಶಿವನು,'ನಾವು ಲೋಕ ಶಿಕ್ಷಕರಲ್ಲಲೇ, ಲೋಕದ ಜನರಿಗೆ ಶಿಕ್ಷಣ ಕೊಡುವವರು ಅಲ್ಲವಲ್ಲವೇ? ನಮಗೆ ಏಕೆ ಬೇಕು ನಿಮ್ಮ ತಪಸ್ಸಿನ ಚಿ೦ತೆ? ನಾವು ಆ ಪಿನಾಕಧರ ಶಿವನು ಬಂದು ಎದುರಿಸಿದರೂ ನಮ್ಮ ಘನತೆಯನ್ನು ಬಿಡುವುದಿಲ್ಲ. ಈ ಬಾಣವು ನಮ್ಮದು ಎನ್ನುತ್ತಾ ವನದ /ಮರದ ನೆಳಲಿನಲಿ ನಿ೦ತು ಪಿನಾಕಿ ಹೇಳಿದನು. ಇದು ಅರ್ಜುನನ ಮನಸ್ಸಿನ ಸಹನೆಯನ್ನು ಕದಡಿತು- ಕೆಡಿಸಿತು.

ಕಿರಾತ ಮತ್ತು ಅರ್ಜುನರ ಯುದ್ಧ[ಸಂಪಾದಿಸಿ]

ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊ೦ದ ಹ೦ದಿಯೋ
ಹಸಿದ ಭುಜಗನೋ’ ಕಾದ ಕಟ್ಟುಕ್ಕಿನ ಛಡಾಳಿಕೆಯೊ |
ಉಸುರುಗಳ ಕಾರ್ಬೊಗೆ ಗಳಾಲಿಯ
ಬಿಸುಗುದಿಯ ಬಲು ಕೆ೦ಡವ೦ಬಿನ
ಹೊಸ ಮಸೆಗಳುರಿ ಝಾಡಿ ಝಳಪಿಸೆ ಪಾರ್ಥ ಖತಿಗೊ೦ಡ || ೭ ||
ಪದವಿಭಾಗ-ಅರ್ಥ:ಮಸಗಿದನು(ಪೀಡಿಸು, ಆಕ್ರಮಿಸು) ನಿಮ್ಮಾತನು+ ಉಗಿದು (ಎಳೆದು)+ ಎಬ್ಬಿಸಿದ ಹುಲಿಯೋ ನೊ೦ದ ಹ೦ದಿಯೋ ಹಸಿದ ಭುಜಗನೋ(ಸರ್ಪ)’ ಕಾದ ಕಟ್ಟುಕ್ಕಿನ ಛಡಾಳಿಕೆಯೊ(ಕತ್ತಿ?), ಉಸುರುಗಳ ಕಾರ್ಬೊಗೆಗಳ (ಬಿಸಿ ಉಸುರಿನ ಹೊಗೆ)+ ಆಲಿಯ ಬಿಸುಗುದಿಯ(ಕಣ್ಣಾಲಿಗಳ ಬಿಸಿಕುದಿಯುವ ಕೆಂಡ) ಬಲು ಕೆ೦ಡವು+, ಆ೦ಬಿನ ಹೊಸ ಮಸೆಗಳು+ ಉರಿ ಝಾಡಿ ಝಳಪಿಸೆ ಪಾರ್ಥ ಖತಿಗೊ೦ಡ.
ಅರ್ಥ:ಜನಮೇಜಯನೇ ನಿಮ್ಮಾತ ಅರ್ಜುನನು ಕಿರಾತನನ್ನು ಆಕ್ರಮಿಸಿ ಪೀಡಿಸಿದನು. ಆವನು ಎಳೆದು ಎಬ್ಬಿಸಿದ ಹುಲಿಯೋ, ನೊ೦ದ ಹ೦ದಿಯೋ, ಹಸಿದ ಸರ್ಪವೋ ಕಾದ ಕಟ್ಟುಕ್ಕಿನ ಕತ್ತಿಯೋ, ಎನ್ನುವಂತರ ಉಗ್ರವಾಗಿ ಬಿಸಿ ಉಸುರಿನ ಹೊಗೆಯನ್ನು ಬಿಡುತ್ತಾ, ಬಿಸಿ ಕುದಿಯುವ ಕೆಂಡದಂತೆ ಕಣ್ಣಾಲಿಗಳನ್ನು ಹೊಂದಿ, ಆ೦ಬಿನ ಹೊಸ ಮಸೆಗಳನ್ನು ಉರಿ ಝಾಡಿಸಿ-ಹೊಡೆದು ಝಳಪಿಸುತ್ತಿರಲು ಪಾರ್ಥನು ಕೋಪಗೊ೦ಡ.
ಆದಡಿದ ಕೊಳ್ಳೆನುತ ಕೆನ್ನೆಗೆ
ಸೇದಿಬಿಟ್ಟನು ಸರಳನದು ಹಿ೦
ದಾದುದಾ ಬಳಿ ಸರಳನದ ಹಿ೦ದಿಕ್ಕಿ ಮತ್ತೊ೦ದು|
ಹೋದುದದ ಹಿ೦ದಿಕ್ಕಿ ಮತ್ತೊ೦
ದೈದಿತತಿ ವೇಗಾಯ್ಲ ತನದನು
ವಾದಸಾದ್ಯದ ಸರಳು ಕವಿದವು ಬಿಟ್ಟಸೂಟಿಯಲಿ || ೮ ||
ಪದವಿಭಾಗ-ಅರ್ಥ:ಆದಡೆ (ಸಾಧ್ಯವಾದರೆ)+ ಇದ ಕೊಳ್ಳು(ತೆಗೆದುಕೋ)+ ಎನುತ ಕೆನ್ನೆಗೆ ಸೇದಿಬಿಟ್ಟನು ಸರಳನು+ ಅದು ಹಿ೦ದಾದುದು+ ಆ ಬಳಿ ಸರಳನು(ಬಾಣ)+ ಅದ ಹಿ೦ದಿಕ್ಕಿ ಮತ್ತೊ೦ದು ಹೋದುದು+, ಅದ ಹಿ೦ದಿಕ್ಕಿ ಮತ್ತೊ೦ದು+ ಐದಿತು+ ಅತಿ ವೇಗಾಯ್ಲತನದ+ ಅನುವಾದ ಸಾದ್ಯದ ಸರಳು ಕವಿದವು ಬಿಟ್ಟ ಸೂಟಿಯಲಿ(ವೇಗ, ರಭಸ ೨ ಚುರುಕು).
ಅರ್ಥ:ನಂತರ ಕಿರಾತನಿಗೆ ಅರ್ಜುನನು ಸಾಧ್ಯವಾದರೆ ಇದನ್ನು ತೆಗೆದುಕೋ ಎನ್ನುತ್ತಾ ಕೆನ್ನೆಯವರೆಗೆ ಎಳೆದು ಬಾಣವನ್ನು ಬಿಟ್ಟನು. ಅದು ಹಿ೦ದಾಗುವಂತೆ ಮತ್ತೂ ವೇಗವಾಗಿ ಆ ಬಳಿಕ ಮತ್ತೊಂದು ಸರಳನ್ನು ಹೊಡೆದನು. ಅದನ್ನು ಹಿ೦ದಿಕ್ಕುವಂತೆ ಮತ್ತೊ೦ದು ಬಾಣ ಹೋಯಿತು. ಮತ್ತೂ ಒಂದು ಬಾಣವನ್ನು ಅದನ್ನೂ ಹಿ೦ದಿಕ್ಕಿಸಿ ಹೊಡೆದನು, ಮತ್ತೊ೦ದು ಅದಕ್ಕಿಂತ ಅತಿ ವೇಗಾಯ್ಲತನದಲ್ಲಿ ಅನುವಾದ- ಸಿದ್ಧವಾದ ಸಾದ್ಯದ ಬಾಣಗಳು ಬಿಟ್ಟ ಅತಿ ವೇಗದಲ್ಲಿ ಕಿರಾತನನ್ನು ಕವಿದು ಮತ್ತಿದವು.
ಏನ ಹೇಳುವೆನರಸ ಶರದಭಿ
ಮಾನ ದೇವತೆಯು೦ಟಲಾ ಹರಿ
ಸೂನುವರಿಯದ೦ಡ೦ಬೆಯರಿಯಳೆ ಚ೦ಡಿಕಾದೇವಿ |
ಭಾನುಮ೦ಡಳದ೦ಧಕಾರದ
ವೈನತೇಯನ ಭುಜಗ ತತಿಯ ಸ
ಮಾನ ದರ್ಮವ ಕ೦ಡೆನೀಶನೊಳರ್ಜುನಾಸ್ತ್ರದಲಿ || ೯ ||
ಪದವಿಭಾಗ-ಅರ್ಥ:ಮುನಿಯು ಹೇಳಿದ.'ಏನ ಹೇಳುವೆನು+ ಅರಸ ಶರದ(ಬಾಣದ, ಅಸ್ತ್ರದ)+ ಅಭಿಮಾನ ದೇವತೆಯು೦ಟಲಾ, ಹರಿಸೂನುವು+ ಅರಿಯದ೦ಡೆ(ಅರಿಯದಡೆ?)+ ಅ೦ಬೆಯು+ ಅರಿಯಳೆ ಚ೦ಡಿಕಾದೇವಿ ಭಾನುಮ೦ಡಳದ+ ಅ೦ಧಕಾರದ ವೈನತೇಯನ(ಗರುಡ) ಭುಜಗತತಿಯ ಸಮಾನ ದರ್ಮವ(ಸ್ಥಿತಿ) ಕ೦ಡೆನು+ ಈಶನೊಳು+ ಅರ್ಜುನಾಸ್ತ್ರದಲಿ.
ಅರ್ಥ:ವೈಶಂಪಾಯನ ಮುನಿಯು ಹೇಳಿದ,'ಏನನ್ನು ಹೇಳುವೆನು(ಅದ್ಭುತನ್ನು) ಅರಸನೇ, ಅರ್ಜುನನು ಬಿಟ್ಟ ಶರದ ಅಭಿಮಾನ ದೇವತೆಯು೦ಟಲ್ಲವೇ! ಶಿವನಿಂದ ಸುಡಲ್ಪಟ್ಟ ಹರಿಸೂನುವಾದ ಮನ್ಮಥನು ಅರಿಯದಿದ್ದರೆ ಏನು? ಶಿವನ ಪತ್ನಿ ಅ೦ಬೆಯು ಅರಿಯಳೆ, ಚ೦ಡಿಕಾದೇವಿಯು?. ಭಾನುಮ೦ಡಳದ- ಆಕಾಶದಲ್ಲಿ ವೈನತೇಯನು ಬಂದಾಗ ಆಗುವ ಅ೦ಧಕಾರದಂತೆ, ಅದೇ ರೀತಿ ನಾಗಗಳ ಸಮೂಹವು ಆಕಾಶವನ್ನು ಆವರಿಸಿ ಕತ್ತಲಾದ ಸಮಾನ ದರ್ಮವನ್ನು ಈಶನ ಮೇಲೆ ಬಿಟ್ಟ ಅರ್ಜುನಾಸ್ತ್ರದಲ್ಲಿ ಕ೦ಡೆನು. (ಮನ್ಮಥನು ದಿವ್ಯಾಸ್ತ್ರಗಳನ್ನು ಬಿಡಲಿಲ್ಲ, ಪುಷ್ಪಬಾಣಗಳನ್ನು ಬಿಟ್ಟಿದ್ದ. ಆರ್ಜನನ ಅಸ್ತ್ರಗಳ ಪ್ರಯೋಗದಿಂದ ಆಕಾಶವು ಮುಚ್ಚಿ ಕತ್ತಲಾಯಿತು- ಎಂಬ ಭಾವ)
ಮತ್ತೆ ಸುರಿದನು ಸರಳ ಮಳೆಯನ
ದೆತ್ತ ನಭ ದೆಸೆಯತ್ತ ಧಾರುಣಿ
ಯೆತ್ತಲರ್ಜುನನೆತ್ತ ಕಪಟ ಕಿರಾತ ತಾನೆತ್ತ |
ಹೊತ್ತ ಹೊಗ್ರಿನ ಮೊರೆವ ಗರಿಗಳ
ಮುತ್ತುಗಿಡಗಳ ಹೊಳೆವ ಧಾರೆಯ
ಮೊತ್ತದ೦ಬೌಕಿದವು ಮೃತ್ಯು೦ಜಯನ ಸಮ್ಮುಖಕೆ || ೧೦ ||
ಪದವಿಭಾಗ-ಅರ್ಥ:ಮತ್ತೆ ಸುರಿದನು ಸರಳ(ಬಾಣದ) ಮಳೆಯನು+ ಅದೆತ್ತ ನಭ- (ಆಕಾಶ) ದೆಸೆಯತ್ತ, ಧಾರುಣಿ(ಭೂಮಿ)+ ಯೆತ್ತಲು+ ಅರ್ಜುನನು+ ಎತ್ತ ಕಪಟ ಕಿರಾತ ತಾನೆತ್ತ, ಹೊತ್ತ ಹೊಗ್ರಿನ(ಹೊಗರು= ಕಾಂತಿ, ಪ್ರಕಾಶ) ಮೊರೆವ ಗರಿಗಳ ಮುತ್ತುಗಿಡಗಳ ಹೊಳೆವ ಧಾರೆಯಮೊತ್ತದ+ ಅ೦ಬು+ ಔಕಿದವು ಮೃತ್ಯು೦ಜಯನ ಸಮ್ಮುಖಕೆ'
ಅರ್ಥ:ಅರ್ಜುನನು ಮತ್ತೆ ಮತ್ತೆ ಬಾಣಗಳ ಮಳೆಯನ್ನು ಸುರಿದನು.ಅದು ಎತ್ತ- ಎಲ್ಲಿದೆ? ಆಕಾಶದ ದೆಸೆಯತ್ತ? ಭೂಮಿ- ಎಲ್ಲಿದೆ? ಅರ್ಜುನನು ಎತ್ತಲಿದ್ದಾನೆ? ಕಪಟ ಕಿರಾತ ತಾನು ಎತ್ತ? ಬಾಣಗಳು ಹೊತ್ತ ಕಾಂತಿ, ಮೊರೆವ- ಘರ್ಜಿಸುವ ಗರಿಗಳ, ಮುತ್ತುಗಿಡಗಳ- ಬಾಣಕ್ಕೆ ನಾಟಿಸಿದ ಮತ್ತುಗಳ ಹೊಳೆವ ಧಾರೆಯೊಡನೆ ಒಟ್ಟು ಸೇರಿ ಅ೦ಬುಗಳು ಮೃತ್ಯು೦ಜಯ- ಶಿವನ ಸಮ್ಮುಖಕ್ಕೆ ಒತ್ತಿಬಂದವು.
ಮ೦ಜು ಮುಸುಕಿದೊಡೇನು ಪರ್ವತ
ವ೦ಜುವುದೆ ಹಾಲಹಲವ ನೊಣ
ನೆ೦ಜಲಿಸುವುದೆ ವಡಬ ಶಿಖಿ ನನೆವುದೆ ತುಷಾರದಲಿ ||
ಕ೦ಜನಾಳದಿ ಕಟ್ಟುವಡೆವುದೆ
ಕು೦ಜರನು ನರಶರದ ಜೋಡಿನ
ಜ೦ಜುವೊಳೆಯಲಿ ಜಾಹ್ನವೀಧರ ಜಾರುವನೆಯೆ೦ದ || ೧೧ ||
ಪದವಿಭಾಗ-ಅರ್ಥ:ಮ೦ಜು ಮುಸುಕಿದೊಡೆ+ ಏನು ಪರ್ವತವು+ ಅ೦ಜುವುದೆ? ಹಾಲಹಲವ ನೊಣನು+ ಎ೦ಜಲಿಸುವುದೆ? ವಡಬ ಶಿಖಿ(ಸಮುದ್ರದಲ್ಲಿ ಎದ್ದ ಪ್ರಳಯದ ಬೆಂಕಿ) ನನೆವುದೆ ತುಷಾರದಲಿ(ಮಂಜು) ಕ೦ಜನಾಳದಲ್ಲಿ(ತಾವರೆದಂಟು) ಕಟ್ಟುವಡೆವುದೆ(ಕಟ್ಟಿಹಾಕಬಹುದೆ) ಕು೦ಜರನು(ಆನೆ) ನರ(ಅರ್ಜುನ) ಶರದ ಜೋಡಿನ ಜ೦ಜುವೊಳೆಯಲಿ(ಜಂಝಾವಾತ - ಮಳೆಗಾಳಿ) ಜಾಹ್ನವೀಧರ(ಗಂಗೆಯನ್ನು ಹೊತ್ತವನು- ಶಿವ) ಜಾರುವನೆ+ ಯೆ+ ಎಂದ.
ಅರ್ಥ:ಮುನಿಯು ಜನಮೇಜಯನಿಗೆ ಹೇಳಿದ,'ಮ೦ಜು ಮುಸುಕಿದರ ಏನು ಪರ್ವತವು ಅ೦ಜುವುದೆ- ಹೆದರುವುದೆ? ಹಾಲಹಲವವೆಂಬ ವಿಷವನ್ನು ನೊಣವು ನೆಕ್ಕುವುದೆ? ಸಮುದ್ರದಲ್ಲಿ ಎದ್ದ ಪ್ರಳಯದ ಬೆಂಕಿ ಮಂಜುನಲ್ಲಿ ನನೆಯುವುದೆ? ತಾವರೆದಂಟಿನಿಂದ ಆನೆಯನ್ನು ಕಟ್ಟಿಹಾಕಬಹುದೆ? ಅರ್ಜುನನ ಶರಗಳ ಜೋಡಿಗಳ ತುಂತುರುಮಳೆಯಲ್ಲಿ ಜಾಹ್ನವೀಧರನಾದ ಶಿವನು ಜಾರುವನೆ,' ಎಂದ.
ಕೆರಳಿದನು ಹೇರ೦ಭ ಗುಹನ
ಬ್ಬರಿಸಿದನು ರೋಷದಲಿ ಮಸಗಿತು
ತರತರದ ವರ ವೀರ ಭದ್ರಾದ್ಯಖಿಳ ಭೂತಗಣ |
ಹರನು ಕ೦ಡನೀದೇನಿದೇನ
ಚ್ಚರಿ ಧನ೦ಜಯ ನೆಮಗೆ ನೂರ್ಮಡಿ
ಕರಹಿತವ ನಿಮ್ಮಿ೦ದ ನೀವ್ ಗಜಬಜಿಸ ಬೇಡೆ೦ದ || ೧೨ ||
ಪದವಿಭಾಗ-ಅರ್ಥ:ಕೆರಳಿದನು ಹೇರ೦ಭ ಗುಹನು+ ಅಬ್ಬರಿಸಿದನು ರೋಷದಲಿ ಮಸಗಿತು(ಕೆರಳಿ ಮುತ್ತಿದರು) ತರತರದ ವರ(ಶ್ರೇಷ್ಠ) ವೀರ ಭದ್ರ+ ಆದಿ+ ಅಖಿಳ ಭೂತಗಣ; ಹರನು ಕ೦ಡನು+ ಇದೇನು+ ಇದೇನು ಅಚ್ಚರಿ, ಧನ೦ಜಯನು+ ಎಮಗೆ ನೂರ್ಮಡಿ ಕರಹಿತವ? ನಿಮ್ಮಿ೦ದ ನೀವ್ ಗಜಬಜಿಸ ಬೇಡ+ ಎಂ೦ದ.
ಅರ್ಥ:ಅರ್ಜುನನ ಆಕ್ರಮಣದಿಂದ ಹೇರ೦ಭ- ಶಿವನು ಕೆರಳಿದನು- ಸಿಟ್ಟಾದನು. ಅವನ ಮಗ ಕುಮಾರನು ರೋಷದಿಂದ ಅಬ್ಬರಿಸಿದನು. ನಾನಾ ತರತರದ ಶ್ರೇಷ್ಠ ವೀರಭದ್ರ ಮೊದಲಾದವರು ಎಲ್ಲಾ ಭೂತಗಣಗಳು ಕೆರಳಿ ಮುತ್ತಿದರು. ಹರನು ಇದನ್ನು ಕ೦ಡನು. ಇದೇನು ಇದೇನು ಅಚ್ಚರಿ! ಧನ೦ಜಯನು ನಮಗೆ ನೂರ್ಮಡಿ ಕೈಚಳಕದವನೇ? ನಿಮ್ಮಿ೦ದ ನನಗೆ ಸಹಾಯ ಬೇಕೇ? ನೀವು ಗಜಬಜಿಸಿ ಗದ್ದಲಮಾಡಬೇಡಿ'ಎ೦ದನು ಶಿವ.
ಎನುತ ಕೊ೦ಡನು ಧನುವನಾ ಪಾ
ರ್ಥನ ಶರೌಘವನೆಚ್ಚಡೀಶನ
ಮೊನೆಗಣೆಯಲಕ್ಕಾಡಿದವು ಬಾಡಿದವು ಬಳಿಸರಳು |
ಕನಲಿ ಕಿವಿ ವರೆಗುಗಿದು ಫಡ ಹೋ
ಗೆನುತ ಮಗುಳೆಚ್ಚನು ದನ೦ಜಯ
ನನಿತು ಶರವನು ಕಡಿದು ಮದನ ವಿರೋಧಿ ಮಗುಳೆಚ್ಚ || ೧೩ ||
ಪದವಿಭಾಗ-ಅರ್ಥ:ಎನುತ ಕೊ೦ಡನು ಧನುವನು+ ಆ ಪಾರ್ಥನ ಶರ+ ಓ/ಔಘವನು+ ಎಚ್ಚಡೆ(ಹೊಡೆದಾಗ)+ ಈಶನ ಮೊನೆಗಣೆಯಲಿ+ ಅಕ್ಕಾಡಿದವು (ಅಕ್ಕಾಡು- ನಾಶವಾಗು)ಬಾಡಿದವು ಬಳಿಸರಳು ಕನಲಿ(ಸಿಟ್ಟಾಗಿ) ಕಿವಿವರೆಗೆ+ ಉಗಿದು ಫಡ ಹೋಗು+ ಎನುತ ಮಗುಳು+ ಎಚ್ಚನು(ಪುನಃ ಹೊಡೆದನು) ದನ೦ಜಯನು ಅನಿತು(ಅಷ್ಟೂ) ಶರವನು ಕಡಿದು ಮದನ ವಿರೋಧಿ ಮಗುಳೆ+ ಎಚ್ಚ.
ಅರ್ಥ:ಶಿವನು ತನ್ನವರಿಗೆ ಸುಮ್ಮನಿರಿ ಎನ್ನುತ್ತಾ, ಧನುವನ್ನು ಕೈಗೆ ತೆಗೆದುಕೊ೦ಡನು. ಆ ಪಾರ್ಥನ ಶರಗಳ ಸಮೂಹವನ್ನು ಹೊಡೆದಾಗ ಈಶನ ಮೊನೆಚಾದ ಬಾಣಗಳಿಂದ ಅರ್ಜುನನ ಬಾಣಗಳು ಅಕ್ಕಾಡುದವು- ನಾಶವಾದವು, ಬಳಿಬಂದ ಬಾಣಗಳು ಬಾಡಿದವು- ಸತ್ವಹೀನವಾದವು. ಆಗ ಅರ್ಜುನನು ಸಿಟ್ಟಿನಿಂದ ಬಾಣವನ್ನು ಕಿವಿಯವರೆಗೆ ಎಳೆದು, 'ಫಡ ಹೋಗು' ಎನ್ನುತ್ತಾ ಪುನಃ ಹೊಡೆದನು. ಮದನ ವಿರೋಧಿಯಾದ ಶಿವನುಅಷ್ಟೂ ಶರಗಳನ್ನು ಕಡಿದು, ತಿರುಗಿ ಅರ್ಜುನನಿಗೆ ಹೊಡೆದನು.
ಎಸುಗೆ ಯೊಳ್ಳಿತು ಶಬರನತಿ ಸಾ
ಹಸಿಕನೈ ಬಿಲ್ಲಾಳಲಾ ಸರಿ
ಬೆಸನನೆಚ್ಚನು ನಮ್ಮೊಡನೆ ಮಝ ಪೂತು ಹಾಯ್ಕೆನುತ |
ಹೊಸ ಮಸೆಯ ಹೊಗರಲಗುಗಳ ದ
ಳ್ಳಿಸುವ ಧಾರೆಯ ಕೆ೦ಗರಿಯ ಡಾ
ಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ || ೧೪ ||
ಪದವಿಭಾಗ-ಅರ್ಥ:ಎಸುಗೆಯೊಳ್ಳಿತು (ಬಾಣಪ್ರಯೋಗ ಉತ್ತಮವಾಗಿದೆ) ಶಬರನು+ಅತಿ ಸಾಹಸಿಕನೈ, ಬಿಲ್ಲಾಳಲಾ, ಸರಿಬೆಸನನು+ ಎಚ್ಚನು ನಮ್ಮೊಡನೆ, ಮಝ ಪೂತು, ಹಾಯ್ಕು(ಹೊಡಿ)+ ಎನುತ ಹೊಸ ಮಸೆಯ ಹೊಗರ(ಕಾಂತಿ, ಪ್ರಕಾಶ, ಕಿಡಿಕಾರು)+ ಅಲಗುಗಳ ದಳ್ಳಿಸುವ(ಕಿಡಿಕಾರುವ/) ಧಾರೆಯ ಕೆ೦ಗರಿಯ ಡಾಳಿಸುವ(ಗಾಯಮಾಡುವ) ಕಣೆಗಳ(ಬಾಣಗಳ) ಶರನಿಧಿಯ(ಬಾಣಗಳ ರಾಶಿಯನ್ನು) ಕವಿಸಿದನು(ಮುಚ್ಚಿದನು) ಕಲಿಪಾರ್ಥ.
ಅರ್ಥ:ಅರ್ಜುನನು,'ಇವನ ಬಾಣಪ್ರಯೋಗ ಉತ್ತಮವಾಗಿದೆ. ಶಬರನು ಅತಿಸಾಹಸಿಕನೇ ಸರಿ. ಇವನು ಒಳ್ಳೆಯ ಬಿಲ್ಲಾಳಲಾ! ಬಿಲ್ಲುವಿದ್ಯೆಯ ಪರಿಣತ; ನಮ್ಮೊಡನೆ- ನನಗೆ ಸರಿಬೆಸ(ಸಮಸಮ) ಎನ್ನುವಂತೆ ಹೊಡೆದನು. ಮಝ ಪೂತು! ಹೊಡಿ ಎನ್ನುತ್ತಾ ಕಲಿಪಾರ್ಥನು ಹೊಸದಾಗಿ ಮಸೆದ ಹೊಳೆಯುವ ಅಲಗುಗಳ ಕಿಡಿಗಳ ಧಾರೆಯ ಕೆ೦ಪು ಗರಿಯ ಗಾಯಮಾಡುವ ಬಾಣಗಳನ್ನು - ಬಾಣಗಳ ರಾಶಿಯಿಂದ ಶಬರನನ್ನು ಮುಚ್ಚಿದನು.
ಈಡಿರಿದವೊ೦ದೊ೦ದರಲೆ ಹೊಗೆ
ಝಾಡಿ ಝಳಪಿಸೆ ಉರಿಗಳಲಿ ಸರ
ಳೋಡಿದವು ಗಾ೦ಡಿವವನೊದೆದುಮಹೇಶನಿದಿರಿನಲಿ |
ಕಾಡಿದೊಡೆ ಕಾರುಣ್ಯನಿಧಿ ಕೊ೦
ಡಾಡುತಿರ್ದನು ಪಾರ್ಥ ನ೦ಬಿನ
ಮೂಡಿಗೆಯ ಸ೦ವರಣೆ ಸವೆದುದು ಸವೆಯದಾಟೋಪ || ೧೫ ||
ಪದವಿಭಾಗ-ಅರ್ಥ:ಈಡಿ (ಈಡು- ಗುರಿ, ಗುರಿಯಿಟ್ಟು)+ ಇರಿದವು+ ಒ೦ದೊ೦ದರಲೆ, ಹೊಗೆಝಾಡಿ ಝಳಪಿಸೆ ಉರಿಗಳಲಿ ಸರಳು(ಬಾಣ)+ ಓಡಿದವು ಗಾ೦ಡಿವವನು+ ಒದೆದು ಮಹೇಶನ+ ಇದಿರಿನಲಿ ಕಾಡಿದೊಡೆ ಕಾರುಣ್ಯನಿಧಿ ಕೊ೦ಡಾಡುತಿರ್ದನು, ಪಾರ್ಥನ+ ಅ೦ಬಿನ ಮೂಡಿಗೆಯ(ಬತ್ತಳಿಕೆ) ಸ೦ವರಣೆ(ಸಂಗ್ರಹ,ಶೇಖರಣೆ) ಸವೆದುದು(ಮುಗಿಯಿತು) ಸವೆಯದು(ಕಡಿಮೆಯಾಗಲಿಲ್ಲ)+ ಆಟೋಪ(ಪರಾಕ್ರಮ)
ಅರ್ಥ:ಅರ್ಜುನ ಮತ್ತು ಶಬರರು ಬಿಟ್ಟ ಬಾಣಗಳು, ಗುರಿಯಿಟ್ಟು ಒ೦ದೊ೦ದರಲ್ಲಿ- ಒಂದನ್ನೊಂದು ಇರಿದವು. ಅವು ಆ ರಬಸಕ್ಕೆ ಹೊಗೆಝಾಡಿ ಝಳಪಿಸಲು ಉರಿಗಳಲ್ಲಿ -ಬೆಂಕಿಹತ್ತಿಕೊಂಡು ಬಾಣಗಳು ಗಾ೦ಡೀವ ಧನಸ್ಸನ್ನು ಒದೆದು- ಚಿಮ್ಮಿ ಮಹೇಶನ ಎದಿರಿನಲ್ಲಿ ಓಡಿದವು- ಹಾರಿದವು; ಅವು ಬಂದು ಶಿವನನ್ನು ಕಾಡಿದರೆ ಕಾರುಣ್ಯನಿಧಿ ಪಾರ್ಥನನ್ನು ಕೊ೦ಡಾಡುತ್ತಿದ್ದನು. ಪಾರ್ಥನ ಅ೦ಬಿನ ಬತ್ತಳಿಕೆಯ ಸಂಗ್ರಹ ಮುಗಿಯಿತು. ಆದರೆ ಅವನ ಆಟೋಪ- ಪರಾಕ್ರಮ ಕಡಿಮೆಯಾಗಲಿಲ್ಲ.
ಎಲೆ ಕಿರಾತ ಕಿರಾತರೊಳಗ
ಗ್ಗಳೆಯನಹೆಯೋ ದೇವದಾನವ
ರೊಳಗೆ ಸೈರಿಸಿ ನಿಲುವನಾವನುನಮ್ಮ ವಿಲಗದಲಿ |
ಅಳುಕದಿರು ಕಲಿಯಾಗೆನುತ ತುದಿ
ಹಿಳುಕ ಮ೦ತ್ರಿಸಿ ದಿವ್ಯ ಬಾಣ
ವಳಿಗಳಲಿ ಬಾಲೇ೦ದುಮೌಳಿಯನೆಚ್ಚನಾ ಪಾರ್ಥ || ೧೬ ||
ಪದವಿಭಾಗ-ಅರ್ಥ:ಎಲೆ ಕಿರಾತ ಕಿರಾತರೊಳಗೆ+ ಅಗ್ಗಳೆಯನು+ ಅಹೆಯೋ!(ಆಗಿರುವೆ) ದೇವದಾನವರೊಳಗೆ ಸೈರಿಸಿ ನಿಲುವನು+ ಆವನು ನಮ್ಮ ವಿಲಗದಲಿ(ಆಟೋಪ, ಪ್ರತಿರೋಧ), ಅಳುಕದಿರು(ಹಿಂಜರಿಯಬೇಡ) ಕಲಿಯಾಗು(ಧೈರ್ಯ ತೋರು)+ ಎನುತ ತುದಿ ಹಿಳುಕ ಮ೦ತ್ರಿಸಿ ದಿವ್ಯ ಬಾಣವಳಿಗಳಲಿ ಬಾಲೇ೦ದುಮೌಳಿಯನು(ಬಾಲ ಇಂದು ಮೌಳಿ= ಧರಿಸಿದವನು - ಶಿವನನ್ನು)+ ಎಚ್ಚನು+ ಆ ಪಾರ್ಥ
ಅರ್ಥ:ಪಾರ‍ನು ಶಬರನಿಗೆ, ಎಲೆ ಕಿರಾತಕನೇ, ನೀನು ಕಿರಾತರಲ್ಲಿ ನಿಜವಾಗಿ ಶ್ರೇಷ್ಠನಾಗಿರುವೆ. ದೇವದಾನವರಲ್ಲಿ ನಮ್ಮ ಆಟೋಪವನ್ನು ಸೈರಿಸಿ- ಎದುರಿಸಿ ನಿಲ್ಲುವವನು ಯಾವನಿದ್ದಾನೆ? ನನ್ನ ಪ್ರತಿರೋಧಮಾಡುವಲ್ಲಿ ಹಿಂಜರಿಯಬೇಡ; ಧೈರ್ಯ ತೋರು, ಎನ್ನುತ್ತಾ ಬಾಣದ ತುದಿಯ ಹಿಳುಕನ್ನು ಮ೦ತ್ರಿಸಿ ದಿವ್ಯ ಬಾಣಗಳ ಸಮೂಹಗಳಿಂದ ಶಿವನನ್ನು ಆ ಪಾರ್ಥನು ಹೊಡೆದನು.
ಏಸು ಮ೦ತ್ರಾಸ್ತ್ರದಲಿ ಮುಸುಕಿದ
ರೈಸುವನು ಹರ ನು೦ಗಿದನು ಮಗು
ಳೇಸು ಕೂರ೦ಬುಗಳನೆಚ್ಚರೆ ಕಡಿದನ೦ಬಿನಲಿ |
ಈಸುವೆಗ್ಗಳರಾರೆನಿಪಭಿ
ಜ್ನಾಸೆ ಬೇಡಾ ಕ್ಷಾತ್ರ ತಾಮಸ
ವೇಸು ಬಲುಹೋ ನಿಮ್ಮ ಜಾತಿಗೆ ರಾಯ ಕೇಳೆ೦ದ || ೧೭ ||
ಪದವಿಭಾಗ-ಅರ್ಥ:ಏಸು(ಎಷ್ಟು) ಮ೦ತ್ರಾಸ್ತ್ರದಲಿ ಮುಸುಕಿದರೆ (ಮುಚ್ಚಿದರೆ)+ ಈಸುವನು(ಅಷ್ಟನ್ನೂ) ಹರ ನು೦ಗಿದನು, ಮಗುಳು(ಮತ್ತೆ)+ ಏಸು ಕೂರ೦ಬುಗಳನು()ಚೂಪಾದ ಬಾಣಗಳನ್ನು+ ಎಚ್ಚರೆ(ಹೊಡೆದರೆ) ಕಡಿದನು+ ಆ೦ಬಿನಲಿ; ಈಸು ವೆಗ್ಗಳರು(ಶ್ರೇಷ್ಠರು)+ ಆರು+ ಎನಿಪ(ಯಾರು ಎನ್ನುವ)+ ಅಭಿಜ್ನಾಸೆ(ವಿಚಾರ ಪರತೆ) ಬೇಡಾ(ಬೇಡವೇ?)+ ಕ್ಷಾತ್ರ ತಾಮಸವು(ಕ್ಷತ್ರಿಯರ ಕೋಪ)+ ಏಸು ಬಲುಹೋ(ಎಷ್ಟು ಪ್ರಬಲವೋ) ನಿಮ್ಮ ಜಾತಿಗೆ, ರಾಯ ಕೇಳೆ೦ದ.
ಅರ್ಥ:ಜನಮೇಜಯ ರಾಯನೇ,'ಅರ್ಜುನನು ಎಷ್ಟು ಮ೦ತ್ರಾಸ್ತ್ರದಲ್ಲಿ ಕಿರಾತನನ್ನು ಹೊಡೆದು ಮುಚ್ಚಿದರೂ ಅಷ್ಟನ್ನೂ ಹರ- ಕಿರಾತನು ನು೦ಗಿದನು(ತನ್ನಲ್ಲಿ ಅಡಗಿಕೊಂಡನು). ಅರ್ಜುನನು ಮತ್ತೆ ಎಷ್ಟು ಕೂರ೦ಬುಗಳನ್ನು ಹೊಡೆದರೂ ಅವನ್ನು ತನ್ನ ಆ೦ಬಿನಲ್ಲಿ ಕಡಿದನು. ಇಷ್ಟೊಂದು ಶ್ರೇಷ್ಠ ಪುರುಷ ಯಾರು ಇರಬಹುದು, ಎನ್ನುವ ವಿಚಾರ ಪರತೆ ಅರ್ಜುನನಿಗೆ ಬೇಡವೇ? ಕ್ಷತ್ರಿಯರ ಕ್ಷಾತ್ರ ತಾಮಸವು- ನಿಮ್ಮ ಕ್ಷತ್ರಿಯ ಜಾತಿಗೆ ಕೋಪವು ಎಷ್ಟು ಪ್ರಬಲವೋ!' ಕೇಳು ಎ೦ದ.
ಅ೦ದು ಖಾ೦ಡವ ವನದ ದಹನದೆ
ಬ೦ದುದಕ್ಷಯ ಬಾಣವಿದು ತಾ
ನಿ೦ದು ಬರುತದು ಬಹಳ ಜಲನಿಧಿ ಬತ್ತುವ೦ದದಲಿ |
ಇ೦ದು ಮೌಳಿಯ ಸೇವೆಗಿ೦ದು ಪು
ಳಿ೦ದ ಕ೦ಟಕನಾದನೇ ಹಾ
ಯೆ೦ದು ಗರ್ಜಿಸಿ ಚಾಪದಿ೦ದಪ್ಪಳಿಸಿದನು ಶಿವನ || ೧೮ ||
ಪದವಿಭಾಗ-ಅರ್ಥ:ಅ೦ದು(ಹಿಂದೆ) ಖಾ೦ಡವ ವನದ ದಹನದೆ ಬ೦ದುದು+ ಅಕ್ಷಯ ಬಾಣವು+ ಇದು ತಾನು+ ಇಂದು ಬರುತದು, ಬಹಳ ಜಲನಿಧಿ ಬತ್ತುವ೦ದದಲಿ; ಇ೦ದುಮೌಳಿಯ(ಶಿವನ) ಸೇವೆಗೆ+ ಎಂದು ಪುಳಿ೦ದ(ಕಿರಾತ) ಕ೦ಟಕನಾದನೇ ಹಾ ಯೆ+ ಎ೦ದು ಗರ್ಜಿಸಿ ಚಾಪದಿ೦ದ+ ಅಪ್ಪಳಿಸಿದನು ಶಿವನ.
ಅರ್ಥ:ಹಿ೦ದೆ ಖಾ೦ಡವವನದ ದಹನದಕಾಲದಲ್ಲಿ ಅಗ್ನಿಯ ಕೊಡುಗೆಯಿಂದ ಅಕ್ಷಯಬಾಣ ಬತ್ತಳಿಕೆಯು ಬ೦ದಿತ್ತು. ಇಂದು ಬಹಳ ನೀರಿನ ಜಲನಿಧಿಯಾದ ಸಮುದ್ರವೇ ಬತ್ತುವರೀತಿಯಲ್ಲಿ ಅದು- ತಾನು ಬತ್ತಿಹೋಯಿತು. ಇ೦ದುಮೌಳಿಯಾದ ಶಿವನ ಸೇವೆಗೆ ಈ ಕಿರಾತ ಕ೦ಟಕನಾದನೇ? ಹಾ! ಎ೦ದು,' ಗರ್ಜಿಸಿ ಮುಂದೆ ನುಗ್ಗಿಹೋಗಿ ಅರ್ಜುನನು ಕೈಯಲ್ಲಿದ್ದ ಗಾಂಡೀವ ಬಿಲ್ಲಿನಿ೦ದ ಶಿವನನ್ನು ಅಪ್ಪಳಿಸಿದನು- ಬಡಿದನು.
ಕಳಚಿದನು ದ೦ಡೆಯಲಿ ಗಾಯದ
ಲಳುಕಿದನಲಾಯೆನುತ ಮಗುಳ
ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೊ೦ಪಿಸುತ |
ಮೆಲುನಗೆಯಲರ್ಜುನನ ಚಾಪವ
ಸೇಳೆದುಕೊ೦ಡನು ತನ್ನ ಭಕ್ತನ
ಬೆಳವಿಗೆಯ ಮಾಡಿದ ನುಘೇಯೆ೦ದುದು ಸುರಸ್ತೋಮ || ೧೯ ||
ಪದವಿಭಾಗ-ಅರ್ಥ:ಕಳಚಿದನು ದ೦ಡೆಯಲಿ ಗಾಯದಲಿ+ ಅಳುಕಿದನಲಾ ಯೆ+ ಎನುತ ಮಗುಳು+ ಅಪ್ಪಳಿಸಿದನು ಮೇಲ್ವಾಯ್ದು ಹೊಯ್ದನು, ಜರೆದು ಝೊ೦ಪಿಸುತ (ಝೋಂಪಿಸು= ಮೈಮರೆ, ಎಚ್ಚರತಪ್ಪು, ಅಲುಗಾಡು); ಮೆಲುನಗೆಯಲಿ+ ಅರ್ಜುನನ ಚಾಪವ(ಬಿಲ್ಲನ್ನು) ಸೇಳೆದುಕೊ೦ಡನು ತನ್ನ ಭಕ್ತನ ಬೆಳವಿಗೆಯ(ಏಳಿಗೆಯ) ಮಾಡಿದನು+ ಉಘೇ ಯೆ+ ಎ೦ದುದು ಸುರಸ್ತೋಮ(ಮೇಲೆ ಆಕಾಶದಲ್ಲೆ ಸೇರಿಕೊಂಡು ಈ ಯುದ್ಧವನ್ನು ನೋಡುತ್ತಿದ್ದ ದೇವತೆಗಳ ಸಮೂಹ)
ಅರ್ಥ:ಅರ್ಜುನನು ತನ್ನ ಭುಜದ ದ೦ಡೆಯಿಂದ ಬತ್ತಳಿಕೆಯನ್ನು ಕಳಚಿ ಹಾಕಿದನು. ಕಿರಾತನು ಗಾಯದಿಂದ ಅಳುಕಿದನಲಾ- ಆಯಾಸಗೊಂಡನಲ್ಲವೇ, ಎನ್ನತ್ತಾ ಮತ್ತೆ ಅಪ್ಪಳಿಸಿದನು; ಅವನನ್ನು ಜರೆದು- ನಿಂದಿಸಿ ಝೊ೦ಪಿಸುತ- ಓಲಾಡುತ್ತಾ ಅವನ ಮೇಲೆ ನುಗ್ಗಿ ಹೊಡೆದನು; ಕಿರಾತ ಶಿವನು ಮೆಲುನಗೆಯನ್ನು ಸೂಸುತ್ತಾ ಅರ್ಜುನನ ಬಿಲ್ಲನ್ನು ಸೇಳೆದುಕೊ೦ಡನು- ಕಸಿದುಕೊಂಡನು. ಶಿವನು ಹೀಗೆ ಲೀಲೆಯನ್ನು ತೋರುತ್ತಾ ತನ್ನ ಭಕ್ತನ ಏಳಿಗೆಯನ್ನು ಮಾಡಿದನು. ಆಗ ಮೇಲೆ ಆಕಾಶದಲ್ಲೆ ಸೇರಿಕೊಂಡು ಈ ಯುದ್ಧವನ್ನು ನೋಡುತ್ತಿದ್ದ ದೇವತೆಗಳ ಸಮೂಹ 'ಉಘೇ!' ಎ೦ದಿತು.
ತಿಳಿವನುಗಿದಡಿಗಿಕ್ಕಿ ಮರವೆಯ
ಕಳಕಳವೆ ಮೇಲಾಯ್ತು ತಾಮಸ
ಜಲನಿಧಿಯ ತಾಯ್ಮಳಲ ಮುಟ್ಟಿತು ಮನ ಧನ೦ಜಯನ ||
ಸೆಳೆದ ನೊರೆಯಲಾಡಾಯುಧವ ಬೀ
ಳೆಲವೊ ಶಬರಯೆನುತ್ತ ಹೊಯ್ದನು
ತಳಿರೆಲೆಯ ತಳೆದೆಳೆವರೆಯ ನೆಲೆವನೆಯ ಪಶುಪತಿಯ || ೨೦ ||
ಪದವಿಭಾಗ-ಅರ್ಥ:ತಿಳಿವನು (ವಿವೇಕವನ್ನು)+ ಉಗಿದು+ ಅಡಿಗೆ+ ಇಕ್ಕಿ(ಹಾಕಿ) ಮರವೆಯ ಕಳಕಳವೆ(ಗದ್ದಲ,ಬೊಬ್ಬೆ) ಮೇಲಾಯ್ತು, ತಾಮಸ ಜಲನಿಧಿಯ ತಾಯ್ (ಮೂಲ?)+ ಮಳಲ ಮುಟ್ಟಿತು ಮನ ಧನ೦ಜಯನ, ಸೆಳೆದನು+ ಒರೆಯಲಿ+ ಅಡಾಯುಧವ(ಖಡ್ಗವನ್ನು) ಬೀಳ್+ ಎಲವೊ ಶಬರ ಯೆ+ ಎನುತ್ತ ಹೊಯ್ದನು ತಳಿರ್+ ಎಲೆಯ ತಳೆದ+ ಎಳೆವರೆಯ(ಚಿಕ್ಕಪ್ರಾಯದ,ಯೌವನ,) ನೆಲೆವನೆಯ(ಕರುಮಾಡು,ಉಪ್ಪರಿಗೆ = ಜಗತ್ತಿನ ಉಪ್ಪರಿಗೆ ಹಿಮಾಲಯ -ಕೈಲಾಸ) ಪಶುಪತಿಯ.
ಅರ್ಥ:ಅರ್ಜುನನು ತನ್ನ ವಿವೇಕವನ್ನು ಉಗಿದುತೆಗೆದು ಕೆಳಕ್ಕೆ ಹಾಕಿದನು; ಅವನ ಬುದ್ಧಿಯ ಮರವೆಯ ಮತ್ತು ಆರ್ಬಟದ ಬೊಬ್ಬೆಯೇ ಮೇಲಾಯಿತು. ಧನ೦ಜಯನ ಮನಸ್ಸು ತಾಮಸವೆಂಬ ಅಜ್ಞಾನದ ಜಲನಿಧಿಯ ಸಮುದ್ರದ ಮೂಲ-ಬುಡದ ಮಳಲನ್ನು ಮುಟ್ಟಿತು. (ಕೋಪದಲ್ಲಿ ಅವನ ತಿಳುವಳಿಕೆ ನಷ್ಟವಾಯಿತು) ಅರ್ಜುನನು ತನ್ನ ಒರೆಯಲ್ಲಿದ್ದ ಖಡ್ಗವನ್ನು ಸೆಳೆದನು; ಅವನು, "ಎಲವೊ ಶಬರ ಬೀಳ್," ಎನ್ನುತ್ತಾ, ತಳಿರು ಎಲೆಯನ್ನು ಧರಿಸಿದ್ದ ಚಿರಯೌವನದ ಉನ್ನತಸ್ಥಾನವಾದ ಕೈಲಾಸವಾಸಿ ಪಶುಪತಿಯನ್ನು ಬಲವಾಗಿ ಹೊಡೆದನು.
ಆಯುಧವ ಬರಿ ಮುಷ್ಠಿಯುಳಿಯಲ
ಡಾಯುಧವ ಶಿವ ಕೊ೦ಡನೀತನ
ಬಾಯ ಹವಣಿನತುತ್ತಹುದೇ ತ್ರಿಪುರಾರಿಯೊಡ್ಡವಣೆ |
ರಾಯ ಕೇಳೈ ಪಾರ್ಥ ನುಬ್ಬಟೆ
ಬೀಯದೀಸರ ಮೇಲೆ ವಿ
ಡಾಯಿಯಾಯ್ತತಿ ಚಪಲ ತನದ ವೀವೇಕಮಡಮುರಿಯ || ೨೧ ||
ಪದವಿಭಾಗ-ಅರ್ಥ:ಆಯುಧವ ಬರಿ ಮುಷ್ಠಿಯುಳಿಯಲು+ ಅಡಾಯುಧವ ಶಿವ ಕೊ೦ಡನು+, ಈತನ ಬಾಯ ಹವಣಿನ(ಹವಣಿ= ಹದ,ತುಸು,ಕಿರು,ಕಡಿಮೆ) ತುತ್ತು+ ಅಹುದೇ ತ್ರಿಪುರಾರಿಯ+ ಒಡ್ಡವಣೆ(ಗಡಣ,ಗುಡ್ಡೆ,ಗುಮಿ,ಗುಂಪು), ರಾಯ ಕೇಳೈ ಪಾರ್ಥ ನುಬ್ಬಟೆ ಬೀಯದು(ಬೀಯು= ಮುಗಿ,ತೀರು,)+ ಈಸರಮೇಲೆ ವಿಡಾಯಿಯಾಯ್ತು(ದೊಡ್ಡಮೆರೆತ,ತೋರಿಕೆಯ ಮೆರೆತ ಭವ್ಯ ಪ್ರದರ್ಶನ)+ ಅತಿ ಚಪಲ ತನದ ವೀವೇಕ ಮಡಮುರಿಯೆ(ಹಿಮ್ಮೆಟ್ಟು, ಹಿಂಜರಿ, ಹಿಂದಕ್ಕೆ ಹೊರಳು, ತಿರುಗು).
ಅರ್ಥ:ಅರ್ಜುನನ ಅಡಾಯುಧದಿಂದ ಹೊಡೆಯಲು, ಅದರ ಹಿಡಿಕೆ ಮಾತ್ರಾ ಅವನ ಮುಷ್ಠಿಯಲ್ಲಿ ಉಳಿಯುವಮತೆ ಆ ಅಡಾಯುಧವನ್ನು ಶಿವನು ಮುರಿದು ಕಸಿದು ಕೊ೦ಡನು. ಈತನ- ಅರ್ಜುನನ ಬಾಯಿಯ ಹದದ ತುತ್ತು ತ್ರಿಪುರಾರಿ ಶಿವನ ಸಮುಹ ಆಗುವುದೇ? ಆಗದು. ಜನಮೇಜಯ ರಾಯನೇ ಕೇಳಯ್ಯಾ, ಪಾರ್ಥನ ಉಬ್ಬಟೆ- ಸಾಹಸ ಅಲ್ಲಿಗೆ ಮುಗಿಯದು. ಇಷ್ಟರಮೇಲೆಯೂ ಅವನ ಭವ್ಯಪ್ರದರ್ಶನ, ಅತಿ ಚಪಲತನದ ವೀವೇಕ ಹಿಂದಕ್ಕೆತಿರುಗಿತು.
ಮರನ ಹೆಗ್ಗೊ೦ಬುಗಳಲಿಟ್ಟನು
ತಿರುಹಿ ಕಲ್ಗು೦ಡುಗಳಮಳೆಯಲಿ
ಹರನನಾದಿದನೇನನೆ೦ಬೆನು ಪಾರ್ಥ ನುರವಣೆಯ|
ಸರಳ ಸಾರದಲಿನುತುವನು ಕ
ತ್ತರಿಸಿ ಕರುಣಾವನಧಿ ನುಡಿದನು
ಮರುಳೆ ತಮ್ಮಡಿ ಕೈದು ವುಳ್ಳೊಡೆ ಕೊ೦ಡು ಬಾಯೆ೦ದ || ೨೨ ||
ಪದವಿಭಾಗ-ಅರ್ಥ: ಮರದ ಹೆಗ್ಗೊ೦ಬುಗಳಲಿ(ಹಿರಿದು ಕೊಂಬೆ)+ ಇಟ್ಟನು(ಹೊಡೆದನು), ತಿರುಹಿ(ತಿರುಗಿಸಿ) ಕಲ್ಗು೦ಡುಗಳ ಮಳೆಯಲಿ ಹರನ ನಾದಿದನು(ನಾದು- ತಿಕ್ಕು, ತೀಡು)+ ಏನನು+ ಎಂಬೆನು, ಪಾರ್ಥನ+ ಉರವಣೆಯ(ಪರಾಕ್ರಮವ), ಸರಳ(ಬಾಣದ) ಸಾರದಲಿ(ಶಕ್ತಿಯಿಂದ)+ ಇನುತುವನು(ಇಷ್ಟನ್ನೂ, ಅದೆಲ್ಲವನ್ನೂ) ಕತ್ತರಿಸಿ ಕರುಣಾವನಧಿ (ವನಧಿ= ಸಮುದ್ರ) ನುಡಿದನು, 'ಮರುಳೆ ತಮ್ಮಡಿ(ತಮ್ಮ ಅಡಿ= ಬಳಿ - ಪಾದದಲ್ಲಿ) ಕೈದು ವುಳ್ಳೊಡೆ(ಆಯುಧವಿದ್ದರೆ) ಕೊ೦ಡು ಬಾಯೆ೦ದ(ತೆಗೆದುಕೊಂಡು ಬಾ ಎಂದ.)
ಅರ್ಥ:ಮುನಿಯು ಹೇಳಿದ,'ಅರ್ಜನನು ತನ್ನ ಕತ್ತಿಯು ಮುರಿದುಹೋಗಲು, ಮರದ ದೊಡ್ಡ ಕೊಂಬೆಗಳಿಂದ ಹೊಡೆದನು. ಕಲ್ಗು೦ಡುಗಳನ್ನು ತಿರುಗಿಸಿ ಅದರ ಮಳೆಯಲ್ಲಿ ಶಿವನನ್ನು ತೀಡಿದನು. ಮುನಿಯು,'ಏನನ್ನು ಹೇಳಲಿ, ಪಾರ್ಥನ ಪರಾಕ್ರಮವನ್ನು! ಶಿವನು ಬಾಣದ ಶಕ್ತಿಯಿಂದ ಅದೆಲ್ಲವನ್ನೂ ಕತ್ತರಿಸಿ, ಕರುಣಾಸಮುದ್ರನಾದ ಶಿವನು ಅರ್ಜುನನಿಗೆ ಹೇಳಿದನು, 'ಮರುಳೆ ತಮ್ಮ(ನಿನ್ನ) ಬಳಿ ಬೇರೆ ಆಯುಧವಿದ್ದರೆ ಅದನ್ನು ತೆಗೆದುಕೊಂಡು ಬಾ,' ಎಂದನು.
ಕೈದು ವೇಕೆ ಪುಳಿ೦ದ ನಮ್ಮೊಡ
ನೈದಿಸಾಭುಜ ಯುದ್ದದಲಿ ಬಲು
ಗೈದುವಿದೆಲಾ ಮುಷ್ಠಿನಿನಗದುಪಾಯ ಚೊಕ್ಕೆಯವ |
ಕಾಯ್ದುಕೊಳ್ಳುವನಾಗು ನಿನ್ನವ
ರೈದಿ ನೋಡಲಿಯೆನುತ ಭುಜವನು
ಹೊಯ್ದು ನಿ೦ದನು ಪಾರ್ಥನುರೆ ಬೆರಗಾಗೆ ಭೂತಗಣ || ೨೩ ||
ಪದವಿಭಾಗ-ಅರ್ಥ:ಕೈದು(ಆಯುಧ)ವೇಕೆ ಪುಳಿ೦ದ ನಮ್ಮೊಡನೆ+ ಐದಿಸು(ಬಂದು ಎದುರಿಸು)+ ಆ ಭುಜ ಯುದ್ದದಲಿ ಬಲು+ ಗೈ+ ಕೈದುವು+ ಇದೆಲಾ ಮುಷ್ಠಿ ನಿನಗೆ+ ಅದು+ ಉಪಾಯ ಚೊಕ್ಕೆಯವ(ಚಾತುರ್ಯ, ಮಲ್ಲಯುದ್ಧದಲ್ಲಿ ಒಂದು ಪಟ್ಟು) ಕಾಯ್ದುಕೊಳ್ಳುವನಾಗು ನಿನ್ನವರು+ ಐದಿ(ಐದು-ಬಾ, ಹೋಗು; ಬಂದು) ನೋಡಲಿಯೆನುತ ಭುಜವನು ಹೊಯ್ದು ನಿ೦ದನು ಪಾರ್ಥನು+ ಉರೆ ಬೆರಗಾಗೆ ಭೂತಗಣ.
ಅರ್ಥ:ಅರ್ಜುನನು ಶಬರನಿಗೆ,'ಆಯುಧವೇಕೆ ಪುಳಿ೦ದ ನಮ್ಮೊಡನೆ ಆ ಭುಜ ಯುದ್ದದಲ್ಲಿ ಬಂದು ಎದುರಿಸು. ಬಲಿಷ್ಠ ಆಯಧವು ಇದೆಲಾ ಮುಷ್ಠಿ. ನಿನಗೆ ಹೊಡೆಯಲು ಅದು ಸರಿಯಾದ ಉಪಾಯ. ಅದರಲ್ಲಿ ನಿನ್ನ ಚಾತುರ್ಯವನ್ನು ಕಾಯ್ದುಕೊಳ್ಳುವನಾಗು. ನಿನ್ನವರು ಬಂದು ನೋಡಲಿ ಎನುತ್ತಾ ಭುಜವನು ತಟ್ಟಿ ಪಾರ್ಥನು ಮಲ್ಲಯುದ್ಧಕ್ಕೆ ನಿಂತನು. ಶಿವನ ಭೂತಗಣ ಬಹಳ ಬೆರಗಾಗಿ ಹೋಯಿತು.
ಕ೦ಡಿರೇ ದೇವಿಯರು ನರನು
ದ್ದ೦ಡತನವನು ತರಗೆಲೆಯ ಕೈ
ಗೊ೦ಡುತಿ೦ಗಳು ನಾಲ್ಕು ಪವನಗ್ರಾಸದಿ೦ಬಳಿಕ |
ದ೦ಡಿಸಿದನೀ ದೇಹವನು ನಾ
ವ೦ಡಲೆಯಲೊದಗಿದನಲೇ ಸಮ
ದ೦ಡಿಯಲಿ ನಮ್ಮೊಡೆಯನೆ೦ದನು ನಗುತ ಶಶಿಮೌಳಿ || ೨೪ ||
ಪದವಿಭಾಗ-ಅರ್ಥ:ಕ೦ಡಿರೇ ದೇವಿಯರು ನರನ+ ಉದ್ದ೦ಡತನವನು(ದರ್ಪ,ಗರ್ವ), ತರಗೆಲೆಯ ಕೈಗೊ೦ಡು ತಿ೦ಗಳು ನಾಲ್ಕು, ಪವನಗ್ರಾಸದಿ೦(ಗಾಳಿ ಆಹಾರ), ಬಳಿಕ ದ೦ಡಿಸಿದನು+ ಈ ದೇಹವನು ನಾವು+ ಅಂಡಲೆಯಲು+ ಒದಗಿದನಲೇ ಸಮದ೦ಡಿಯಲಿ ನಮ್ಮೊಡೆಯನು+ ಎಂದನು ನಗುತ ಶಶಿಮೌಳಿ
ಅರ್ಥ:ಶಶಿಮೌಳಿ ಶಿವನು ನಗುತ್ತಾ ಗೌರಿಗೆ, 'ಕ೦ಡಿರೇ- ನೋಡಿದಿರಾ ದೇವಿಯರೇ, ಅರ್ಜುನನ ದರ್ಪವನ್ನು, ಅವನು ತರಗೆಲೆಯನ್ನು ತಿಂದು ತಪವನ್ನು ಕೈಗೊ೦ಡು ತಿ೦ಗಳು ನಾಲ್ಕು ಆಯಿತು; ಬಳಿಕ ಗಾಳಿಯ ಆಹಾರದಿ೦ದ ಈ ಇವನ ದೇಹವನ್ನು ದ೦ಡಿಸಿದನು. ನಾವು ಅಂಡಲೆದು ಬೇಟಗೆ ಬಂದರೆ ನಮಗೆ ಸರಿಸಾಟಿಯಾಗಿ ಯುದ್ಧಕ್ಕೆ ಒದಗಿದನಲ್ಲಾ! ಇವನು ನಮ್ಮೊಡೆಯನು,' ಎಂದನು.
ಹಾರಿತಾಯುಧವೆ೦ದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜಬಾಹು ಶಕ್ತಿಯೊಳು೦ಟೆ ಖಯಖೋಡಿ |
ಮೀರಿಹತ ಕ೦ತುಕದವೊಲು ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯ೦ಕದ ದೇವಿ ನೋಡೆ೦ದ || ೨೫||
ಪದವಿಭಾಗ-ಅರ್ಥ:ಹಾರಿತು+ ಆಯುಧವೆ೦ದು ಭೀತಿಗೆ ಮಾರುವೋದನೆ? ವೀರರಸ ನೊರೆಯಾರಿತೇ?(ಬಟ್ಟಲಿನಲ್ಲಿ ನೊರೆಯಿಂದ ಉಕ್ಕುವ ವೀರರಸದ ನೊರೆ) ನಿಜ(ತನ್ನ) ಬಾಹು ಶಕ್ತಿಯೊಳು೦ಟೆ ಖಯಖೋಡಿ? ಮೀರಿಹತ ಕ೦ತುಕದವೊಲು ಪುಟವೇರುತಿದೆ ವಿಕ್ರಮ, ಚಡಾಳಿಸಿ(ಅಧಿಕವಾಗು, ಮೇಲಾಗು, ತುಂಬು,ಹಬ್ಬು, ಪ್ರಜ್ವಲಿಸು,ಹೊಳೆ, ಉರವಣಿಸು) ಬೀರುತಿದೆ ಭುಜ ಭಾರಿಯ೦ಕದ(ಮುಂದಿನ ಭಾರಿ ಯುದ್ಧಕ್ಕೆ), ದೇವಿ ನೋಡೆ೦ದ. {ಅಂಕ= ಯುದ್ಧ ವಿಶ್ವಾಸ,ಅಳವಿ,ನೆಮ್ಮುಗೆ)
ಅರ್ಥ:ಶಿವು ಗೌರಿಯನ್ನು ಕುರಿತು,'ಆಯುಧವು ಹಾರಿತು- ಕೈತಪ್ಪಿತು ಎ೦ದು ಪಾರ್ಥನು ಭೀತಿಗೆ ಮಾರುವೋದನೆ? ಇಲ್ಲ! ಅವನ ವೀರರಸ ನೊರೆಯು ಆರಿತೇ? ಇಲ್ಲ! ಅರ್ಜುನನಿಗೆ ತನ್ನ ಬಾಹು ಶಕ್ತಿಯಲ್ಲಿ ಉ೦ಟೆ ಕೊರತೆ, ನ್ಯೂನತೆ? ಇಲ್ಲ! ಅದಕ್ಕೂ ಮೀರಿ ಕೆಳಗೆ ಬಿದ್ದ ಚೆಂಡಿನಂತೆ ಪುಟವು ಏರುತ್ತಿದೆ ಅವನ ವಿಕ್ರಮ,- ಪರಾಕ್ರಮ; ಅವನ ಭುಜದ ಪರಾಕ್ರಮ ಮುಂದಿನ ಭಾರಿ ಯುದ್ಧಕ್ಕೆ ಮತ್ತೂ ಅಧಿಕವಾಗಿ ಸಾಹಸವನ್ನ ಬೀರುತ್ತಿದೆ, ದೇವಿ ನೋಡು ಎಂದ.
ಈತ ನರನೆ೦ಬುವ ಕಣಾ ಸ೦
ಗಾತಿ ನಾರಾಯಣ ಋಷಿಗೆ ತಾ
ವೀತಗಳು ಹರಿವ೦ಶಭೂತರು ಭಕ್ತರಿವರೆಮಗೆ |
ಈತನೆಮ್ಮಯ ಪಾಶುಪತ ವಿ
ಖ್ಯಾತ ಬಾಣವಬೇಡಿ ತಪದಲಿ
ವೀತರಾಗ ದ್ವೇಷಿಯಾದನು ಕಾ೦ತೆ ಕೇಳೆ೦ದ || ೨೬ ||
ಪದವಿಭಾಗ-ಅರ್ಥ:ಈತ ನರನೆ೦ಬುವ ಕಣಾ, ಸ೦ಗಾತಿ ನಾರಾಯಣ ಋಷಿಗೆ, ತಾವು+ ಈತಗಳು ಹರಿವ೦ಶ ಭೂತರು, ಭಕ್ತರು+ ಇವರು+ ಎಮಗೆ; ಈತ ನೆಮ್ಮಯ ಪಾಶುಪತ ವಿಖ್ಯಾತ ಬಾಣವಬೇಡಿ ತಪದಲಿ ವೀತರಾಗ(ಮನೋವಿಕಾರಗಳಿಂದ ದೂರನಾದವನು, ರಾಗರಹಿತನಾದವನು, ಅತಿ ವಿನಯವಂತ, ವೈರಾಗ್ಯ, ರಾಗ= ಮೋಹ, ವೀತ= ತೊರೆದವನು; ರಾಗ ದ್ವೇಷಿಯಾದನು) ದ್ವೇಷಿಯಾದನು ಕಾ೦ತೆ ಕೇಳೆ೦ದ.(ರಾಗ ಪದಕ್ಕೆ ವೀತ, ದ್ವೇಷಿ ಎರದು ಸಮಾನಾರ್ಥಕ ವಿಶೇಷಣ ಸೆರಿ ಅರ್ತಾಂತರ ದೋಷವಾಗಿದೆ ಎನ್ನಿಸುವುದು.)
ಅರ್ಥ:ಶಿವನು ಗೌರಿಗೆ,'ಈತನು ನರನೆ೦ಬುವವನು ಕಣಾ, ಹಿಂದಿನ ಜನ್ಮದಲ್ಲಿ ನಾರಾಯಣ ಋಷಿಗೆ ಸ೦ಗಾತಿ, ತಾವು- ಇವರಿಬ್ಬರು ಹರಿವ೦ಶ ಭೂತರು- ಸತ್ವರು-ಹೊಂದಿದರು. ಇವರು ನಮಗೆ ಭಕ್ತರು. ಈತ ನೆಮ್ಮಲ್ಲಿರುವ ಪಾಶುಪತ ವಿಖ್ಯಾತ ಬಾಣವನ್ನು ಬೇಡುವುದಕ್ಕಾಗಿ, ಮನೋವಿಕಾರಗಳಿಂದ ದೂರನಾಗಿ ತಪಸ್ಸಿನಲ್ಲಿರುವನು, ಕಾ೦ತೆಯೇ ಕೇಳು ಎಂದ.
ಕೊಡುವೆನೀತ೦ಗೆಮ್ಮ ಶರವನು
ಮಡದಿ ಮತ್ತೆಯು ನೋಡುಪಾರ್ಥನ
ಕಡುಹನೆನುತಿದಿರಾ೦ತು ಬಾಹಪ್ಪಳಿಸಿ ಬೊಬ್ಬಿಡುತ |
ಹಿಡಿದರಿಬ್ಬರು ಕೈಗಳನು ಹೊ
ಕ್ಕೊಡನೆ ಹತ್ತಾ ಹತ್ತಿಯಲಿ ಮಿಗೆ
ಜಡಿತೆಯಲಿ ಚಾಳೈಸಿದರು ಬಹುವಿಧದ ಬಿನ್ನಣವ || ೨೭ ||
ಪದವಿಭಾಗ-ಅರ್ಥ:ಕೊಡುವೆನು+ ಈತ೦ಗೆ+ ಎಮ್ಮ ಶರವನು, ಮಡದಿ ಮತ್ತೆಯು ನೋಡು ಪಾರ್ಥನ ಕಡುಹನು(ಶೌರ್ಯವನ್ನು)+ ಎನುತ+ ಇದಿರಾ೦ತು ಬಾಹು+ ಅಪ್ಪಳಿಸಿ ಬೊಬ್ಬಿಡುತ ಹಿಡಿದರು+ ಇಬ್ಬರು ಕೈಗಳನು, ಹೊಕ್ಕು+ ಒಡನೆ ಹತ್ತಾ ಹತ್ತಿಯಲಿ ಮಿಗೆ(ಬಹಳ) ಜಡಿತೆಯಲಿ(ಜಡಿ= ಹೊಡಿ, ಬಡಿ; ಬಡಿತ, - ಹೊಡೆತ) ಚಾಳೈಸಿದರು(ಹೀಯಾಳಿಸು) ಬಹುವಿಧದ ಬಿನ್ನಣವ(ಬಿನ್ನಾಣ= ಕೌಶಲ್ಯ, ನೈಪುಣ್ಯ, ಚಮತ್ಕಾರದಿಂದ).
ಅರ್ಥ:ಶಿವನು ಗೌರಿಗೆ ಹೇಳಿದ,' ಈತನಿಗೆ ನಮ್ಮ ಪಾಶುಪತ ಶರವನ್ನು ಕೊಡುವೆನು. ಮಡದಿಯೇ ಮತ್ತೆ ನೋಡು ಪಾರ್ಥನ ಶೌರ್ಯವನ್ನು,' ಎನ್ನುತ್ತಾ ಅರ್ಜುನನಿಗೆ ಎದುರಿಸಿ ನಿ೦ತು ಬಾಹುವನ್ನು ಅಪ್ಪಳಿಸಿದನು. ಅವರು ಬೊಬ್ಬಿಡುತ್ತಾ- ಘರ್ಜಿಸುತ್ತಾ ಇಬ್ಬರು ಪರಸ್ಪರ ಕೈಗಳನ್ನು ಹಿಡಿದರು. ಅವರು ಹೊಕ್ಕು-ಬಗ್ಗಿ ನುಗ್ಗಿ, ಒಡನೆ ಹತ್ತಾ ಹತ್ತಿಯಲ್ಲಿ ಬಹಳ ಹೊಡೆಯುತ್ತಾ ಪರಸ್ಪರ ಬಹುವಿಧದ ಬಿನ್ನಾಣದಿಂದ ಚಾಳಿಸಿದರು- ಹೀಯಾಳಿಸಿದರು.
ಬಿಗಿವ ಬಿಡಿಸುವ ಬಿಡಿಸಿದಾಕ್ಷಣ
ತೆಗೆವ ಕಳಚುವ ಕೊ೦ಬ ಲಳಿಯಲಿ
ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹರವಡುವ |
ಚಿಗುವ ತೊಡಚುವ ಬಿಗಿವ ಬಿಡಿಸುವ
ಬಗಿವ ಬಳಸುವ ಬ೦ದ ಗತಿಯಲಿ
ಲಗಡಿಸುವ ಲೋಕೈಕ ವೀರರು ಹೊಕ್ಕು ಹೆಣಗಿದರು || ೨೮ ||
ಪದವಿಭಾಗ-ಅರ್ಥ:ಬಿಗಿವ ಬಿಡಿಸುವ ಬಿಡಿಸಿದಾಕ್ಷಣ ತೆಗೆವ ಕಳಚುವ ಕೊ೦ಬ ಲಳಿಯಲಿ(ಚುರುಕಿನಲ್ಲಿ) ಹೊಗುವ ಹತ್ತುವ ಲವಣಿಯಲಿ(ವೇಗವಾಗಿ) ಲಾಗಿಸುವ ಹರವಡುವ ಚಿಗುವ ತೊಡಚುವ ಬಿಗಿವ ಬಿಡಿಸುವ ಬಗಿವ ಬಳಸುವ ಬ೦ದ ಗತಿಯಲಿ ಲಗಡಿಸುವ(ಪೆಟ್ಟು,ಹೊಡೆತ; ಮಲ್ಲಯುದ್ಧದ ಪಟ್ಟು, ವರಸೆ) ಲೋಕೈಕ ವೀರರು ಹೊಕ್ಕು ಹೆಣಗಿದರು.
ಅರ್ಥ:ಇಬ್ಬರೂ ಕುಸ್ತಿಯ ಪಟ್ಟುಗಳನ್ನು ಹಾಕಿದರು,'ಪರಸ್ಪರ ಬಿಗಿಯಾಗಿ ಹಿಡಿಯುವ, ಅನ್ನು ಬಿಡಿಸುವ, ಬಿಡಿಸಿದಾಕ್ಷಣ ತೆಗೆವ, ಹಿಡಿತದಿಂದ ಕಳಚಿಕೊಳ್ಳುವ, ಚುರುಕಿನಲ್ಲಿ ಒಬ್ಬರನ್ನೊಬ್ಬರು ಕೊ೦ಬ- ಆಕ್ರಮಿಸುವ; ವೇಗವಾಗಿ ಹೊಗುವ; ಒಬ್ಬರಮೇಲೆ ಒಬ್ಬರು ಹತ್ತುವ. ಚುರುಕಾಗಿ ಲಾಗಿಸಿ ಹಾರುವ; ಹರವಡುವ- ದೂರ ಸರಿಯುವ, ಚಿಗುವ- ಚಿಮ್ಮುವ, ತೊಡಚುವ- ಕಾಲಿಗೆ ಕಾಲುಸಿಕ್ಕಿಸಿ ತೊಡಗಾಲು ಕೊಡುವ, ಬಿಗಿಯಾಗಿ ಅಪ್ಪುವ, ಅದನ್ನು ಬಿಡಿಸುವ, ಬಗಿವ- ಬಗ್ಗಿ ನುಗ್ಗುವ,ಬ೦ದ ಗತಿಯಲ್ಲಿ ಬಳಸುವ; ಪಟ್ಟುಹಾಕಿ ಲಗಡಿಸುವ ಮಲ್ಲಯುದ್ಧವನ್ನು ಲೋಕೈಕ ವೀರರು ಹೊಕ್ಕು ಹೆಣಗಿದರು- ಹೋರಾಡಿದರು.
ಕರವಳಯ ತಳಹತ್ತ ದೊಕ್ಕರ
ಶಿರವ ದಣು ಧಣು ವಟ್ಟತಳ ಖೊ
ಪ್ಪರ ದುವ೦ಗಲ ಕ೦ದ ಡೊಕ್ಕರ ತೋರಹತ್ತದಲಿ |
ಸರಿಸ ವ೦ಕಡ ಬ೦ದಪಟ್ಟಸ
ಉರಗ ಬ೦ಧನ ಭಾಹು ದಣುವ೦
ತರಲ ಗಡಿ ಯೆ೦ಬಿನಿತರಲಿ ತೋರಿದರು ಕೌಶಲವ || ೨೯ ||
ಪದವಿಭಾಗ-ಅರ್ಥ:ಕರವಳಯ, ತಳಹತ್ತ, ದೊಕ್ಕರ, ಶಿರವದಣು, ಧಣು, ವಟ್ಟತಳ; ಖೊಪ್ಪರ, ದುವ೦ಗಲ, ಕ೦ದ, ಡೊಕ್ಕರ(ಗುದ್ದು, ಹೊಡೆತ, ಮಲ್ಲಯುದ್ಧದಲ್ಲಿ ಒಂದು ವರಸೆ), ತೋರಹತ್ತದಲಿ ಸರಿಸ(ರಭಸ ), ವ೦ಕಡ, ಬ೦ದಪಟ್ಟಸ, ಉರಗ ಬ೦ಧನ, ಭಾಹು ದಣುವ೦ತರಲ, ಗಡಿಯೆ೦ಬ+ ಅನಿತರಲಿ(ಎಲ್ಲದರಲ್ಲಿ) ತೋರಿದರು ಕೌಶಲವ.
ಅರ್ಥ:ಅರ್ಜುನ ಮತ್ತು ಶಿವ ಇವರು ಮಲ್ಲಯುದ್ಧದಲ್ಲಿ, 'ಕರವಳಯ, ತಳಹತ್ತ, ದೊಕ್ಕರ, ಶಿರವದಣು, ಧಣು, ವಟ್ಟತಳ; ಖೊಪ್ಪರ, ದುವ೦ಗಲ, ಕ೦ದ, ಡೊಕ್ಕರ, ತೋರಹತ್ತದಲಿ ಸರಿಸ, ವ೦ಕಡ, ಬ೦ದಪಟ್ಟಸ, ಉರಗ ಬ೦ಧನ, ಭಾಹು ದಣುವ೦ತರಲ, ಗಡಿಯೆ೦ಬ ಎಲ್ಲ ಪಟ್ಟುಗಳಲ್ಲಿ ತಮ್ಮ ಕೌಶಲವನ್ನು ತೋರಿದರು.ಮಲ್ಲಯುದ್ಧದ ಪಟ್ಟುಗಳು
ಮುರಿವ ಬಿಡಿಸುವ ಡಗೆಯ ಸೈರಿಸಿ
ತೆರಳಿಚುವ ತಳ ಮೇಲುಗಳಲು
ತ್ತರಿಸುವೇಳುವ ಬೀಳ್ವ ಹತ್ತುವ ಸುಳಿವ ವ೦ಚಿಸುವ |
ಹೊರಳ್ವ ತನು ಹೋರಟೆಯ ಸತ್ವೋ
ತ್ಕರ್ಷ ಸರಿಯೆನೆ ಶ೦ಭು ಶಿಷ್ಯಗೆ
ಪರಿವಿಡಿಯ ತೋರಿಸುವಲಿದ್ದನು ಭೂಪ ಕೇಳೆ೦ದ || ೩೦ ||
ಪದವಿಭಾಗ-ಅರ್ಥ:ಮುರಿವ, ಬಿಡಿಸುವ, ಡಗೆಯ(ಮರಾಠಿ- ೧ ಸೆಕೆ, ಕಾವು, ಝಳ ೨ ಭಯ, ಅಂಜಿಕೆ) ಸೈರಿಸಿ ತೆರಳಿಚುವ, ತಳ ಮೇಲುಗಳಲಿ+ ಉತ್ತರಿಸುವ+ ಏಳುವ ಬೀಳ್ವ ಹತ್ತುವ, ಸುಳಿವ ವ೦ಚಿಸುವ, ಹೊರಳ್ವ, ತನು ಹೋರಟೆಯ ಸತ್ವ+ ಉತ್ಕರ್ಷ ಸರಿಯೆನೆ, ಶ೦ಭು ಶಿಷ್ಯಗೆ ಪರಿವಿಡಿಯ ತೋರಿಸುವಲಿ+ ಇದ್ದನು ಭೂಪ ಕೇಳೆ೦ದ.
ಅರ್ಥ:ಮಲ್ಲಯುದ್ಧದ ಪಟ್ಟುಗಳಲ್ಲಿ, 'ಮುರಿವ, ಬಿಡಿಸುವ, ಡಗೆಯ ಸೈರಿಸಿಕೊಂಡು ತೆರಳಿಚುವ, ತಳ ಮತ್ತು ಮೇಲುಗಳಲ್ಲಿ ಉತ್ತರಿಸುವ, ಏಳುವ ಬೀಳ್ವ ಹತ್ತುವ, ಸುಳಿವ ವ೦ಚಿಸುವ, ಹೊರಳುವ, ದೇಹದ ಹೋರಟೆಯ ಸತ್ವವು ಉತ್ಕರ್ಷವು- ಸರಿ ಎನ್ನುವಂತೆ, ಶ೦ಭುವು ಶಿಷ್ಯಅರ್ಜುನನಿಗೆ ಪರಿಚಯದ ಪಾಠಗಳನ್ನು ತೋರಿಸುವ ಕಾರ್ಯದಲ್ಲಿ ತೊಡಗಿದ್ದನು. ಭೂಪನೇ ಕೇಳು ಎಂದ ಮುನಿ.
ಗಾಯವು೦ಟೇ ತೋರು ನಿನಗಡು
ಪಾಯೊಬಿಡು ಜೊಕ್ಕೆಯ ಯವನೆನುತಲ
ಜೀಯನೊಡನಿದಿರೆದ್ದು ತಿವಿದನು ಹರನ ಪೇರುವ |
ಗಾಯ ಘಾತಿಗೆ ನಿಮ್ಮ ಮತ ವೆಮ
ಗಾಯಿತೆನುತ ಪುರಾರಿ ಕಡು ಪೂ
ರಾಯದಲಿ ಕರವಿತ್ತಿ ನಸು ತಿವಿದನು ಧನ೦ಜಯನ || ೩೧ ||
ಪದವಿಭಾಗ-ಅರ್ಥ:ಗಾಯವು೦ಟೇ ತೋರು ನಿನಗೆ+ ಅಡುಪಾಯ(ಎರಡನೆಯ ದಾರಿ) ಬಿಡು, ಜೊಕ್ಕೆಯ ಯವನ+ ಎನುತಲಿ+ ಅಜೀಯನೊಡನೆ+ ಇದಿರೆದ್ದು ತಿವಿದನು ಹರನ, ಪೇರುವ ಗಾಯ ಘಾತಿಗೆ ನಿಮ್ಮ ಮತ ವೆಮಗಾಯಿತೆ+ ಎನುತ ಪುರಾರಿ(ಶಿವ; ತ್ರಿಪುರರನ್ನು ಕೊಂದವನು) ಕಡು ಪೂರಾಯದಲಿ(ಪರಿಪೂರ್ಣ, ಪೂರಾ) ಕರವಿತ್ತಿ ನಸು(ಸ್ವಲ್ಪ) ತಿವಿದನು ಧನ೦ಜಯನ.
ಅರ್ಥ:ಪಾರ್ಥನು ಶಿವನಿಗೆ,'ನಿನಗೆ ಗಾಯವು೦ಟೇ ತೋರು, ಎರಡನೆಯ ದಾರಿ ಬಿಡು, 'ಜೊಕ್ಕೆಯ ಯವನ' ಎಂದು ನಿಂದಿಸಿ, ಅಜೀಯನಾದ ಶಿವನೊಡನೆ ಅವನ ಎದುರು ಎದ್ದು ಹರನನ್ನು ಕೈಯಿಂದ ತಿವಿದನು. ಪೇರುವ- ಪೇರಿಸು ಗಾಯವಾಗುವ ಘಾತಿಗೆ- ಹೊಡೆತಕ್ಕೆ ನಿಮ್ಮ ಮತವು ಎಮಗಾಯಿತೆ, ನೀವು ಮಾಡಿದ್ದನ್ನ ನಾವೂ ಮಾಡಬೆಕಾಯಿತೇ- ಎನ್ನುತ್ತಾ ಶಿವನು ಬಲವಾಗಿ ಪೂರ್ಣ ಕೈ ಎತ್ತಿ ಧನ೦ಜಯನನ್ನು ಮೆಲ್ಲಗೆ ತಿವಿದನು.
ತರಹರಿಸಿ ನರನಿಕ್ಕಿದನು ಶ೦
ಕರನ ವಕ್ಷಸ್ಥಳವನೆಡೆಯಲಿ
ಮುರಿದು ಕಳಚಿ ಗಿರೀಶನೆರಗಿದನಿ೦ದ್ರ ನ೦ದನನ |
ಮರಳಿ ತಿವಿದನು ಪಾರ್ಥನಾತನ
ಶಿರಕೆ ಕೊಟ್ಟನು ಶ೦ಭುವಿ೦ತಿ
ಬ್ಬರ ವಿಷಮ ಗಾಯದ ಗಡಾವಣೆ ಗಲ್ಲಿಸಿತು ಜಗವ || ೩೨ ||
ಪದವಿಭಾಗ-ಅರ್ಥ:ತರಹರಿಸಿ(ಬಳಲಿ ಸುಧಾರಿಸಿಕೊಂಡನು, ಕಳವಳಿಸು, ಸೈರಿಸು) ನರನು+ ಇಕ್ಕಿದನು(ಹೊಡೆದನು) ಶ೦ಕರನ ವಕ್ಷಸ್ಥಳವನು+ ಎಡೆಯಲಿ ಮುರಿದು ಕಳಚಿ(ತಿರುಗಿ ತಪ್ಪಸಿಕೊಂಡು) ಗಿರೀಶನು+ ಎರಗಿದನು(ಮೇಲೆಬಿದ್ದು)+ ಇಂದ್ರನ೦ದನನ ಮರಳಿ(ಪುನಃ ) ತಿವಿದನು ಪಾರ್ಥನು ಆತನ ಶಿರಕೆ ಕೊಟ್ಟನು ಶ೦ಭುವು+ ಇಂತಿಬ್ಬರ ವಿಷಮ ಗಾಯದ ಗಡಾವಣೆ(ಭೋರ್ಗರೆತ, ಆರ್ಭಟ) ಗಲ್ಲಿಸುತು ಜಗವ (ಗಲಗಲ ಅಲುಗಾಡಿಸು, ನಡುಗಿಸು, ನೋಯಿಸು ಹಿಂಸಿಸು)
ಅರ್ಥ:ಅರ್ಜುನನು ಶಿವನ ಸಣ್ನ ತಿವಿತಕ್ಕೆ ಬಳಲಿ ಸುಧಾರಿಸಿಕೊಂಡನು. ನಂತರ ಅವನು ಶ೦ಕರನ ವಕ್ಷಸ್ಥಳವನ್ನು ಹೊಡೆದನು. ಅಲ್ಲಿಯೇ ತಿರುಗಿ ತಪ್ಪಸಿಕೊಂಡು ಗಿರೀಶನು ಮೇಲೆಬಿದ್ದನು. ಇಂದ್ರನ೦ದನ ಪಾರ್ಥನು ಪುನಃ ತಿವಿದನು. ಶ೦ಭುವು ಪಾರ್ಥನ ಆತನ ತಲೆಗೆ ಹೊಡೆತಕೊಟ್ಟನು; ಹೀಗೆ ಇಬ್ಬರ ವಿಷಮ ಹೊಡೆದಾಟದ ಆರ್ಭಟ ಜಗತ್ತನ್ನೇ ನಡುಗಿಸಿತು.
ಸುಯ್ಲ ಹೊಗೆಗಳ ಹೊದರುದಿವಿಗಳ
ಮಯ್ಲುಳಿಯ ಮುರಿವುಗಳ ದೃಡ ವೇ
ಗಾಯ್ಲರಿಕ್ಕಿದ ಗಾಯಗಾಯಕೆ ಮುಷ್ಠಿ ಕಿಡಿಯೇಳೆ
ಶಯ್ಲಹತಿಗಳ ಭಾರಣೆಯ ಬಲು
ಪೊಯ್ಲಬೆಳೆ ಸಿರಿವ೦ತರಿವರೆನ
ಲಯ್ಲು ಪೈಲದ ಜರಡುಗಳೆ ನರನಾಥ ಕೇಳೆ೦ದ ೩೩
ಪದವಿಭಾಗ-ಅರ್ಥ:ಸುಯ್ಲ (ಉಸಿರು) ಹೊಗೆಗಳ ಹೊದರು ದಿವಿಗಳ(ಪರೀಕ್ಷೆ) ಮಯ್+ ಲುಳಿಯ(ರಭಸ, ವೇಗ ೨ ಕಾಂತಿ) ಮುರಿವುಗಳ(ಬಾಗಿಸುವಿಕೆ) ದೃಡ ವೇಗಾಯ್ಲರು(ಚಿರುಕಿನವರು)+ ಇಕ್ಕಿದ ಗಾಯಗಾಯಕೆ ಮುಷ್ಠಿ ಕಿಡಿಯೇಳೆ ಶಯ್ಲ(ಶೈಲ- ಬೆಟ್ಟ- ಬಲವಾದ) ಹತಿಗಳ ಭಾರಣೆಯ ಬಲುಪೊಯ್ಲ ಬೆಳೆ ಸಿರಿವ೦ತರು+ ಇವರೆನಲ್+ ಅಯ್ಲು(ಐಲು ) ಪೈಲದ(ಪೈಲ್ವಾನ) ಜರಡುಗಳೆ(ಜಾಳು,ಒಣ,ಗೊಡ್ಡು,) ನರನಾಥ(ಜನಮೇಜಯ ರಾಜ) ಕೇಳೆ೦ದ.
ಅರ್ಥ:ಪಾರ್ಥ ಮತ್ತು ಶಿವನ ಮಲ್ಲಯುದ್ಧದ ಹೋರಾಟದಲ್ಲಿ, ಉಸಿರುಬಿಟ್ಟಾಗ ಹೊಗೆಗಳು, ದೇಹದ ಸಂದನ್ನು ಪರೀಕ್ಷಿಸಿ ಹಿಡಿಯುವುದು, ಅಂಗಾಂಗಗಳ ರಭಸ, ಅವುಗಳ ಬಾಗಿಸುವಿಕೆ, ದೃಡ ಚಿರುಕಿನತನ,ಹೊಡೆತಬಿದ್ದ ಗಾಯಗಾಯಕೆ- ಮುಷ್ಠಿಗೆ - ಮುಷ್ಠಿಯ ಹೊಡೆತದ ಕಿಡಿಯೇಳುತ್ತಿರಲು, ಬೆಟ್ಟಗಳು ಪರಸ್ಪರ ಹತಿಗಳ- ಹೊಡೆದಂತೆ ಭಾರಣೆಯ-ಬಲವಾದ ಬಲುಪೆಟ್ಟುಗಳ ಬೆಳೆಯನ್ನು ಪಡೆದ ಸಿರಿವ೦ತರು ಇವರು ಎನ್ನುವಂತೆ ಹೋರಾಡಿದರು. ಇವರು ಐಲು-ಪೈಲದ-ಮರುಳು ಜನರೆ?, ಜೊಳ್ಳು-ಜರಡುಗಳೆ- ಸಾಮಾಬ್ಯರೆ?'ನರನಾಥ(ಜನಮೇಜಯ ರಾಜನೇ ಕೇಳು ಎಂದ ಮುನಿ.
ತ್ರಾಣವೆ೦ತುಟೊಶಿವಶಿವಾಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝ ಪೂತು ಜಗಜಟ್ಟಿ |
ಕಾಣೆನಿವಗೆ ಸಮಾನರನು ಶಿವ
ನಾಣೆ ಗುಣದಸೂಯವೇ ತ
ನ್ನಾಣೆ ನೋಡೌ ಶಬರಿಯೆ೦ದನು ನಗುತ ಮದನಾರಿ || ೩೪ ||
ಪದವಿಭಾಗ-ಅರ್ಥ:ತ್ರಾಣವೆ೦ತುಟೊ(ಶಕ್ತಿ ಹೇಗಿದೆಯೊ) ಶಿವಶಿವಾ ಸತ್ರಾಣನು+ ಅಹೆ(ಬಲಶಾಲಿಯೇ ಆಗರುವೆ) ಬಹುದಿವಸ ಭುವನ ಪ್ರಾಣವೇ(ಬೀಸುವ ಗಾಳಿಯೇ) ಪೋಷಣವಲಾ(ಆಹಾರವಲಾ), ಮಝ ಪೂತು! ಜಗಜಟ್ಟಿ ಕಾಣೆನು+ ಇವಗೆ ಸಮಾನರನು, ಶಿವನಾಣೆ, ಗುಣದ+ ಅಸೂಯವೇ(ಅಸೂಯೆ ಇಲ್ಲ) ತನ್ನಾಣೆ! ನೋಡೌ ಶಬರಿಯೆ೦ದನು(ಗೌರೀ) ನಗುತ ಮದನಾರಿ
ಅರ್ಥ:ಶಿವನು ಅರ್ಜುನನ್ನು ಕುರಿತು,'ನಿನಗೆ ಶಕ್ತಿ ಹೇಗಿದೆಯೊ, ಶಿವಶಿವಾ! ಬಲಶಾಲಿಯೇ ಆಗರುವೆ. ಬಹುದಿವಸ ಬೀಸುವ ಗಾಳಿಯೇ ನಿನಗೆ ಆಹಾರವಲಾ!, ಮಝ ಪೂತು! ನೀನು ಜಗಜಟ್ಟಿ. ಶಬರಿ ವೇಷದ ಗೌರಿಯನ್ನು ಮದನಾರಿ ಶಿವನು ಕುರಿತು, ನಗುತ್ತಾ,' ಇವನಿಗೆ ಸಮಾನರನ್ನು ಕಾಣೆನು, ಶಿವನಾಣೆ, ಗುಣಕ್ಕೆ ಮೆಚ್ಚುವೆ; ಅಸೂಯೆ ಇಲ್ಲ, ತನ್ನಾಣೆ! ನೋಡೇ ಶಬರಿ,' ಎ೦ದನು.
ನಿನಗೆ ನಾ ಬೆರಗಾದೆ ನೀನಿ೦
ದೆನಗೆ ಮೆಚ್ಚಿದೆ ದೇವ ದಾನವ
ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ |
ಇನನೊ ಮೇಣ್ ದೇವೆ೦ದ್ರನೋ ಹರ
ತನುಜನೋ ಹರಿಯೋ ಮಹಾ ದೇ
ವನೋ ಕಿರಾತನೋ ನೀನೆನುತ ಮತ್ತೆರಗಿದನು ಶಿವಗೆ || ೩೫ ||
ಪದವಿಭಾಗ-ಅರ್ಥ:ನಿನಗೆ ನಾ ಬೆರಗಾದೆ, ನೀನು+ ಇ೦ದು+ ಎನಗೆ ಮೆಚ್ಚಿದೆ; ದೇವ ದಾನವ ಜನವು+ ಎನಗೆ ಪಾಡಲ್ಲ; ನೀ ಹಲ್ಲಣಿಸಿದೈ(ಜೀನು ಹಾಕು) ನಮ್ಮ; ಇನನೊ(ಸೂರ್ಯನೊ) ಮೇಣ್ ದೇವೆ೦ದ್ರನೋ, ಹರ ತನುಜನೋ(ಕುಮಾರನೊ) ಹರಿಯೋ(ವಿಷ್ಣುವೊ) ಮಹಾ ದೇವನೋ(ಪರಶಿವನೋ) ಕಿರಾತನೋ(ನಿಜವಾಗಿ ಕಿರಾತನೊ) ನೀನು ಎನುತ ಮತ್ತೆ+ ಎರಗಿದನು(ಆಕ್ರಮಿಸಿದನು) ಶಿವಗೆ
ಅರ್ಥ:ಅರ್ಜುನನು ಕಿರಾತವೇಶದ ಶಿವನಿಗೆ,'ನಿನಗೆ ನಾನು ಕೂಡಾ ಬೆರಗಾದೆ ಕಾಣಯ್ಯಾ, ನೀನು ಇ೦ದು ನನಗೆ ಮೆಚ್ಚಿದೆ; ದೇವ ದಾನವ ಮನುಜರು ನನಗೆ ಪಾಡಲ್ಲ- ಜೋಡಿಯಲ್ಲ- ಸಮವಲ್ಲ; ನೀನು ನಮ್ಮ- ನನ್ನನ್ನು ಬಗ್ಗಿಸಿದೆಯಲ್ಲಾ; ನೀನು ಸೂರ್ಯನೊ, ಅಥವಾ ದೇವೆ೦ದ್ರನೋ, ಹರ ತನುಜ ಕುಮಾರನೊ, ವಿಷ್ಣುವೊ, ಅಥವಾ ಆ ಪರಶಿವನೋ! ನೀನು ಕಿನಿಜವಾಗಿಯೂ ಕಿರಾತನೊ?' ಎನ್ನುತ್ತಾ ಮತ್ತೆ ಶಿವನನ್ನು ಆಕ್ರಮಿಸಿದನು.
ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ |
ನೋಯನೊ೦ದನು ಮೀರಿ ಮುನಿಯಲ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ || ೩೬ ||
ಪದವಿಭಾಗ-ಅರ್ಥ:ಗಾಯವನು ಮನ್ನಿಸುತ(ಕ್ಷಮಿಸಿ, ಲೆಕ್ಕಿಸದೆ) ಶಿವ ಪೂರಾಯದಲಿ(ಪೂರಾ ಶಕ್ತಿಯನ್ನು ಉಪಯೋಗಿಸಿ) ಮೆಟ್ಟಿದನು ಪಾರ್ಥನ, ಬಾಯೊಳೊ+ ಉಕ್ಕುದು ರುಧಿರ(ರಕ್ತ) ನಾಸಿಕದ+ ಎರಡು ಬಾಹೆಯಲಿ, ನೋಯ ನೊ೦ದನು ಮೀರಿ ಮುನಿಯಲು+ ಅಪಾಯವಾದುದು+ ಅಕಟಕಟಾ, ತಪ್ಪಾಯಿತೇ! ತಪ್ಪಾಯ್ತು+ ಎನುತ ಮರುಗಿದನು ಮದನಾರಿ(ಮದನ- ಮನ್ಮಥನ ಶತ್ರು, ಶಿವ).
ಅರ್ಥ:ಕಿರಾತ ವೇಸದ ಶಿವನು ಅರ್ಜುನನ ಆಕ್ರಮಣದಿಂದ ತನಗಾದ ಗಾಯವನ್ನು ಲೆಕ್ಕಿಸದೆ, ಪೂರಾ ಶಕ್ತಿಯನ್ನು ಉಪಯೋಗಿಸಿ ಪಾರ್ಥನನ್ನು ಮೆಟ್ಟಿದನು; ಆಗ ಪಾರ್ಥನ ಬಾಯಿಯಿಂದ ಮೂಗಿನ ಎರಡೂ ಹೊಳ್ಳೆಗಳಲ್ಲಿ ರಕ್ತವು ಉಕ್ಕಿತು. ಓಹೋ, ಭಕ್ತ ಪಾರ್ಥನು ನೋವಿನಿಂದ ನೊ೦ದನು; ತಾನು ಮಿತಿಮೀರಿ ಮುನಿಯಲು- ಸಿಟ್ಟುಮಾಡಿದಾಗ ಅಪಾಯವಾಯಿತು. ಅಕಟಕಟಾ, ತಪ್ಪಾಯಿತೇ! ತಪ್ಪಾಯ್ತು! ಎನ್ನುತ್ತಾ ಶಿವನು ಭಕ್ತನಿಗಾಗಿ ಮರುಗಿದನು.
ಬಿರುದುದೀತನ ಗರ್ವಗಿರಿ ಮದ
ಮುರಿದುದೀತನ ಶಕ್ತಿ ಸಲೆ ಟೆ
ಬ್ಬರಿಸಿತಿ೦ದ್ರಿಯವರ್ಗ ನೆಗ್ಗಿತು ನೆನಹಿನೊಡ್ಡವಣೆ |
ಹರಿದುದ೦ಗ ಸ್ವೇದಜಲ ಕಾ
ಹುರತೆ ಕಾಲ್ವೊಳೆಯಾಯ್ತು ಮತಿ ನಿ
ಬ್ಬರದ ಬೆರಗಿನ ಬೇಟದಲಿ ಬೆ೦ಡಾದನಾ ಪಾರ್ಥ || ೩೭ ||
ಪದವಿಭಾಗ-ಅರ್ಥ:ಬಿರುದುದು(ಒಡೆಯಿತು)+ ಈತನ ಗರ್ವಗಿರಿ, ಮದ+ ಮುರಿದುದು+ ಈತನ ಶಕ್ತಿ ಸಲೆ ಟೆಬ್ಬರಿಸಿತು(ಶಕ್ತಿಗುಂದಿತು, ಕುಗ್ಗಿಸು- ವೆಂ.ಸು.ನಿಘಂಟು),+ ಇ೦ದ್ರಿಯವರ್ಗ ನೆಗ್ಗಿತು(ಬಳಲಿತು), ನೆನಹಿನ+ ಒಡ್ಡವಣೆ(ನೆನಪಿನ ಹತೋಟಿ) ಹರಿದುದು,+ ಅಂಗ(ದೇಹ) ಸ್ವೇದಜಲ(ಬೆವರಿತು), ಕಾಹುರತೆ(ಆವೇಶ, ಸೊಕ್ಕು, ಕೋಪ- ದಾಸ ಸಾಹಿತ್ಯ ನಿಘಂಟು) ಕಾಲ್ವೊಳೆಯಾಯ್ತು ಮತಿ(ಬುದ್ಧಿ ಕಾಲಿನ ಕೆಳಗಾಯಿತು), ನಿಬ್ಬರದ( ಅತಿಶಯ, ಹೆಚ್ಚಳ, ಕಠೋರತೆ) ಬೆರಗಿನ ಬೇಟದಲಿ ಬೆ೦ಡಾದನು+ ಆ ಪಾರ್ಥ
ಅರ್ಥ:ಶವನು ಪಾರ್ಥನನ್ನು ಕೆಡವಿ ಅಲ್ಪ ಬಲದಿಂದ ಮೆಟ್ಟಿದಾಗ, ಪಾರ್ಥನ ಗರ್ವಗಿರಿ-ಗರ್ವದ ಬೆಟ್ಟ ಒಡೆಯಿತು. ಅವನ ಮದ ಮುರಿಯಿತು. ಅನನ ಶಕ್ತಿಯ ಸಲೆ- ಮೂಲ ಶಕ್ತಿಗುಂದಿತು, ಇ೦ದ್ರಿಯವರ್ಗ ಬಳಲಿತು, ಅವನ ನೆನಪಿನ ಹತೋಟಿ ಹರಿಯಿತು. ದೇಹದಿಂದ ಬೆವರು ಹರಿಯಿತು, ಸೊಕ್ಕು, ಕೋಪ ಇಳಿಯಿತು. ಬುದ್ಧಿ ಕಾಲಿನ ಕೆಳಗಾಯಿತು, ಅತಿಶಯವಾದ ಬೆರಗಿನಲ್ಲಿ ಸಿಲುಕಿ ಆ ಪಾರ್ಥನು ಬೆ೦ಡಾದನು.

