ಕರ್ಣಪರ್ವ: ೦೨. ಎರಡನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಎರಡನೆಯ ಸಂಧಿ[ಸಂಪಾದಿಸಿ]

ಸೂ : ಭೀಮ ವಿಕ್ರಮಕುರುಬಲದೊಳು
ದ್ಧಾಮ ಕರ್ಣಾಹವದೊಳಗ್ಗದ
ಕ್ಷೇಮಧೂರ್ತಿ ನೃಪಾಲಕನ ಕೆಡಹಿದನು ಕಲಿಭೀಮ||

ಮಗನು ದಳಪತಿಯಾದ ಗಡ ಕಾ
ಳೆಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯೆ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ ೧

ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳಕೋಟಿಗಳುದಯದಲಿ ದಿಗು
ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ
ತೂಳುವರೆಗಳ ರಾಯ ಗಿಡಗನ
ಘೋಳ ಘೋರದ ಘೋಷವವನಿಯ
ಸೀಳೆ ನಡೆದುದು ಸೇನೆ ರವಿನಂದನನ ನೇಮದಲಿ ೨

ಮೋಹರಿಸಿತಿದು ನಡೆದು ಮಕರ
ವ್ಯೂಹದಲಿ ಬಳಿಕರ್ಧಚಂದ್ರ
ವ್ಯೂಹದಲಿ ಬಂದೊಡ್ಡಿ ನಿಂದುದು ಪಾಂಡುಸುತಸೇನೆ
ಮೋಹರಿಸಲೊಡವೆರಸಿ ಹೊಯ್ದರು
ಗಾಹುಗತಕವನುಳಿದು ಚೂಣಿಯ
ಸಾಹಸಿಗರು ಸನಾಮರೊದಗಿದರೆರಡು ಥಟ್ಟಿನಲಿ ೩

ಹೊಯ್ದು ಮುಗ್ಗಿತು ಭಟರು ವೆಗ್ಗಳ
ಕೈದುಕಾರರು ತಲೆಗೆ ಸಂದರು
ಮೈದೆಗೆಯದೊಡವೆರಸಿ ಹೊಕ್ಕರು ಬೇಹಬೇಹವರು
ಕೊಯ್ದ ಕೊರಳಿನ ಕೊರೆದ ತೋಳಿನ
ಹಾಯ್ದ ಮೂಳೆಯ ಸುರಿವ ಕರುಳಿನ
ಲೆಯ್ದೆ ಪಡೆಗೇರಾಯ್ತು ಚೂಣಿಯ ಚಾತುರಂಗದಲಿ ೪

ಇಂದು ಬರಹೇಳರ್ಜುನನ ರಣ
ವಿಂದಲೇ ಭೀಮಂಗೆ ಮನದಲಿ
ಕಂದು ಕಸರಿಕೆ ಬೇಡ ಕಾದಲಿ ಧರ್ಮನಂದನನು
ಹಿಂದೆ ನಂಬಿಸಿ ಭೀಷ್ಮಗುರುವನು
ಕೊಂದ ಗೆಲುವಿನಲುಬ್ಬ ಬೇಡೆಮ
ಗಿಂದು ದಳವಾಯ್ ಕರ್ಣನೆಂದುದು ಭಟರು ಬೊಬ್ಬಿರಿದು ೫

ತೇರು ಬಿಟ್ಟವು ಸೂಠಿಯಲಿ ಜ
ಜ್ಝಾರ ರಾವ್ತರು ವಾಘೆ ಸರಿಸದ
ಲೇರಿದರು ಕಾರ್ಮುಗಿಲ ಬಲವೆನೆ ಕವಿದವಾನೆಗಳು
ಆರಿದರೆ ನೆಲ ಬಿರಿಯೆ ಬೆರೆಸಿತು
ಪೌರಕರು ಸಬಳಿಗರು ಬಿಲ್ಲಿನ
ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ ೬

ಮುರಿಯದಹಿತರ ಥಟ್ಟು ನಮ್ಮದು
ತೆರಹುಗೊಡದೌಂಕಿತ್ತು ದೊರೆಗಳು
ಹೊರಗೆ ಲಗ್ಗೆಯ ಮಾಡಿ ತೋರಿದರೊಡನೆ ಪಡಿಬಲವ
ಉರುಬಿದರು ವೃಷಸೇನ ಸೌಬಲ
ಗುರುಜ ಕೃಪ ಕೃತವರ್ಮ ದುರ್ಮುಖ
ವರ ವಿಕರ್ಣ ಕ್ಷೇಮಧೂರ್ತಿ ಬೃಹದ್ರಥಾದಿಗಳು ೭

