೪೬ / ವಾಗರ್ಥ
ಒಂದು ಹಾಡು, ಹೇಗೆ ವಿಸ್ತಾರವಾದ ಪಾತ್ರಚಿತ್ರಣಕ್ಕೆ, ಸಂಕೀರ್ಣವಾದ ನಾಟಕ ನಿರ್ಮಾಣಕ್ಕೆ ದಾರಿ ಮಾಡಿಕೊಡುವ ರೀತಿಗೆ ಒಂದೆರಡು ಉದಾ ಹರಣೆಗಳನ್ನು ನೋಡಬಹುದು. ಕರ್ಣಪರ್ವ ಪ್ರಸಂಗ (ಕವಿ : ಗೆರೆಸೊಪ್ಪೆ ಶಾಂತಪ್ಪಯ್ಯ), ಈ ಪದ್ಯವನ್ನು ಕರ್ಣಪರ್ವದ ಉತ್ತರಾರ್ಧ ದಲ್ಲಿ ಕರ್ಣನ ಪ್ರವೇಶದ ಪದ್ಯವಾಗಿ ತೆಗೆದುಕೊಳ್ಳುವುದು ಸಂಪ್ರದಾಯ.
ಏನನೆಂಬೆನು ಕರ್ಣತನಯನ | ಹಾನಿಯನ್ನು ಕಾಣುತ್ತ ಕೌರವ | ಸೇನೆ
ತಲೆಕೆಳಗಾಯ್ತು ಕುರುಪತಿ ದುಗುಡಮನನಾದ ||
ಈ ನೆರೆದ ಪರಿಭವವ ಕಾಣುತ | ತಾನೆ ರೋಷಾವೇಷದಿಂದಲಿ |
ಆ ನರನ ಸಮ್ಮುಖಕೆ ರಥವನು ಚಾಚಿದನು ಕರ್ಣ ||
ತನ್ನ ಮಗನಾದ ವೃಷಸೇನನ ಮರಣದಿಂದ ನೊಂದ ಕರ್ಣನು
ಅರ್ಜುನನ ಮುಂದೆ ರಥವನ್ನು ಚಾಚಿದನೆಂದು ತಿಳಿಸುವ ಈ ಪದ್ಯದಲ್ಲಿ
ಕಾವ್ಯದೃಷ್ಟಿಯಿಂದ ವಿಶೇಷವೇನೂ ಇಲ್ಲ. ಆದರೆ, ಇಲ್ಲಿ ಕರ್ಣನ
ಪಾತ್ರದ ಅರ್ಥದಾರಿ ತನ್ನ ಮಗನನ್ನು ಕೌರವನಿಗಾಗಿ ಬಲಿಗೊಡುವಲ್ಲಿ
ತನಗೆ ಬಂದ ಕೃತಕೃತ್ಯತೆ, ಜೊತೆಗೆ ಪುತ್ರಶೋಕದ ದ್ವಂದ್ವ, 'ಕುರುಪತಿ
ದುಗುಡಮನನಾದು'ದಕ್ಕೆ ತನಗಾದ ವ್ಯಥೆ, ಕರ್ಣ-ಕೌರವ ಸಂಬಂಧ,
ತನಗಾದ 'ಪರಿಭವ' ಬದುಕಿನ ಸೋಲು- ಯುದ್ಧದ ಸೋಲು ಆಗ
ದುಃಖಕ್ಕೆ ಬದಲಾಗಿ ಬರುವ ರೋಷ, ನರನ ಸಮ್ಮುಖಕೆ ರಥವನು
ಚಾಚುವುದು ಎಂದರೆ, ತನ್ನ ಬದುಕೇ ಅರ್ಜುನನಿಗೆ ಪ್ರತಿಸ್ಪರ್ಧಿಯಾಗಿ
ಬೆಳೆದ ರೀತಿ, ಜೊತೆಗೇ ಅರ್ಜುನನು ತನ್ನ ಸೋದರನೇ ಆಗಿರುವ ಸತ್ಯ-
ಹೀಗೆ ಪದ್ಯದ ಶಬ್ದಗಳನ್ನೆ ಬಳಸಿ, ಅದಕ್ಕೆ ಪಾತ್ರವನ್ನು ಹೊಂದಿಸಿ
ಶೋಧಿಸಿದರೆ, ಆಗ ಸಾಮಾನ್ಯವೆನಿಸುವ ಹಾಡಿನೊಳಗೆ ಅದ್ಭುತ ಶಕ್ತಿ
ಗೋಚರಿಸಿತು. "ಬಗೆದದ್ದು ತಾರೆ, ಉಳಿದದ್ದು ಆಕಾಶ” ಎಂದು ಕವಿ
ಅಡಿಗರು ಹೇಳಿದ ಹಾಗೆ. ಪದ್ಯ-ಅರ್ಥಗಳ ಈ ಬಗೆಯ ಅಭಿವ್ಯಕ್ತಿ
ಯನ್ನು ಸಾರ್ಥಕಗೊಳಿಸಲು ಅರ್ಥದಾರಿಗೆ ಕಥೆ, ಪಾತ್ರಗಳ
ಅನುಭವದೊಂದಿಗೆ, ತಾಂತ್ರಿಕ ಪರಿಣತಿಯೂ ಮುಖ್ಯವಾಗುತ್ತದೆ.
ಅದೇ ಪ್ರಸಂಗದ ಇನ್ನೊಂದು ಪದ್ಯ. ಸಂದರ್ಭ, ಅರ್ಜುನನು ಕರ್ಣನನ್ನು ಜರೆಯುವ ಸನ್ನಿವೇಶ :
ಎಲವೊ ಸೂತನ ಮಗನೆ | ನೀ | ಕಲಹದೊಳತಿ ಸಹಸಿಗನೆ |
ತಲೆಯನು ನೀಗಲಿಕಹುದು | ಮಾ | ರ್ಮಲೆತರೆ ಕಾಣಲುಬಹುದು ||