ಅರಣ್ಯಪರ್ವ: ೦೨. ಎರಡನೆಯ ಸಂಧಿ

ವಿಕಿಸೋರ್ಸ್ದಿಂದ

ಅರಣ್ಯಪರ್ವ: ೦೨. ಎರಡನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸಕಲ ಯದುಬಲ ಸಹಿತ ಭಕ್ತ

ಪ್ರಕರ ಪಾಲಕನೊಲವಿನಲಿ ಕಾ

ಮ್ಯಕ ಮಹಾಕಾನನಕೆ ಬಿಜಯಂಗೈದನುಸುರಾರಿ [೧]


ಅರಸ ಕೇಳೈ ದ್ವಾರಕಾಪುರ

ವರಕೆ ಬಂದುದು ವಾರ್ತೆ ಪೀತಾಂ

ಬರನ ಬಹಳಾಸ್ಥಾನದಲಿ ವರ್ತಿಸಿದುದಡಿಗಡಿಗೆ

ಧರೆಸಹಿತ ನಿಜವಸ್ತು ವಾಹನ

ಪರಮವಿಭವವ ಬಿಸುಟು ಭಾರಿಯ

ಪರಿಭವದಿ ನಟ್ಟಡವಿಯೊಕ್ಕರು ಪಾಂಡುಸುತರೆಂದು ೧


ಕೇಳಿ ತಲೆದೂಗಿದನು ಮೂಗಿನ

ಮೇಲುವೆರಳಿನ ಹೊತ್ತ ದುಗುಡದ

ತೂಳಿದಬ್ಬೆಯ ನಟ್ಟನೋಟದ ನೆಗ್ಗಿದುತ್ಸವದ

ಹೂಳಿದೂಹೆಯ ಹಿಳಿದ ನೆಗಹಿನ

ಹೇಳಲರಿದೆನೆ ಹುದಿದ ಭಾವದ

ಲಾಲಿಸಿದನುಸುರಾರಿ ದೂತವ್ರಜದ ಬಿನ್ನಪವ ೨


ಅಕಟ ಕಪಟ ದ್ಯೂತದಲಿ ನೃಪ

ಮುಕುರನುನ್ನತಿ ಮುರಿದುದೇ ಕೌ

ಳಿಕದಲೀ ಕೌರವರು ಕೊಂಡರೆ ಧರ್ಮಜನ ನೆಲನ

ಅಕುಟಿಲರಿಗೇಕಿದು ನಿರಾಬಾ

ಧಕರಿಗೇಕಿದು ಸಕಲ ಸುಜನ

ಪ್ರಕರ ವಂದ್ಯರಿಗೇಕೆನುತ್ತಸುರಾರಿ ಚಿಂತಿಸಿದ ೩


ಹಿರಿದು ಹರಿ ಚಿಂತಿಸಿದನೀ ವ್ಯತಿ

ಕರವನರಿಯದ ಮುಗುದರಿದನಾ

ರರಿವರೈ ವಿಶ್ವಂಭರಾ ಭಾರಾಪನೋದನಕೆ

ಧರಣಿಯಲಿ ಮೈಗೊಂಡು ದೈತ್ಯರ

ನೊರಸಿದನು ಬಳಿಕುಳಿದ ಪಾಂಡವ

ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳೆಂದ ೪


ಏನನೆಂಬೆನು ಜೀಯ ಕಡು ದು

ಮ್ಮಾನದಲಿ ಹೊರವಂಟು ಬಂದನು

ದಾನವಾಂತಕನೈದಿದವು ದಂಡಿಗೆಗಳರಸಿಯರ

ಆ ನಿಖಿಳ ನೃಪವರ್ಗ ಯಾದವ

ಸೇನೆ ಕವಿದುದು ಪಾಂಡುಪುತ್ರರ

ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ ೫


ಕೇಳಿದಾಗಳೆ ಬಂದರಾ ಪಾಂ

ಚಾಲ ಕೇಕಯ ಧೃಷ್ಟಕೇತು ನೃ

ಪಾಲ ಕುಂತೀಭೋಜ ಸೃಂಜಯ ಸೋಮಕಾದಿಗಳು

ಮೇಲೆ ಮೇಲೀ ನಾಲ್ಕು ದಿನದಲಿ

ಮೂಲೆಯರಸುಗಳಿವರ ಕಂಡುಪ

ಲಾಲಿಸಲು ಬರುತಿರ್ದರಾ ಕಾಮ್ಯಕ ವನಾಂತರಕೆ ೬


ಇವರು ಬಂದರು ನಿಖಿಳ ಭೂಸುರ

ನಿವಹ ಸಹಿತಿದಿರಾಗಿ ವರ ಬಾಂ