ಸೂತಸುತ ದಳಪತಿಯೆ ಫಡ ಮು
ಯ್ಯಾಂತರೇ ಮುಂಬಿಗರು ಬಿರುದಿನ
ಬೂತುಗಳ ಬೊಬ್ಬಾಟ ಬಿಡದೇ ಕಂಡು ಕಾಣರಲ
ಸೋತ ಸಮರದ ಕೇಣಿಕಾರರು
ಕೂತರೋ ಜಯಸಿರಿಗೆ ಹೊಯ್ ಹೊ
ಯ್ಯೀತಗಳನೆನುತೇರಿದರು ಪಾಂಡವ ಮಹಾರಥರು ೮

ನೂಕಿತೊಂದೇ ವಾಘೆಯಲಿ ರಥ
ನಾಕು ಸಾವಿರ ಬಲುಗುದುರೆ ಹದಿ
ನಾಕು ಸಾವಿರ ನೂರು ಕರಿಘಟೆ ಲಕ್ಕ ಪಾಯದಳ
ಜೋಕೆ ಜವಗೆಡೆ ಮುರಿವಡೆದು ಬಲ
ದಾಕೆವಾಳರು ಸರಿಯೆ ಸೋಲದ
ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ ೯

ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರಗಜಸಹಿತ ೧೦

ತರಿಸಿ ಲೋಹದ ಜತ್ತರಟ್ಟವ
ಹರಹಿದರು ಸೂಲಿಗೆಯ ಬಂಡಿಯ
ನಿರಿಸಿದರು ಕೆಲಬಲದ ಕಡೆಯಲಿ ಸಬಳಿಗರ ನಿಲಿಸಿ
ತುರಗ ರಥ ಬಿಲ್ಲಾಳನೊತ್ತಾ
ಗಿರಿಸಿ ಲಗ್ಗೆಯ ಲಹರಿಯಲಿ ಮೋ
ಹರಿಸಿದರು ಪಾಂಚಾಲ ಕೈಕೆಯರವರ ಥಟ್ಟಿನಲಿ ೧೧

ನೀಡಿ ಬರಿಕೈಗಳಲಿ ಸೆಳೆದೀ
ಡಾಡಿದವು ಬಂಡಿಗಳನೌಕಿದ
ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ
ಹೂಡು ಜಂತ್ರದ ಜತ್ತರಟ್ಟವ
ನಾಡಲೇತಕೆ ಹಿಂದಣೊಡ್ಡನು
ಝಾಡಿಸಿದವೀ ಕ್ಷೇಮಧೂರ್ತಿ ನೃಪಾಲನಾನೆಗಳು ೧೨

ರಾಯದಳ ಕಳವಳಿಸೆ ಗಜಘಟೆ
ಘಾಯಘಾಯಕೆ ನೆಲನ ಕೊಂಡವು
ಹಾಯಿದವು ರಥ ಹಯವ ಸೆಳೆದವು ಹೊದರ ಹರೆಗಡಿದು
ನಾಯಕರ ಕಡೆನುಡಿವ ಬೈಗುಳ
ಬಾಯ ಬೊಬ್ಬೆಯ ಕೈಯ ಹೊಯ್ಗುಳ
ದಾಯಿಗರಲೇ ಎನುತ ಮೂದಲಿಸಿದನು ತಮ್ಮೊಳಗೆ ೧೩

ಕೆದರಿತರನೆಲೆ ರಾಯ ಥಟ್ಟನು
ಕೆದರಿಸಿದವಾನೆಗಳು ಹಗೆಗಳ
ಮದಮುಖಕೆ ಮಾರೊಡ್ಡ ಮೆರೆದರೆ ಪೂತುರೇ ಎನುತ
ತುದಿವೆರೆಳ ತುಟಿಯುಬ್ಬರಕೆ ಗಜ
ಬೆದರೆ ಗಜರೋಹಕರ ಗರ್ಜಿಸಿ
ಗದೆಯ ತಿರುಹುತ ಹೊಕ್ಕನಿವರೊಡ್ಡಿನಲಿ ಕಲಿಭೀಮ ೧೪

