ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: ೭ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಹರನ ಪಾಶುಪತಾಸ್ತ್ರ ಲಾಭೋ
ತ್ಕರುಷ ಹರ್ಷೋತ್ಸವದಲಿ೦ದ್ರನ
ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ ||ಸೂ||
ಪದವಿಭಾಗ-ಅರ್ಥ:ಹರನ ಪಾಶುಪತಾಸ್ತ್ರ ಲಾಭ+ ಉತ್ಕರುಷ ಹರ್ಷೋತ್ಸವದಲಿ+ ಇ೦ದ್ರನಪುರವ ಹೊಕ್ಕನು ಪಾರ್ಥನು+ ಎಸೆದನು(ಶೋಭಿಸಿದನು) ಶಕ್ರತೇಜದಲಿ.
ಅರ್ಥ:ಅರ್ಜುನನು ಶಿವನ ಪಾಶುಪತಾಸ್ತ್ರವನ್ನು ಪಡೆದ ಹೆಚ್ಚಿನ ಹರ್ಷೋತ್ಸವದಲ್ಲಿ ಇ೦ದ್ರನ ಅಪೇಕ್ಷೆಯಂತೆ ಅವನ ಅಮರಾವತಿ ನಗರವನ್ನು ಪ್ರವೇಶಿಸಿದನು. ಅಲ್ಲಿ ಪಾರ್ಥನು ಶಕ್ರನಾದ ಇಂದ್ರನ ತೇಜಸ್ಸಿನಿಂದ ಶೋಭಿಸಿದನು.[೧][೨] [೩] [೪]

ಅರ್ಜುನನ ಬಳಿಗೆ ಇಂದ್ರನ ಆಗಮನ[ಸಂಪಾದಿಸಿ]

ಕೇಳು ಜನಮೇಜಯ ದರಿತ್ರೀ
ಪಾಲ ವರಕೈಲಾಸ ವಾಸಿಯ
ಬೀಳುಗೊ೦ಡನು ತದ್ವಿಯೋಗದಲಿ೦ದ್ರ ಕೀಲದಲಿ |
ಮೇಲುದುಗುಡದಲಸ್ತ್ರ ಲಾಭವ
ನಾಲಿಸದೆ ಶ೦ಕರ ಪದಾ೦ಬುಜ
ದೋಲಗದ ಸಿರಿ ತಪ್ಪಿತೆನುತುಮ್ಮಳಿಸಿದನು ಪಾರ್ಥ || ೧ ||
ಪದವಿಭಾಗ-ಅರ್ಥ:ಕೇಳು ಜನಮೇಜಯ ದರಿತ್ರೀಪಾಲ ವರಕೈಲಾಸ ವಾಸಿಯ ಬೀಳುಗೊ೦ಡನು ತತ್+ ವಿಯೋಗದಲಿ+ ಇ೦ದ್ರ ಕೀಲದಲಿ, ಮೇಲು ದುಗುಡದಲಿ(ದುಃಖ)+ ಅಸ್ತ್ರ ಲಾಭವನು+ ಆಲಿಸದೆ ಶ೦ಕರ ಪದಾ೦ಬುಜದ+ ಓಲಗದ ಸಿರಿ ತಪ್ಪಿತು+ ಎನುತ+ ಉಮ್ಮಳಿಸಿದನು ಪಾರ್ಥ.
ಅರ್ಥ:ವೈಶಂಪಾಯನ ಮುನಿಯು ಹೇಳಿದ,'ಕೇಳು ಜನಮೇಜಯ ದರಿತ್ರೀಪಾಲನೇ, ಶ್ರೇಷ್ಠನಾದ ಕೈಲಾಸ ವಾಸಿ ಶಿವನನ್ನು ಅರ್ಜುನನು ಇ೦ದ್ರ ಕೀಲದಲ್ಲಿ ಬೀಳ್ಕೊಂಡನು- ಕಳಿಸಿಕೊಟ್ಟನು. ಆ ವಿಯೋಗದಿಂದ - ಅಗಲುವಿಕೆಯಿಂದ ಅರ್ಜುನನು ಬಹಳ ದುಃಖದಲ್ಲಿ ತಾನು ಅಸ್ತ್ರ ಲಾಭವನ್ನು ಪಡೆದ ಆನಂದವನ್ನು ಅನುಭವಿಸದೆ ಶ೦ಕರನ ಪಾದಪದ್ಮಗಳ ಬಳಿ ಇದ್ದು ಅವನ ಪರಿವಾರದ ಓಲಗದ- ಸಭೆಯಲ್ಲಿ ಇರುವ ಸೌಭಾಗ್ಯ ತಪ್ಪಿತು ಎನ್ನುತ್ತಾ ಪಾರ್ಥನು ವ್ಯಥೆಯಿಂದದ ಉಮ್ಮಳಿಸಿದನು.
ಮರುಳ ದೇವಾರ್ಚನೆಯೊ ಕನಸಿನ
ಸಿರಿಯೊ ಶಿಶುವಿನ ಕೈಯ ರತ್ನವೋ
ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ |
ಹರನನೀ ಚರ್ಮಾಕ್ಷಿಯಲಿ ಗೋ
ಚರಿಸೆ ಬೇಡಿದುದ೦ಬು ಮರ್ತ್ಯದೊ
ಳಿರವು ಮಝ ಬಾಪೆನ್ನ ಪುಣ್ಯವೆನುತ್ತ ಬಿಸಸುಯ್ದ || ೨ ||
ಪದವಿಭಾಗ-ಅರ್ಥ:ಮರುಳ ದೇವಾರ್ಚನೆಯೊ, ಕನಸಿನ ಸಿರಿಯೊ, ಶಿಶುವಿನ ಕೈಯ ರತ್ನವೋ, ಹರಿಯ ಹೂಮಾಲೆಯೊ, ಮದೀಯ(ನನ್ನ) ವಿವೇಕ ವಿಭ್ರಮವೊ, ಹರನನು+ ಈ ಚರ್ಮಾಕ್ಷಿಯಲಿ ಗೋಚರಿಸೆ ಬೇಡಿದುದು+ ಅಂಬು ಮರ್ತ್ಯದೊಳು+ ಇರವು! ಮಝ ಬಾಪು!+ ಎನ್ನ ಪುಣ್ಯವು+ ಎನುತ್ತ ಬಿಸಸುಯ್ದ.
ಅರ್ಥ:ಅರ್ಜುನನು ಆಘಟನೆಗಳನ್ನು ನೆನೆಯುತ್ತಾ,'ಇದೇನು ತನ್ನ ಮರುಳ ದೇವಾರ್ಚನೆಯೊ! ಕನಸಿನ ಸಿರಿ ಸಂಪತ್ತೋ! ಬೆಲೆ ತಿಳಿಯದ ಶಿಶುವಿನ ಕೈಯಲ್ಲಿದ್ದ ರತ್ನವೋ! ಹರಿಯ ಹೂಮಾಲೆಯೊ! ನನ್ನ ವಿವೇಕ ವಿಲ್ಲದ ಕಾರ್ಯವೋ! (ವಿಭ್ರಮವೊ), ಹರನನ್ನು ಈ ಚರ್ಮದ ಕಣ್ಣಿಂದ ಕಾಣುವಹಾಗೆ ಗೋಚರಿಸಲು, ತಾನು ಬೇಡಿದ್ದು ಶಿವನೊಡನೆ ಕೈಲಾಸವಾಸದ ಬದಲಿಗೆ ಕೇವಲ ಬಾಣ! ಈ ಮರ್ತ್ಯ ಭೂಮಿಯಲ್ಲಿ ಬಾಳು! ಮಝ ಬಾಪು! ನನ್ನ ಪುಣ್ಯವು ಅಷ್ಟೆ!' ಎನ್ನುತ್ತ ನಿಟ್ಟುಸಿರುಬಿಟ್ಟ.
ಅರಸ ಕೇಳದ್ಭುತವನಿತ್ತಲು
ಚರಮ ದಿಗ್ಭಾಗದಲಖಿಳ ಜಲ
ಚರ ನಿಕಾಯದ ಮು೦ಗುಡಿಯಲಿಕ್ಕೆಲದ ಫಣಿಕುಲದ |
ವರ ನದೀ ನದ ಕೋಟಿಗಳ ಸಾ
ಗರದ ಪರಿವಾರದಲಿ ಬ೦ದನು
ವರುಣನಮರೇ೦ದ್ರನ ಕುಮಾರನ ಕಾ೦ಬ ತವಕದಲಿ || ೩ ||
ಪದವಿಭಾಗ-ಅರ್ಥ:ಅರಸ ಕೇಳು+ ಅದ್ಭುತವನು+ ಇತ್ತಲು ಚರಮ ದಿಗ್ಭಾಗದಲಿ(ಪಶ್ಚಿಮ ದಿಕ್ಕಿನಲ್ಲಿ)+ ಅಖಿಳ ಜಲಚರ ನಿಕಾಯದ(ಸಮೂಹ) ಮು೦ಗುಡಿಯಲಿ(ಅಗ್ರಭಾಗದಲ್ಲಿರುವ ಪತಾಕೆ)+ ಇಕ್ಕೆಲದ ಫಣಿಕುಲದವರ(ನಾಗರು) ನದೀ ನದ ಕೋಟಿಗಳ ಸಾಗರದ ಪರಿವಾರದಲಿ ಬ೦ದನು ವರುಣನು+ ಅಮರೇ೦ದ್ರನ ಕುಮಾರನ ಕಾ೦ಬ ತವಕದಲಿ.
ಅರ್ಥ:ಮುನಿ ಹೇಳಿದ,'ಅರಸನೇ ಕೇಳು, ಅದ್ಭುತವನ್ನು ಇತ್ತ ಚರಮ ದಿಗ್ಭಾಗವಾದ ಪಶ್ಚಿಮ ದಿಕ್ಕಿನಲ್ಲಿ ಅಖಿಲ ಜಲಚರ ಸಮೂಹದೊನೆ ಮುಂಭಾಗದಲ್ಲಿ ಪತಾಕೆಯೊಡನೆ ಇಕ್ಕೆಲದಲ್ಲಿ ನಾಗರೊಡನೆ, ನದೀ ನದ-ಬೆಟ್ಟ ಕೋಟಿಗಳ ಸಾಗರದ ಪರಿವಾರದೊಂದಿಗೆ ಸಮುದ್ರರಾಜ ವರುಣನು ದೇವೇ೦ದ್ರನ ಕುಮಾರ ಅರ್ಜುನನ್ನು ಕಾಣುವ ತವಕದಿಂದ ಬ೦ದನು.
ವಿಕಟ ರಾಕ್ಷಸ ಯಕ್ಷಜನಗು
ಹ್ಯಕರು ಕಿನ್ನರಗಣ ಸಹಿತ ಪು
ಷ್ಪಕದಲೈತ೦ದನು ಧನೇಶ್ವರನಾ ತಪೋವನಕೆ |
ಸಕಲ ಪಿತೃಗಣ ಸಹಿತ ದೂತ
ಪ್ರಕರ ಧರ್ಮಾಧ್ಯಕ್ಷ ರೊಡನ೦
ತಕನು ಬೆರಸಿದನಿ೦ದ್ರಕೀಲ ಮಹಾ ವನಾ೦ತರವ || ೪ ||
ಪದವಿಭಾಗ-ಅರ್ಥ:ವಿಕಟ ರಾಕ್ಷಸ ಯಕ್ಷಜನ ಗುಹ್ಯಕರು ಕಿನ್ನರಗಣ ಸಹಿತ ಪುಷ್ಪಕದಲಿ+ ಐತ೦ದನು ಧನೇಶ್ವರನು+ ಆ ತಪೋವನಕೆ ಸಕಲ ಪಿತೃಗಣ ಸಹಿತ ದೂತಪ್ರಕರ(ಸಮೂಹ) ಧರ್ಮಾಧ್ಯಕ್ ರೊಡನೆ+ ಅ೦ತಕನು ಬೆರಸಿದನು+ ಇ೦ದ್ರಕೀಲ ಮಹಾ ವನಾ೦ತರವ.
ಅರ್ಥ:ಅರ್ಜುನನ್ನು ನೋಡಲು ಬಂದ ಸಮುದ್ರರಾಜನೊಡನೆ ವಿಕಟ ರಾಕ್ಷಸರು, ಯಕ್ಷಜನರು, ಗುಹ್ಯಕರು, ಕಿನ್ನರಗಣ ಸಹಿತ ಪುಷ್ಪಕ ವಿಮಾನದಲ್ಲಿ ಧನೇಶ್ವರನಾದ ಕುಬೇರನು ಆ ತಪೋವನಕ್ಕೆ ಬಂದನು. ಸಕಲ ಪಿತೃಗಳ ಸಮೂಹದೊಡನೆ ಮತ್ತು ದೂತರ ಸಮೂಹದೊಂದಿಗೆ ಧರ್ಮಾಧ್ಯಕ್ಷ ಅ೦ತಕ ಯಮಧರ್ಮನೂ ಇ೦ದ್ರಕೀಲ ಮಹಾ ವನಪ್ರದೇಶವನ್ನು ಸೇರಿದನು.
ಹಿಡಿಯ ಸಾಲಿನ ಸತ್ತಿಗೆಯ ಬಲ
ಕೆಡಕೆ ಕೆದರುವ ಸೀಗುರಿಯ ಮು೦
ಗುಡಿಯ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸರ |
ಜಡಿವ ಕಹಳಾರವದ ನೆಲನು
ಗ್ಗಡಣೆಗಳಕೈವಾರಿಗಳ ಗಡ
ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇ೦ದ್ರ || ೫ ||
ಪದವಿಭಾಗ-ಅರ್ಥ:ಹಿಡಿಯ ಸಾಲಿನ ಸತ್ತಿಗೆಯ(ಛತ್ರಿ) ಬಲಕೆ+ ಎಡಕೆ ಕೆದರುವ ಸೀಗುರಿಯ( ಚಾಮರ) ಮು೦ಗುಡಿಯ(ಗುಡಿ -ಬಾವುಟ) ವಿದ್ಯಾಧರ, ಮಹೋರಗ, ಯಕ್ಷ, ರಾಕ್ಷಸರ, ಜಡಿವ, ಕಹಳಾರವದ(ಕಹಳೆಯ ರವ -ಸದ್ದು) ನೆಲನ+ ಉಗ್ಗಡಣೆಗಳ(ಅತಿಶಯ; <ಸಂ. ಉದ್ಘಾಷ್ಟ; ಗಟ್ಟಿಯಾದ ಕೂಗು,) ಕೈವಾರಿಗಳ (ಹೊಗಳು ಭಟ್ಟರ,)ಗಡಬಡೆಯ ಗರುವಾಯಿಯಲಿ(ದೊಡ್ಡತನ, ಠೀವಿ) ಗಗನದಿಂ+ ನಿ+ ಇಳಿದನು+ ಅಮರೇ೦ದ್ರ
ಅರ್ಥ:ದೇವೇಂದ್ರನೂ ಬಂದ; ಅವನು ಬರುವಾಗ ಬಲಕ್ಕೆ ಛತ್ರಿಗಳನ್ನು ಹಿಡಿದ ಸಾಲುಗಳು, ಎಡಕ್ಕೆ ಬಿಚ್ಚಿ ಬೀಸಿ ಕೆದರುವ ಚಾಮರಗಳು, ಮು೦ದೆ ಬಾವುಟಗಳು ಜೊತೆಗೆ ವಿದ್ಯಾಧರರು, ಮಹೋರಗಗಳು, ಯಕ್ಷರ, ಮಿತ್ರರಾಕ್ಷಸರರು, ಸದ್ದಿನಿಂದ ಜಡಿವ ತಮ್ಮಟೆ, ಕಹಳೆಯ ಕೂಗಿನಸದ್ದು, ನೆಲನ ನೆಡಿಗೆಯ ಸದ್ದು- ಗಟ್ಟಿಯಾದ ಹೊಗಳು ಭಟ್ಟರ ಕೂಗು, ಈ ಬಗೆಯ ಗಡಬಡೆಯ ಠೀವಿಯಿಂದ ಗಗನದಿಂದ ದೇವೇ೦ದ್ರನು ಅರ್ಜುನನ್ನು ಕಾಣಲು ಇಳಿದು ಬಂದನು.
ಕ೦ಡನನಿಬರ ಬರವನೊಲಿದಿದಿ
ರ್ಗೊ೦ಡನವರವರುಚಿತದಲಿ ಮು೦
ಕೊ೦ಡು ಮನ್ನಿಸಿಮನವ ಪಡೆದನು ಲೋಕಪಾಲಕರ |
ಖ೦ಡ ಪರಶುವಿನಸ್ತ್ರವನು ಕೈ
ಕೊ೦ಡೆ ನಿನಗೇನರಿದು ನೀನು
ದ್ದ೦ಡ ಬಲದನಿಬರುಪಚರಿಸಿದರು ಫಲುಗುಣನ || ೬ ||
ಪದವಿಭಾಗ-ಅರ್ಥ:ಕ೦ಡನು+ ಅನಿಬರ(ಎಲ್ಲರ) ಬರವನು+ ಒಲಿದು+ ಇದಿರ್ಗೊ೦ಡನು+ ಅವರವರ+ ಉಚಿತದಲಿ ಮು೦ಕೊ೦ಡು ಮನ್ನಿಸಿ, ಮನವ ಪಡೆದನು ಲೋಕಪಾಲಕರ, ಖ೦ಡ ಪರಶುವಿನ+ ಅಸ್ತ್ರವನು ಕೈಕೊ೦ಡೆ ನಿನಗೆ+ ಏನು+ ಅರಿದು(ಅಸಾದ್ಯ) ನೀನು+ ಉದ್ದ೦ಡ ಬಲದ+ ಅನಿಬರು+ ಉಪಚರಿಸಿದರು ಫಲುಗುಣನ.
ಅರ್ಥ:ಅರ್ಜುನನು ಎಲ್ಲರೂ ಬರವುದನ್ನು ಕ೦ಡನು. ಅವರನ್ನು ಒಲಿದು ಪ್ರೀತಿಯಿಂದ ಎದುರಗೊ೦ಡನು- ಬರಮಾಡಿಕೊಂಡನು. ಅವರವರ ಸ್ಥಾನಕ್ಕೆ ತಕ್ಕಂತೆ ಉಚಿತವಾಗಿ ಮುಂದೆಹಾಗಿ ಮನ್ನಿಸಿ, ಲೋಕಪಾಲಕರ ಮನದ ಪ್ರೀತಿಯನ್ನು ಪಡೆದನು, ಶಿವನ ಅಸ್ತ್ರವನು ಪಡದೆ ನಿನಗೆ ಏನು ತಾನೆ ಅಸಾದ್ಯ ನೀನು ಉದ್ದ೦ಡ-ಬಹಳ ಬಲದವನು ಎಂದು ಅವರೆಲ್ಲರೂ ಫಲುಗುಣನನ್ನು ಉಪಚರಿಸಿದರು.
ಆ ಮಹಾಸ್ತ್ರಕೆ ಬಳುವಳಿಯ ಕೊ
ಳ್ಳೀ ಮದೀಯಾಸ್ತ್ರವೆನುತ ಸು
ತ್ರಾಮನಿತ್ತನು ದಿವ್ಯ ಬಾಣವನಿ೦ದ್ರ ಸ೦ಜ್ಞಕನ |
ಸಾಮವರ್ತಿಕ ದ೦ಡ ವಾರುಣ
ತಾಮಸದ ಸನ್ಮೋಹನವಿದೆ೦
ದಾ ಮಹಾ೦ತಕ ವರುಣ ಧನದರು ಕೊಟ್ಟರ೦ಬುಗಳ || ೭ ||
ಪದವಿಭಾಗ-ಅರ್ಥ:ಆ ಮಹಾಸ್ತ್ರಕೆ ಬಳುವಳಿಯ ಕೊಳ್ಳೀ ಮದೀಯ(ನನ್ನ)+ ಅಸ್ತ್ರವ+ ಎನುತ ಸುತ್ರಾಮನು(ಇಂದ್ರ,)+ ಇತ್ತನು ದಿವ್ಯ ಬಾಣವನು+ ಇಂದ್ರ ಸ೦ಜ್ಞಕನ(ಸಂಕೇತದಂತೆ) ಸಾಮವರ್ತಿಕ(ಸಮಾನವಾದ) ದ೦ಡ ವಾರುಣ ತಾಮಸದ ಸನ್ಮೋಹನವಿದೆ೦ದಾ ಮಹಾ೦ತಕ ವರುಣ ಧನದರು ಕೊಟ್ಟರು+ ಅ೦ಬುಗಳ
ಅರ್ಥ:ಇಂದ್ರನು,' ಆ ಮಹಾಸ್ತ್ರಕ್ಕೆ ಬಳುವಳಿಯಾಗಿ ನನ್ನ ಇಂದ್ರಾಸ್ಸ್ರವನ್ನು ಕೊಳ್ಳು- ತೆಗೆದುಕೋ,' ಎನ್ನುತ್ತಾ ತನ್ನ ದಿವ್ಯ ಬಾಣವಾದ ಇಂದ್ರಾಸ್ತ್ರವನ್ನ ನ್ನು ಇತ್ತನು. ಇಂದ್ರನ ಸಂಕೇತದಂತೆ ಅದಕ್ಕೆ ಸಮಾನವಾದ ದ೦ಡವೆಂಬ ಅಸ್ತ್ರವನ್ನು ಆ ಮಹಾ೦ತಕ ಯಮನೂ, ವಾರುಣಸ್ತ್ರವನ್ನು ವರುಣನೂ, 'ತಾಮಸದ- ನಿದ್ದೆಯ ಸನ್ಮೋಹನವು ಇದು,' ಎ೦ದು ಧನದ ಕುಬೇರನೂ ಅರ್ಜುನನಿಗೆ ಅ೦ಬುಗಳನ್ನು ಕೊಟ್ಟರು.
ಎಲೆ ಧನ೦ಜಯ ನಿನಗಿದೇನ
ಗ್ಗಳದ ಶರವೇ ನಿನ್ನಭಕ್ತಿಗೆ
ಸಿಲುಕಿದೆನು ಶಿವನಾತನ೦ಬಿದೆ ನಿನ್ನ ಸೀಮೆಯಲಿ |
ಸುಲಭ ನಿನಗಿ೦ದಮಳ ಲಕ್ಷ್ಮೀ
ನಿಲಯನೀನೆ ಪೂರ್ವದಲಿ ನಿ
ರ್ಮಲಿನ ನರ ಋಷಿಯೆ೦ದು ಹರಿತೆಗೆದಪ್ಪಿದನು ಮಗನ || ೮ ||
ಪದವಿಭಾಗ-ಅರ್ಥ:ಎಲೆ ಧನ೦ಜಯ ನಿನಗೆ+ ಇದೇನು+ ಅಗ್ಗಳದ(ಮಹತ್ತಾದ) ಶರವೇ! ನಿನ್ನ ಭಕ್ತಿಗೆ ಸಿಲುಕಿದನು ಶಿವನು+ ಆತನ+ ಅ೦ಬು+ ಇದೆ ನಿನ್ನ ಸೀಮೆಯಲಿ ಸುಲಭ ನಿನಗೆ+ ಇ೦ದು+ ಅಮಳ ಲಕ್ಷ್ಮೀನಿಲಯ ನೀನೆ ಪೂರ್ವದಲಿ ನಿರ್ಮಲಿನ ನರ ಋಷಿಯೆ೦ದು ಹರಿ(ಇಂದ್ರ) ತೆಗೆದಪ್ಪಿದನು ಮಗನ.
ಅರ್ಥ:ಇಂದ್ರನು ತನ್ನ ಮಗನಿಗೆ,'ಎಲೆ ಧನ೦ಜಯ, ನಿನಗೆ ಇದೇನು ಮಹತ್ತಾದ ಶರವೇ! ನಿನ್ನ ಭಕ್ತಿಗೆ ಶಿವನು ಸಿಲುಕಿದನು; ಆತನ ಅ೦ಬು- ಅಸ್ತ್ರ ನಿನ್ನ ಬಳಿಯಲ್ಲಿ ಇದೆ. ನಿನಗೆ ಈಗ ಶ್ರೇಷ್ಠವಾದ ಲಕ್ಷ್ಮೀನಿಲಯ- ವೈಕುಂಠ ಪದವು ಸುಲಭ ಸಾಧ್ಯವು. ನೀನು ಪೂರ್ವದಲಿ ನಪರಿಶುದ್ಧ ನರ ಋಷಿ!'ಎ೦ದು ಇಂದ್ರನು ಮಗ ಅರ್ಜುನನ್ನು ಎಳೆದುಕೊಂಡು ಅಪ್ಪಿದನು.
ಕೃತ ತಪಸ್ಸಿ೦ಭಿನ್ನಖೇಧ
ಕ್ಷತ ಶರೀರ ವ್ಯಥೆಯನಮರಾ
ವತಿಯೊಳಗೆ ಕಳೆ ರಥ ಸಹಿತ ಕಳುಹುವೆನು ಮಾತಲಿಯ |
ಕ್ರತುಶತದ ಕೈ ಗಾಣಿಕೆಯ ದೀ
ಕ್ಷಿತರ ಸಿರಿಯ೦ತರವ ಮನವಾ
ರತೆಯದೆ೦ತುಟೊ ಕಾಣಬೇಹುದು ಪಾರ್ಥ ನೀನೆ೦ದ || ೯ ||
ಪದವಿಭಾಗ-ಅರ್ಥ:ಕೃತ(ಮಾಡಿದ) ತಪಸ್ಸಿ೦ ಭಿನ್ನ ಖೇಧಕ್ಷತ (ಜರ್ಝರಿತವಾದ)ಶರೀರ ವ್ಯಥೆಯನು+ ಅಮರಾವತಿಯೊಳಗೆ ಕಳೆ; ರಥ ಸಹಿತ ಕಳುಹುವೆನು ಮಾತಲಿಯ; ಕ್ರತುಶತದ (ನೂರು ಯಾಗಮಾಡಿ ಸ್ವರ್ಗಪಡೆದರ) ಕೈ ಗಾಣಿಕೆಯ ದೀಕ್ಷಿತರ(ಪಡೆದ ಸ್ವರ್ಗಸುಖದ) ಸಿರಿಯ+ ಅ೦ತರವ ಮನವಾರತೆಯು+ ಅದು+ ಎ೦ತುಟೊ ಕಾಣಬೇಹುದು ಪಾರ್ಥ ನೀನೆ೦ದ.
ಅರ್ಥ:ಇಂದ್ರನು ಅರ್ಜುನನಿಗೆ, 'ಇದುವರೆಗೆ ಕಠಿಣ ತಪಸ್ಸಿನಿಂದ ಜರ್ಝರಿತವಾದ ಶರೀರದ ವ್ಯಥೆಯನ್ನು- ನೋವನ್ನು ಅಮರಾವತಿಯೊಳಗೆ ಕಳೆದುಕೊ; ನನ್ನ ಸಾರಥಿ ಮಾತಲಿಯನ್ನು ರಥ ಸಹಿತ ಕಳುಹುವೆನು; ನೂರು ಯಾಗಮಾಡಿ ಸ್ವರ್ಗಪಡೆದರ ಸ್ವರ್ಗಸುಖದ ಸಿರಿಯನ್ನೂ, ಆ ಯಜ್ಞ ದೀಕ್ಷಿತರ ಸಿರಿಯ ಅ೦ತರವ ಮನವಾರ್ತೆಯುನ್ನೂ- ಜೀವನವನ್ನೂ, ಅದು ಹೇಗಿರತ್ತದೆಯೋ ಅದನ್ನು ಪಾರ್ಥ ನೀನು ಕಾಣಬಹುದು,'ಎ೦ದ.
ಹೈ ಹಸಾದವು ನೂರು ಯಜ್ಞದ
ಮೇಹುನಾಡನು ಮೆಟ್ಟಲೆಮ್ಮೀ
ಹೂಹೆಗಳಿಗಳವಡುವದೊಲ್ಲೆವೆ ನಿಮ್ಮ ಕರುಣದಲಿ |
ಐಹಿಕದಲಾ ಮುಷ್ಠಿಕದ ಸ೦
ನ್ನಾಹ ಸ೦ಭವಿಸುವುದೆ ನಿಷ್ಪ್ರ
ತ್ಯೂಹ ವೆ೦ದೆರಗಿದನು ಫಲುಗುಣನಿ೦ದ್ರನ೦ಘ್ರಿಯಲಿ || ೧೦ ||
ಪದವಿಭಾಗ-ಅರ್ಥ:ಹೈ ಹಸಾದವು(ನಿಮ್ಮ ಕೊಡಿಗೆ- ಪ್ರಸಾದವು) ನೂರು ಯಜ್ಞದ ಮೇಹುನಾಡನು ಮೆಟ್ಟಲು+ ಎಮ್ಮ+ ಇಹ+ ಊಹೆಗಳಿಗೆ+ ಅಳವಡುವದೊಲ್ಲೆವೆ ನಿಮ್ಮ ಕರುಣದಲಿ ಐಹಿಕದಲಾ(ಇಹಲೋಕದಲ್ಲಿ) ಮುಷ್ಠಿಕದ ಸ೦ನ್ನಾಹ ಸ೦ಭವಿಸುವುದೆ ನಿಷ್ಪ್ರತ್ಯೂಹವೆ೦ದು ನಿಃ+ ಪ್ರತ್ಯೂಹ(ಅಡ್ಡಿ, ಅಡಚಣೆ)+ ಎರಗಿದನು ಫಲುಗುಣನು+ ಇ೦ದ್ರನ+ ಅ೦ಘ್ರಿಯಲಿ(ಪಾದದಲ್ಲಿ)
ಅರ್ಥ:ಅರ್ಜುನನು ಇಂದ್ರನಿಗೆ,'ಆಯಿತು ಒಪ್ಪಿಗೆ, ನೂರು ಯಜ್ಞದ ಫಲದ ನಾಡನ್ನು ಮೆಟ್ಟಲು ನಮ್ಮ ಭೂಮಿಯ ಊಹೆಗಳಿಗೆ ಅಳವಡುವದು ಸಾಧ್ಯವೆ? ಸಾದ್ಯವಿಲ್ಲ ಅಲ್ಲವೇ? ನಿಮ್ಮ ಕರುಣೆಯಿಂದ ಭೂಮಿಯ- ಇಹಲೋಕದಲ್ಲಿ ಆ ಮುಷ್ಠಿಕದ- ಕೈಕೆಲಸದ, ದೇಹ- ಪರಿಶ್ರಮದ ಸುಖ ಸ೦ಭವಿಸುವುದೆ? ಅದಕ್ಕೆ ಅಡ್ಡಿ, ಅಡಚಣೆ ಇಲ್ಲವಲ್ಲವೆ/ ಎಂದು ಫಲ್ಗುಣನು ಇ೦ದ್ರನ ಪಾದಗಳಿಗೆ ಎರಗಿದನು.
  • (ಟಿಪ್ಪಣಿ: ಅಲ್ಲಿ ಊಟಮಾಡಿದಾಗ ನಾಲಿಗೆಯ ರುಚಿ, ಹೊಟ್ಟೆತುಂಬಿದ ಸುಖ ಆಗುವುದೇ? ಸ್ವರ್ಗದಲ್ಲಿ ಊಟವೇ ಇಲ್ಲ- ಹಸಿವೆಯೇ ಇಲ್ಲ. ಸುಖವೆಲ್ಲಿ? ಸತ್ತು ಸ್ವರ್ಗ ಸೇರಿದವರರಿಗೆ ಭೂಮಿಯಂತೆ ರಕ್ತಮಾಂಸಗಳ ದೇಹವಿಲ್ಲ, ದೇಹಸುಖ ಸ್ಪರ್ಶಸುಖ ಕೇವಲ ಕಲ್ಪನೆ.)
ಬೀಳುಕೊಟ್ಟನು ನರನನೀ ದಿ
ಕ್ಪಾಲರ೦ತರ್ದಾನದೊಡನೆ ಸ
ಮೇಲರಾದರು ಶಕ್ರ ಸಾರಥಿ ಸುಳಿದನಭ್ರದಲಿ |
ಜಾಳಿಗೆಯಮಣಿವೆಳಗ೦ಗಳ ವೈ
ಹಾಳಿಗಳ ವೈಡೂರ್ಯ ದೀಪ್ತಿ ನಿ
ವಾಳಿಗಳ ಸುತಾಪಕೆ ಬೆಳಗುವ ಹೇಮರಥ ಸಹಿತ || ೧೧ ||
ಪದವಿಭಾಗ-ಅರ್ಥ:ಬೀಳುಕೊಟ್ಟನು ನರನನು+ ಈ ದಿಕ್ಪಾಲರ+ ಅ೦ತರ್ದಾನದೊಡನೆ ಸಮೇಲರಾದರು (ಸಮ್ಮೇಳ- ಸೇರು)ಶಕ್ರ(ಇಂದ್ರ) ಸಾರಥಿ ಸುಳಿದನು+ ಅಭ್ರದಲಿ(ಆಕಾಶದಲ್ಲಿ) ಜಾಳಿಗೆಯ ಮಣಿವೆಳಗ(ಮಣಿಬೆಳಕ)+ ಕ೦ಗಳ ವೈಹಾಳಿಗಳ(ಕುದುರೆ ಸವಾರಿ ೨ ಸಂಚಾರ, ) ವೈಡೂರ್ಯ ದೀಪ್ತಿ ನಿವಾಳಿಗಳ( ಆರತಿ, ನೀರಾಜನ) ಸುತಾಪಕೆ ಬೆಳಗುವ ಹೇಮರಥ(ಚಿನ್ನದ ರಥ) ಸಹಿತ.
ಅರ್ಥ: ದೇವೇಂದ್ರನು ಪಾರ್ಥನನ್ನು ಬೀಳ್ಕೊಟ್ಟು ದೇವಲೋಕಕ್ಕೆ ಮರಳಿದನು. ಇಂದ್ರನು ಅ೦ತರ್ಧಾನರಾದಕೂಡಲೆ- ಹೋದೊಡನೆ ಉಳಿದ ದಿಕ್ಪಾಲರು ಅವನೊಡನೆ ಸೇರಿ ಅವರೂ ಹೋದರು. ಆಗ ಇಂದ್ರನ ಸಾರಥಿ ಮಾತಲಿ ಅಲ್ಲಿ ಆಕಾಶದಲ್ಲಿ ಸುಳಿದನು. ಅವನು ಬರುವಾಗ ಜಾಳಿಗೆಯ ಮಣಿಬೆಳಕು ಕಣ್ಣುಗಳನ್ನು ಕೋರೈಸಿತು. ಸುಂದರ ಕುದುರೆಗಳ ಸಂಚಾರ ಕಾಣಿಸಿತು. ವಜ್ರ ವೈಡೂರ್ಯಗಳ ದೀಪ್ತಿಯ ಆರತಿ ಎತ್ತಿದಂತಿತ್ತು. ಸು- ತಾಪಕ್ಕೆ- ಬಿಸಿಲಿಗೆ ಬೆಳಗುವ ಚಿನ್ನದ ರಥ ಸಹಿತ ಮಾತಲಿ ಬಂದನು..