ಧವರೊಳಭಿವಂದ್ಯರಿಗೆ ತತ್ಸಮರಿಗೆ ಕನಿಷ್ಠರಿಗೆ

ಅವರಿಗವರವರುಚಿತ ಸತ್ಕಾ

ರವನು ಮಾಡಿ ಮುರಾರಿಯಂಘ್ರಿಯ

ನವಿರಳಾಶ್ರುಗಳಿಂದ ನಾದಿದರರಸ ಕೇಳೆಂದ ೭


ಬೇರೆ ಬೇರೈವರನು ತೆಗೆದು ಮು

ರಾರಿಯಪ್ಪಿದನಡಿಗಡಿಗೆ ದೃಗು

ವಾರಿಗಳನೊರಸಿದನು ಪೀತಾಂಬರದ ಸೆರಗಿನಲಿ

ಸಾರು ಸಾರೆನಲುಗ್ಗಡಣೆಯ ವಿ

ಕಾರವಿನ್ನೇಕೆನುತ ರಾಯನ

ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ ೮


ಒರಲಿದಳು ದೆಸೆಯೊಡನೊರಲೆ ಮಿಗೆ

ಹೊರಳಿದಳು ಹರಿ ಪಾದದಲಿ ಮೈ

ಮರೆದಳಂಗನೆ ತನುವ ಮುಸುಕಿದ ಕೇಶಪಾಶದಲಿ

ಕರಗಿದಳು ಕಂದಿದಳು ಮಮ್ಮಲ

ಮರುಗಿ ಕರುಗಂದಿದಳು ದೃಗು ಜಲ

ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ ೯


ಹಿಂದೆ ಸೆಳೆಸೀರೆಯಲಕಟ ಗೋ

ವಿಂದ ರಕ್ಷಿಸನಾಥನಾಥ ಮು

ಕುಂದ ಕಾಯೈ ಕೃಷ್ಣ ರಕ್ಷಿಸು ಕರುಣಿಸಸುರಾರಿ

ಇಂದಿರಾಪತಿಯೇ ಯಶೋದಾ

ನಂದನನೆ ಕಾರುಣ್ಯನಿಧಿ ಸಲ

ಹೆಂದರುಳುಹಿದ ದೈವ ನೀ ಮೈದೋರಿದೈ ತನಗೆ ೧೦


ಶ್ರುತಿಗಳಿಗೆ ಮೈದೋರೆ ಸುಪತಿ

ವ್ರತೆಯರಿಗೆ ಗೋಚರಿಸೆ ಯತಿ ಸಂ

ತತಿಯ ನಿರ್ಮಳ ಸಾರ ಸಮ್ಯಜ್ಞಾನ ದೀಧಿತಿಗೆ

ಮತಿಗೊಡದ ಮಹಿಮಾಂಬುನಿಧಿಯೆನ

ಗತಿಶಯವನೇ ಮಾಡಿ ಲಜ್ಜಾ

ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ೧೧


ಪೆಸರುಗೊಂಡರೆ ಹಿಂದೆ ಬಂದು

ಬ್ಬಸದ ಭಾರ ವ್ಯಸನವನು ಹಿಂ

ಗಿಸಿದೆ ಸಾಕ್ಷಾದ್ದೃಷ್ಟ ದರುಶನವೇನನಿತ್ತಪುದೊ

ಹೆಸರುಗೊಳಲರಿಯದೆ ಮನೋವಾ

ಗ್ವಿಸರ ಮರಳಿದ ತರ್ಕ ನಿಗಮ

ಪ್ರಸರಣದ ಪರದೈವ ನೀ ಮೈದೋರಿದೈ ತನಗೆ ೧೨


ಪತಿಗಳಿವರಂಜಿದರು ಧರ್ಮ

ಸ್ಥಿತಿಯನರಿದವರಳುಕಿದರು ತ

ತ್ಪಿತೃ ಪಿತಾಮಹ ಗುರುಗಳಡಗಿದರವನಿಯಲಿ ಬಗಿದು

ಗತಿವಿಹೀನೆಗೆ ಕೃಷ್ಣ ನೀನೇ

ಗತಿಯೆನುತ ಬಾಯ್ಬಿಡಲು ಲಜ್ಜಾ

ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ೧೩


ದಾನ ಯಜ್ಞ ತಪೋವ್ರತಾನು

ಷ್ಠಾನ ನಿಷ್ಠರು ಕಾಣರಷ್ಟ ವಿ