ಗರುಡನೂರವರೆರೆವರೇ ನಾ
ಗರಿಗೆ ತನಿಯನು ಭೀಮಸೇನನ
ಬಿರುದಿನೋಲೆಯಕಾರರೇನಂಜುವರೆ ಮಾರ್ಬಲಕೆ
ಕರಿಘಟೆಯ ಕೆದರಿದರು ಕೇಣದ
ಧುರವ ಬಲ್ಲರೆ ಗಜದ ಕರುಳಲಿ
ಕರುಳ ತೊಡಕಲು ಬಿದ್ದುವೈಸಾವಿರ ಮಹಾರಥರು ೧೫

ಮುಂಗುಡಿಯ ಮುರಿದೌಕಿ ಭೀಮಂ
ಗಂಘವಿಸಿದನು ಕ್ಷೇಮಧೂರ್ತಿ ಮ
ತಂಗಜದ ಮೇಲೆಸುತ ಬಲು ನಾರಾಚ ಸೋನೆಯಲಿ
ಅಂಘವಣೆಯಹುದೋ ಮಹಾದೇ
ವಂಗೆ ನೂಕದು ಪೂತು ಮಝರೆಯ
ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ ೧೬

ಮೇಲುವಾಯ್ದಾ ರೋಹಕರ ಹಿಂ
ಗಾಲ ಹಿಡಿದೀಡಾಡಿ ರಿಪುಗಜ
ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು
ಘೀಳಿಡುವ ಕರಿ ಕೆದರಲಂಕುಶ
ವಾಳೆ ನೆತ್ತಿಯನಗೆದು ದಂತಿಯ
ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ ೧೭

ಇದು ವಿನೋದವಲೇ ಮದೀಯಾ
ಭ್ಯುದಯವಿದಲೇ (ಪಾ: ಭ್ಯುದಯವಿದಲೆ) ನಮ್ಮ ಕೋಪವ
ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ
ಸದೆಗ ನೀ ಸಾರೆಲೆವೊ ಭಾರಿಯ
ಮದಗಜದ ಬಡಿಹೋರಿ ಹೋಗೆನು
ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ ೧೮

ಆಗಲೀ ನಾಲಗೆಯ ಸಾಲವ
ನೀಗ ಕೈಯಲಿ ತಿದ್ದಿ ಕೊಡುವರೆ
ಹೋಗದೇ ಹೊತ್ತಿಹವೆ ಹೇಳೆನುತೆಚ್ಚನಾ ಭೀಮ
ಆಗಳಾವುದು ನೆಲನು ನಭ ದಿಗು
ಭಾಗವೆಲ್ಲಿಯದೆನಲು ಕಣೆಗಳ
ತೂಗಿ ತುರುಗಿದವರಿಭಟನ ಕರಿಘಟೆಯ ಮೈಗಳಲಿ ೧೯

ಸರಳ ಮಳೆಯಲಿ ನನೆದು ಕರಿಘಟೆ
ಯುರುಳಿದವು ಕಲ್ಪಾಂತವರುಷದೊ
ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು
ಎರಡು ಸೀಳಾಯ್ತವನ ಕರಿ ಧರೆ
ಗಿರದೆ ದೊಪ್ಪನೆ ಹಾಯ್ದು ಖಾತಿಯೊ
ಳುರವಣಿಸಿದನು ಕ್ಷೇಮಧೂರ್ತಕ ಸೆಳೆದಡಾಯುಧದಿ ೨೦

ಕುಣಿದು ಪುಟನೆಗೆದರಿ ಗಜನ ಹೊ
ಯ್ದಣೆದು ಹಿಂಗದ ಮುನ್ನ ತಲೆ ಮೇ
ಲಣಿಗೆ ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು
ಬಣಗು ನೀನಕಟಕಟ ಭೀಮನ
ಕೆಣಕಿ ಬದುಕಿದೆಯೆನುತಲಪ್ಸರ
ಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ ೨೧
 

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಕರ್ಣಪರ್ವ: ಸಂಧಿಗಳು>: ೧೦ ೧೧ ೧೨ ೧೩ ೧೪
೨೬ ೨೭ -೦೦-

ಪರ್ವ[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