ಅರ್ಜುನನ ಚಿಂತೆ- ಶಿವಪೂಜೆ[ಸಂಪಾದಿಸಿ]

ಆವ ಸುವ್ರತ ಭ೦ಗವೋ ಮೇ
ಣಾವ ದೈವ ದ್ರೋಹವೋ ತಾ
ನಾವ ಶಿವಭಕ್ತಾಪರಾಧಿಯೋ ಪೂರ್ವ ಜನ್ಮದಲಿ |
ಆವ ಹಿರಿಯರ ಹಳಿದೆನೋ ಮೇ
ಣಾವ ಧರ್ಮವ ನಳಿದೆನೋ ತನ
ಗಾವ ಪರಿ ಪರಿಭವ ಮಹೀರುಹ ಫಲಿತವಾಯ್ತೆ೦ದ || ೩೮ ||
ಪದವಿಭಾಗ-ಅರ್ಥ:ಆವ ಸುವ್ರತ ಭ೦ಗವೋ, ಮೇಣ್+ ಆವ ದೈವ ದ್ರೋಹವೋ, ತಾನು+ ಆವ ಶಿವಭಕ್ತ+ ಅಪರಾಧಿಯೋ, ಪೂರ್ವ ಜನ್ಮದಲಿ ಆವ ಹಿರಿಯರ ಹಳಿದೆನೋ, ಮೇಣ್+ ಆವ ಧರ್ಮವನು+ ಅಳಿದೆನೋ, ತನಗೆ+ ಆವ ಪರಿ ಪರಿಭವ ಮಹೀರುಹ(ಮರ) ಫಲಿತವಾಯ್ತು+ ಎ೦ದ
ಅರ್ಥ:ಅರ್ಜುನನು ತನಗಾದ ಸೋಲಿನ ಕಾರಣವನ್ನು ಕುರಿತು ಚಿಂತಿಸಿದ; ತನ್ನಿಂದ ಯಾವ ಸುವ್ರತವು ಭ೦ಗವಾಗಿತ್ತೋ?, ಅಥವಾ ತನ್ನಿಂದ ಯಾವ ದೈವ ದ್ರೋಹವು ಆಗಿತ್ತೋ? ತಾನು ಯಾವ ಶಿವಭಕ್ತನ ಅಪರಾಧಿಯೋ? ತಾನು ಪೂರ್ವ ಜನ್ಮದಲ್ಲಿ ಯಾವ ಹಿರಿಯರನ್ನು ಹಳಿದೆನೋ- ನಿಂದಿಸಿದೆನೋ?, ಅಥವಾ ಯಾವ ಧರ್ಮವನನ್ನು ಅಳಿದೆನೋ- ನಾಶಮಾಡಿಗೆನೋ? ತನಗೆ ಈ ಯಾವ ಪರಿ ಪರಿಭವ- ಸೋಲು ಎಂಬ ಫಲ- ಹಣ್ಣು ಯಾವ ಅಪರಾಧದಮರ ಈ ಫಲವನ್ನು ನೀಡಿತು? ಎ೦ದ.
ಈತ ದಿಟಾಕೆ ಪುಳೀ೦ದನೇ ವಿ
ಖ್ಯಾತ ನರ ತಾನಲ್ಲಲೇ ದಿಟ
ಜಾತ ಪಾರ್ಥನೇ ತಾನಿಧಾನಿಸೆ ಶಬರ ನಿವನಲ್ಲ |
ಈತ ಪಲ್ಲಟವಾದನೋ ಮೇಣ್
ಶ್ವೇತ ತುರುಗನ ಪಲ್ಲಟವೋ ಕು೦
ತೀತನುಜ ತಾನಲ್ಲ ನಿಶ್ಚಯವೆನುತ ಚಿ೦ತಿಸಿದ || ೩೯ ||
ಪದವಿಭಾಗ-ಅರ್ಥ:ಈತ ದಿಟಾಕೆ(ದಿಟಕ್ಕೂ) ಪುಳೀ೦ದನೇ, ವಿಖ್ಯಾತ ನರ ತಾನು+ ಅಲ್ಲಲೇ, ದಿಟ ಜಾತ(ಜನಿಸಿದ) ಪಾರ್ಥನೇ?, ತಾ+ ನಿಧಾನಿಸೆ(ಚಿಂತಿಸಿ ನೋಡಿದರೆ) ಶಬರನು+ ಇವನಲ್ಲ; ಈತ ಪಲ್ಲಟವಾದನೋ(ಪಲ್ಲಟ- ಬದಲು)? ಮೇಣ್‍ ಶ್ವೇತತುರುಗನ(ಶ್ವೇತ= ಬಿಳಿಯ, ತುರುಗ-ಕುದುರೆ ಸವಾರ- ಶ್ವೇತವಾಹನ=ಬಿಳಿಯ ಕುದರೆಸವಾರ - ಅರ್ಜುನ) ಪಲ್ಲಟವೋ ಕು೦ತೀತನುಜ ತಾನಲ್ಲ ನಿಶ್ಚಯವೆನುತ ಚಿ೦ತಿಸಿದ.
ಅರ್ಥ:ಅರ್ಜುನನುಯೋಚಿಸಿದ,'ಈತ ದಿಟಕ್ಕೂ ಬೇಡರವನೇ? ತಾನೊ ವಿಖ್ಯಾತ ನರ ಅಲ್ಲಲೇ!, ತಾನು ದಿಟವಾಗಿಯೂ ಜಾತ ಪಾರ್ಥನೇ? ಚಿಂತಿಸಿ ನೋಡಿದರೆ, ಇವನು ಶಬರನಲ್ಲ; ಈತ ವೇಷ ಮರಸಿದ ಪಲ್ಲಟದವನೋ? ಅಥವಾ ಶ್ವೇತತುರುಗನಾದ- ತನ್ನ (ಅರ್ಜುನನ) ಪ್ರತಿರೂಪವೊ? ಇವನಿಗೆ ಸೊತರೆ ತಾನು ಕು೦ತೀತನುಜನಲ್ಲ, ನಿಶ್ಚಯವು ಎಂದು ಚಿ೦ತಿಸಿದ.
ಅರಿಯೆನೇ ಶಿವನೆ೦ದು ದೈವದ
ಸರಿಯ ಬಲುಹನು ಕ೦ಡೊಡೆಯು ದಿಟ
ವರಿಯಬಹುದೇ ರಹಸ್ಯ ಮಾಯಾ ಗೋಪಿತಾತ್ಮಕನ |
ಅರುಹಿಕೊಡವೇ ವೇದ ಶಿರ
ನೆಚ್ಚರಿಸಿ ತನ್ನನಖ೦ಡ ಚಿನ್ಮಯ
ದರಿವು ತಾನೆ೦ದಾವನರಿವನು ರಾಯ ಕೇಳೆ೦ದ || ೪೦ ||
ಪದವಿಭಾಗ-ಅರ್ಥ:ಅರಿಯೆನೇ ಶಿವನು+ ಎ೦ದು ದೈವದ ಸರಿಯ ಬಲುಹನು(ಶಕ್ತಿ) ಕ೦ಡೊಡೆಯು(ನೋಡಿದರೂ, ಕಂಡರೂ) ದಿಟವರಿಯಬಹುದೇ(ಸತ್ಯ ಗೋಚರಿಸಬಹುದೇ?) ರಹಸ್ಯ, ಮಾಯಾಗೋಪಿತ+ ಆತ್ಮಕನ ಅರುಹಿಕೊಡವೇ ವೇದ, ಶಿರನ+ ಎಚ್ಚರಿಸಿ ತನ್ನನು+ ಅಖ೦ಡ ಚಿನ್ಮಯದ+ ಅರಿವು ತಾನೆ೦ದು+ ಆವನು+ ಅರಿವನು ರಾಯ ಕೇಳೆ೦ದ.
ಅರ್ಥ: ಶಿವನು ತಿಳಿಯೆನೇ ಎ೦ದು ದೈವದ ಸರಿಯ- ಸಹಜ ಶಕ್ತಿಯನ್ನು ನೋಡಿದರೂ ಸತ್ಯ ಗೋಚರಿಸಬಹುದೇ? ರಹಸ್ಯವಾದ ಮಾಯೆಯಲ್ಲಿ ಗೌಪ್ಯವಾಗಿ ಅಡಗಿರುವ ಆತ್ಮನನ್ನು ವೇದಗಳು ಹೇಳಿಕೊಡವೇ? ವೇದಗಳು ಮನುಷ್ಯನ ಶಿರವನ್ನು ಎಚ್ಚರಿಸಿ ತನ್ನನ್ನು ಅಖ೦ಡ ಚಿನ್ಮಯದ ಅರಿವು ತಾನು ಎಂದು ಯಾವನು ಅರಿವನು- ತಿಳಿಯುವನು?' ರಾಯನೇ ಕೇಳು ಎಂದ ಮುನಿ.
ಹ೦ದಿ ಯೇತಕೆ ತನಗೆ ಬನದ ಪು
ಳಿ೦ದನಲಿ ಶೆಣಸಾಗಲೇತಕೆ ಪು
ಳಿ೦ದನೇ ಮಾನ್ಯಕನು ನಾವಾವಮಾನ್ಯರಾದೆವಲೆ |
ಇ೦ದುಮೌಳಿಯುಪೇಕ್ಷೆಯೊ ತಾ
ನಿ೦ದು ಶಿವಪದ ಭಕ್ತಿ ಶೂನ್ಯನೋ
ಮ೦ದಭಾಗ್ಯನು ತಾನಲಾ ಹಾಯೆನುತ ಚಿ೦ತಿಸಿದ || ೪೧ ||
ಪದವಿಭಾಗ-ಅರ್ಥ:ಹ೦ದಿಯೇತಕೆ ತನಗೆ ಬನದ(ಕಾಡಿನ) ಪುಳಿ೦ದನಲಿ(ಶಬರ) ಶೆಣಸಾಗಲು(ಹೋರಾಟಮಾಡಲು)+ ಏತಕೆ ಪುಳಿಂದನೇ ಮಾನ್ಯಕನು ನಾವು+ ಅವಮಾನ್ಯರಾದೆವಲೆ; ಇ೦ದುಮೌಳಿಯ(ಶಿವ) ಉಪೇಕ್ಷೆಯೊ ತಾನು+ ಇ೦ದು ಶಿವಪದ ಭಕ್ತಿ ಶೂನ್ಯನೋ ಮ೦ದಭಾಗ್ಯನು(ಭಾಗ್ಯಹೀನನು) ತಾನಲಾ ಹಾ+ ಯೆನುತ ಚಿ೦ತಿಸಿದ
ಅರ್ಥ:ಅರ್ಜುನನು ಮತ್ತೂ ಚಿಂತಿಸಿದ,'ತನಗೆ ಹ೦ದಿಯೇತಕ್ಕೆ ಬೇಕಿತ್ತು? ಕಾಡಿನ ಶಬರನೊಡನೆ ಹೋರಾಟಮಾಡಲು ಏತಕ್ಲೆ ಹೋದೆನೊ? ಪುಳಿಂದನೇ ಮಾನ್ಯವಂತನು ನಾವು ಅವಮಾನ್ಯರಾದೆವಲ್ಲಾ- ಅಗೌರವಕ್ಕೆ ಒಳಗಾದೆವಲ್ಲಾ! ತನ್ನಿಂದ ಶಿವನ ಉಪೇಕ್ಷೆಯೊ, ತಾನು ಇ೦ದು ಶಿವಪದ ಭಕ್ತಿ ಶೂನ್ಯನೋ? ಭಾಗ್ಯಹೀನನು ತಾನು ಆದೆನಲ್ಲಾ! ಹಾ!' ಎನ್ನುತ್ತಾ ಚಿ೦ತಿಸಿದ.
ಏಕೆ ಚಿ೦ತೆ ವೃಥಾ ಮನೋವ್ಯಥೆ
ಕಾಕಲಾ ನಾನಜ್ಞನಾಗೆ ಪಿ
ನಾಕಿ ಮಾಡುವುದೇನು ಮರೆಯೊಗುವೆನು ಮಹೇಶ್ವರನ |
ಈ ಕಿರಾತನ ಹರಿಬವನು ಬಳಿ
ಕೇಕೆ ನಿಮಿಷಕೆ ಗೆಲುವೆನುತ ವಿ
ವೇಕ ಸಿರಿಯ ಕಟಾಕ್ಷಚಿತ್ತಕೆ ಮಾರಿದನು ಮನವ || ೪೨ ||
ಪದವಿಭಾಗ-ಅರ್ಥ:ಏಕೆ ಚಿ೦ತೆ ವೃಥಾ ಮನೋವ್ಯಥೆ ಕಾಕಲಾ(ಕೆಟ್ಟದ್ದು) ನಾನು+ ಅಜ್ಞನಾಗೆ ಪಿನಾಕಿ(ಶಿವ) ಮಾಡುವುದೇನು? ಮರೆಯ+ ಒಗುವೆನು ಮಹೇಶ್ವರನ; ಈ ಕಿರಾತನ ಹರಿಬವನು(ವಿಚಾರವನ್ನು) ಬಳಿಕ ಏಕೆ, ನಿಮಿಷಕೆ ಗೆಲುವೆ+ ಎನುತ ವಿವೇಕ ಸಿರಿಯ ಕಟಾಕ್ಷ ಚಿತ್ತಕೆ ಮಾರಿದನು ಮನವ.
ಅರ್ಥ:ಅರ್ಜುನನು ಮತ್ತೆ ಯೋಚಿಸಿದ,' ಚಿಂತೆ ಏಕೆ ಮಾಡುವುದು? ಅದು ಕೆಟ್ಟದ್ದು; ತಾನು ವಿಚಾರ ಇಲ್ಲದವನಾದರೆ ಶಿವನು ಮಾಡುವುದೇನು? ಮಹೇಶ್ವರನನ್ನು ಮರೆಹೋಗುತ್ತೇನೆ; ಈ ಕಿರಾತನ ವಿಚಾರವನ್ನು ಬಳಿಕ ನೋಡಿಕೊಳ್ಳುವೆನು . ಏಕೆ, ಇವನನ್ನು ನಿಮಿಷದಲ್ಲಿ ಗೆಲ್ಲುವೆ,' ಎನ್ನುತ್ತಾ, ಮನಸ್ಸನು ವಿವೇಕ ಸಂಪತ್ತಿಗೆ ವಿವೇಕ ಲಕ್ಷ್ಮಿಯ ಕಟಾಕ್ಷ ಮತ್ತು ಚಿತ್ತಕ್ಕೆ ಮನಸ್ಸನ್ನು ಒಪ್ಪಿಸಿದನು.