ಧಾನ ಯೋಗದ ಸಿದ್ಧರರಿಯರು ನಿನ್ನ ಸುಳಿವುಗಳ

ಜ್ಞಾನಮಧ್ಯ ತ್ರಿಪುಟಿಯನು ಸಂ

ಧಾನ ರಹಿತ ಜ್ಞಪ್ತಿರೂಪನು

ತಾನೆನಿಪ ಪರಬೊಮ್ಮ ನೀ ಮೈದೋರಿದೈ ತನಗೆ ೧೪


ಕಾಯಿದೈ ಪ್ರಹ್ಲಾದ ಮಾರ್ಕಂ

ಡೇಯ ವನಗಜವಂಬರೀಷನ

ಕಾಯಿದೈ ಕಾರುಣ್ಯದಲಿ ಪಾತಕಿಯಜಾಮಿಳನ

ಕಾಯಿದೈ ಗೋವಿಂದಯೆನೆ ತ

ನ್ನಾಯತಿಕೆಯಭಿಮಾನವನು ನೀ

ಕಾಯಿದೈ ಹರಿಯೆನುತ ಪದದಲಿ ಹೊರಳಿದಳು ತರಳೆ ೧೫


ಏಳು ತಾಯೆ ಸರೋಜಮುಖಿ ಪಾಂ

ಚಾಲೆ ನೊಂದೌ ತಂಗಿಯೆನುತ ಕೃ

ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ

ಮೇಲು ಮುಚ್ಚಳ ತೆರೆದ ತನುವಿನ

ಹೇಳಿಗೆಯ ಶೋಕಾಹಿಯಂತಿರೆ

ಲೋಲಲೋಚನೆಯಳಲು ಮಿಗೆ ಹೆಕ್ಕಳಿಸಿತಡಿಗಡಿಗೆ ೧೬


ಆ ಸಕಲ ಪರಿವಾರವಾ ಧರ

ಣೀಶರಾ ಮುನಿ ನಿಕರವಾ ಜನ

ವಾ ಸತೀ ನಿಕುರುಂಬವಾ ಗಜ ಘೋಟಕ ವ್ರಾತ

ಆ ಸರೋಜಾನನೆಯ ಬಹಳ

ಕ್ಲೇಶಗಳ ಕಂಡಕ್ಷಿಜಲ ವಾ

ರಾಸಿಯಲಿ ತೇಕಾಡುತಿರ್ದುದು ರಾಯ ಕೇಳೆಂದ ೧೭


ಮುಡಿಯ ಸಂವರಿಸಬಲೆ ಸೀರೆಯ

ನುಡು ನವಾಂಬರವಿದೆ ವಿರೋಧವ

ಬಿಡು ಸುಯೋಧನ ರಾಜಸಂತತಿಯುರಿದುದಿನ್ನೇನು

ಕೆಡಿಸಿಕೊಂಡರು ನಾಯ್ಗಳಿನ್ನದ

ನುಡಿದು ಫಲವೇನಕಟ ಕೈಕೊಂ

ಡಡವಿಯನುಭವ ಸವೆಯೆ ಸೈರಿಪುದೆಂದನಸುರಾರಿ ೧೮


ತುರುಬು ಕಟ್ಟುವ ಹದನ ನಿಮ್ಮಡಿ

ಯರಿಯದೆಂಬೆನೆ ಸಕಲ ಸಚರಾ

ಚರದ ಚೇತನರೂಪ ದೇಹಿ ನಿಕಾಯ ಕೃತಸಾಕ್ಷಿ

ತೈದು ದುಶ್ಯಾಸನನ ವಕ್ಷದೊ

ಳೊರೆವ ರಕುತದೊಳದ್ದಿ ಕಟ್ಟುವ

ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ ೧೯


ಐಸಲೇ ದುರ್ಯೋಧನಾದಿಗ

ಳೇಸರವದಿರು ಭೀಮ ಪಾರ್ಥರ

ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ

ದೂಸಕನ ರಕ್ತದಲಿ ನಿನ್ನಯ

ಕೇಶವನು ಕಟ್ಟಿಸುವೆ ನಿನ್ನಯ

ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ ೨೦


ವರ ತಪಸ್ವಿನಿ ನೀನು ನಿನ್ನನು

ಕೆರಳಿಚಿದರೇ ಕುನ್ನಿಗಳು ಮಿಗೆ

ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ

ಕುರುಡನರಿಯದೆ ಹೋದರೆಯು ಕಂ

ಗುರುಡಾದರೆ ಭೀಷ್ಮ ವಿದುರಾ

ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ ೨೧


ಶಕುನಿ ಕಲಿಸಿದ ಕಪಟವೇ ಕೌ

ಳಿಕದ ಜೂಜಿದು ನಿಮ್ಮನೀ ಕಾ

ಮ್ಯಕಕೆ ತಂದುದು ಜೂಜಿನಲಿ ತಾನಿಲ್ಲಲೇಯೆನಲು

ಸಕಲ ಜೀವರ ಕರ್ಣಸಾಕ್ಷಿ

ಪ್ರಕರ ಚೈತನ್ಯ ಸ್ವರೂಪಾ

ತ್ಮಕನು ನೀನಲ್ಲಿಲ್ಲ ಹುಸಿಯಲ್ಲೆಂದಳಿಂದುಮುಖಿ ೨೨


ದೇವಿ ತಾನಿದನರಿದೊಡಾ ವಸು

ದೇವನಾಣೆ ಮಹಾದ್ಭುತವನದ

ನೇವೊಗಳ್ವೆನು ಯದುನೃಪಾಲ ವಿಪತ್ಪರಂಪರೆಯ

ನೀವು ಮಾಡಿದ ಯಜ್ಞ ಮುಖದ ವ

ಳಾವಳಿಯೊಳಾವಿರಲು ಮುತ್ತಿತು

ದೇವರಿಪುಬಲ ನಿಕರವಸ್ಮದ್ದ್ವಾರಕಾಪುರಿಯ ೨೩


ಲಗ್ಗೆಗಳುಕುವುದಲ್ಲಲೇ ಬಲು

ದುರ್ಗಮದು ದುರ್ಭೇದವವರೊಳ

ಗಗ್ಗಳೆಯರಿದ್ದುದು ಹಲಾಯುಧ ಮನ್ಮಥಾದಿಗಳು

ಬಗ್ಗಿ ಕವಿವ ಕಠೋರ ದೈತ್ಯರ

ನುಗ್ಗುನುರಿ ಮಾಡಿದರು ಹರಣದ

ಸುಗ್ಗಿ ಮೆರೆದುದು ಮಾರ್ಬಲದೊಳಬುಜಾಕ್ಷಿ ಕೇಳೆಂದ ೨೪


ಅಳುಕಿ ಮುತ್ತಿಗೆದೆಗೆದು ಸಾಲ್ವನ

ದಳ ಮುರಿದು ನಿಜಪುರಕೆ ಹಾಯ್ವುದು

ಗೆಲವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು

ಬಳಿಕ ನಿಮ್ಮಯ ರಾಜಸೂಯಕೆ

ಕಳಶವಿಟ್ಟು ಮದೀಯ ನಗರಿಯ

ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ ೨೫


ಏನನೆಂಬೆನು ಸಾಲ್ವಪುರದ ನ

ವೀನ ಮಾಯಾರಚನೆಯನು ನಮ

ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ

ದಾನವನ ಮಾಯಾಪುರದ ಸಂ

ಸ್ಥಾನ ವರ್ಮವನರಿದು ಶರ ಸಂ

ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ ೨೬


ಅತ್ತಲಾ ಕೋಳಾಹಳದಲಿರ

ಲಿತ್ತಲಾದುದು ಜೂಜು ನಿಮ್ಮ ವಿ

ಪತ್ತು ಕಂಡುದು ತೆರಹ ತಪ್ಪಿಸಿ ನಮ್ಮ ಸುಳಿವುಗಳ

ಇತ್ತಲಾವಿರೆ ಮೇಣು ದೋರಕಿ

ಯತ್ತಲಿರೆ ನೀವಡವಿವೊಕ್ಕರೆ

ಹೆತ್ತಳೋ ದೇವಕಿ ಮಗನನೆಂದನು ಮುರಧ್ವಂಸಿ ೨೭


ಮಗನ ಕರೆದರೆ ಯಮನ ದೂತರ