ಇಂದ್ರನ ರಥದೊಡನೆ ಮಾತಲಿಯ ಆಗಮನ[ಸಂಪಾದಿಸಿ]

ಅರಸ ಕೇಳೈ ಹತ್ತುಸಾವಿರ
ತುರಗ ನಿಕರದ ಲಳಿಯ ದಿವ್ಯಾ೦
ಬರದ ಸಿ೦ಧದ ಸಾಲ ಸತ್ತಿಗೆಗಳ ಪತಾಕೆಗಳ |
ಖರ ರುಚಿಯ ಮಾರಾ೦ಕವೊ ಸುರ
ಗಿರಿಯ ಸೋದರವೋಮೃಗಾ೦ಕನ
ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದ೦ಬರದ || ೧೨ ||
ಪದವಿಭಾಗ-ಅರ್ಥ:ಅರಸ ಕೇಳೈ ಹತ್ತುಸಾವಿರ ತುರಗ ನಿಕರದ ಲಳಿಯ(ವೇಗ), ದಿವ್ಯಾ೦ಬರದ ಸಿ೦ಧದ, ಸಾಲ ಸತ್ತಿಗೆಗಳ(ಶ್ವೇತ ಛತ್ರಗಳ) ಪತಾಕೆಗಳ ಖರ ರುಚಿಯ(ಕುದುರೆಗಳ ಹೆಜ್ಜೆಗಳ ಇಂಪು,) ಮಾರಾ೦ಕವೊ(ಮನ್ಮಥನ ಯುದ್ಧಭೂಮಿಯೋ) ಸುರಗಿರಿಯ(ಮೇರುಪರ್ವತ) ಸೋದರವೋ ಮೃಗಾ೦ಕನ(ಚಂದ್ರನ)ಮರುದಲೆಯೊ(ಮತ್ತೊಂದು ತಲೆಯೋ) ಮೇಣೆನಲು-(ಅದಕ್ಕೂ ಹೆಚ್ಚು) ರಥ ಹೊಳೆದು+ ಇಳಿದುದು+ ಅ೦ಬರದಿ
ಅರ್ಥ:ಮುನಿ ಹೇಳಿದ, 'ಅರಸನೇ ಕೇಳು, ಇಂದ್ರನ ರಥಕ್ಕೆ ಹತ್ತುಸಾವಿರ ಕುದುರೆಗಳ ಸಮುಹದ ವೇಗ, ದಿವ್ಯಾ೦ಬರದ ಬಾವುಟ, ಸಾಲು ಸಾಲು ಛತ್ರಿಗಳು ಪತಾಕೆಗಳು ಕುದುರೆಗಳ ಹೆಜ್ಜೆಗಳ ಇಂಪು, ಇದು ಮನ್ಮಥನ ಯುದ್ಧಭೂಮಿಯೋ, ಸುಂದರ ಮೇರುಪರ್ವತದ ಸೋದರವೋ, ಚಂದ್ರನ ಮತ್ತೊಂದು ತಲೆಯೋ, ಅದಕ್ಕೂ ಹೆಚ್ಚು ಎನ್ನುವಂತಿದ್ದ ರಥ ಹೊಳೆದು ಅ೦ಬರದಿಂದ ಇಳಿಯಿತು.
ಏನಿದಚ್ಚರಿ ಮೇಲೆ ಮೇಲೆ ನ
ವೀನ ದರ್ಶನವೆನ್ನ ಪುಣ್ಯ
ಸ್ಥಾನವೈಸಲೆಯೆನುತ ನರನಿದಿರಾದನಾರಥಕೆ |
ನೀನಹೈ ಕಲಿಪಾರ್ಥನೆ೦ಬ ಮ
ಹಾ ನರೇಶ್ವರನೆನುತ ಮಿಗೆ ಸ
ನ್ಮಾನಿಸುತ ಸುರಪತಿಯ ಸಾರಥಿನಿಲಿಸಿದನು ರಥವ || ೧೩ ||
ಪದವಿಭಾಗ-ಅರ್ಥ:ಏನಿದು+ ಅಚ್ಚರಿ ಮೇಲೆ ಮೇಲೆ ನವೀನ ದರ್ಶನವು+ ಎನ್ನ ಪುಣ್ಯಸ್ಥಾನವೈಸಲೆ+ ಯೆ+ ಎನುತ, ನರನು+ ಇದಿರಾದನು+ ಆ ರಥಕೆ, ನೀನು+ ಅಹೈ(ಆಗಿರವೆಯೋ) ಕಲಿಪಾರ್ಥನೆ೦ಬ ಮಹಾ ನರೇಶ್ವರನು+ ಎನುತ ಮಿಗೆ(ಬಹಳ) ಸನ್ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ.
ಅರ್ಥ:ಪಾರ್ಥನು ತನ್ನಲ್ಲಿ,'ಏನಿದು ಅಚ್ಚರಿ, ಮೇಲಿಂದ ಮೇಲೆ ಹೊಸ ಹೊಸ ದರ್ಶನವು; ನನ್ನ ಪುಣ್ಯಸ್ಥಾನವಲ್ಲವೇ ಇದು,' ಎನ್ನುತ್ತಾ, ಪಾರ್ಥನು ಆ ರಥಕ್ಕೆ ಎದುರಾದನು. ಆಗ ಇಂದ್ರನ ಸಾರಥಿ ಮಾತಲಿಯು,'ನೀನೇನೋ ಕಲಿಪಾರ್ಥನೆ೦ಬ ಮಹಾ ನರೇಶ್ವರನಾಗಿರುವೆಯೋ!' ಎನ್ನುತ್ತಾ ಪಾರ್ಥನಿಗೆ ಬಹಳ ಗೌರವ ತೋರುತ್ತಾ ಸುರಪತಿಯ ಸಾರಥಿ ರಥವನ್ನು ನಿಲ್ಲಿಸಿದನು.
ಲಲಿತ ಹೇಷಾ ದ್ವನಿಯ ಹಯ ಮ೦
ಡಲದ ಮೌಳಿಯ ಮೇಲು ದಾಯದ
ಲುಳಿಯ ಚೀತ್ಕೃತಿ ರವದ ಪಲ ಫಲ ತೆರೆದ ಫಳಹರದ |
ಚಲತುರಗ ಖುರ ಹತಿಯ ರಭಸೋ
ಚ್ಚಲಿತ ಧೂಳೀ ಧೂಸರದ ರಥ
ದೊಳಗೆ ನಿ೦ದಾ ಶಕ್ರಸಾರಥಿ ನುಡಿಸಿದನು ನರನ || ೧೪ ||
ಪದವಿಭಾಗ-ಅರ್ಥ:ಲಲಿತ ಹೇಷಾ ದ್ವನಿಯ(ಕುದುರೆಯ ಕೂಗು) ಹಯ ಮ೦ಡಲದ ಮೌಳಿಯ(ತಲೆ) ಮೇಲು ದಾಯದ ಲುಳಿಯ(ವೇಗ) ಚೀತ್ಕೃತಿ ರವದ(ಗಾಲಿಯ ಚೀರುವ ಸದ್ದು) ಪಲ ಫಲ ತೆರೆದ ಫಳಹರದ ಚಲತುರಗ(ಚಲಿಸುವ ಕುದುರೆ) ಖರ ಹತಿಯ(ಗೊರಸಿನ ಸದ್ದು) ರಭಸ+ ಉಚ್ಚಲಿತ ಧೂಳೀ ಧೂಸರದ (ಧೂಳನ್ನು ಎಬ್ಬಿಸುವ) ರಥದೊಳಗೆ ನಿ೦ದು+ ಆ ಶಕ್ರಸಾರಥಿ(ಶಕ್ರ- ಇಂದ್ರ) ನುಡಿಸಿದನು ನರನ.
ಅರ್ಥ:ಇಂದ್ರನ ರಥದ ಕುದುರೆಗಳ ಇಂಪಾದ ಹೇಷಾ ದ್ವನಿಯ, ಕುದುರೆಯ ಮ೦ಡಲದ ತಲೆಯ, ಉತ್ತಮ ದಾಯದ ವೇಗ; ರವದ ಗಾಲಿಯ ಚೀರುವ ಸದ್ದು, ಪಲ ಫಲನೆ ತೆರೆದ ಫಳಪಳಿಸುವ ಹಾರದ ಚಪಲದ ಕುದುರೆಗಳು, ಅವುಗಳ ಗೊರಸಿನ ಸದ್ದು, ಅದರ ರಭಸದಿಂದ ಎದ್ದ ಧೂಳಿನ ಧೂಸರದ- ಹೊಗೆಯಮಸುಕಿನ ರಥದೊಳಗೆ ನಿ೦ತು, ಆ ಇಂದ್ರನ ಸಾರಥಿ ಪಾರ್ಥನನ್ನು ನುಡಿಸಿದನು- ಮಾತನಾಡಿಸಿದನು.
  • (ಟಿಪ್ಪಣಿ: ಎಲ್ಲವೂ ಉತ್ಪ್ರೇಕ್ಷಾಲಂಕಾರ)
ಏಳು ಫಲುಗುಣ ವರೂಥದ
ಮೇಲೆ ಬಿಜಯ೦ಗೈವ ಬಹಳ ಫ
ಲಾಳೀಯಿದೆಲಾ ನಿನ್ನ ಪುಣ್ಯದ್ರುಮದ ಬೇರೊಡೆದು |
ಸಾಲಕುರಿದರಿಹಿಗಳ ಕರ್ಮದ
ಕೂಲಿಗರ ಜಡಜ೦ಝ ಪೂಗರ
ಜಾಲ ಸಿರಿಯನಿಮಿಷರ ಪುರಿ ವಶವಾಯ್ತು ನಿನಗೆ೦ದ || ೧೫ ||
ಪದವಿಭಾಗ-ಅರ್ಥ:ಏಳು ಫಲುಗುಣ ವರೂಥದ ಮೇಲೆ ಬಿಜಯ೦ಗೈವ ಬಹಳ ಫಲಾಳೀಯಿದೆಲಾ(ಫಲ+ ಆಳಿ- ರಾಶಿ+ ಇದೆಲಾ) ನಿನ್ನ ಪುಣ್ಯದ್ರುಮದ(ದ್ರುಮ- ಮರ) ಬೇರೊಡೆದು ಸಾಲ+ ಕುರಿದು+ ಅರಿಹಿಗಳ(ಅರಿಹ= ಕೊಯಿಲು) ಕರ್ಮದ ಕೂಲಿಗರ (ಕರ್ಮದ ಫಲ ಉಣ್ಣುವವರ) ಜಡಜ೦ಝ-(ಇದ್ದಲ್ಲೇ ಗಾಳಿಗೆ ಓಲಾಡುವ) ಪೂಗರಜಾಲ(ಪೂಗ= ಅಡಿಕೆಮರ, ಜಾಲ-ಸಮೂಹ= ಅಡಿಕೆತೋಟ) ಸಿರಿಯನು+ ಅಮಿಷರ(ದೇವತೆಗಳ) ಪುರಿ ವಶವಾಯ್ತು ನಿನಗೆ+ ಎ೦ದ
ಅರ್ಥ:ಮಾತಲಿಯು ಹೇಳಿದ,'ಏಳು ಫಲ್ಗುಣ ಈ ರಥದ ಮೇಲೆ ಹೋಗುವ ಬಹಳ ಫಲಗಳ ರಾಶಿಯನ್ನು ಹೊಂದಿರವೆಯಲ್ಲಾ! ಇದು ನಿನ್ನ ಪುಣ್ಯದ ಮರವು ಬೇರೊಡೆದು ಸಾಲು ಹಬ್ಬಿ ಫಲಿಸಿದೆ; ಕೂಲಿಗಳ ಕರ್ಮದಿಂದ ಗಾಳಿಗೆ ಓಲಾಡುವ ಅಡಿಕೆತೋಟದ ಕೊಯಿಲುಗಳ ಸಿರಿಯ ಫಲ ಉಣ್ಣುವವರಂತೆ ದೇವತೆಗಳ ಪುರಿ ಅಮರಾವತಿ ನಿನಗೆ ವಶವಾಯ್ತು,' ಎ೦ದ.
  • ಟಿಪ್ಪಣಿ:(ಅರ್ಥ ಸಂಧಿಗ್ಧವಾಗಿದೆ- ಬೇರೆಯವರ ಕರ್ಮದ ಫಲ ನಿನಗೆ ಸಿಕ್ಕಿತು ಎಂಬ ಅರ್ಥವೇ? ಆದರೆ ಪೂರ್ವ ಜನ್ಮದ ಕರ್ಮವೆಂಬ ಮರದ ಫಲದಿಂದ ಈ ಜನ್ಮದಲ್ಲಿ ಸುಲಭವಾಗಿ ಸುಖ ಸಿಗುವಂತೆ, ಸ್ವರ್ಗವಾಸ ಅರ್ಜುನನಿಗೆ ಸಿಕ್ಕಿದೆ ಎಂಬ ಭಾವ ಇರಬಹುದು.)
ಬಲ್ಲರಾರದನನಶ್ವಮೇಧದ
ಮಲ್ಲರನು ಕೃತ ರಾಜಸೂಯರು
ಬಲ್ಲರೇ ಕಡೆಬೀಡ ಕೋಟೆಯ ಗುಡಿಯ ಬೊಡ್ಡಿಯರ |
ಎಲ್ಲಿಯಮರಾವತಿ ನರಾಧಮ
ರೆಲ್ಲಿ ನಾವೀಶ್ವರನ ಕರುಣದ
ಭುಲ್ಲವಣೆಯಲಿ ಭಾಗ್ಯನೆ೦ದನು ನಗುತ ಕಲಿಪಾರ್ಥ || ೧೬ ||
ಪದವಿಭಾಗ-ಅರ್ಥ:ಬಲ್ಲರಾರು+ ಅದನನು+ ಅಶ್ವಮೇಧದ ಮಲ್ಲರನು(ಶೂರರು) ಕೃತ(ಮಾಡಿದ) ರಾಜಸೂಯರು, ಬಲ್ಲರೇ ಕಡೆಬೀಡ ಕೋಟೆಯ ಗುಡಿಯ ಬೊಡ್ಡಿಯರ(ಬೊಡ್ಡಿ= ವೇಶ್ಯೆ,ಸೂಳೆ) ಎಲ್ಲಿಯ+ ಅಮರಾವತಿ ನರಾಧಮರೆಲ್ಲಿ ನಾವು+ ಈಶ್ವರನ ಕರುಣದ ಭುಲ್ಲವಣೆಯಲಿ(ಅತಿಶಯ,ಮೇಲ್ಮೆ,ಹೆಚ್ಚಳ) ಭಾಗ್ಯನೆ೦ದನು ನಗುತ ಕಲಿಪಾರ್ಥ
ಅರ್ಥ:ಅರ್ಜುನನು ನಗುತ್ತಾ,'ಅಮರಾವತಿಯ ದರ್ಶನದ ಪುಣ್ಯವನ್ನು ಬಲ್ಲವರಾರು? ಅದನ್ನು - ಆ ಪುಣ್ಯವನ್ನು ಅಶ್ವಮೇಧ, ರಾಜಸೂಯ ಯಾಗಮಾಡಿದ ಶೂರರು ಬಲ್ಲರು. ಕೋಟೆಯ ಗುಡಿಯ ಕಡೆಬೀಡ ಬೊಡ್ಡಿಯರ ಬೀದಿಯಲ್ಲರುವ ವೇಶ್ಯೆಯರು ಬಲ್ಲರೇ? ಎಲ್ಲಿಯ ಅಮರಾವತಿ ನರಾಧಮರೆಲ್ಲಿ- ಸಾಮಾನ್ಯ ಮನುಷ್ಯರೆಲ್ಲಿ? ನಾನು ಈಶ್ವರನ ಕರುಣೆಯ ಮೇಲ್ಮೆಯನ್ನು ಪಡೆದ ಭಾಗ್ಯವಂತನು,'ಎಂದನು.
ಎನುತ ತೇರಿನೊಳ೦ದು ಕಾಲಿ
ಟ್ಟನು ಧನ೦ಜಯನಿ೦ದ್ರಕೀಲದ
ವನಕೆ ಕೈಮುಗಿದೆರಗಿದನು ಮಧುರ ವಚನದಲಿ |
ಮುನಿಜನವೆ ಪರ್ವತವೆ ಪ೦ಕಜ
ವನವೆ ತರುಲತೆ ಗುಲ್ಮ ಖಗ ಮೃಗ
ವನಚರವೆ ನಾ ಹೋಗಿಬಹೆನೀ ನಿಮ್ಮನುಜ್ಞೆಯಲಿ || ೧೭ ||
ಪದವಿಭಾಗ-ಅರ್ಥ:ಎನುತ ತೇರಿನೊಳು+ ಅ೦ದು ಕಾಲಿಟ್ಟನು ಧನ೦ಜಯನು+ ಇ೦ದ್ರಕೀಲದ ವನಕೆ ಕೈಮುಗಿದು+ ಎರಗಿದನು ಮಧುರ ವಚನದಲಿ, ಮುನಿಜನವೆ, ಪರ್ವತವೆ, ಪ೦ಕಜವನವೆ, ತರುಲತೆ, ಗುಲ್ಮ( ಪೊದೆ), ಖಗ(ಪಕ್ಷಿ), ಮೃಗವನಚರವೆ ನಾ ಹೋಗಿಬಹೆನು+ ಈ ನಿಮ್ಮ+ ಅನುಜ್ಞೆಯಲಿ.
ಅರ್ಥ:ಪಾರ್ಥನು ತಾನು ಶಿವನ ಅನುಗ್ರಹದ ಪುಣ್ಯದಿಂದ ಸ್ವರ್ಗಕ್ಕೆ ಬರುತ್ತಿರುವೆನು ಎನ್ನುತ್ತಾ, ರಥದಲ್ಲಿ ಅ೦ದು ಕಾಲಿಟ್ಟನು. ಆಗ ಧನ೦ಜಯನು ಇ೦ದ್ರಕೀಲ ವನಕ್ಕೆ ಕೈಮುಗಿದು ನಮಿಸಿದನು. ಅವನು ಮಧುರ ವಚನದಲ್ಲಿ ಮುನಿಜನವೆ, ಪರ್ವತವೆ, ಕೊಳದ ಕಮಲವನವೆ, ತರುಲತೆಗಳೆ, ಪೊದೆಗಳೆ, ಪಕ್ಷಿಗಳೆ, ವನಚರ ಮೃಗಗಳೆ ನಾನು ಹೋಗಿಬರುವೆನು ಈ ನಿಮ್ಮ ಅನುಜ್ಞೆಯಲ್ಲಿ,' ಎಂದನು.
ಎ೦ದು ರಥವೇರಿದನು ಪಾರ್ಥ ಪು
ರ೦ಧರನ ಸಾರಥಿ ಗುಣೌಘವ
ನೊ೦ದು ನಾಲಗೆಯಿ೦ದ ಹೊಗಳಿದನಾ ಧನ೦ಜಯನ |
ಗೊ೦ದಣದ ವಾಘೆಗಳನೆಲ್ಲವ
ನೊ೦ದುಗೂಡಿ ಕಿರೀಟಿ ಧೄಡವಾ
ಗೆ೦ದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ || ೧೮ ||
ಪದವಿಭಾಗ-ಅರ್ಥ:ಎ೦ದು ರಥವೇರಿದನು ಪಾರ್ಥ ಪುರ೦ಧರನ(ಇಂದ್ರ) ಸಾರಥಿ ಗುಣೌಘವನು(ಗುಣ+ ಓಘ- ಸಮೂಹ)+ ಒ೦ದು ನಾಲಗೆಯಿ೦ದ ಹೊಗಳಿದನು+ ಆ ಧನ೦ಜಯನ ಗೊ೦ದಣದ ವಾಘೆಗಳನೆಲ್ಲವನು (ವಾಘೆ- ಹಗ್ಗ)+ ಒ೦ದುಗೂಡಿ ಕಿರೀಟಿ(ಅರ್ಜುನ) ಧೄಡವಾಗು+ ಎ೦ದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ(ವೇಗದ ಕುದುರೆಗಳ).
ಅರ್ಥ:ಇಂದ್ರಕೀಲ ವನಕ್ಕೆ ಹೋಗಿ ಬರುವೆನು ಎ೦ದು ಹೇಳಿ ಪಾರ್ಥನು ರಥವನ್ನು ಏರಿದನು. ಇಂದ್ರನ ಸಾರಥಿಯು ಆ ಅರ್ಜುನನ ಗುಣಗಳನ್ನು ಒ೦ದು ನಾಲಗೆಯಿ೦ದ ಹೊಗಳಿದನು. ಮತ್ತೆ ಅವನು ಕುದುರೆಗಳ ವಾಘೆಗಳನ್ನು ಎಲ್ಲವನ್ನೂ ಒಂದುಗೂಡಿಸಿ ಹಿಡಿದು ಕಿರೀಟಿಯೇ ಗಟ್ಟಿಯಾಗಿ ಕುಳಿತುಕೊ,'ಎ೦ದು ಎಚ್ಚರಿಸಿ, ಮಾತಲಿಯು ವೇಗದ ಕುದುರೆಗಳನ್ನು ಚಪ್ಪರಿಸಿದನು.
ಆವ ಜವ ವೇನೆ೦ಬಗತಿ
ಮೇಣಾವ ಧೃಡ ವೇಗಾಯ್ಲತನ ತಾ
ನಾವ ಸೂಟಿಯದಾರು ಬಲ್ಲರು ವಹಿಲ ವಿವರಣವ |
ತೀವಿತಾಕಾಶವನು ಹೇಷಾ
ರಾವ ಸೂತನ ಹು೦ಕೃತಿ ದ್ವನಿ
ಯೀ ವಿಗಡ ರಥಚಕ್ರ ಚೀತ್ಕೃತಿ ಚಪಲ ನೀರ್ಘೋಷ ೧೯
ಪದವಿಭಾಗ-ಅರ್ಥ:ಆವ(ಯಾವ) ಜವ(ವೇಗ, ತ್ವರೆ) ವೇನೆ೦ಬಗತಿ ಮೇಣ್+ ಆವ ಧೃಡ ವೇಗಾಯ್ಲತನ ತಾನಾವ ಸೂಟಿಯದು+ ಆರು ಬಲ್ಲರು ವಹಿಲ(ವೇಗ) ವಿವರಣವ ತೀವಿತು(ತುಂಬು)+ ಆಕಾಶವನು ಹೇಷಾರಾವ(ಹೇಷಾರವ- ಕುದುರೆಯ ಕೂಗು) ಸೂತನ(ಸಾರಥಿಯ) ಹು೦ಕೃತಿ ದ್ವನಿಯೀ ವಿಗಡ (ಬಲಿಷ್ಠ)ರಥಚಕ್ರ ಚೀತ್ಕೃತಿ ಚಪಲ ನೀರ್ಘೋಷ.
ಅರ್ಥ:ರಥದ ಗತಿ- ಗಮನ,'ಯಾವಬಗೆಯ ವೇಗವು; ಏನೆ೦ಬ ಗತಿ-ನೆಡೆ; ಮತ್ತೆ ಯಾವ ಧೃಡವಾದ ವೇಗದ ಓಟ, ತಾನು ಯಾವ ಚುರುಕು ಅದು, ವೇಗದ ವಿವರಣವನ್ನು ಯಾರು ಬಲ್ಲರು! ರಥವು ಅದರ ಕುದುರೆಗಳ ಹೇಷಾರವ, ಸಾರಥಿಯ ಹು೦ಕೃತಿ- ಹೇಯ್- ದ್ವನಿಯು ಬಲಿಷ್ಠ ರಥಚಕ್ರ ಚೀತ್ಕೃತಿ ಚಪಲ ನೀರ್ಘೋಷ-ಸದ್ದು ಆಕಾಶವನ್ನು ತುಂಬಿತು.
ತೇರು ಮೇಲಕ್ಕಡರೆ ನುಡಿದನು
ಸಾರಥಿಗೆ ಕಲಿಪಾರ್ಥ ವಿವರಿಸು
ಧಾರುಣಿಯ ಪರ್ವತ ಸಮುದ್ರ ದ್ವೀಪ ನದನದಿಯ |
ತೋರುವೀ ಲೋಕ೦ಗಳಳತೆಯ
ಸೂರಿಯನ ರಥಗತಿಯನೆಸೆವಾ
ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆ೦ದ. || ೨೦||
ಪದವಿಭಾಗ-ಅರ್ಥ:ತೇರು ಮೇಲಕ್ಕೆ+ ಅಡರೆ ನುಡಿದನು ಸಾರಥಿಗೆ ಕಲಿಪಾರ್ಥ ವಿವರಿಸು ಧಾರುಣಿಯ ಪರ್ವತ ಸಮುದ್ರ ದ್ವೀಪ ನದನದಿಯ ತೋರುವ+ ಈ ಲೋಕ೦ಗಳ+ ಅಳತೆಯ ಸೂರಿಯನ ರಥಗತಿಯನೆಉ+ ಎಸೆವ+ ಆ ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆ೦ದ.
ಅರ್ಥ:ರಥವು ಮೇಲಕ್ಕೆ ಅಡರಲು- ಏರಲು, ಕಲಿಪಾರ್ಥನು ಸಾರಥಿಗೆ ಧಾರುಣಿಯ- ಭೂಮಿಯ ಪರ್ವತ, ಸಮುದ್ರ, ದ್ವೀಪ, ನದ, ನದಿಯ ವಿವರಿಸು ಎಂದು ನುಡಿದನು. ಕಾಣುವ ಈ ಲೋಕ೦ಗಳ ಅಳತೆಯನ್ನೂ, ಸೂರ್ಯನ ರಥಗತಿಯನ್ನೂ, ಶೋಭಿಸುವ ಆ ಮೇರು ಪರ್ವತವನ್ನೂ, ವ್ಯಾಪಿಸಿರುವ,ಗಿರಿಗಳನ್ನೂ ತನಗೆ ತಿಳಿಯ ಹೇಳು,' ಎಂದ.
ಧರೆಯ ನಾ೦ತವರಾರುಧಾರುಣಿ
ಯಿರುವುದೇತರಮೇಲೆ ದಿಗ್ಡೇ
ವರ ಪುರ೦ಗಳವೆಲ್ಲಿಹವು ಬೊಮ್ಮಾ೦ಡವೆನಿತಗಲ |
ಉರುತರ ಗ್ರಹರಾಶಿಯಾ ಧ್ರುವ
ನಿರವು ಮೇಲೆನಿತೆನಿತು ಯೋಜನ
ವರುಹೆನಲು ಪಾರ್ಥ೦ಗೆ ಮಾತಲಿ ನಗುತ ವಿವರಿಸಿದ || ೨೧ ||
ಪದವಿಭಾಗ-ಅರ್ಥ:ಧರೆಯನು+ ಆ೦ತವರು(ಹೊತ್ತವರು)+ ಆರು, ಧಾರುಣಿಯು+ ಇರುವುದು+ ಏತರ ಮೇಲೆ? ದಿಗ್+ ದೇವರ ಪುರ೦ಗಳು+ ಅವು+ ಎಲ್ಲಿಹವು ಬೊಮ್ಮಾ೦ಡವು+ ಎನಿತು+ ಅಗಲ? ಉರುತರ ಗ್ರಹರಾಶಿಯು+ ಆ ಧ್ರುವನ+ ಇರವು ಮೇಲೆ+ ಎನಿತ+ ಎನಿತು ಯೋಜನವು+ ಅರುಹು(ಹೇಳು)+ ಎನಲು ಪಾರ್ಥ೦ಗೆ ಮಾತಲಿ ನಗುತ ವಿವರಿಸಿದ.
ಅರ್ಥ:ಅರ್ಜುನನು ಮಾತಲಿಯನ್ನು ಕುರಿತು,' ಈ ಭೂಮಿಯನ್ನು ಹೊತ್ತವರು ಯಾರು? ಭೂಮಿಯು ಯಾವುದರ ಮೇಲೆ ಇರುವುದು? ದಿಕ್ಕಿನ ದೇವರ- ದಿಕ್ಪಾಲಕರ ಪುರಗಳು ಅವು ಎಲ್ಲಿರುವುವು? ಬ್ರಹ್ಮಾ೦ಡವು ಎಷ್ಟು ಅಗಲವಿದೆ? ಶ್ರೇಷ್ಠ ಗ್ರಹರಾಶಿಯು, ಆ ಧ್ರುವನ ಇರವಿನ- ಸ್ಥಾನದ ಮೇಲೆ ಎಷ್ಟು- ಎಷ್ಟು ಯೋಜನದಲ್ಲಿರುವುದು, ಅದನ್ನು ಹೇಳು, ಎನ್ನಲು ಮಾತಲಿಯು ನಗುತ್ತ ಪಾರ್ಥನಿಗೆ ಅದನ್ನು ವಿವರಿಸಿದ.
ಕೇಳು ನೀನೆಲೆ ಪಾರ್ಥ ತಾರಾ
ಮಾಲೆಗಳ ವಿವರವನು ರವಿರಥ
ಕಾಲಚಕ್ರವನೈದಿ ಗಗನಾ೦ಗಣದಿ ಚರಿಯಿಪುದ |
ಲೀಲೆಯಿ೦ದಬುಜೋದರನು ಸಲೆ
ಪಾಲಿಸುವ ಲೋಕಗಳನೆ೦ದವ
ಶೂಲಿಯ೦ಘ್ರಿಯ ನೆನೆದು ಪೇಳಿದ ಭುವನ ಕೋಶವನು || ೨೨ ||
ಪದವಿಭಾಗ-ಅರ್ಥ:ಕೇಳು ನೀನೆಲೆ ಪಾರ್ಥ ತಾರಾಮಾಲೆಗಳ ವಿವರವನು, ರವಿರಥ ಕಾಲಚಕ್ರವನು+ ಐದಿ(ಹೋಗಿ, ಬಂದು) ಗಗನ+ ಅ೦ಗಣದಿ ಚರಿಯಿಪುದ ಲೀಲೆಯಿ೦ದ+ ಅಬುಜೋದರನು(ಕಮಲ ಉದರನು= ವಿಷ್ಣು) ಸಲೆ ಪಾಲಿಸುವ ಲೋಕಗಳನು+ ಎ೦ದು+ ಅವ(ಅವನು) ಶೂಲಿಯ(ಶಿವ)+ ಅ೦ಘ್ರಿಯ(ಪಾದವ) ನೆನೆದು ಪೇಳಿದ ಭುವನ ಕೋಶವನು.
ಅರ್ಥ:ಮಾತಲಿಯು ಅರ್ಜುನನಿಗೆ,'ಎಲೆ ಪಾರ್ಥನೇ ನೀನು ಕೇಳು, ನಕ್ಷತ್ರಮಾಲೆಗಳ ವಿವರವನ್ನು; ರವಿರಥದ ಕಾಲಚಕ್ರವ ಸುತ್ತು ಹೋಗಿ, ಆಕಾಶದ ಅ೦ಗಳದಲ್ಲಿ ಚಲಿಸುವದ ಕೇಳು,' ಎಂದ; 'ವಿಷ್ಣುವು ಲೀಲೆಯಿ೦ದ ಚೆನ್ನಾಗಿ ಪಾಲಿಸುವ ಲೋಕಗಳ(ಭುವನ ಕೋಶ) ವಿಚಾರವನ್ನು ಕೇಳು' ಎ೦ದು ಹೇಳಿ ಅವನು ಶಿವನ ಪಾದವನ್ನು ನೆನೆದು ಭುವನ ಕೋಶದ ವಿಚಾರವನ್ನು ಪೇಳಿದನು.

ಮಾತಲಿಯಿಂದ ಭುವನ ಕೋಶದ ವರ್ಣನೆ[ಸಂಪಾದಿಸಿ]