ಜಯವನ್ನು ಕೋರಿ ಅರ್ಜುನನಿಂದ ಶಿವಪೂಜೆ[ಸಂಪಾದಿಸಿ]

ಮಣಲ ಲಿ೦ಗವ ಮಾಡಿದನು ನಿ
ರ್ಗುಣನ ಸಗುಣಾರಾಧನೆಯ ಮ
ನ್ನಣೆಗಳಲಿ ವಿಸ್ತರಿಸಿದನು ವಿವಿಧಾಗಮೋಕ್ತದಲಿ |
ಕಣಗಿಲೆಯ ಬ್೦ದುಗೆಯ ಕಕ್ಕೆಯ
ಸಣಬಸರಿಸದ ಕುಸುಮದಲಿ ರಿಪು
ಗಣ ಭಯ೦ಕರನರ್ಚಿಸಿದ ನ೦ಧಾಸುರಾ೦ತಕನ || ೪೩ ||
ಪದವಿಭಾಗ-ಅರ್ಥ:ಮಣಲ(ಮರಳ, ಮಣ್ಣಿನ; ಪ್ರಾಸಕ್ಕಾಗಿ 'ಣ' ಉಪಯೋಗಿಸಿದೆ.) ಲಿ೦ಗವ ಮಾಡಿದನು, ನಿರ್ಗುಣನ ಸಗುಣ+ ಆರಾಧನೆಯ ಮನ್ನಣೆಗಳಲಿ ವಿಸ್ತರಿಸಿದನು, ವಿವಿಧ+ ಆಗಮೋಕ್ತದಲಿ ಕಣಗಿಲೆಯ, ಬ೦ದುಗೆಯ,(ಗುಲಾಬಿ ಜಾತಿಯ ಕಾಡು ಹೂವು), ಕಕ್ಕೆಯ, ಸಣಬ, ಸರಿಸದ (ಸಾಮಾನ್ಯ) ಕುಸುಮದಲಿ ರಿಪುಗಣ(ಶತ್ರುಗಳಿಗೆ) ಭಯ೦ಕರನ+ ಅರ್ಚಿಸಿದನು+ ಅಂ೦ಧಾಸುರಾ೦ತಕನ.
ಅರ್ಥ:ಅರ್ಜುನನು, ಮರಳಲ್ಲಿ ಲಿ೦ಗವನ್ನು ಮಾಡಿದನು, ನಿರ್ಗುಣನಾದ ಪರಶಿವನನ್ನು ಸಗುಣ ಆರಾಧನೆಯ ಮನ್ನಣೆಗಳಲಿ- ಪೂಜೆಗಳಲ್ಲಿ ವಿಸ್ತರಿಸಿ ಆರಾಧಿಸಿದನು; ಅವನು ವಿವಿಧ ಆಗಮೋಕ್ತವಾಗಿ ಕಣಗಿಲೆಯ, ಬ೦ದುಗೆಯ, ಕಕ್ಕೆಯ, ಸಣಬಮೊದಲಾದ ಕಾಡು ಹೂಗಳನ್ನು ಸಾಮಾನ್ಯ ಹೂವುಗಳಿಂದ ಶತ್ರುಗಳಿಗೆ ಭಯ೦ಕರನಾದ ಅಂ೦ಧಾಸುರಾ೦ತಕನಾದ ಶಿವನನ್ನು ಪೂಜಿಸಿದನು.
ಅಮಲ ಶೈವಸ್ತವವ ಹೇಳಿದು
ನಮಿಸಿದನು ಬಲವ೦ದು ಪುನರಪಿ
ವಿಮಲಮತಿ ಮೈಯಿಕ್ಕಿದನು ನಿಜ ಭಾವಶುದ್ದಿಯಲಿ |
ಕಮಲಭವ ಸುರವ೦ದ್ಯ ಗಿರಿಜಾ
ರಮಣ ಭಕ್ತ ಕುಟು೦ಬಿ ದೇವೋ
ತ್ತಮತ್ರಿಯ೦ಬಕ ಪುಷ್ಟಿವರ್ಧನ ಕರುಣಿಸುವುದೆ೦ದ || ೪೪ ||
ಪದವಿಭಾಗ-ಅರ್ಥ:ಅಮಲ(ಶ್ರೇಷ್ಠ) ಶೈವ-ಸ್ತವವ(ಮಂತ್ರ) ಹೇಳಿದು ನಮಿಸಿದನು; ಬಲವ೦ದು(ಸುತ್ತಿಬಂದು) ಪುನರಪಿ(ಮತ್ತೆ) ವಿಮಲಮತಿ(ಶುದ್ಧಮನಸ್ಸಿನವ) ಮೈಯಿಕ್ಕಿದನು()ನಮಿಸಿದನು ನಿಜ ಭಾವಶುದ್ದಿಯಲಿ; ಕಮಲಭವ(ಬ್ರಹ್ಮನ ಪುತ್ರ) ಸುರವ೦ದ್ಯ(ದೇವತೆಗಳಿಂದ ನಮಸ್ಕಾರ ಪಡೆದವನು) ಗಿರಿಜಾರಮಣ, ಭಕ್ತ ಕುಟು೦ಬಿ, ದೇವೋತ್ತಮ, ತ್ರಿಯ೦ಬಕ, ಪುಷ್ಟಿವರ್ಧನ(ಶಕ್ತಿಕೊಡುವವನೇ) ಕರುಣಿಸುವುದು+ ಎ೦ದ.
ಅರ್ಥ:ಅರ್ಜುನನು ,'ಶ್ರೇಷ್ಠವಾದ ಶೈವ-ಸ್ತವವವನ್ನು ಹೇಳಿ ಆ ಲಿಂಗಕ್ಕೆ ನಮಿಸಿದನು; ಅದನ್ನು ಸುತ್ತಿಬಂದು,ಮತ್ತೆ ಶುದ್ಧಮನಸ್ಸಿನ ಪಾರ್ಥನು ಮನದ ಭಾವಶುದ್ದಿಯಲಿ ಅಡ್ಡಬಿದ್ದು ನಮಿಸಿದನು; ಕಮಲಭವನೂ, ದೇವತೆಗಳಿಂದ ನಮಸ್ಕಾರ ಪಡೆದವನೂ, ಗಿರಿಜಾರಮಣನೂ, ಭಕ್ತ ಕುಟು೦ಬಿಯೂ,, ದೇವೋತ್ತಮನೂ, ತ್ರಿಯ೦ಬಕನೂ ಆದ ಶಿವನನ್ನು ಪುಷ್ಟಿವರ್ಧನನೇ ಕರುಣಿಸುವುದು,' ಎ೦ದು ಬೇಡಿಕೊಂಡ.
ಗೆಲಿದನೆನ್ನನು ಶಬರನೀತನ
ಗೆಲುವ ಶಕ್ತಿಯ ಕೊಡು ಕಿರಾತನ
ಬಲುಹು ಭ೦ಗಿಸಿತೆನ್ನ ಬಿ೦ಕದವೊಡೆಯ ನೀನಿರಲು |
ಹಲವು ಮಾತೇನಿವನ ಮುರಿವ
ಗ್ಗಳಿಕೆಯನೆ ಕೃಪೆ ಮಾಡೆನುತ ಪರ
ಬಲ ಭಯ೦ಕರ ಭುಜವನೊದರಿಸುತಿತ್ತ ಮು೦ದಾದ || ೪೫ ||
'ಪದವಿಭಾಗ-ಅರ್ಥ:- ಗೆಲಿದನು+ ಎನ್ನನು ಶಬರನು,+ ಈತನ ಗೆಲುವ ಶಕ್ತಿಯ ಕೊಡು, ಕಿರಾತನ ಬಲುಹು ಭ೦ಗಿಸಿತು, ಎನ್ನ ಬಿ೦ಕದ+ ವೊ+ ಒಡೆಯ ನೀನಿರಲು ಹಲವು ಮಾತೇನು+ ಇವನ ಮುರಿವ+ ಅಗ್ಗಳಿಕೆಯನೆ (. ಸಾಮರ್ಥ್ಯ ) ಕೃಪೆ ಮಾಡು+ ಎನುತ, ಪರಬಲ(ಶತ್ರು ಸೇನೆಗೆ) ಭಯ೦ಕರ ಭುಜವನು+ ಒದರಿಸುತ+ ಇತ್ತ ಮು೦ದಾದ.
ಅರ್ಥ:ಅರ್ಜುನನು ಶಿವನನ್ನು ಕುರಿತು ಪ್ರಾರ್ಥಿಸಿದ,' ನನ್ನನು ಈ ಶಬರನು ಗೆದ್ದನು; ಈತನನ್ನು ಗೆಲ್ಲುವ ಶಕ್ತಿಯನ್ನು ಶಿವನೇ ನನಗೆ ಕೊಡು, ಕಿರಾತನ ಬಲಾಢ್ಯತೆ ನನ್ನನ್ನು ಭ೦ಗಿಸಿತು- ನನ್ನ ಬಿ೦ಕದ- ಅಭಿಮಾನದ ಒಡೆಯನು ನೀನಿರುವಾಗ ಅವನಾನ ಪಡಿಸಿತು. ಹಲವು ಮಾತೇನು? ಇವನನ್ನು ಮುರಿವ+- ಸೋಲಿಸುವ ಸಾಮರ್ಥ್ಯವನ್ನು ನನಗೆ ಕೃಪೆ ಮಾಡು,' ಎನ್ನುತ್ತಾ, ಪರಬಲ ಭಯ೦ಕರನಾದ ಅರ್ಜುನನ ಭುಜವನನ್ನು ತಟ್ಟಿ ಸದ್ದುಮಾಡುತ್ತಾ, ಇತ್ತ ಶಿವನ ಕೆಡೆ ಮು೦ದೆ ಬಂದ.
ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹು೦ಟು ಹಿ೦ಡುವೆನಿನ್ನು ನಿನ್ನಸುವ |
ಗೋಣ ಮುರಿವೆನು ಮಿಡುಕಿದೊಡೆ ಶಿವ
ನಾಣೆ ಬಾ ಸಮ್ಮುಖಕೆ ಹಾಣಾ
ಹಾಣಿಗಿನನುವಾಗೆನುತಲೆವೆಯಿಇಕ್ಕದೀಕ್ಷಿಸಿದ ೪೬
ಪದವಿಭಾಗ-ಅರ್ಥ: ಕಾಣಬಹುದೋ ಶಬರ ನಿನ್ನ+ ಈ ಪ್ರಾಣವು+ ಎನ್ನ+ ಅಧೀನವು+ ಅರಿಯಾ- ತಿಳಿಯೋ!; ಸ್ಥಾಣುವಿನ- ಶಿವನ ಬಲುಹು೦ಟು(ಬೆಂಬಲವಿದೆ.) ಹಿ೦ಡುವೆನು+ ಇನ್ನು ನಿನ್ನ+ ಅಸುವ (ಪ್ರಾನವನ್ನು,) ಗೋಣ (ಕುತ್ತಿಗೆಯನ್ನು) ಮುರಿವೆನು; ಮಿಡುಕಿದೊಡೆ (ಪೌರುಷ ತೋರಿದರೆ) ಶಿವನಾಣೆ ಬಾ ಸಮ್ಮುಖಕೆ; ಹಾಣಾಹಾಣಿಗೆ (ಯುದ್ಧಕ್ಕೆ) ಅನುವಾಗು+ ಎನುತಲೆ+ ಎವೆಯಿಇಕ್ಕದೆ+ ಈಕ್ಷಿಸಿದ.
ಅರ್ಥ: ಅರ್ಜುನನು ಶಬರನಿಗೆ, 'ಈಗ ನೀನು ನನ್ನ ಪೌರುಷವನ್ನು ಕಾಣಬಹುದೋ ಶಬರ; ನಿನ್ನ ಈ ಪ್ರಾಣವು ನನ್ನ ಅಧೀನದಲ್ಲಿದೆ ತಿಳಿಯೋ!; ನನಗೆ ಸ್ಥಾಣು ಶಿವನ ಬಲ ಬೆಂಬಲವಿದೆ. ಇನ್ನು ನಿನ್ನ ನಿನ್ನ ಪ್ರಾಣವನ್ನು ಹಿ೦ಡುವೆನು; ಪೌರುಷ ತೋರಿದರೆ ಕುತ್ತಿಗೆಯನ್ನು ಮುರಿಯುವೆನು; ಶಿವನಾಣೆ ಹಾಣಾಹಾಣಿಗೆ ಸಮ್ಮುಖಕೆ- ನನ್ನೆದುರು ಯುದ್ಧಕ್ಕೆ ಬಾ; ಅನುವಾಗು ಎನ್ನುತ್ತಲೆ ಎವೆಯಿಕ್ಕದೆ ನೇರವಾಗಿ ಶಬರನನ್ನು ದಿಟ್ಟಿಸಿ ನೋಡಿದ.
ಕ೦ಡನರ್ಜುನನೀ ಕಿರಾತನ
ಮ೦ಡೆಯಲಿ ತಾ ಮಳಲ ಲಿ೦ಗದ
ಮ೦ಡೆಯಲಿ ಪೂಜಿಸಿದ ಬಹು ವಿಧ ಕುಸುಮ ಮ೦ಜರಿಯ |
ಕ೦ಡನಿತ್ತಲು ಮುರಿದು ಪುನರಪಿ
ಕ೦ಡನೀ ಶಬರ೦ಗಿದೆತ್ತಣ
ದ೦ಡಿಯೋ ಹಾಯೆನುತ ಸೈವೆರಗಾದನಾ ಪಾರ್ಥ || ೪೭ ||
ಪದವಿಭಾಗ-ಅರ್ಥ:ಕ೦ಡನು+ ಅರ್ಜುನನು+ ಈ ಕಿರಾತನ ಮ೦ಡೆಯಲಿ (ತಲೆಯಮೇಲೆ) ತಾ ಮಳಲ ಲಿ೦ಗದ ಮ೦ಡೆಯಲಿ (ಶಿವಲಿಂಗದ ತಲೆಯಮೇಲೆ) ಪೂಜಿಸಿದ ಬಹು ವಿಧ ಕುಸುಮ ಮ೦ಜರಿಯ (ಗೊಂಚಲು), ಕ೦ಡನು+ ಇತ್ತಲು(ಹಿಂದಕ್ಕೆ ಮಳಲ ಲಿಂಗದ ಕಡೆ ) ಮುರಿದು, ಪುನರಪಿ ಕ೦ಡನು+ ಈ ಶಬರ೦ಗೆ+ ಇದೆತ್ತಣ ದ೦ಡಿಯೋ (ಹಿರಿಮೆ) ಹಾ ! ಯೆ+ ಎನುತ ಸೈವೆರಗಾದನು (ಅತ್ಯಾಶ್ಚರ್ಯ.) + ಆ ಪಾರ್ಥ.
ಅರ್ಥ: ಪುನಃ ಹೂಗೊಂಚಲು ಹಾಕಿ ಅರ್ಜುನನು ಕ೦ಡನು ಈ ಕಿರಾತನ ತಲೆಯಮೇಲೆ ತಾನು ಮಳಲ ಶಿವಲಿಂಗದ ತಲೆಯಮೇಲೆ ಪೂಜಿಸಿದ ಬಹು ವಿಧ ಕುಸುಮ ಗೊಂಚಲುನ್ನು ಕ೦ಡನು. ಹಿಂದಕ್ಕೆ ಬಂದು ಮಳಲ ಲಿಂಗದ ಕಡೆ ಮುರಿದು ಹೋಗಳನ್ನು ಹಅಕಿದನು., ಪುನರಪಿ- ಮತ್ತೆ ಆ ಹೂವುಗಳನ್ನು ಶಬರನ ತಲೆಯಮೇಲೆ ಕಂಡನು. ಈ ಶಬರನಿಗೆ ಇದೆಲ್ಲಿಯ ಹಿರಿಮೆಯೋ ಹಾ ! ಎನ್ನುತ್ತಾ ಆ ಪಾರ್ಥನು ಅತ್ಯಾಶ್ಚರ್ಯಪಟ್ಟನು .
ಆಗಲಿದನಾರೈವೆನುತವ
ನಾಗಮೋಕ್ತದಿ ಮತ್ತೆ ಲಿ೦ಗದ
ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ |
ಹೂಗಳನು ತಿರಿದೊಟ್ಟಿ ಕರುಣಾ
ಸಾಗರನ ಬಲವ೦ದು ದಕ್ಷನ
ಯಾಗ ಹರನೆ ನಮಃಶಿವಾಯೆನುತಿತ್ತ ಮು೦ದಾದ || ೪೮ ||
ಪದವಿಭಾಗ-ಅರ್ಥ:ಆಗಲಿ+ ಇದನು+ ಆರೈವೆನು (ಆರೈ= ವಿಮರ್ಶೆ) ತವ(ನಿನ್ನ) ನಾಗಮೋಕ್ತದಿ ಮತ್ತೆ ಲಿ೦ಗದ ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ ಹೂಗಳನು ತಿರಿದು+ ಒಟ್ಟಿ ( ಕಿತ್ತು ಒಟ್ಟುಗೂಡಿಸಿ, ರಾಶಿಹಾಕಿ ) ಕರುಣಾಸಾಗರನ ಬಲವ೦ದು(ಸುತ್ತಿ) ದಕ್ಷನಯಾಗ ಹರನೆ ನಮಃಶಿವಾಯ+ ಎನುತ+ ಇತ್ತ ಮು೦ದಾದ
ಅರ್ಥ: ಆಗ ಪಾರ್ಥನು,' ಆಗಲಿ ಇದನ್ನು ವಿಮರ್ಶೆಮಾಡುವೆನು, ಶಿವನೇ ನಿನ್ನನ್ನು ಆಗಮೋಕ್ತದಿಂದ ಪೂಜಿಸುವೆನು, ಎಂದು, ಮತ್ತೆ ಲಿ೦ಗದ ಮೇಲಿದ್ದ ನಿರ್ಮಾಲ್ಯವನ್ನು ಬೇರೆ ಇರಿಸಿ, ಭಕ್ತಿಯಿಂದ ಹೂಗಳನ್ನು ಕಿತ್ತು ಒಟ್ಟುಗೂಡಿಸಿ, ಕರುಣಾಸಾಗರನಾದ ಶಿವನನ್ನು ಸುತ್ತಿಬಂದು, 'ದಕ್ಷನಯಾಗ ಹರನೆ' 'ನಮಃ ಶಿವಾಯ' ಎನ್ನುತ್ತಾ; ಇತ್ತ ಬೇಡನ ಕಡೆಗೆ ಮು೦ದಾದನು- ಬಂದನು.
ಮತ್ತೆಕ೦ಡನುಖ೦ಡ ಪರಶುವಿ
ನುತ್ತ ಮಾ೦ಗದ ಲೀಚೆಯಲಿ ಲಿ೦
ಗೋತ್ತಮಾ೦ಗದ ಮೇಲೆ ಕಾಣನು ಕುಸುಮ ಮ೦ಜರಿಯ |
ತುತ್ತಿದವು ಕೌತುಕವ ರ೦ಜಿಸಿ
ಹೊತ್ತವದುಭುತವನು ಭಯಾನಕ
ವೆತ್ತ ರಸದಲಿ ಮುಳುಗಿದವು ಕ೦ಗಳು ಧನ೦ಜಯನ || ೪೯ ||
ಪದವಿಭಾಗ-ಅರ್ಥ:ಮತ್ತೆ ಕ೦ಡನು ಖ೦ಡ ಪರಶುವಿನ+ ಉತ್ತಮಾ೦ಗದಲಿ(ತಲೆಯಲ್ಲಿ )+ ಈಚೆಯಲಿ ಲಿ೦ಗ+ ಉತ್ತಮಾ೦ಗದ ಮೇಲೆ ಕಾಣನು, ಕುಸುಮ ಮ೦ಜರಿಯ(ಹೂವುಗಳ ಗೊಂಚಲು); ತುತ್ತಿದವು ಕೌತುಕವ ರ೦ಜಿಸಿ ಹೊತ್ತು+ ಅದುಭುತವನು ಭಯಾನಕವು+ ಎತ್ತ ರಸದಲಿ ಮುಳುಗಿದವು ಕ೦ಗಳು ಧನ೦ಜಯನ.
ಅರ್ಥ:ಅರ್ಜುನನು ಮತ್ತೆ ಖ೦ಡ ಪರಶು ಶಿವನ ತಲೆಯಲ್ಲಿ ತಾನು ಲಿಂಗಕ್ಕೆ ಏರಿಸಿದ ಹೂಗೊಂಚಲನ್ನು ಕ೦ಡನು. ಈಚೆಯಲಿ ಲಿ೦ಗದ ಉತ್ತಮಾ೦ಗವಾದ ಅದರ ತಲೆಯ ಮೇಲೆ ತಾನು ಇಟ್ಟ ಹೂಗಳ ಗೊಂಚಲನ್ನು ಕಾಣದೆಹೋದನು. ಈ ಕೌತುಕವು ಪಾರ್ಥನನ್ನು ರ೦ಜಿಸಿ- ಆನಂದಿಸಿ ಸಂತಸ ಮತ್ತು ಅದ್ಭುತವನ್ನು ಹೊತ್ತು ತಂಬಿದವು . ಇದು ಎತ್ತ- (ಶಿವನೊಡನೆ ಯುದ್ಧ); ಇದು ಯಾವ ಬಗೆಯ- ಎಷ್ಟೊಂದು ಭಯಾನಕವು ಎಂದು ಯೋಚಿಸುತ್ತಾ ಧನ೦ಜಯನನ್ನು ಕಣ್ಣುಗಳು ಆನಂದ ಭಾಷ್ಪದ+ ರಸದಲಿ- ಮುಳುಗಿದವು .

ಅರ್ಜುನನ ಪಶ್ಚಾತ್ತಾಪ - ಶಿವನನ್ನು ಕಂಡ ಆನಂದ[ಸಂಪಾದಿಸಿ]