ತಗುಳುವಂದು ಸಮೀಪವರ್ತಿಯೆ

ನಗಧರ ಶ್ರೀಕಾಂತ ಸಲಹೆನೆ ಮುನಿ ಕುಮಾರಕನ

ಉಗುಳಿಚಿದೆಲಾ ಮೃತ್ಯುವಿನ ತಾ

ಳಿಗೆಯೊಳಂದು ಸಮೀಪವರ್ತಿಯೆ

ಜಗದುದರ ನೀ ಜಾಣನಹೆಯೆಂದಳು ಸರೋಜಮುಖಿ ೨೯


ಆಯಿತೇಳೌ ತಂಗಿ ನೀ ಪಿರಿ

ದಾಯಸವನನುಭವಿಸಲುದಿಸಿದೆ

ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ

ವಾಯುತನುಜನ ಕೈಯಲೇ ನಿ (ಪಾ: ನೀ)

ನ್ನಾಯತಿಕೆಯಹುದಾ ಪ್ರತಿಜ್ಞೆಗೆ

ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ ೩೦


ಸಂತವಿಟ್ಟನು ಬೇರೆ ಬೇರೆ ಕೃ

ತಾಂತಸುತ ಭೀಮಾದಿಗಳ ಮುನಿ

ಸಂತತಿಯ ಮನ್ನಿಸಿದನವರವರುಚಿತ ವೃತ್ತಿಯಲಿ

ಎಂತು ಹದಿಮೂರಬುದವೀ ನೃಪ

ಸಂತತಿಗೆ ಸೌಹಾರ್ದವಕಟ ವ

ನಾಂತರದೊಳೆಂದಸುರರಿಪು ನುಡಿದನು ಯುಧಿಷ್ಠಿರಗೆ ೩೧


ಕಳುಹುವುದು ಸೌಭದ್ರೆಯನು ನಿಜ

ಲಲನೆಯರನವರವರ ತಾಯ್ವನೆ

ಗಳಿಗೆ ಬೀಳ್ಕೊಡು ನಿಮ್ಮ ಪಂಚದ್ರೌಪದೀಸುತರ

ಹಳುವ ದಾಟಲಿ ದ್ರುಪದ ನಂದನೆ

ಯಳಲ ಶಿಖಿಗಿಂಧನವಲೇ ಕುರು

ಕುಲದ ಕರಡದ ಬಣಬೆ ಕಾದುರುಹುವುದು ಕೇಳೆಂದ ೩೨


ಎಂದು ಕಳುಹಿ ಸುಭದ್ರೆಯನು ನರ

ನಂದನನ ಬೀಳ್ಕೊಡಿಸಿದನು ನೃಪ

ನಂದನರ ಕಳುಹಿಸಿದನಾ (ಪಾ: ಕಳುಹಿದನಾ) ಪಾಂಚಾಲ ನೃಪನೊಡನೆ

ಇಂದುವದನೆಯ ಸಂತವಿಟ್ಟು ಮು

ಕುಂದ ರಥವೇರಿದನು ಕುಂತೀ

ನಂದನರು ಕಳುಹುತ್ತ ಬಂದರು ಕಮಲಲೋಚನನ ೩೩


ಬೀಳುಗೊಂಡರು ಕೃಷ್ಣನನು ಪಾಂ

ಚಾಲಪತಿಯನು ಪಂಚ ಕೇಕಯ

ಚೋಳ ಕೇರಳ ಪಾಂಡ್ಯ ಕುಂತೀಭೋಜ ನಂದನರ

ಬೀಳುಕೊಟ್ಟರು ಧೃಷ್ಟಕೇತು ನೃ

ಪಾಲ ಮೊದಲಾದಖಿಳ ಧರಣೀ

ಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ ೩೪


ಸಂತವಿಸಿ ಪಾಂಡುವರನಾ ಮುನಿ

ಸಂತತಿಯ ಮನ್ನಿಸಿ ಮಹೀಭಾ

ರಾಂತರವ ನಿಶ್ಚಯಿಸಿ ಭಾರತ ಪಾರಿಶೇಷಕವ

ಅಂತಕಾಂತಕ ನಲವು ಮಿಗೆ ಜಗ

ದಂತರಂಗಸ್ಥಾಯಿ ಲಕ್ಷ್ಮೀ

ಕಾಂತ ಬಿಜಯಂಗೈದು ಹೊಕ್ಕನು ದೋರಕಾಪುರಿಯ ೩೫

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.