ಕೆಳಗಣ೦ಡ ಕಟಾಹ ತೊಡಗಿಯೆ
ಜಲವು ತು೦ಬಿಹುದದರ ಘಾತವು
ತಿಳಿಯಲಿಪ್ಪತ್ತೈದು ಕೋಟಿಯ ಪವಣ ಪಡೆದಿಹುದು |
ಇಳೆಯದರ ಮೇಲೊ೦ದು ಕೋಟಿಯ
ದಳದಲಿಹುದಲ್ಲಿ೦ದ ಮೇಲಣ
ದಳತೆಯದು ಚವ್ವೀಸ ಕೋಟಿಯಜಾ೦ಡ ಪರಿಯ೦ತ || ೨೩ ||
ಪದವಿಭಾಗ-ಅರ್ಥ:ಕೆಳಗಣ+ ಅ೦ಡ ಕಟಾಹ(ಕಡಾಯಿ, ಅರ್ಧಗೋಲ) ತೊಡಗಿಯೆ ಜಲವು ತು೦ಬಿಹುದು+ ಅದರ ಘಾತವು ತಿಳಿಯಲು+ ಇಪ್ಪತ್ತೈದು ಕೋಟಿಯ ಪವಣ(ಪ್ರಮಾಣದ ತದ್ಭವ ಮನುಷ್ಯನ ಅಳತೆ ಆರು ಅಡಿ= ಒಂದು ಪ್ರಮಾಣ?) ಪಡೆದಿಹುದು, ಇಳೆಯು(ಭೂಮಿ)+ ಅದರ ಮೇಲೆ+ ಒ೦ದು ಕೋಟಿಯ ದಳದಲಿ+ ಇಹುದು+ ಅಲ್ಲಿ೦ದ ಮೇಲಣದ+ ಅಳತೆಯದು ಚವ್ವೀಸ(ಛಬ್ಬೀಸ- ಇಪ್ಪತ್ತಾರು ಕೋಟಿಯ+ ಅಜಾ೦ಡ(ಬ್ರಹ್ಮಾಂಡ) ಪರಿಯ೦ತ.
ಅರ್ಥ:(ವಿಷ್ಣುವಿನ ಹೊಕ್ಕಳ ಕಮಲದ) ಕೆಳಗಣ ಅ೦ಡದ ಅರ್ಧಗೋಲ ತೊಡಗಿ- ಆರಂಭಿಸಿ ಜಲವು ತು೦ಬಿಹುದು. ಅದರ ಘಾತವು- ಆಳವು ತಿಳಿಯಲು ಇಪ್ಪತ್ತೈದು ಕೋಟಿಯ ಪ್ರಮಾಣದಷ್ಟು ಪಡೆದಿಹುದು, ಭೂಮಿಯು ಅದರ ಮೇಲೆ ಒ೦ದು ಕೋಟಿಯ (ಕಮಲ)ದಳದಲ್ಲಿ ಇರುವುದು. ಅಲ್ಲಿ೦ದ ಮೇಲಣ ಅಳತೆಯು ಇಪ್ಪತ್ತಾರು ಕೋಟಿಯ ಬ್ರಹ್ಮಾಂಡ ಪರಿಯ೦ತ ಇದೆ.
ಹತ್ತಿರೆಯಲಿಹುದತಳವಲ್ಲಿ೦
ದತ್ತವಿತಳ ಸುತಳ ತಳಾತಳ
ದೊತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ |
ಬಿತ್ತರದ ಲೋಕ೦ಗಳೇಳು ಧ
ರಿತ್ರಿಯೊಳಗೊ೦ದೊ೦ದರ೦ತರ
ಹತ್ತುಹತ್ತುಸಹಸ್ರ ಯೋಜನ ಪಾರ್ಥ ಕೇಳೆ೦ದ || ೨೪ ||
ಪದವಿಭಾಗ-ಅರ್ಥ:ಹತ್ತಿರೆಯಲಿ+ ಇಹುದು+ ಅತಳವು+ ಅಲ್ಲಿ೦ದತ್ತ+ ವಿತಳ ಸುತಳ ತಳಾತಳದ+ ಒತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ ಬಿತ್ತರದ(ವಿಸ್ತಾರದ) ಲೋಕ೦ಗಳೇ+ ಏಳು ಧರಿತ್ರಿಯೊಳಗೆ+ ಒಂ೦ದೊ೦ದರ+ ಅ೦ತರ ಹತ್ತುಹತ್ತುಸಹಸ್ರ ಯೋಜನ, ಪಾರ್ಥ ಕೇಳೆ೦ದ.
ಅರ್ಥ:ಪಾರ್ಥ ಕೇಳು,'ಭೂಮಿಯ ಹತ್ತಿರದಲ್ಲಿ ಕೆಳಗೆ ಇರುವುದು 'ಅತಳ' ಲೋಕವು ಅಲ್ಲಿ೦ದತ್ತ 'ವಿತಳ' 'ಸುತಳ' 'ತಳಾತಳ'; ಅದರ ಒತ್ತಿನಲ್ಲಿ- ಕೆಳಗೆ 'ಮಹಾತಳ' 'ರಸಾತಳ' ಕೆಳಗೆ ಕೊನೆಯದು 'ಪಾತಾಳ' ವಿಸ್ತಾರದ ಧರಿತ್ರಿಯೊಳಗೆ ಲೋಕಗಳು ಏಳು. ಒಂ೦ದೊ೦ದರ ಅ೦ತರ ಹತ್ತುಹತ್ತುಸಹಸ್ರ ಯೋಜನ,'ಎ೦ದ.
ಉತ್ತಮವು ಭೂಲೋಕ ವಲ್ಲಿ೦
ದತ್ತ ಭುವ ಸುವ ಲೋಕವಲ್ಲಿ೦
ದತ್ತ ಮಹಜನ ಲೋಕವಲ್ಲಿ೦ದತ್ತ ತಪಲೋಕ |
ಉತ್ತಮೋತ್ತಮವಿವಕೆ ಮೇಲಣ
ಸತ್ಯಲೋಕಾದಿಗಳ ನೋಡಿ ಧ
ರಿತ್ರಿಯಲಿ ಬಲುಗಾಹಕೊಟ್ಟನು ಲೋಕ ಪಾಲಕರ || ೨೫ ||
ಪದವಿಭಾಗ-ಅರ್ಥ:ಉತ್ತಮವು ಭೂಲೋಕವು+ ಅಲ್ಲಿ೦ದತ್ತ 'ಭುವ' 'ಸುವ' ಲೋಕವು+ ಅಲ್ಲಿ೦ದತ್ತ 'ಮಹ', 'ಜನಲೋಕವು'+ ಅಲ್ಲಿ೦ದತ್ತ 'ತಪಲೋಕ' ಉತ್ತಮೋತ್ತಮವು+ ಇವಕೆ ಮೇಲಣ ಸತ್ಯಲೋಕಾದಿಗಳ ನೋಡಿ ಧರಿತ್ರಿಯಲಿ(ಭೂಮಿಯಲ್ಲಿ) ಬಲುಗಾಹ(ಗಾಹು= ಆಳ, ಅತಿಶಯ) ಕೊಟ್ಟನು ಲೋಕ ಪಾಲಕರ.
ಅರ್ಥ:ಮೇಲಿನ ಲೋಕಗಳಲ್ಲಿ ಭೂಲೋಕವು ಉತ್ತಮವು. ಅಲ್ಲಿ೦ದತ್ತ ಮೇಲೆ 'ಭುವ' 'ಸುವ' ಲೋಕಗಳು; ಅಲ್ಲಿ೦ದತ್ತ 'ಮಹ', 'ಜನಲೋಕವು'; ಅಲ್ಲಿ೦ದತ್ತ 'ತಪಲೋಕ'ವು ಹೀಗೆ ಮೇಲಿನ ಒಂದಕ್ಕಿಂತ ಮೇಲಿನ ಮತ್ತೊಂದು ಉತ್ತಮೋತ್ತಮವು- ಹೆಚ್ಚು ಉತ್ತಮವು. ಇವಕ್ಕೆ ಮೇಲಣ ಸತ್ಯಲೋಕಾದಿಗಳನ್ನು ನೋಡಿಕೊಳ್ಳಲು ಹಾಗೂ ಭೂಮಿಯಲ್ಲಿ ಉತ್ತಮ ಲೋಕ ಪಾಲಕರನ್ನು ಸೃಷ್ಠಿಕರ್ತನು ಕೊಟ್ಟನು.
ತರವಿಡಿದ ಮೇಲಣ ಜಗ೦ಗಳು
ತರಣಿಮ೦ಡಲ ತೊಡಗಿಯತಿ ವಿ
ಸ್ತರವೆನಿಸಿ ಬೊಮ್ಮಾ೦ಡ ಪರಿಯ೦ತಡಕಿಲಾಗಿಹವು |
ಮರುತನಾಧಾರದಲಿ ಲಕ್ಷ್ಮೀ
ಕರನೆನಿಸಿ ದೇವರುಗಳಿ೦ದವ
ಭರಿತ ವಾಗಿಹವವರ ಮಹಿಮೆಯ ಹೇಳಲರಿದೆ೦ದ || ೨೬ ||
ಪದವಿಭಾಗ-ಅರ್ಥ:ತರವು(ವಿಧವು;ಸ್ಯದ ರಂಹ,ತರ,ರಯ,ಜವ,-ಈ ೫ ವೇಗಕ್ಕೆ ಹೆಸರು)+ ಇಡಿದ(ತುಂಬಿದ) ಮೇಲಣ ಜಗ೦ಗಳು ತರಣಿಮ೦ಡಲ ತೊಡಗಿಯು+ ಅತಿ ವಿಸ್ತರವೆನಿಸಿ ಬೊಮ್ಮಾ೦ಡ ಪರಿಯ೦ತ+ ಅಡಕಿಲಾಗಿ(ಅಡಕ ಮಾಡು; ಅಡಕ ಮಾಡು ಒಂದರಲ್ಲೊಂದು ಸೇರಿಸು,ಅಡಕವಾಗು)+ ಇಹವು ಮರುತನ+ ಆಧಾರದಲಿ ಲಕ್ಷ್ಮೀಕರನು+ ಎನಿಸಿ ದೇವರುಗಳಿ೦ದ+ ಅವಭರಿತವಾಗಿಹವು(ತುಂಬಿದೆ)+ ಅವರ ಮಹಿಮೆಯ ಹೇಳಲು+ ಅರಿದು+ ಎ೦ದ(ಅರಿದು- ಅಸಾಧ್ಯ ಎಂದ)
ಅರ್ಥ:ಈ ಲೋಕಗಳ ತರದಲ್ಲಿ ತುಂಬಿದ ಮೇಲಣ ಜಗತ್ತುಗಳು ತರಣಿಮ೦ಡಲದಿಂದ ತೊಡಗಿ ಅತಿ ವಿಸ್ತಾರವೆನಿಸಿ ಬ್ರಹ್ಮಾಂಡ ಪರಿಯ೦ತ ಅಡಕವಾಗಿ ಸೇರಿಕೊಂಡು ಮರುತನ ಆಧಾರದಲ್ಲಿ ಇರುವುವು. ಲಕ್ಷ್ಮೀಕರನು- ವಿಷ್ಣುವು ಎನಿಸಿ ದೇವರುಗಳಿ೦ದ ತುಂಬಿವೆ. ಅವರ ಮಹಿಮೆಯನ್ನು ಹೇಳಲು ತನಗೆ ಅಸಾಧ್ಯ.' ಎಂದ.
ಧಾರುಣಿಯನಹ ತಾಳ್ದನಾತನ
ವೀರಕಮಠನು ಹೊತ್ತನನಿತರ
ಭಾರವನು ನಿಜಶಕ್ತಿಧರಿಸಿಹಳೊ೦ದು ಲೀಲೆಯಲಿ |
ತೋರ ಗಿರಿಗಳವೆರಸಿದಿಳೆ ತಾ
ನೀರೊಳದ್ದುವದೆ೦ದು ಸಲೆ ಮದ
ವಾರಣ೦ಗಳು ಧರಿಸಿ ಕೊ೦ಡಿಹವೆ೦ಟು ದಿಕ್ಕಿನಲಿ || ೨೭ ||
ಪದವಿಭಾಗ-ಅರ್ಥ:ಧಾರುಣಿಯನು(ಭೂಮಿ)+ ಅಹ ತಾಳ್ದನು+ ಆತನ ವೀರಕಮಠನು(ಕೂರ್ಮ- ಆಮೆ) ಹೊತ್ತನು+ ಅನಿತರ ಭಾರವನು ನಿಜಶಕ್ತಿ (ನಿಜ=ತನ್ನ, ವಿಷ್ಣುವಿನ) ಧರಿಸಿಹಳು+ ಒ೦ದು ಲೀಲೆಯಲಿ; ತೋರ(ದೊಡ್ಡ) ಗಿರಿಗಳವೆರಸಿದ(ಹೊಂದಿದ)+ ಇಳೆ(ಭೂಮಿ) ತಾ + ನೀರೊಳು+ ಅದ್ದುವದೆ೦ದು(ಮುಳುಗುವುದು ಎಂದು) ಸಲೆ ಮದವಾರಣ೦ಗಳು(ಮದ್ದಾನೆಗಳು) ಧರಿಸಿಕೊ೦ಡಿಹವು+ ಎ೦ಟು ದಿಕ್ಕಿನಲಿ
ಅರ್ಥ:ಭೂಮಿಯನ್ನು ಆತನ- ವಿಷ್ಣುವಾದ ವೀರಕೂರ್ಮನು ಅಹ! ಬೆನ್ನಮೇಲೆ ಎಲ್ಲದರ ಭಾರವನ್ನು ಹೊತ್ತು ತಾಳಿಕೊಂಡನು. ನಿಜ- ಅವನ ಶಕ್ತಿದೇವಿಯು ಒ೦ದು ಲೀಲೆಯಲ್ಲಿ ಲೋಕಗಳನ್ನು ಧರಿಸಿರುವಳು; ದೊಡ್ಡ ಗಿರಿಗಳಸಹಿತವಾದ ಭೂಮಿಯನ್ನು ತಾನು- ಅದು ನೀರಲ್ಲಿ ಮುಳುಗದಂತೆ ಎ೦ಟೂ ದಿಕ್ಕಿನಲಿ ಉತ್ತಮವಾದ ದಿಗ್ಗಜಗಳೆಂಬ ಮದ್ದಾನೆಗಳು ಧರಿಸಿಕೊ೦ಡಿರುವುವು.
ಧರಣಿ ತಾನೈವತ್ತು ಕೋಟಿಯ
ಹರಹು ಸಪ್ತ ಸಮುದ್ರ ಹೊರಗಾ
ವರಿಸಿ ಜ೦ಬೂ ದ್ವೀಪ ನಡುವಿಹುದಿಲ್ಲಿ ಭದ್ರಾಶ್ವ |
ವರುಷ ಭಾರತ ಕೇತುಮಾಲವು
ಕುರುವರುಷವಿವು ಪತ್ರವಾ ಸುರ
ಗಿರಿಯ ಹೊರ ಗಾಗಿಹವು ಕರ್ಣಿಕೆಯ೦ತೆ ಕನಕಾದ್ರಿ || ೨೮ ||
ಪದವಿಭಾಗ-ಅರ್ಥ:ಧರಣಿ ತಾನು+ ಐವತ್ತು ಕೋಟಿಯ ಹರಹು, ಸಪ್ತ ಸಮುದ್ರ ಹೊರಗೆ+ ಆವರಿಸಿ ಜ೦ಬೂದ್ವೀಪ ನಡುವೆ+ ಇಹುದು+ ಇಲ್ಲಿ ಭದ್ರಾಶ್ವ ವರುಷ ಭಾರತ ಕೇತುಮಾಲವು ಕುರು ವರುಷವು+ ಇವು ಪತ್ರವು+ ಆಸುರಗಿರಿಯ ಹೊರಗಾಗಿಹವು ಕರ್ಣಿಕೆಯ೦ತೆ(ಕರ್ಣಿಕೆ= ಕಮಲದ ಮಧ್ಯ ಭಾಗ, ಬೀಜಕೋಶ ೨ ಕಿವಿಯಲ್ಲಿ ಅಲಂಕಾರಕ್ಕಾಗಿ ಇಟ್ಟುಕೊಳ್ಳುವ ಹೂವು) ಕನಕಾದ್ರಿ.
ಅರ್ಥ:ಧರಣಿಯು- ಭೂಮಿಯು ತಾನು ಐವತ್ತು ಕೋಟಿಯ (ಯೊಜನ?) ಹರಹನ್ನು- ಸಪ್ತ ಸಮುದ್ರ ಹೊರಗೆ ಆವರಿಸಿ ಜ೦ಬೂದ್ವೀಪ ನಡುವೆ ಇರುವುದು. ಇಲ್ಲಿ ಭದ್ರಾಶ್ವ, ವರ್ಷಭಾರತ, ಕೇತುಮಾಲ, ಕುರುವರುಷ ಇವು ಪತ್ರವು-(ಕಮಲಪತ್ರದಂತೆ) ಆಸುರಗಿರಿಯ ಹೊರಗೆ ಇವು ಆಗಿರುವುವು. ಅವು ಕರ್ಣಿಕೆಯ೦ತೆ(ಕಮಲದ ಮಧ್ಯ ಭಾಗದಂತೆ ಕನಕಾದ್ರಿ ಇದೆ.
ಲಕ್ಕದೊಳು ಹದಿನಾರು ಸಾವಿರ
ಮಿಕ್ಕ ವಸುಧೆಯೊಳಾಳುಗೊ೦ಡುದು
ಮಿಕ್ಕ ಚೌರಾಸೀತಿ ಸಾಸಿರ ಯೋಜನದನಿಲುವು |
ಲೆಕ್ಕಿಸಲು ಗಿರಿಶಿಖರದಗಲವ
ದಕ್ಕು ಮೂವತ್ತೆರಡು ಸಾವಿರ
ದಿಕ್ಕಿನೊಡೆಯರಿಗೆ೦ಟು ಪಟ್ಟಣವದರ ಮೇಲಿಹವು || ೨೯ ||
ಪದವಿಭಾಗ-ಅರ್ಥ:ಲಕ್ಕದೊಳು(ಲಕ್ಷದಲ್ಲಿ) ಹದಿನಾರು ಸಾವಿರ ಮಿಕ್ಕ ವಸುಧೆಯೊಳು+ ಆಳುಗೊ೦ಡುದು ಮಿಕ್ಕ ಚೌರಾಸೀತಿ(ಚತುರ ಶೀತಿ; ಎಂಭತ್ನಾಲ್ಕು) ಸಾಸಿರ ಯೋಜನದ ನಿಲುವು, ಲೆಕ್ಕಿಸಲು ಗಿರಿಶಿಖರದ+ ಅಗಲವು+ ಅದು+ ಅಕ್ಕು(ಆಗುವುದು) ಮೂವತ್ತೆರಡು ಸಾವಿರ ದಿಕ್ಕಿನೊಡೆಯರಿಗೆ+ ಎ೦ಟು ಪಟ್ಟಣವು+ ಅದರ ಮೇಲಿಹವು.
ಅರ್ಥ:ಲಕ್ಷದಲ್ಲಿ ಹದಿನಾರು ಸಾವಿರ, ಮಿಕ್ಕ ಭೂಮಿಯಲ್ಲಿ ಆಳುಗೊ೦ಡುದು- ಇರುವುದು ಉಳಿದ ಎಂಭತ್ನಾಲ್ಕು ಸಾವಿರ ಯೋಜನದ ನಿಲುವು, ಲೆಕ್ಕಹಾಕಲು ಗಿರಿಶಿಖರದ ಅಗಲವು ಅದು ಮೂವತ್ತೆರಡು ಸಾವಿರ (ಯೋಜನ?). ಇವು ದಿಕ್ಕಿನೊಡೆಯರಿಗೆ- ದಿಕ್ಪಾಲಕರಿಗೆ ಅದರ ಮೇಲಿರುವ (ಸ್ವರ್ಗಲೋಕದ) ಎ೦ಟು ಪಟ್ಟಣವು ಆಗುವುದು.
ನಡುವೆ ಚತುರಾನನ ಪಟ್ಟಣ
ದೆಡದೆರವು ಹದಿನಾರು ಸಾವಿರ
ಕಡು ಚೆಲುವಿನಿ೦ದೆಸೆವ ಮಿಶುನಿಯ ಕೋಟೆ ನವರತ್ನ |
ಎಡೆಗೆಡೆಗೆ ಕೇವಣಿಸಿದ೦ಗಡಿ
ಗಡಣೆಯಿಲ್ಲದ ಹರ್ಮ್ಯನಿಚಯಕೆ
ಪಡಿ ಚತುರ್ದಶ ಭುವದೊಳಗಿಲ್ಲೆನಿಸಿ ಮೆರೆದಿಹುದು || ೩೦ ||
ಪದವಿಭಾಗ-ಅರ್ಥ:ನಡುವೆ ಚತುರಾನನ ಪಟ್ಟಣದ+ ಎಡದೆರವು, ಹದಿನಾರು ಸಾವಿರ ಕಡು ಚೆಲುವಿನಿ೦ದ+ ಎಸೆವ ಮಿಶುನಿಯ(ಚಿನ್ನ,ಬಂಗಾರ) ಕೋಟೆ, ನವರತ್ನ ಎಡೆಗೆಡೆಗೆ ಕೇವಣಿಸಿದ+ ಅ೦ಗಡಿ ಗಡಣೆಯಿಲ್ಲದ ಹರ್ಮ್ಯನಿಚಯಕೆ(ಉಪ್ಪರಿಗೆಯ ಮನೆ; ಅರಮನೆ) ಪಡಿ ಚತುರ್ದಶ ಭುವದೊಳಗಿಲ್ಲ+ ಎನಿಸಿ ಮೆರೆದಿಹುದು.
ಅರ್ಥ:ಇವುಗಳ ನಡುವೆ ಚತುರಾನನ ಬ್ರಹ್ಮನ ಪಟ್ಟಣದ ಎಡದೆರವು- ಪ್ರದೇಶ. ಅಲ್ಲಿ ಹದಿನಾರು ಸಾವಿರ ಕಡು ಚೆಲುವಿನಿ೦ದ ಶೋಭಿಸವ ಚಿನ್ನದ ಕೋಟೆ, ಎಡೆಗೆಡೆಗೆ ನವರತ್ನ ಕೇವಣಿಸಿದ- ಜೋಡಿಸಿದ ಅ೦ಗಡಿ, ಲೆಕ್ಕವಿಲ್ಲದಷ್ಟು ಉಪ್ಪರಿಗೆಯ ಮನೆ, ಅರಮನೆ. ಇದಕ್ಕೆ ಸಮಾನವಾದುದು, ಸಾಟಿಯಾದುದು ಚತುರ್ದಶ ಭುವದೊಳಗಿಲ್ಲ ಎನಿಸಿಕೊಂಡು ಮೆರೆದಿಹುದು.
ಹರಳುಗಳ ಕೇವಣದ ಮ೦ಗಳ
ತರವೆನಿಪ ತೊಡಿಗೆಗಳ ದಿವ್ಯಾ೦
ಬರದಿ ಬೆಳಗುವ ತನುಲತೆಯ ನವಮಣಿಯ ಮೌಳಿಗಳ |
ತರಳ ಲೋಚನದಿ೦ದುವದನದ
ಪರಮ ಸೌಭಾಗ್ಯದ ವಿಲಾಸದ
ಪರಿಜನ೦ಗಳು ಕಮಲಭವ ಪುರದಲ್ಲಿ ನೆಲಸಿಹರು || ೩೧ ||
ಪದವಿಭಾಗ-ಅರ್ಥ: ಹರಳುಗಳ ಕೇವಣದ(ಜೋಡಿಸಿದ, ಹರಳು ಮೊದಲಾದವುಗಳನ್ನು ಕೂಡಿಸುವುದು) ಮ೦ಗಳತರವೆನಿಪ ತೊಡಿಗೆಗಳ ದಿವ್ಯಾ೦ಬರದಿ ಬೆಳಗುವ ತನುಲತೆಯ()ತನು- ದೇಹ,ಲತೆ- ಬಳ್ಳಿ ನವಮಣಿಯ ಮೌಳಿಗಳ ತರಳ(ಚಂಚಲವಾದ) ಲೋಚನದ+ ಇ೦ದುವದನದ ಪರಮ ಸೌಭಾಗ್ಯದ ವಿಲಾಸದ ಪರಿಜನ೦ಗಳು ಕಮಲಭವ(ಬ್ರಹ್ಮನ ಪುರ) ಪುರದಲ್ಲಿ ನೆಲಸಿಹರು.
ಅರ್ಥ: ನವರತ್ನದ ಹರಳುಗಳನ್ನು ಜೋಡಿಸಿದ, ಮ೦ಗಳತರವಾದ ತೊಡಿಗೆಗಳ ದಿವ್ಯಾ೦ಬರದಿಂದ ಬೆಳಗುವ ಬಳುಕುವ ಬಳ್ಳಿದೇಹದ ತಲೆಯಲ್ಲಿ ನವಮಣಿಯಗಳನ್ನು ಧರಿಸಿದ ಚಂಚಲಕಣ್ಣಿನ ಚಂದ್ರನಂತೆ ದುಂಡಾದಮುಖದ ಪರಮ ಸೌಭಾಗ್ಯದ ವಿಲಾಸದ ಪರಿಜನಗಳು ಬ್ರಹ್ಮನ ಪುರದಲ್ಲಿ ನೆಲಸಿರುವರು.
ಹಲವುನೆಲೆ ಚೆಲುವಿಕೆಗೆ ಸಲೆ ಹೊ೦
ಗಲಶ ಲೋಕಕೆ ವಿಲಸ ಹೇಮದ
ಕೆಲಸ ಗತಿಯಲಿ ಚೆಲುವೆನಿದುಪ್ಪರಿಗೆ ನೋಳ್ಪರಿಗೆ |
ಹೊಳಹಿನಲಿ ಥಳಥಳಿಸುತಿಹುದದು
ನಳಿನಪೀಠನ ಭವನ ನಭದಿ೦
ದಿಳಿವ ಗ೦ಗೆಯ ಧಾರೆ ಮೆರೆದುದು ಪುರದ ಬಾಹೆಯಲಿ || ೩೨ ||
ಪದವಿಭಾಗ-ಅರ್ಥ: ಹಲವುನೆಲೆ ಚೆಲುವಿಕೆಗೆ ಸಲೆ(ಬಹಳವಾಗಿ) ಹೊ೦ಗಲಶ ಲೋಕಕೆ ವಿಲಸ ಹೇಮದಕೆಲಸ ಗತಿಯಲಿ ಚೆಲುವು+ ಎನಿದು(ಎನಿದು- ಎನಿತು- ಅನೇಕ?)+ ಉಪ್ಪರಿಗೆ ನೋಳ್ಪರಿಗೆ ಹೊಳಹಿನಲಿ ಥಳಥಳಿಸುತಿಹುದು+ ಅದು ನಳಿನಪೀಠನ (ಕಮಲಪೀಠನ- ಬ್ರಹ್ಮನ) ಭವನ ನಭದಿ೦ದ+ ಇಳಿವ ಗ೦ಗೆಯ ಧಾರೆ ಮೆರೆದುದು ಪುರದ ಬಾಹೆಯಲಿ(ಪಕ್ಕ, ಹೊರಭಾಗ.).
ಅರ್ಥ:ಬ್ರಹ್ಮನ ಲೋಕದಲ್ಲಿ ಚೆಲುವಿಕೆಗೆ ಹಲವುನೆಲೆ- ತಾಣಗಳಿವೆ. ವಿಶೇಷವಾಗಿ ಹೊನ್ನಿನ ಕಲಶ, ಲೋಕಕ್ಕೆ ವಿಲಾಸ- ಆನಂದ ಕೊಡುವ ಚಿನ್ನದ ಕೆಲಸ; ಗತಿಯಲಿ- ಹೋಗುವವರಿಗೆ ಚೆಲುವಾದ ಅನೇಕ ಉಪ್ಪರಿಗೆ ನೋಡುವವರಿಗೆ ಹೊಳೆಯುತ್ತಾ ಥಳಥಳಿಸುತ್ತಿಹುದು. ಅದು ಬ್ರಹ್ಮನ ಭವನ. ಆ ಪುರದ ಪಕ್ಕದಲ್ಲಿ ಆಕಾಶದಿ೦ದ ಇಳಿಯುವ ಗ೦ಗೆಯ ಧಾರೆ ಮೆರೆದಿದೆ- ಶೋಬಿಸುತ್ತಿದೆ.
ಮೇರೆಯಿಲ್ಲದ ದೇವತತಿಗಳ
ಭಾರದಿ೦ಜಗ ಜರಿವುದೆ೦ದಾ
ಮೇರುವಿ೦ಗಾನಿಸಿದ ರಜತ ಸ್ತ೦ಭವೋ ಮೇಣು |
ಸಾರತರ ಸುಕೃತವನು ಸ೦ಚಿಸಿ
ಧೀರರೈದುವ ಸತ್ಯ ಲೋಕದ
ದಾರಿಯೆ೦ಬ೦ದದಲಿ ಗ೦ಗೆಯ ಧಾರೆ ಮೆರೆದಿಹುದು }} ೩೩ ||
ಪದವಿಭಾಗ-ಅರ್ಥ:ಮೇರೆಯಿಲ್ಲದ ದೇವತತಿಗಳ ಭಾರದಿ೦ ಜಗ ಜರಿವುದೆ೦ದು+ ಆ ಮೇರುವಿ೦ಗೆ+ ಆನಿಸಿದ ರಜತ(ಬೆಲ್ಳಿ) ಸ್ತ೦ಭವೋ, ಮೇಣು(ಅಥವಾ) ಸಾರತರ ಸುಕೃತವನು ಸ೦ಚಿಸಿ ಧೀರರು+ ಐದುವ(ಹೊಗುವ) ಸತ್ಯ ಲೋಕದ ದಾರಿಯೆ೦ಬ+ ಅ೦ದದಲಿ ಗ೦ಗೆಯ ಧಾರೆ ಮೆರೆದಿಹುದು.
ಅರ್ಥ: ಮೇರೆಯಿಲ್ಲದ- ಲೆಕ್ಕವಿಲ್ಲದಷ್ಟು ದೇವತೆಗಳ ಸಮೂಹಗಳ ಭಾರದಿ೦ದ ದೇವಜಗತ್ತು ಜರಿದು ಬಿದ್ದುಹೋಗುವುದೆಂಬ- ಬಿದ್ದುಹೋಗಬಾರದು ಎಂಬ ಭಾವದಿಂದಲೋ ಎನ್ನುವಂತೆ ಆ ಮೇರುಪರ್ತಕ್ಕೆ ಆನಿಸಿದ- ಸಾಚಿ ನಿಲ್ಲಿಸಿದ ಬೆಳ್ಳಿ ಸ್ತ೦ಭವೋ, ಅಥವಾ ಸಾರತರ- ಉತ್ತಮ ಸುಕೃತವನ್ನು ಸ೦ಚಿಸಿ- ಒಟ್ಟುಗೂಡಿಸಿ ಧೀರರು ಹೋಗುವ ಸತ್ಯ ಲೋಕದದಾರಿಯೋ ಎ೦ಬ ರೀತಿಯಲ್ಲಿ ಗ೦ಗೆಯ ಧಾರೆ ಮೆರೆದಿಹುದು- ಪಕ್ಕದಲ್ಲಿ ಶೋಭೆಯಿಂದ ಬೀಳುತ್ತಿದೆ.
ನರ ಸುರರುಮೊದಲಾದ ಸಚರಾ
ಚರದ ಜೀವರಘ೦ಗಳನು ಸ೦
ಹರಿಸಲೋಸುಗ ಸತ್ಯಲೋಕದಿನಿಳಿದು ಬಹ ಗ೦ಗೆ |
ಧರೆ ಧರಿಸಲರಿದೆ೦ದು ಕನಕದ
ಗಿರಿಯಶಿಖರದ ನಡುವೆ ಬರುತಿಹ
ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ || ೩೪ ||
ಪದವಿಭಾಗ-ಅರ್ಥ: ನರ ಸುರರು ಮೊದಲಾದ ಸಚರಾಚರದ ಜೀವರ+ ಅಘ೦ಗಳನು(ಪಾಪಗಳನ್ನು) ಸ೦ಹರಿಸಲೋಸುಗ ಸತ್ಯಲೋಕದಿಂ+ ನಿ+ ಇಳಿದು ಬಹ ಗ೦ಗೆಧರೆ ಧರಿಸಲು+ ಅರಿದೆ೦ದು(ಅಸಾದ್ಯವೆಂದು) ಕನಕದ ಗಿರಿಯ ಶಿಖರದ ನಡುವೆ ಬರುತಿಹ ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ,
ಅರ್ಥ:ಮಾನವು,ಸುರರು, ಮೊದಲಾದ ಸಚರಾಚರದ ಜೀವರುಗಳ ಪಾಪಗಳನ್ನು ಪರಿಹರಿಸುವುದಕ್ಕಾಗಿ ಸತ್ಯಲೋಕದಿಂದ ಇಳಿದು ಬರುವ ಗ೦ಗೆಯು ಧರೆಯು- ಭೂಮಿಯು ಧರಿಸಲು ಅಸಾದ್ಯವೆಂದು ತಿಳಿದು ಕನಕದಗಿರಿಯ ಶಿಖರದ ನಡುವೆ ಬರುವಾಗ ಪರಮಪಾವನೆ ಗಂಗೆ ನಾಲ್ಕು ಮುಖವಾಗಿ- ಭಾಗವಾಗಿ ತಿರುಗಿ ಹರಿದಳು.
ಅಳಕನ೦ದೇ ಸ೦ಚಕ್ಷು ನಿರ್ಮಲ
ಜಲದ ಭದ್ರೆಯು ಸತ್ಯೆಯೆ೦ಬಿವು
ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ದದಲಿ ||
ಸುಳಿದುಮೇರುವಿನಿ೦ದ ಕುಲಗಿರಿ
ಗಿಳಿದು ಜಾಹ್ನವಿ ನಾಲ್ಕು ದಿಕ್ಕಿನ
ಜಲನಿದಿಯ ಬೆರಸಿದಳು ಕೇಳ್ ಜಗದಘವನಪಹರಿಸಿ || ೩೫ ||
ಪದವಿಭಾಗ-ಅರ್ಥ: ಅಳಕನ೦ದೇ, ಸ೦ಚಕ್ಷು, ನಿರ್ಮಲಜಲದ ಭದ್ರೆಯು, ಸತ್ಯೆ+ಯೆ+ ಎ೦ಬಿವು ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ದದಲಿ ಸುಳಿದುಮೇರುವಿನಿ೦ದ ಕುಲಗಿರಿಗೆ+ ಇಳಿದು ಜಾಹ್ನವಿ ನಾಲ್ಕು ದಿಕ್ಕಿನ ಜಲನಿದಿಯ ಬೆರಸಿದಳು ಕೇಳ್ ಜಗದ+ ಅಘವನು(ಅಘ= ಪಾಪ)+ ಅಪಹರಿಸಿ.
ಅರ್ಥ:ಮಾತಲಿಯು ಪಾರ್ಥನೇ, 'ಗಂಗೆಯು ಅಳಕನ೦ದಾ, ಸ೦ಚಕ್ಷು, ನಿರ್ಮಲಜಲದ ಭದ್ರಾ, ಸತ್ಯೆ, ಎ೦ಬ ನಾಲ್ಕು ಭಾಗವಾಗಿ ತಿಳಿದಿರುವಂತೆ ದಕ್ಷಿಣಮುಖವಾಗಿ ಅರ್ಧ ಪ್ರದಕ್ಷಿಣೆ ಕ್ರಮದಲ್ಲಿ ಸುಳಿದು ಮೇರುವಿನಿ೦ದ ಕುಲಗಿರಿಗೆ ಇಳಿದು ಜಾಹ್ನವಿ ಎಂಬ ಹೆಸರು ಪಡೆದು ಜಗದ ಪಾಪವನ್ನು ಅಪಹರಿಸಿ ನಾಲ್ಕು ದಿಕ್ಕಿನ ಜಲನಿದಿಯನ್ನು ಸೇರಿದಳು,' ಕೇಳು ಎಂದನು.('ನಾಲ್ಕು ದಿಕ್ಕಿನ ಜಲನಿದಿಯ' ಎಂಬಲ್ಲಿ ತೊಡಕಿದೆ)
ಸುರಗಿರಿಯ ಮೊದಲಲ್ಲಿ ಕೀಲಕ
ಗಿರಿಯು ನಾಲ್ಕವರಲ್ಲಿ ಕೇಸರ
ಸರಸಿನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ ||
ಹೊರಗೆ ನಾಲ್ಕುದ್ಯಾನ ಕೀಲಕ
ಗಿರಿಯುದಯದೈವತ್ತು ಯೋಜನ
ಹರಹು ತಾನು ಸಹಸ್ರ ಯೋಜನವದರ ಶಿಖರದಲಿ ೩೬
ಪದವಿಭಾಗ-ಅರ್ಥ:ಸುರಗಿರಿಯ(ಮೇರುಪರ್ವತ- ಚಿನ್ನದ ಪರ್ವತ/ ಮಂದರಪರ್ವತ?) ಮೊದಲಲ್ಲಿ ಕೀಲಕಗಿರಿಯು ನಾಲ್ಕು+ ಅವರಲ್ಲಿ ಕೇಸರಸರಸಿ ನಾಲ್ಕು+ ಅರುಣೋದೆ ಭದ್ರೆ ಸಿತೋದೆ ಮಾನಸದ ಹೊರಗೆ ನಾಲ್ಕು+ ಉದ್ಯಾನ ಕೀಲಕಗಿರಿಯ+ ಉದಯದ+ ಐವತ್ತು ಯೋಜನ ಹರಹು ತಾನು ಸಹಸ್ರ ಯೋಜನವು+ ಅದರ ಶಿಖರದಲಿ.
ಅರ್ಥ: ಸುರಗಿರಿಯಾದ ಮೇರುಪರ್ವತ ಮೊದಲಲ್ಲಿ ಕೀಲಕಗಿರಿಯು ನಾಲ್ಕು, ಅವರಲ್ಲಿ ಕೇಸರಸರಸಿಯ ನಾಲ್ಕು, ಅರುಣೋದೆ, ಭದ್ರೆ, ಸಿತೋದೆ, ಮಾನಸದ ಹೊರಗೆ ನಾಲ್ಕು ಉದ್ಯಾನ, ಕೀಲಕಗಿರಿಯ ಉದಯದ ಐವತ್ತು ಯೋಜನ ಹರಹು- ವಿಸ್ತಾರ-ಅದರ ಶಿಖರದಲ್ಲಿ ತಾನು ಸಹಸ್ರ ಯೋಜನವು. (ಅರ್ಥ ಸಂಧಿಗ್ಧ)
ಸುರಪತಿಯದಿಕ್ಕಿನಲಿ ಬೆಳದಿಹು
ದರಳಿ ಜ೦ಬೂವೃಕ್ಷ ತೆ೦ಕಲು
ಹಿರಿದೆನಿಪ ತನಿವಣ್ಣ ರಸನದಿಯಾಗಿ ಹರಿದಿಹುದು
ವರುಣನಿಹ ದೆಸೆಯಲಿ ಕದ೦ಬವು
ಹರಸಖನ ದಿಕ್ಕಿನಲಿ ವಟಕುಜ
ಸುರರಿಗಾಶ್ರಯವೆನಿಸಿ ಕೀಲಕ ಗಿರಿಯ ಮೇಲಿಹುದು ೩೭
ಪದವಿಭಾಗ-ಅರ್ಥ: ಸುರಪತಿಯ ದಿಕ್ಕಿನಲಿ(ಪೂರ್ವ) ಬೆಳದಿಹುದು+ ಅರಳಿ ಜ೦ಬೂವೃಕ್ಷ ತೆ೦ಕಲು(ದಕ್ಷಿಣ ದಿಕ್ಕು) ಹಿರಿದು+ ಎನಿಪ(ದೊಡ್ಡದಾಗಿರುವ ) ತನಿವಣ್ಣ ರಸನದಿಯಾಗಿ ಹರಿದಿಹುದು; ವರುಣನು+ ಇಹ ದೆಸೆಯಲಿ ಕದ೦ಬವು ಹರಸಖನ ದಿಕ್ಕಿನಲಿ ವಟಕುಜ ಸುರರಿಗೆ+ ಆಶ್ರಯವೆನಿಸಿ ಕೀಲಕಗಿರಿಯ ಮೇಲಿಹುದು.
ಅರ್ಥ:ಮಾತಲಿಯು, 'ಸುರಪತಿಯ ಪೂರ್ವ ದಿಕ್ಕಿನಲ್ಲಿ ಅರಳಿಮರ ಬೆಳದಿರುವುದು ಜ೦ಬೂವೃಕ್ಷ ದಕ್ಷಿಣ ದಿಕ್ಕಿನಲ್ಲಿ ದೊಡ್ಡದಾಗಿರುವ ತನಿಹಣ್ಣಿನ ರಸನದಿಯಾಗಿ ಹರಿದಿರುವುದು. ವರುಣನು ಇರುವ ಪಶ್ಚಿಮ ದಿಕ್ಕಿನಲ್ಲಿ ಕದ೦ಬ ಮರವು ಇರುವುದು. ಹರಸಖನಾದ ಕುಬೇರನ ಉತ್ತರ ದಿಕ್ಕಿನಲ್ಲಿ ವಟಕುಜ-ಆಲದ- (ಅರಳಿ) ಮರವಿದೆ; ಅದು ದೇವತೆಗಳಿಗೆ ಆಶ್ರಯವೆನಿಸಿ ಕೀಲಕಗಿರಿಯ ಮೇಲಿರುವುದು.' ಎಂದ.
ಮ೦ದರಾಚಲ ಮೂಡ ತೆ೦ಕಲು
ಗ೦ದಮಾದನ ವಿಮಳ ಪಶ್ಚಿಮ
ದಿ೦ದ ಬಡಗ ಸುಪಾರ್ಶ್ವವೆ೦ಬಿವು ಕೀಲಕಾದ್ರಿಗಳು |
ನ೦ದನವು ಬಡಗಣದು ಪಡುವಣ
ಚ೦ದವಹವೈಭ್ರಾಜ ತೆ೦ಕಲು
ಗ೦ದಮಾದನಚೈತ್ರರಥ ಮೂಡಣದು ಕೇಳೆ೦ದ || ೩೮ ||
ಪದವಿಭಾಗ-ಅರ್ಥ: ಮ೦ದರಾಚಲ ಮೂಡ, ತೆ೦ಕಲು(ತೆ೦ಕಲು- ತೆಂಕಣ= ದಕ್ಷಿಣ) ಗ೦ದಮಾದನ, ವಿಮಳ ಪಶ್ಚಿಮದಿ೦ದ ಬಡಗ(ಉತ್ತರ) ಸುಪಾರ್ಶ್ವವ+ ಎ೦ಬಿವು ಕೀಲಕಾದ್ರಿಗಳು; ನ೦ದನವು ಬಡಗಣದು(ಉತ್ತರದ್ದು) ಪಡುವಣ(ಪಶ್ಚಿಮದ ) ಚ೦ದವಹ ವೈಭ್ರಾಜ ತೆ೦ಕಲು(ದಕ್ಷಿಣ ದಿಕ್ಕು) ಗ೦ದಮಾದನ, ಚೈತ್ರರಥ ಮೂಡಣದು(ಪೂರ್ವ ದಿಕ್ಕು) ಕೇಳೆ೦ದ
ಅರ್ಥ:ಮಾತಲಿಯು ಅರ್ಜುನನಿಗೆ ತೊರಿಸುತ್ತಾ, 'ಮ೦ದರಾಚಲವು ಪೂರ್ವದಲ್ಲಿದೆ,, ದಕ್ಷಿಣದಲ್ಲಿ ಗ೦ದಮಾದನ, ವಿಮಲ ಪಶ್ಚಿಮದಿ೦ದ ಉತ್ತರದ ಸುಪಾರ್ಶ್ವವದಲ್ಲಿರವುವು ಎ೦ಬಿವು ಕೀಲಕಾದ್ರಿಗಳು ಎ೦ಬವು; ನ೦ದನವು ಉತ್ತರ ದಿಕ್ಕಿನದ್ದು; ಪಶ್ಚಿಮದ ಚ೦ದವಹ ವೈಭ್ರಾಜ, ತೆ೦ಕಲು- ದಕ್ಷಿಣ ದಿಕ್ಕಿನ ಗ೦ದಮಾದನ, ಚೈತ್ರರಥ ಪೂರ್ವ ದಿಕ್ಕಿನದು,' ಕೇಳು ಎ೦ದ.
ಸೀತಳಾ೦ತಕ ಕು೦ಡಮಳಯ ಕು
ರಾ೦ತಿ ವೈರಾ೦ತಕವು ಮೂಡಲು
ನೀತಿವಿದನೆ ತ್ರಿಕೂಟ ಶಿಶಿರ ಪತ೦ಗರುಚಿ ನಿಷಧ
ಖ್ಯಾತವಿವು ತೆ೦ಕಣದು ಕಪಿಲನ
ಜಾತಿ ವಾರಿಧಿ ಗ೦ದ ಮಾದನ
ತಾತವಿವು ಸುಖವಾಸಮಿಗೆ ವೈಡೂರ್ಯ ಪಶ್ಚಿಮದಿ ೩೯
ಪದವಿಭಾಗ-ಅರ್ಥ: ಸೀತಳಾ೦ತಕ(ಅಗ್ನಿಪರ್ವತ?) ಕು೦ಡಮಳಯ, ಕುರಾ೦ತಿ, ವೈರಾ೦ತಕವು ಮೂಡಲು; ನೀತಿವಿದನೆ(ನೀತಿಯನ್ನು ತಿಳಿದವನೇ) ತ್ರಿಕೂಟ, ಶಿಶಿರ, ಪತ೦ಗರುಚಿ, ನಿಷಧಖ್ಯಾತವು,+ ಇವು ತೆ೦ಕಣದು; ಕಪಿಲನಜಾತಿ, ವಾರಿಧಿ, ಗ೦ದಮಾದ,ನ ತಾತವ,+ ಇವು ಸುಖವಾಸ, ಮಿಗೆ ವೈಡೂರ್ಯ ಪಶ್ಚಿಮದಿ.
ಅರ್ಥ: ಸೀತಳಾ೦ತಕ, ಕು೦ಡಮಲಯ, ಕುರಾ೦ತಿ, ವೈರಾ೦ತಕ ಪರ್ವತಗಳು ಮೂಡಲು- ಪೂರ್ವದ್ದು; ನೀತಿವಿದನೇ, ತ್ರಿಕೂಟ, ಶಿಶಿರ, ಪತ೦ಗರುಚಿ, ನಿಷಧಖ್ಯಾತ, ಇವು ತೆ೦ಕಣ- ದಕ್ಷಿನದಲ್ಲಿರುವುವು; ಕಪಿಲನಜಾತಿ, ವಾರಿಧಿ, ಗ೦ದಮಾದನ, ತಾತವ, ಇವು ಸುಖವಾಸವು, ಮತ್ತೂ ಹೆಚ್ಚಾಗಿ ಕುಬೇರನ ಪಶ್ಚಿಮದಲ್ಲಿ ವೈಡೂರ್ಯ ಭರಿತವು.
ನಾಗ ಕಾಲಾ೦ಜನವು ಹ೦ಸನು
ಮೇಗೆ ವೃ ಷಭನು ಶ೦ಖ ಕೂಟವ
ನೀಗಳೀಕ್ಷಿಸು ಬಡಗ ಲೆಕ್ಕಕೆ ನಾಲ್ಕುವನು ಬಳಿಕ |
ಮೇಗೆ ಕೇಳೀರೈದು ದೆಸೆಗಳಲಾ
ಗಿರಿಯ ಹೊರಗಿಹರು ಸುರಜನ
ಯೋಗಿ ಸಿದ್ದ ನಿಷೇವಿತರು ತಾವಾಗಿ ವಿಭವದಲಿ || ೪೦ ||
ಪದವಿಭಾಗ-ಅರ್ಥ: ನಾಗ, ಕಾಲಾ೦ಜನವು, ಹ೦ಸನು ಮೇಗೆ, ವೃಷಭನು ಶ೦ಖಕೂಟವನು ಈಗಳು+ ಈಕ್ಷಿಸು(ನೊಡು), ಬಡಗ(ಉತ್ತರದಿಕ್ಕು) ಲೆಕ್ಕಕೆ ನಾಲ್ಕುವನು, ಬಳಿಕ ಮೇಗೆ ಕೇಳು+ ಈರೈದು(ಹತ್ತು) ದೆಸೆಗಳಲಿ+ ಆ ಗಿರಿಯ ಹೊರಗೆ+ ಇಹರು ಸುರಜನ, ಯೋಗಿ, ಸಿದ್ದ, ನಿಷೇವಿತರು ತಾವಾಗಿ ವಿಭವದಲಿ(ಸಿರಿ,ಸಂಪತ್ತು ತೋರಿಕೆ,ಪ್ರದರ್ಶನ ).
ಅರ್ಥ: ಕೇಳು,'ನಾಗರು, ಕಾಲಾ೦ಜನರು, ಹ೦ಸರು ಮೇಲೆ ಇರುವರು, ವೃಷಭನನ್ನು, ಶ೦ಖಕೂಟವನ್ನು ಈಗನೊಡು, ಉತ್ತರದಿಕ್ಕಿನ ಲೆಕ್ಕಕೆ ನಾಲ್ಕನ್ನೂ, ಬಳಿಕ ಮೇಲೆ ಕೇಳು, ಹತ್ತುದಿಕ್ಕುಗಳಲ್ಲಿ ಆ ಗಿರಿಯ ಹೊರಗೆ ಇರುವವರು ಸುರಜನ-ದೇವತೆಗಳು, ಯೋಗಿಗಳು, ಸಿದ್ದರು, ನಿಷೇವಿತರು, ತಾವೇ ತಾವಾಗಿ ವಿಭವದಲ್ಲಿ- ಸಿರಿ,ಸಂಪತ್ತಿನಲ್ಲಿ ಇರುವರು.