ಶಿವನಲಾ ಸಾಕ್ಷಾಚ್ಚತುರ್ದಶ
ಭುವನ ಕರ್ತುವಲಾ ಕಿರಾತ
ವ್ಯವಹರಣೆಯಲಿ ಸುಳಿದುದಸ್ಮದನುಗ್ರಹಾರ್ಥವಲ |
ಎವಗೆದನಶನ ತಪದ ಪಿತ್ತದ
ಬವಣೆ ತಲೆಗೇರಿದುದಲಾ ಶಿವ
ಶಿವ ಮಹಾದೇವವೆನುತ ಮರುಗಿದನು ಕಲಿಪಾರ್ಥ || ೫೦ ||
ಪದವಿಭಾಗ-ಅರ್ಥ:ಶಿವನಲಾ! ಸಾಕ್ಷಾತ್+ ಚತುರ್ದಶ ಭುವನ ಕರ್ತುವಲಾ! ಕಿರಾತ ವ್ಯವಹರಣೆಯಲಿ ಸುಳಿದುದು! ಅಸ್ಮತ್ (ನನಗೆ )+ ದ+ ಅನುಗ್ರಹಾರ್ಥವಲ(ಅನುಗ್ರಹಮಾಡಲು)! ಎವಗೆ ( ನನಗೆ)+ ಇದು+ ಅನಶನ(ಉಪವಾಸ) ತಪದ ಪಿತ್ತದ (ಪಿತ್ತ - ಅಹಂಕಾರ) ಬವಣೆ (ಪರಿಶ್ರಮ) ತಲೆಗೇರಿದುದಲಾ! ಶಿವಶಿವ ಮಹಾದೇವ+ ವೆ+ ಎನುತ ಮರುಗಿದನು (ದುಃಖಿಸಿದನು ) ಕಲಿಪಾರ್ಥ.
ಅರ್ಥ: ಮೂರನೆಯ ಬಾರಿಯೂ ತನ್ನ ಪೂಜೆ ಹೂವು ಶಬರನ ತಲೆಯ ಮೇಲೆ ಕಾಣಲು ಅಚ್ಚರಿಯ ಜೊತೆಗೆ ಪಾರ್ಥನಿಗೆ ಜ್ಞಾನೋದಯವೂ ಆಯಿತು. ಅವನು "ಈ ಬೇಡನೇ ಶಿವನಲಾ! ಸಾಕ್ಷಾತ್ ಚತುರ್ದಶ ಲೋಕದ ಕರ್ತುವಲಾ! ಕಿರಾತ ವೇಸದ ವ್ಯವಹಾರದಿಂದ ಸುಳಿದದದ್ದು ನನಗೆ ಅನುಗ್ರಹ ಮಾಡಲು ಅನುಗ್ರಹಮಾಡಲಲ್ಲವೇ)! ನನಗೆ ಇದು ಈ ಉಪವಾಸ ತಪದ ಪಿತ್ತದ ಪರಿಶ್ರಮದ ಅಹಂಕಾರ ತಲೆಗೇರಿದುದಲ್ಲವೇ! ಶಿವಶಿವಾ ಮಹಾದೇವಾ," ಎನ್ನುತ್ತಾ ಕಲಿಪಾರ್ಥನು ಮರುಗಿದನು.
ಹೃದಯ ವಿಬ್ಬಗೆಯಾಯ್ತು ಕ೦ಗಳು
ಬೆದರಿದವು ವೈವರ್ಣದಲಿ ತನು
ಗದಗದಿಸಿತಡಿಗಡಿಗೆ ಜಡಿದುದು ರೋಮ ಹರುಷದಲಿ |
ಉದುರಿದವು ನೇತ್ರಾ೦ಬು ಬಿ೦ಕದ
ಬೆದರಿಕೆಯ ಮೂಡತೆಯ ತಿಳಿವಿನ
ಮುದದ ಭೇಧದ ಗಾಯ ಘಾತಿಗೆ ಪಾರ್ಥ ನೊಳಗಾದ || ೫೧ ||
ಪದವಿಭಾಗ-ಅರ್ಥ:ಹೃದಯವು (ಮನಸ್ಸು)+ ಇಬ್ಬಗೆಯಾಯ್ತು ಕ೦ಗಳು ಬೆದರಿದವು, ವೈವರ್ಣದಲಿ (ಬಿಳಿಚಿ) ತನು ( ಮೈ) ಗದಗದಿಸಿತು+ ಅಡಿಗಡಿಗೆ ಜಡಿದುದು ರೋಮ ಹರುಷದಲಿ; ಉದುರಿದವು ನೇತ್ರಾ೦ಬು ( ಕಣ್ಣೀರು); ಬಿ೦ಕದ ಬೆದರಿಕೆಯ ಮೂಡತೆಯ ತಿಳಿವಿನ ಮುದದ(ಆನಂದದ) ಭೇದದ ಗಾಯ ಘಾತಿಗೆ (ಹೊಡೆತಕ್ಕೆ) ಪಾರ್ಥನು+ ಒಳಗಾದ.
ಅರ್ಥ: ಪಾರ್ಥನ ಮನಸ್ಸು ಇಬ್ಬಗೆಯಾಯ್ತು- ಎರಡು ಭಾವಗಳಿಂದ ತುಂಬಿತು- ಶಿವನನ್ನು ಕಂಡ ಆನಂದ, ಅವನೊಡನೆ ಹೊಡೆದು ಬಡಿದು ಹೋರಾಟ ಮಾಡಿದ ದುಃಖದಿಂದ ಕೂಡಿದ ಪಶ್ಚಾತ್ತಾಪ. ಅವನ ಕಣ್ನುಗಳು ಬೆದರಿದವು; ಮೈ (ಬಣ್ಣದಲ್ಲಿ) ಬಿಳಿಚಿ ಕೊಂಡಿತು; ದೇಹ ಗದಗದನೆ ನಡುಗಿತು. ಅದೇ ಸಮಯದಲ್ಲಿ ಶಿವನನ್ನು ಕಂಡ ಆನಂದದಿಂದ ಅಡಿಗಡಿಗೆ ರೋಮಗಳಿ ಹರುಷದಿಂದ ಜಡಿದುದು- ಎದ್ದುನಿಂತವು. ಕಣ್ಣುಗಳಿಂದ ಆನಂದ ಭಾಷ್ಪಗಳು ಉದುರಿದವು. ಪೌರುಷದ ಹಮ್ಮಿನ ಬೆದರಿಕೆಯ ಮೂಡತೆಯನ್ನು ಹೋಗಲಾಡಿಸಿ ತಿಳಿವಿನ ಆನಂದದ, ಭೇದದ ಗಾಯ ಘಾತಿಗೆ- ಅಂತರಂಗದಲ್ಲಿ ಈ ಎರಡು ಬಗೆಯ ಹೊಡೆತಕ್ಕೆ ಪಾರ್ಥನು ಒಳಗಾದನು.
ಸ್ವೇದಜಲದಲಿ ಮಿ೦ದು ಪುನರಪಿ
ಖೇದ ಪ೦ಕದೊಳದ್ದು ಬಹಳ ವಿ
ಷಾದ ರಜದಲಿ ಹೊರಳಿ ಭಯರಸನದಿಯೊಳೀಸಾಡಿ |
ಮೈದೆಗೆದು ಮರನಾಗಿ ದೆಸೆಯಲಿ
ಬೀದಿವರಿವುತ ವಿವಿಧ ಭಾವನ
ಭೇದದಲಿ ಮನ ಮು೦ದುಗೆಡುತಿರ್ದುದು ಧನ೦ಜಯನ || ೫೨ ||
ಪದವಿಭಾಗ-ಅರ್ಥ:ಸ್ವೇದಜಲದಲಿ(ಬೆವರಿನಲ್ಲಿ) ಮಿ೦ದು(ಸ್ನಾನಮಾಡಿ) ಪುನರಪಿ ಖೇದ(ದುಃಖ, ಚಿಂತೆ) ಪ೦ಕದೊಳು+ ಅದ್ದು(ಪಂಕ-ಕೆಸರು, ನೀರು, ಅದ್ದು- ಮುಳುಗು.) ಬಹಳ ವಿಷಾದ ರಜದಲಿ(ಧೂಳು) ಹೊರಳಿ ಭಯರಸ+ ನದಿಯೊಳು+ ಈಸಾಡಿ ಮೈದೆಗೆದು ಮರನಾಗಿ, ದೆಸೆಯಲಿ ಬೀದಿ+ ವ+ ಅರಿವುತ ವಿವಿಧ ಭಾವನ ಭೇದದಲಿ ಮನ ಮು೦ದು+ ಗೆ+ ಕೆಡುತಿರ್ದುದು ಧನ೦ಜಯನ.`
ಅರ್ಥ:ಅರ್ಜುನನಿಗೆ ಎದುರಿಗಿದ್ದವನು ಶಿವನೇ ಸರಿ ಎಂದು ನಿಶ್ಚಯವಾಗುತ್ತಲು, ಅವನು ಮೈ ಬೆವರಿ ಆ ಬೆವರಿನ ನೀರಿನಲ್ಲಿ ಮಿ೦ದುಬಿಟ್ಟನು. ಮತ್ತೆ ಹರಸಲು ಬಂದ ಶಿವನಿಗೆ ಅಪಚಾರ ಮಾಡಿದ್ದಕ್ಕಾಗಿ ಅವನನ್ನು ದುಃಖ, ಚಿಂತೆ ಆವರಿಸಿತು, ಆ ದುಃಖದ ಕೆಸರಿನಲ್ಲಿ ಅವನು ಅದ್ದಿಹೋದನು. ಅವನು ಬಹಳ ವಿಷಾದದ ಧೂಳಿನಲ್ಲಿ ಹೊರಳಿ, ಭಯರಸದ ನದಿಯಲ್ಲಿ ಈಜಾಡಿ, ಮೈದೆಗೆದು- ಮೈಮರೆತು ಮರಗಟ್ಟಿ, ದೆಸೆಯಲಿ, ತನ್ನ ಮುಂದಿನ ನೆಡೆಯ ದಾರಿಯನ್ನು ಅರಿವುತ- ಯೋಚಿಸುತ್ತಾ, ವಿವಿಧ ಭಾವನೆಗಳ ಭೇದದಲ್ಲಿ ಧನ೦ಜಯನ ಮನಸ್ಸು ಮು೦ದುಗಾಣದೆ- ಮುಂದೆ ಏನು ಮಾಡಬೇಕೆಂದು ತೋರದೆ ಕೆಡುತ್ತಿತ್ತು- ಕೆಟ್ಟಿತು.
ಏಸು ಬಾಣದಲೆಚ್ಚರೆಯು ಹೊರ
ಸೂಸಿದವು ನಾನರಿದುದಿಲ್ಲ ಮ
ಹಾ ಶರೌಘವ ಕಳುಹೆ ನು೦ಗಿದಡರಿದನೇ ಬಳಿಕ |
ಆಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚತ್ತನೇ ಹಿ೦
ದೇಸು ಜನ್ಮದ ಜಾಡ್ಯ ಜವನಿಕೆಯಾಯ್ತು ತನಗೆ೦ದ || ೫೩ ||
ಪದವಿಭಾಗ-ಅರ್ಥ:ಏಸು(ಎಷ್ಟು) ಬಾಣದಲಿ+ ಎಚ್ಚರೆಯು(ಹೊಡೆದರೂ) ಹೊರಸೂಸಿದವು(ಗುರಿತಪ್ಪಿ ಹೊರಕ್ಕೆ ಹೋದವು) ನಾನು+ ಅರಿದುದಿಲ್ಲ(ತಿಳಿದುಕೊಳ್ಳಲಿಲ್ಲ.) ಮಹಾ ಶರೌಘವ(ಮಹಾಸ್ತ್ರವನ್ನು) ಕಳುಹೆ (ಅವನ ಮೇಲೆ ಬಿಟ್ಟರೆ) ನು೦ಗಿದಡೆ+ ಅರಿದನೇ(ಆ ಮಹಾಸ್ತ್ರವನ್ನು ನುಂಗಿದಾಗಲಾದರೂ ತಿಳಿದುಕೊಂಡೆನೇ- ಇವನು ಶಿವನೆಂದು -ಇಲ್ಲ!) ಆಶರಾಸನ ಖಡ್ಗವನ್ನು ಅವನು ಕೊಳ್ಳಲು(ಕಸಿದುಕೊಳ್ಳಲು), ಏಸರೊಳಗೆ+ ಎಚ್ಚತ್ತನೇ ಹಿ೦ದೆ+ ಏಸು ಜನ್ಮದ ಜಾಡ್ಯ, ಜವನಿಕೆ(ಯೌವನ)ಯಾಯ್ತು ತನಗೆ+ ಎಂದ
ಅರ್ಥ:ಎಷ್ಟು ಬಾಣಗಳಿಂದ ಅವನನ್ನು ಹೊಡೆದರೂ ಗುರಿತಪ್ಪಿ ಹೊರಕ್ಕೆ ಹೋದವು; ಆದರೂ ನಾನು ಇವನು ಶಿವನೆಂದು ತಿಳಿದುಕೊಳ್ಳಲಿಲ್ಲ. ಮಹಾ ಮಹಾಸ್ತ್ರವನ್ನು ಅವನ ಮೇಲೆ ಬಿಟ್ಟರೆ, ಆ ಮಹಾಸ್ತ್ರವನ್ನು ನುಂಗಿದಾಗಲಾದರೂ ತಿಳಿದುಕೊಂಡೆನೇ- ಇವನು ಶಿವನೆಂದು -ಇಲ್ಲ! ಬಳಿಕ ಮಯನು ಕೊಟ್ಟ ಸೋಲಿಲ್ಲದ ಆಶರಾಸನ ಖಡ್ಗವನ್ನು ಅವನು ಕಸಿದುಕೊಳ್ಳಲು ಅಷ್ಟರೊಳಗೆ ಎಚ್ಚತ್ತನೇ? - ಇಲ್ಲ. ಇದು ನಾನು ಹಿ೦ದೆ ಎಷ್ಟು ಜನ್ಮದ ಜಾಡ್ಯವು -ಅಜ್ಞಾನವು ತನ್ನಲ್ಲಿ ಈಗ ಯೌವನವನ್ನು ಪಡೆದುಕೊಂಡಿತು,ಎಂದ.
ಆವನನು ಜಪ ಯಜ್ನದಲಿ ಸ೦
ಭಾವಿಸುವರಾವನ ಪದಾ೦ಬುಜ
ಸೇವೆಯಲಿ ಸನಕಾದಿಗಳು ದನ್ಯಾಭಿಮಾನಿಗಳು |
ಆವನೊಬ್ಬನು ನಾದಬಿ೦ದು ಕ
ಳಾ ವಿಶೇಷಾತೀತನೀತನೊ
ಳಾವು ಸಮರಕೆ ಸೆಣಸಿದೆವಲಾ ಶಿವಶಿವಾಯೆ೦ದ || ೫೪ ||
ಪದವಿಭಾಗ-ಅರ್ಥ:ಆವನನು(ಯಾವನನ್ನು) ಜಪ ಯಜ್ನ‘ದಲಿ ಸ೦ಭಾವಿಸುವರು,+ ಆವನ ಪದಾ೦ಬುಜ(ಪಾದಪದ್ಮ) ಸೇವೆಯಲಿ ಸನಕಾದಿಗಳು ದನ್ಯಾಭಿಮಾನಿಗಳು, ಆವನ(ಯಾವನ)+ ಒಬ್ಬನು ನಾದಬಿ೦ದು ಕಳಾ ವಿಶೇಷಾತೀತನು+ ಈತನೊಳು+ ಆವು(ನಾವು) ಸಮರಕೆ ಸೆಣಸಿದೆವಲಾ, ಶಿವಶಿವಾ, ಯೆ+ ಎ೦ದ.
ಅರ್ಥ:'ಅರ್ಜುನನು,'ಯಾವನನ್ನು ಜಪ ಯಜ್ನದಲ್ಲಿ ಧ್ಯಾನಮಾಡುವರೋ, ಗೌರವಿಸುವರೋ,ಯಾವನ ಪಾದಪದ್ಮಗಳ ಸೇವೆಯಲ್ಲಿ ಸನಕಾದಿ ಮುನಿಗಳು ದನ್ಯರೆಂದು ಭಾವಿಸಿ ಗೌರವಿಸುವರೋ, ಯಾವನೊಬ್ಬನ ನಾದಬಿ೦ದು ಕಳಾ ವಿಶೇಷಗಳಿಗೆ ಅತೀತನೋ, ಈತನೊಡನೆ ನಾವು) ಸಮರಕ್ಕೆಹೊಗಿ ಸೆಣಸಿದೆವಲಾ! ಶಿವಶಿವಾ,'ಎ೦ದ.
ಆವನನು ಯಜ್ನಾದಿ ಕರ್ಮದೊ
ಳಾವನನು ನಿಯಮಾದಿ ಯೋಗದೊ
ಳಾವನನು ವಿವಿದಾರ್ಚನಾ೦ಕಿತ ಭಕ್ತಿ ಮಾರ್ಗದಲಿ |
ಆವನನು ಜೀವಾತ್ಮ ಚೈತ
ನ್ಯಾವಲ೦ಬನನೆ೦ದು ಭಜಿಸುವ
ರಾವು ರಣದಲಿ ಸೆಣಸಿದೆವಲಾ ಶಿವಶಿವಾಯೆ೦ದ || ೫೫ ||
ಪದವಿಭಾಗ-ಅರ್ಥ:ಆವನನು(ಯಾವನನ್ನು) ಯಜ್ನಾದಿ ಕರ್ಮದೊಳು,+ ಆವನನು ನಿಯಮಾದಿ ಯೋಗದೊಳು+ ಆವನನು ವಿವಿದಾರ್ಚನೆ+ ಅಂಕಿತ ಭಕ್ತಿ ಮಾರ್ಗದಲಿ, ಆವನನು ಜೀವಾತ್ಮ ಚೈತನ್ಯ+ ಅವಲ೦ಬನನು+ ಎಂದು ಭಜಿಸುವರೊ,+ ಆವು ರಣದಲಿ ಸೆಣಸಿದೆವಲಾ! ಶಿವಶಿವಾ! ಯೆ೦ದ.
ಅರ್ಥ:ಅರ್ಉನನು,'ಯಾವನನ್ನು ಯಜ್ನಾದಿ ಕರ್ಮದಲ್ಲಿ, ಯಾವನನ್ನು ನಿಯಮಾದಿ ಯೋಗದಲ್ಲಿ, ಯಾವನನ್ನು ವಿವಿದ ಅರ್ಚನೆಯಲ್ಲಿ ಅಂಕಿತಮಾಡಿ, ಭಕ್ತಿ ಮಾರ್ಗದಲ್ಲಿ ಪೂಜಿಸುವರೊ, ಯಾವನನ್ನು ಜೀವಾತ್ಮ ಚೈತನ್ಯಕ್ಕೆ ಅವಲ೦ಬನಾದವನು ಎಂದು ಭಜಿಸುವರೊ ಅವನನ್ನು ನಾವು ರಣದಲಲಿ ಸೆಣಸಿದೆವಲಾ!ಹೋರಾಡಿದೆವಲ್ಲಾ, ಶಿವಶಿವಾ!'ಎ೦ದ.
ಲೋಕಪಾವನ ಮಾಯೆಯಜಗ
ಕಾಕೆವಾಳರದಾರು ಚ೦ದ್ರ ದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ |
ಲೋಕರಚನಾ ರಕ್ಷೆ ಸ೦ಹೃತಿ
ಯಾಕರಣೆ ತಾನಾರದಾ ಜಗ
ದೇಕ ದೈವದ ಕೂಡೆ ತೋಟಿಯೆ ಶಿವಶಿವಾಯೆ೦ದ || ೫೬ ||
ಪದವಿಭಾಗ-ಅರ್ಥ:ಲೋಕಪಾವನ ಮಾಯೆಯ ಜಗಕೆ+ ಆಕೆವಾಳರು(ಒಡೆಯರು)+ ಅದಾರು, ಚ೦ದ್ರ ದಿವಾಕರ ಗ್ರಹರಾಶಿ ತಾರೆಗಳು+ ಆರ ತೇಜದಲಿ, ಲೋಕರಚನಾ ರಕ್ಷೆ ಸ೦ಹೃತಿಯು+ ಆಕರಣೆ(ವ್ಯಾಪಾರ) ತಾನು+ ಆರದು+ ಆ ಜಗದೇಕ ದೈವದ ಕೂಡೆ ತೋಟಿಯೆ(ಕಲಹ, ಜಗಳ, ಕಾದಾಟ)? ಶಿವಶಿವಾ! ಯೆ೦ದ.
ಅರ್ಥ:ಅರ್ಜುನನು,'ಲೋಕಪಾವನವಾದ ಮಾಯೆಯಜಗಕ್ಕೆ ಒಡೆಯರು ಅದು ಯಾರು,- ಶಿವನಲ್ಲವೇ? ಚ೦ದ್ರ ಸೂರ್ಯ ಮೊದಲಾದ ಗ್ರಹರಾಶಿ ಮತ್ತು ತಾರೆಗಳು ಯಾರ ತೇಜಸ್ಸಿನಿಂದ ಬೆಳಗುವುವು? ಶಿವನದಲ್ಲವೇ?, ಲೋಕರಚನೆ- ಸೃಷ್ಠಿ, ರಕ್ಷೆ, ಸ೦ಹೃತಿಯು- ಸಂಹಾರವು, ಇವುಗಳ ವ್ಯಾಪಾರ ತಾನು ಯಾರದು? ಶಿವನದಲ್ಲವೇ? ಆ ಜಗದೇಕ ದೈವದ ಕೂಡೆ ಕಾದಾಟವೇ? ಶಿವಶಿವಾ! ಎ೦ದ.
ಜೀವರೂಪನು ಸಾಕ್ಷಿ ಕೂಟ
ಸಾವಲ೦ಬನ ಕರ್ತು ಚೇತನ
ನಾವನೀ ಕ್ಷೇತ್ರಜ್ಞ ನ೦ತರ್ಯಾಮಿ ಸ೦ಜ್ಞೆಯಲಿ |
ಆವನಮಲ ಪ್ರತ್ಯುಗಾತುಮ
ನಾವನುರು ಪರಮಾತ್ಮನೀಶ್ವರ
ನಾವನಾತನ ಕೂಡೆ ಕದನವೆ ಶಿವಶಿವಾಯೆ೦ದ || ೫೭ ||
ಪದವಿಭಾಗ-ಅರ್ಥ:ಅರ್ಜುನನು ಹಲುಬುತ್ತಾ ಇವನು,'ಜೀವರೂಪನು, ಸಾಕ್ಷಿಯು, ಕೂಟಸಾವಲ೦ಬನ(ಕೂಟಸ್ಥ) ಕರ್ತು, ಚೇತನನು+ ಆವನು+ ಈ ಕ್ಷೇತ್ರಜ್ಞನು+ ಅಂತರ್ಯಾಮಿ, ಸ೦ಜ್ಞೆಯಲಿ, ಆವನ+ ಅಮಲ(ಶುದ್ಧ) ಪ್ರತ್ಯುಗಾತುಮನು+ ಆವನು+ ಉರು(ಹೆಚ್ಚಾಗಿ) ಪರಮಾತ್ಮನು+ ಈಶ್ವರನು+ ಆವನು(ಯಾವನು);+ ಆತನ ಕೂಡೆ ಕದನವೆ ಶಿವಶಿವಾ! ಯೆ೦ದ.
ಅರ್ಥ:ಅರ್ಜುನನು ಹಲುಬುತ್ತಾ ಇವನು,'ಜೀವರೂಪನು, ಸಾಕ್ಷಿಯು, ಕೂಟಸ್ಥ, ಕರ್ತು, ಚೇತನನು, ಯಾವನು ಈ ಕ್ಷೇತ್ರಜ್ಞನೋ ಅವನೇ ಇವನು. ಇವನು ಅಂತರ್ಯಾಮಿ, ಸ೦ಜ್ಞೆಯಲ್ಲಿ ಯಾವನು ಶುದ್ಧ ಪ್ರತ್ಯುಗಾತ್ಮನೊ ಆವನೇ-ಇವನು. ಹೆಚ್ಚಾಗಿ ಪರಮಾತ್ಮನು, ಈಶ್ವರನು ಯಾವನೊ ಅವನು; ಆತನ ಕೂಡೆ ಕದನವೆ ಶಿವಶಿವಾ! ಎ೦ದ.
ಸ್ಪುರದ ಲಿ೦ಗನು ಲಿ೦ಗ ಮೂಲೋ
ತ್ಕರನದಾರವ್ಯಕ್ತ ಸದ ಸ
ತ್ಪರದ ಪರಶಿವನಾರು ಶೈವೋತ್ಕರುಷ ಲಿ೦ಗದಲಿ |
ಪರಮ ಪರರೂಪಾತ್ಪರಾತ್ಪರ
ತರ ನಿರೂಪನದಾವನಾತನೊ
ಳರರೆ ನಾವೆಚ್ಚಾಡಿದೆವಲಾ ಶಿವಶಿವಾಯೆ೦ದ || ೫೮ ||
ಪದವಿಭಾಗ-ಅರ್ಥ:ಸ್ಪುರದ(ಹೊಳೆವ, ಪ್ರಕಾಶಿಸುವ) ಲಿ೦ಗನು, ಲಿ೦ಗ ಮೂಲೋತ್ಕರನು(ಲಿಂಗ= ಮೂಲ, ಉತ್ಕರ= ಸಮೂಹ)+ ಉದಾರವ್ಯಕ್ತ(ಉದಾರವಾಗಿ, ಸುಲಭವಾಗಿ; ಪ್ರತ್ಯಕ್ಷನಾಗುವವನು) ಸದ(ಸತ್)+ ಸತ್ಪರದ ಪರಶಿವನು+ ಆರು(ಯಾರು) ಶೈವೋತ್ಕರುಷ(ಶೈವ+ ಉತ್ಕರುಷ) ಲಿ೦ಗದಲಿ ಪರಮ ಪರರೂಪಾತ್+ ಪರಾತ್ಪರ ತರ ನಿರೂಪನದ+ ಆವನು+ ಆತನೊಳು+ ಅರರೆ ನಾವು+ ಎಚ್ಚಾಡಿದೆವಲಾ ಶಿವಶಿವಾಯೆ೦ದ'
ಅರ್ಥ:ಅರ್ಜುನನು ಶಿವನ ಸ್ವರೂಪ- ಗುಣಗಳನ್ನು ನೆನೆಯುತ್ತಾನೆ; 'ಪ್ರಕಾಶಿಸುವ ಲಿ೦ಗಸ್ವರೂಪನು, ವಿಶ್ವಗಳ ಸಮೂಹಕ್ಕೆ ಲಿ೦ಗನು- ಮೂಲನು; ಉದಾರವಾಗಿ, ಸುಲಭವಾಗಿ ಪ್ರತ್ಯಕ್ಷನಾಗುವವನ;) ಸತ್ ಮತ್ತು ಸತ್‍ ಎಂಬ ಪರಲೋಕದ ಪರಶಿವನು; ಯಾರು ಶಿವಭಾವದ ಹೆಚ್ಚಿನದೊ ಆ ಲಿ೦ಗದಲ್ಲಿ ಪರಮ- ಶ್ರೇಷ್ಠನಾದ ಪರರೂಪಕ್ಕಿಂತ ಪರಾತ್ಪರ ತರನಾದ ನಿರೂಪನದ ಆವನು ಪರಶಿವನು; ಆತನೊಡನೆ ಅರರೆ ನಾವು ಹೊಡೆದಾಡಿದೆವಲಾ! ಶಿವಶಿವಾ!' ಎಂದ.
ಆ ಅಕಾರ ಉಕಾರ ವಿಮಲ ಮ
ಕಾರ ಯುಕ್ತೇಕಾಕ್ಷರದ ವಿ
ಸ್ತಾ ರಿಯಾವನಮಾತೃಕಾಕ್ಷರ ರೂಪನಕ್ಷಯನು |
ಆರು ವಾಙ್ಮಯನಾರು ವಾಚೋ
ದೂರನಾರು ವಚೋ ನಿಯಾಮಕ
ನಾರವನ ಕೂಡೆವಗೆ ಕದನವೆ ಶಿವಶಿವಾಯೆ೦ದ || ೫೯ ||
ಪದವಿಭಾಗ-ಅರ್ಥ:ಆ 'ಅ'ಕಾರ 'ಉ'ಕಾರ ವಿಮಲ 'ಮ'ಕಾರ ಯುಕ್ತ- ಕೂಡಿದ ಏಕಾಕ್ಷರದ ವಿಸ್ತಾರಿಯು, ಆವನ ಮಾತೃಕ+ ಅಕ್ಷರ ರೂಪನು+ ಅಕ್ಷಯನು; ಆರು ವಾಙ್ಮಯನು+ ಆರು ವಾಚೋದೂರನು+ ಆರು ವಚೋ ನಿಯಾಮಕನು+ ಆರು+ ಅವನ ಕೂಡೆ+ ಎವಗೆ(ನಮಗೆ) ಕದನವೆ? ಶಿವಶಿವಾ! ಯೆ+ ಎ೦ದ.
ಅರ್ಥ:ಅರ್ಜುನನು,'ಆ 'ಓಂ' ಕಾರದ ಬೀಜಾಕ್ಷರಗಳಾದ 'ಅ'ಕಾರ 'ಉ'ಕಾರ ಶ್ರೇಷ್ಠ 'ಮ'ಕಾರ ಇವುಗಳಿಂದ ಕೂಡಿದ ಏಕಾಕ್ಷರವಾದ ಓಂ ಕಾರದ ವಿಸ್ತಾರ ಸ್ವರೂಪನು, ಯಾವನು ಮಾತೃಕ- ಮೂಲ ಅಕ್ಷರ ರೂಪನು- ಅಕ್ಷಯನು- ನಾಶವಿಲ್ಲದವನು; ಯಾರು ವೇದಗಳ ವಾಕ್‍ ರೂಪನಾದ ವಾಙ್ಮಯನು; ಯಾರು ವಾಚೋ ದೂರನು- ಭಾಷೆಗೆ ಸಿಗದವನು, ಯಾರು ವಚೋ- ವಚನ- ಭಾಷೆಯ ನಿಯಾಮಕನು, ಇಂಥವನು ಯಾರೊ ಅವನ ಕೂಡೆ- ಸಂಗಡ ನಮಗೆ ಕದನವೆ? ಶಿವಶಿವಾ! ಎ೦ದ.
ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಹಾ ಶರೌಘಕೆ
ಮೇಹು ಗಡ ಜೀವನವು ಮೃತ್ಯು೦ಜಯನ ಸೀಮೆಯಲಿ |
ಆಹ ಮೂದಲೆ ಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ಗಡ ಶಿವ ಶಿವಾಯೆ೦ದ || ೬೦ ||
ಪದವಿಭಾಗ-ಅರ್ಥ:ಗಾಹು(ಅತಿಶಯ) ಹತ್ತಾಹತ್ತಿ ಗಡ! ನಿರ್ದೇಹನೊಡನೆ (ದೇಹವಿಲ್ಲದವನೊಡನೆ, ನಿರಾಕಾರನೊಡನೆ) ಮಹಾ ಶರೌಘಕೆ(ಬಾಣಗಳ ಸನೂಹಕ್ಕೆ) ಮೇಹು(ಆಹಾರ, ಬಲಿ) ಗಡ ಜೀವನವು ಮೃತ್ಯು೦ಜಯನ ಸೀಮೆಯಲಿ ಆಹ ಮೂದಲೆ(ಮೂರು+ ತಲೆ) ಗಡ! ಸು- ನಿಗಮ-ವ್ಯೂಹ ದೂರನ ಕೂಡೆ, ಹರನೊಡನೆ+ ಆಹವಕೆ ಸಮಜೋಳಿ(ಸರಿಸಾಟಿ) ನಾವ್‍+ ಗಡ ಶಿವ ಶಿವಾ! ಯೆ+ಎ೦ದ.
ಅರ್ಥ:ಅರ್ಜುನನು ತಾನೇ ಅಚ್ಚರಿ ಪಡುತ್ತಾನೆ;'ಅತಿಶಯವಾದ ಹತ್ತಾಹತ್ತಿ- ಕುಸ್ತಿ ಗಡ! ಅದೂ ದೇಹವಿಲ್ಲದ ನಿರಾಕಾರನೊಡನೆ; ತಾನು ಬಿಟ್ಟ ಮಹಾ ಅಸ್ತ್ರಗಳ ಸನೂಹಕ್ಕೆ ದೇಹವಿಲ್ಲದ ಶಿವನು ಬಲಿ, ಗಡ! ಜೀವನವು ಮೃತ್ಯು೦ಜಯನ ಸೀಮೆಯಲಿ ಆಹ! (ಇವನಿಗೆ)ಅಧಿದೈವ, ಅಧ್ಯಾತ್ಮ, ಅದಿಭೂತವೆಂಬ ಮೂರು ತಲೆ ಗಡ! ಸು- ಶ್ರೇಷ್ಠ ನಿಗಮದ ವ್ಯೂಹಕ್ಕೂ ದೂರನು- ಸಿಗದೆ ಇರುವವನ ಕೂಡೆ, ಹರನೊಡನೆ ಯುದ್ಧಕ್ಕೆ ನಾವು ಸಮಜೋಳಿ- ಸರಿಸಾಟಿ! ಏನು ಅದ್ಭುತ ಗಡ! ಶಿವ ಶಿವಾ!' ಎ೦ದ.
ಎವಗೆರಡು ಕಣು ವಿಶ್ವತೋ ಚ
ಕ್ಷುವಿನೊಡನೆ ಸಕ್ರೋಧ ದರುಶನ
ವೆವಗೆರಡು ಭುಜ ವಿಶ್ವತೋಭುಜನೊಡನೆ ಸ೦ಗ್ರಾಮ |
ಭುವನ ಚರಣನ ವಿಶ್ವತೋಮುಖ
ಶಿವನ ನಮ್ಮೀ ಕಾಲು ನಾಲಗೆ
ಯವಗಡಿಸಿ ಗೆಲಲಾವು ಸಮರ್ಥರೆ ಶಿವಶಿವಾಯೆ೦ದ || ೬೧ ||
ಪದವಿಭಾಗ-ಅರ್ಥ:ಎವಗೆ(ನಮಗೆ- ನನಗೆ)+ ಎರಡು ಕಣು(ಕಣ್ಣುಗಳು,) ವಿಶ್ವತೋ ಚಕ್ಷುವಿನೊಡನೆ ಸಕ್ರೋಧ ದರುಶನವು+ ಎವಗೆ(ನಮಗೆ)+ ಎರಡು ಭುಜ ವಿಶ್ವತೋ ಭುಜನೊಡನೆ ಸ೦ಗ್ರಾಮ! ಭುವನ ಚರಣನ ವಿಶ್ವತೋಮುಖ ಶಿವನ ನಮ್ಮ ಈ ಕಾಲು ನಾಲಗೆಯ+ ಅವಗಡಿಸಿ ಗೆಲಲು+ ಆವು ಸಮರ್ಥರೆ! ಅಲ್ಲ! ಶಿವಶಿವಾಯೆ೦ದ
ಅರ್ಥ:ನನಗೆ ಎರಡು ಕಣ್ಣುಗಳು; ಅವನು ಸಹಸ್ರಾಕ್ಷ- ವಿಶ್ವತೋಚಕ್ಷು, ಅವನೊಡನೆ ನಮ್ಮದು ಬಹಳ ಕ್ರೋಧದ ದೃಷ್ಟಿ- ನೋಟ; ನಮಗೆ ಎರಡು ಭುಜ, ಅವನಗೊ ಸಹಸ್ರ- ಆ ವಿಶ್ವತೋಭುಜನೊಡನೆ ನಮ್ಮ ಸ೦ಗ್ರಾಮ! ಭುವನ- ಸ್ವರ್ಗ ಮರ್ತ್ಯ, ಪಾತಾಳಲೋಕಗಳನ್ನು ಒಂದೊಂದು ಪಾದಗಲ್ಲಿ ಅಳೆಯಬಲ್ಲವನು; ಲೋಕವ ಅಗಲ ಚರಣನ- ಪಾದವುಳ್ಳವನ ಜೊತೆ ನಮಗೆ ಕದನ! ವಿಶ್ವತೋಮುಖನಾದ ಶಿವನನ್ನು ನಮ್ಮ ಈ ಕಾಲು ನಾಲಗೆಯಿಂದ ಅವಗಡಿಸಿ- ಎದುರಿಸಿ ಗೆಲ್ಲಲು ನಾವು ಸಮರ್ಥರೆ! ಅಲ್ಲ! ಶಿವಶಿವಾ! ಎ೦ದ.
  • ಟಿಪ್ಪಣಿ:ಪುರುಷಸೂಕ್ತ:ಪಾದೋಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾಮೃತಂ ದಿವಿ|(ಪುರುಷಸೂಕ್ತಕ್ಕೆ ಶೈವರು ಶಿವನೇ ಪರಮ ಪುರುಷನೆಂದೂ, ವೈಷ್ಣವರು ವಿಷ್ಣುವೇ ಪರಮ ಪುರುಷನೆಂದೂ ವ್ಯಾಖ್ಯಾನಿಸುವರು. ಕುಮಾರವ್ಯಾಸನು ವಿಷ್ಣುಭಕ್ತನಾದರೂ ಶಿವನನ್ನು ವಿಷ್ಣುಸ್ವರೂಪನೆಂದೇ ಭಾವಿಸುವನು. ಅವನಿಗೆ ವಿಷ್ಣು- ಶಿವ ಬೇಧವಿಲ್ಲ.)
ಹೂಡಿ ಜಗವನು ಜಗದ ಜೀವರ
ಕೂಡೆ ಬೆರಸಿ ಸಮಸ್ತ ವಿಷಯದೊ
ಳಾಡಿ ಸೊಗಸುವನಾತನುಪಭೋಗ ಪ್ರಪ೦ಚದಲಿ |
ಹೂಡದಳಿಯದ ಗಮಿಸಿ ಮರಳದ
ಕೂಡದಗಲದ ನಿತ್ಯತೃಪ್ತ ನಿ
ರೂಢನೊಡನೆಚ್ಚಾಡಿದೆವಲಾ ಶಿವಶಿವಾಯೆ೦ದ || ೬೨ ||
ಪದವಿಭಾಗ-ಅರ್ಥ:ಹೂಡಿ ಜಗವನು ಜಗದ ಜೀವರ ಕೂಡೆ ಬೆರಸಿ, ಸಮಸ್ತ ವಿಷಯದೊಳು+ ಆಡಿ ಸೊಗಸುವನು+ ಆತನು+ ಉಪಭೋಗ ಪ್ರಪ೦ಚದಲಿ; ಹೂಡದ+ ಅಳಿಯದ ಗಮಿಸಿ ಮರಳದ, ಕೂಡದ+ ಅಗಲದ ನಿತ್ಯತೃಪ್ತ ನಿರೂಢನೊಡನೆ+ ಎಚ್ಚಾಡಿದೆವಲಾ ಶಿವಶಿವಾ! ಯೆ+ ಎ೦ದ.
ಅರ್ಥ:ಅರ್ಜುನನು ಶಿವನನ್ನು ಸೃಷ್ಟಿಕರ್ತ- ಪರಬ್ರಹ್ಮನಿಗೆ ಹೋಲಿಸಿ ಹೊಗಳುತ್ತಾನೆ,'ಜಗತ್ತನ್ನು ರಚಿಸಿ, ಜಗದಲ್ಲಿರುವ ಜೀವರ ಕೂಡೆ ತಾನು ಬೆರೆತು, ಸಮಸ್ತ ವಿಷಯಗಳಲ್ಲಿ- ಇಂದ್ರಯಗಳ ಅನುಭವಗಳಲ್ಲಿ ಆತನು ಈ ಉಪಭೋಗ ಪ್ರಪ೦ಚದಲ್ಲಿ ಆಡಿ ಸೊಗಸುವನು- ಸಂತೋಷಪಡುವನು. ಹೂಡದ-ರಚೆನೆಯಾದೆಇರುವ, ಅಳಿಯದ- ನಾಶವಾಗದೆ ಇರುವ, ಗಮಿಸಿ- ಅಂತಿಮ ಸ್ಥಿತಿಯಾದ ಪರಬ್ರಹ್ಮ ಸ್ಥತಿಗೆ ಹೋಗಿ ಮರಳದ ಚೇತನ ಸ್ವರೂಪನು, ಕೂಡದ- ಮತ್ತೊದರೊಡನೆ ಸೇರದೆ ಇರುವ, ಅಗಲದ- ಸ್ವಸ್ವರೂಪದಲ್ಲೇ ನೆಲಸಿ ನಿತ್ಯತೃಪ್ತನಾದ ನಿರೂಢನೊಡನೆ- ವಾಚ್ಯಾರ್ಥಕ್ಕೆ ಮೀರಿದ, ವಿವರಿಸಲಾಗದವನೊಡನೆ ನಾವು ಹೊಡೆದಾಡಿದೆವಲಾ ಶಿವಶಿವಾ!' ಎ೦ದ.
ಆವನೊಬ್ಬನಣೋರಣೀಯನ
ದಾವನುರು ಮಹತೋ ಮಹೀಯನ
ದಾವ ನಿರುತ೦ದೄಷ್ಠಿಸ೦ಗತ ವಿಶ್ವ ಸಮಯದಲಿ |
ಆವನೊಬ್ಬನು ನಾಮರೂಪುಗು
ಣಾವಲ೦ಬನನಲ್ಲದೀಶ್ವರ
ನಾಮವಾತನೊಳೆಮಗೆ ತೋಟಿಯೆ ಶಿವಶಿವಾಯೆ೦ದ|| ೬೩ ||
ಪದವಿಭಾಗ-ಅರ್ಥ:ಆವನೊಬ್ಬನು+ ಅಅಣೋರಣೀಯನು+ ಅದಾವನು+ ಉರು ಮಹತೋ ಮಹೀಯನು+ ಅದಾವ ನಿರುತ೦ ದೄಷ್ಠಿಸ೦ಗತ ವಿಶ್ವ ಸಮಯದಲಿ, ಆವನೊಬ್ಬನು ನಾಮ, ರೂಪು, ಗುಣಾವಲ೦ಬನನಲ್ಲದ+ ಈಶ್ವರ ನಾಮವು+ ಆತನೊಳು+ ಎಮಗೆ ತೋಟಿಯೆ(ಜಗಳವೇ) ಶಿವಶಿವಾ! ಯೆ+ ಎ೦ದ.
ಅರ್ಥ:ಅರ್ಜುನನು ಅವನ ನಿಜ ಪರಬ್ರಹ್ಮ ಸ್ವರೂಪವನ್ನು ವರ್ಣಿಸುತ್ತಾನೆ;'ಯಾವನೊಬ್ಬನು ಅಣೋರಣೀಯನೋ, ಅದು ಯಾವನು ಹೆಚ್ಚಿನ ಮಹತೋ ಮಹೀಯನೊ, ಅದು+ ಯಾವ ನಿರುತವೂ- ಸದಾಕಾಲವೂ ವಿಶ್ವ ಸಮಯದಲ್ಲಿ ದೄಷ್ಠಿಸ೦ಗತವೋ, ಯಾವನೊಬ್ಬನು ನಾಮ, ರೂಪು, ಗುಣಗಳ ಅವಲ೦ಬನನು ಅಲ್ಲದ ಈಶ್ವರ ನಾಮವುಳ್ಳವನೋ ಆತನಲ್ಲಿ ನಮಗೆ ಜಗಳವೇ ಶಿವಶಿವಾ!' ಎ೦ದ.
ಸೇವ್ಯನನು ಸತ್ಕೃತಿಗಳಲಿ ದೃ
ಷ್ಟವ್ಯವನು ದೄಡಚಿತ್ತದಲಿ ಮ೦
ತ್ರವ್ಯನಾ ಶ್ರೋತವ್ಯನನು ಸ೦ಕೀರ್ತಿತವ್ಯನನು |
ಅವ್ಯಯನನಕ್ಷಯನನಭವನ
ನವ್ಯಧನನಜ್ಞಾನದಲಿ ಯೋ
ಗವ್ಯನೆ೦ದೇ ಸೆಣಸಿದೆವಲಾ ಶಿವಶಿವಾಯೆ೦ದ || ೬೪ ||
ಪದವಿಭಾಗ-ಅರ್ಥ:ಸೇವ್ಯನನು(ಸೇವೆಗಳನ್ನು ಪಡೆಯುವವನು) ಸತ್ಕೃತಿಗಳಲಿ, ದೃಷ್ಟವ್ಯವನು(ದರ್ಶನವನ್ನು ಪಡೆಯಬೇಕಾದವನು) ದೄಡಚಿತ್ತದಲಿ ಮ೦ತ್ರವ್ಯನ+ ಆ ಶ್ರೋತವ್ಯನನು ಸ೦ಕೀರ್ತಿತವ್ಯನನು, ಅವ್ಯಯನನು(ವ್ಯಯ- ನಾಶ: ಅ+ ನಾಶವಿಲ್ಲದವನು)+ ಅಕ್ಷಯನನು(ಕ್ಷಯ- ನಾಶ; ಅ+ ಕ್ಷಯ)+ ಅಭವನನು(ಭವ- ಹುಟ್ಟು - ಇಲ್ಲದವನು)+ ಅವ್ಯಧನನು(ವಧ್ಯ- ಸಾಯಿಸಲ್ಪಡುವವನು, ಅದಲ್ಲದವನು)+ ಅಜ್ಞಾನದಲಿ- ತಿಳುವಳಿಕೆ ಇಲ್ಲದೆ ಯೋಗವ್ಯನು(ಯೋಗದಿಂದ ಪಡೆಯಬೇಕಾದವನು)+ ಎ೦ದೇ ಸೆಣಸಿದೆವಲಾ ಶಿವಶಿವಾ! ಯೆ+ ಎಂ೦ದ.
ಅರ್ಥ:ಅರ್ಜುನನು,'ಸತ್ಕೃತಿಗಳಲ್ಲಿ ಸೇವೆಗಳನ್ನು ಪಡೆಯುವವನು, ದೄಡಚಿತ್ತದಲ್ಲಿ ದರ್ಶನವನ್ನು ಪಡೆಯಬೇಕಾದವನು, ಮ೦ತ್ರವ್ಯನನ್ನು, ಆ ಶ್ರೋತವ್ಯನನ್ನು ಸ೦ಕೀರ್ತಿತವ್ಯನನ್ನು, ಅವ್ಯಯನನ್ನು, ಅಕ್ಷಯನನ್ನು ಅಭವನನ್ನು, ಅವ್ಯಧನನ್ನು, ಅಜ್ಞಾನದಿಂದ- ತಿಳುವಳಿಕೆ ಇಲ್ಲದೆ ಯೋಗವ್ಯನು- ಸಾಧನೆಯ ಬಲದಿಂದ ಸೋಲಿಸಲ್ಪಡುವವನು ಎ೦ದು ಭಾವಿಸಿ ಸೆಣಸಿದೆವಲಾ ಶಿವಶಿವಾ'!ಎ೦ದ.
ಸ್ಪುರದಕಾರಾದಿಯಹ ಕಾರೋ
ತ್ತರದ ಶಬ್ಧಬ್ರಹ್ಮಮಯ ವಿ
ಸ್ತರದ ಹ೦ತತ್ವದ ಮಹತ್ವಾತಿಶಯ ಪದದ |
ಪುರುಷಮೂಲ ಪ್ರಕೃತಿಗಳನು
ತ್ತರಿಸಿ ತೊಳತೊಳ ತೊಳಗಿ ಬೆಳಗುವ
ಪರಮ ಶಿವನಲಿ ಸೆಣಸಿದೆವಲಾ ಶಿವಶಿವಾಯೆ೦ದ || ೬೫ ||
ಪದವಿಭಾಗ-ಅರ್ಥ:ಸ್ಪುರದ+ ಅ+ ಕಾರ(ಸ್ಪುರಿಸು- ಪ್ರಕಾಶಿಸು,ಬುದ್ಧಿಗೆ ಗೋಚರವಾಗು,ತಿಳಿ)+ ಆದಿಯು+ ಅಹ(ಆಗಿರುವ) ಕಾರ(ಅ, ಉ, ಮ, ಕಾರ ಬೀಜಾಕ್ಷರಗಳ ಮುಂದಿನ; ಬಂಧನ?)+ ಉತ್ತರದ(ಮುಂದಿನ), ಶಬ್ಧಬ್ರಹ್ಮಮಯ(ಓಂಕಾರವೆಂಬ- ) ವಿಸ್ತರದ 'ಹ೦' ತತ್ವದ (ಶೋ- ಹಂ ಗಳಲ್ಲಿ) ಮಹತ್- ತ್ವ+ ಅತಿಶಯ ಪದದ ಪುರುಷಮೂಲ(ನ) ಪ್ರಕೃತಿಗಳನು+ ಉತ್ತರಿಸಿ ತೊಳತೊಳ ತೊಳಗಿ ಬೆಳಗುವ, ಪರಮ ಶಿವನಲಿ ಸೆಣಸಿದೆವಲಾ ಶಿವಶಿವಾ! ಯೆ+ ಎ೦ದ.
ಅರ್ಥ:ಆದಿಯಾದ 'ಅ'+ ಕಾರನಾಗಿ ಪ್ರಕಾಶಿಸುವ,ಆದಿ ಪುರುಷನು ಆಗಿರುವ, ಅ, ಉ, ಮ, ಕಾರ ಬೀಜಾಕ್ಷರಗಳ ಮುಂದಿನ ಶಬ್ಧಬ್ರಹ್ಮಮಯನಾದ ಓಂಕಾರವೆಂಬ 'ಸೊ'- 'ಹಂ' ಗಳಲ್ಲಿ) ವಿಸ್ತಾರದ 'ಹ೦' ತತ್ವದ, 'ತತ್ತ್ವಮಸಿ'ಯಲ್ಲಿ ಮಹತ್- ಆದ 'ತ್ವಂ' ಎಂಬ ಅತಿಶಯ ಪದದ ಪುರುಷಮೂಲನ ಪ್ರಕೃತಿಗಳನ್ನು ಉತ್ತರಿಸಿ- ದಾಟಿ, ತೊಳತೊಳ ತೊಳಗಿ ಬೆಳಗುವ, ಆ ಪರಮ ಶಿವನಲಿ ಸೆಣಸಿದೆವಲಾ ಶಿವಶಿವಾ! ಎ೦ದ.
ಸರಸಿಜಾಸನ ವಿಷ್ಣು ರುದ್ರೇ
ಶ್ವರ ಸದಾಶಿವರಾವಳೊಬ್ಬಳ
ಚರಣಸೇವಾ ಸ೦ಗದಲ್ಲಿಯೆ ಸುಪ್ರತಿಷ್ಟಿತರು |
ಪರಮ ಶಕ್ತಿಯದಾವನ೦ಘ್ರಿಗೆ
ಶಿರವನೊಡ್ಡಿಹಳಾ ಮಹೋತ್ತಮ
ಪರಮ ಶೀವನಲಿ ಸೆಣಸಿದೆವಲಾ ಶಿವಶಿವಾಯೆ೦ದ || ೬೬||
ಪದವಿಭಾಗ-ಅರ್ಥ:ಸರಸಿಜಾಸನ(ಸರಸಿಜ= ಕಮಲದ ಆಸನವಿಳ್ಳವ- ಬ್ರಹ್ಮ), ವಿಷ್ಣು, ರುದ್ರೇಶ್ವರ, ಸದಾಶಿವರು+ ಆವಳೊಬ್ಬಳ ಚರಣಸೇವಾ(ಚರಣ= ಪಾದ) ಸ೦ಗದಲ್ಲಿಯೆ ಸುಪ್ರತಿಷ್ಟಿತರು, ಸುಪ್ರತಿಷ್ಟಿತರೊ- ನಿರತರಾಗಿರುವರೋ; ಪರಮ ಶಕ್ತಿಯು+ ಅದು ಯಾವನ ಪಾದಕ್ಕೆ ಶಿರವನ್ನು - ತಲೆಯನ್ನು ಒಡ್ಡಿ- ಇಟ್ಟು + ಇಹಳು- ಇರುವಳೋ, ಆ ಮಹೋತ್ತಮ ಪರಮ ಶೀವನಲಿ ಸೆಣಸಿದೆವಲಾ! ಶಿವಶಿವಾ! ಯೆ+ ಎ೦ದ
ಅರ್ಥ:ಬ್ರಹ್ಮ, ವಿಷ್ಣು, ರುದ್ರೇಶ್ವರ, ಸದಾಶಿವರು, ಯಾವಳೊಬ್ಬಳ ಪಾದಸೇವೆಯ ಸ೦ಗದಲ್ಲಿಯೆ ನಿರತರಾಗಿರುವರೋ; ಆ ಪರಮ ಶಕ್ತಿಯು- ಅದು ಯಾವನ ಪಾದಕ್ಕೆ ತಲೆಯನ್ನು ಇಟ್ಟಿರುವಳೋ ಆ ಮಹೋತ್ತಮನಾದ ಪರಮಶೀವನೊಡನೆ ಸೆಣಸಿದೆವಲಾ! ಶಿವಶಿವಾ! ಎ೦ದ.
ಈ ಪರಿಯಲರ್ಜುನ ಮನದನು
ತಾಪವನು ಕಾಣುತ್ತ ಶಾಬರ
ರೂಪ ರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ |
ರೂಪನವ್ಯಾಹತ ನಿಜೋನ್ನತ
ರೂಪ ರಸದಲಿನರನ ಚಿತ್ತದ
ತಾಪವಡಗಲು ತ೦ಪನೆರೆದನು ತರುಣಶಶಿಮೌಳಿ || ೬೭ ||
ಪದವಿಭಾಗ-ಅರ್ಥ:ಈ ಪರಿಯಲಿ+ ಅರ್ಜುನ ಮನದ+ ಅನುತಾಪವನು ಕಾಣುತ್ತ, ಶಾಬರರೂಪ ರಚನೆಯ ತೆರೆಯ ಮರೆಯಲಿ, ಮೆರೆವ ಚಿನ್ಮಯದ ರೂಪನ+ ಅವ್ಯಾಹತ(ಎಡೆಬಿಡದ) ನಿಜ+ ಉನ್ನತರೂಪ ರಸದಲಿ ನರನ ಚಿತ್ತದ(ಅರ್ಜುನನ ಮನಸ್ಸಿನ) ತಾಪವಡಗಲು ತ೦ಪನು+ ಎರೆದನು ತರುಣ ಶಶಿಮೌಳಿ
ಅರ್ಥ:ಈ ರೀತಿಯಲ್ಲಿ ಅರ್ಜುನನು ಮನಸ್ಸಿನ ಅನುತಾಪವನ್ನು ಅನುಭವಿಸುತ್ತಾ, ಬೇಡನರೂಪದ ರಚನೆಯ ತೆರೆಯ ಮರೆಯಲ್ಲಿ, ಮೆರೆಯುತ್ತಿದ್ದ ಚಿನ್ಮಯದ ರೂಪಿ ಶಿವನು ನಿರಂತರವಾಗಿ ತನ್ನ ಉನ್ನತರೂಪ ರಸದಲ್ಲಿ ಅರ್ಜುನನ ಮನಸ್ಸಿನ ತಾಪವು ಅವಡಗುವಂತೆ ತರುಣ ಶಶಿಮೌಳಿ ಶಿವನು ತನ್ನ ರೂಪವನ್ನು ತೊರಿ ತ೦ಪನ್ನು ಎರೆದನು.

ಅರ್ಜುನನಿಗೆ ಶಿವನ ದರ್ಶನ[ಸಂಪಾದಿಸಿ]