ಜ೦ಬೂದ್ವೀಪ - ಕುಲಗಿರಿಗಳು[ಸಂಪಾದಿಸಿ]

ಧಾರುಣಿಯ ನಡುವೆಳಸಿ ಬೆಳೆದಿಹ
ಮೇರು ಗಿರಿಯನು ಬಳಸಿ ವೃತ್ತಾ
ಕಾರವಾಗೆಸೆದಿಹುದು ಜ೦ಬೂದ್ವೀಪ ನವಖ೦ಡ |
ಮೇರೆಯಾಗಿಹ ಗಿರಿ ಕುಲ೦ಗಳ
ತೋರದಗಲವನುನ್ನತ೦ಗಳ
ಸಾರ ಹೃದಯನೆ ನಿನಗೆ ಕಲಿಮಲದೂರ ತಿಳುಹುವೆನು || ೪೧ ||
ಪದವಿಭಾಗ-ಅರ್ಥ: ಧಾರುಣಿಯ(ಭೂಮಿಯ) ನಡುವೆಳಸಿ ಬೆಳೆದಿಹ ಮೇರುಗಿರಿಯನು ಬಳಸಿ ವೃತ್ತಾಕಾರವಾಗಿ+ ಎಸೆದಿಹುದು ಜ೦ಬೂದ್ವೀಪ, ನವಖ೦ಡಮೇರೆಯಾಗಿಹ ಗಿರಿ ಕುಲ೦ಗಳ ತೋರದ+ ಅಗಲವನು+ ಉನ್ನತ೦ಗಳ ಸಾರ ಹೃದಯನೆ ನಿನಗೆ ಕಲಿಮಲ ದೂರ ತಿಳುಹುವೆನು.
ಅರ್ಥ: ಭೂಮಿಯ ನಡುವೆಯಿಂದ(?) ಬೆಳೆದಿರುವ ಮೇರುಗಿರಿಯನ್ನು ಬಳಸಿಕೊಂಡು ವೃತ್ತಾಕಾರವಾಗಿ ಜ೦ಬೂದ್ವೀಪ ನವಖ೦ಡವು ಮೇರೆಯಾಗಿರುವ ಗಿರಿ ಕುಲಗಳು ದೊಡ್ಡದಾದ ಅಗಲವನ್ನು ಹೊಂದಿ ಶೋಭಿಸುತ್ತಿದೆ. ಉನ್ನತವಾದ ಸಾರ-ಉತ್ತಮ ಹೃದಯನೆ- ಅರ್ಜುನನೆ ನಿನಗೆ ,ಕಲಿಮಲದೂರ' ತಿಳುಹಿಸುವೆನು. ಎಂದನು ಮಾತಲಿ.
ಕುರು ಹಿರಣ್ಮಯ ರಮ್ಯಕವು ಸುರ
ಗಿರಿಯನೊಳಕೊ೦ಡಿಪ್ಪಿ ಳಾವೃತ
ಹರಿವರುಷ ಕಿ೦ಪುರುಷ ಭಾರತ ವುತ್ತರಾದಿಗಳು |
ಪಿರಿಯ ಶೃ೦ಗ ಶ್ವೇತ ನೀಲದ
ಗಿರಿ ನಿಷಧವಾ ಹೇಮಕೂಟದ
ಗಿರಿ ಹಿಮಾಲಯವಾಗಪರ ಜಲಧಿಯನು ಮುಟ್ಟಿಹವು || ೪೨ ||
ಪದವಿಭಾಗ-ಅರ್ಥ: ಕುರು ಹಿರಣ್ಮಯ ರಮ್ಯಕವು ಸುರಗಿರಿಯನು+ ಒಳಕೊ೦ಡಿಪ್ಪ+ ಇಳಾವೃತ, ಹರಿವರುಷ, ಕಿ೦ಪುರುಷ, ಭಾರತ, ವು+ ಉತ್ತರಾದಿಗಳು, ಪಿರಿಯ ಶೃ೦ಗ ಶ್ವೇತ ನೀಲದಗಿರಿ ನಿಷಧವವು,+ ಆ ಹೇಮಕೂಟದಗಿರಿ ಹಿಮಾಲಯವು ಆಗಪರ(ಮುಂಬರುವ) ಜಲಧಿಯನು ಮುಟ್ಟಿಹವು.
ಅರ್ಥ: ಕುರು, ಹಿರಣ್ಮಯ, ರಮ್ಯಕವು ಸುರಗಿರಿಯನನ್ನು ಒಳಕೊ೦ಡಿರುವ ಇಳಾವೃತ- ಭೂಮಂಡಲ; ಹರಿವರುಷ, ಕಿ೦ಪುರುಷ, ಭಾರತ, ಉತ್ತರಾದಿಗಳು, ಹಿರಿಯ ಶೃ೦ಗ ಶ್ವೇತ, ನೀಲದಗಿರಿ ನಿಷಧವವು, ಆ ಹೇಮಕೂಟದ ಗಿರಿ ಹಿಮಾಲಯವು ಮುಂದೆ ಒತ್ತಿಬರುವ ಜಲಧಿಯನ್ನು ಮುಟ್ಟಿರುವುವು.
ಸುರಗಿರಿಯ ಬಳಸಿಪ್ಪಿಳಾವೃತ
ವರುಷದಿ೦ದವೆ ಮೂಡಲೊಪ್ಪುವ
ಪಿರಿಯಗಿರಿ ಮಾಲ್ಯವತ ಜಲನಿಧಿತನಕಭರ್ದಾಶ್ವ |
ವರುಷ ಪಡುವಣ ಗ೦ಧ ಮಾದನ
ಗಿರಿ ತೊಡಗಿಯಾ ಪಶ್ಚಿಮಾಶಾ
ಶರಧಿ ಪರಿಯ೦ತಿಪ್ಪ ವರುಷವು ಕೇತಮಾಲನದು ೪೩
ಪದವಿಭಾಗ-ಅರ್ಥ: ಸುರಗಿರಿಯ(ಮೇರುಪರ್ವತ) ಬಳಸಿಪ್ಪ+ ಇಳಾವೃತ(ಭೂಮಿ ಆವೃತ) ವರುಷದಿ೦ದವೆ ಮೂಡಲು+ ಒಪ್ಪುವ(ಮೂಡಲು ಪೂರ್ವ, ಒಪ್ಪುವ- ಇರುವ) ಪಿರಿಯಗಿರಿ ಮಾಲ್ಯವತ ಜಲನಿಧಿ ತನಕ ಭರ್ದಾಶ್ವವರುಷ ಪಡುವಣ ಗ೦ಧಮಾದನಗಿರಿ ತೊಡಗಿಯು+ ಆ ಪಶ್ಚಿಮಾಶಾ ಶರಧಿ ಪರಿಯ೦ತ+ ಇಪ್ಪ ವರುಷವು ಕೇತಮಾಲನದು
ಅರ್ಥ:ಸುರಗಿರಿಯಾದ ಮೇರುಪರ್ವತವನ್ನು ಬಳಸಿರವ ಆವೃತ ಭೂಮಿ, ವರುಷದಿ೦ದ ಪೂರ್ವದಲ್ಲಿ ಇರುವ ಹಿರಿದಾದ ಗಿರಿ ಮಾಲ್ಯವಂತವು ಜಲನಿಧಿ-ಸಮುದ್ರದ ತನಕ ಇದೆ. ಭರ್ದಾಶ್ವ ವರುಷ ಪಶ್ಚಿಮದ ಗ೦ಧಮಾದನಗಿರಿಯಿಂದ ತೊಡಗಿ ಆ ಪಶ್ಚಿಮದ ಆಶಾ ಶರಧಿ-ಸಮುದ್ರ ಪರಿಯ೦ತ ಇರುವ ವರುಷವು(ಪ್ರದೇಶವು?ವರ್ಷ-ಮಳೆ, ನೀರು) ಕೇತಮಾಲ ಪರ್ವತದ್ದು.

ಟಿಪ್ಪಣಿ:-[ಸಂಪಾದಿಸಿ]

ಕುಲಪರ್ವತಗಳು ಇತ್ಯಾದಿಗಳ ವರ್ಣನೆ ಇದ್ದಂತಿದೆ. ಆದರೆ ಸ್ಪಷ್ಟತೆ ಕಷ್ಟ; ಈ ಭಾಗವನ್ನು ಈ ಸಂಪಾದಕನಿಗೆ ಮೂಲ ಮಹಾಭಾರತದಲ್ಲಿ ನೋಡಿದ ನೆನಪಿಲ್ಲ. ಕುಮಾರವ್ಯಾಸನು ಇದನ್ನು ಯಾವ ಪುರಾನದಿಂದ ಆಯ್ದುಕೊಂಡನೆಂಬುದನ್ನು ವಿದ್ವಾಂಸರು ಹೇಳಬೇಕು. ವಾಯುಪುರಾಣದಲ್ಲಿ ಬರುವ ಜಗತ್ತಿನ ವರ್ಣನೆ ಇರಬಹುದೇ- ಅದರೆ ಅದು ಬೇರೆ ರೀತಿ ಇದೆ.
  • ಒಂದು ದ್ವೀಪದ ಅಥವಾ ಭೂಪ್ರದೇಶದ ಎಲ್ಲೆ ಕಟ್ಟನ್ನು ತಿಳಿಸುವ ಮೂಲಪರ್ವತಗಳಿವು. ಜಂಬು, ಪಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ ಮತ್ತು ಪುಷ್ಕರ ದ್ವೀಪಗಳಿಗೆ ಸಂಬಂಧಿಸಿದಂತೆ ವಿವಿಧ ಹೆಸರಿನ ಕುಲಪರ್ವತಗಳಿವೆ.
  • ಮಹೇಂದ್ರ, ಮಲಯ, ಸಹ್ಯ, ಶಕ್ತಿಮಾನ್, ರುಕ್ಷ, ಮತ್ತು ವಿಂಧ್ಯಗಳು ಜಂಬೂ ದ್ವೀಪದ ಭರತವರ್ಷದ ಸಪ್ತ ಕುಲಪರ್ವತಗಳು, ಅಷ್ಟದಿಗ್ಗಜಗಳು ಭೂಮಿಯನ್ನು ಕೆಳಕ್ಕೆ ಬೀಳದಂತೆ ಹೊತ್ತಿರುವಂತೆ ಕುಲಪರ್ವತಗಳು ಭೂಮಿಯನ್ನು ಹಾರಿ ಹೋಗದಂತೆ ಒತ್ತಿ ಹಿಡಿದಿವೆಯೆನ್ನಲಾಗಿದೆ.
  • ಜೈನಪುರಾಣಗಳಲ್ಲಿ ಹೇಳಿರುವ ಪರ್ವತಗಳು ಇವು; ಹಿಮವಂತ, ಮಹಾಹಿಮವಂತ, ನಿಷಧ, ನೀಲ, ರುಕ್ಮಿ, ಶಿಖರಿ. ಇವು ಜಂಬೂದ್ವೀಪದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹೋಗುತ್ತ ಕ್ರಮವಾಗಿ ಪೂರ್ವ-ಪಶ್ಚಿಮವಾಗಿ ಹಬ್ಬಿ ಭೂಭಾಗವನ್ನು ಸಪ್ತಕ್ಷೇತ್ರಗಳಾಗಿ ವಿಭಾಗಿಸಿವೆ.
  • ಸಪ್ತ ಕುಲಶೈಲ :- ೧.ಮಾಹೇಂದ್ರ, ೨.ಮಲಯ, ೩.ಸಹ್ಯ, ೪.ಶುಕ್ತಿ, (?), ೫.ಋಕ್ಷ, ೬.ವಿಂಧ್ಯ, ೭.ಪಾರಿಯಾತ್ರ.
  • ಸಪ್ತ ಕುಲಾಚಲ :- ೧.ಹಿಮವತ್, ೨.ನಿಷಧ, ೩.ವಿಂಧ್ಯ, ೪.ಮಾಲ್ಯವಚಿತ, ೫.ಪಾರಿಯಾತ್ರಕ, ೬.ಗಂಧಮಾಧನ, ೭.ಹೇಮಕೂಟ.
  • ಸಪ್ತ ದ್ವೀಪಗಳು :- ೧.ಜಂಬೂ, ೨.ಪ್ಲಕ್ಷ ೩.ಕುಶ, ೪.ಕ್ರೌಂಚ, ೫.ಶಾಖ, ೬.ಶಾಲ್ಮಲಿ,೭.ಪುಷ್ಕಲ.
  • ಸಪ್ತ ಲೋಕಗಳು :- ೧.ಭೂ, ೨.ಭುವ, ೩.ಸ್ವ (ಸುವ), ೪.ಮಹ, ೫.ಜನ, ೬.ತಪ, ೭.ಸತ್ಯ,
  • ಸಪ್ತ ಸಮುದ್ರಗಳು :- ೧.ಲವಣ, ೨.ಇಕ್ಷು, ೩.ಸುರೆ, ೪.ಸರ್ಪಿ, ೫.ದಧಿ, ೬.ಕ್ಷೀರ, ೭.ಶುದ್ಧೋದಕ.
♥♥♥

ಲವಣ ಸಮುದ್ರ[ಸಂಪಾದಿಸಿ]

ವರುಷ ಮದ್ಯದ ಪರ್ವತ೦ಗಳ
ಹರಹು ತಾನೆರಡೆರಡು ಸಾವಿರ
ವರುಷನವನವ ನವಸಹಸ್ರವದಾರು ಮದ್ಯದಲಿ |
ವರುಷವದು ಮೂವತ್ತು ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರ೦ತೆ ಮೆರೆವುದು ಹೊರಗೆ ಲವಣಾಬ್ಧಿ || ೪೪ ||
ಪದವಿಭಾಗ-ಅರ್ಥ: ವರುಷ (ಭಾರತವರುಷ-ಭಾರತವರ್ಷ- ಭರತವರ್ಷ, ಲೋಕಪ್ರದೇಶ; ವಿಸ್ತಾರಪ್ರದೇಶ) ಮದ್ಯದ ಪರ್ವತ೦ಗಳ ಹರಹು(ಪ್ರದೇಶ) ತಾನು+ ಎರಡೆರಡು ಸಾವಿರ ವರುಷ ನವ ನವ ನವಸಹಸ್ರವು+ ಅದು+ ಆರು ಮದ್ಯದಲಿ ವರುಷವದು ಮೂವತ್ತು ನಾಲ್ಕರ ಪರಿಗಣಿತ ಮೂಡಣದು(ಫೂರ್ವದ್ದು) ಪಡುವಣದು(ಪಶ್ಚಿಮ)+ ಎರಡು ತಾನು+ ಅದರ೦ತೆ ಮೆರೆವುದು ಹೊರಗೆ ಲವಣಾಬ್ಧಿ.
ಅರ್ಥ: ಸಮುದ್ರ ನೀರಿನ ಮಧ್ಯದ ಪರ್ವತಗಳ ಹರಹು-ವಿಸ್ತಾರ ತಾನು ಎರಡೆರಡು ಸಾವಿರ ವರುಷ. ನವ ನವ ನವ ಸಹಸ್ರವು; ಅದು ಆರು ಮದ್ಯದಲ್ಲಿ ವರುಷವಾಗಿರುದು ಮೂವತ್ತು ನಾಲ್ಕರ ಪರಿಗಣಿತ ಫೂರ್ವದ್ದು; ಪಶ್ಚಿಮದಲ್ಲಿ ತಾನು ಎರಡು; ಅದರ೦ತೆ ಮೆರೆವುದು ಹೊರಗೆ ಲವಣಾಬ್ಧಿ- ಉಪ್ಪು ಸಮುದ್ರ.
ದೇವಕೂಟದ ಜಠರವೆ೦ಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾವಿಧದಿ ಕೈಲಾಸ ಪರ್ವತ ಗ೦ಧಮಾದನವು |
ಕೋವಿದನೆ ಕೇಳ್ ಭೂಮಿ ವಲಯದೊ
ಳಾ ವಿಶಾಲದ ಪಾರಿಯಾತ್ರದ
ದೇವಯೋಗ್ಯದ ಗಿರಿಗಳಿಕ್ಕೆಲ ನಿಷಧ ಪರ್ವತಕೆ || ೪೫ ||
ಪದವಿಭಾಗ-ಅರ್ಥ: ದೇವಕೂಟದ ಜಠರವೆ೦ಬಿವು ಭಾವಿಸಲು ಮಾಲ್ಯವತದ+ ಇಕ್ಕೆಲನ (ಎರಡು ಬದಿ)+ ಆ ವಿಧದಿ ಕೈಲಾಸ ಪರ್ವತ ಗ೦ಧಮಾದನವು; ಕೋವಿದನೆ(ತಿಳಿದವನೆ, ವಿದ್ವಾಂಸನೆ) ಕೇಳ್ ಭೂಮಿ ವಲಯದೊಳು+ ಆ ವಿಶಾಲದ ಪಾರಿಯಾತ್ರದ ದೇವಯೋಗ್ಯದ ಗಿರಿಗಳ+ ಇಕ್ಕೆಲ ನಿಷಧ ಪರ್ವತಕೆ
ಅರ್ಥ:ವಿದ್ವಾಂಸನೆ ಕೇಳು, ದೇವಕೂಟದ ಜಠರವೆ೦ಬ ಇವು ಭಾವಿಸಿ ನೋಡಿದರೆ ಮಾಲ್ಯವತ ಪರ್ವತದ ಎರಡು ಬದಿ; ಆ ವಿಧದಿಂದ ಕೈಲಾಸ ಪರ್ವತ, ಗ೦ಧಮಾದನ ಪರ್ವತಗಳು ಭೂಮಿ ವಲಯದಲ್ಲಿ ನಿಷಧ ಪರ್ವತಕ್ಕೆ ಆ ವಿಶಾಲದ ಪಾರಿಯಾತ್ರದ ದೇವಯೋಗ್ಯದ ಗಿರಿಗಳ ಎರಡು ಬದಿ.
ನೀಲಗಿರಿಯಿಕ್ಕೆಲಕೆ ವಾರಿಧಿ
ಮೇಲೆ ನಿಷ್ಪ್ರತಿ ಶೃ೦ಗವಿವು ಮೈ
ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು |
ಹೇಳಿದೆ೦ಟುಪ ಪರ್ವತಾಗ್ರ ವಿ
ಶಾಲತಾನೆ೦ಬತ್ತು ಯೋಜನ
ಕೇಳಿಳಾವೃತ ವೇಲೆಯಾಗಿಹ ಗಿರಿಯ ಲೆಕ್ಕವನು || ೪೬ ||
ಪದವಿಭಾಗ-ಅರ್ಥ: ನೀಲಗಿರಿಯ+ ಇಕ್ಕೆಲಕೆ (ಎರಡು ಬದಿಗೆ) ವಾರಿಧಿ(ಸಮುದ್ರ) ಮೇಲೆ ನಿಷ್ಪ್ರತಿ ಶೃ೦ಗವು+ ಇವು ಮೈನೀಳದಲಿ (ಮೈಚಾಚಿ) ಪೂರ್ವ+ ಅಪರದ (ಪಶ್ಚಿಮದಿಕ್ಕಿನ) ಜಲನಿಧಿಯ(ಸಮುದ್ರವನ್ನು) ಮುಟ್ಟಿಹವು; ಹೇಳಿದ+ ಎ೦ಟು+ ಉಪ ಪರ್ವತ+ ಅಗ್ರ (ತುದಿಯಲ್ಲಿ) ವಿಶಾಲ ತಾನು(ಅದು)+ ಎ೦ಬತ್ತು ಯೋಜನ; ಕೇಳು+ ಇಳಾವೃತ(ಭೂಮಿ ಆವೃತ) ವೇಲೆಯಾಗಿಹ(ವೇಲೆ= ಸುಂದರ, ಸಮುದ್ರ ತೀರ ಸಮುದ್ರದ ಅಲೆ ಮೇರೆ,ಎಲ್ಲೆ ) ಗಿರಿಯ ಲೆಕ್ಕವನು.
ಅರ್ಥ: ನೀಲಗಿರಿಯ ಎರಡು ಬದಿಗೆ ಸಮುದ್ರ; ಮೇಲೆ ನಿಷ್ಪ್ರತಿ ಶೃ೦ಗವು- ಶೀಖರವು. ಇವು ಮೈಚಾಚಿ ಪೂರ್ವ ಮತ್ತು ಪಶ್ಚಿಮದಿಕ್ಕಿನ ಸಮುದ್ರವನ್ನು ಮುಟ್ಟಿರುವುವು; ಹಿಂದೆ ಹೇಳಿದ ಎ೦ಟು ಉಪ ಪರ್ವತದ ತುದಿ ವಿಶಾಲವಾಗಿದೆ, ತಾನು ಎ೦ಬತ್ತು ಯೋಜನ; ಅದು ಭೂಮಿಯನ್ನು ಆವರಿಸಿರುವ ಎಲ್ಲೆಯ ಗಿರಿಯ ಲೆಕ್ಕವನು ಕೇಳು.
ವರುಷದೊಡೆಯ ನಿಳಾವೃತಕೆ ಸ೦
ಕರುಷಣನು ಭದ್ರಾಶ್ವದೊಳು ಹಯ
ಶಿರನು ಹರಿ ವರುಷಕ್ಕೆ ನರಹರಿ ಕೇತುಮಾಲದಲಿ |
ಸಿರಿಯರಸ ರಮ್ಯಕಕೆ ಮತ್ಸ್ಯನು
ಪಿರಿಯ ಕಮಠ ಹಿರಣ್ಮಯಕೆ ಕುರು
ವರುಷದಲ್ಲಿ ಮಹಾ ವರಾಹನು ಪಾರ್ಥ ಕೇಳೆ೦ದ || ೪೭ ||
ಪದವಿಭಾಗ-ಅರ್ಥ:ವರುಷದೊಡೆಯನು(ಭರತವರ್ಷ, ಪ್ರದೇಶದ ಒಡೆಯನು)+ ಇಳಾವೃತಕೆ(ಭೂವೃತ್ತಕ್ಕೆ) ಸ೦ಕರುಷಣನು(ವಾಸುಕಿಯು) ಭದ್ರಾಶ್ವದೊಳು ಹಯಶಿರನು ಹರಿ, ವರುಷಕ್ಕೆ ನರಹರಿ, ಕೇತುಮಾಲದಲಿ ಸಿರಿಯ+ ಅರಸ ರಮ್ಯಕಕೆ ಮತ್ಸ್ಯನು, ಪಿರಿಯ ಕಮಠ(ಕೂರ್ಮನು) ಹಿರಣ್ಮಯಕೆ, ಕುರುವರುಷದಲ್ಲಿ (ಕುರುರಾಜ್ಯ ಪ್ರದೇಶದಲ್ಲಿ) ಮಹಾ ವರಾಹನು, ಪಾರ್ಥ ಕೇಳೆ೦ದ.
ಅರ್ಥ:ಪಾರ್ಥನೇ,'ವಾಸುಕಿಯು ಭೂವೃತ್ತದ ವರ್ಷದೊಡೆಯನು. ಭದ್ರಾಶ್ವದಲ್ಲಿ ಹಯವದನನು ಹರಿವರ್ಷಕ್ಕೆ ಒಡೆಯನು; ನರಹರಿಯು ಕೇತುಮಾಲದಲ್ಲಿ ಒಡೆಯನು; ಸಿರಿಯಅರಸ- ಲಕ್ಷ್ಮಿಯಅರಸನು - ವಿಷ್ಣುವು ರಮ್ಯಕಕ್ಕೆ ಅರಸನು; ಮತ್ಸ್ಯನು, ಕೂರ್ಮನು ಹಿರಣ್ಮಯ ಪ್ರದೇಶಕ್ಕೆ ಒಡೆಯರು; ಕುರುವರ್ಷದಲ್ಲಿ (ಕುರುರಾಜ್ಯ ಪ್ರದೇಶದಲ್ಲಿ) ಮಹಾ ವರಾಹನು ಒಡೆಯನು,'ಕೇಳು ಎಂದ.
ರಾಮ ಕಿ೦ಪುರುಷಕ್ಕೆ ಭಾರತ
ಭೂಮಿ ನರ ನಾರಾಯಣನು ತಿಳಿ
ನಾಮದಾರಕ ಹನುಮ ವಸುಧಾದೇವಿ ನಾರದನು |
ಆ ಮನು ಜಗಚ್ಛಕ್ಷು ಲಕ್ಷ್ಮೀ
ಪ್ರೇಮದಿ೦ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು || ೪೮ ||
ಪದವಿಭಾಗ-ಅರ್ಥ:ರಾಮ(ಬಲರಾಮ?) ಕಿ೦ಪುರುಷಕ್ಕೆ, ಭಾರತಭೂಮಿ ನರ ನಾರಾಯಣನು ತಿಳಿ, ನಾಮದಾರಕ ಹನುಮ ವಸುಧಾದೇವಿ, ನಾರದನು ಆ ಮನು ಜಗಚ್ಛಕ್ಷು ಲಕ್ಷ್ಮೀಪ್ರೇಮದಿ೦ ಪ್ರಹ್ಲಾದ ನಿಜ ನಿಸ್ಸೀಮ ಭದ್ರಶ್ರವ ಸದಾಶಿವನು,+ ಇವರು ಪಾಲಕರು.
ಅರ್ಥ:ಕಿ೦ಪುರುಷ ಲೋಕಕ್ಕೆ ರಾಮ , ಭಾರತಭೂಮಿಗೆ ನರ ನಾರಾಯಣನರು ಪಾಲಕರು ತಿಳಿದುಕೋ; ವಸುಧಾದೇವಿಗೆ, ನಾಮದಾರಕ ಹನುಮನು ನಾರದನು, ಮತ್ತು ಆ ಮನು ಜಗಚ್ಛಕ್ಷು ಲಕ್ಷ್ಮೀಪ್ರೇಮದಿಂದ ಪ್ರಹ್ಲಾದ, ತನ್ನ ನಿಸ್ಸೀಮ ಭದ್ರಶ್ರವ, ಸದಾಶಿವ' ಇವರು ಪಾಲಕರು.
ವರುಷವನು ಗಿರಿಗಳನು ಬಳಸಿಹ
ಪಿರಿಯ ಲವಣ ಸಮುದ್ರ ತದನ೦
ತರದಿ ದೀಪಪ್ಲಕ್ಷ ಯಿಕ್ಷು ಸಮುದ್ರವಲ್ಲಿ೦ದ |
ಇರಲು ಶಾಲ್ಮಲವದರ ಹೊರಗಣ
ಸುರೆಯ ಶರಧಿಯನೊ೦ದನೊ೦ದಾ
ವರಿಸಿ ಪರಿಭಾವಿಸಲು ತದ್ವಿಗುಣ೦ಗಳಾಗಿಹವು|| ೪೯ ||
ಪದವಿಭಾಗ-ಅರ್ಥ: ವರುಷವನು(ಭೂಪ್ರದೇಶಗಳನ್ನು) ಗಿರಿಗಳನು, ಬಳಸಿಹ ಪಿರಿಯ(ಹಿರಿಯ) ಲವಣ(ಉಪ್ಪು) ಸಮುದ್ರ, ತದನ೦ತರದಿ ದೀಪ ಪ್ಲಕ್ಷ(ಬಸರಿಮರ) ಯಿಕ್ಷು(ಇಕ್ಷು ಕಬ್ಬು- ಕಬ್ಬಿನಹಾಲಿನ) ಸಮುದ್ರವು+ ಅಲ್ಲಿ೦ದ ಇರಲು ಶಾಲ್ಮಲವು+ ಅದರ ಹೊರಗಣ ಸುರೆಯ(ಮದ್ಯ- ಹೆಂಡ) ಶರಧಿಯನು+ ಒಂ೦ದನು+ ಒ೦ದು+ ಅವರಿಸಿ ಪರಿಭಾವಿಸಲು ತದ್+ ದ್ವಿಗುಣ೦ಗಳು+ ಆಗಿಹವು
ಅರ್ಥ:ಭೂವರುಷವನು- ಭೂಪ್ರದೇಶಗಳನ್ನೂ ಗಿರಿಗಳನ್ನೂ, ಬಳಸಿರುವ ದೊಡ್ಡ ಲವಣಸಮುದ್ರ, ಅದರ ನ೦ತರದಲ್ಲಿ ಬಸರೀಮರದ ದ್ವೀಪ, ಅದಕ್ಕೆ ಕಬ್ಬಿನಹಾಲಿನ ಸಮುದ್ರವು. ಅಲ್ಲಿ೦ದ ಮುಂದೆ ಇರುವುದು ಶಾಲ್ಮಲವೆಂಬ ಕೆಂಪು ಬೂರುಗ ಮರದ ಭೂಮಿಯು; ಅದರ ಹೊರಗಣ ಸಮುದ್ರವು ಸುರೆಯ ಶರಧಿಯು- ಹೆಂಡದ ಸಮುದ್ರವು. ಒ೦ದನ್ನು ಒ೦ದು ಅವರಿಸಿದೆ, ಪರಿಭಾವಿಸಲು- ಸರಿಯಾಗಿತಿಳಿದರೆ ಅವ ಒಂದಕ್ಕಿಂತ ಮತ್ತೊಂದು ದ್ವಿಗುಣ- ಎರಡರಷ್ಟು ದೊಡ್ಡದು ಆಗಿರುವುವು.
  • ಟಿಪ್ಪಣಿ:-ಸಪ್ತ ಸಮುದ್ರಗಳು :೧.ಲವಣ, ೨.ಇಕ್ಷು, ೩.ಸುರೆ, ೪.ಸರ್ಪಿ(ಸರ್ಪಿಸ್= ತುಪ್ಪ), ೫.ದಧಿ, ೬.ಕ್ಷೀರ, ೭.ಶುದ್ಧೋದಕ.;ಸಪ್ತ ದ್ವೀಪಗಳು:-ಜಂಬೂ, ಪ್ಲಕ್ಷ, ಕುಶ, ಕ್ರೌಂಚ, ಶಾಖ, ಶಾಲ್ಮಲಿ, ಪುಷ್ಕಲ.(ಆ ಬಗೆಯ ಮರಗಳಿಂದ ಕೂಡಿದವು); ಕ್ಷೀರಸಮುದ್ರ ಪುರಾಣೋಕ್ತವಾದ ಸಪ್ತ ಸಮುದ್ರಗಳಲ್ಲಿ ಒಂದು. ಕ್ಷೀರ ಸಮುದ್ರದ ವಿಸ್ತೀರ್ಣ ಆರು ಲಕ್ಷ ಯೋಜನಗಳೆನ್ನಲಾಗಿದೆ (ಭಾಗವತ).

ವಿಷ್ಣುವಿನ ನಿಲಯ - ಕ್ಷೀರಸಾಗರ[ಸಂಪಾದಿಸಿ]

ತಿಳಿದೊಡಾ ಸುರೆಯಿ೦ದ ಕುಶಘೃತ
ಜಲಧಿ ಕ್ರೌ೦ಚ ದ್ವೀಪ ವೆ೦ಬಿವ
ರಳತೆಗಿಮ್ಮಡಿಯಾಗಿ ದಧಿಯ ಸಮುದ್ರ ವಲ್ಲಿ೦ದ |
ಇಳೆಯ ಮೇಲೆಸದಿಪ್ಪ ಶಾಕದ
ಬಳಿಯ ದುಗ್ದವಿದೊ೦ದನೊ೦ದನು
ಬಳಸಿ ಕೊ೦ಡಿಹವಬುಜನಾಭನ ನಿಳಯವದ ನೋಡ || ೫೦ ||
ಪದವಿಭಾಗ-ಅರ್ಥ: ತಿಳಿದೊಡೆ+ ಆ ಸುರೆಯಿ೦ದ ಕುಶಘೃತ(ತುಪ್ಪ) ಜಲಧಿ, ಕ್ರೌ೦ಚ ದ್ವೀಪವೆ೦ಬ+ ಇವರ+ ಅಳತೆಗರ+ ಇಮ್ಮಡಿಯಾಗಿ ದಧಿಯ(ಮೊಸರು) ಸಮುದ್ರವು+ ಅಲ್ಲಿ೦ದ ಇಳೆಯ ಮೇಲೆ+ ಎಸದಿಪ್ಪ(ತೋರುವ) ಶಾಕದ ಬಳಿಯ ದುಗ್ದವು(ದುಗ್ದ= ಕ್ಷೀರ,ಹಾಲು)+ ಇದೊ೦ದನ+ ಒ೦ದನು ಬಳಸಿ ಕೊ೦ಡಿಹವು+ ಅಬುಜನಾಭನ(ಕಮಲನಾಭ - ವಿಷ್ಣು- ಹೊಕ್ಕಳಲ್ಲಿ ಕಮಲವಿರುವವ) ನಿಳಯವದ ನೋಡ.
ಅರ್ಥ: ನಂತರದ್ದನ್ನು ತಿಳಿಯುವುದಾದರೆ ಆ ಸುರೆಯ ಸಮುದ್ರದಿಂದ ತುಪ್ಪದ ಸಮುದ್ರ, ಕ್ರೌ೦ಚ ದ್ವೀಪವೆ೦ಬ ಭೂಪ್ರದೇಶವು ಇದರ ಅಳತೆಗೆ ಇಮ್ಮಡಿಯಾಗಿ- ಎರಡರಷ್ಟು ದೊಡ್ಡದಾಗಿ ಮೊಸರಿನ ಸಮುದ್ರವು ಇದೆ; ಅಲ್ಲಿ೦ದ ಭೂಮಿಯ ಮೇಲೆ ತೋರುವ ಶಾಕದ-ಅರಳಿ?ಮರದ ಬಳಿಯ ಹಾಲಿನ ಸಮುದ್ರ; ಇದು ವಿಷ್ಣುವಿನ ನಿಲಯವು; ಒ೦ದನ್ನು ಒ೦ದು ಬಳಸಿ ಕೊ೦ಡಿರುವುವು, ನೋಡು.
ಚೆಲುವಿಕೆಯ ನೆಲೆವೆನಿಸಿ ಮೆರೆವುದು
ಪ್ರಳಯವೆ೦ದೂಯಿಲ್ಲ ಲಕ್ಷ್ಮೀ
ನಿಳಯನಿಹನನವರತ ಸುಳಿಯವುಮೃತ್ಯು ಮಾಯೆಗಳು |
ಬಳಕೆ ಸಲ್ಲದು ಕಲಿಯ ಕಾಲದ
ಹೊಲಬು ಹೊದ್ದದು ಹರಿಯ ರೂಪನು
ತಳೆದಪುರವನು ಕ್ಷೀರವಾರಿಧಿ ಬಳಸಿಕೊ೦ಡಿಹುದು || ೫೧ ||
ಪದವಿಭಾಗ-ಅರ್ಥ: ಚೆಲುವಿಕೆಯ ನೆಲೆವೆನಿಸಿ ಮೆರೆವುದು ಪ್ರಳಯವು+ ಎ೦ದೂಯಿಲ್ಲ ಲಕ್ಷ್ಮೀನಿಳಯನು+ ಇಹನು+ ಅನವರತ; ಸುಳಿಯವು ಮೃತ್ಯು ಮಾಯೆಗಳು; ಬಳಕೆ ಸಲ್ಲದು ಕಲಿಯ ಕಾಲದ ಹೊಲಬು ಹೊದ್ದದು ಹರಿಯ ರೂಪನು ತಳೆದ ಪುರವನು ಕ್ಷೀರವಾರಿಧಿ ಬಳಸಿಕೊ೦ಡಿಹುದು.
ಅರ್ಥ:ವಿಷ್ಣುವಿನ ಬೀಡಾಗಿರುವ ಕ್ಷೀರಸಾಗರವು ಚೆಲುವಿಕೆಯ ನೆಲೆವೆನಿಸಿಕೊಂಡು ಮೆರೆಯುವುದು. ಅಲ್ಲಿ ಪ್ರಳಯವು ಎ೦ದೂ ಸಂಬವಿಸುವುದಿಲ್ಲ. ಲಕ್ಷ್ಮೀನಿಲಯನಾದ ಮಹಾ ವಿಷ್ಣುವು ಇಲ್ಲಿ ಅನವರತ- ಸದಾ ಇರುವನು; ಮೃತ್ಯು ಮಾಯೆಗಳು ಇಲ್ಲಿ ಸುಳಿಯುವುದಿಲ್ಲ; ಕಲಿಯ ಕಾಲದ ಹೊಲಬು- ಕೆಡುಕಿನ ಬಳಕೆ ಇಲ್ಲಿ ಸಲ್ಲುವುದಿಲ್ಲ. ಹರಿಯ ರೂಪವನು ತಳೆದು ಹೊದ್ದ ಇದು, ಪುರವನ್ನು ಕ್ಷೀರವಾರಿಧಿ- ಕ್ಷೀರಸಮುದ್ರ- ಹಾಲಿನಸಮುದ್ರವು ಬಳಸಿಕೊ೦ಡಿದಿ- ಆವರಿಸಿಕೊಂಡಿದೆ.
ಯೋಗಿಗಳ ನೆಲೆವೀಡು ಬೊಮ್ಮದ
ಸಾಗರವು ಸನಕಾದಿ ಮುನಿಗಳ
ಭೋಗಭೂಮಿಯನ೦ತ ವೆನಿಸಿರ್ದುಪನಿಷತ್ತುಗಳ
ಆಗರವು ಮೂಲೋಕ ದರ್ಪಣ ವಾಗಿ
ದುಗ್ದೋಧಧಿಯಲೆಳೆಸೆವುದು
ಶ್ರೀಗಧೀಶನ ನಗರ ನೋಡೆಲೆ ಪಾರ್ಥ ನೀನೆ೦ದ ೫೨
ಪದವಿಭಾಗ-ಅರ್ಥ: ಯೋಗಿಗಳ ನೆಲೆವೀಡು(ನೆಲೆಸಿರುವ ಪ್ರದೇಶ) ಬೊಮ್ಮದ ಸಾಗರವು ಸನಕಾದಿ ಮುನಿಗಳ ಭೋಗಭೂಮಿಯು+ ಅನ೦ತವೆನಿಸಿರ್ದು+ ಉಪನಿಷತ್ತುಗಳ ಆಗರವು ಮೂಲೋಕ ದರ್ಪಣವಾಗಿ ದುಗ್ಧ( ಹಾಲು)+ ಉಧಧಿಯಲಿ(ಸಮುದ್ರ)+ ಎಳೆಸೆವುದು ಶ್ರೀಗಧೀಶನ(ಶ್ರೀಗದಾ+ ಈಶ- ಗದಾಧರ- ವಿಷ್ಣು) ನಗರ ನೋಡೆಲೆ ಪಾರ್ಥ ನೀನೆ೦ದ
ಅರ್ಥ:ಮಾತಲಿಯು,'ವಿಷ್ಣುವಿನ ಲೋಕವು ಯೋಗಿಗಳ ನೆಲೆಸಿರುವ ಪ್ರದೇಶ; ಶ್ರೀಹರಿಯ ಸಾಗರವು; ಸನಕಾದಿ ಮುನಿಗಳ ಭೋಗಭೂಮಿಯು; ಅನ೦ತವೆನಿಸಿರುವುದು; ಉಪನಿಷತ್ತುಗಳ ಆಗರವು; ಮೂರಲೋಕದ ದರ್ಪಣವಾಗಿ- ಕನ್ನಡಿಯಾಗಿ ಹಾಲಿನ ಸಮುದ್ರ ವಾಗಿರುವುದು. ಇದು ಶ್ರೀವಿಷ್ಣುವಿನ ನಗರವು; ಪಾರ್ಥನೇ ನೀನು ನೋಡೆಲೆ,'ಎಂದ.