ಅರಸ ಕೇಳೈ ನಿಮ್ಮ ಪಾರ್ಥನ
ಪರಮ ಪುಣ್ಯೋದಯವನೀಶನ
ಕರುಣವನು ಶುಕ ಶುನಕ ಸಿದ್ದಾದ್ಯರಿಗಗೋಚರದ |
ನಿರುಪಮಿತ ನಿಜರೂಪವನು ವಿ
ಸ್ತರಿಸಿದನು ವಿವಿಧ ಪ್ರಭಾವೋ
ತ್ಕರದ ನಿರುಗೆಯ ತೋರಿದನು ಸುರಕೋಟಿ ಕೈಮುಗಿಯೆ || ೬೮ ||
ಪದವಿಭಾಗ-ಅರ್ಥ:ಅರಸ ಕೇಳೈ ನಿಮ್ಮ ಪಾರ್ಥನ ಪರಮ ಪುಣ್ಯೋದಯವನು,+ ಈಶನ ಕರುಣವನು, ಶುಕ ಶುನಕ ಸಿದ್ದ+ ಆದ್ಯರಿಗೆ+ ಅಗೋಚರದ(ಕಾಣದ) ನಿರುಪಮಿತ ನಿಜರೂಪವನು ವಿಸ್ತರಿಸಿದನು(ತೋರಿಸಿದನು), ವಿವಿಧ ಪ್ರಭಾವ+ ಉತ್ಕರದ(ರಾಶಿ, ಸಮೂಹವ ) ನಿರುಗೆಯ ತೋರಿದನು ಸುರಕೋಟಿ (ಕೋಟಿ ದೇವತೆಗಳು) ಕೈಮುಗಿಯೆ.
ಅರ್ಥ:ವೈಶಂಪಾಯನ ಮುನಿಯು ಹೇಳಿದ- ಜನಮೇಜಯ ಅರಸನೇ ಕೇಳಯ್ಯಾ,'ನಿಮ್ಮ ಮುತ್ತಜ್ಜ- ಪಾರ್ಥನ ಪರಮ ಪುಣ್ಯೋದಯವನ್ನು, ಅವನ ಮೇಲೆ ಈಶ್ವರನ ಕರುಣವನ್ನು! ಶುಕ ಶುನಕ ಸಿದ್ದರು ಮೊದಲಾದವರಿಗೆ ಕಾಣದ ನಿರುಪಮವಾದ ಶಿವನ ನಿಜರೂಪವನ್ನು ಪರಶಿವನು ಅರ್ಜುನನಿಗೆ ತೋರಿಸಿದನು. ಶಿವನು ತನ್ನ ವಿವಿಧ ಪ್ರಭಾವಗಳ ಬಗೆಬಗೆಯ ನಿರುಗೆಯನ್ನು- ರಹಸ್ಯವನ್ನು ಪಾರ್ಥನಿಗೆ ತೋರಿಸಿದನು. ಆಗ ಆಗಸದಲ್ಲಿ ನೆರೆದಿದ್ದ ಕೋಟಿ ದೇವತೆಗಳು ಪರಶಿವನಿಗೆ ಕೈಮುಗಿದರು.
ಬಲಿದ ಚ೦ದ್ರಿಕೆಯೆರಕವೆನೆ ತಳ
ತಳಿಸಿ ಬೆಳಗುವ ಕಾಯ ಕಾ೦ತಿಯ
ಪುಲಿದೊಗಲ ಕೆ೦ಜೆಡೆಯ ಕೇವಣದಿ೦ದು ಫಣಿಪತಿಯ |
ಹೊಳೆವ ಹರಿಣನ ಅಕ್ಷಮಾಲಾ
ವಲಯಭಯದ ವರದಕರ ಪರಿ
ಕಲಿತನೆಸೆದನು ಶ೦ಭು ಸದ್ಯೋಜಾತ ವಕ್ತ್ರದಲಿ || ೬೯ ||
ಪದವಿಭಾಗ-ಅರ್ಥ:ಬಲಿದ ಚ೦ದ್ರಿಕೆಯ (ಬೆಳುದಿಂಗಳು)+ ಎರಕವೆನೆ ತಳತಳಿಸಿ ಬೆಳಗುವ ಕಾಯ(ದೇಹ), ಕಾ೦ತಿಯ ಪುಲಿದೊಗಲ(ಹುಲಿಯಚರ್ಮವನ್ನು ತೊಟ್ಟಿರುವ), ಕೆ೦ಜೆಡೆಯ (ಕೆಂಪು ಜಟೆ- ತಲೆಕೂದಲು), ಕೇವಣದ(ಜೋಡಿಸಿದ)+ ಇ೦ದು(ಚಂದ್ರ) ಫಣಿಪತಿಯ(ಸರ್ಪದ ಒಡೆಯ- ಧರಿಸಿದ), ಹೊಳೆವ ಹರಿಣನ(ಚಂದ್ರನಲ್ಲಿರುವ ಜಿಂಕೆ) ಅಕ್ಷಮಾಲಾ ವಲಯ(ಜಪಮಾಲೆ)+ ಅಭಯದ ವರದಕರ (ಆಭಯ ಹಸ್ತ), ಪರಿಕಲಿತನು(ಕೂಡಿದವನು)+ ಎಸೆದನು(ಶೋಭಿಸಿದನು) ಶ೦ಭು ಸದ್ಯೋಜಾತ ವಕ್ತ್ರದಲಿ(ವಕ್ತ್ರ- ಮುಖ).
  • ಸದ್ಯೋಜಾತ: 'ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ'ವೆಂಬ ಶಿವನ ಪಂಚಮುಖಗಳಲ್ಲಿ ಒಂದು.
ಅರ್ಥ:ಬೆಳುದಿಂಗಳನ್ನು ಜೋಡಿಸಿದ ಎರಕವೆನ್ನುವಂತೆ ಇರುವ ತಳತಳಿಸಿ ಬೆಳಗುವ ದೇಹ, ಕಾ೦ತಿಯುಕ್ತವಾದ ಹುಲಿಯಚರ್ಮವನ್ನು ತೊಟ್ಟಿರುವ, ಕೆ೦ಜೆಡೆಯ, ತಲೆಯಲ್ಲಿ ಜೋಡಿಸಿದ ಚಂದ್ರ, ಸರ್ಪದ ಒಡೆಯನನ್ನು ಧರಿಸಿದ ಕುತ್ತಿಗೆ, ಹೊಳೆಯುವ ಚಂದ್ರನಲ್ಲಿರುವ ಜಿಂಕೆಯ ಕೊಂಬಿನ ಮಣಿಯ ಜಪಮಾಲೆ, ವರದಕರವಾದ ಆಭಯ ಹಸ್ತ, ಈ ಲಕ್ಷಣಗಳಿಂದ ಕೂಡಿದ ಪರಶಿವನು ಸದ್ಯೋಜಾತವೆಂಬ ಪ್ರಸನ್ನ ಮುಕದಲ್ಲಿ ಅರ್ಜುನನ ಎದುರು ನಿಂತು ಶೋಭಿಸಿದನು.
ಹೊಳೆವ ಕು೦ಕುಮ ಕಾ೦ತಿಯಲಿ ತಳ
ತಳಿಪ ತನು ಗಜಚರ್ಮದುಡುಗೆಯ
ಲಲಿತ ದ೦ತ ಪ್ರಭೆಯ ದರಹಸಿತಾನನಾ೦ಬುಜದ |
ವಿಲಸಿತಾಭಯ ವರದ ಕರ ಪರಿ
ಲುಳಿತ ಪರಶು ದೃಢಾಕ್ಷಮಾಲಾ
ವಳಿಗಳೊಪ್ಪಿರೆ ವಾಮದೇವಾನನದಿ ರ೦ಜಿಸಿದ || ೭೦ ||
ಪದವಿಭಾಗ-ಅರ್ಥ:ಹೊಳೆವ ಕು೦ಕುಮ ಕಾ೦ತಿಯಲಿ ತಳತಳಿಪ ತನು ಗಜಚರ್ಮದ+ ಉಡುಗೆಯ ಲಲಿತ ದ೦ತ(ಹಲ್ಲು) ಪ್ರಭೆಯ ದರಹಸಿತ+ ಆನನಾ೦ಬುಜದ(ಮುಖಕಮಲದ) ವಿಲಸಿತ (ಪ್ರಫುಲ್ಲಿತ)+ ಅಭಯ ವರದ ಕರ, ಪರಿಲುಳಿತ(ಅಲುಗಾಡಿದ,ಕಂಪಿಸಿದ) ಪರಶು ದೃಢ+ ಅಕ್ಷಮಾಲಾವಳಿಗಳು+ ಒಪ್ಪಿರೆ ವಾಮದೇವ+ ಆನನದಿ ರ೦ಜಿಸಿದ.
ಅರ್ಥ:ನಂತರ ಶಿವನು ಹೊಳೆಯುವ ಕು೦ಕುಮ ಕಾ೦ತಿಯಲ್ಲಿ. ತಳತಳಿಸುವ ದೇಹದೊಡನೆ ಗಜಚರ್ಮದ ಉಡುಗೆಯನ್ನು ತೊಟ್ಟುದ ಲಲಿತ- ಅಂದದ ದ೦ತ ಪ್ರಭೆಯೊಡನೆ ಮುಗುಳುನಗೆಯ ಅರಳಿದಕಮಲದಂತಿರುವ ಮುಖದೊಡನೆ ಸುಂದರ ಅಭಯವರದ ಹಸ್ತದೊಡನೆ, ಕಂಪಿಸುವ ಅಕ್ಷಮಾಲೆಗಳೊಡನೆ ದೃಢವಾದ ಪರಶುಹಸ್ತದೊಂದಿಗೆ ಒಪ್ಪಿರಲು ವಾಮದೇವ ಮುಖವನ್ನು ಹೊಂದಿ ರ೦ಜಿಸಿದ- ಶೋಭಿಸಿದ.
ಕಾಳಮೇಘ ಸುವರ್ಣದುರು ದ೦
ಷ್ಟ್ರಾಳಿ ಭೀಷಣದಮಳ ಜಪಮಣಿ
ಮಾಲಿಕೆಯ ಸುತಿ ಮುಖದ ಪಾಶಾ೦ಕುಶದ ಡಮರುಗದ |
ಶೂಲ ಘನ ಖಟ್ವಾ೦ಗ ದ್ರುಹಿಣ ಕ
ಪಾಲ ಫಣಿವಲಯದ ಕರೋಟೀ
ಮಾಲೆಯಿ೦ದ ಮಹೋಗ್ರನೆಸೆದನಘೋರ ವಕ್ತ್ರದಲಿ || ೭೧ ||
ಪದವಿಭಾಗ-ಅರ್ಥ:ಕಾಳಮೇಘ ಸುವರ್ಣದ+ ಉರು(ದೊಡ್ಡ) ದ೦ಷ್ಟ್ರಾಳಿ(ಕೋರೆ ಹಲ್ಲುಗಳು) ಭೀಷಣದ(ಭೀಕರವಾದ)+ ಅಮಳ(ಶ್ರೇಷ್ಠ) ಜಪಮಣಿಮಾಲಿಕೆಯ, ಸುತಿ ಮುಖದ(ಶ್ರುತಿ, ಉಗ್ರಮುಖದ) ಪಾಶ+ ಅ೦ಕುಶದ, ಡಮರುಗದ, ಶೂಲ, ಘನ, ಖಟ್ವಾ೦ಗ (ತಲೆಬುರುಡೆಯನ್ನು ಸಿಕ್ಕಿಸಿರುವ ದಂಡ) ದ್ರುಹಿಣ ಕಪಾಲ ಫಣಿವಲಯದ ಕರೋಟೀಮಾಲೆಯಿ೦ದ(ತಲೆಬುರುಡೆ) ಮಹೋಗ್ರನು+ ಎಸೆದನು+ ಅಘೋರ ವಕ್ತ್ರದಲಿ(ಮುಖದಲ್ಲಿ)
ಅರ್ಥ:ನಂತರ ಶಿವನು ಕಾಳಮೇಘದಂತೆ ಕಪ್ಪಬಣ್ಣದ ಸುವರ್ಣದಂತೆ ಕೆಂಪಾದ ದೊಡ್ಡಕೋರೆ ಹಲ್ಲುಗಳುಳ್ಳ, ಭೀಕರವಾದ, ಶ್ರೇಷ್ಠ ಜಪಮಣಿಮಾಲಿಕೆಯನ್ನು ಧರಿಸಿದ, ಶ್ರುತಿಯನ್ನು ಹೇಳುವ ಉಗ್ರಮುಖದ, ಪಾಶ, ಅ೦ಕುಶದ, ಡಮರುಗವನ್ನು ಹಿಡಿದ, ಶೂಲ, ಘನವಾದ ಖಟ್ವಾ೦ಗವೆಂಬ ತಲೆಬುರುಡೆಯನ್ನು ಸಿಕ್ಕಿಸಿರುವ ದಂಡ ಹಿಡಿದ, ದ್ರುಹಿಣ. ಕಪಾಲ, ಸರ್ಪವಲಯದ ತಲೆಬುರುಡೆ ಪೋಣಿಸಿದ ಕರೋಟೀಮಾಲೆಹಾಕಿದಮ, ಮಹೋಗ್ರನಾದ ಅಘೋರವೆಂಬ ಮುಖದಲ್ಲಿ ಶೋಭಿಸಿದನು
ಪರಶು ಡಮರುಗ ಖಡ್ಗ ಖೇಟಕ
ಶರ ಧನುಃ ಶೂಲದ ಕಪಾಲದ
ಕರದ ರಕ್ತಾ೦ಬರದ ಫಣಿಪನ ಭೋಗ ಭೂಷಣದ |
ಸ್ಪುರದ ಘೋರದ ಭೇಢದಭಯದ
ಕರದ ಪರಶು ಮೃಗ೦ಗಳಲಿ ತ
ತ್ಪುರಷ ಮುಖದಲಿ ಮೆರೆದನೆರಕದ ಮಿ೦ಚಿನ೦ದದಲಿ || ೭೨ ||
ಪದವಿಭಾಗ-ಅರ್ಥ:ಪರಶು ಡಮರುಗ ಖಡ್ಗ ಖೇಟಕ ಶರ ಧನುಃ ಶೂಲದ ಕಪಾಲದ ಕರದ, ರಕ್ತಾ೦ಬರದ(ಕೆಂಪು ಬಟ್ಟೆಯನ್ನು ಉಟ್ಟು) ಫಣಿಪನ(ಸರ್ಪ) ಭೋಗ ಭೂಷಣದ (ಅಲಂಕಾರದ ಒಡವೆ) ಸ್ಪುರದ(ಪ್ರಕಾಶಿಸುವ, ಹೊಳೆಯುವ) ಘೋರದ ಭೇಢದ ಭಯದಕರದ ಪರಶು ಮೃಗ೦ಗಳಲಿ ತತ್ಪುರಷ ಮುಖದಲಿ ಮೆರೆದನು+ ಎರಕದ ಮಿ೦ಚಿನ೦ದದಲಿ
ಅರ್ಥ:ಅರ್ಜುನನಿಗೆ ಶಿವನು ತನ್ನ ತತ್ಪುರಷ ರೂಪವನ್ನು ತೋರಿಸಿದನು. ಅವನು ಕೈಯಲ್ಲಿ ಪರಶು, ಡಮರುಗ, ಖಡ್ಗ, ಖೇಟಕವೆಂಬ ಗುರಾಣಿ, ಬಾಣ, ಧನುಃ- ಬಿಲ್ಲು, ಶೂಲ, ಕಪಾಲ, ಇವುಗಳನ್ನು ಕೈಗಳಲ್ಲಿ ಹಿಡಿದ, ಕೆಂಪು ಬಟ್ಟೆಯನ್ನು ಉಟ್ಟ ಸರ್ಪವನ್ನು ಭೋಗಭೂಷಣವಾಗಿ ಧರಿಸಿ, ಪ್ರಕಾಶಿಸುವ ಘೋರ ರೂಪದ ಬೇಧದ ಭಯದರೂಪವನ್ನು ಹೊಂದಿ, ಪರಶುಮೃಗ೦ಗಳೋಡನೆ ತತ್ಪುರಷ ಮುಖದಲ್ಲಿ ಎರಕದ ಮಿ೦ಚಿನ೦ತೆ ಮೆರೆದನು- ಶೋಭಿಸಿದನು.
ಎಳೆಯ ಮುತ್ತಿನ ಢಾಳವನು ಮು
ಕ್ಕುಳಿಸಿ ದ೦ಗಚ್ಚವಿಯ ಭಯವರ
ಲುಳಿತ ಜಪಮಣಿ ವೇದ ಪಾಶಾ೦ಕುಶದ ಡಮರುಗದ |
ಲಲಿತ ಖಟ್ವಾ೦ಗದ ಕಪಾಲದ
ಹೊಳೆವ ಶೂಲದ ಕರದ ನಿಗಮಾ
ವಳಿ ಶೀರೋಮಣಿ ಮೆರೆದನ೦ದೀಶಾನ ವಕ್ತ್ರದಲಿ || ೭೩ ||
ಪದವಿಭಾಗ-ಅರ್ಥ:ಎಳೆಯ ಮುತ್ತಿನ ಕಾಂತಿಯನ್ನು ಹೊಂದಿ, ಮುಕ್ಕುಳಿಸಿದ- ತೊಳೆದ ಅ೦ಗಚ್ಚವಿಯ(ಅಂಗ= ದೇಹ; ಚವಿ= ಕಾಂತಿ)+ ಅಭಯವರ ಲುಳಿತ(ಕಂಪಿಸಿದ) ಜಪಮಣಿ ವೇದ ಪಾಶ+ ಅ೦ಕುಶದ ಡಮರುಗದ, ಲಲಿತ ಖಟ್ವಾ೦ಗದ (ತಲೆಬುರುಡೆಯ ಗದೆ), ಕಪಾಲದ ಹೊಳೆವ ಶೂಲದ, ಕರದ ನಿಗಮಾವಳಿ(ವೇದಗಳು) ಶೀರೋಮಣಿ ಮೆರೆದನು+ ಅ೦ದು+ ಈಶಾನ ವಕ್ತ್ರದಲಿ(ಮುಖ)
ಅರ್ಥ:ಶಿವನು ತನ್ನ ಈಶಾನ ರೋಪವನ್ನು ತೊರಿಸುತ್ತಾನೆ. "ಎಳೆಯ ಮುತ್ತಿನ ಕಾಂತಿಯನ್ನು ಹೊಂದಿ, ತೊಳೆದ ಪರಿಶುದ್ಧ ದೇಹದಕಾಂತಿಯಿಂದ, ಅಭಯ ವರದಹಸ್ತ ಮತ್ತು ಜೋಲಾಡುತ್ತಿರುವ ಜಪಮಣಿಯೊಂದಿಗೆ, ವೇದಗಳನ್ನೂ, ಪಾಶ ಮತ್ತು ಅ೦ಕುಶಗಳನ್ನೂ ಡಮರುಗವನ್ನೂ, ಸುಂದರ ಖಟ್ವಾ೦ಗವೆಂಬ ತಲೆಬುರುಡೆಯ ಗದೆಯನ್ನೂ, ಕಪಾಲವನ್ನು ಕೈಯಲ್ಲಿ ಹಿಡಿದವನೂ ಆದ, ಹೊಳೆವ ಶೂಲವನ್ನು ಹಿಡಿದ, ಕೈಯಲ್ಲಿ ವೇದಗಳ ಗ್ರಂಥವನ್ನು ಹಿಡಿದ, ಶೀರೋಮಣಿಯಾದ ಶಿವನು ಅ೦ದು ತನ್ನ ಈಶಾನ ಮುಖವನ್ನು ಹೊಂದಿ ಮೆರೆದನು.
ಬೇರೆ ಬೇರುರಿಗಣ್ಣುಗಳ
ಫೂತ್ಕಾರದಹಿ ಭ೦ದದ ಜಟಾ ಕೋ
ಟೀರ ಭಾರದ ಮುಖ ಚತುಷ್ಟಯ ಭುಜ ಚತುಷ್ಟಯದ |
ವಾರಿಜಾಸನ ವಿಷ್ಣು ರುದ್ರಾ
ಧಾರನೀಶ್ವರ ಪ೦ಚ ವಕ್ತ್ರಾ
ಕಾರದಲಿ ಶಿವಮೆರೆದ ಪ೦ಚಬ್ರಹ್ಮ ರೂಪದಲಿ || ೭೪ ||
ಪದವಿಭಾಗ-ಅರ್ಥ:ಬೇರೆ ಬೇರೆ+ ಉರಿಗಣ್ಣುಗಳ, ಫೂತ್ಕಾರದ+ ಅಹಿ ಭ೦ದದ, ಜಟಾ ಕೋಟೀರ ಭಾರದ, ಮುಖ ಚತುಷ್ಟಯ, ಭುಜ ಚತುಷ್ಟಯದ, ವಾರಿಜಾಸನ ವಿಷ್ಣು ರುದ್ರ+ ಆಧಾರನು+ ಈಶ್ವರ ಪ೦ಚ ವಕ್ತ್ರಾಕಾರದಲಿ ಶಿವ ಮೆರೆದ ಪ೦ಚಬ್ರಹ್ಮ ರೂಪದಲಿ.
ಅರ್ಥ:ಕೊನೆಯಲ್ಲಿ ತನ್ನ ಪ೦ಚಬ್ರಹ್ಮ ರೂಪವನ್ನು ತೋರುತ್ತಾನೆ. ಶಿವನು ಐದು ಮುಖಗಳನ್ನು ಹೊಂದಿ, ಅದರಲ್ಲಿ ಬೇರೆ ಬೇರೆ ಉರಿಗಣ್ಣುಗಳು, ಕುತ್ತಿಗೆಯಲ್ಲಿ ಫೂತ್ಕರಿಸುವ ಸರ್ಪ ಸುತ್ತುವರಿದ ಭ೦ದ, ಕೋಟಿ ಕೋಟಿ ಜಟೆಗಳ ಭಾರವನ್ನು ಹೊಂದಿದ ತಲೆಗಳು,ಎದುರಿನಲ್ಲಿ ಮುಖ ಚತುಷ್ಟಯ- ನಾಲ್ಕು ಮುಖ, ನಾಲ್ಕು ಭುಜದ, ವಾರಿಜಾಸನನಾದ ಬ್ರಹ್ಮನ ರೂಪ, ಮತ್ತೆ ವಿಷ್ಣು ರುದ್ರರಿಗೆ ಆಧಾರನು; ಈಶ್ವರನು, ಪ೦ಚವಕ್ತ್ರಾಕಾರದಲಿ- ಐದು ಮುಖದ ರೂಪದಲ್ಲಿ- ಪ೦ಚಬ್ರಹ್ಮ ರೂಪದಲ್ಲಿ, ಶಿವನು ಮೆರೆದನು.
ಶ್ರುತಿಗಳುಪನಿಷದಾದ ಖಿಳ ದೇ
ವತೆಯರಾಕಲ್ಪಿತ ಕಿರಾತಾ
ಕೃತಿಯನುಳಿದರು ಸುಳಿದರೀತನ ಸುತ್ತುವಳಯದಲಿ |
ಸ್ಮಿತ ಮಧುರ ಮುಖಕಾ೦ತಿ ಕಲ್ಲೋ
ಲಿತ ಕಟಾಕ್ಷಚ್ಛವಿಯಲೀಶನ
ಧೃತಿಯಲೀಡಿರಿದೆಡದಲೆಸೆದರು ಗೌರಿದೇವಿಯರು ೭೫
ಪದವಿಭಾಗ-ಅರ್ಥ:ಶ್ರುತಿಗಳು(ವೇದಗಳು)+ ಉಪನಿಷದ್+ ಆದಿ+ ಅಖಳ ದೇವತೆಯರಾ ಕಲ್ಪಿತ ಕಿರಾತಾ+ ಆಕೃತಿಯನು+ ಉಳಿದರು ಸುಳಿದರು+ ಈತನ ಸುತ್ತುವಳಯದಲಿ; ಸ್ಮಿತ(ಮುಗುಳುನಗೆಯ) ಮಧುರ ಮುಖಕಾ೦ತಿ, ಕಲ್ಲೋಲಿತ(ಅಲೆಯ) ಕಟಾಕ್ಷಚ್ಛವಿಯಲಿ(ಕಣ್ಣಿನ ನೋಟದಲ್ಲಿ)+ ಈಶನಧೃತಿಯಲಿ+ ಈಡಿರಿದು(ಸಮೀಪದಲ್ಲಿ)+ ಎಡದಲಿ+ ಎಸೆದರು ಗೌರಿದೇವಿಯರು
ಅರ್ಥ:ಶ್ರುತಿಗಳು, ಉಪನಿಷದ್‍ಗಳು ಮೊದಲಾದ ಅಖಿಲ ದೇವತೆಯರು, ಆ ಕಲ್ಪಿತ ಕಿರಾತರು ತಮ್ಮ ಘೋರ ಆಕೃತಿಯನ್ನು ಬಿಟ್ಟು ಸೌಮ್ಯರಾಗಿ ಈತನ ಸುತ್ತುವಲಯದಲ್ಲಿ ಸುಳಿದರು; ಸ್ಮಿತ, ಮಧುರ ಮುಖಕಾ೦ತಿ, ಶಂತ ಕಡೆಗಣ್ಣಿನ ನೋಟದ ಅಲೆಯಲಲ್ಲಿ ಶಿವನು ಈಶಾನನ ಧೀರತನದಲ್ಲಿ ಕಾಣಿಸಿಕೊಂಡನು. ಅವನ ಎಡದಲ್ಲಿ ಗೌರಿದೇವಿಯರು ಸಮೀಪವೇ ಇದ್ದು ಶೋಭಿಸಿದರು.
ಸನಕ ನಾರದ ಬೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಟ ಸನತ್ಕುಮಾರನು ಕಣ್ವನುಪಮನ್ಯು |
ವನಕೆ ಬ೦ದರು ಪಾರ್ಥ ಕೇಳಿದು
ನಿನಗೆ ಸಿದ್ದಿ ಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನ೦ಗ್ರಿಯಲಿ ಮುನಿನಿಕರ || ೭೬ ||
ಪದವಿಭಾಗ-ಅರ್ಥ:ಸನಕ, ನಾರದ, ಬೃಗು, ಪರಾಶರತನುಜ(ವ್ಯಾಸ), ಭಾರದ್ವಾಜ, ಗೌತಮಮುನಿ, ವಸಿಷ್ಟ, ಸನತ್ಕುಮಾರನು, ಕಣ್ವನು,+ ಉಪಮನ್ಯು ವನಕೆ ಬ೦ದರು; ಪಾರ್ಥ ಕೇಳು+ ಇದು ನಿನಗೆ ಸಿದ್ದಿ ಗಡ!+ ಎಮಗೆ ಲೇಸಾಯ್ತು+ ಎನುತ ಮೈಯಿಕ್ಕಿದುದು ಹರನ+ ಅ೦ಗ್ರಿಯಲಿ ಮುನಿನಿಕರ.
ಅರ್ಥ:ಶಿವನು ಪ್ರತ್ಯಕ್ಷನಾಗಲು, ಸನಕ, ನಾರದ, ಬೃಗು, ಪರಾಶರತನುಜ(ವ್ಯಾಸ), ಭಾರದ್ವಾಜ, ಗೌತಮಮುನಿ, ವಸಿಷ್ಟ, ಸನತ್ಕುಮಾರನು, ಕಣ್ವನು, ಉಪಮನ್ಯು ಇವರೆಲ್ಲಾ ಆ ವನಕ್ಕೆ ಬ೦ದರು; ಅವರು ಹೇಳಿದರು,' ಪಾರ್ಥನೇ ಕೇಳು, ಇದು ನಿನಗೆ ಸಿದ್ದಿ ಗಡ! ನಮಗೆ ಶಿವದರ್ಶನ ಲಬಿಸಿ ಲೇಸಾಯ್ತು- ಒಳಿತಾಯಿತು,' ಎನುತ್ತಾ ಹರನ ಪಾದಗಳಿಗೆ ಮುನಿಗಳ ಸಮೂಹ ಅಡ್ಡಬಿದ್ದು ನಮಿಸಿದರು.
ಜಯ ಜಯೆ೦ದುದು ನಿಖಿಳ ಜಗವ
ಕ್ಷಯನ ದರುಶನಕೆ೦ದು ಸುತಿ ಕೋ
ಟಿಯ ಗಡಾವಣೆ ಗಾಸಿಯಾದುದು ಹರನ ಗಲ್ಲಣೆಗೆ |
ನಿಯತವೇನೋ ಜನ್ಮ ಶತ ಸ೦
ಚಯದೊಳರರೆ ಕೃತಾರ್ಥನರ್ಜುನ
ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ || ೭೭ ||
ಪದವಿಭಾಗ-ಅರ್ಥ:ಜಯ ಜಯ+ ಎ೦ದುದು ನಿಖಿಳ ಜಗವಕ್ಷಯನ(ಸಂಹಾರ- ಲಯಕರ್ತನ) ದರುಶನಕೆ+ ಎ೦ದು ಸುತಿ ಕೋಟಿಯ ಗಡಾವಣೆ(ಶ್ರುತಿ- ವೇದಗಳ ಸಮೂಹ) ಗಾಸಿಯಾದುದು(ಅನಗತ್ಯವಾಯಿತು) ಹರನ ಗಲ್ಲಣೆಗೆ(ಹೊಡೆತಕ್ಕೆ) ನಿಯತವೇನೋ ಜನ್ಮ ಶತ ಸ೦ಚಯದೊಳು(ನೂರುಜನ್ಮ ಒಟ್ಟು ಸೇರಿಸಿದರೂ,)+ ಅರರೆ ಕೃತಾರ್ಥನು ಅರ್ಜುನ, ಜಯವೆನಲು ಮೊಳಗಿದವು ಭೇರಿಗಳು+ ಅಮರ ಕಟಕದಲಿ(ದೇವತೆಗಳ ಸಮೂಹ).
ಅರ್ಥ:ನಿಖಿಲ-ಎಲ್ಲಾ ಜಗದ ಲಯಕರ್ತನಾದ ಹರನ ದರುಶನದ ಹೊಡೆತಕ್ಕೆ ನಿಯತವೇನೋ ಎನ್ನವಂತೆ ಶತಜನ್ಮ ಸ೦ಚಯದಲ್ಲಿ, ಶ್ರುತಿ- ವೇದಗಳ ಕೋಟಿಯ ಸಮೂಹ ಗಾಸಿಯಾಗಿ ಅನಗತ್ಯವಾಯಿತು. ಆಕಾಶದಲ್ಲಿ ದೇವತೆಗಳ ಸಮೂಹ ಅರರೆ! ಕೃತಾರ್ಥನು ಅರ್ಜುನನು; ಜಯ ಜಯ! ಎ೦ದುದು. ಅರ್ಜುನನಿಗೆ ಜಯವೆನ್ನಲು, ಭೇರಿಗಳು ಮೊಳಗಿದವು.

ಹರನಲ್ಲಿ ಅರ್ಜುನನ ಕ್ಷಮಾಭಿಕ್ಷೆ[ಸಂಪಾದಿಸಿ]

ಬಿಟ್ಟ ಸೂಟಿಯೊಳೆದ್ದು ಹರುಷಕೆ
ಕೊಟ್ಟು ಮನವನು ನೋಡುತಿರ್ದನು
ನಟ್ಟ ದೄಷ್ಟಿಯೊಳಗುವ ಜಲದಲಿ ರೋಮ ಪುಳಕದಲಿ |
ಬಿಟ್ಟುಹಿಡಿದನು ಹರನ ಕಾಣದೆ
ತೊಟ್ಟ ಜಗೆಗಳ ರೋಮ ಹರುಷದ
ಲಿಟ್ಟೆಡೆಯ ಮೈದವಕದರ್ಜುನ ನಿ೦ದು ಬೆರಗಾದ || ೭೮ ||
ಪದವಿಭಾಗ-ಅರ್ಥ:ಬಿಟ್ಟ ಸೂಟಿಯೊಳು(ರಭಸ, ಲವಲವಿಕೆ)+ ಎದ್ದು ಹರುಷಕೆ ಕೊಟ್ಟು ಮನವನು, ನೋಡುತಿರ್ದನು ನಟ್ಟ ದೄಷ್ಟಿಯೊಳು+ ಉಗುವ ಜಲದಲಿ ರೋಮ ಪುಳಕದಲಿ. ಬಿಟ್ಟು ಹಿಡಿದನು ಹರನ ಕಾಣದೆ ತೊಟ್ಟ ಜಗೆಗಳ(ಜಗಳ- ಹಟ) ರೋಮ ಹರುಷದಲಿ+ ಇಟ್ಟ+ ಎಡೆಯ ಮೈ+ದ+ ತವಕದ+ ಅರ್ಜುನ ನಿ೦ದು ಬೆರಗಾದ.
ಅರ್ಥ:ಅಯ್ಯೋ ಶಿವನೊಡನೆ ಹೊಡೆದಾಡಿದೆನಲ್ಲಾ ಎಂಬ ನೋವಿನ ಜಡತೆಯನ್ನು ಬಿಟ್ಟು ರಭಸದಿಂದ ಕೂಡಲೆ ಎದ್ದು ಹರ್ಷಭಾವನೆಗೆ ಮನಸ್ಸನ್ನು ಒಪ್ಪಿಸಿಬಿಟ್ಟನು. ಶಿವನನ್ನೇ ನಟ್ಟ ದೄಷ್ಟಿಯಲ್ಲಿ ನೋಡುತ್ತಿದ್ದನು. ಕಣ್ಣುಗಳಿಂದ ಹರ್ಷದಕಾರಣ ಉಕ್ಕುವ ನೀರಿನಲ್ಲಿ, ರೋಮ ಪುಳಕದಲ್ಲಿ ನಿಂತಿದ್ದನು. ಬಿಟ್ಟು ಹಿಡಿದನು ಹರನ ಕಾಣದೆ ತೊಟ್ಟ ಜಗೆಗಳ(ಜಗಳ- ಹಟ) ರೋಮ ಹರುಷದಲಿ+ ಇಟ್ಟ+ ಎಡೆಯ ಮೈ+ದ+ ತವಕದ+ ಅರ್ಜುನ ನಿ೦ದು ಬೆರಗಾದ.
ಹರಹಿನಲಿ ಹೊದರೆದ್ದು ಹರುಷದ
ಹೊರಳಿಯಲಿ ಹೊಡಕರಿಸಿ ಚಿತ್ತವ
ತಿರುಹಿ ಹಿಡಿದನು ಮನಕೆ ಬುದ್ಧಿಯ ಹಮ್ಮು ಹಮ್ಮುಗೆಯ|
ಕೊರಳುಗೊಳಿಸಿ ಕುಲಾಲ ಚಕ್ರದ
ಪರಿಬವಣಿಗೆಯ ಪಾಡಿನಲಿ ಕಾ
ತರಿಸುತವನಿಗೆ ಮೈಯನಿತ್ತನು ನೀಡಿ ಭುಜಯುಗವ ೭೯
ಪದವಿಭಾಗ-ಅರ್ಥ:ಹರಹುನಲಿ(ಹರಹು= ವ್ಯಾಪಿಸು,ಹಬ್ಬು, ಹೆದರಿಕೊಂಡಿರು, ಅಸ್ತವ್ಯಸ್ತವಾಗು) ಹೊದರೆದ್ದು(ಹೊದರು= ಪೊದೆ, ಮೆಳೆ,ಕುತ್ತುರು,ತೋಪು) ಹರುಷದ ಹೊರಳಿಯಲಿ (ಆಧಿಕ್ಯ, ಹೆಚ್ಚಳ) ಹೊಡಕರಿಸಿ(ಹೊಡಕರಿಸು- ತಲೆದೋರು,ತೋಚು,ಕಾಣು,) ಚಿತ್ತವ ತಿರುಹಿ ಹಿಡಿದನು(ಮನಸ್ಸನ್ನು ಹತೋಟಿಗೆ ತಂದನು) ಮನಕೆ ಬುದ್ಧಿಯ ಹಮ್ಮು ಹಮ್ಮುಗೆಯ, ಕೊರಳುಗೊಳಿಸಿ(ಹೋರಿಯ ಕೊರಳಿಗೆ ಹಗ್ಗ ಹಾಕುವಂತೆ, ) ಕುಲಾಲ(ಕುಂಬಾರ) ಚಕ್ರದ ಪರಿಬವಣಿಗೆಯ ಪಾಡಿನಲಿ(ರೀತಿಯಲ್ಲಿ) ಕಾತರಿಸುತ+ ಅವನಿಗೆ ಮೈಯನಿತ್ತನು ನೀಡಿ ಭುಜಯುಗವ(ಎರಡೂ ತೋಳುಗಳನ್ನು)
ಅರ್ಥ:ಅರ್ಜುನನ ಮೈತುಂಬಾ ಬಯಲಲ್ಲಿ ಮುಳ್ಲಿನ ಗಿಡಬೆಳೆಯುವಂತೆ ರೋಮಾಚನವಾಯಿತು. ಹರುಷದ ಉಕ್ಕೇರುವಿಕೆಯಲ್ಲಿ ಕುಸಿದ ಮನಸ್ಸನ್ನು ತಿರುವಿ ಚಿತ್ತವನ್ನು ಹತೋಟಿಗೆ ತಂದನು. ಮನಸ್ಸಿಗೆ ಬುದ್ಧಿಯ ಹಮ್ಮು- ಅಹಂಕಾರದ ಹಮ್ಮುಗೆಯ- ಸೊಕ್ಕನ್ನು, ಕುಂಬಾರನು ಚಕ್ರವನ್ನು ಪರಿಶ್ರಮದಿಂದ ಹಿಡಿಯುವ ರೀತಿಯಲ್ಲಿ, ಸೊಕ್ಕನ್ನು ಹಿಡಿತಕ್ಕೆ ತಂದು ಶಿವನ ಕರುಣೆಗೆ ಕಾತರಿಸುತ್ತಾ ನೆಲಕ್ಕೆ ಮೈಯನ್ನು ಚಾಚಿ, ತನ್ನ ಎರಡೂ ತೋಳುಗಳನ್ನು ಮುಂದಕ್ಕೆ ನೀಡಿ ಕೈಮುಗಿದನು.
ಕ್ಷಮಿಸುವುದು ಸರ್ವೇಶ ಸರ್ವೋ
ತ್ತಮ ವೃಥಾ ಸುಭಟಾಭಿಮಾನ
ಭ್ರಮಿತನನು ಮೋಹಾ೦ದಕೂಪ ಜಲಾವಗಾಹದಲಿ |
ಸ್ತಿಮಿತನನು ದುರ್ಭೊಧವೇದ
ಭ್ರಮಿತನನು ಕಲ್ಯಾಣಪದ ನಿ
ರ್ಗಮಿತನನು ಕಾರುಣ್ಯನಿಧಿ ಕೈಗಾಯ ಬೇಕೆ೦ದ || ೮೦ ||
ಪದವಿಭಾಗ-ಅರ್ಥ:ಕ್ಷಮಿಸುವುದು ಸರ್ವೇಶ ಸರ್ವೋತ್ತಮ ವೃಥಾ ಸುಭಟಾಭಿಮಾನ ಭ್ರಮಿತನನು ಮೋಹಾ೦ದಕೂಪ ಜಲ+ ಅವಗಾಹದಲಿ(ಮುಳುಗಿ ಸ್ನಾನ ಮಾಡುವುದು, ನೀರಿನ ದೋಣಿ, ಆಳ, ಮಗ್ನವಾಗಿರುವಿಕೆ) ಸ್ತಿಮಿತನನು ದುರ್ಭೊಧವೇದ ಭ್ರಮಿತನನು ಕಲ್ಯಾಣಪದ ನಿರ್ಗಮಿತನನು(ಹಿಂತಿರುಗಿದವನು) ಕಾರುಣ್ಯನಿಧಿ ಕೈಗಾಯಬೇಕು (ಕೈಹಿಡಿದು ಕಾಪಾಡಬೇಕು; ಮುಳುಗುವವನನ್ನು ಕೈಹಿಡಿದು ಎತ್ತಿದಂತೆ)+ ಎ೦ದ.
ಅರ್ಥ:ಅರ್ಜುನನು ಶಿವನಿಗೆ ಅಡ್ಡಬಿದ್ದು, ಕೈಮುಗಿದುಕೊಂಡು,'ಶಿವನೇ ನನ್ನನ್ನು ಕ್ಷಮಿಸುವುದು- ಕ್ಷಮಿಸಬೇಕು! ಸರ್ವೇಶ, ಸರ್ವೋತ್ತಮ, ನಾನು ವೃಥಾ ಸುಭಟಾಭಿಮಾನ ಭ್ರಮಿತನನು ಮೋಹಾ೦ದಕೂಪ ಜಲ+ ಅವಗಾಹದಲಿ(ಮುಳುಗಿ ಸ್ನಾನ ಮಾಡುವುದು, ನೀರಿನ ದೋಣಿ, ಆಳ, ಮಗ್ನವಾಗಿರುವಿಕೆ) ಸ್ತಿಮಿತನನು ವೇದದ ದುರ್ಭೊಧೆಯಿಂದ ಭ್ರಮಿತನಮತೆ ವರ್ತಿಸಿದೆ; ಕಲ್ಯಾಣಪದದ ದಾರಿಯಿಂದ ಹಿಂತಿರುಗಿದವನು, ಕ್ಷಮಿಸುವುದು! ಕಾರುಣ್ಯನಿಧಿ ಕೈಗಾಯಬೇಕು,' ಎ೦ದ.
ಅರಿವರಿದು ಮತಿಗೆಟ್ಟ ಮಾನವ
ಕುರಿಯಲಾ ನೆರೆ ಕ೦ಡು ಕ೦ಡೆ
ಚ್ಚರದ ಖೂಳನಲಾ ವಿವೇಕದ ಮೂಗು ಮಾರಿಯಲಾ |
ಬರಿಮನದ ಬಾಹಿರನೊಳೆನ್ನಲಿ
ಮರೆವುದಪರಾಧವನು ನಿನ್ನನೆ
ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆ೦ದ || ೮೧ ||
ಪದವಿಭಾಗ-ಅರ್ಥ:ಅರಿವ(ಅರಿವು- ಬುದ್ಧಿ; ಬುದ್ಧಿಯನ್ನು)+ ಅರಿದು(ಕತ್ತರಿಸಿ) ಮತಿಗೆಟ್ಟ ಮಾನವ ಕುರಿಯಲಾ! ನೆರೆ ಕ೦ಡು ಕ೦ಡು+ ಎಚ್ಚರದ ಖೂಳನಲಾ! ವಿವೇಕದ ಮೂಗು ಮಾರಿಯಲಾ(ಮೂಗು ಮಾರಿ, ಕೂಗು ಮಾರಿ, ರಾತ್ರಿ ಕೂಗುವ ಕೆಡುಕಿ ದೇವತೆ, ಇವನು ತನಗೇ ಕೆಡುಕುಮಾಡಿಕೊಂಡ ಮೂಕಳಾದ ಮಾರಿಯಂತೆ)! ಬರಿಮನದ(ಮನದ ಕೊಡ ಬರಿದಾಗಿದೆ; ಖಾಲಿ ಮನಸ್ಸಿನ) ಬಾಹಿರನೊಳು+ ಎನ್ನಲಿ ಮರೆವುದು+ ಅಪರಾಧವನು; ನಿನ್ನನೆ ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆ೦ದ.
ಅರ್ಥ:ಅರ್ಜುನನು ದೀನನಾಗಿ, 'ತಾನು ಬುದ್ಧಿಯನ್ನು ಕಡಿದುಹಾಕಿದ ಬುದ್ಧಿಗೆಟ್ಟ ಮಾನವ ಕುರಿಯಲಾ! ಚೆನ್ನಾಗಿ ಕ೦ಡೂ ಕ೦ಡು, ಎಚ್ಚರದಲ್ಲಿ ತಪ್ಪುಮಾಡಿದ ಖೂಳನಲಾ! ವಿವೇಕದ ಮೂಗು ಮಾರಿಯಲಾ! ವಿವೇಕವಿಲ್ಲದ ಬರಿಮನದ ಬಾಹಿರನಾಗ- ಅಯೋಗ್ಯನಾದ ತನ್ನಲ್ಲಿ ಕೃಪೆಇಟ್ಟು ಅಪರಾಧವನ್ನು ಮರೆಯುವುದು. ಈ ಕ್ಷಮೆ ನಿನ್ನನ್ನೇ ಮೆರೆವುದೈ- ಶ್ರೇಷ್ಠನನ್ನಾಗಿ ಮಾಡುವುದು. ಕಾರುಣ್ಯನಿಧಿ ಪರಶಿವನೇ ಕೈಗಾಯಬೇಕು,' ಎ೦ದ.
ದೇವದೇವ ಕೃಪಾ೦ಬುನಿಧಿ ಭ
ಕ್ತಾವಲ೦ಬನ ಭಕ್ತ ದೇಹಿಕ
ಸೇವಕಪ್ರಿಯ ಭೂತ ಭಾವನ ಭಾವನಾತೀತ |
ದೇವವ೦ದಿತ ಕಾಲರೂಪ ಮ
ಹಾ ವಿಭವ ಭವರಹಿತ ಪಾವನ
ಪಾವಕಾ೦ಬಕ ಸುತಿ ಕುಟು೦ಬಿಕ ಕರುಣಿಸುವುದೆ೦ದ || ೮೨ ||
ಪದವಿಭಾಗ-ಅರ್ಥ:ದೇವದೇವ ಕೃಪಾ೦ಬುನಿಧಿ(ಕೃಪಿಯೆಂಬ ನೀರಿನ ನಿಧಿ ಸಮುದ್ರ) ಭಕ್ತ+ ಅವಲ೦ಬನ ಭಕ್ತ ದೇಹಿಕ(ಭಕ್ತರನ್ನೇ ದೇಹವಾಗಿ ಉಳ್ಳವನು; ಭಕ್ತರ ದೇಹದಲ್ಲಿ ನೆಲೆಸಿರುವವನ) ಸೇವಕಪ್ರಿಯ, ಭೂತಭಾವನ(ಜೀವಿಗಳು, ಅವುಗಳನ್ನು ಭಾವವಾಗಿ ಉಳ್ಳವನು) ; ಭಾವನಾತೀತ(ಭಾವನೆಗೆ ಸಿಗದವನು), ದೇವವ೦ದಿತ, ಕಾಲರೂಪ(ಕಾಲ= ಮೃತ್ಯು; ಅಥವಾ ಜಗತ್ತನ್ನು ಆವರಿಸಿರುವ 'ಸಮಯ', ವಿವರಿಸಲು ಬಾರದಿರುವ ಅಂಶ), ಮಹಾವಿಭವ(ಹುಟ್ಟುಸಾವುದಳಿಲ್ಲದವ) ಭವರಹಿತ(ಪ್ರಾಪಂಚಿಕ ಭಾವನೆ), ಪಾವನ ಪಾವಕಾ೦ಬಕ(ಪಾವಕ= ಬೆಂಕಿ; ಅಂಬಕ =ಕಣ್ಣು; - ಅಗ್ನಿಚಕ್ಷು- ಅದು ಮೂರನೇ ಹಣೆಗಣ್ಣು - ಬಿಟ್ಟಾಗ ಅದರ ಬೆಂಕಿಯಿಂದ ಪ್ರಳಯ) ಸುತಿ(ಶ್ರುತಿ) ಕುಟು೦ಬಿಕ ಕರುಣಿಸುವುದು+ ಎ೦ದ.
ಅರ್ಥ:ಅರ್ಜುನನು ಶಿವನನ್ನು ಕುರಿತು,'ದೇವದೇವ ಕೃಪಾಸಾಗರ, ಭಕ್ತರನ್ನೇ ಅವಲ೦ಬಿಸಿದನೇ, ಭಕ್ತ ದೇಹಿಕನೇ, ಸೇವಕಪ್ರಿಯನೇ, ಭೂತಭಾವನ ಭಾವನಾತೀತ, ದೇವತೆಗಳಿಂದ ವ೦ದಿತನೇ, ಕಾಲರೂಪನೇ, ಮಹಾವಿಭವ; ಭವರಹಿತನೇ, ಪಾವನನೇ; ಅಗ್ನಿನೇತ್ರನೇ, ಶ್ರುತಿ ಕುಟು೦ಬಿಕನೇ ಕರುಣಿಸುವುದು,' ಎ೦ದ.
ಜಯ ಜಗತ್ರಯನಾಥ ಭಕ್ತಾ
ಶ್ರಯ ಸದಾಶಿವ ಭಕ್ತವತ್ಸಲ
ಲಯವಿಹೀನ ಮಹೇಶ ಮನ್ಮಥಹರ ಮಾಹಾದೇವ |
ಭಯರಹಿತ ಭಾಳಾಕ್ಷ ಲೋಕ
ವ್ಯಯಭವನ ದುರ್ಲಕ್ಷಿ ದೇವ
ತ್ರಯ ನಮಸ್ಕೃತ ನಿಗಮ ಸತ್ಕೃತ ಕರುಣಿಸುವುದೆ೦ದ || ೮೩ ||
ಪದವಿಭಾಗ-ಅರ್ಥ:ಜಯ ಜಗತ್ರಯನಾಥ(ಮೂರು ಜಗತ್ತಿಗೂ ಒಡೆಯ,) ಭಕ್ತಾಶ್ರಯ (ಭಕ್ತರಿಗೆ ಆಶ್ರಯ ಕೊಡುವವನು) ಸದಾಶಿವ, ಭಕ್ತವತ್ಸಲ, ಲಯವಿಹೀನ, (ಲಯ- ನಾಶ- ಇಲ್ಲದವನು) ಮಹೇಶ, ಮನ್ಮಥಹರ(ಮನ್ಮಥನನ್ನು ಸುಟ್ಟವನು), ಮಾಹಾದೇವ, ಭಯರಹಿತ, ಭಾಳಾಕ್ಷ(ಭಾಳ= ಹಣೆ, ಅಕ್ಷ- ಕಣ್ಣುಳ್ಳವನು) ಲೋಕವ್ಯಯಭವನ, ದುರ್ಲಕ್ಷ(ದುರ್‍-ಕಷ್ಟ; ಲಕ್ಷಿ- ದರ್ಶನ- ಕಷ್ದದವ) ದೇವತ್ರಯ, ನಮಸ್ಕೃತ (ನಮಸ್ಕಾರಕ್ಕೆ ಯೋಗ್ಯನು), ನಿಗಮಸತ್ಕೃತ(ವೇದದಲ್ಲಿರುವ 'ಸತ್' ಅದರ ಕೃತ- ಸೃಷ್ಠಿಸಿದವ) ಕರುಣಿಸುವುದು+ ಎ೦ದ.
ಅರ್ಥ:ಅರ್ಜುನನು ಶಿವನನ್ನು ಸ್ತೋತ್ರಮಾಡಿ ಪ್ರಾರ್ಥಿಸುತ್ತಾನೆ- ಬೇಡುತ್ತಾನೆ;'ಜಯ ಜಗತ್ರಯನಾಥ, ಭಕ್ತಾಶ್ರಯ, ಸದಾಶಿವ, ಭಕ್ತವತ್ಸಲ, ಲಯವಿಹೀನ, ಮಹೇಶ, ಮನ್ಮಥಹರ, ಮಾಹಾದೇವ, ಭಯರಹಿತ, ಭಾಳಾಕ್ಷ, ಲೋಕವ್ಯಯಭವನ, ದುರ್ಲಕ್ಷಿ, ದೇವತ್ರಯ, ನಮಸ್ಕೃತ, ನಿಗಮಸತ್ಕೃತ, ಕರುಣಿಸುವುದು,' ಎ೦ದ.
ಸರ್ವ ಗತ ಸರ್ವಜ್ಞ ಸರ್ವದ
ಸರ್ವಭಾವನ ಸರ್ವತೋಮುಖ
ಸರ್ವಪೂಜಿತ ಸರ್ವಸಾಧಕ ಸರ್ವಗುಣನಿಲಯ |
ಸರ್ವ ಸರ್ವಾಶ್ರಯ ಸಮಾಹಿತ
ಸರ್ವಮಯ ಸರ್ವೇಶ್ವರೇಶ್ವರ
ಸರ್ವ ದುಃಖಾಪಹ ಮಹೇಶ್ವರ ಕರುಣಿಸುವುದೆ೦ದ || ೮೪ ||
ಪದವಿಭಾಗ-ಅರ್ಥ:ಸರ್ವಗತ(ಎಲ್ಲೆಲ್ಲಿಯೂ, ಗತ-ಹೋದವನು, ಇರುವವನು) ಸರ್ವಜ್ಞ, ಸರ್ವದ(ಸರ್ವವನ್ನೂ - ದ= ಕೊಡುವವನು), ಸರ್ವಭಾವನ, ಸರ್ವತೋಮುಖ, ಸರ್ವಪೂಜಿತ, ಸರ್ವಸಾಧಕ, ಸರ್ವಗುಣನಿಲಯ, ಸರ್ವ ಸರ್ವಾಶ್ರಯ ಸಮಾಹಿತ(ಪ್ರಸನ್ನ ಚಿತ್ತ, ಒಟ್ಟುಗೂಡಿಸಿದ), ಸರ್ವಮಯ, ಸರ್ವೇಶ್ವರ+ ಈಶ್ವರ, ಸರ್ವದುಃಖಾಪಹ(ಆಪಹ- ಕಳೆಯುವವನು) ಮಹೇಶ್ವರ ಕರುಣಿಸುವುದು, ಎಂದ
ಅರ್ಥ:ಅರ್ಜುನನು ಶಿವನನ್ನು ಸ್ತುತಿಸಿ ಬೆಡುವನು: 'ಸರ್ವಗತ, ಸರ್ವಜ್ಞ, ಸರ್ವದ, ಸರ್ವಭಾವನ, ಸರ್ವತೋಮುಖ, ಸರ್ವಪೂಜಿತ, ಸರ್ವಸಾಧಕ, ಸರ್ವಗುಣನಿಲಯ, ಸರ್ವ ಸರ್ವಾಶ್ರಯ, ಸಮಾಹಿತ, ಸರ್ವಮಯ, ಸರ್ವೇಶ್ವರ, ಈಶ್ವರ, ಸರ್ವದುಃಖಾಪಹ, ಮಹೇಶ್ವರ ಕರುಣಿಸುವುದು,' ಎಂದ.
ರೂಪರಹಿತ ಸರೂಪ ನಿರ್ಮಲ
ರೂಪ ವಿಶ್ವಾಧಾರ ಸದಸ
ದ್ರೂಪ ರೂಪವ್ಯೋಮ ರೂಪಕ ಸರ್ವತೋರೂಪ |
ರೂಪ ರಸಗ೦ಧಾದಿ ವಿಷಯ ವಿ
ರೂಪ ರೂಪಾತೀತ ಸ೦ವಿ
ದ್ರೂಪ ವಿಮಲ ವಿರೂಪ ಲೋಚನ ಕರುಣಿಸುವುದೆ೦ದ || ೮೫ ||
ಪದವಿಭಾಗ-ಅರ್ಥ:ರೂಪರಹಿತ, ಸರೂಪ, ನಿರ್ಮಲರೂಪ, ವಿಶ್ವಾಧಾರ, ಸದಸದ್ರೂಪ (ಸತ್‍ ಮತ್ತು ಅಸತ್‍ ರೂಪದವನು), ರೂಪವ್ಯೋಮ(ವ್ಯೋಮ ಆಕಾಶ), ರೂಪಕ, ಸರ್ವತೋರೂಪ-ರೂಪ, ರಸ- ಗ೦ಧ+ ಆದಿ ವಿಷಯ(ಪಂಚ ತನ್ಮಾತ್ರೆಗಳು ಇತ್ಯಾದಿ- ಯೋಗದಲ್ಲಿ ತತ್ತ್ವಗಳು) ವಿರೂಪ, ರೂಪಾತೀತ, ಸ೦ವಿದ್ರೂಪ, ವಿಮಲ, ವಿರೂಪಲೋಚನ, ಕರುಣಿಸುವುದು+ ಎ೦ದ
ಅರ್ಥ:ಅರ್ಜುನನು ಮತ್ತೂ ಸ್ತುತಿಸುತ್ತಾನೆ,'ರೂಪರಹಿತ, ಸರೂಪ, ನಿರ್ಮಲರೂಪ, ವಿಶ್ವಾಧಾರ, ಸದಸದ್ರೂಪ , ರೂಪವ್ಯೋಮ, ರೂಪಕ, ಸರ್ವತೋರೂಪ-ರೂಪ, ರಸ- ಗ೦ಧ ಮೊದಲಾದ ವಿಷಯಗಳು, ವಿರೂಪ, ರೂಪಾತೀತ, ಸ೦ವಿದ್ರೂಪ, ವಿಮಲ, ವಿರೂಪಲೋಚನ, ಕರುಣಿಸುವುದು,' ಎ೦ದ.
ರಚಿತ ಮಾಯ ವಿಮಾಯ ಮಾಯ
ನಿಚಿತ ಮಾಯಾಧಾರ ಮಾಯಾ
ರುಚಿರ ಮಾಯಾರೂಪ ಮಾಯಾಮಾಯ ಜಗನ್ಮಾಯ |
ಶುಚಿ ಸತೇಜೋಬಲ ಹಿರಣ್ಯ
ಪ್ರಚಯತೇಜ ಸುತೇಜ ಗೌರೀ
ಕುಚಯುಗಾ೦ಕಿತವಕ್ಷವೀಕ್ಷೀಸಿ ಕರುಣಿಸುವುದೆ೦ದ || ೮೬ ||
ಪದವಿಭಾಗ-ಅರ್ಥ:ರಚಿತಮಾಯ ವಿಮಾಯ(ಮಾಯಾ, ಮತ್ತು ಮಾಯಾರಹಿತ) ಮಾಯನಿಚಿತ, ಮಾಯಾ+ ಆಧಾರ, ಮಾಯಾರುಚಿರ, ಮಾಯಾರೂಪ, ಮಾಯಾ+ ಅಮಾಯ, ಜಗನ್ಮಾಯ, ಶುಚಿ(ನಿರ್ಮಲ, ಶುಚಿರೂಪ), ಸತೇಜೋಬಲ, ಹಿರಣ್ಯ ಪ್ರಚಯತೇಜ(ಹಿರಣ್ಯ= ಚಿನ್ನ, ಪ್ರಚಯ= ಸಮೂಹ, ಅಭ್ಯುದಯ,) ಸುತೇಜ, ಗೌರೀಕುಚಯುಗಾ೦ಕಿತವಕ್ಷ(ಗೌರಿಯ ಕುಚಯುಗ ಎರಡು ಕುಚಗಳನ್ನು,ವಕ್ಷಸ್ಥಳದಲ್ಲಿ ಎದೆಯುಳ್ಳವನು), ವೀಕ್ಷೀಸಿ(ನೋಡಿ) ಕರುಣಿಸುವುದು,' ಎ೦ದ.
ಅರ್ಥ:ರಚಿತಮಾಯ ವಿಮಾಯ(ಮಾಯಾ, ಮತ್ತು ಮಾಯಾರಹಿತ) ಮಾಯನಿಚಿತ, ಮಾಯಾ+ ಆಧಾರ, ಮಾಯಾರುಚಿರ, ಮಾಯಾರೂಪ, ಮಾಯಾ+ ಅಮಾಯ, ಜಗನ್ಮಾಯ, ಶುಚಿ(ನಿರ್ಮಲ, ಶುಚಿರೂಪ), ಸತೇಜೋಬಲ, ಹಿರಣ್ಯ ಪ್ರಚಯತೇಜ(ಹಿರಣ್ಯ= ಚಿನ್ನ, ಪ್ರಚಯ= ಸಮೂಹ, ಅಭ್ಯುದಯ,) ಸುತೇಜ, ಗೌರೀಕುಚಯುಗಾ೦ಕಿತವಕ್ಷ, ವೀಕ್ಷೀಸಿ(ನೋಡಿ) ಕರುಣಿಸುವುದು,' ಎ೦ದ.
ಪರಮಹ೦ಸ ಪರಾತ್ಮ ಪರಮೇ
ಶ್ವರ ಪರಭ್ರಹ್ಮೈಕ್ಯ ವಿಗ್ರಹ
ಪರಮಶಿವ ಪರತತ್ವರೂಪ ಪರಾತ್ಪರಾನ೦ದ |
ಪರಮಗುಣ ಪರಶಕ್ತಿ ವಾಗೀ
ಶ್ವರ ಪರಾರ್ತಿಹರೇಶ ಪರ ಶ೦
ಕರ ಪರ೦ಜ್ಯೋತಿಯೆ ಪರೋತ್ತಮ ಕರುಣಿಸುವುದೆ೦ದ || ೮೭ ||
ಪದವಿಭಾಗ-ಅರ್ಥ:ಪರಮಹ೦ಸ, ಪರಾತ್ಮ, ಪರಮೇಶ್ವರ, ಪರಭ್ರಹ್ಮೈಕ್ಯ(ಪರಭ್ರಹ್ಮದಲ್ಲಿ+ ಐಕ್ಯ ಅಡಗಿದವನು), ವಿಗ್ರಹ, ಪರಮಶಿವ, ಪರತತ್ವರೂಪ, ಪರಾತ್ಪರಾನ೦ದ. ಪರಮಗುಣ, ಪರಶಕ್ತಿ, ವಾಗೀಶ್ವರ, ಪರಾರ್ತಿಹರೇಶ, ಪರಶ೦ಕರ, ಪರ೦ಜ್ಯೋತಿಯೆ, ಪರೋತ್ತಮ, ಕರುಣಿಸುವುದು+ ಎ೦ದ
ಅರ್ಥ:ಅರ್ಜುನನು ಮತ್ತೂಸ್ತಿಸುತ್ತಾನೆ;'ಪರಮಹ೦ಸ, ಪರಾತ್ಮ, ಪರಮೇಶ್ವರ, ಪರಭ್ರಹ್ಮೈಕ್ಯ(ಪರಭ್ರಹ್ಮದಲ್ಲಿ+ ಐಕ್ಯ ಅಡಗಿದವನು), ವಿಗ್ರಹ, ಪರಮಶಿವ, ಪರತತ್ವರೂಪ, ಪರಾತ್ಪರಾನ೦ದ. ಪರಮಗುಣ, ಪರಶಕ್ತಿ, ವಾಗೀಶ್ವರ, ಪರಾರ್ತಿಹರೇಶ, ಪರಶ೦ಕರ, ಪರ೦ಜ್ಯೋತಿಯೆ, ಪರೋತ್ತಮ, ಕರುಣಿ ತೋರಿಸಬೇಕು,' ಎ೦ದ.
ಲಿ೦ಗಮಯ ನಿರ್ಲಿ೦ಗ ತೇಜೋ
ಲಿ೦ಗ ಲಿ೦ಗಾತ್ಮಕ ಸದಾಶಿವ
ಲಿ೦ಗ ನಿರ್ಮಳ ಲಿ೦ಗ ಲಿ೦ಗಸ್ಥಿತ ಮಹಾಲಿ೦ಗ |
ಲಿ೦ಗ ವಿಲಸಿತ ಲಿ೦ಗಚಿನುಮಯ
ಲಿ೦ಗ ಚೇತನ ಲಿ೦ಗ ದುರ್ಗಾ
ಲಿ೦ಗಿತಾ೦ಗ ವಿಲಾಸ ಶ೦ಕರ ಕರುಣಿಸುವುದೆ೦ದ || ೮೮ ||
ಪದವಿಭಾಗ-ಅರ್ಥ:ಲಿ೦ಗಮಯ(ಲಿಂಗ- ಜಗತ್ತಿನ ಮೂಲತತ್ತ್ವ), ನಿರ್ಲಿ೦ಗ, ತೇಜೋಲಿ೦ಗ, ಲಿ೦ಗಾತ್ಮಕ, ಸದಾಶಿವಲಿ೦ಗ, ನಿರ್ಮಳ ಲಿ೦ಗ, ಲಿ೦ಗಸ್ಥಿತ ಮಹಾಲಿ೦ಗ, ಲಿ೦ಗ ವಿಲಸಿತ, ಲಿ೦ಗ ಚಿನುಮಯ, ಲಿ೦ಗ ಚೇತನ, ಲಿ೦ಗ ದುರ್ಗಾಲಿ೦ಗಿತಾ೦ಗ, ವಿಲಾಸ ಶ೦ಕರ ಕರುಣಿಸುವುದು+ ಎ೦ದ.
ಅರ್ಥ:ಅರ್ಜುನನಿಂದ ಲಿಂಗರೂಪಸ್ತುತಿ: 'ಲಿ೦ಗಮಯ, ನಿರ್ಲಿ೦ಗ, ತೇಜೋಲಿ೦ಗ, ಲಿ೦ಗಾತ್ಮಕ, ಸದಾಶಿವಲಿ೦ಗ, ನಿರ್ಮಳ ಲಿ೦ಗ, ಲಿ೦ಗಸ್ಥಿತ ಮಹಾಲಿ೦ಗ, ಲಿ೦ಗ ವಿಲಸಿತ, ಲಿ೦ಗ ಚಿನುಮಯ, ಲಿ೦ಗ ಚೇತನ, ಲಿ೦ಗ ದುರ್ಗಾಲಿ೦ಗಿತಾ೦ಗ, ವಿಲಾಸ ಶ೦ಕರ ಕರುಣಿಸುವುದು,' ಎ೦ದ.
ನಿರವಧಿಕ ನಿರ್ಮಾಯ ನಿಸ್ಪೃಹ
ನಿರುಪಮಿತ ನಿರ್ದ್ವ೦ದ್ವ ನಿರ್ಗುಣ
ನಿರವಯವ ನಿರ್ಲೇಪ ನಿರವಗ್ರಹ ನಿರಾಧಾರ |
ನಿರುಪಮ ನಿರಾಮಯ ನಿರ೦ತರ
ನಿರವಶೇಷ ನಿರ೦ಗ ನಿರ್ಮಲ
ನಿರತಿಶಯ ನಿಷ್ಕಳ ಮಹೇಶ್ವರ ಕರುಣಿಸುವುದೆ೦ದ || ೮೯ ||
ಪದವಿಭಾಗ-ಅರ್ಥ:ನಿರವಧಿಕ(ಅಧಿಕವಾಗದವನು - ಪೋರ್ಣ) ನಿರ್ಮಾಯ(ಮಾಯೆ ಇಲ್ಲದವನು) ನಿಸ್ಪೃಹ(ಆಶೆಇಲ್ಲದವ, ಪ್ರಾಮಾಣಿಕ.) ನಿರುಪಮಿತ(ಉಪಮ- ಸಮಾನ ಇಲ್ಲದವ), ನಿರ್ದ್ವ೦ದ್ವ(ಎರಡಿಲ್ಲದವ) ನಿರ್ಗುಣ, ನಿರವಯವ(ಅವಯುವ ಇಲ್ಲದವ) ನಿರ್ಲೇಪ(ಯಾವಗುನವೂ ಹತ್ತದವ) ನಿರ+ ಅವಗ್ರಹ(ಯಾವಅಡ್ಡಿ ಇಲ್ಲದವ), ನಿರಾಧಾರ(ಆಧಾರದ ಅವಶ್ಯಕತೆ ಇಲ್ಲದವ), ನಿರುಪಮ(ನಿರ್+ ಉಪಮ, ಸಮಾನರಿಲ್ಲದವ) ನಿರಾಮಯ(ದುಃಖವಿಲ್ಲದ, ರೋಗರಹಿತ;ಮೋಕ್ಷ-ಮುಕ್ತನಾದವನು;ಪರಿ ಶುದ್ಧವಾದವ) ನಿರ೦ತರ(ಸದಾ ಇರರುವವ) ನಿರವಶೇಷ(ಅವಶೇಷವಿಲ್ಲದವ) ನಿರ೦ಗ(ಅಂಗವಿಲ್ಲದವ) ನಿರ್ಮಲ(ಶುದ್ಧ) ನಿರತಿಶಯ(ಹೆಚ್ಚಿನವ) ನಿಷ್ಕಳ(ನಿಷ್ಕಳಂಕ) ಮಹೇಶ್ವರ ಕರುಣಿಸುವುದು+ ಎ೦ದ.
ಅರ್ಥ:ಅರ್ಜುನನು,'ನಿರವಧಿಕ, ನಿರ್ಮಾಯ, ನಿಸ್ಪೃಹ; ನಿರುಪಮಿತ ನಿರ್ದ್ವ೦ದ್ವ ನಿರ್ಗುಣ, ನಿರವಯವ, ನಿರ್ಲೇಪ, ನಿರವಗ್ರಹ, ನಿರಾಧಾರ, ನಿರುಪಮ, ನಿರಾಮಯ, ನಿರ೦ತರ, ನಿರವಶೇಷ, ನಿರ೦ಗ, ನಿರ್ಮಲ, ನಿರತಿಶಯ, ನಿಷ್ಕಲ- ನಿರ್ಗುಣವಾದವ, ಅಖಂಡ, ಪರಿಪೂರ್ಣ; ಪರಮಾತ್ಮ, ಮಹೇಶ್ವರ, ಕರುಣಿಸುವುದು,'ಎಂದು ಸ್ತೋತ್ರಮಾಡಿ ಪ್ರಾರ್ಥಿಸಿದ.
ವಾಮದೇವ ದುರ೦ತ ವಿಮಲ
ವ್ಯೋಮಕೇಶ ಕೃತಾ೦ತಹರ ನಿ
ಸ್ಸೀಮ ಮೃತ್ಯು೦ಜಯ ಸಮ೦ಜಸ ಸರ್ವತೋಭದ್ರ |
ಭೀಮ ಭರ್ಗ ಕಪರ್ದಿ ಕಲ್ಪಿತ
ನಾಮ ರೂಪತ್ರಯ ವೃಷಧ್ವಜ
ಕಾಮಹರ ಕರುಣಾಮಹಾರ್ಣವ ಕರುಣಿಸುವುದೆ೦ದ || ೯೦ ||
ಪದವಿಭಾಗ-ಅರ್ಥ:ವಾಮದೇವ, ದುರ೦ತ, ವಿಮಲ, ವ್ಯೋಮಕೇಶ, ಕೃತಾ೦ತಹರ (ಮೃತ್ಯುಹರ), ನಿಸ್ಸೀಮ, ಮೃತ್ಯು೦ಜಯ, ಸಮ೦ಜಸ, ಸರ್ವತೋಭದ್ರ, ಭೀಮ, ಭರ್ಗ, ಕಪರ್ದಿ, ಕಲ್ಪಿತನಾಮ, ರೂಪತ್ರಯ, ವೃಷಧ್ವಜ, ಕಾಮಹರ, ಕರುಣಾಮಹಾರ್ಣವ, ಕರುಣಿಸುವುದು,+ ಎ೦ದು
ಅರ್ಥ:ಅರ್ಜುನನು,'ವಾಮದೇವ, ದುರ೦ತ, ವಿಮಲ, ವ್ಯೋಮಕೇಶ, ಕೃತಾ೦ತಹರ (ಮೃತ್ಯುಹರ), ನಿಸ್ಸೀಮ, ಮೃತ್ಯು೦ಜಯ, ಸಮ೦ಜಸ, ಸರ್ವತೋಭದ್ರ, ಭೀಮ, ಭರ್ಗ, ಕಪರ್ದಿ, ಕಲ್ಪಿತನಾಮ, ರೂಪತ್ರಯ, ವೃಷಧ್ವಜ, ಕಾಮಹರ, ಕರುಣಾಮಹಾರ್ಣವ, ಕರುಣಿಸುವುದು,' ಎ೦ದು ಶಿವನ ನಾಮಸ್ಮರಣೆ ಮಾಡಿ ಪ್ರಾರ್ಥಿಸಿದ.
ಹರಹರಾ ತ್ತ್ರೈಮೂರ್ತಿ ರೂಪನು
ಧರಸಿಯತುಳ ಮಹಾಷ್ಟಮೂರ್ತಿಯ
ಧರಸಿಯನುಪಮ ವಿಶ್ವಮೂರ್ತಿಯ ಧರಸಿ ರ೦ಜಿಸುವ |
ಪರಿಯನರಿವವರಾರು ದೇವಾ
ಸುರ ಮುನೀಶರಿಗರಿದು ಕೃಪೆಯಿ೦
ಕರುಣಿಸಲು ಬ೦ದೈ ಮಹಾದೇವೆ೦ದನಾಪಾರ್ಥ || ೯೧ ||
ಪದವಿಭಾಗ-ಅರ್ಥ:ಹರಹರಾ! ತ್ತ್ರೈಮೂರ್ತಿ ರೂಪನು ಧರಸಿಯು+ ಅತುಳ (ಅಸಮಾನ) ಮಹಾ + ಅಷ್ಟಮೂರ್ತಿಯ ಧರಸಿಯು+ ಅನುಪಮ ವಿಶ್ವಮೂರ್ತಿಯ ಧರಸಿ, ರ೦ಜಿಸುವ ಪರಿಯನು+ ಅರಿವವರಾರು? ದೇವ+ ಅಸುರ ಮುನೀಶರಿಗೆ+ ಅರಿದು(ಅಸಾಧ್ಯ) ಕೃಪೆಯಿ೦ ಕರುಣಿಸಲು ಬ೦ದೈ ಮಹಾದೇವ,' ಎ೦ದನು+ ಆ ಪಾರ್ಥ.
ಅರ್ಥ:ಪಾರ್ಥನು,'ಹರಹರಾ! ತ್ತ್ರೈಮೂರ್ತಿ ರೂಪನು ಧರಸಿ, ಅಸಮಾನ ಮಹಾ ಅಷ್ಟಮೂರ್ತಿಗಳನ್ನು ಧರಸಿ, ಅನುಪಮ ವಿಶ್ವಮೂರ್ತಿಯನ್ನು ಧರಸಿ, ರ೦ಜಿಸುವ ಪರಿಯನ್ನು ಅರಿವವರಾರು? ದೇವತೆಗಳು, ಅಸುರರು, ಮುನೀಶರಿಗೆ ಪಡೆಯಲು ಅಸಾಧ್ಯವಾದ ಕೃಪೆಯನ್ನು ನನಗೆ ಕರುಣಿಸಲು ಬ೦ದೈ ಮಹಾದೇವ,' ಎ೦ದನು.
ದೇವಸುರ ದನುಜೇಶ ವ೦ದಿತ
ದೇವ ಮನು ಮುನಿ ನಿಕರ ಪೂಜಿತ
ದೇವ ತತ್ವಾಕಾರ ಭಾವಿಪೊಡತಿ ನಿರಾಕಾರ |
ದೇವ ಸಾಕಾರದಲಿ ನಿಜ ಭ
ಕ್ತಾವಳಿಯನುದ್ದರಿಪ ಶಿವ ಮಾ
ದೇವ ಕರುಣಿಸಿದೈಯನಾಥಗೆ೦ದನಾ ಪಾರ್ಥ || ೯೨ ||
ಪದವಿಭಾಗ-ಅರ್ಥ:ದೇವ, ಸುರ+ದನುಜ+ ಈಶ ವ೦ದಿತ, ದೇವ ಮನು ಮುನಿ ನಿಕರ ಪೂಜಿತ, ದೇವ, ತತ್ವಾಕಾರ, ಭಾವಿಪೊಡೆ+ ಅತಿ ನಿರಾಕಾರ, ದೇವ ಸಾಕಾರದಲಿ ನಿಜ ಭಕ್ತಾವಳಿಯನು+ ಉದ್ದರಿಪ ಶಿವ, ಮಾದೇವ ಕರುಣಿಸಿದೈ+ ಯ+ ಅನಾಥಗೆ,+ ಎ೦ದನು+ ಆ ಪಾರ್ಥ
ಅರ್ಥ:ಪಾರ್ಥನು ಮತ್ತೂ ಸ್ತುತಿಸುತ್ತಾನೆ;'ದೇವ ನೀನು, ಸುರರ,ದನುಜರ ಈಶನು; ಅವರಿಂದ ವ೦ದಿತನು; ದೇವ, ಮನುಜರು ಮತ್ತು ಮುನಿಜನರಿಂದ ಪೂಜಿತನು; ದೇವ, ನೀನು ತತ್ತ್ವಾಕಾರನು, ಭಾವಿಸಿ ನೊಡಿದರೆ ಅತಿ ನಿರಾಕಾರನು, ದೇವನೇ ನೀನು ಸಾಕಾರದಲ್ಲಿ ನಿಜ ಭಕ್ತಾವಳಿಯನನು ಉದ್ಧರಿಸುವ ಶಿವನು, ಮಾಹಾದೇವ ಕರುಣಿಸಿದೈ- ಅನಾಥನಾದ ನನಗೆ ದರ್ಶನವನ್ನು ಕರುಣಿಸಿದೆಯಲ್ಲವೇ,' ಎ೦ದನು.
ಹರನೆ ಗ೦ಗಾಧರನೆ ಗಿರಿಜಾ
ವರನೆ ಶಶಿಶೇಖರನೆ ದಕ್ಷಾ
ದ್ವರಹರನೆ ಶ೦ಕರನೆ ನಿಜಭಕ್ತರ ಮನೋಹರನೆ |
ಕರುಣಿಸುದ್ದರಿಸುವುದು ಸ೦
ಹರಿಸು ಮತ್ಪರಿಭವವನೆ೦ದುರು
ತರದ ಭಕ್ತಿಯಲ೦ದು ಸೈಗೆಡೆದಿರ್ದನಾ ಪಾರ್ಥ || ೯೩ ||
ಪದವಿಭಾಗ-ಅರ್ಥ:ಹರನೆ, ಗ೦ಗಾಧರನೆ(ಗಂಗೆಯನ್ನು ತಲೆಯಮೇಲೆ ಹೊತ್ತವನು), ಗಿರಿಜಾವರನೆ, ಶಶಿಶೇಖರನೆ, ದಕ್ಷ+ ಅದ್ವರ+ ಹರನೆ(ದಕ್ಷನ ಯಜ್ಞವನ್ನು ನಾಶಮಾಡಿದವನೆ), ಶ೦ಕರನೆ, ನಿಜಭಕ್ತರ ಮನೋಹರನೆ, ಕರುಣಿಸು+ ಉದ್ದರಿಸುವುದು, ಸ೦ಹರಿಸು ಮತ್+ ಪರಿಭವವನು(ತಪ್ಪನ್ನು)+ ಎ೦ದು+ ಉರುತರದ(ಅತಿಯಾದ) ಭಕ್ತಿಯಲಿ+ ಅ೦ದು ಸೈಗೆಡೆದಿರ್ದನು(ಅಡ್ಡಬೀಳು, -ಸಾಷ್ಟಾಂಗವಾಗಿ- ನಮಸ್ಕರಿಸು)+ ಆ ಪಾರ್ಥ
ಅರ್ಥ:ಆ ಪಾರ್ಥನು, 'ಹರನೆ, ಗ೦ಗಾಧರನೆ, ಗಿರಿಜಾವರನೆ, ಶಶಿಶೇಖರನೆ, ದಕ್ಷನ ಯಜ್ಞವನ್ನು ನಾಶಮಾಡಿದವನೆ, ಶ೦ಕರನೆ, ನಿಜಭಕ್ತರ ಮನೋಹರನೆ, ಕರುಣಿಸು, ನನ್ನನ್ನು ಉದ್ದರಿಸಬೇಕು,ನನ್ನ ತಪ್ಪನ್ನು ಪರಿಹರಿಸು,' ಎ೦ದು ಅತಿಯಾದ ಭಕ್ತಿಯಿಂದ ಅ೦ದು ಪ್ರಾರ್ಥಿಸಿ ಸಾಷ್ಟಾಂಗವಾಗಿ ಅಡ್ಡಬಿದ್ದು ನಮಸ್ಕರಿಸುಇದನು,

ಅರ್ಜುನನಿಗೆ ಪರಶಿವನ ಅನುಗ್ರಹ[ಸಂಪಾದಿಸಿ]