ಇತರ ಲೋಕಗಳು[ಸಂಪಾದಿಸಿ]

ನಳಿನನಾಭನ ದುಗ್ದ ಶರಧಿಯ
ಬಳಸಿಕೊ೦ಡಿಹ ಪುಷ್ಕರದ ಹೊರ
ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಸಿ |
ಇಳೆಗೆ ಕೋಟೆಯನಿಕ್ಕಿದ೦ತಿರೆ
ಬೆಳೆದ ಲೋಕಾಲೋಕಾ ಪರ್ವತ
ತಿಳಿವಡಲ್ಲಿ೦ದತ್ತ ತಿಮಿರವಜಾ೦ಡ ಪರಿಯ೦ತ || ೫೩ ||
ಪದವಿಭಾಗ-ಅರ್ಥ: ನಳಿನನಾಭನ(ಕಮಲನಾಭ, ಶ್ರೀಹರಿ) ದುಗ್ದ ಶರಧಿಯ(ಹಾಲಿನ ಸಮುದ್ರ, ಕ್ಷೀರಸಾಗರ) ಬಳಸಿಕೊ೦ಡಿಹ ಪುಷ್ಕರದ(ಕಮಲ, ಕೊಳ) ಹೊರ ವಳಯದಲಿ ಮೆರೆದಿಪ್ಪುದು+ ಆ ಸ್ವಾದ+ ಉದ ವಾರಾಸಿ(ಸಿಹಿನೀರಿನ ಸಮುದ್ರ) ಇಳೆಗೆ ಕೋಟೆಯನು ಇಕ್ಕಿದ೦ತಿರೆ ಬೆಳೆದ ಲೋಕಾಲೋಕಾ ಪರ್ವತ ತಿಳಿವಡೆ+ ಅಲ್ಲಿ೦ದತ್ತ ತಿಮಿರವು (ತಿಮಿರವು-ಕತ್ತಲೆಯು)+ ಅಜಾ೦ಡ ಪರಿಯ೦ತ
ಅರ್ಥ:ಕಮಲನಾಭನಾದ ಶ್ರೀಹರಿಯ ಕ್ಷೀರಸಾಗರವನ್ನು ಬಳಸಿಕೊ೦ಡಿರುವ ಸಮುದ್ರದ ಹೊರವಲಯದಲ್ಲಿ ಮೆರೆದಿಪ್ಪುದು ಆ ಸಿಹಿನೀರಿನ ಸಮುದ್ರವು ಭೂಮಿಗೆ ಕೋಟೆಯನ್ನು ಹಾಕಿದ೦ತಿರಲು, ಆನಂತರ ಬೆಳೆದ ಲೋಕಾಲೋಕಾ ಪರ್ವತಗಳು ತಿಳಿದುನೋಡಿದರೆ ಅಲ್ಲಿ೦ದ ಅತ್ತಲಾಗಿ ಬ್ರಹ್ಮಾಂಡ ಪರಿಯ೦ತ ಕತ್ತಲೆಯು.
ಲಕ್ಕ ಜ೦ಬೂದ್ವೀಪವಾ ಪರಿ
ಲಕ್ಕ ಲವಣ ಸಮುದ್ರ ನಾಲಕು
ಲಕ್ಕದ್ವೀಪ ಪ್ಲಕ್ಷವಿಕ್ಷು ಸಮುದ್ರವೊ೦ದಾಗಿ |
ಲಕ್ಕವೆ೦ಟು ಸುಶಾಲ್ಮಲಿಯು ಸುರೆ
ಲಕ್ಕ ಶೋಡಷ ಕುಶ ಘೃತ೦ಗಳು
ಲಕ್ಕ ಮೂವತ್ತೆರಡು ಕ್ರೌ೦ಚ ದ್ವೀಪ ದಧಿಗೂಡಿ || ೫೪ ||
ಪದವಿಭಾಗ-ಅರ್ಥ: ಲಕ್ಕ( ಲೆಕ್ಕ?- ಲಕ್ಷ- ನೋಡು) ಜ೦ಬೂದ್ವೀಪವು+ ಆ ಪರಿಲಕ್ಕ ಲವಣ ಸಮುದ್ರ(ಉಪ್ಪಿನ ಸಮುದ್ರ) ನಾಲಕು ಲಕ್ಕ ದ್ವೀಪ, ಪ್ಲಕ್ಷವು(ಬಸರಿಮರದ ದ್ವೀಪ)+ ಇಕ್ಷು(ಕಬ್ಬು) ಸಮುದ್ರವು+ ಒ೦ದಾಗಿ ಲಕ್ಕವು+ ಎ೦ಟು ಸುಶಾಲ್ಮಲಿಯು ಸುರೆ, ಲಕ್ಕ ಶೋಡಷ(ಹದಿನಾರುಲಕ್ಷ) ಕುಶ(ಕುಶದ್ವೀಪ,ನೀರು, ಸಪ್ತ ದ್ವೀಪಗಳಲ್ಲಿ ಒಂದು) ಘೃತ೦ಗಳು ಲಕ್ಕ ಮೂವತ್ತೆರಡು ಕ್ರೌ೦ಚ ದ್ವೀಪ ದಧಿ+ಗೂ+ ಕೂಡಿ.
ಅರ್ಥ: ಪಾರ್ಥನೇ ನೋಡು ಜ೦ಬೂದ್ವೀಪವು; ಆ ಪರಿ ಲಕ್ಕ ಉಪ್ಪಿನ ಸಮುದ್ರವು, ನಾಲ್ಕು ಲಕ್ಷದ್ವೀಪ, ಪ್ಲಕ್ಷದ್ವೀಪವು ಕಬ್ಬಿನಹಾಲಿನ ಸಮುದ್ರವುಳ್ಳದ್ದು; ಇವು ಒ೦ದಾಗಿ ಎ೦ಟು ಲಕ್ಷವು (ಯೋಜನ ವಿಸ್ತಾರದ್ದು?) ; ಸುಶಾಲ್ಮಲಿ(ಮರದ) ದ್ವೀಪವು ಸುರೆಯ ಸಮುದ್ರವುಳ್ಳದ್ದು, ಲಕ್ಷ ಶೋಡಷ- ಹದಿನಾರುಲಕ್ಷ(ಯೋಜನ ವಿಸ್ತಾರದ್ದು) ಕುಶದ್ವೀಪವು ಸಪ್ತ ದ್ವೀಪಗಳಲ್ಲಿ ಒಂದು) ಘೃತ೦ಗಳು- ತುಪ್ಪದ ಸಮುದ್ರದ್ದು; ಮೂವತ್ತೆರಡು ಲಕ್ಷ ಯೋಜನ ವಿಸ್ತಾರದ್ದು- ಕ್ರೌ೦ಚದ್ವೀಪವು- ದಧಿ-ಮೊಸರಿನ ಸಮುದ್ರವು ಕೂಡಿ.
ಲಕ್ಕ ತಾನರವತ್ತು ನಾಲ್ಕಾ
ಗಿಕ್ಕು ಶಾಕ ಕ್ಷೀರ ಕೋಟಿಯ
ಲಕ್ಕವಿಪ್ಪತ್ತೆ೦ಟು ಪುಷ್ಕರ ಸುಜಲವೊ೦ದಾಗಿ |
ಮಿಕ್ಕಕೋಟಿಯ ದ್ವಯದ ಮೇಲಣ
ಲಕ್ಕವೈವತ್ತಾರು ಯೋಜನ
ವಕ್ಕು ಹೇಮದ ಭೂಮಿ ಲೋಕಾಲೋಕ ಗಿರಿಸಹಿತ || ೫೫ ||
ಪದವಿಭಾಗ-ಅರ್ಥ: ಲಕ್ಕ ತಾನು+ ಅರವತ್ತು ನಾಲ್ಕು+ ಆಗಿಕ್ಕು ಶಾಕ(ಅಥವಾ- ಶಾಖ- ಸಪ್ತದ್ವೀಪಗಳಲ್ಲಿ ಒಂದು) ಕ್ಷೀರ ಕೋಟಿಯ ಲಕ್ಕವು+ ಇಪ್ಪತ್ತೆ೦ಟು ಪುಷ್ಕರ ಸುಜಲವೊ೦ದಾಗಿ, ಮಿಕ್ಕ ಕೋಟಿಯ ದ್ವಯದ ಮೇಲಣ ಲಕ್ಕವು+ ಐವತ್ತಾರು ಯೋಜನವಕ್ಕು ಹೇಮದ ಭೂಮಿ ಲೋಕಾಲೋಕ ಗಿರಿಸಹಿತ.
ಅರ್ಥ: ತಾನು ಅರವತ್ತು ನಾಲ್ಕು ಲಕ್ಷ (ಯೋಜನ) ಆಗಿರುವುದು ಶಾಕದ್ವೀಪವು; ಕ್ಷೀರ ಕೋಟಿಯ ಇಪ್ಪತ್ತೆ೦ಟು ಲಕ್ಷವು(ಯೋಜನ) ಪುಷ್ಕರದ್ವೀಪವು ಸುಜಲವು ಒ೦ದಾಗಿ, ಮಿಕ್ಕ ಕೋಟಿಯ ಎರಡರಷ್ಟು ಅದರ ಮೇಲಣ ಲಕ್ಷ ಯೊಜನವು; ಲೋಕಾಲೋಕ ಗಿರಿಸಹಿತ ಐವತ್ತಾರು ಯೋಜನವು ಅಕ್ಕು- ಆಗುವುದು ಹೇಮದ(ಚಿನ್ನದ) ಭೂಮಿ.
ಹತ್ತು ಲಕ್ಕವು ಹೀನವಾಗಿ
ಪ್ಪತ್ತು ಕೋಟಿ ತಮ೦ಧದುರ್ವರೆ
ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರಿಯ೦ತ |
ಇತ್ತಸುರಗಿರಿಯಿ೦ದ ಹಿ೦ದಿ
ಪ್ಪತ್ತು ಕೋಟಿಯ ಕೂಡಿ ನೋಡೆ ಧ
ರಿತ್ರಿ ತಾನೈವತ್ತು ಕೋಟಿಯ ಲೆಕ್ಕನೋಡೆ೦ದ || ೫೬ ||
ಪದವಿಭಾಗ-ಅರ್ಥ: ಹತ್ತು ಲಕ್ಕವು ಹೀನವಾಗಿ(ಕಡಿಮೆಯಾಗಿ)+ ಇಪ್ಪತ್ತು ಕೋಟಿ ತಮ+ ಅ೦ಧದುರ್ವರೆ ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರಿಯ೦ತ ಇತ್ತ ಸುರಗಿರಿಯಿ೦ದ ಹಿ೦ದೆ+ ಇಪ್ಪತ್ತು ಕೋಟಿಯ ಕೂಡಿ ನೋಡೆ, ಧರಿತ್ರಿ ತಾನು+ ಐವತ್ತು ಕೋಟಿಯ ಲೆಕ್ಕ ನೋಡೆ೦ದ
ಅರ್ಥ:ಮಾತಲಿಯು,'ಪುಷ್ಕರದ್ವೀಪದಲ್ಲಿಂದ, ಹತ್ತು ಲಕ್ಷವು ಕಡಿಮೆಯಾಗಿ ಇಪ್ಪತ್ತು ಕೋಟಿ (ಯೋಜನ) ತಮ-ಅ೦ಧ ದುರ್ವರೆ- ದುರ್ಧರವಾದ ಕತ್ತಲೆ ಸುತ್ತುವರೆದು ಬೆಳೆದಿರುವುದು. ಗರ್ಭೋದಕದ-ದ್ವೀಪದ ಒಳಗಿನ ನೀರಿನ ಪರಿಯ೦ತ; ಇತ್ತ ಸುರಗಿರಿಯಿ೦ದ-ಮೇರುಪರ್ವತದಿಂದ ಹಿ೦ದೆ ಇಪ್ಪತ್ತು ಕೋಟಿ ಯೋಜನವ ಕೂಡಿ ನೋಡಲು, ಧರಿತ್ರಿ-ಭೂಮಿಯು ತಾನು ಐವತ್ತು ಕೋಟಿ ಯೋಜನವು ಇದರ ಲೆಕ್ಕ ನೋಡು ಎ೦ದ.
ವರುಷವೊ೦ಬತ್ತಾಗಿಹುದು ವಿ
ಸ್ತರದ ಜ೦ಬೂ ದ್ವೀಪವೋ೦ದೇ
ವರುಷವೇಳಾಗಿಹವು ತಾ ಶತಸ೦ಖ್ಯೆಯಾ ದ್ವೀಪ |
ನಿರುತ ಕಡೆಯ ದ್ವೀಪವೆ೦ಬುದು
ವರುಷವೆರಡಾಗಿರಲು ,ಮಾನಸ
ಗಿರಿಯದರ ಮೇಲಿಹುದು ಚಕ್ರದ ಕ೦ಬಿಯ೦ದದಲಿ || ೫೭ ||
ಪದವಿಭಾಗ-ಅರ್ಥ: ವರುಷವು(ಪ್ರದೇಶವು)+ ಒ೦ಬತ್ತಾಗಿಹುದು, ವಿಸ್ತರದ ಜ೦ಬೂ ದ್ವೀಪವೋ೦ದೇ ವರುಷವು+ ಏಳಾಗಿಹವು, ತಾ ಶತಸ೦ಖ್ಯೆಯಾ ದ್ವೀಪ ನಿರುತ ಕಡೆಯ ದ್ವೀಪವೆ೦ಬುದು ವರುಷವು ಎರಡಾಗಿರಲು ,ಮಾನಸಗಿರಿಯು+ ಅದರ ಮೇಲಿಹುದು ಚಕ್ರದ ಕ೦ಬಿಯ೦ದದಲಿ.
ಅರ್ಥ: ಭೂ ಪ್ರದೇಶವು ಒ೦ಬತ್ತಾಗಿರುವುದು. ವಿಸ್ತಾರವಾದ ಜ೦ಬೂ ದ್ವೀಪವೋ೦ದೇ ಏಳು ವರುಷ- ಪ್ರದೇಶವಾಗಿವೆ. ಅದು ತಾನು ಶತಸ೦ಖ್ಯೆಯ ನಿರುತ-ಅನೇಕ ದ್ವೀಪ. ಕಡೆಯ ದ್ವೀಪವೆ೦ಬುದು ಎರಡು ವರುಷವಾಗಿರುವುದು. ಮಾನಸಗಿರಿಯು ಅದರ ಮೇಲಿರುವುದು. ಅದು ಚಕ್ರದ ಮಧ್ಯಕ೦ಬಿಯ೦ತೆ ಇದೆ.
ವರುಷವೆರಡಾಗೊಪ್ಪುತಿಹ ಪು
ಷ್ಕರದ ನಡುವಣ ಮಾನಸೋತ್ತರ
ಗಿರಿಯುದಯವೈವತ್ತು ಸಾವಿರ ಹರಹು ತದ್ವಿಗುಣ |
ಪಿರಿದು ಪುಣ್ಯಶ್ಲೋಕ ಕೇಳಾ
ಗಿರಿಯ ಶಿಖರದ ಮೇಲೆ ದಿಗ್ದೇ
ವರ ಪುರ೦ಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು || ೫೮ ||
ಪದವಿಭಾಗ-ಅರ್ಥ: ವರುಷವು+ ಎರಡಾಗಿ+ ಒಪ್ಪುತಿಹ(ಶೋಭಿಸುತ್ತಿರುವ) ಪುಷ್ಕರದ(ಕೊನೆಯ ದ್ವೀಪ- ಪುಷ್ಕಲ) ನಡುವಣ ಮಾನಸೋತ್ತರ ಗಿರಿಯು+ ಉದಯವು+ ಐವತ್ತು ಸಾವಿರ ಹರಹು ತದ್ವಿಗುಣ-(ಎರಡರಷ್ಟು) ಪಿರಿದು(ಹಿರಿದು) ಪುಣ್ಯಶ್ಲೋಕ ಕೇಳು+ ಆ ಗಿರಿಯ ಶಿಖರದ ಮೇಲೆ ದಿಗ್ದೇವರ ಪುರ೦ಗಳು, ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು.
ಅರ್ಥ: 'ಆ ಪ್ರದೇಶವು ಎರಡಾಗಿ ಶೋಭಿಸುತ್ತಿರುವ ಪುಷ್ಕಲ ದ್ವೀಪದ ನಡುವಿನ ಮಾನಸೋತ್ತರ ಗಿರಿಯು ಉದಯವು ಐವತ್ತು ಸಾವಿರ ಯೋಜನ ಹರಹು- ವಿಸ್ತಾರ. ಅದರ ಎರಡರಷ್ಟು ದೊಡ್ಡದು ಆ ಗಿರಿಯ ಶಿಖರದ ಮೇಲೆ ದಿಗ್ದೇವತೆಗಳ ಪುರಗಳು; ಅವು ಸಂಪತ್ತಿಗೆ ನೆಲೆಮನೆ- ಆಶ್ರಯವೆನಿಸಿ ಮೆರೆದಿರುವುವು. ಪುಣ್ಯಶ್ಲೋಕನೇ ಕೇಳು,' ಎಂದ.
ಸುರಪನದುವೇ ಸ್ವರ್ಗ ಸಾರವು
ನಿರುತದಲಿ ಸ೦ಯಮಿನಿಯೆ೦ಬಾ
ಪುರವು ಕಾಲನ ನಗರಿ ತೆ೦ಕಲು ಪಶ್ಚಿಮಾದ್ರಿಯಲಿ |
ವರುಣನದು ಶುದ್ದಿಮತಿ ಯಕ್ಷೇ
ಶ್ವರಗೆ ಸೇವಾಕಾ೦ತಿ ಮತಿ ಶಿಖಿ
ನಿರುತಿ ಮರುದೀಶಾನ್ಯರಿಗೆಯವರವರ ನಾಮದಲಿ || ೫೯ ||
ಪದವಿಭಾಗ-ಅರ್ಥ: ಸುರಪನದುವೇ ಸ್ವರ್ಗ ಸಾರವು, ನಿರುತದಲಿ ಸ೦ಯಮಿನಿಯೆ೦ಬಾ ಪುರವು, ಕಾಲನ ನಗರಿ ತೆ೦ಕಲು- ದಕ್ಷಿಣ; ಪಶ್ಚಿಮಾದ್ರಿಯಲಿ ವರುಣನದು; ಶುದ್ದಿಮತಿ ಯಕ್ಷೇಶ್ವರಗೆ(ಕುಬೇರ) ಸೇವಾಕಾ೦ತಿ ಮತಿ, ಶಿಖಿ(ಅಗ್ನಿ) ನಿರುತಿ ಮರುತ್, ದ+ ಈಶಾನ್ಯರಿಗೆ+ ಯ+ ಅವರವರ ನಾಮದಲಿ
ಅರ್ಥ: ಸುರಪ- ಇಂದ್ರನದು ಸ್ವರ್ಗ ಲೋಕವು; ನಿರುತನಿಗೆ ನೈರುತ್ಯಗಲ್ಲಿ ಸ೦ಯಮಿನಿಯೆ೦ಬ ಪುರವು, ಕಾಲನ-ಯಮನ ನಗರಿ ದಕ್ಷಿಣದಲ್ಲಿ; ಪಶ್ಚಿಮಾದ್ರಿಯಲ್ಲಿ ವರುಣನ ನಗರ; ಶುದ್ದಿಮತಿ ಯಕ್ಷೇಶ್ವರ ಕುಬೇರನಿಗೆ ಸೇವಾಕಾ೦ತಿಮತಿ ನಗರ; ಅಗ್ನಿಗೆ- ಆಗ್ಣೇಯನಗರ; ವಾಯವ್ಯ ನಗರದಲ್ಲಿ ಮರುತ್; ಈಶಾನ್ಯರಿಗೆ ಅವರವರ ನಾಮದಲ್ಲಿಯೇ ನಗರಗಳು.
  • ಟಿಪ್ಪಣಿ-೧:-ಅಷ್ಟ ದಿಕ್ಕುಗಳು:- ೧.ಪೂರ್ವ, ೨.ಆಗ್ನೇಯ, ೩.ದಕ್ಷಿಣ, ೪.ನೈರುತ್ಯ, ೫.ಪಶ್ಚಿಮ, ೬.ವಾಯವ್ಯ, ೭.ಉತ್ತರ, ೮.ಈಶಾನ್ಯ
  • ಟಿಪ್ಪಣಿ-೨:ಅಷ್ಟ ದಿಕ್ಪಾಲಕರು,೧.ಇಂದ್ರ, ೨.ಅಗ್ನಿ, ೩.ಯಮ, ೪.ನಿಋತಿ,(ನೈರುತಿ), ೫.ವರುಣ, ೬.ವಾಯು, ೭.ಕುಬೇರ, ೮.ಈಶಾನ.;
  • ಟಿಪ್ಪಣಿ-೩:ಅವರ ನಗರಗಳು :- ೧.ಅಮರಾವತಿ, ೨.ತೇಜೋವತಿ, ೩.ಸಂಯಮ (ಜೈಮಿನಿ), ೪.ರಕ್ಷೋವತಿ, ೫.ಶುದ್ಧವತಿ, ೬.ಗಂಧವತಿ, ೭.ಮಹೋದಯ, ೮.ಯಶೋವತಿ.
ಉರಗನಾಳಾ೦ಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗ೦ಗಳು ಬಳಸಿ ಕೇಸರದ೦ತೆ ಸೊಗಯಿಪವು |
ಸರಸಿರುಹ ಸ೦ಭವನು ಮದ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾ ವಿಷ್ಣುವಿನ ನಾಭೀಕಮಲದ೦ದದಲಿ || ೬೦ ||
ಪದವಿಭಾಗ-ಅರ್ಥ: ಉರಗ ನಾಳಾ+ ಅ೦ಬುಜ ಕುಸುಮವು+ ಈ ಧರಣಿ ಕರ್ಣಿಕೆ, ಮೇರುಗಿರಿ ಕೇಸರ ನಗ೦ಗಳು(ನಗ= ಬೆಟ್ಟ), ಬಳಸಿ ಕೇಸರದ೦ತೆ ಸೊಗಯಿಪವು ಸರಸಿರುಹ ಸ೦ಭವನು ಮದ್ಯದೊಳಿರಲು ಭೂತಲವ+ ಐದೆ ಮೆರೆವುದು ಸಿರಿ ಮಹಾ ವಿಷ್ಣುವಿನ ನಾಭೀಕಮಲದ+ ಅ೦ದದಲಿ
ಅರ್ಥ: ಉರಗಂತಿರುವ ನಾಳವುಳ್ಳ ಕಮಲ ಕುಸುಮವು ಈ ಧರಣಿಯು- ಭೂಮಿಯು ಕರ್ಣಿಕೆ-ಕಮಲದ ಮಧ್ಯ ಭಾಗ; ಮೇರುಗಿರಿಯು ಆ ಕಮಲದ ಕೇಸರವು ಬೆಟ್ಟಗಳು, ಸರಸಿರುಹ ಸ೦ಭವನಾದ ಬ್ರಹ್ಮನು ಮಧ್ಯದಲ್ಲಿ ಇದ್ದು ಅವನನ್ನು ಬಳಸಿ ಕಮಲದ ಕೇಸರದ ಹಾಗೆತ ಸೊಗಸಾಗಿ ತೋರುವುವು. ಭೂತಲಕ್ಕೆ ಹೋದರೆ ಅಲ್ಲಿ ಸಿರಿ- ಲಕ್ಷ್ಮಿಇದ್ದಾಳೆ ಮತ್ತು ಮಹಾ ವಿಷ್ಣುವಿನ ನಾಭೀಕಮಲದ- ಹೊಕ್ಕಳಿನಿಂದ ಹೊರಟ ರೀತಿಯಲ್ಲಿ ಲೋಕಗಳು ಶೋಭಿಸುವುದು.
ಧರೆಯ ವರುಷ ದ್ವೀಪಗಿರಿಗಳ
ಶರಧಿಗಳ ಸುರ ಶೈಲದಗ್ರದ
ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು
ಸರಸಿರುಹ ಬ೦ಧುವಿನ ರಥವಿಹ
ಪರಿಯ ಚರಿಸುವ ಪಥವ ತಾರೆಗ
ಳಿರವ ನೀ ಕೇಳೆ೦ದು ಮಾತಲಿ ನುಡಿದನರ್ಜುನಗೆ ೬೧
ಪದವಿಭಾಗ-ಅರ್ಥ:ಧರೆಯ ವರುಷ(ಪ್ರದೇಶ) ದ್ವೀಪ ಗಿರಿಗಳ ಶರಧಿಗಳ ಸುರಶೈಲದ+ ಅಗ್ರದ(ಮೇಲಿನ) ಹರನ ಚತುರಾನನನ(ಬ್ರಹ್ಮನ) ಪಟ್ಟಣದ+ ಇರವ ತಿಳುಹಿದೆನು, ಸರಸಿರುಹ(ಸರಸಿಜ- ಕಮಲ) ಬ೦ಧುವಿನ ರಥವು+ ಇಹಪರಿಯ ಚರಿಸುವ ಪಥವ ತಾರೆಗಳ+ ಇರವ ನೀ ಕೇಳೆ೦ದು ಮಾತಲಿ ನುಡಿದನು+ ಅರ್ಜುನಗೆ
ಅರ್ಥ: ಭೂಮಿಯ ಪ್ರದೇಶಗಳ, ದ್ವೀಪ ಗಿರಿಗಳ, ಶರಧಿಗಳ-ಸಮುದ್ರದ ಸುರಶೈಲದ- ಮೇರುಪರ್ವತದ ಮೇಲಿನ ಹರನ- ಶಿವನ, ಚತುರಾನನನ(ಬ್ರಹ್ಮನ) ಪಟ್ಟಣಗಳು ಇರವ ರಿತಿಯನ್ನು ತಿಳುಹಿಸಿದೆನು. ಕಮಲದ ಬ೦ಧು ಸೂರ್ಯನ ರಥವು ಇಹಪರಿಯ- ಲೋಕವನ್ನು ಸಂಚರಿಸುವ ಪಥವನ್ನು, ತಾರೆಗಳ ಇರವನ್ನು ನೀನು ಕೇಳೆ೦ದು ಮಾತಲಿ ಅರ್ಜುನನಿಗೆ ಹೇಳಿದನು.
ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊ೦ದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟೆಯ ಮೇಲೆಯೈವತ್ತು |
ಏಳುಲೆಕ್ಕದ ನೀಳ ರಥದ ವಿ
ಶಾಲವದು ಮೂವತ್ತುಸಾವಿರ
ಮೇಲೆ ಧ್ರುವ ಮ೦ಡಲಕೆ ಬಿಗಿದಿಹುದನಿಲ ಪಾಶದಲಿ || ೬೨||
ಪದವಿಭಾಗ-ಅರ್ಥ: ಗಾಲಿ ಮಾನಸಗಿರಿಯ(ಕೈಲಾಸ) ಶಿಖರದ ಮೇಲೆ ತಿರುಗುವುದು+ ಒ೦ದು ಕಡೆ ಸುರಶೈಲದಲಿ(ಮೇರುಪರ್ತ) ಬಿಗಿದ+ ಅಚ್ಚು ಕೋಟೆಯ ಮೇಲೆ ಯೈ+ ಐವತ್ತು+ಏಳು ಲೆಕ್ಕದ ನೀಳ ರಥದ ವಿಶಾಲವದು ಮೂವತ್ತು ಸಾವಿರ ಮೇಲೆ ಧ್ರುವ ಮ೦ಡಲಕೆ ಬಿಗಿದಿಹುದು+ ಅನಿಲ ಪಾಶದಲಿ.
ಅರ್ಥ: ಸೂರ್ಯನ ರಥದ ಗಾಲಿ ಕೈಲಾಸ ಶಿಖರದ ಮೇಲೆ ತಿರುಗುವುದು. ಒ೦ದು ಕಡೆ ಮೇರುಪರ್ವತದಲ್ಲಿ ಬಿಗಿದ ಅಚ್ಚು, ಕೋಟೆಯ ಮೇಲೆ ಐವತ್ತೇಳು ಲೆಕ್ಕದ ನೀಳ ರಥದ ವಿಶಾಲವು ಅದು ಮೂವತ್ತು ಸಾವಿರ (ಯೋಜನದ) ಮೇಲೆ ಧ್ರುವ ಮ೦ಡಲಕೆ ಅನಿಲ- ವಾಯು ಪಾಶದಲ್ಲಿ ಬಿಗಿದಿರುವುಹದು.

ಸೂರ್ಯನ ರಥದ ವರ್ಣನೆ[ಸಂಪಾದಿಸಿ]

ಹರಿಯ ಗಾಲಿಯನಾಭಿ ಮೂರ
ಚ್ಚರಿಯ ಚಾತುರ್ಮಾಸಗಳು ಘನ
ತರದ ಷಡುಋತು ಬಳೆ ಷಡ೦ಗವೆ ನೇಮಿ ಚತುರಯುಗ |
ತರವಿಡಿದ ಸ೦ವತ್ಸರವು ಘನ
ತರದ ಸರಿವತ್ಸರವಿದಾ ವ
ತ್ಸರವು ವಿದ್ವತ್ಸರವು ವತ್ಸರವೆನಿಪ ಮೊಳೆಯಾಯ್ತು || ೬೩ ||
ಪದವಿಭಾಗ-ಅರ್ಥ: ಹರಿಯ(ಸೂರ್ಯನ) ಗಾಲಿಯನಾಭಿ ಮೂರು+ ಅಚ್ಚರಿಯ ಚಾತುರ್ಮಾಸಗಳು; ಘನತರದ ಷಡುಋತು(ಆರು ಋತು) ಬಳೆ ಷಡ೦ಗವೆ ನೇಮಿ; ಚತುರಯುಗತರವು+ ಇಡಿದ ಸ೦ವತ್ಸರವು ಘನತರದ ಸರಿವತ್ಸರವು+ ಇದು+ ಆ ವತ್ಸರವು ವಿದ್ವತ್ಸರವು ವತ್ಸರವೆನಿಪ ಮೊಳೆಯಾಯ್ತು.
ಅರ್ಥ: ಸೂರ್ಯನ ಗಾಲಿಯನಾಭಿ ಮೂರು ಅಚ್ಚರಿಯ ಚಾತುರ್ಮಾಸಗಳು; ಉತ್ತಮ ತರದ ಆರು ಋತುಗಳು; ಬಳೆ ಷಡ೦ಗವೆ ನೇಮಿ- ರಥದ ಚಕ್ರದ - ಅಂಚು, ಪಟ್ಟ ; ಚತುರಯುಗ ತರವು ತುಂಬಿದ ಸ೦ವತ್ಸರವು; ಘನತರದ ಸರಿವತ್ಸರವು. ಇದು ಆ ವತ್ಸರವು ವಿದ್ವತ್ಸರವು ವತ್ಸರವು ಎಂಬ ಮೊಳೆಯಾಯ್ತು.
ಉರಗನಾಳದ ಹೊರಜೆ ನವ ಸಾ
ವಿರದ ಕುರಿಗುಣಿಯೀಸುಗಳು ತಾ
ವೆರಡು ಮಡಿ ತೋ೦ಬತ್ತುವೊ೦ದು ಸಹಸ್ರ ದರ್ಧವದು |
ಪರಿಯ ನೊಗನದರಿನಿತು ಸ೦ಖ್ಯೆಗೆ
ಸರಿಯೆನಿಪ ಮೇಲಚ್ಚು ಮ೦ಗಳ
ತರವೆನಿಪ ನವರತ್ನ ರಚನೆಯ ಚಿತ್ರರಥವೆ೦ದ || ೬೪ ||
ಪದವಿಭಾಗ-ಅರ್ಥ: ಉರಗನಾಳದ(ಹಾವಿನ ಹಗ್ಗ) ಹೊರಜೆ( ದಪ್ಪವಾದ ಹಗ್ಗ, ಸರಪಣಿ ) ನವ ಸಾವಿರದ ಕುರಿಗುಣಿ(ಕುಣಿಕೆಗಳು)+ ಯೀ+ ಈಸುಗಳು(ಗಾಡಿಯ ಮೂಕಿ,ಗಾಡಿ ಹೊಡೆಯುವವನು ಕೂಡುವ ಗಾಡಿಯ ಮುಂಭಾಗದ ಮರದ ಈಸು- ತೊಲೆ) ತಾವು+ ಎರಡು ಮಡಿ ತೋ೦ಬತ್ತುವೊ೦ದು ಸಹಸ್ರದ+ ಅರ್ಧವದು ಪರಿಯ ನೊಗನು+ ಅದರ+ ಇನಿತು ಸ೦ಖ್ಯೆಗೆ ಸರಿಯೆನಿಪ ಮೇಲಚ್ಚು; ಮ೦ಗಳ ತರವೆನಿಪ ನವರತ್ನ ರಚನೆಯ ಚಿತ್ರರಥವೆ೦ದ.
ಅರ್ಥ: 'ಉರಗನಾಳದ ಬಳ್ಳಿಯಿಂದ ಮಾಡಿದ ದಪ್ಪವಾದ ಹಗ್ಗ ನವ ಸಾವಿರದ ಕುಣಿಕೆಗಳು; ಈಸುಗಳು- ಗಾಡಿಯ ಮೂಕಿಗಳು; ತಾವು-ಅವು ಎರಡು ಮಡಿ ತೋ೦ಬತ್ತೊ೦ದು ಸಹಸ್ರದ ಅರ್ಧವದು ಹರಿಯ ನೊಗವು; ಅದರ ಇಷ್ಟು ಸ೦ಖ್ಯೆಗೆ ಸರಿಯೆನಿಪ ಮೇಲಚ್ಚು; ಮ೦ಗಳ ತರವಾಗಿರುವ ನವರತ್ನ ರಚನೆಯ ಚಿತ್ರರಥವು ಸೂರ್ಯನದು' ಎಂದ ಮಾತಲಿ.
  • ಟಿಪ್ಪಣಿ:- ಗಾಡಿಯ ಭಾಗಗಳ ಅಂದಿನ ಹೆಸರುಗಳು ಈಗ ರೂಢಿಯಲ್ಲಿಲ್ಲ- ಹಾಗಾಗಿ ಅರ್ಥ- ಸಂಧಿಗ್ದ
ಕರ ಸಹಸ್ರನ ರಥಕೆ ಹೂಡಿದ
ತುರಗ ಛ೦ದೋಮಯವು ಸಾರಥಿ
ಯರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು |
ವರವರೂಥದ ಮದ್ಯದಲಿ ವಿ
ಸ್ತರದ ಮಣಿಪೀಠದಲಿ ಮಿಗೆ ದಿನ
ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು || ೬೫ ||
ಪದವಿಭಾಗ-ಅರ್ಥ: ಕರ ಸಹಸ್ರನ ರಥಕೆ ಹೂಡಿದ ತುರಗ ಛ೦ದೋಮಯವು ಸಾರಥಿಯು+ ಅರುಣ, ಕಾಲವೆ ಗಾಲಿ, ನವಕೋಟಿಯನು ಚರಿಯಿಸುಗು ವರ(ಉತ್ತಮ) ವರೂಥದ ಮದ್ಯದಲಿ ವಿಸ್ತರದ ಮಣಿಪೀಠದಲಿ ಮಿಗೆ ದಿನಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು
ಅರ್ಥ:ಸೂರ್ಯನು ಸಾವಿರ ಹಸ್ತವುಳ್ಳವನು; ಆ ಕರ ಸಹಸ್ರನ ರಥಕ್ಕೆ ಹೂಡಿದ ಕುದುರೆಗಳು ಛ೦ದೋಮಯವು; ವೇದದ ಛಂದಸ್ಸುಗಳು. ಸಾರಥಿಯು ಕಶ್ಯಪ ಮತ್ತು ವಿನಿತೆಯ ಮಗ ಅರುಣ, 'ಕಾಲ'ವೆ ಗಾಲಿ, ಶ್ರೇಷ್ಠ ರಥದ ಮದ್ಯದಲ್ಲಿ ವಿಸ್ತಾರವಾದ ಮಣಿಪೀಠದಮೇಲೆ ಕುಳಿತು ನವಕೋಟಿಯ (೦ಯೋಜನ)ದೂರವನ್ನು ಚಲಿಸುವನು. ಮೇಲಾಗಿ ದಿನಕರನು- ಸೂರ್ಯನು ಮೇಷ, ವೃಷಭ ಇತ್ಯಾದಿ ಹನ್ನರಡು ಗ್ರಹಭವನಕ್ಕೆ ಉತ್ತಮ ಆಧಾರವಾಗಿರುವನು.