ದರಣಿಪತಿ ಕೇಳೀಶನೀತನ
ಹೊರೆಗೆ ಬಿಜಯ೦ಗೈದು ಪಾರ್ಥನ
ಶಿರವ ಹಿಡಿದೆತ್ತಿದನು ಬಿಗಿಯಪ್ಪಿದನು ಬರಸೆಳೆದು |
ಮರುಳು ಮಗನೇ ಮಹಾ ತಪಸ್ಸ೦
ಚರಣೆಯಲಿ ನೊ೦ದೈಯೆನುತ ಕಡು
ಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ || ೯೪ ||
ಪದವಿಭಾಗ-ಅರ್ಥ:ದರಣಿಪತಿ ಕೇಳು+ ಈಶನು+ ಈತನ ಹೊರೆಗೆ ಬಿಜಯ೦ಗೈದು(ಬಳಿಗೆ ಬಂದು), ಪಾರ್ಥನ ಶಿರವ ಹಿಡಿದೆತ್ತಿದನು ಬಿಗಿಯಪ್ಪಿದನು ಬರಸೆಳೆದು; ಮರುಳು ಮಗನೇ ಮಹಾ ತಪಸ್ಸ೦ಚರಣೆಯಲಿ ನೊ೦ದೈಯೆನುತ ಕಡು+ಗ+ ಕರುಣಿ ಕರುಣಾಮೃತ ಸಮುದ್ರದೊಳು+ ಅದ್ದಿದನು ನರನ.
ಅರ್ಥ:ವೈಶಂಪಾಯನ ಮುನಿಯು ಜನಮೇಜಯ ದರಣಿಪತಿಯೇ ಕೇಳು, ಈಶ್ವರನು ಪಾರ್ಥನ ಬಳಿಗೆ ಬಂದು, ಪಾರ್ಥನ ಶಿರವನ್ನು ಹಿಡಿದು ಎತ್ತಿದನು. ನಂತರ ಅವನನ್ನು ಬಿಗಿಯಾಗಿ ಪ್ರೀತಿಯಿಂದ ಬರಸೆಳೆದು ಅಪ್ಪಿದನು; ಅರ್ಜುನನಿಗೆ,'ಮರುಳು ಮಗನೇ ಮಹಾ ತಪಸ್ಸಿನ ಆಚರಣೆಯಲ್ಲಿ ಬಹಳ ನೊ೦ದಯಲ್ಲಾ, ಎನ್ನುತ್ತಾ ಅತಿಯಾದ ಕರುಣಿ ಶಿವನು ತನ್ನ ಕರುಣೆಯ ಅಮೃತ ಸಮುದ್ರದಲ್ಲಿ ಅರ್ಜುನನ್ನು ಅದ್ದಿದನು.
ಕೂಡೆ ಮೈದಡವಿದನು ಚೈ ಮು೦
ಡಾಡಿದನು ಮನ ನೋಯದಿರು ನೀ
ಮಾಡಿದುಪಹತಿಯೆ೦ಬುದೆಮಗರ್ಚನೆ ನಮಸ್ಕಾರ |
ಕೋಡದಿರು ಕೊ೦ಕದಿರು ಭಕ್ತಿಗೆ
ನಾಡೆ ಮೆಚ್ಚಿದನೆನ್ನ ಚಿತ್ತಕೆ
ಖೋಡಿಯಿಲ್ಲಲೇ ಮಗನೆ ಗುಹ ಗಣಪತಿಗಳಾಣೆ೦ದ || ೯೫ ||
ಪದವಿಭಾಗ-ಅರ್ಥ:ಕೂಡೆ ಮೈದಡವಿದನು; ಚೈಮು೦ಡಾಡಿದನು; ಮನ ನೋಯದಿರು ನೀ ಮಾಡಿದ+ ಉಪಹತಿಯೆ೦ಬುದು+ ಎಮಗೆ+ ಅರ್ಚನೆ ನಮಸ್ಕಾರ ಕೋಡದಿರು, ಕೊ೦ಕದಿರು, ಭಕ್ತಿಗೆ ನಾಡೆ(ಬಹಳ, ಅಧಿಕವಾಗಿ, ಹೆಚ್ಚಾಗಿ) ಮೆಚ್ಚಿದನು+ ಎನ್ನ ಚಿತ್ತಕೆ ಖೋಡಿಯಿಲ್ಲಲೇ ಮಗನೆ, ಗುಹ(ಕುಮಾರ(ಸ್ಕಂಧ)) ಗಣಪತಿಗಳಾಣೆ+ ಎ೦ದ.
ಅರ್ಥ:ಶಿವನು ತನಗೆ ಅಡ್ಡಬಿದ್ದಿದ್ದ ಅರ್ಜುನನ್ನು ಎತ್ತಿ ಕೂಡಲೆ ಮೈದಡವಿ ಸಮಾಧಾನ ಪಡಿಸಿದನು. ಪ್ರೀತಿಯಿಂದ ತಲೆ ಸವರಿ ಮು೦ಡಾಡಿದನು; ಪಾರ್ಥನಿಗೆ,' ಮನಸ್ಸನಲ್ಲಿ ನೋವನ್ನು ಅನುಭವಿಸಬೇಡ. ನೀನು ಮಾಡಿದ ತೊಂದರೆ ನಮಗೆ ಅರ್ಚನೆಯು- ಪೂಜೆಯು, ನಮಸ್ಕಾರ.ನನ್ನೊಡನೆ ಹೋರಾಡಿದ್ದಕ್ಕಾಗಿ ಕೋಡದಿರು- ದುಃಖಿಸಬೇಡ ಕೊ೦ಕಬೇಡ- ಕುಗ್ಗಬೇಡ, ನಿನ್ನ ಭಕ್ತಿಗೆ ನಾನು ಬಹಳ ಮೆಚ್ಚಿದನು. ನನ್ನ ಚಿತ್ತಕ್ಕೆ- ಮನಸ್ಸಿಗೆ ನಿನ್ನಮೇಲೆ ಸಿಟ್ಟು ಇಲ್ಲಲೇ ಮಗನೆ! ಕುಮಾರ ಗಣಪತಿಗಳಾಣೆ!' ಎ೦ದ
ನರನು ನೀ ಪೂರ್ವದಲಿ ಪೀತಾ೦
ಬರನ ವಿಮಲಾ೦ಶ ಪ್ರಸೂತನು
ಪರಮಋಷಿ ನೀನೆನ್ನ ಭಕ್ತನು ಚಿ೦ತೆ ಬೇಡಿನ್ನು |
ವರದನಾದೆನು ಮಗನೆ ಶಸ್ತ್ರೋ
ತ್ಕರವನಿದನೀ ಮುನ್ನ ಕೊಳ್ಳೆ೦
ದುರುತರ ಪ್ರೇಮಮದಲಿ ಕೊಟ್ಟನು ಖಡ್ಗ ಶರಧನುವ ||೯೬ ||
ಪದವಿಭಾಗ-ಅರ್ಥ:ನರನು ನೀ ಪೂರ್ವದಲಿ, ಪೀತಾ೦ಬರನ ವಿಮಲಾ೦ಶ(ಶುದ್ಧ ಅಂಶದಲ್ಲಿ) ಪ್ರಸೂತನು(ಹುಟ್ಟಿದವನು) ಪರಮಋಷಿ, ನೀನು+ ಎನ್ನ ಭಕ್ತನು, ಚಿ೦ತೆ ಬೇಡ+ ಇನ್ನು ವರದನಾದೆನು ಮಗನೆ ಶಸ್ತ್ರೋತ್ಕರವನು+ ಇದನು+ ಈ ಮುನ್ನ ಕೊಳ್ಳೆ೦ದು+ ಉರುತರ ಪ್ರೇಮಮದಲಿ ಕೊಟ್ಟನು ಖಡ್ಗ ಶರ ಧನುವ.
ಅರ್ಥ:ಶಿವನು ಅರ್ಜುನನಿಗೆ,' ನೀನು ಪೂರ್ವ ಜನ್ಮದಲ್ಲಿ 'ನರ' ನೆಂಬುವವನು. ಪೀತಾ೦ಬರಧರ ವಿಷ್ಣುವಿನ ಪರಿಶುದ್ಧ ಅಂಶದಲ್ಲಿ ಹುಟ್ಟಿದವನು, ನೀನು ಹಿಂದೆ ಪರಮಋಷಿ. ನೀನು ನನ್ನ ಭಕ್ತನು. ಇನ್ನು ಚಿ೦ತೆ ಬೇಡ. ಮಗನೆ, ವರದನಾದೆನು-ಪ್ರಸನ್ನನಾದೆನು. ನಾನು ಕಸಿದುಕೊಂಡ ಶಸ್ತ್ರಗಳ ಸಮೂಹವಾದ ಇವನ್ನು ಈ ಮೊದಲು ಹಿಂದಕ್ಕೆ ತೆಗೆದುಕೊ,ಎ೦ದು ಬಹಳ ಪ್ರೇಮಮದಿಂದ ಅವನ ಖಡ್ಗ, ಶರಗಳು ಮತ್ತು ಗಾಂಡೀವ ಧನುಸ್ಸನ್ನು ಅರ್ಜುನನಿಗೆ ಹಿಂತಿರುಗಿಕೊಟ್ಟನು.
ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವ೦ಜದಿರಿನ್ನು ಸಾಕೆನೆ
ಸುಲಭ ನೀಭಕ್ತರಿಗೆ ಭಯವಿನ್ನೇಕೆ ನಮಗೆನುತ |
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬೊಮ್ಮ ಶಿರೋಸ್ತ್ರವನು ಕೈ
ಗೊಳಿಸುವುದು ಕೃಪೆಯುಳ್ಳೊಡೆ೦ದನು ನಗುತ ಕಲಿಪಾರ್ಥ || ೯೭ ||
ಪದವಿಭಾಗ-ಅರ್ಥ:ಸಲಿಸುವೆನು ನೀ ಬೇಡಿದುದ ನಿಸ್ಖಲಿತವ(ಅಸ್ಖಲಿತ- ತಪ್ಪದ, ತಪ್ಪದೆ)+ ಅ೦ಜದಿರಿನ್ನು ಸಾಕು+ ಎನೆ ಸುಲಭ ನೀ ಭಕ್ತರಿಗೆ ಭಯವು+ಇನ್ನು+ ಎಕೆ ನಮಗೆ+ ಎನುತ, ಸಲಿಸು ಪಾಶುಪತಾಸ್ತ್ರವನು ವೆಗ್ಗಳದ ಬೊಮ್ಮ ಶಿರೋಸ್ತ್ರವನು ಕೈಗೊಳಿಸುವುದು(ಕೈವಶಮಾಡಬೇಕು) ಕೃಪೆಯುಳ್ಳೊಡೆ+ ಎ೦ದನು ನಗುತ ಕಲಿಪಾರ್ಥ
ಅರ್ಥ:ಶಿವನು ಅರ್ಜುನನಿಗೆ,'ನೀ ಬೇಡಿದುದನ್ನು ತಪ್ಪದೆ ಕೊಡುವೆನು, ಸಾಕು ಇನ್ನು ಅ೦ಜಬೇಡ.' ಎನ್ನಲು,ಅರ್ಜುನನು,'ನೀನು ಭಕ್ತರಿಗೆ ಸುಲಭವಾಗಿ ಒಲಿಯುವವನು. ಇನ್ನು ನನಗೆ ಭಯವೇಕೆ?' ಎನ್ನುತ್ತಾ,'ನನಗೆ ಪಾಶುಪತಾಸ್ತ್ರವನ್ನು ಕೊಡು; ಹೆಚ್ಚಿನದಾದ ಬ್ರಹ್ಮಾಸ್ತ್ರವನ್ನು ಮೀರಿದ ಶ್ರೇಷ್ಠ ಅಸ್ತ್ರವನ್ನು ನ್ನ ಮೇಲೆ ಕೃಪೆಯಿದ್ದರೆ ನನಗೆ ಕೈಗೊಳಿಸುವುದು.' ಎ೦ದು ಕಲಿಪಾರ್ಥ ನಗುತ್ತಾ ಹೇಳಿದನು.
ಸವಡಿ ನುಡಿಯು೦ಟೇ ಚತುರ್ದಶ
ಭುವನ ದಾಹವದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮ ಶೀರೋ ಮಹಾಶರವ |
ದಿವಿಜ ದನುಜ ಭುಜ೦ಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸ೦
ಭವಿಸಿದಾಹುತಿಯೆ೦ದು ಶರವುದ್ದ೦ಡ ಬಲವೆ೦ದ || ೯೮ ||
ಪದವಿಭಾಗ-ಅರ್ಥ:ಸವಡಿ(ಜೋಡು, ಎರಡು) ನುಡಿಯು೦ಟೇ ಚತುರ್ದಶ ಭುವನದ(ಹದಿನಾಲ್ಕುಲೋಕ)+ ಆಹವ+ದಕ್ಷವು,(ಯುದ್ಧಕ್ಕೆ ಯೋಗ್ಯವು)+ ಈ ಬಾಣವನು ಕೊಟ್ಟೆನು ಮಗನೆ ಬೊಮ್ಮ ಶೀರೋ ಮಹಾಶರವ ದಿವಿಜ ದನುಜ ಭುಜ೦ಗಮ+ ಆದಿಗಳು(ದೇವ, ದಾನವ, ನಾಗರು ಮೊದಲಾದವರಿಗೂ )+ ಅವಗಡಿಸಲು(ಸೋಲಿಸು, ವಿರೋಧಿಸು)+ ಉರೆ(ಮತ್ತೂ) ಹೆಚ್ಚುವುದು ಸ೦ಭವಿಸಿದ+ ಆಹುತಿಯೆ೦ದು ಶರವು+ ಉದ್ದ೦ಡ ಬಲವೆ೦ದ.
ಅರ್ಥ:ಶಿವನು ಅರ್ಜುನನಿಗೆ,'ತನ್ನದು ಎರಡು ನುಡಿಯು೦ಟೇ? ಇಲ್ಲ! ನೀನು ಕೇಳಿದ ಅಸ್ತ್ರವನ್ನು ಕೊಡುವುದುನಿಜ. ಈ ಅಸ್ತ್ರವು ಹದಿನಾಲ್ಕುಲೋಕದೊಡನೆ ಯುದ್ಧಕ್ಕೆ ಯೋಗ್ಯವು. ಬ್ರಹ್ಮಶೀರೋಮಹಾಶರವಾದ ಈ ಬಾಣವನ್ನು ಮಗನೆ, ನಿನಗೆ ಕೊಟ್ಟೆನು(ಕೊಡಲು ನಿರ್ಧರಿಸಿದೆನು). ಇದು ದೇವ, ದಾನವ, ನಾಗರು ಮೊದಲಾದವರು ವಿರೋಧಿಸುಲು ಮತ್ತೂ ಹೆಚ್ಚುವುದು. ಎದುರಿಸದ ಅವರೆಲ್ಲರೂ ಇದಕ್ಕೆ ಸ೦ಭವಿಸಿದ- ಸಿಕ್ಕಿದ ಆಹುತಿಯಾಗುವರು, ಈ ಶರವು ಎದರಿಲ್ಲದ ಉದ್ದ೦ಡ ಬಲವು,'ಎಂದ.
ಸರಸಿಯಲಿ ಮಿ೦ದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿ೦ದನು ಭಾವಶುದ್ದಿಯಲಿ |
ಸರಳ ಸಾ೦ಗೋಪಾ೦ಗ ಮ೦ತ್ರೋ
ಚ್ಚರಣ ಸ೦ಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ || ೯೯ ||
ಪದವಿಭಾಗ-ಅರ್ಥ:ಸರಸಿಯಲಿ ಮಿ೦ದು(ಸ್ನಾನಮಾಡಿ)+ ಅಚಮನ ವಿಸ್ತರಣೆ+ ಯೆ+ ಎಲ್ಲವ ಮಾಡಿ ಶೂಲಿಯ(ಶಿವನ) ಚರಣದಲಿ(ಪಾದ) ಮೈಯಿಕ್ಕಿ ನಿ೦ದನು ಭಾವಶುದ್ದಿಯಲಿ. ಸರಳ(ಬಾಣದ) ಸಾ೦ಗ(ಮಂತ್ರದ ಅಂಗ- ಪಾಠ)+ ಉಪಾ೦ಗ ಮ೦ತ್ರೋಚ್ಚರಣ (ಮಂತ್ರವನ್ನು ಉಚ್ಛರಿಸುವ ವಿಧಾನ), ಸ೦ಹೃತಿ(ಸಂಹಾರಕ್ಕೆ ಪ್ರಯೊಗ), ಮೋಕ್ಷವನು(ಉಪಸಂಹಾರ, ಹಿಂಪಡೆಯುವುದು) ವಿಸ್ತರಿಸುತ(ವಿಸ್ತಾರವಾಗಿ ಹೇಳುತ್ತಾ) ರಹಸ್ಯದಲಿ ಕೊಟ್ಟನು ಪಾಶುಪತ ಶರವ.
ಅರ್ಥ:ಅರ್ಜುನನು ಸರಸ್ಸಿನಲ್ಲಿ ಮಿ೦ದು ಅಚಮನ ಮೊದಲಾದ ದೇಹಶುದ್ಧಿ ಮನಃ ಶುದ್ಧಿಯ ವಿಸ್ತರಣೆಯ ಕ್ರಮಗಳನ್ನು ಎಲ್ಲವನ್ನೂ ಮಾಡಿಕೊಂಡು ಶಿವನ ಪಾದಗಳಿಗೆ ಅಡ್ಡಬಿದ್ದು ಭಾವಶುದ್ದಿಯಿಂದ ನಿ೦ತನು. ಪಾಶುಪತ ಅಸ್ತ್ರದ ಸಾ೦ಗ ಉಪಾ೦ಗ ಮ೦ತ್ರೋಚ್ಚರಣ, ಸಂಹಾರಕ್ಕೆ ಪ್ರಯೊಗ, ಅದರ ಉಪಸಂಹಾರ, ಹಿಂಪಡೆಯುವುದು, ಈ ಕ್ರಮಗಳನ್ನು ವಿಸ್ತಾರವಾಗಿ ಹೇಳುತ್ತಾ ರಹಸ್ಯವಾಗಿ ಪಾಶುಪತ ಶರವನ್ನು ಅರ್ಜುನನಿಗೆ ಕೊಟ್ಟನು.
ಜಗವುಘೇಯೆ೦ದುದು ಜಯಧ್ವನಿ
ಗಗನದಲಿ ಗಾಡಿಸಿತು ಹೂವಿನ
ಮುಗುಳಸರಿವಳೆ ಸುರಿದುದೀಶ್ವರನ೦ಘ್ರಿ ಕಮಲದಲಿ |
ಡಗೆಯ ತಳಿ ಮುರಿದುದು ಮನೋರಥ
ದಗಳು ತು೦ಬಿತು ನರನ ಮನ ಬು
ದ್ದಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ || ೧೦೦ ||
ಪದವಿಭಾಗ-ಅರ್ಥ:ಜಗವು+ ಉಘೇ ಯೆ+ ಎ೦ದುದು ಜಯಧ್ವನಿ ಗಗನದಲಿ ಗಾಡಿಸಿತು(ತುಂಬಿತು); ಹೂವಿನ ಮುಗುಳ ಸರಿವಳೆ ಸುರಿದುದು+ ಈಶ್ವರನ+ ಅ೦ಘ್ರಿ ಕಮಲದಲಿ, ಡಗೆಯ(ಭಯದ) ತಳಿ(ಗೋಡೆಯ ಬದಲಿಗೆ ಮರದಪಟ್ಟಿ ಅಥವಾ ಕಬ್ಬಿಣದ ಕಂಬಿಗಳಿಂದ ಮಾಡಿದ ಚೌಕ ರಂದ್ರಗಳಿರುವ ಅಡ್ಡ ತಡೆಗೋಡೆ- ದೇಸಿಪದ) ಮುರಿದುದು ಮನೋರಥದಗಳು ತು೦ಬಿತು ನರನ(ಅರ್ಜುನನ) ಮನ ಬುದ್ದಿಗಳು ನೆರೆ(ಬಹಳ- ಹೆಚ್ಚು) ಸಿಲುಕಿತ್ತು ಹರುಷೋತ್ಸವದ ದಾಳಿಯಲಿ.
ಅರ್ಥ:ಶಿವನು ಅರ್ಜುನನಿಗೆ ಅಸ್ತ್ರ ನೀಡುತ್ತಿದ್ದಂತೆ,'ಜಗತ್ತೇ ಉಘೇ! ಎ೦ದು ಜಯಧ್ವನಿ ಮಾಡಿತು. ಅದು ಗಗನದಲ್ಲಿ ತುಂಬಿತು; ದೇವತೆಗಳು ಹೂವಿನ ಮುಗುಳ-ಮೊಗ್ಗುಗಳ ಸುರಿಮಳೆಯನ್ನು ಈಶ್ವರನ ಪಾದ ಕಮಲದಲ್ಲಿ ಸುರಿಸಿದರು. ಭಯದ ತಡೆಗೋಡೆ ಮುರಿಯಿತು. ಅರ್ಜುನನ ಮತ್ತು ದೇವತೆಗಳ ಮನೋರಥದಗಳು ತು೦ಬಿತು. ಅರ್ಜುನನ ಮನಸ್ಸು ಬುದ್ದಿಗಳು ಹರುಷೋತ್ಸವದ ಧಾಳಿಯಲ್ಲಿ ಪೂರಾ ಸಿಲುಕಿತ್ತು. -ಅರ್ಜುನನ ಮನಸ್ಸು ಬುದ್ದಿಗಳು ತನ್ನ ಅಸ್ತ್ರಸಾದನೆಯ ಉದ್ದೇಶ ಈಡೇರಿದ್ದರಿಂದ ಹರ್ಷದಿಂದ ತುಂಬಿಹೋಯಿತು.
ಹರನ ಕೋಮಲಪಾಣಿ ಕಮಲ
ಸ್ಪರುಷ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜ೦ಗನ೦ದದಲಿ |
ಕಿರಣ ಲಹರಿಯ ಲಳಿಯ ದಿವ್ಯೋ
ತ್ಕರದ ಚಪಲಚ್ಚವಿಯ ಚಾರು
ಸ್ಪುರಣದಲಿ ಬೋಳೈಸಿದುದು ಸುರ ನರರ ಕಣ್ಮನವ || ೧೦೧ ||
ಪದವಿಭಾಗ-ಅರ್ಥ:ಹರನ ಕೋಮಲಪಾಣಿ(ಮೃದು ಹಸ್ತ) ಕಮಲ ಸ್ಪರುಷ ಪೀಯೂಷದಲಿ(ಅಮೃತದಲ್ಲಿ) ಮುಳುಗಿದ ನರನ ತನು (ಅರ್ಜುನನ ದೇಹ) ನಿರ್ಮೋಕ ಮುಕ್ತ ಭುಜ೦ಗನ೦ದದಲಿ(ಪೊರೆ ಕಳಚಿದ ಸರ್ಪದಂತೆ) ಕಿರಣ ಲಹರಿಯ ಲಳಿಯ(ರಭಸ, ವೇಗ) ದಿವ್ಯ+ ಉತ್ಕರದ(ಹೆಚ್ಚಿನ, ರಾಶಿ, ಸಮೂಹ, ಸೀಳುವುದು) ಚಪಲಚ್ಚವಿಯ(ಚವಿ=ಹೊಳಪು, ಕಾಂತಿ) ಚಾರು(ಸುಂದರ) ಸ್ಪುರಣದಲಿ(ನಡುಗುವುದು,ಕಂಪನ, ಹೊಳೆಯುವುದು, ಮಿನುಗುವುದು ಮನಸ್ಸಿಗೆ ಹೊಳೆಯುವಿಕೆ, ತಟ್ಟನೆ ನೆನಪಾಗುವಿಕೆ) ಬೋಳೈಸಿದುದು(ಸಂತೈಸಿತು) ಸುರ ನರರ ಕಣ್ಮನವ.
ಅರ್ಥ:ಅರ್ಜುನನಿಗೆ ಶಿವನ ಆಶೀರ್ವಾದದ ಕೋಮಲ ಹಸ್ತಕಮಲದ ಸ್ಪರ್ಷವೆಂಬ ಅಮೃತದಲ್ಲಿ ಮುಳುಗಿದ ಅರ್ಜುನನ ದೇಹ ಪೊರೆ ಕಳಚಿದ ಸರ್ಪದಂತೆ ಕಾಂತಿಯ ಕಿರಣಗಳ ಲಹರಿಯ ರಭಸದ ದಿವ್ಯವಾದ ಹೆಚ್ಚಿನ ಕಾಂತಿಯಿಂದ ಸೊಗಸಾದ ಮೈನವಿರೇಳುವ ಕಂಪನ ಮಿನುಗಿತು. ಶಿವನ ಆಶೀರ್ವಾದ ಅವನ ಮನಸ್ಸನ್ನೂ ದೇವತೆಗಳ ಮತ್ತು ಅಲ್ಲಿದ್ದ ಜನರ ಕಣ್ಣು ಮತ್ತು ಮನಸ್ಸುಗಳನ್ನು ಸಂತೈಸಿತು.
ಸುರ ಮುನೀಶರ ವೇದ ಮ೦ತ್ರೋ
ಚ್ಚರಣ ನಾದದ ಗರುಡ ಗ೦ಧ
ರ್ವರ ಮಹಾ ಸ್ತುತಿರವದತು೦ಬುರ ನಾರದಾದಿಗಳ |
ವರ ರಸಾನ್ವಿತ ಗೀತದೂರ್ವಸಿ
ಯರ ಸುನೄತ್ಯದ ದಿವ್ಯ ವಾದ್ಯದ
ಹರನ ಕರುಣಾ೦ಭುಧಿಯಲೋಲಾಡಿದನು ಕಲಿಪಾರ್ಥ || ೧೦೨ ||
ಪದವಿಭಾಗ-ಅರ್ಥ:ಸುರ ಮುನೀಶರ ವೇದ ಮ೦ತ್ರೋಚ್ಚರಣ(ಮಂತ್ರಪಠಣ) ನಾದದ, ಗರುಡ ಗ೦ಧರ್ವರ ಮಹಾ ಸ್ತುತಿರವದ(ರವ- ಸದ್ದು), ತು೦ಬುರ ನಾರದಾದಿಗಳ ವರ ರಸಾನ್ವಿತ ಗೀತದ,+ ಊರ್ವಸಿಯರ ಸುನೃತ್ಯದ, ದಿವ್ಯ ವಾದ್ಯದ, ಹರನ ಕರುಣಾ೦ಭುಧಿಯಲಿ+ ಓಲಾಡಿದನು ಕಲಿಪಾರ್ಥ.
ಅರ್ಥ:ಹೀಗೆ ಕಲಿಪಾರ್ಥನು, ದೇವತೆಗಳ ಮುನೀಶ್ವರರ ವೇದ ಮ೦ತ್ರೋಚ್ಚರಣದ ನಾದದಿಂದಲೂ, ಗರುಡ ಗ೦ಧರ್ವರ ಮಹಾ ಸ್ತುತಿಗಳ ಸದ್ದಿನಿಂದಲೂ, ತು೦ಬುರ ನಾರದು ಮೊದಲಾದವರ ಉತ್ತಮ ರಸದಿಂದ ಕೂಡಿದ ಗೀತದಿಂದಲೂ, ಊರ್ವಸಿಯರ ಸುನೃತ್ಯದಿಂದಲೂ, ದಿವ್ಯ ವಾದ್ಯದಿಂದಲೂ ಸಂತಸಪಟ್ಟು ಜೊತೆಗೆ ಶಿವನ ಕರುಣೆ ಎಂಬ ಸಮದ್ರದಲ್ಲಿ ಓಲಾಡಿದನು.
ಧರೆಗೆಸೆವ ಧರ್ಮಾರ್ಥಕಾಮೋ
ತ್ಕರವನನುಪಮ ಮೋಕ್ಷಪದವನು
ಧುರದೊಳಹಿತರ ಗೆಲುವ ಶೌರ್ಯೋನ್ನತಿಯ ಸಾಹಸವ ||
ಕರುಣಿಸಿದನಪ್ಪಿದನು ಕರೆದನು
ಗಿರಿತನುಜೆ ನೀನುದ್ದರಿಪುದೀ
ಪರಮ ಭಕ್ತನನೆನಲು ಕರುಣದೋಳೀಕ್ಷಿಸಿದಳಗಜೆ || ೧೦೩ ||
ಪದವಿಭಾಗ-ಅರ್ಥ:ಧರೆಗೆ+ ಎಸೆವ(ಭೂಮಿಯಲ್ಲಿ ಪ್ರಸಿದ್ಧವಾದ) ಧರ್ಮಾರ್ಥಕಾಮೋತ್ಕರವನು(ಧರ್ಮ,ಅರ್ಥ, ಕಾಮ(ಅಪೇಕ್ಷೆ), ಮತ್ತು ಉತ್ತಮವಾದ),+ ಅನುಪಮ ಮೋಕ್ಷಪದವನು, ಧುರದೊಳು(ಯುದ್ಧದಲ್ಲಿ)+ ಅಹಿತರ(ಶತ್ರುಗಳನ್ನು) ಗೆಲುವ ಶೌರ್ಯೋನ್ನತಿಯ ಸಾಹಸವ ಕರುಣಿಸಿದನು+ ಅಪ್ಪಿದನು; ಕರೆದನು ಗಿರಿತನುಜೆ(ಗೌರಿ) ನೀನು+ ಉದ್ದರಿಪುದು+ ಈ ಪರಮ ಭಕ್ತನನು+ ಎನಲು ಕರುಣದೋಳು+ ಈಕ್ಷಿಸಿದಳು(ನೋಡಿದಳು)+ ಅಗಜೆ(ಅಗ- ಬೆಟ್ಟ, ಜೆ- ಹುಟ್ಟಿದವಳು- ಗಿರಿಜೆ)
ಅರ್ಥ: ಶಿವನು ಅರ್ಜುನನಿಗೆ ಭೂಮಿಯಲ್ಲಿ ಪ್ರಸಿದ್ಧವಾದ ಧರ್ಮ,ಅರ್ಥ, ಕಾಮ, ಮತ್ತು ಉತ್ತಮವಾದ ಅನುಪಮ ಮೋಕ್ಷಪದವನ್ನು, ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲುವ ಶೌರ್ಯದ ಉನ್ನತಿಯನ್ನು, ಸಾಹಸವನ್ನು ಕರುಣಿಸಿದನು; ಮತ್ತು ಪ್ರೀತಿಯಿಂದ ಅವನನ್ನು ಅಪ್ಪಿದನು. ಶಿವನು ಗಿರಿತನುಜೆ ಗೌರಿಯನ್ನು ಕರೆದನು; ಅವಳಿಗೆ ನೀನು ಈ ಪರಮ ಭಕ್ತನನ್ನು ಉದ್ದರಿಸುವುದು, ಎನ್ನಲು, ಗಿರಿಜೆಯು ಅರ್ಜುನನ್ನು ಕರುಣೆಯಿಂದ ನೋಡಿದಳು.

ಅರ್ಜುನನಿಗೆ ಶಿವನ ಪರಿವಾರದಿಂದ ಅಸ್ತ್ರಗಳ ಕೊಡಿಗೆ[ಸಂಪಾದಿಸಿ]

ಗಿರಿಜೆತ್ರಿಜಗನ್ಮಾತೆ ರಕ್ಷಿಸು
ಪರಮ ಕರುಣಾಮೂರ್ತಿ ಜಗದೊಳು
ಸಿರಿ ಸರಸ್ವತಿ ಚ೦ಡಿ ದುರ್ಗಿಯರೆ೦ಬ ನಾಮದಲಿ |
ಚರಿಸುತಿಹೆ ನಿನ್ನೇಕ ಮೂರ್ತಿಯ
ಪರಿಯನರಿವವರಾರೆನುತ ತ
ಚ್ಚರಣ ಯುಗಳಕ್ಕೆರಗಿ ಪುಳಕಿತನಾದನಾಪಾರ್ಥ || ೧೦೪ ||
ಪದವಿಭಾಗ-ಅರ್ಥ:ಗಿರಿಜೆ ತ್ರಿಜಗನ್ಮಾತೆ (ಮೂರು ಜಗತ್ತಿಗೂ ಮಾತೆ- ತಾಯಿ) ರಕ್ಷಿಸು ಪರಮ ಕರುಣಾಮೂರ್ತಿ, ಜಗದೊಳು ಸಿರಿ(ಲಕ್ಷ್ಮಿ) ಸರಸ್ವತಿ ಚ೦ಡಿ ದುರ್ಗಿಯರೆ೦ಬ ನಾಮದಲಿ ಚರಿಸುತಿಹೆ ನಿನ್ನ+ ಏಕ ಮೂರ್ತಿಯ ಪರಿಯನು+ ಅರಿವವರಾರು+ ಎನುತ ತತ್+ ಚರಣ ಯುಗಳಕ್ಕೆ+ ಎರಗಿ ಪುಳಕಿತನಾದನು+ ಆ ಪಾರ್ಥ.
ಅರ್ಥ:ಪಾರ್ಥನು ಗೌರಿಯನ್ನು ಸ್ತುತಿಸುತ್ತಾನೆ;'ಗಿರಿಜೆ, ತ್ರಿಜಗನ್ಮಾತೆ ರಕ್ಷಿಸು; ನೀನು ಪರಮ ಕರುಣಾಮೂರ್ತಿ; ಜಗತ್ತಿನಲ್ಲಿ ಲಕ್ಷ್ಮಿ, ಸರಸ್ವತಿ, ಚ೦ಡಿ, ದುರ್ಗಿಯರು ಎಂಬ ಹೆಸರಿನಿಂದ ಚರಿಸುತ್ತಿರುವೆ- ಕಾರ್ಯನಿರ್ವಹಿಸುತ್ತರುವೆ; ನಿನ್ನ ಏಕ ರೂಪದ ಪರಿಯನ್ನು ತಿಳಿಯ ಬಲ್ಲವವರು ಯಾರು ಇದ್ದಾರೆ? ಯಾರೂ ಇಲ್ಲ, ಎನ್ನುತ್ತಾ ಅವಳ ಎರದೂಪಾದಕ್ಕೆ ಬಿದ್ದು ನಮಿಸಿ ಆ ಪಾರ್ಥನು ಪುಳಕಿತನಾದನು.
ಕ೦ಜನಾಭನ ಮೈದುನನೆ ಬಾ
ಅ೦ಜದಿರು ನಿನಗಾ೦ತ ರಿಪುಗಳ
ಭ೦ಜಿಸುವ ಸಾಮರ್ಥ್ಯದನುವನು ತಳೆದು ರ೦ಜಿಸುವ |
ಅ೦ಜನಾಸ್ತ್ರವನಿತ್ತೆ ಮಗನೆ ಧ
ನ೦ಜಯನೆ ನಿನಗೆನುತ ಕರುಣದಿ
ಮ೦ಜುಳಾ ರವದಿ೦ದ ತಚ್ಚಸ್ತ್ರವನು ಬೆಸಸಿದಳು || ೧೦೫ ||
ಪದವಿಭಾಗ-ಅರ್ಥ:ಕ೦ಜನಾಭನ(ಕಮಲನಾಭನ- ಕೃಷ್ಣನ) ಮೈದುನನೆ(ಕೃಷ್ನನ ತಂಗಿ ಸುಭದ್ರೆಯ ಗಂಡ) ಬಾ, ಅ೦ಜದಿರು, ನಿನಗೆ+ ಆ೦ತ(ಎದುರುಬಿದ್ದ) ರಿಪುಗಳ(ಶತ್ರುಗಳ) ಭ೦ಜಿಸುವ(ಸೊಲಿಸುವ) ಸಾಮರ್ಥ್ಯದ+ ಅನುವನು(ಅನುಕೂಲವನ್ನು) ತಳೆದು ರ೦ಜಿಸುವ (ಪ್ರಕಾಶಿಸುವ) ಅ೦ಜನಾಸ್ತ್ರವನು+ ಇತ್ತೆ ಮಗನೆ ಧನ೦ಜಯನೆ, ನಿನಗೆ+ ಎನುತ ಕರುಣದಿ ಮ೦ಜುಳ+ ಆರವದಿ೦ದ(ಆರವ- ಶಬ್ದ, ಧ್ವನಿ) ತತ್+ ಶಸ್ತ್ರವನು ಬೆಸಸಿದಳು(ಹೇಳಿದಳು.)
ಅರ್ಥ:ಪಾರ್ವತಿಯು ಅರ್ಜುನನ್ನು ಕುರಿತು,'ಕೃಷ್ಣನ ಭಾವಮೈದುನನೆ ಬಾ, ಅ೦ಜದಿರು ಎಂದಳು. ನಿನಗೆ ಎದುರುಬಿದ್ದ ಶತ್ರುಗಳನ್ನು ಸೊಲಿಸುವ ಸಾಮರ್ಥ್ಯದ ಅನುವನ್ನು ಹೊಂದಿ ಪ್ರಕಾಶಿಸುವ ಅ೦ಜನಾಸ್ತ್ರವನ್ನು ಮಗನೆ ಧನ೦ಜಯನೆ ಇಗೋ ನಿನಗೆ ಕೊಟ್ಟೆ, ಎನ್ನುತ್ತಾ ಕರುಣದಿಂದ ಮ೦ಜುಳವಾದ ಕಂಠದಿಂದ ಆ ಶಸ್ತ್ರವನ್ನು ಪ್ರಯೋಗಿಸುವ ಉಪಸಂಹಾರಮಾಡುವ ಮಂತ್ರ ಕ್ರಮಗಳನ್ನು ಹೇಳಿದಳು.
ಒ೦ದು ದಶ ಶತ ಸಾವಿರದ ಹೆಸ
ರಿ೦ದ ಲಕ್ಷವು ಕೋಟಿಯಗಣಿತ
ದಿ೦ದ ನಿನಗಾ೦ತದಟ ರಿಪುಗಳ ತಿ೦ದು ತೇಗುವುದು |
ಬ೦ದು ಬೆಸನನು ಬೇಡುವುದು
ತಾನೊ೦ದು ಶರ ರೂಪಾಗೆನುತ ಮುದ
ದಿ೦ದ ವರ ಮ೦ತ್ರೋಪದೇಶವನಿತ್ತಳರ್ಜುನಗೆ || ೧೦೬||
ಪದವಿಭಾಗ-ಅರ್ಥ:ಒ೦ದು ದಶ ಶತ ಸಾವಿರದ ಹೆಸರಿ೦ದ ಲಕ್ಷವು ಕೋಟಿಯು+ ಅಗಣಿತದಿ೦ದ ನಿನಗೆ+ ಆ೦ತ+ ಅದಟ ರಿಪುಗಳ ತಿ೦ದು ತೇಗುವುದು; ಬ೦ದು ಬೆಸನನು ಬೇಡುವುದು, ತಾನು+ ಒಂ೦ದು ಶರ ರೂಪಾಗು+ ಎನುತ ಮುದದಿ೦ದ ವರ ಮ೦ತ್ರೋಪದೇಶವನು+ ಇತ್ತಳು+ ಅರ್ಜುನಗೆ
ಅರ್ಥ:ಈ ಅಂಜಾನಾಸ್ತ್ರವು, ಒ೦ದು ದಶ ಶತ ಸಾವಿರದ ಹೆಸರಿ೦ದ ಲಕ್ಷವು- ಎದುರಿಸುವ ಶಕ್ತಿಯದು; ಕೋಟಿಯಷ್ಟು ಅಗಣಿತದ -ಲೆಕ್ಕಹಿಡಿಯಲಾಗದಷ್ಟು ಶತ್ರುಗಳು ನಿನಗೆ ಎದುರು ನೀಂತರೂ, ಬಲಿಷ್ಟ ವೀರ ಶತ್ರುಗಳನ್ನು ತಿ೦ದು ತೇಗುವುದು; ಮತ್ತೆ ಹಿಂತಿರುಗಿ ಬ೦ದು ಮತ್ತೇನು ಮಾಡಬೇಕೆಂದು ಕೇಳುವುದು. ಗೌರಿಯು- 'ತಾನು ಒ೦ದು ಶರ ರೂಪಾಗು' ಎನ್ನುತ್ತಾ ಸಂತೊಷದಿಂದ ಶ್ರೇಷ್ಠ ಮ೦ತ್ರೋಪದೇಶವನನ್ನು ಅರ್ಜುನನಿಗೆ ಕೊಟ್ಟಳು. .
ಕರಿ ಮುಖನ ಷಣ್ಮುಖನ ಚರಣ
ಕ್ಕೆರಗಿ ನುತಿಸುತ್ತಿರಲು ಪಾರ್ಥನ
ಪರಮ ಭಕ್ತಿಗೆ ಮೆಚ್ಚಿ ತೆಗೆದಪ್ಪಿದರು ಕರುಣದಲಿ |
ವರ ಮಹಾಸ್ತ್ರ೦ಗಳನು ಮ೦ತ್ರೋ
ತ್ಕರವನವರೊಲಿದಿತ್ತು ಗೆಲು ನೀ
ಧುರದೊಳಹಿತರನೆ೦ದು ಪರಸಿದರಾ ದನ೦ಜಯನ || ೧೦೭ ||
ಪದವಿಭಾಗ-ಅರ್ಥ:ಕರಿ(ಆನೆ)ಮುಖನ, ಷಣ್ಮುಖನ, ಚರಣಕ್ಕೆ+ ಎರಗಿ ನುತಿಸುತ್ತಿರಲು ಪಾರ್ಥನ ಪರಮ ಭಕ್ತಿಗೆ ಮೆಚ್ಚಿ, ತೆಗೆದು+ ಅಪ್ಪಿದರು ಕರುಣದಲಿ+ ಇವರ ಮಹಾಸ್ತ್ರ೦ಗಳನು ಮ೦ತ್ರೋತ್ಕರವನು+ ಅವರು+ ಒಲಿದಿತ್ತು ಗೆಲು- ನೀ ಧುರದೊಳು+ ಅಹಿತರನು+ ಎ೦ದು ಪರಸಿದರು+ ಆ ದನ೦ಜಯನ.
ಅರ್ಥ:ಅರ್ಜುನನು, ಗಜಾನನನ, ಷಣ್ಮುಖನ, ಪಾದಗಳಿಗೆ ಅಡ್ಡಬಿದ್ದು ಸ್ತುತಿಸುತ್ತಿರಲು, ಅವರು ಪಾರ್ಥನ ಪರಮ ಭಕ್ತಿಗೆ ಮೆಚ್ಚಿ, ಪ್ರೀತಿಯಿಂದ ಅವನನ್ನು ಅಪ್ಪಿದರು. ನಂತರ ಅವರು ಕರುಣಯಿಂದ ಅವರು ತಮ್ಮ ಮಹಾಸ್ತ್ರಗಳನ್ನು ಅಸ್ತ್ರದ ಮ೦ತ್ರೋತ್ಕರದ ಸಹಿತ ಅವನಿಗೆ ಒಲಿದು ಕೊಟ್ಟು, 'ನೀನು ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲು,'ಎ೦ದು ಆ ದನ೦ಜಯನನ್ನು ಹರಸಿದರು.
ಸರಳ ಸಾ೦ಗೋಪಾ೦ಗವನು ನಿನ
ಗರುಹಿದೆನು ನೀನಿನ್ನು ಶಕ್ರನ
ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ |
ಹರಿ ಸಹಾಯನು ನಮ್ಮಸತ್ವದ
ಪರಮ ರೂಪಾತನು ಕಣಾ ನೀ
ನರಿದಿರೆ೦ದು ಮಹೇಶ ಬೀಳ್ಕೊಟ್ಟನು ಧನ೦ಜಯನ || ೧೦೮ ||
ಪದವಿಭಾಗ-ಅರ್ಥ:ಸರಳ(ಬಾಣದ- ಅಸ್ತ್ರದ) ಸಾ೦ಗೋಪಾ೦ಗವನು ನಿನಗೆ+ ಅರುಹಿದೆನು ನೀನು+ ಇನ್ನು ಶಕ್ರನಪುರಕೆ(ಇಂದ್ರನ ನಗರ- ಅಮರಾವತಿಗೆ) ನಡೆ ನಿನ್ನ+ ಉತ್ತರೋತ್ತರ ಕಾರ್ಯಗತಿಗಳಿಗೆ ಹರಿ ಸಹಾಯವನು, ನಮ್ಮಸತ್ವದ ಪರಮ ರೂಪಾತನು ಕಣಾ, ನೀನು+ ಅರಿದಿರು+ ಎ೦ದು ಮಹೇಶ ಬೀಳ್ಕೊಟ್ಟನು ಧನ೦ಜಯನ.
ಅರ್ಥ:ಶಿವನು ಅರ್ಜುನನ್ನು ಕುರಿತು,'ಪಾಶುಪತ ಅಸ್ತ್ರದ) ಸಾ೦ಗೋಪಾ೦ಗವನ್ನು ನಿನಗೆ ತಿಳಿಸಿದ್ದೇನೆ. ನೀನು ಇನ್ನು ಇಂದ್ರನ ನಗರ- ಅಮರಾವತಿಗೆ ನಡೆ. ನಿನ್ನ ಉತ್ತರೋತ್ತರ- ಮುಂದಿನ ಕಾರ್ಯಗತಿಗಳಿಗೆ ಕೃಷ್ಣನು ಸಹಾಯಕನಾಗಿರುವನು. ಅವನು ನಮ್ಮ ಸತ್ವದ ಪರಮ ರೂಪವೇ ಆತನು ಕಣಾ! ನೀನು ಅದನ್ನು ತಿಳಿದಿರು.' ಎ೦ದು ಮಹೇಶನು ಧನ೦ಜಯನನ್ನು ಕಳುಹಿಸಿಕೊಟ್ಟನು.
ನಿಮ್ಮಕಥೆ ವೇದೋಕ್ತ ವಾಗಲಿ
ನಿಮ್ಮ ಚರಿತ ಸುಚರಿತವಾಗಲಿ
ನಿಮ್ಮ ಕಥನಾಮೃತವನಾಲಿಸಿ ಕೇಳ್ದರಘ ಕೆಡಲಿ |
ನಿಮ್ಮ ನಿ೦ದಿಸುವವರುಗಳು ದು
ಷ್ಕ್ರರ್ಮಿಗಳು ಪಾತಕರು ತಾನಿದು
ನಮ್ಮ ಮತವೆ೦ದಭವ ಹರಸಿದನಾ ಧನ೦ಜಯನ || ೧೦೯ ||
ಪದವಿಭಾಗ-ಅರ್ಥ:ನಿಮ್ಮಕಥೆ ವೇದೋಕ್ತ ವಾಗಲಿ, ನಿಮ್ಮ ಚರಿತ ಸುಚರಿತವಾಗಲಿ, ನಿಮ್ಮ ಕಥನಾಮೃತವನು+ ಆಲಿಸಿ ಕೇಳ್ದರ+ ಅಘ(ಕೇಳಿದವರ ಪಾಪ) ಕೆಡಲಿ, ನಿಮ್ಮ ನಿ೦ದಿಸುವವರುಗಳು ದುಷ್ಕ್ರರ್ಮಿಗಳು, ಪಾತಕರು, ತಾನು(ತಾವು)+ ಇದು ನಮ್ಮ ಮತವೆ೦ದು+ ಅಭವ(ಹುಟ್ಟು ಇಲ್ಲದವನು) ಹರಸಿದನು+ ಆ ಧನ೦ಜಯನ
ಅರ್ಥ:ಮಹೇಶ್ವರನು ಅರ್ಜುನನಿಗೆ,'ನಿಮ್ಮ ಈ ಸಿವನೊಡನೆ ಹೋರಾಡಿ ಅಸ್ತ್ರ ಪಡೆದ ಕಥೆ, ವೇದೋಕ್ತವಾಗಲಿ, ನಿಮ್ಮ ಚರಿತ ಸುಚರಿತವಾಗಲಿ, ನಿಮ್ಮ ಕಥನಾಮೃತವನ್ನು ಆಲಿಸಿ ಕೇಳಿದವರ ಪಾಪ ನಾಶವಾಗಲಿ, ನಿಮ್ಮನ್ನು ನಿ೦ದಿಸುವವರು, ತಾವು ದುಷ್ಕ್ರರ್ಮಿಗಳು, ಪಾತಕರು ಎನಿಸಲಿ! ಇದು ನಮ್ಮ ಮತ.'ಎ೦ದು ಅಭವನಾದ ಶಿವನು ಆ ಧನ೦ಜಯನನ್ನು ಹರಸಿದನು.
ದೇವಿಯರು ಗುಹ ಗಣಪ ಮುಖ್ಯ ಗ
ಣಾವಳಿಗೆ ಪೊಡಮೋಟ್ಟನವರ ಕೃ
ಪಾವಲೋಕನದಿ೦ದ ಹೋ೦ಪುಳಿ ಹೋದನಡಿಗಡಿಗೆ |
ದೇವ ಬಿಜಯ೦ಗೈದ ರಜತ
ಗ್ರಾವ ಶಿಖರಕೆ ಮನದೊಳಗೆ ಸ೦
ಭಾವಿಸಿದನೀ ವೀರ ನಾರಯಣನ ಮೈದುನನ || ೧೧೦ ||
ಪದವಿಭಾಗ-ಅರ್ಥ:ದೇವಿಯರು ಗುಹ ಗಣಪ ಮುಖ್ಯ ಗಣ+ ಆವಳಿಗೆ ಪೊಡಮೋಟ್ಟನು;+ ಅವರ ಕೃಪಾವಲೋಕನದಿ೦ದ ಹೋ೦ಪುಳಿ(ಆಧಿಕ್ಯ, ರೋಮಾಂಚನ, ಹಿಗ್ಗು, ಪುಳಕ) ಹೋದನು+ ಅಡಿಗಡಿಗೆ; ದೇವ ಬಿಜಯ೦ಗೈದ ರಜತಗ್ರಾವ ಶಿಖರಕೆ; ಮನದೊಳಗೆ ಸ೦ಭಾವಿಸಿದನು(ಸಾಂತ್ವನಗೊಳಿಸು)+ ಈ ವೀರ ನಾರಯಣನ ಮೈದುನನ.
ಅರ್ಥ:ಅರ್ಜುನನು ಗಂಗಾ, ಗೌರೀ ದೇವಿಯರು, ಕುಮಾರ, ಗಣಪತಿ, ಮತ್ತು ಮುಖ್ಯ ಗಣಗಳ ಸಮೂಹಕ್ಕೆ ನಮಿಸಿದನು. ಅವರ ಕೃಪಾದೃಷ್ಟಿಯಿಂದ ಮತ್ತೆ ಮತ್ತೆ ಹಿಗ್ಗಿ ಪುಳಕಗೊಂಡನು; ದೇವ ಶಿವನು ಹಿಮಗಿರಿಗಯ ಕೈಲಾಸ ಶಿಖರಕ್ಕೆ ಬಿಜಯ೦ಗೈದ- ಹೊದನು. ಅವನು ತನ್ನ ಮನಸ್ಸಿನಲ್ಲೇ ಈ ವೀರ ನಾರಯಣನ ಮೈದುನನನ್ನು- ಪಾರ್ಥನನ್ನು ಸ೦ಭಾವಿಸಿದನು- ಸಾಂತ್ವನಗೊಳಿಸಿದನು.
♠♠♠

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು
  5. ಸಿರಿಗನ್ನಡ ಅರ್ಥಕೋಶ