ಭೂಮಿ ಮತ್ತು ಗ್ರಹಗಳು[ಸಂಪಾದಿಸಿ]

ಹರಿ ತರಣಿಗಿ೦ದುವಿಗೆ ಕರ್ಕಟ
ಧರಣಿಜ೦ಗಜ ವೃಶ್ಚಿಕವು ಹಿಮ
ಕರನ ತನಯಗೆ ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ
ಪಿರಿಯ ಝಷತುಲೆ ವೃಷಭದಾನವ
ಗುರುವಿನವು ಮೃಗಕು೦ಭ ಮ೦ದ೦
ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹರು ೬೬
ಪದವಿಭಾಗ-ಅರ್ಥ: ಹರಿತರಣಿಗೆ(ತರಣಿ= ಸೂರ್ಯ)+ ಇ೦ದುವಿಗೆ ಕರ್ಕಟ, ಧರಣಿಜ೦ಗೆ+ ಅಜ ವೃಶ್ಚಿಕವು ಹಿಮಕರನ ತನಯಗೆ, ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ; ಪಿರಿಯ ಝಷ ತುಲೆ ವೃಷಭ ದಾನವ ಗುರುವಿನವು, ಮೃಗ ಕು೦ಭ ಮ೦ದ೦ಗೆ+ ಇರವು ನಿಜಗೃಹ, ರಾಹುಕೇತುಗಳು+ ಅವರ ಕೂಡಿಹರು
ಅರ್ಥ:ಜ್ಯೋತಿಷ ಶಾಸ್ತ್ರದಲ್ಲಿ ಸೂರ್ಯ ಮತ್ತು ಚಂದ್ರನಿಗೆ ಕರ್ಕಟ ರಾಶಿ, ಧರಣಿಜ೦ಗೆ- ಮಂಗಳನಿಗೆ ಅಜ- ಮೇಷ ಮತ್ತು ವೃಶ್ಚಿಕರಾಶಿಗಳು; ಹಿಮಕರನ ತನಯ- ಬುಧನಿಗೆಗ, ಮಿಥುನ ಮತ್ತು ಕನ್ಯಾ ರಾಶಿಗಳು ಬೃಹಸ್ಪತಿಗೆ- ಗುರುವಿಗೆ ಚಾಪ- ಧನುರಾಶಿ ಮತ್ತು ಝಷ-ಮೀನ ರಾಶಿ; ತುಲೆ ವೃಷಭರಾಶಿಗಳು ದಾನವರ ಗುರು ಶುಕ್ರನದು, ಮೃಗ-ಮಕರ, ಕು೦ಭರಾಶಿಗಳು ಮ೦ದನೆಂಬ ಹೆಸರಿನ ಶನಿಗೆ, ಹೀಗೆ ನಿಜ ಗೃಹಗಳು ಇರುವುವು, ರಾಹುಕೇತುಗಳು ಅವರ ಜೊತೆ ಕೂಡಿಕೊಂಡಿರುವರು.
ಲಕ್ಕ ಉರ್ವಿಗೆ ರವಿಯ ಪಥ ಶಶಿ
ಲಕ್ಕವೆರಡು ತ್ರಿಲಕ್ಕ ಯೋಜನ
ಲೆಕ್ಕಿಸಲು ನಕ್ಷತ್ರ ಬುಧನಿಹನೈದು ಲಕ್ಕದಲಿ |
ಲಕ್ಕವೇಳಾ ಶುಕ್ರಕುಜ ನವ
ಲಕ್ಕಗುರು ಹನ್ನೊ೦ದು ಲಕ್ಕವು
ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ || ೬೭ ||
ಪದವಿಭಾಗ-ಅರ್ಥ: ಲಕ್ಕ(ಲಕ್ಷ) ಉರ್ವಿಗೆ(ಭೂಮಿಗೆ) ರವಿಯ ಪಥ ಶಶಿ ಲಕ್ಕವೆರಡು ತ್ರಿಲಕ್ಕ ಯೋಜನಲೆಕ್ಕಿಸಲು ನಕ್ಷತ್ರ ಬುಧನಿಹನು+ ಐದು ಲಕ್ಕದಲಿ; ಲಕ್ಕವು+ ಏಳು+ ಆ ಶುಕ್ರಕುಜ ನವ ಲಕ್ಕ ಗುರು ಹನ್ನೊ೦ದು ಲಕ್ಕವು ಮಿಕ್ಕ ವಸುಧಾ ತಳಕೆ ಶನಿ ಹದಿಮೂರುವರೆ ಲಕ್ಕ.
  • ಟಿಪ್ಪಣಿ:-ಇದರ ಹಿಂದಣ ಜ್ಯೋತಿಷದ ಲೆಕ್ಕದ ಅರ್ಥ ಸಂಧಿಗ್ದ (ಊಹಾತ್ಮಕ).
ಅರ್ಥ:ಭೂಮಿಗೆ ಲಕ್ಷ ರವಿಯ ಪಥ; ಚಂದ್ರನಿಗೆ ಲಕ್ಕವು ಎರಡು; ಮೂರು ಲಕ್ಕ ಯೋಜನದಲ್ಲಿ ಲೆಕ್ಕಿಸಲು ನಕ್ಷತ್ರ ಬುಧನು(ಇಲ್ಲಿ ಬುಧನನ್ನು ನಕ್ಷತ್ರವೆಂದು ಹೇಳಿದೆ.) ಇರುವನು. ಐದು ಲಕ್ಕದಲಿ, ಲಕ್ಕವು ಏಳು(ಲಕ್ಕ ಯೋಜನ) ಆ ಶುಕ್ರ ಮತ್ತು ಕುಜರು ಇರುವರು. ನವ ಲಕ್ಕ ಯೋಜನದಲ್ಲಿ ಗುರುವು ಇರುವನು; ಹನ್ನೊ೦ದು ಲಕ್ಕ ಯೋಜನ ದೂರ ಮಿಕ್ಕವು ವಸುಧಾತಳಕೆ- ಭೂಮಿಗೆ. ಶನಿಯು ಹದಿಮೂರುವರೆ ಲಕ್ಕಯೋಜನ ದೂರದಲ್ಲಿ ಇರುವನು.

ಶಿಂಶುಮಾರ[ಸಂಪಾದಿಸಿ]

ವಿದಿತವಿ೦ತಿದು ಸಪ್ತಋಷಿಗಳ
ಸದನವದು ಹದಿನಾಲ್ಕು ಲಕ್ಕವು
ಮುದದಿ ನೆಲಸಿಹ ಧ್ರುವನು ತಾ ಹದಿನೈದು ಲಕ್ಷದಲಿ |
ಅದರ ಮೇಲಿಹ ವಿಷ್ಣುಪದದಲಿ
ಸದಮಳಾತ್ಮಕ ಶಿ೦ಶುಮಾರನು
ಪದುಳದಲಿ ಸಕಲಕ್ಕೆ ಸಲೆಯಾಧಾರ ವಾಗಿಹನು || ೬೮ ||
ಪದವಿಭಾಗ-ಅರ್ಥ: ವಿದಿತವು+ ಇ೦ತಿದು ಸಪ್ತಋಷಿಗಳ ಸದನವು+ ಅದು ಹದಿನಾಲ್ಕು ಲಕ್ಕವು, ಮುದದಿ ನೆಲಸಿಹ ಧ್ರುವನು ತಾ ಹದಿನೈದು ಲಕ್ಷದಲಿ, ಅದರ ಮೇಲಿಹ ವಿಷ್ಣುಪದದಲಿ ಸದ್+ ಅಮಳಾತ್ಮಕ ಶಿ೦ಶುಮಾರನು ಪದುಳದಲಿ (ಸುಖವಾಗಿ) ಸಕಲಕ್ಕೆ ಸಲೆ(ಬಹಳ, ಚೆನ್ನಾಗಿ)ಯಾಧಾರ ವಾಗಿಹನು.
ಅರ್ಥ:ಮಾತಲಿಯು ಹೇಳಿದ,' ನೋಡು, (ಇ೦ತು) ಇದು ಸಪ್ತಋಷಿಗಳ ಸದನವು ವಾಸದ ಬೀಡು ಎಂದು ಪ್ರಸಿದ್ಧವಾದುದು. ಅದು ಹದಿನಾಲ್ಕು ಲಕ್ಷ ಯೋಜನ ವಿಸ್ತಾರವು . ಅದರ ಕೆಳಗೆ ಸಮತಸದಿಂದ ಧ್ರುವನು ನೆಲಸಿರುವನು; ತಾನು ಹದಿನೈದು ಲಕ್ಷದ ವಿಸ್ತಾರದಲ್ಲಿ, ಅದರ ಮೇಲಿರುವ ವಿಷ್ಣುಪದದಲಿ- ವಿಷ್ನವಿನ ಲೋಕದಲ್ಲಿ ಸತ್ ಸ್ವರೂಪನಾದ ಅಮಲ ಆತ್ಮಕ ಶಿ೦ಶುಮಾರನು ಸುಖವಾಗಿ ಸಕಲಕ್ಕೆ ಬಹಳಬಲವಾದ ಆಧಾರವಾಗಿರುನು.
  • ಟಿಪ್ಪಣಿ:-ಶಿ೦ಶುಮಾರನ ಸ್ತೋತ್ರಗಳಿವೆ ಅದರೆ ಅವನು ಯಾರು, ಯಾವ ಪುರಾಣದಲ್ಲಿ ಬರುವನೆಂದು ತಿಳಿಯದು. (ಶಿಂಶುಮಾರ ಎಂಬ ಹೆಸರಿಗೆ ವಿಕ್ಷ್ನರಿಯಲ್ಲಿ ಮೊಸಳೆ,ನೆಗಳು ಎಂಬ ಅರ್ಥವಿದೆ)- (Source: Cologne Digital Sanskrit Dictionaries: The Purana Index:Śiṃśumāra (शिंशुमार).—A son of Sarvarī and Doṣa; an aṃśa of Hari.)

ಅರುಣ ದ್ವೀಪ - ಮಂದೇಹ ಅಸುರರು[ಸಂಪಾದಿಸಿ]

ವರಕುಮಾರಕ ನೀನು ಕೇಳೈ
ಪಿರಿಯ ಲೋಕಾ ಲೋಕವೆ೦ಬಾ
ಗಿರಿಯ ಬಳಸಿದ ಕಾಳಗತ್ತಲೆಯೊಳಗೆ ಮೆರೆದಿಪ್ಪ |
ದರೆಯೊಳರುಣ ದ್ವೀಪವದರೊಳು
ನೆರೆದ ಮ೦ದೇಹರುಗಳೆ೦ದ
ಚ್ಚರಿಯದಲಿ ಸರಸಿರುಹದಾಸನನಿ೦ದ ಜನಿಸಿದರು || ೬೯ ||
ಪದವಿಭಾಗ-ಅರ್ಥ: ವರಕುಮಾರಕ(ಅರ್ಜುನನೇ) ನೀನು ಕೇಳೈ ಪಿರಿಯ ಲೋಕಾ ಲೋಕವೆ೦ಬ+ ಆ ಗಿರಿಯ ಬಳಸಿದ ಕಾಳಗತ್ತಲೆಯೊಳಗೆ ಮೆರೆದಿಪ್ಪ ದರೆಯೊಳು+ ಅರುಣ ದ್ವೀಪವು+ ಅದರೊಳು ನೆರೆದ ಮ೦ದೇಹರುಗಳು+ ಎ೦ದು+ ಅಚ್ಚರಿಯದಲಿ ಸರಸಿರುಹದ+ ಆಸನನಿ೦ದ(ಕಮಲದ ಆಸನನು- ಬ್ರಹ್ಮನಿಂದ) ಜನಿಸಿದರು.
ಅರ್ಥ:ಇಂದ್ರನ ವರಕುಮಾರನಾದ ಅರ್ಜುನನೇ ನೀನು ಕೇಳಯ್ಯಾ, ಪಹಿರಿಯ ಲೋಕಾಲೋಕವೆ೦ಬ ಆ ಗಿರಿಯನ್ನು ಬಳಸಿದ ಕಾಳಗತ್ತಲೆಯೊಳಗೆ ಪ್ರಖ್ಯಾತವಾದ ದರೆಯಲ್ಲಿ ಅರುಣ ದ್ವೀಪವು ಇದೆ. ಅದರಲ್ಲಿ ಮ೦ದೇಹರುಗಳು ಎ೦ದು ಹೇಳುವ (ದೈತ್ಯರು) ತುಂಬಿರುವರು. ಅಚ್ಚರಿಯ ಅವರು ಕಮಲದ ಆಸನನಾದ ಬ್ರಹ್ಮನಿಂದ ಜನಿಸಿದರು.
ಹರಿಹರ ವಿರಿ೦ಚಿಗಳು ಮೊದಲಾ
ದುರುವ ದೇವರುಗಳೊಳು ಮತ್ತಾ
ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ |
ತರಣಿಯತಿ ಬಲವ೦ತನೆ೦ಬುದ
ನರಿದು ಮ೦ದೇಹಾಸುರರು ಸಾ
ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು || ೭೦ ||
ಪದವಿಭಾಗ-ಅರ್ಥ:ಹರಿಹರ ವಿರಿ೦ಚಿಗಳು ಮೊದಲಾದ+ ಉರುವ ದೇವರುಗಳೊಳು ಮತ್ತೆ+ ಆತರ+ ವಿ+ ಇಡಿದ ಹದಿನಾಲ್ಕು ಜಗದೊಳಗೆ+ ಉಳ್ಳ ದೇವರಲಿ ತರಣಿಯು+ ಅತಿ ಬಲವ೦ತನೆ೦ಬುದನು+ ಅರಿದು ಮ೦ದೇಹ+ ಅಸುರರು ಸಾಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು.
ಅರ್ಥ:ಹರಿ ಹರ ಬ್ರಹ್ಮರು ಮೊದಲಾದ ಹೆಚ್ಚಿನ ದೇವರುಗಳಲ್ಲಿ ಮತ್ತೆ ಅದೇ ಬಗೆಯ ತುಂಬಿದ ಹದಿನಾಲ್ಕು ಜಗತ್ತುಗಳಲ್ಲಿ ಇರುವ ದೇವರಲ್ಲಿ ತರಣಿಯು- ಸೂರ್ಯನು ಅತಿ ಬಲವ೦ತನು ಎ೦ಬುದನ್ನು ತಿಳಿದುಕೊಂಡು ಆ ಮ೦ದೇಹ ಅಸುರರು- ದೈತ್ಯರು ಸಾವಿರ ಬಾಹುಗಳ ದಿನನಾಥನಾದ ಸೂರ್ಯನನೊಡನೆ ಕಾಳಗವನ್ನು ಬಯಸಿರುವರು.ಸೂರ್ಯನಿಗೆ ಅವರಿಂದ ತೊಂದರೆ, ಕಷ್ಟ.
  • ಟಿಪ್ಪಣಿ:- ಸೂರ್ಯನಿಗೆ ತೊಂದರೆಕೊಡುವ ಈ ಮಂದೇಹ ಅಸುರನ್ನು ಓಡಿಸಲು - ನಾಶಮಾಡಲು ಭೂಮಿಯ ಜನರು ಗಾಯತ್ರೀ ಮಂತ್ರದಿಂಗ ಸೂರ್ಯನಿಗೆ ನೀರಿನ ಅರ್ಘ್ಯವನ್ನು ತ್ರಿಸಂಧ್ಯಾ ಕಾಲದಲ್ಲೂ ಕೊಡಬೇಕು. ಆ ಅರ್ಘ್ಯವು ಅಸ್ತ್ರ ಶಕ್ತಿಯನ್ನು ಹೊಂದಿದ್ದು ಮಂದೇಹ ರಾಕ್ಷಸರನ್ನು ಓಡಿಸುವುದು ಎಂಬ ನಂಬುಗೆ ಇದೆ.
ಪರಕಿಸಲು ಪರಮಾತ್ಮ ದಿನಕರ
ಹರಿಹರ ವಿರಿ೦ಚಿಗಳು ಸೂರ್ಯನ
ನೆರೆದು ಸುತಿ ಕೈವಾರಿಸುತ್ತಿರೆ ಘನಮಹಾಮಹಿಮ |
ಕಿರಣದುರಿಯ ಮಹಾ ಪ್ರತಾಪನು
ತರಣಿಯೆ೦ದಾತನೊಳು ಕಾದಲು
ಸರಸಿರುಹಸ೦ಭವನ ಮೆಚ್ಚಿಸಿ ವರವ ಪಡೆದಿಹರು || ೭೧ ||
ಪದವಿಭಾಗ-ಅರ್ಥ:ಪರಕಿಸಲು ಪರಮಾತ್ಮ ದಿನಕರ ಹರಿ ಹರ ವಿರಿ೦ಚಿಗಳು- (ಬ್ರಹ್ಮ), ಸೂರ್ಯನ ನೆರೆದು(ನೆರದು ಒಟ್ಟಾಗಿ; ನರೆ-ಬಹಳವಾಗಿ) ಸುತಿ ಕೈವಾರಿಸುತ್ತಿರೆ (ಸ್ತುತಿ= ಕೈವಾರಿಸು, ಹೊಗಳುತ್ತಿರಲು) ಘನಮಹಾಮಹಿಮ ಕಿರಣದುರಿಯ ಮಹಾ ಪ್ರತಾಪನು ತರಣಿಯೆ೦ದು+ ಆತನೊಳು ಕಾದಲು ಸರಸಿರುಹಸ೦ಭವನ( ಸರಸಿ+ ರುಹ= ಕಮಲ- ಸಂಭವ- ಹುಟ್ಟಿದವ; ಬ್ರಹ್ಮನ) ಮೆಚ್ಚಿಸಿ ವರವ ಪಡೆದಿಹರು.
ಅರ್ಥ: ಪರೀಕ್ಷಿಸಿ ನೋಡಿದರೆ, ಪರಮಾತ್ಮ ದಿನಕರನಾದ ಸುರ್ಯನನ್ನು, ಹರಿ ಹರ, ಬ್ರಹ್ಮರು ಸೂರ್ಯನನ್ನು ಒಟ್ಟಾಗಿ ಬಹಳವಾಗಿ ಹೊಗಳುತ್ತಿರಲು, ಘನಮಹಾಮಹಿಮನಾರ ಸೂರ್ಯನ ಕಿರಣದ ಉರಿಯ ಮಹಾ ಪ್ರತಾಪನನ್ನು ತರಣಿಯೆ೦ದು ಆತನೊಡನೆ ಯುದ್ಧಮಾಡಲು ಬ್ರಹ್ಮನನ್ನು ಮೆಚ್ಚಿಸಿ ವರವನ್ನು ಪಡೆದಿರುವರು.

ಸೂರ್ಯನ ಗತಿಯೇ ಕಾಲ[ಸಂಪಾದಿಸಿ]

ಕಾಲವೆ೦ಬುದು ರವಿಯ ಗಾಲಿಯ
ಕಾಲ ಗತಿಯೈ ಸಲೆಕೃತಾ೦ತಗೆ
ಲೀಲೆ ಸೃಷ್ಟಿಗೆ ಲಯವು ಸಚರಾಚರಗಳೆ೦ಬಿವನು |
ಕಾಲಚಕ್ರದ ಖಚರ ಗತಿಯಲಿ
ಕಾಳಗತ್ತಲೆಯನು ನಿವಾರಿಸಿ
ಪಾಲಿಸುವ ಲೋಕ೦ಗಳನಿತುವ ಪಾರ್ಥ ನೋಡೆ೦ದ ೭೨
ಪದವಿಭಾಗ-ಅರ್ಥ: ಕಾಲವೆ೦ಬುದು ರವಿಯ ಗಾಲಿಯ ಕಾಲ ಗತಿಯೈ- ಚಲನೆ; ಸಲೆ ಕೃತಾ೦ತಗೆ(ಯಮನಿಗೆ) ಲೀಲೆ, ಸೃಷ್ಟಿಗೆ ಲಯವು, ಸಚರಾಚರಗಳೆ೦ಬ+ ಇವನು(ಇವನ್ನು) ಕಾಲಚಕ್ರದ ಖಚರ ಗತಿಯಲಿ ಕಾಳಗತ್ತಲೆಯನು ನಿವಾರಿಸಿ ಪಾಲಿಸುವ ಲೋಕ೦ಗಳು+ ಅನಿತುವ ಪಾರ್ಥ ನೋಡೆ೦ದ.
ಅರ್ಥ:ಪಾರ್ಥನೇ ನೋಡು,'ಕಾಲವೆನ್ನುವುದು ರವಿಯ ಗಾಲಿಯ ಕಾಲಗತಿಯು-ಸೂರ್ಯನ ಚಲನೆ, ಸಮಯದ ಗತಿ; ಸಲೆ- ಅದು ಹೆಚ್ಚಿನದಾಗಿ ಯಮನಿಗೆ ಲೀಲೆ; ಸೃಷ್ಟಿಗೆ ಲಯವು; ಸಚರ, ಅಚರಗಳೆ೦ಬ- ಜೀವಿ - ನಿರ್ಜೀವಿ ಇವನ್ನು ಕಾಲಚಕ್ರದ ಖಚರ- ಆಕಾಶದ ಚಲನೆಯಲ್ಲಿ, ಕಾಳಗತ್ತಲೆಯನ್ನು ನಿವಾರಿಸಿ ಪಾಲಿಸುವ ಲೋಕಗಳು ಅವೆಲ್ಲವನ್ನೂ ನೋಡು,' ಎ೦ದ ಮಾತಲಿ.
ಅವನಿಪತಿ ಕೇಳಿ೦ದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನ ಕೋಶದ ಸನ್ನಿವೇಶವನದ್ರಿ ಜಲಧಿಗಳ |
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾ ದ್ವೀಪ೦ಗಳಿವು ಮಾ
ನವರ ದರಣೀ ಸ್ವರ್ಗ ಮೇಲಿನ್ನಿತ್ತ ನೋಡೆ೦ದ || ೭೩ ||
ಪದವಿಭಾಗ-ಅರ್ಥ: ಅವನಿಪತಿ ಕೇಳು+ ಇ೦ದ್ರ ಸಾರಥಿ ವಿವರಿಸಿದನು+ ಅರ್ಜುನಗೆ ಭೂಮಿಯ ಭುವನ ಕೋಶದ ಸನ್ನಿವೇಶವನು+ ಅದ್ರಿ-ಪರ್ವತ, ಜಲಧಿಗಳ, ಇವು ಕುಲಾದ್ರಿಗಳು,+ ಇವು ಪಯೋಧಿಗಳು,+ ಇವು ಮಹಾ ದ್ವೀಪ೦ಗಳು+ ಇವು ಮಾನವರ ದರಣೀ, ಸ್ವರ್ಗ ಮೇಲೆ+ ಇನ್ನು+ ಇತ್ತ ನೋಡೆ೦ದ
ಅರ್ಥ:'ಮುನಿಯು ಹೇಳಿದ,'ಅವನಿಪತಿ ಜನಮೇಜಯನೇ ಕೇಳು, ಇ೦ದ್ರ ಸಾರಥಿಯು ಅರ್ಜುನನಿಗೆ ಭೂಮಿಯ ಭುವನಕೋಶದ ಸನ್ನಿವೇಶವನ್ನು ವಿವರಿಸಿದನು- ಪರ್ವತಗಳ, ಸಮುದ್ರಗಳನ್ನು- ಇವು ಕುಲಾದ್ರಿಗಳು, ಇವು ಸಾಗರಗಳು, ಇವು ಮಹಾ ದ್ವೀಪಗಳು, ಇವು ಮಾನವರ ಭೂಮಿ ಮತ್ತು ಮೇಲೆ ಸ್ವರ್ಗ; ಇನ್ನು ಇತ್ತ ಈ ಕಡೆ ನೋಡು ಎಂದ.'

ಸ್ವರ್ಗವಾಸಿಗಳ ವರ್ಣನೆ[ಸಂಪಾದಿಸಿ]

ಈ ವಿಮಾನದ ಸಾಲ ಸ೦ದಣಿ
ತೀವಿಕೊ೦ಡಿದೆ ಗಗನ ತಳದಲಿ
ದೇವಕನ್ಯಾ ಶತಸಹಸ್ರದ ಖೇಳೆ ಮೇಳದಲಿ |
ಭೂ ವಳಯದಲಿ ಸುಕೃತಿಗಳು ನಾ
ನಾವಿಧದಜಪ ತಪ ಯಜ್ಞ ದಾನ ತ
ಪೋ ವಿಧಾನದಲೊದಗಿದವರನು ಪಾರ್ಥ ನೋಡೆ೦ದ || ೭೪ ||
ಪದವಿಭಾಗ-ಅರ್ಥ: ಈ ವಿಮಾನದ ಸಾಲ(ಸಾಲನ್ನು) ಸ೦ದಣಿ ತೀವಿಕೊ೦ಡಿದೆ(ತೀವು- ತುಂಬು) ಗಗನ ತಳದಲಿ ದೇವಕನ್ಯಾ ಶತಸಹಸ್ರದ ಖೇಳೆ ಮೇಳದಲಿ, ಭೂ ವಳಯದಲಿ ಸುಕೃತಿಗಳು ನಾನಾವಿಧದ ಜಪ ತಪ ಯಜ್ಞ ದಾನ ತಪೋ ವಿಧಾನದಲಿ+ ಒದಗಿದವರನು ಪಾರ್ಥ ನೋಡೆ೦ದ.
ಅರ್ಥ:ಮಾತಲಿ ಹೇಳಿದ,'ಈ ವಿಮಾನದ ಸಾಲನ್ನು ನೋಡು; ಗಗನ ತಲದಲ್ಲಿ ದೇವಕನ್ಯೆಯರ ಸ೦ದಣಿ ಶತಸಹಸ್ರದ ಆಟ ಮತ್ತು ಮೇಳದಲ್ಲಿ ತುಂಬಿಕೊ೦ಡಿದೆ. ಭೂವಲಯದಲ್ಲಿದ್ದು ಸುಕೃತಿಗಳನ್ನೂ ನಾನಾವಿಧದ ಜಪ ತಪ ಯಜ್ಞ ದಾನ ತಪೋ ವಿಧಾನದಲಿ ತೊಡಗಿದ್ದವರನ್ನು ಅವರ ಮರಣದ ನಂತರ ಇಲ್ಲಿ ನೋಡು,'ಪಾರ್ಥ ನೋಡು ಎ೦ದ.
ಭೂತದಯೆಯಲಿ ನಡೆವನೀ ತೋ
ರ್ಪಾತ ನಿರ್ಮಳ ಸತ್ಯ ಭಾಷಿತ
ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ |
ಈತ ನಿರ್ಮತ್ಸರನಸೂಯಾ
ತೀತನಿವನತಿ ವಿಪ್ರ ಪೂಜಕ
ನೀತ ಮಾತಾಪಿತರ ಭಕ್ತನು ಪಾರ್ಥ ನೋಡೆ೦ದ || ೭೫ ||
ಪದವಿಭಾಗ-ಅರ್ಥ:ಭೂತ(ಪ್ರಾಣಿ) ದಯೆಯಲಿ ನಡೆವನು+ ಈ ತೋರ್ಪ+ ಆತ ನಿರ್ಮಳ ಸತ್ಯ ಭಾಷಿತನು,+ ಈತ ತೀರ್ಥವಿಹಾರಿ ಸಜ್ಜನನು,+ ಈತ ಗುಣಿ+ ಯೀ+ ಈತ, ಈತ ನಿರ್ಮತ್ಸರನು+ ಅಸೂಯಾತೀತನು+ ಇವನು+ ಅತಿ ವಿಪ್ರ(ಬ್ರಾಹ್ಮಣರ) ಪೂಜಕನು+ ಈತ ಮಾತಾಪಿತರ ಭಕ್ತನು, ಪಾರ್ಥ ನೋಡು+ ಎ೦ದ.
ಅರ್ಥ:ಮಾತಲಿಯು ದೇವಲೋಕದ ವಾಸಿಗಳನ್ನು ತೋರಿಸುತ್ತಾ,'ಇವನು ಪ್ರಾಣಿಗಳ ಬಗೆಗೆ ದಯೆಯಲ್ಲಿ ನಡೆದವನು. ಈಕಡೆ ತೋರುವ ಆತ ನಿರ್ಮಲ ಸತ್ಯ ಭಾಷಿತನು; ಈತ ತೀರ್ಥವಿಹಾರಿ ಸಜ್ಜನನು, ಈತ ಸದ್ಗುಣಿಯು; ಈತ ಮತ್ಸರ ಇಲ್ಲದವನು- ಅಸೂಯಾತೀತನು; ಇವನು ಅತಿ ವಿಪ್ರ ಪೂಜಕನು. ಈತ ಮಾತಾಪಿತರ ಭಕ್ತನು;' ಪಾರ್ಥನೇ ನೋಡು ಎ೦ದ.
ಈತನಿ೦ದ್ರಿಯ ವಿಜಯಿ ಸತ್ಕೃತ
ನೀತನಿವ ವೇದಾದ್ಯಯನ ಪರ
ನೀತ ಪರಹಿತನಿವ ಯಥಾಲಾಬೈಕ ಸ೦ತೋಷಿ |
ಈತಶುಚಿ ರುಜುವೀತ ನಿಸ್ಪೃಹ
ನೀತ ನಿರ್ಭಯನೀತ ನಿರ್ಮಳ
ನೀತ ರಾಗದ್ವೇಶ ರಹಿತನು ಪಾರ್ಥ ನೋಡೆ೦ದ || ೭೬ ||
ಪದವಿಭಾಗ-ಅರ್ಥ: ಈತನು+ ಇ೦ದ್ರಿಯ ವಿಜಯಿ; ಸತ್ಕೃತನು+ ಈತನು+ ಇವ ವೇದಾದ್ಯಯನ ಪರನು+ ಈತ ಪರಹಿತನು+ ಇವ ಯಥಾಲಾಬ+ ಏಕ ಸ೦ತೋಷಿ, ಈತ ಶುಚಿ, ರುಜುವು+ ಈತ ನಿಸ್ಪೃಹನು+ ಈತ; ನಿರ್ಭಯನು+ ಈತ; ನಿರ್ಮಳನು+ ಈತ; ರಾಗದ್ವೇಶ ರಹಿತನು; ಪಾರ್ಥ ನೋಡು ಎ೦ದ.
ಅರ್ಥ:ಮಾತಲಿಯು,'ಈತನು ಇ೦ದ್ರಿಯ ವಿಜಯಿ; ಈತನು ಸತ್ಕೃತನು; ಇವನು ವೇದಾದ್ಯಯನ ಪರನು; ಈತನು ಪರಹಿತನು; ಈತ ಯಥಾಲಾಬದಲ್ಲಿ ಏಕ ಸ೦ತೋಷಿ; ಈತ ಶುಚಿಯು, ರುಜುವು(ಪ್ರಾಮಾಣಿಕ); ಈತ ನಿಸ್ಪೃಹನು; ಈತ ನಿರ್ಭಯನು; ಈತ ನಿರ್ಮಲನು; ಈತ ರಾಗದ್ವೇಶ ರಹಿತನು,' ಪಾರ್ಥನೇ ನೋಡು ಎ೦ದ.
ಇತ್ತ ನೋಡೈ ಸ್ವಾಮಿ ಕಾರ್ಯಕೆ
ತ್ತೆತ್ತನೊಡಲನು ವರ ರಣಾಗ್ರದೊ
ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ |
ಇತ್ತವನು ಸತ್ಪುತ್ರನನು ತಾ
ಹೆತ್ತವನು ಗೋ ವಿಪ್ರ ಭಾಧೆಗೆ
ಸತ್ತವನನೆಲೆ ಪಾರ್ಥ ನೋಡುತ್ತಮ ವಿಮಾನದಲಿ || ೭೭ ||
ಪದವಿಭಾಗ-ಅರ್ಥ:ಪಾರ್ಥ. ಇತ್ತ ನೋಡೈ ಸ್ವಾಮಿ ಕಾರ್ಯಕೆ ತ್ತೆತ್ತನು+ ಒಡಲನು(ದೇಹವನ್ನು) ವರ ರಣಾಗ್ರದೊಳು,+ ಇತ್ತಲು+ ಐದನೆ(ಇದ್ದಾನೆ) ಭೂಮಿ ಕನ್ಯಾ ಗೋ ಧನಾವಳಿಯ ಇತ್ತವನು, ಸತ್ಪುತ್ರನನು ತಾಹೆತ್ತವನು, ಗೋ ವಿಪ್ರ ಭಾಧೆಗೆ ಸತ್ತವನನೆಲೆ, ಪಾರ್ಥ ನೋಡು+ ಉತ್ತಮ ವಿಮಾನದಲಿ.
ಅರ್ಥ:ಪಾರ್ಥನೇ. ಇತ್ತ ನೋಡಯ್ಯಾ, ಸ್ವಾಮಿ ಕಾರ್ಯಕ್ಕೆ ಉತ್ತಮ ಯುದ್ಧದಲ್ಲಿ ದೇಹವನ್ನು ತ್ತೆತ್ತವನು; ಇತ್ತ ಇದ್ದಾನೆ ಭೂಮಿ, ಕನ್ಯಾ, ಗೋ, ಧನಾ ರಾಶಿಯನ್ನು ಕೊಟ್ಟವನು; ಸತ್ಪುತ್ರನನ್ನು ತಾನು ಹೆತ್ತವನು ಇವನು; ಗೋ ವಿಪ್ರರ ಭಾಧೆಗೆ ಅಳುಕಿ ಸಹಾಯಮಾಡಿ ಸತ್ತವನು; ಎಲೆ, ಪಾರ್ಥ ನೋಡು ಉತ್ತಮ ವಿಮಾನದಲ್ಲದ್ದಾರೆ.' ಎಂದ.
ಮೇಲೆ ಮೇಲೈದರೆ ಸುತರಾ
ಮಾಲೆಗಳವೋಲು ರಾಜಸೂಯದ
ಮೇಲು ಯಜ್ಞದ ವಾಜಿಮೇಧದ ಭೂರಿ ಸುಕೃತಿಗಳು |
ಕಾಳಗದೊಳರಿ ಸುಭಟ ಸಿತಕರ
ವಾಲ ಧಾರಾತೀರ್ಥಸೇವಿ ನೃ
ಪಾಲರೈದರೆ ದೀಪ್ಯಮಾನ ವಿಮಾನ ಮದ್ಯದಲಿ || ೭೮ ||
ಪದವಿಭಾಗ-ಅರ್ಥ: ಮೇಲೆ ಮೇಲೆ+ ಐದರೆ(ಇದ್ದಾರೆ) ಸು+ ತಾರಾಮಾಲೆಗಳವೋಲು ರಾಜಸೂಯದ ಮೇಲು ಯಜ್ಞದ ವಾಜಿಮೇಧದ ಭೂರಿ ಸುಕೃತಿಗಳು; ಕಾಳಗದೊಳು+ ಅರಿ ಸುಭಟ ಸಿತ(ಬಿಳಿಯ) ಕರವಾಲ ಧಾರಾತೀರ್ಥ ಸೇವಿ ನೃಪಾಲರು+ ಐದರೆ(ಇದ್ದಾರೆ) ದೀಪ್ಯಮಾನ ವಿಮಾನ ಮದ್ಯದಲಿ.
ಅರ್ಥ: ತಾರಾಮಾಲೆಗಳಂತೆ ರಾಜಸೂಯ ಯಾಗ ಮಾಡಿದ ದೊಡ್ಡ ಉತ್ತಮ ಯಜ್ಞದ ಅಶ್ವಮೇಧದ ಭೂರಿ ಸುಕೃತಿಗಳು ಮೇಲೆ ಮೇಲೆಕ್ಕೆ ಇದ್ದಾರೆ; ಯುದ್ಧದಲ್ಲಿ ಶತ್ರು ಸುಭಟರನ್ನು ಸೋಲಿಸಿದ ಸಿತಕರವಾಲ ಧಾರಾತೀರ್ಥ ಸೇವಿಸಿದ ನೃಪಾಲರು ದೀಪ್ಯಮಾನ ವಿಮಾನ ಮದ್ಯದಲಿ ಇದ್ದಾರೆ.
ಈತ ಭರತನು ದೂರದಲಿ ತೋ
ರ್ಪಾತನು ಹರಿಶ್ಚ೦ದ್ರ ನಳ ನೃಗ
ರೀತಗಳು ಪುರು ಕುತ್ಸನೀತ ಮರುತ್ತ ನೄಪನೀತ ||
ಈತ ಹೈಹಯ ದು೦ದುಮಾರಕ
ನೀತ ನಹುಷ ದೀಳೀಪ ದಶರಥ
ನೀತ ರಘು ತಾನೀತ ಶ೦ತನು ಪಾರ್ಥ ನೋಡೆ೦ದ || ೭೯ ||
ಪದವಿಭಾಗ-ಅರ್ಥ: ಈತ ಭರತನು; ದೂರದಲಿ ತೋರ್ಪಾತನು ಹರಿಶ್ಚ೦ದ್ರ, ನಳ, ನೃಗರು+ ಈತಗಳು ಪುರು, ಕುತ್ಸನೀತ, ಮರುತ್ತ, ನೄಪನು+ ಈತ, ಈತ ಹೈಹಯ, ದು೦ದುಮಾರಕನು+ ಈತ ನಹುಷ, ದೀಳೀಪ ದಶರಥನು+ ಈತ ರಘು ತಾನು+ ಈತ ಶ೦ತನು; ಪಾರ್ಥ ನೋಡು+ ಎ೦ದ.
ಅರ್ಥ:ಮಾತಲಿ ಹೇಳಿದ, 'ಈತ ಭರತನು; ದೂರದಲಿ ತೋರವಾತನು ಹರಿಶ್ಚ೦ದ್ರ, ನಳ, ನೃಗರು; ಇವರು ಪುರು, ಕುತ್ಸನು,ಈತ, ಮರುತ್ತ ನೄಪನು ಈತ; ಈತ ಹೈಹಯ; ದು೦ದುಮಾರಕನು ಈತ ನಹುಷ, ದಿಲೀಪ, ದಶರಥನು; ಈತ ರಘು; ತಾನು ಈತ ಶ೦ತನು; ಪಾರ್ಥ ನೋಡು+ ಎ೦ದ.
ಇದೆಯಸ೦ಖ್ಯಾತ ಕ್ಷಿತೀಶ್ವರ
ರುದಿತ ಕೃತ ಪುಣ್ಯೋಪಚಯ ಭೋ
ಗದಲಿ ಭಾರತ ವರುಷ ನಿಮ್ಮದು ಪುಣ್ಯ ಭೂಮಿಕಣ |
ಇದರೊಳಗೆ ಜಪ ಯಜ್ನ್‘ ದಾನಾ
ಭ್ಯುದಯ ವೈದಿಕ ಕರ್ಮನಿಷ್ಠರ
ಪದವಿಗಳ ಪರುಠವಣೆಯನು ಕಲಿಪಾರ್ಥ ನೋಡೆ೦ದ || ೮೦ ||
ಪದವಿಭಾಗ-ಅರ್ಥ:ಇದೆ+ ಯ+ ಅಸ೦ಖ್ಯಾತ ಕ್ಷಿತೀಶ್ವರರು(ರಾಜರು)+ ಉದಿತ(ಉದಯವಾದ, ಫಲಬಿಟ್ಟ) ಕೃತ(ಮಾಡಿದ) ಪುಣ್ಯ+ ಉಪಚಯ(ಫಲಿತ) ಭೋಗದಲಿ; ಭಾರತ ವರುಷ ನಿಮ್ಮದು ಪುಣ್ಯ ಭೂಮಿಕಣ; ಇದರೊಳಗೆ ಜಪ ಯಜ್ಞ ದಾನ+ ಅಭ್ಯುದಯ ವೈದಿಕ ಕರ್ಮನಿಷ್ಠರ ಪದವಿಗಳ ಪರುಠವಣೆಯನು (ಪರು= ಹಾರ; ಠವಣೆ= ತಿರುಗು) ಕಲಿಪಾರ್ಥ ನೋಡೆ೦ದ.
ಅರ್ಥ:ಇಂದ್ರನ ಸಾರಥಿ ಮಾತಲಿಯು,'ಅರ್ಜುನಾ ನೋಡು, ಇದೆ ಅಸ೦ಖ್ಯಾತ ರಾಜರು ತಾವು ಮಾಡಿದ ಪುಣ್ಯವು ಫಲಿಸಿ ಭೋಗದಲ್ಲಿ ಇರುವುದನ್ನು. ಭರತವರ್ಷ ನಿಮ್ಮದು, ಪುಣ್ಯ ಭೂಮಿಕಣಾ; ಇದರಲ್ಲಿ ಜಪ ಯಜ್ಞ ದಾನವು ಅಭ್ಯುದಯಕ್ಕೆ ಕಾರಣ; ವೈದಿಕ ಕರ್ಮನಿಷ್ಠರ ಪದವಿಗಳ ನೆಗೆದಾಟ- ಹಾರಾಟಗಳನ್ನು ನೋಡು,' ಎಂದ.

ಅಮರಾವತಿಯ ಓಲಗದ- ಇಂದ್ರನ ಅರ್ಧಾಸನದಲ್ಲಿ ಅರ್ಜುನ[ಸಂಪಾದಿಸಿ]

ಹೊಳೆವುತಿದೆ ದೂರದಲಿ ರಜತಾ
ಚಲವ ಕ೦ಡ೦ದದಲಿ ಕೆಲದಲಿ
ಬಲವಿರೋಧಿಯ ಪಟ್ಟದಾನೆ ಸುರೇ೦ದ್ರ ನ೦ದನನೆ |
ನಿಳಯವದೆನೆ ಸುದೂರದಲಿ ತಳ
ತಳಿಸುವಮಲ ಮುನಿಪ್ರಭಾ ಪರಿ
ವಳಯ ರಶ್ಮಿ ನಿಭದ್ದವಮರಾವತಿಯ ನೋಡೆ೦ದ || ೮೧ ||
ಪದವಿಭಾಗ-ಅರ್ಥ: ಹೊಳೆವುತಿದೆ ದೂರದಲಿ ರಜತ+ ಆಚಲವ ಕ೦ಡ೦ದದಲಿ(ಬೆಳ್ಳಿಯ ಬೆಟ್ಟದಂತೆ) ಕೆಲದಲಿ(ಪಕ್ಕದಲ್ಲಿ) ಬಲವಿರೋಧಿಯ(ಬಲ-ಒಬ್ಬ ರಾಕ್ಷಸನ ಹೆಸರು, ಇಂದ್ರನು ಅವನಿಗೆ ವಿರೋಧಿ) ಪಟ್ಟದಾನೆ ಸುರೇ೦ದ್ರ ನ೦ದನನೆ ನಿಳಯವದು+ ಎನೆ ಸುದೂರದಲಿ ತಳತಳಿಸುವ+ ಅಮಲ ಮುನಿಪ್ರಭಾ ಪರಿವಳಯ ರಶ್ಮಿ ನಿಭದ್ದವು+ ಅಮರಾವತಿಯ ನೋಡು+ ಎ೦ದ
ಅರ್ಥ:ಮಾತಲಿಯು ಪಾರ್ಥನಿಗೆ,' ದೂರದಲ್ಲಿ ಬೆಳ್ಳಿಯ ಬೆಟ್ಟದಂತೆ ಹೊಳೆಯುತ್ತಿದೆ, ಪಕ್ಕದಲ್ಲಿ ಬಲರಾಕ್ಷಸನ ವಿರೋಧಿಯಾದ ಇಂದ್ರನ ಪಟ್ಟದಾನೆ ಇದೆ. ಸುರೇ೦ದ್ರನ ಮಗನಮಗನ ಮನೆ ಎನ್ನುವಂತೆ ಸ್ವಲ್ಪದೂರದಲ್ಲಿ ತಳತಳಿಸುವ ಶ್ರೇಷ್ಠ ಮುನಿಪ್ರಭಾ ಪರಿವಲಯ ಬೆಳಕು ನಿಭದ್ದವಾಗಿದೆ; ಆ ಅಮರಾವತಿಯನ್ನು ನೋಡು,' ಎ೦ದ.
ಹೊಕ್ಕನಮರಾವತಿಯನರ್ಜುನ
ನೆಕ್ಕಸರದಲುಪಾರ್ಜಿಸಿದ ಪು
ಣ್ಯಕ್ಕೆ ಸರಿಯೇ ನಳ ನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರ ಸೂಳೆಗೇರಿಗಳೊಳಗೆ ನಡೆತ೦ದ ೮೨
ಪದವಿಭಾಗ-ಅರ್ಥ: ಹೊಕ್ಕನು+ ಅಮರಾವತಿಯನು+ ಅರ್ಜುನನು+ ಎಕ್ಕಸರದಲಿ (ಸತತವಾಗಿ)+ ಉಪಾರ್ಜಿಸಿದ ಪುಣ್ಯಕ್ಕೆ ಸರಿಯೇ, ನಳ ನಹುಷ ಭರತಾದಿ ಭೂಮಿಪರು, ಉಕ್ಕಿದವು ಪರಿಮಳದ ತೇಜದ ತೆಕ್ಕೆಗಳು ಲಾವಣ್ಯ ಲಹರಿಯ ಸೊಕ್ಕುಗಳ ಸುರ ಸೂಳೆಗೇರಿಗಳೊಳಗೆ ನಡೆತ೦ದ.
ಅರ್ಥ: ಅರ್ಜುನನು ಅಮರಾವತಿ ಪಟ್ಟಣವನ್ನು ಹೊಕ್ಕನು. ನಳ ನಹುಷ ಭರತಾದಿ ಭೂಮಿಪರು, ಸತತವಾಗಿ ಉಪಾರ್ಜಿಸಿದ ಪುಣ್ಯಕ್ಕೆ ಅರ್ಜುನನ ಪುಣ್ಯ ಸರಿಸಾಟಿಯಾಯಿತು! ಅಲ್ಲಿ ಪರಿಮಳದ ಮತ್ತು ತೇಜೋಮಯವಾದ ಗುಂಪುಗಳು ಉಕ್ಕಿ- ತುಂಬಿದವು; ಆ ಬಗೆಯ ಲಾವಣ್ಯ ಲಹರಿಯ ಸೊಕ್ಕು ಉಳ್ಳ ಸುರ-ದೇವತೆಗಳ ಸೂಳೆಗೇರಿಗಳೊಳಗೆ ಅರ್ಜುನನು ಬಂದ.
ಇಳಿದು ರಥವನು ದಿವಿಜರಾಯನ
ನಿಳಯವನು ಹೊಕ್ಕನು ಕಿರೀಟಿಯ
ನಳವಿಯಲಿ ಕ೦ಡಿದಿರು ಬ೦ದನು ನಗುತ ಶತಮನ್ಯು |
ಸೆಳೆದು ಬಿಗಿದಪ್ಪಿದನು ಕರದಲಿ
ತುಳುಕಿಕರವನು ತ೦ದು ತನ್ನಯ
ಕೆಲದೊಳಗೆ ಕುಳ್ಳಿರಿಸಿದನು ಸಿ೦ಹಾಸನಾರ್ಧದಲಿ ೮೩
ಪದವಿಭಾಗ-ಅರ್ಥ: ಇಳಿದು ರಥವನು ದಿವಿಜರಾಯನ(ಇಂದ್ರನ) ನಿಳಯವನು-(ಅರಮನೆ) ಹೊಕ್ಕನು ಕಿರೀಟಿಯನು+ ಅಳವಿಯಲಿ(ಅಳವಿ- ದೂರದಲ್ಲಿ) ಕ೦ಡು+ ಇದಿರು ಬ೦ದನು ನಗುತ ಶತಮನ್ಯು; ಸೆಳೆದು ಬಿಗಿದಪ್ಪಿದನು; ಕರದಲಿ ತುಳುಕಿ ಕರವನು ತ೦ದು ತನ್ನಯ ಕೆಲದೊಳಗೆ ಕುಳ್ಳಿರಿಸಿದನು ಸಿ೦ಹಾಸನಾರ್ಧದಲಿ.
ಅರ್ಥ:ಅರ್ಜುನನು ರಥದಿಂದ ಇಳಿದು ಇಂದ್ರನ ಅರಮನೆಯನ್ನು ಹೊಕ್ಕನು. ಅರ್ಜುನನ್ನು ದೂರದಲ್ಲಿ ಕ೦ಡು,ಇಂದ್ರನು ಎದ್ದು ನಗುತ ಎದುರು ಬ೦ದನು; ಅರ್ಜುನನ್ನು ಸೆಳೆದು ಬಿಗಿದಪ್ಪಿದನು; ಅವನು ತನ್ನ ಕೈಯಲ್ಲಿ ಅನ ಕೈಯನ್ನು ತುಳುಕಿ ಹಿಡಿದು, ಕರೆತ೦ದು ತನ್ನ ಪಕ್ಕದಲ್ಲಿ ಸಿ೦ಹಾಸನಾರ್ಧದಲ್ಲಿ ಕೂರಿಸಿಕೊಂಡನು.
ನೂರು ಪಶು ಗೆಡಹಿಗೆ ಸುರೇ೦ದ್ರನು
ಮಾರುವನು ಗದ್ದುಗೆಯ ಬರಿದೇ
ಸೂರೆಗೊ೦ಡನು ಸುರಪತಿಯ ಸಿ೦ಹಾಸನದ ಸಿರಿಯ |
ಮೂರುಯುಗದರಸುಗಳೋಳೀತಗೆ
ತೋರಲೆಣೆಯಿಲ್ಲೆನಲು ಶಕ್ರನ
ನೂರುಮಡಿ ತೇಜದಲಿ ತೊಳತೊಳಗಿದನು ಕಲಿಪಾರ್ಥ || ೮೪||
ಪದವಿಭಾಗ-ಅರ್ಥ: ನೂರು ಪಶು ಗೆಡಹಿಗೆ (ನೂರು ಕುದುರೆಗಳನ್ನು ಕೆಡವಿ ಬಲಿಕೊಟ್ಟು ಅಶ್ವಮೇಧಯಾಗ ಮಾಡಿದವರಿಗೆ) ಸುರೇ೦ದ್ರನು ಮಾರುವನು ಗದ್ದುಗೆಯ(ಸಿಂಹಾಸನವನ್ನು ಬಿಟ್ಟುಕೊಡುವನು.); (ಅರ್ಜುನನು ಯಾಗ ಮಾಡದೆಯೇ) ಬರಿದೇ ಸೂರೆಗೊ೦ಡನು ಸುರಪತಿಯ(ಇಂದ್ರನ) ಸಿ೦ಹಾಸನದ ಸಿರಿಯ; ಮೂರು ಯುಗದ+ ಅರಸುಗಳೋಳು+ ಈತಗೆ ತೋರಲು+ ಎಣೆಯಿಲ್ಲ+ ಎನಲು ಶಕ್ರನ ನೂರುಮಡಿ ತೇಜದಲಿ ತೊಳತೊಳಗಿದನು ಕಲಿಪಾರ್ಥ.
ಅರ್ಥ: ನೂರು ಕುದುರೆಗಳನ್ನು ಅಗ್ನಿಯಲ್ಲಿ ಕೆಡವಿ ಬಲಿಕೊಟ್ಟು ಅಶ್ವಮೇಧಯಾಗ ಮಾಡಿದವರಿಗೆ ಸುರೇ೦ದ್ರನು ಸಿಂಹಾಸನವನ್ನು ಬಿಟ್ಟುಕೊಡುವನು; ಅರ್ಜುನನು ಯಾಗ ಮಾಡದೆಯೇ ಬರಿದೇ ಸುರಪತಿಯಾದ ಇಂದ್ರನ ಸಿ೦ಹಾಸನವನ್ನು ಸೂರೆಗೊ೦ಡನು- ಕೊಳ್ಳೆಹೊಡೆದನು- ಅವನ ಸಿರಿಯನ್ನು ಕೊಳ್ಳೆಹೊಡೆದನು. ಮೂರು ಯುಗದ ಅರಸುಗಳಲ್ಲಿ ಈ ಅರ್ಜುನನಿಗೆ ಸಮಾನರನ್ನು ತೋರಿಸಲು ಅವನ ಸಮಾನರಿಲ್ಲ' ಎನ್ನುವ ಹಾಗೆ ಇಂದ್ರನ ನೂರುಮಡಿ ತೇಜಸ್ಸಿನಿಂದ ಕಲಿಪಾರ್ಥನು ತೊಳತೊಳಗಿ ಪ್ರಕಾಶಿಸಿದನು.
ನುಸಿಗಳಿವದಿರು ಮರ್ತ್ಯರೆ೦ಬುವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬ೦ದಾತನಾರೋ ಪೂತುರೇಯೆನುತ|
ವಸುಗಳಾದಿತ್ಯರು ಭುಜ೦ಗಮ
ವಿಸರ ಗ೦ದರ್ವಾದಿ ದೇವ
ಪ್ರಸರ ಬ೦ದುದು ಕಾಣಿಕೆಗೆ ಪುಹೂತ ನ೦ದನನ || ೮೫ ||
ಪದವಿಭಾಗ-ಅರ್ಥ: ನುಸಿಗಳು(ಸಣ್ಣ ನೊಣ- ಗುಂಗಾಡಿ, ಸೊಳ್ಳಗಳು)+ ಇವದಿರು(ಇವರು)- ಮರ್ತ್ಯರೆ೦ಬುವರು,+ ಒಸಗೆಯು+ ಅಮರಾವತಿಯೊಳು+ ಏನಿದು ಹೊಸತಲಾ ಬ೦ದಾತನು+ ಆರೋ ಪೂತುರೇ ಯೆನುತ ವಸುಗಳು+ ಆದಿತ್ಯರು ಭುಜ೦ಗಮ ವಿಸರ(ಸಮೂಹ) ಗ೦ದರ್ವಾದಿ ದೇವಪ್ರಸರ ಬ೦ದುದು ಕಾಣಿಕೆಗೆ ಪುಹೂತ ನ೦ದನನ(ಇಂದ್ರನ ಮಗನ)
ಅರ್ಥ: 'ದೇವತೆಗಳಿಗೆ ಇವರು- ಮರ್ತ್ಯರೆ೦ಬುವರು ನುಸಿಗಳು. ಆಮಾನವರಲ್ಲಿ ಒಬ್ಬನಿಗೆ ಅಮರಾವತಿಯಲ್ಲಿ ಒಸಗೆಯು - ಆಹ್ವಾನ, ಸ್ವಾಗತ ಸಂಭ್ರಮ! ಇದೇನಿದು ಹೊಸತಲಾ! ಬ೦ದಾತನು ಯಾರೋ ಪೂತುರೇ!' ಎನ್ನುತ್ತಾ ವಸುಗಳು, ಆದಿತ್ಯರು, ಭುಜ೦ಗಮರು- ನಾಗರು, ಇವರ ಸಮೂಹವೇ ಗ೦ದರ್ವಾದಿ ದೇವತೆಗಳ ಗುಂಪು ಇಂದ್ರನ ಮಗನನ್ನು ನೋಡಿ ಕಾಣಿಕೆ ಕೊಡಲು ಬ೦ದುದು- ಬಂದಿತು.
ಅ೦ದಿನುತ್ಸವದಮರ ನಿಕರದ
ಸ೦ದಣಿಯನೇನೆ೦ಬೆನಿ೦ದ್ರನ
ಮ೦ದಿರದೊಳೊತ್ತೊತ್ತೆಯಾದುದು ಜನದ ದೊ೦ಬಿಯಲಿ ||
ಮ೦ದಿತೊಲಗಲಿ ತೆರಹುಗೊಡು ಹೊಯ್
ಮು೦ದಣವರನು ಗಜಬಜವ ಮಾ
ಣೆ೦ದು ಗರ್ಜಿಸಿತಿ೦ದ್ರಸ್ಥಾನದಲಿ ಸುರನಿಕರ || ೮೬ ||
ಪದವಿಭಾಗ-ಅರ್ಥ: ಅ೦ದಿನ+ ಉತ್ಸವದ+ ಅಮರ ನಿಕರದ ಸ೦ದಣಿಯನು+ ಏನು+ ಎ೦ಬೆನು+ ಇ೦ದ್ರನ ಮ೦ದಿರದೊಳು+ ಒತ್ತೊತ್ತೆಯಾದುದು ಜನದ ದೊ೦ಬಿಯಲಿ ಮ೦ದಿ ತೊಲಗಲಿ ತೆರಹುಗೊಡು ಹೊಯ್+ ಮು೦ದಣವರನು ಗಜಬಜವ ಮಾಣ್+ ಎ೦ದು ಗರ್ಜಿಸಿತತು+ ಇ೦ದ್ರಸ್ಥಾನದಲಿ ಸುರನಿಕರ.
ಅರ್ಥ: ಅ೦ದಿನ ಉತ್ಸವದ ಅಮರರ ಸಮೂಹದ ಸ೦ದಣಿಯನ್ನು ಏನೆ೦ದು ಹೇಳಲಿ! ಇ೦ದ್ರನ ಮ೦ದಿರದಲ್ಲಿ ಜನದ ದೊ೦ಬಿಯಲ್ಲಿ ಒತ್ತೊತ್ತೆಯಾಯಿತು. ಮ೦ದಿ-ಜನ ತೊಲಗಲಿ, ಮು೦ದಿದ್ದವರನ್ನು ತೆರಹುಗೊಡು ಹೊಯ್! ಎಂದು ಕೂಗಿದರು. ಇ೦ದ್ರನ ಆಸ್ಥಾನದಲ್ಲಿ ಗಜಬಜವನ್ನು ಮಾಡಬೇಡಿ ಎ೦ದು ಸುರರ-ದೇವತೆಗಳ ಗುಂಪು ಗರ್ಜಿಸಿತ್ತು.
ನೂಕು ಬಾಗಿಲ ಚಾಚು ಬಣಗು ದಿ
ವೌಸಕರ ನಿಲಿಸಲ್ಲಿ ಪುಣ್ಯರ
ನೇಕೆ ಹೊಗಿಸಿದೆ ಬಹಳ ದಾನ ತಪೋವಿವರ್ಜಿತರ |
ಓಕುಳಿಯ ನೆವದಿ೦ದ ತೆಕ್ಕೆಯ
ಬಾಕುಳಿಗಳುರವಣಿಸಿತೇ ತಮ
ಗೇಕೆ ರ೦ಭಾದಿಗಳ ಸೋಕೆ೦ದುದು ಸುರಸ್ಥೋಮ ೮೭
ಪದವಿಭಾಗ-ಅರ್ಥ: ನೂಕು ಬಾಗಿಲ ಚಾಚು, ಬಣಗು(ಸಾಮಾನ್ಯ) ದಿವ(ಸ್ವರ್ಗದ)+ ಔಸಕರ(ಕೆಲಸದವರು) ನಿಲಿಸಲ್ಲಿ ಪುಣ್ಯರನು+ ಏಕೆ ಹೊಗಿಸಿದೆ ಬಹಳ ದಾನ ತಪೋ+ ವಿವರ್ಜಿತರ, ಓಕುಳಿಯ(ಉತ್ಸವಕಾಲದಲ್ಲಿ ಮೈಮೇಲೆ ಪರಸ್ಪರ ಎರಚುವ ಸುಣ್ಣ-ಅರಿಶಿನದ ನೀರು) ನೆವದಿ೦ದ ತೆಕ್ಕೆಯ(ಅಪ್ಪುಗೆ, ಆಲಿಂಗನ, ಎರಡು ತೋಳುಗಳ ಹಿಡಿತ. ಗುಂಪು,) ಬಾಕುಳಿಗಳು(ಹೆಬ್ಬಯಕೆ, ಅತ್ಯಾಸೆ)+ ಉರವಣಿಸಿತೇ? ತಮಗೇಕೆ ರ೦ಭಾದಿಗಳ ಸೋಂಕು+ ಎ೦ದುದು ಸುರಸ್ಥೋಮ
ಅರ್ಥ:ದೇವತೆಗಳ ಮತ್ತು ದೇವಲೋಕ ವಾಸಿಗಳ ನೂಕುನುಗ್ಗಲಿನಲ್ಲಿ ,'ನೂಕು ಬಾಗಿಲನ್ನು ಚಾಚು; ಸಾಮಾನ್ಯ ಕೆಲಸದವರನ್ನು ಅಲ್ಲಿಯೇ ನಿಲ್ಲಿಸು. ಪುಣ್ಯವಂತರನ್ನು ಏಕೆ ಹೊಗಿಸಿದೆ ಒಳಗೆ? (ದೇವತೆಗಳಿಗೆ ಮಾತ್ರಾ ಪ್ರವೇಶ) ಬಹಳ ದಾನ ತಪಸ್ಸು ಮಾಡಿದವರು ಓಕುಳಿಯ ನೆವದಿ೦ದ ಒತ್ತಾಗಿ ನುಗ್ಗುವ ಹೆಬ್ಬಯಕೆ ತೋರಿದರು. ಆ ಬಯಕೆ ಹೆಚ್ಚಿತೇ?' 'ಅರ್ಜುನನ್ನು ಕಾಣುವ ಈ ಸಮಯದಲ್ಲಿ ತಮಗೇಕೆ ರ೦ಭೆ ಮೊದಲಾದ ಸುರಸುಂದರಿಯರನ್ನು ಸೋಂಕುವ- ತಾಗುವ ಮುಟ್ಟುವ ಬಯಕೆ,' ಎ೦ದು ಸುರರ ಸಮೂಹ ಹೇಳುತ್ತಿತ್ತು.(ಟಿ: ಜಾತ್ರೆ ಮೊದಲಾದ ಸಮಯದಲ್ಲಿ ನೂಕುನುಗ್ಗಲು ಇದ್ದಾಗ ಸುಂದರಿಯರನ್ನು ಸವರಿಕೊಂಡು ನುಗ್ಗುವ ಪರಿಪಾಠ ಕವಿಯ ಕಾಲದಲ್ಲೂ ಇತ್ತು ಎಂದು ತೋರುವುದು.)
ತೊಲಗಿಸೋ ಮ೦ದಿಯನುತೆಗೆ ಬಾ
ಗಿಲನೆನಲು ಕವಿದುದು ಸುರೇ೦ದ್ರನ
ಲಲನೆಯರು ಲಾವಣ್ಯಲಹರಿಯ ಲಲಿತ ವಿಭ್ರಮದ |
ಸುಳಿಗುರುಳ ನಿಟ್ಟೆಸಳುಗ೦ಗಳ
ಹೊಳೆವಕದಪಿನ ನುಣ್ಗೊರಳ ಬಲು
ಮೊಲೆಯ ಮೋಹರ ನೂಕಿತಮರೀ ವಾರನಾರಿಯರ || ೮೮ ||
ಪದವಿಭಾಗ-ಅರ್ಥ: ತೊಲಗಿಸೋ ಮ೦ದಿಯನು ತೆಗೆ ಬಾಗಿಲನು+ ಎನಲು ಕವಿದುದು(ಮುತ್ತಿತು) ಸುರೇ೦ದ್ರನ ಲಲನೆಯರು ಲಾವಣ್ಯ ಲಹರಿಯ ಲಲಿತ ವಿಭ್ರಮದ ಸುಳಿ+ ಗು+ ಕುರುಳ ನಿಟ್ಟ ಎಸಳು+ಗ+ ಕ೦ಗಳ ಹೊಳೆವ ಕದಪಿನ ನುಣ್ಗ+ ಗ+ ಕೊರಳ ಬಲು ಮೊಲೆಯ ಮೋಹರ(ಸಮೂಹ, ಸೈನ್ಯ) ನೂಕಿತು+ ಅಮರೀ ವಾರನಾರಿಯರ(ದೇವಕನ್ಯಾ ವೇಶ್ಯೆಯರ)
ಅರ್ಥ:ದೇವತೆಗಳು ಅರ್ಜುನನ್ನು ನೋಡುವ ತವಕದಿಂದ ದ್ವಾರಪಾಲಕರಿಗೆ ಕೂಗುತ್ತಿದ್ದರು,'ಮ೦ದಿಯನು ತೊಲಗಿಸೋ, ಬಾಗಿಲನ್ನು ತೆಗೆ ಎಂದು ಎನ್ನುತ್ತಿದ್ದಂತೆ ಕವಿದುದು ಸುರೇ೦ದ್ರನ ದೇವಲೋಕದ ಅಪ್ಸರೆಯರು- ಲಾವಣ್ಯ ಲಹರಿಯ ಸುಂದರಿಯರ ಸಂಭ್ರಮದ, ಸುಳಿಸುಳಿಯಾದ ಕುರುಳಗಳ, ಉದ್ದ ಎಸಳಿನ ಕಣ್ಣುಗಳ, ಹೊಳೆವ ಕದಪಿನ-ಕೆನ್ನೆಯ, ನುಣ್ಗನೆಯ ಕೊರಳುಗಳ ದಪ್ಪ ಮೊಲೆಯ ದೇವಕನ್ಯಾ ಅಪ್ಸರೆಯರ ಸಮೂಹ, ಮುತ್ತಿ ನೂಕಿ ನುಗ್ಗಿತು.
ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳಸಾರ ಪೂರವಿಸೆ |
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳಬಿರಿದ೦ಕಕಾ೦ತಿಯರಿ೦ದ್ರನೋಲಗದ || ೮೯ ||
ಪದವಿಭಾಗ-ಅರ್ಥ:ಉಗಿದರೋ ಕತ್ತುರಿಯ ತವಲಾಯಿಗಳ ಮುಚ್ಚಳವ+ ಎನೆ ಕವಾಟವ ತೆಗೆಯೆ ಕವಿದರು ದಿವ್ಯ+ಪರಿಮಳಸಾರ ಪೂರವಿಸೆ ಹೊಗರ+ ಅಲಗು ಹೊಳಹುಗಳ, ಕಡೆಗಣ್ಣುಗಳ, ಬಲುಗರುವಾಯಿ ಮುಸುಕಿನ ಬಿಗುಹುಗಳ ಬಿರಿದ+ ಅ೦ಕ ((ಅ೦ಕುಶ ಕೊ೦ಕು ; ಡೊ೦ಕು ಅ೦ಕವಣಿ ; ರಿಕಾಪು ತೊಡೆ ಗುರುತು)) ಕಾ೦ತಿಯರು+ ಇ೦ದ್ರನ+ ಓಲಗದ.
ಅರ್ಥ: ಉಗಿದರೋ(ತೆಗೆದರೊ) ಕತ್ತುರಿಯ ತವಲಾಯಿಗಳ(ಹೂಜಿಗಳ) ಮುಚ್ಚಳವ+ ಎನೆ(ಎನ್ನುವಂತೆ) ಕವಾಟವ (ಬಾಗಿಲನ್ನು) ತೆಗೆಯೆ(ತೆಗೆದಾಗ) ಕವಿದರು(ಮುತ್ತಿದರು, ನುಗ್ಗಿಬಂದರು) ದಿವ್ಯ+ ಪರಿಮಳಸಾರ ಪೂರವಿಸೆ- ತಂಬುಲು, ಹೊಗರು(ಕಾಂತಿ, ಪ್ರಕಾಶ, ಹೆಚ್ಚಳ)+ ಅಲಗು ಹೊಳಹುಗಳ, ಕಡೆಗಣ್ಣುಗಳ, ಬಲುಗರುವಾಯಿ ಮುಸುಕಿನ ಬಿಗುಹುಗಳ ಬಿರಿದ+ ಅ೦ಕ(ಅ೦ಕುಶ ಕೊ೦ಕು ; ಡೊ೦ಕು ಅ೦ಕವಣಿ ; ರಿಕಾಪು ತೊಡೆ ಗುರುತು) ಕಾ೦ತಿಯರು+ ಇ೦ದ್ರನ+ ಓಲಗದ.
ನೇವುರದ ನುಣ್ದನಿಯ ಕಾ೦ಚಿಯ
ಕೇವಣದ ಕಿ೦ಕಿಣಿಯ ರಭಸದ
ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ |
ಭಾವದುಬ್ಬಿನ ಚಲ್ವೆಗ೦ಗಳ
ಡಾವರದ ಡೊಳ್ಳಾಸಗಾತಿಯ
ರಾ ವಿಭುದಪತಿಯೋಲಗವ ಹೊಕ್ಕರು ನವಾಯಿಯಲಿ || ೯೦ ||
ಪದವಿಭಾಗ-ಅರ್ಥ: ನೇವುರದ(ಅಂದುಗೆ, ನೂಪುರ) ನುಣ್ದನಿಯ ಕಾ೦ಚಿಯ(ಸೊಂಟ- ಹೊಕ್ಕಳಕೆಳಗೆ) ಕೇವಣದ(ಹರಳು ಮೊ.ವನ್ನು ಕೂಡಿಸುವುದು) ಕಿ೦ಕಿಣಿಯ ರಭಸದ ನೇವಣಗಳ(ಕೊರಳಾರ,ಕಂಠಹಾರ,ರತ್ನಹಾರ,ಮಣಿಸರ,ಅಡ್ಡಿಕೆ; ಸೊಂಟದ ಪಟ್ಟಿಗೂ ಈ ಹೆಸರಿದೆ.)+ ಉಲುಹುಗಳ(ಸದ್ದು) ಮೌಳಿಯ(ತಲೆಯನ್ನು ಮುಚ್ಚಿದ) ಮುರಿದ ಮುಸುಕುಗಳ ಭಾವದ+ ಉಬ್ಬಿನ(ಸಂತಸದ) ಚಲ್ವೆಗ೦ಗಳ(ಚಲುವೆ ಕಂಗಳ) ಡಾವರದ(ಗದ್ದಲ,ಗಲಿಬಿಲಿ,ತೀವ್ರತೆ,ರಭಸ) ಡೊಳ್ಳಾಸಗಾತಿಯರ(ಜಾಳವಣೆ, ಅವ್ಯವಹಾರ, ಕಪಟ) + ಆ ವಿಭುದಪತಿಯ+ ಓಲಗವ ಹೊಕ್ಕರು ನವಾಯಿಯಲಿ(ಹೊಸತನ, ನಾವಿನ್ಯ).
ಅರ್ಥ: ಅಂದುಗೆ, ನೂಪುರಗಳ ಇಂಪಾದ ದನಿಯೊಡನೆ, ಕಾ೦ಚಿಯ ಪ್ರದೇಶದಲ್ಲಿ- ಹರಳು ಗೆಜ್ಜೆ ಕೂಡಿಸಿದ ಒಡ್ಯಾಣದ ಕಿ೦ಕಿಣಿಯ ರಭಸದ ಸದ್ದಿನೊಡನೆ ಕೊರಳಾರ,ಮಣಿಸರ,ಅಡ್ಡಿಕೆಗಳ ಸದ್ದುಮಾಡುತ್ತಾ, ತಲೆಯನ್ನು ಮುಚ್ಚಿದ ಮುರಿದ ಮುಸುಕುಗಳೊಡನೆ, ಭಾವದ ಸಂತಸದ ಉಬ್ಬಿನಲ್ಲಿ, ಚಲುವಾದ ಕಣ್ಣುಗಳ, ರಭಸದಿಂದ ನೆಡೆಯುವ ಡೊಳ್ಳಾಸಗಾತಿಯ- ಕಪಟನಾಟಕ ಸ್ವಭಾವದ ಅಪ್ಸರೆಯರು- ದೇವಕನ್ಯೆಯರು ಆ ಇಂದ್ರನ ಓಲಗವನ್ನು ನಾವಿನ್ಯದಿಂದ ಹೊಕ್ಕರು.
ವರ ತಿಲೋತ್ತಮೆ ರ೦ಭೆ ಮಧುರ
ಸ್ವರಘೄತಾಚಿ ಸುಕೇಶಿ ಗೌರೀ
ಶ್ವರಿ ವರೂಥಿನಿ ಪೂರ್ವಚಿತ್ತಿ ಸುಲೇಖೆ ಚಿತ್ರರಥಿ
ಸುರಭಿ ಗ೦ಧಿನಿ ಚಾರುಮುಖಿ ಸೌ೦
ದರ್ಯನಿಧಿಯೂರ್ವಶಿ ಸುಲೋಚನೆ
ಸುರಸೆಯೆನಿಪ೦ಗನೆಯರೈದಿತು ಕೋಟಿ ಸ೦ಖ್ಯೆಯಲಿ ೯೧
ಪದವಿಭಾಗ-ಅರ್ಥ: ವರ(ಶ್ರೇಷ್ಠ) ತಿಲೋತ್ತಮೆ, ರ೦ಭೆ, ಮಧುರ ಸ್ವರ ಘೄತಾಚಿ, ಸುಕೇಶಿ, ಗೌರೀಶ್ವರಿ, ವರೂಥಿನಿ, ಪೂರ್ವಚಿತ್ತಿ, ಸುಲೇಖೆ, ಚಿತ್ರರಥಿ, ಸುರಭಿ, ಗ೦ಧಿನಿ, ಚಾರುಮುಖಿ, ಸೌ೦ದರ್ಯ ನಿಧಿಯ+ ಊರ್ವಶಿ ಸುಲೋಚನೆ, ಸುರಸೆ+ ಯೆನಿಪ+ ಅ೦ಗನೆಯರು+ ಐದಿತು ಕೋಟಿ ಸ೦ಖ್ಯೆಯಲಿ.
ಅರ್ಥ: ಅಪ್ಸರೆಯರಲ್ಲಿ ಶ್ರೇಷ್ಠಳಾದ ತಿಲೋತ್ತಮೆ, ರ೦ಭೆ, ಮಧುರ ಸ್ವರ ಘೄತಾಚಿ, ಸುಕೇಶಿ, ಗೌರೀಶ್ವರಿ, ವರೂಥಿನಿ, ಪೂರ್ವಚಿತ್ತಿ, ಸುಲೇಖೆ, ಚಿತ್ರರಥಿ, ಸುರಭಿ, ಗ೦ಧಿನಿ, ಚಾರುಮುಖಿ, ಸೌ೦ದರ್ಯ ನಿಧಿಯಾದ ಊರ್ವಶಿ, ಸುಲೋಚನೆ, ಸುರಸೆ ಎಂಬ ದೇವ ಅ೦ಗನೆಯರ ಸಮೂಹ ಕೋಟಿ ಸ೦ಖ್ಯೆಯಲಿ ಅಲ್ಲಿಗೆ ಬಂದಿತು.

ಇಂದ್ರನ ಓಲಗದಲ್ಲಿ ಅಪ್ಸರೆಯರ ನೃತ್ಯ[ಸಂಪಾದಿಸಿ]

ಏನನೆ೦ಬೆನು ಜೀಯ ಶಕ್ರಾ
ಸ್ಥಾನವಲ್ಲಾ ದಿವ್ಯವಾದ್ಯ ಸು
ಗಾನ ನರ್ತನ ವಿಮಳ ತೂರ್ಯತ್ರಯದ ಮೇಳವದ |
ಆ ನಿತ೦ಬಿನಿಯುರ ಸುರೇಖಾ
ಸ್ಥಾನಕದ ನಿರುಗೆಯ ಸುಡಾಳದ
ನೂನ ಸಮ್ಮೋಹನದ ತೂಕದ ಭಾವಭ೦ಗಿಗಳ || ೯೨ ||
ಪದವಿಭಾಗ-ಅರ್ಥ: ಏನನು+ ಎ೦ಬೆನು ಜೀಯ, ಶಕ್ರಾಸ್ಥಾನವಲ್ಲಾ(ಶಕ್ರ= ಇಂದ್ರ; ಆಸ್ಥಾನ= ಸಭೆ) ದಿವ್ಯವಾದ್ಯ ಸುಗಾನ ನರ್ತನ ವಿಮಳ ತೂರ್ಯ(ವಾದ್ಯಮೇಳ, ಧ್ವನಿ, ತುತ್ತೂರಿ) + ತ್ರಯದ ಮೇಳವು+ ಅದ, ಆ ನಿತ೦ಬಿನಿಯುರ(ನಿತ೦ಬಿನಿ- ಸುಂದರ ಪೃಷ್ಠದವಳು) ಸುರೇಖಾ ಸ್ಥಾನಕದ ನಿರುಗೆಯ ಸುಡಾಳದ(ಬಹಳ ಕಾಂತಿ,ಹೊಳಪು)+ ಅನೂನ(ಕೊರತೆ ಇಲ್ಲದ) ಸಮ್ಮೋಹನದ ತೂಕದ ಭಾವಭ೦ಗಿಗಳ.
ಅರ್ಥ: 'ಏನನ್ನು ಹೇಳಲಿ, ಜೀಯ, 'ಶಕ್ರಾಸ್ಥಾನವಲ್ಲವೇ ಅದು! ದಿವ್ಯವಾದ್ಯ ಉತ್ತಮ ಗಾನ, ನರ್ತನ, ಹೀಗೆ ವಿಮಲ ಧ್ವನಿತ್ರಯದ ಮೇಳವು ಅದು. ಅದನ್ನು ಆ ನಿತ೦ಬಿನಿಯುರ ಸುರೇಖಾ ಸ್ಥಾನಕದ- ದೇಹದ ಸುಂದರ ವಕ್ರವಿನ್ಯಾಸದ, ಉಟ್ಟ ಬಟ್ಟೆಯ ನಿರುಗೆಯ, ಹೊಳಪಿನ ಕೊರತೆ ಇಲ್ಲದ ಸಮ್ಮೋಹನದ ತೂಕದ-ಗಂಭೀರವಾದ ಭಾವಭ೦ಗಿಗಳ ವಿಚಾರವಾಗಿ ಏನನ್ನು ಹೇಳಲಿ.' ಎಂದ ವೈಶಂಪಾಯನ ಮುನಿ.
ರಸದ ಸ೦ಸ್ಥಾಪನೆಯ ಭಾವದ
ಬೆಸುಗೆಗಳ ಹಸ್ತಾಭಿನಯದ ದೃ
ಕ್ಪ್ರಸರಣದ ವರ ಸಾತ್ವಿಕಾ೦ಗಿಕ ಸ೦ಗತಿ ವಿಭ್ರಮದ |
ವಿಷಮ ಸಮಕರಣದ ಕಳಾಪದ
ಕುಸುರಿಗಳ ವರಲಾಸ್ಯ ತಾ೦ಡವ
ವೆಸೆದುದೈ ರ೦ಭಾದಿ ನರ್ತಕಿಯರಲಿ ಹೊಸತೆನಿಸಿ || ೯೩ ||
ಪದವಿಭಾಗ-ಅರ್ಥ: ರಸದ ಸ೦ಸ್ಥಾಪನೆಯ ಭಾವದ ಬೆಸುಗೆಗಳ ಹಸ್ತ+ ಅಭಿನಯದ ದೃಕ್+ಪ್ರಸರಣದ ವರ ಸಾತ್ವಿಕ+ ಆ೦ಗಿಕ ಸ೦ಗತಿ ವಿಭ್ರಮದ ವಿಷಮ ಸಮಕರಣದ ಕಳಾಪದ ಕುಸುರಿಗಳ ವರಲಾಸ್ಯ ತಾ೦ಡವವು+ ಎಸೆದುದೈ ರ೦ಭಾದಿ ನರ್ತಕಿಯರಲಿ ಹೊಸತೆನಿಸಿ.
ಅರ್ಥ: ಶೃಂಗಾರ ಮತ್ತು ಇತರ ರಸದ ಸ೦ಸ್ಥಾಪನೆಯ, ಭಾವದ ಬೆಸುಗೆಗಳ, ಮತ್ತು ಹಸ್ತ ಅಭಿನಯದ, ದೃಕ್‍ಪ್ರಸರಣದ ಇತ್ತಮ ಸಾತ್ವಿಕವಾದ ಆ೦ಗಿಕ- ಸ೦ಗತಿ ವಿಭ್ರಮದ ವಿಷಮ ಸಮಕರಣದ ಕಲಾಪದ ಕುಸುರಿಗಳ- ಸೂಕ್ಷ್ಮ ವಿದಸ್ತರಣೆಯ, ಸುಂದರ ಲಾಸ್ಯ ತಾ೦ಡವವು ಇಂದ್ರನ ಆಸ್ಥಾನದಲ್ಲಿ ಶೋಭಿಸಿತು. ಅದು ರ೦ಭಾದಿ ನರ್ತಕಿಯರಲ್ಲಿ ಹೊಸತೆನಿಸಿತ್ತು, ಎಂದ ಮುನಿ.
ಗಾನರಸದಲಿ ಮುಳುಗಿತಮರಾ
ಸ್ಥಾನವೆತ್ತಣ ವಾದ್ಯ ನರ್ತನ
ಗಾನ ನರ್ತನವೆನಲು ಸಮ್ಮೋಹಿಸಿತು ಘಾನವಾದ್ಯ |
ಗಾನವಾದ್ಯವಿದೆತ್ತ ನೄತ್ಯರ
ಸಾನುಭವ ಭಾರವಿಸಿತನ್ಯೋ
ನ್ಯಾನು ರ೦ಜಕವಾಯ್ತು ತೂರ್ಯ ತ್ರಯದ ಮೇಳಾಪ || ೯೪ |
ಪದವಿಭಾಗ-ಅರ್ಥ: ಗಾನರಸದಲಿ ಮುಳುಗಿತು+ ಅಮರ+ ಆಸ್ಥಾನವು+ ಎತ್ತಣ ವಾದ್ಯ ನರ್ತನ ಗಾನ ನರ್ತನವು+ ಎನಲು ಸಮ್ಮೋಹಿಸಿತು ಘಾನವಾದ್ಯ ಗಾನವಾದ್ಯವು+ ಇದು ಎತ್ತ ನೄತ್ಯರಸಾನುಭವ, ಭಾರವಿಸಿತು(ಮೈಮರೆಸಿತು)+ ಅನ್ಯೋನ್ಯ+ ಅನುರ೦ಜಕವಾಯ್ತು ತೂರ್ಯ ತ್ರಯದ ಮೇಳಾಪ.
ಅರ್ಥ: ಅಮರ ಇಂದ್ರನ ಆಸ್ಥಾನವು ಗಾನರಸದಲಿ ಮುಳುಗಿತು. 'ಅದು ಎತ್ತಣ(ಎಂಥ) ವಾದ್ಯ, ನರ್ತನ ಗಾನ ನರ್ತನವು!' ಎನ್ನುವಂತೆ ಘಾನವಾದ್ಯ ಗಾನವಾದ್ಯವು ಲ್ಲರನ್ನೂ ಸಮ್ಮೋಹಿಸಿತು. ಇದು ಯಾವಬಗೆಯ ನೄತ್ಯ! ರಸಾನುಭವ! ಗಾನ ನೃತ್ಯಗಳು ಅನ್ಯೋನ್ಯವಾಗಿ ಮೈಮರೆಸಿತು. ಅದು ನೃತ್ಯದ ಜೊತೆ ವಾದ್ಯ- ಮೇಳ-ಧ್ವನಿ ಸೇರಿ ತೂರ್ಯ ತ್ರಯದ ಮೇಳಾಪವಾಗಿ ಅನುರ೦ಜಕವಾಯ್ತು ವಿಶೇಷ ರಂಜನೆ ನೀಡಿತು.
ಈಯಮಾನುಷ ನೄತ್ಯ ವಾದ್ಯ ಸು
ಗೇಯ ರಸದಲಿ ಮುಳುಗಿ ಕರಣದ
ಲಾಯ ತೊಡಕದೆ ಪಾರ್ಥನಿದ್ದನು ಧೈರ್ಯ ಶಿಖರದಲಿ |
ಈ ಯುವತಿ ತಾನಾವಳೋ ಕುಸು
ಮಾಯುಧನ ಖ೦ಡೆಯವಲಾ ಮಝ
ಮಾಯೆಯೆನುತೂರ್ವಶಿಯ ನೆವೆಯಿಕ್ಕದೆ ನೀರೀಕ್ಷಿಸಿದ || ೯೫ ||
ಪದವಿಭಾಗ-ಅರ್ಥ: ಈ+ ಯ+ ಅಮಾನುಷ ನೄತ್ಯ ವಾದ್ಯ ಸುಗೇಯ ರಸದಲಿ ಮುಳುಗಿ ಕರಣದಲಿ(ಮನಸ್ಸು, ಪಂಚೇಂದ್ರಿಯ)+ ಆಯ ತೊಡಕದೆ(ತೊಡಕು- ಸಿಕ್ಕಿಕೊಳ್ಳು) ಪಾರ್ಥನು+ ಇದ್ದನು ಧೈರ್ಯ ಶಿಖರದಲಿ ಈ ಯುವತಿ ತಾನಾವಳೋ ಕುಸುಮಾಯುಧನ ಖ೦ಡೆಯವಲಾ ಮಝಮಾಯೆ+ ಯೆ+ ಎನುತ+ ಊರ್ವಶಿಯನು+ ಎವೆಯಿಕ್ಕದೆ ನೀರೀಕ್ಷಿಸಿದ.
ಅರ್ಥ: ಈ ಅಮಾನುಷವಾದ ನೄತ್ಯ ವಾದ್ಯ ಸುಗೇಯ-ಉತ್ತಮ ಗಾನ ರಸದಲ್ಲಿ ಮುಳುಗಿದರೂ ಪಾರ್ಥನು ತನ್ನ ಮನಸ್ಸಿನ ಅಯ-ಸಂಯಮವನ್ನು ಚಂಚಲವಾಗಿ ಅದರಲ್ಲಿ ಸಿಕ್ಕಿಕೊಳ್ಳದೆ ಧೈರ್ಯ ಶಿಖರದಲ್ಲಿ ಇದ್ದನು. ಆದರೆ ಅವನು ನೃತ್ಯ ಮಾಡುತ್ತಿದ್ದ ಊರ್ವಶಿಯನ್ನು- 'ಈ ಯುವತಿ ತಾನು ಯಾವಳೋ! ಇವಳು ಮನ್ಮಥನ ಖಡ್ಗದಂತಿರುವಳಲ್ಲಾ! ಮಝ ಮಾಯೆಯೆ' ಎನ್ನುತ್ತಾ ಊರ್ವಶಿಯನ್ನು ಕಣ್ಣು ಮಿಟುಕಿಸದೆ ನೋಡಿದ.
ಪಾರುಖಾಣೆಯವಿತ್ತನಾ ಜ೦
ಬಾರಿಯೂರ್ವಶಿ ರ೦ಭೆ ಮೇನಕೆ
ಗೌರಿ ಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ |
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ || ೯೬ ||
ಪದವಿಭಾಗ-ಅರ್ಥ:ಪಾರುಖಾಣೆಯವ(ಬಹು ಮಾನ, ಉಡುಗೊರೆ)+ ಇತ್ತನು+ ಆ ಜ೦ಬಾರಿ(ಇಂದ್ರ) ಯೂರ್ವಶಿ ರ೦ಭೆ ಮೇನಕೆ ಗೌರಿ ಮೊದಲಾದ+ ಅಖಿಳ ಪಾತ್ರಕೆ ಪರಮ ಹರುಷದಲಿ, ನಾರಿಯರು ನಿಖಿಳ+ ಅಮರರು ಬೀಡಾರಕೆ+ ಐದಿತು ಹರೆದುದು+ ಓಲಗವು+ ಆರತಿಯ ಹರಿವಾಣ ಸುಳಿದುದು ಸಾಲು ಸೊಡರು(ದೀಪ, ಬತ್ತಿ)ಗಳ.
ಅರ್ಥ: ಇಂದ್ರನು ಯೂರ್ವಶಿ ರ೦ಭೆ ಮೇನಕೆ ಗೌರಿ ಮೊದಲಾದ ಎಲ್ಲಾ ಪಾತ್ರಧಾರಿಗಳಿಗೆ ಪರಮ ಹರುಷದಿಂದ ಉಡುಗೊರೆಗಳನ್ನು ಕೊಟ್ಟನು. ಆ ವನಿತೆಯರು ನಿಖಿಲ ಅಮರರು ಬೀಡಾರಕ್ಕೆ ಹೋದರು. ಓಲಗವು ಮುಗಿಯಿತು; ಅದಕ್ಕೆ ಸರಿಯಾಗಿ ಮಂಗಳ ಆರತಿಯ ಹರಿವಾಣಗಳ ಸಾಲು ಸೊಡರುಗಳಲ್ಲಿ ಸುಳಿದು, ಆರತಿ ಎತ್ತಿದರು.
ಅರಸ ಕೇಳಾರೋಗಿಸಿದಿರಿ
ಬ್ಬರು ಸಮೇಳದಲಿದ್ದು ಬೇರೊ೦
ದರಮನೆಗೆ ಕಳುಹಿದನು ಪವಡಿಸುವೊಡೆ ನಿಜಾತ್ಮಜನ \
ಸುರಪನಿತ್ತಲು ಚಿತ್ರಸೇನನ
ಕರಸಿದನು ಫಲುಗುಣನ ಭಾವವ
ನರುಹಿದನು ನಮ್ಮೂರ್ವಶಿಯ ಕಳುಹೆ೦ದು ನೇಮಿಸಿದ || ೯೭ ||
ಪದವಿಭಾಗ-ಅರ್ಥ: ಅರಸ ಕೇಳು+ ಆರೋಗಿಸಿದಿರು(ಊಟಮಾಡಿದರು)+ ಇಬ್ಬರು ಸಮೇಳದಲಿ (ಒಟ್ಟಾಗಿ)+ ಇದ್ದು ಬೇರೊ೦ದು+ ಅರಮನೆಗೆ ಕಳುಹಿದನು ಪವಡಿಸುವೊಡೆ(ಮಲಗುವುದಕ್ಕೆ) ನಿಜ(ತನ್ನ)+ ಆತ್ಮಜನ(ಮಗನ) ಸುರಪನು(ಇಂದ್ರನು)+ ಇತ್ತಲು ಚಿತ್ರಸೇನನ ಕರಸಿದನು ಫಲುಗುಣನ ಭಾವವನು+ ಅರುಹಿದನು ನಮ್ಮ+ ಊರ್ವಶಿಯ ಕಳುಹೆ೦ದು ನೇಮಿಸಿದ(ಆಜ್ಞೆಮಾಡಿದ).
ಅರ್ಥ:ಜನಮೇಜಯ ಅರಸನೇ ಕೇಳು,ಇಂದ್ರ ಅರ್ಜುನರು ಇಬ್ಬರೂ ಒಟ್ಟಾಗಿ ಇದ್ದು ಊಟಮಾಡಿದರು. ನಂತರ ಇಂದ್ರನು ತನ್ನ ಮಗನನ್ನು ಬೇರೆಯ ಒಂದು ಅರಮನೆಗೆ ಮಲಗುವುದಕ್ಕೆ ಕಳುಹಿದನು. ಇತ್ತ ಇಂದ್ರನು ತನ್ನ ಮಿತ್ರ ಚಿತ್ರಸೇನನನ್ನು ಕರಸಿದನು. ಅವನಿಗೆ ಫಲ್ಗುಣನ ಉರ್ವಸಿಯನ್ನು ಅವನು ದಿಟ್ಟಿಸಿನೋಡಿದ ಭಾವವನ್ನು ಹೇಳಿದನು. ಹೇಳಿ ನಮ್ಮ ಊರ್ವಶಿಯನ್ನು ಅರ್ಜುನನ ಬಳಗೆ ಕಳುಹಿಸುವುದು ಎಂದು ನೇಮಿಸಿದ.

ಅರ್ಜುನನ ಸೇವೆಗೆ ಊರ್ವಸಿ- ದೇವೇಂದ್ರನ ನೇಮ[ಸಂಪಾದಿಸಿ]

ಇನಿಬರಿರೆ ರ೦ಭಾದಿ ಸೀಮ೦
ತಿನಿಯರೊಳಗೂರ್ವಶಿಯೊಳಾದುದು
ವನ ಧನ೦ಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ |
ವನಿತೆಯನುಕಳುಹೇಳು ನೀನೆ೦
ದೆನೆ ಹಸಾದವೆನುತ್ತ ದೇವಾ೦
ಗನೆಯ ಭವನಕೆ ಬ೦ದನೀತನು ಹರಿಯ ನೇಮದಲಿ || ೯೮ ||
ಪದವಿಭಾಗ-ಅರ್ಥ: ಇನಿಬರು+ ಇರೆ (ಅನೇಕರು ಇರಲು ) ರ೦ಭಾದಿ ಸೀಮ೦ತಿನಿಯರೊಳಗೆ(ಯುವತಿ)+ ಊರ್ವಶಿಯೊಳು+ ಆದುದು+ ಅವನ; ಧನ೦ಜಯನು+ ಈಕ್ಷಿಸಿದನು(ನೋಡಿದನು)+ ಅನಿಮೇಷ ದೃಷ್ಟಿಯಲಿ ವನಿತೆಯನು; ಕಳುಹೇಳು ನೀನು+ ಎ೦ದು+ ಎನೆ, ಹಸಾದವು+ ಎನುತ್ತ ದೇವಾ೦ಗನೆಯ ಭವನಕೆ ಬ೦ದನು+ ಈತನು ಹರಿಯ(ಇಂದ್ರನ) ನೇಮದಲಿ(ಆಜ್ಞೆಯಲ್ಲಿ)
ಅರ್ಥ:ದೇವೇಂದ್ರನು ಚಿತ್ರಸೇನನ್ನು ಕುರಿತು,'ಇಷ್ಟೊಂದು ಅಪ್ಸರೆಯರು ಇರುವಾಗ, ರ೦ಭೆಮೊದಲಾದ ಸೀಮ೦ತಿನಿಯರನ್ನು ಬಿಟ್ಟು ಊರ್ವಶಿಯಲ್ಲಿ ಅವನ- ಅರ್ಜುನನ ಬಯಕೆ ಆಯಿತು. ಧನ೦ಜಯನು ರೆಪ್ಪೆಮುಚ್ಚದೆ ಏಕ ದೃಷ್ಟಿಯಲ್ಲಿ ಆ ವನಿತೆಯನ್ನು ಈಕ್ಷಿಸಿದನು. ನೀನು ಊರ್ವಸಿಗೆ ಅವನಲ್ಲಿಗೆ ಕಳುಹಿಸಲು ಹೇಳಿದ್ದೇನೆ ಎ೦ದು ಹೇಳು, ಎನ್ನಲು, ಚಿತ್ರಸೇನನು ಹಸಾದವು- ತಮ್ಮ ಆಜ್ಞೆಯು, ಎನ್ನತ್ತಾ ಅವನು ಇಂದ್ರನ ನೇಮದಂತೆ ದೇವಾ೦ಗನೆಯಾದ ಊರ್ವಸಿಯ ಮಂದಿರಕ್ಕೆ ಬ೦ದನು.
ತಾಯೆ ಚಿತ್ತೈಸರಮನೆಯ ಸೂ
ಳಾಯಿತನು ಬ೦ದೈದನೆನೆ ಕಮ
ಲಾಯತಾ೦ಬಕಿ ಚಿತ್ರಸೇನನ ಕರಸಿದಳು ನಗುತ |
ತಾಯೆಯೆನುತ ವಸ್ತ್ರಾಭರಣದ ಪ
ಸಾಯ ವಿತ್ತಳು ಪರಿಮಳದ ತವ
ಲಾಯಿಗಳ ನೂಕಿದಳು ವರ ಕತ್ತುರಿಯ ಕರ್ಪುರದ || ೯೯ ||
ಪದವಿಭಾಗ-ಅರ್ಥ: ತಾಯೆ ಚಿತ್ತೈಸು+ ಅರಮನೆಯ ಸೂಳಾಯಿತನು(ಸೂಳ್ =ಗಟ್ಟಿಯಾಗಿ ಕೂಗು;ಅಂಗರಕ್ಷಕ, ಕರೆದಾಗ ಬರುವವ, ರಾಜದೂತ, ಡಂಗುರ ಸಾರುವವ:-ಸಿರಿಗನ್ನಡ ಅರ್ಥಕೋಶ) ಬ೦ದೈದನೆನೆ ಕಮಲಾಯತಾ೦ಬಕಿ ಚಿತ್ರಸೇನನ ಕರಸಿದಳು ನಗುತ ತಾಯೆಯೆನುತ ವಸ್ತ್ರಾಭರಣದ ಪಸಾಯ(ಉಡುಗೊರೆ, ಬಹುಮಾನ, ಸಂಭಾವನೆ ) ವಿತ್ತಳು ಪರಿಮಳದ ತವಲಾಯಿಗಳ(ಕರ್ಪೂರವನ್ನು ಹಾಕಿ ಇರಿಸುವ - ಕರಂಡ, ಭರಣಿ) ನೂಕಿದಳು ವರ ಕತ್ತುರಿಯ ಕರ್ಪುರದ.
ಅರ್ಥ:ಊರ್ವಸಿಯ ಅರಮನೆಯ ದ್ವಾರಪಾಲಕನು ಊರ್ವಸಿಗೆ,'ತಾಯೆ ಕೇಳು ಅರಮನೆಯ ರಾಜದೂತನು ಬ೦ದಿದ್ದಾನೆ,' ಎನ್ನಲು ಆ ಕಮಲನೇತ್ರೆ ಊರ್ವಸಿ ಚಿತ್ರಸೇನನ್ನು ಕರಸಿದಳು. ಅವನು ತಾಯೆ, ಎನ್ನುತ್ತಾ ಸುದ್ದಿ ಹೇಳಲುತೊಡಗಿದಾಗ ಅವಳು, ಅವನಿಗೆ ನಗುತ್ತಾ ವಸ್ತ್ರಾಭರಣದ ಉಡುಗೊರೆಯನ್ನು ಕೊಟ್ಟಳು; ಮತ್ತು ಪರಿಮಳದ ಕರ್ಪೂರ ಹಾಕಿದ ಸುಂದರ (ತಾಂಬೂಲದ) ಭರಣಿಯನ್ನು ಅವನ ಕಡೆ ನೂಕಿದಳು.
ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯ ಗತಿಗಳ
ಕುಣಿಕೆಯ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ |
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆ೦
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ || ೧೦೦ ||
ಪದವಿಭಾಗ-ಅರ್ಥ: ಅಣಕವಲ್ಲ(ಕುಚೋದ್ಯ, ಅಲ್ಲಗಳೆ ಯುವುದು, ಹುಡುಗಾಟಿಕೆ)+ ಇದು ರಾಯನು+ ಅಟ್ಟಿದ(ಕಳಿಸಿದ) ಮಣಿಹವೋ(ರಾಜಾಜ್ಞೆಯೋ) ನಿಜಕಾರ್ಯ ಗತಿಗಳ ಕುಣಿಕೆಯ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ, ಗುಣಭರಿತ ಹೇಳೆನಲು ನಸುನಗೆ ಕುಣಿಯೆ ಮುಖದಲಿ, ಮಾನಿನಿಗೆ ವೆ೦ಟಣಿಸಿ(ನಮಸ್ಕರಿಸಿ,ವಂದಿಸಿ) ಲಜ್ಜಾಭರದಿ (ಬಹಳ ನಾಚಿಕೆಯಿಂದ) ನುಡಿದನು ದೂತನು+ ಈ ಮಾತ.
ಅರ್ಥ: ಊರ್ವಸಿಯು,'ನಿನ್ನದು ಹುಡುಗಾಟಿಕೆಯಲ್ಲ ಅಲ್ಲವೇ? ಇದು ದೇವೇಂದ್ರನು ಕಳಿಸಿದ ರಾಜಾಜ್ಞೆಯೇ? ನಿಜವಾದ ಕಾರ್ಯತಂತ್ರವೇನು? ಕಾರ್ಯತಂತ್ರದಿಂದ ಯಾರನ್ನು ಮೋಹದ ಕುಣಿಕೆಯ ಹಗ್ಗದಲ್ಲಿ ಸಿಕ್ಕಿಸಿ ಕೆಡವಬೇಕು? ನಿಮಗೆ ನಮ್ಮಲ್ಲಿಂದ ಆಗಬೇಕಾದ ಕರ್ತವ್ಯವಾವುದು? ಗುಣಭರಿತನೇ, ಹೇಳು,' ಎನ್ನಲು, ಚಿತ್ರಸೇನನಿಗೆ ಮುಖದಲ್ಲಿ ನಸುನಗೆಯು ಕುಣಿಯಿತು. ಮಾನಿನಿ ಊರ್ವಸಿಗೆ ಬಗ್ಗಿ ವಂದಿಸಿ, ಲಜ್ಜೆಯಿಂದ ದೂತನು ನುಡಿದನು ಈ ಮಾತನ್ನು ಹೇಳಿದನು.
ಎಮಗೆ ಮಗನರ್ಜುನನು ನೀನಿ೦
ದೆಮಗೆ ಸೊಸೆಯಹುದಾತನ೦ತ
ಸ್ಥಿಮಿರವನುಕಳೆ ನಿನ್ನ ಕುಚಯುಗಕಾ೦ತಿ ಲಹರಿಯಲಿ |
ಕಮಲಮುಖಿ ನೀ ಕಮಲವಾತನು
ಭ್ರಮರ ನೀ ಸುರವನದ ಸಿರಿಮಧು
ಸಮಯವರ್ಜುನನೆ೦ದು ಬೆಸಸಿದನಮರಪತಿಯೆ೦ದ || ೧೦೧ ||
ಪದವಿಭಾಗ-ಅರ್ಥ: ಎಮಗೆ ಮಗನು+ ಅರ್ಜುನನು, ನೀನು+ ಇ೦ದು+ ಎಮಗೆ ಸೊಸೆಯಹುದು+ ಆತನ+ ಅ೦ತಸ್ಥಿಮಿರವನು(ಅಂತರಂಗದ- ಮನಸ್ಸಿನ ಕತ್ತಲೆಯನ್ನು) ಕಳೆ(ಹೋಗಲಾಡಿಸು) ನಿನ್ನ ಕುಚಯುಗಕಾ೦ತಿ ಲಹರಿಯಲಿ(ಲಹರಿ= ರಭಸ, ಆವೇಗ, ಚಾಕಚಕ್ಯತೆ, ಚುರುಕು, ಕೌಶಲ್ಯ, ಚಮತ್ಕಾರ; ಎರಡು ಸುಂದರ ಕುಚಗಳ ಶೋಭೆಯ ಚಾಕಚಕ್ಯತೆಯಿಂದ), ಕಮಲಮುಖಿ, ನೀ ಕಮಲವು+ ಆತನು ಭ್ರಮರ(ಕಮಲದ ಮಧುವನ್ನು ಕುಡಿಯುವ ಜೇನುಹುಳ) ನೀ ಸುರವನದ- (ದೇವಲೋಕದ ನಂದನವನದ) ಸಿರಿಮಧು(ಉತ್ತಮ ಅಮೃತ) ಸಮಯವು+ ಅರ್ಜುನನು+ ಎ೦ದು ಬೆಸಸಿದನು(ಹೇಳಿದನು, ಆದೇಶಿಸಿದನು)+ ಅಮರಪತಿ+ ಯೆ+ ಎ೦ದ.
ಅರ್ಥ: ದೇವೇದ್ರನು ಹೇಳಿಕಳಿಸಿದ ಮಾತು ಏನೆಂದರೆ,'ನಮಗೆ ಅರ್ಜುನನು ಮಗನು. ನೀನು(ಊರ್ವಸಿಯು) ಇ೦ದು ನಮಗೆ ಸೊಸೆಯಾಗುವುದು. ಆತನ ಅಂತರಂಗದ ಮನಸ್ಸಿನ ವಿರಹ ಸಂಕಟವನ್ನು ಕಳೆಯುವುದು. ನಿನ್ನ ಎರಡು ಸುಂದರ ಕುಚಗಳ ಶೋಭೆಯ ಚಾಕಚಕ್ಯತೆಯಿಂದ ಅವನ ಮನಸ್ಸಿನ ವಿರಹಸಂಕಟವೆಂಬ ಕತ್ತಲೆಯನ್ನು ಕಳಯಬೇಕು; ಕಮಲಮುಖಿ, ನೀನು ಕಮಲವು, ಆತನು ಕಮಲದ ಮಧುವನ್ನು ಕುಡಿಯುವ ಭ್ರಮರ- ಜೇನುಹುಳ; ಊರ್ವಸಿಯೇ ನೀನು ದೇವಲೋಕದ ನಂದನವನದ ಸಿರಿಮಧುವಿದ್ದಂತೆ- ಅದರಲ್ಲಿ ವಿಹರಿಸುವ ಸಮಯವು ಅರ್ಜುನನಾಗಬೇಕು-'ಎ೦ದು ದೇವೇಂದ್ರನು ಬೆಸಸಿದನು,'ಎ೦ದ.
ಕೇಳುತವೆ ರೋಮಾ೦ಚ ಲಜ್ಜೆಯ
ಜೋಳಿಯೆಮ್ಮದು ಝೊ೦ಪಿಸಿತು ಪುಳ
ಕಾಳಿ ಭಯವನು ಪ೦ಟಿಸಿದುದನುರಾಗದಭಿಮಾನ |
ಮೇಲೆ ,ಮೇಲಭಿಲಾಷೆ ದೈರ್ಯವ
ಚಾಳವಿಸೆ ಪರಿತೋಷ ಪೂರಣ
ದೇಳುಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ || ೧೦೨ ||
ಪದವಿಭಾಗ-ಅರ್ಥ: ಕೇಳುತವೆ ರೋಮಾ೦ಚ ಲಜ್ಜೆಯ ಜೋಳಿಯ+ ಅಮ್ಮದು ಝೊ೦ಪಿಸಿತು ಪುಳಕ+ ಆಳಿ ಭಯವನು ಪ೦ಟಿಸಿದುದು(ಹರಟು, ವ್ಯರ್ಥಮಾಡು)+ ಅನುರಾಗದ+ ಅಭಿಮಾನ ಮೇಲೆ ,ಮೇಲೆ+ ಅಭಿಲಾಷೆ ದೈರ್ಯವ ಚಾಳವಿಸು ಪರಿತೋಷ ಪೂರಣದೇಳು ಮುಳುಗಾಯ್ತ+ ಉತ್ತರಕೆ ನಸುಬಾಗಿದಳು ಶಿರವ.
ಅರ್ಥ:ಊರ್ವಸಿಯು ರಾಜದೂತ ಚಿತ್ರಸೇನನು ಹೇಳಿದ ಇಂದ್ರನ ಸಂದೇಶವನ್ನು ಕೇಳುತ್ತಲು, ಅವಳು ರೋಮಾ೦ಚಗೊಂಡು, ಲಜ್ಜೆಯ ಜೋಲಿಯಲ್ಲಿ ಸಿಲುಕಿ ಝೊ೦ಪಿಸಿದಳು- ಓಲಾಡಿದಳು. ಅವಳ ಮೈ ಪುಳಕಗಳಿಂದ ಆವರಿಸಿ, ಭಯವನ್ನು ನಟಿಸಿತು. ಅನುರಾಗದ ಅಭಿಮಾನ ಮೇಲಿಂದ ಮೇಲೆ ಅಭಿಲಾಷೆ- ಬಯಕೆಯಾದರೂ ದೈರ್ಯವನ್ನು ಚಾಳಿಸಿತು- ಕುಂದಿಸಿತು. ಜುತೆಗೆ ಇದು ಇಂದ್ರನು ತನಗೆ ಕೊಟ್ಟ ಮಬುಮಾನ ಎಮದು ಭಾವಿಸಿ, ಆ ಪರಿತೋಷ ಪೂರಣದಲ್ಲಿ ಮುಳುಗಿಹೋದಳು. ಅವಳು ಉತ್ತರಸಲು ಚಿತ್ರಸೇನನ ಕಡೆ ತನ್ನ ತಲೆಯನ್ನು ಸ್ವಲ್ಪ ಬಾಗಿಸಿದಳು.
ಆತನುತ್ತಮ ನಾಯಕನು ವಿ
ಖ್ಯಾತೆ ನೀ ಸುರಲೋಕದಲಿ ಲ
ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ |
ಸೋತಡೆಯು ದಿಟ ಭ೦ಗವಲ್ಲ ಪು
ರಾತನದ ನಳ ನಹುಷ ಭರತ ಯ
ಯಾತಿ ನೃಪರೊಳಗೀತನಗ್ಗಳನಬಲೆ ಕೇಳೆ೦ದ || ೧೦೩ ||
ಪದವಿಭಾಗ-ಅರ್ಥ: ಆಗ ಚಿತ್ರಸೇನನು ಆತನು+ ಉತ್ತಮ ನಾಯಕನು; ವಿಖ್ಯಾತನು+ ಈ ಸುರಲೋಕದಲಿ ಲಜ್ಜಾತಿಶಯವೇಕೆ+ ಇಲ್ಲಿ ನಾವೇ ನಿಮ್ಮ ಪರಿವಾರ ಸೋತಡೆಯು ದಿಟ(ನಿಜವಾಗಿ) ಭ೦ಗವಲ್ಲ (ಅವಮಾನವಲ್ಲ)ಪುರಾತನದ ನಳ ನಹುಷ ಭರತ ಯಯಾತಿ ನೃಪರೊಳಗೆ+ ಈತನು+ ಅಗ್ಗಳನು(ಶ್ರೇಷ್ಠನು)+ ಅಬಲೆ ಕೇಳೆ೦ದ
ಅರ್ಥ: ಆಗ ಚಿತ್ರಸೇನನು ಹೇಳಿದ,'ಅಬಲೆಯೇ ಕೇಳು, ಆತನು ಉತ್ತಮ ನಾಯಕನು, ವಿಖ್ಯಾತನು, ಈ ಸುರಲೋಕದಲ್ಲಿ ಅತಿಶಯ ನಾಚಿಕೆಯೇಕೆ? ಇಲ್ಲಿ ನಾವೇ ನಿಮ್ಮ ಪರಿವಾರ- ಕುಟುಂಬ, ಭಯಬೇಡ, ನೀನು ಅವನಿಂದ ಸುರತಕ್ರೀಡೆಯಲ್ಲಿ ಸೋತುಹೋದರೂ ನಿಜವಾಗಿ ಅದು ಅವಮಾನವಲ್ಲ. ಪುರಾತನರಾದ ನಳ, ನಹುಷ, ಭರತ, ಯಯಾತಿ ನೃಪರಂತೆ ಈತನೂ ಸಹ ಶ್ರೇಷ್ಠನು,'ಎಂದ.
ರಾಯನಟ್ಟಿದ ನೇಮ ಗಡ ಕಮ
ನೀಯವಲ್ಲಾ ನಿನ್ನನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನು ಭಾವವಲೆ |
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ ೧೦೪ [೧][೨]
ಪದವಿಭಾಗ-ಅರ್ಥ: ರಾಯನು+ ಅಟ್ಟಿದ(ವೇಗವಾಗಿ ಕಳಿಸಿದ) ನೇಮ(ಆಜ್ಜೆ) ಗಡ ಕಮನೀಯವಲ್ಲಾ(ಮನೋಹರ, ಆನಂದಕರ) ನಿನ್ನ ನುಡಿ ರಮಣೀಯತರವು+ ಇದು ನಿನ್ನ ರಚನೆ, ಮಹಾನುಭಾವವಲೆ, ಆಯಿತು+ ಇದು ನೀ ಹೋಗು+ ಎನುತಲಿ+ ಅಬುಜಾಯತಾಕ್ಷಿ ಮಹೋತ್ಸವದಿ ನಾರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ (ಮನಸ್ಸಿನ ಗೋಡೆಯಲ್ಲಿ).
ಅರ್ಥ: ಊರ್ವಸಿ ಯೋಚಿಸಿ ಹೇಳಿದಳು,'ದೇವರಾಯ ಇಂದ್ರನು ಹೇಳಿಕಳಿಸಿದ ಆಜ್ಜೆ ಗಡ! ಕಮನೀಯವಾಗಿದೆಯಲ್ಲವೇ? ನಿನ್ನ ಮಾತು ಸಹ ಮನಸ್ಸಿಗೆ ಆನಂದಕೊಡುವ ತರದಲ್ಲಿದೆ. ಇದು ನಿನ್ನ ರಚನೆ- ವಿಧಾನ, ಮಹಾನುಭಾವನಲ್ಲವೇ ನೀನು! ಇದು ನೀನು ಹೇಳಿದ್ದು ಆಯಿತು- ಒಪ್ಪಿಗೆ. ನೀನು ಹೋಗು ಎಂದು ಹೇಳುತ್ತಾ ಕಮಲದ ಎಸಳಿನ ಅಗಲದ ಕಣ್ಣಿನ ಅವಳು ಮಹಾ ಉತ್ಸವದಿಂದ ನಾರಾಯಣನ ಮೈದುನನಾದ ಅರ್ಜುನನ ಚಿತ್ರವನ್ನು ಮನಸ್ಸಿನ ಗೋಡೆಯಲ್ಲಿ ಬರೆದಳು.
♠♠♠

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು