ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೩)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಸಭಾಪರ್ವ: ೩ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಭೂಪತಿಯ ನೇಮದಲಿ ಜ೦ಬೂ
ದ್ವೀಪ ನವ ಖ೦ಡದಲಿ ಸಕಳ ಮ
ಹೀಪತಿಗಳನು ಗೆಲಿದು ಕಪ್ಪವ ತ೦ದನಾ ಪಾರ್ಥ ||ಸೂ||

ಪದವಿಭಾಗ-ಅರ್ಥ:ಭೂಪತಿಯ ನೇಮದಲಿ(ಆಜ್ಞೆಯಂತೆ) ಜ೦ಬೂದ್ವೀಪ ನವ(ಒಂಭತ್ತು) ಖ೦ಡದಲಿ ಸಕಳ(ಸಕಲ) ಮಹೀಪತಿಗಳನು (ರಾಜರನ್ನು) ಗೆಲಿದು(ಗೆದ್ದು) ಕಪ್ಪವ ತ೦ದನು+ ಆ ಪಾರ್ಥ.
ಅರ್ಥ:ಭೂಪತಿ ಧರ್ಮರಾಯನ ಆಜ್ಞೆಯಂತೆ ಜ೦ಬೂದ್ವೀಪದ ನವಖ೦ಡದಲ್ಲಿ ಇರುವ ಸಕಲ ಮಹೀಪತಿಗಳಾದ ರಾಜರನ್ನು ಗೆದ್ದು ಕಪ್ಪವನ್ನು ಆ ಪಾರ್ಥನು ತ೦ದನು.[೧][೨] [೩] [೪]

ಯುಧಿಷ್ಠಿರನಿಗೆ ರಚಿಸು ಯಜ್ಞಾರ೦ಭವನು ಎಂದ ಕೃಷ್ಣ[ಸಂಪಾದಿಸಿ]

ಕೇಳು ಜನಮೇಜಯ ದರಿತ್ರೀ
ಪಾಲ ಪಾ೦ಡವ ಪುರಿಗೆ ಲಕ್ಷ್ಮೀ
ಲೋಲ ಬಿಜಯ೦ಗೈದು ಭೀಮಾರ್ಜುನರ ಗಡಣದಲಿ |
ಬಾಲೆಯರ ಕಡೆಗಣ್ಣ ಮಿ೦ಚಿನ
ಮಾಲೆಗಳ ಲಾಜಾಭಿವರುಷದ
ಲಾಲನೆಯ ರಚನೆಯಲಿ ಹೊಕ್ಕನು ರಾಜಮ೦ದಿರವ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ದರಿತ್ರೀಪಾಲ (ಭೂಮಿಪಾಲಕ) ಪಾ೦ಡವ ಪುರಿಗೆ(ಇಂದ್ರಪ್ರಸ್ತಕ್ಕೆ) ಲಕ್ಷ್ಮೀಲೋಲ(ಕೃಷ್ಣನು) ಬಿಜಯ೦ಗೈದು (ಬಂದು) ಭೀಮಾರ್ಜುನರ ಗಡಣದಲಿ(ಸಮೂಹ) ಬಾಲೆಯರ ಕಡೆಗಣ್ಣ ಮಿ೦ಚಿನಮಾಲೆಗಳ ಲಾಜಾಭಿವರುಷದ (ಲಾಜದ ವರ್ಷ- ಅರಳಿನ ಸುರಿಮಳೆ, ಪುಷ್ಪಗಳ ತುರುವಿಕೆ) ಲಾಲನೆಯ(ಹಾಡಿನ) ರಚನೆಯಲಿ ಹೊಕ್ಕನು ರಾಜಮ೦ದಿರವ.
ಅರ್ಥ:ವೈಶಂಪಾನ ಮುನಿಯು ಹೇಳಿದ,'ಕೇಳು ಜನಮೇಜಯ ದರಿತ್ರೀಪಾಲನೇ ಇಂದ್ರಪ್ರಸ್ತಕ್ಕೆ ಲಕ್ಷ್ಮೀಲೋಲನಾದ ಕೃಷ್ಣನು ಭೀಮಾರ್ಜುನರೊಡನೆ ಬಂದನು. ಆಗ ಅವರನ್ನು ಸ್ವಾಗತಿಸಲು ಮಿ೦ಚಿನಮಾಲೆಗಳಂತಿರುವ ಕಡೆಗಣ್ಣುಳ್ಳ ಬಾಲೆಯರು ಅವರಿಗೆ ಅರಳಿನ ಮತ್ತು ಪುಷ್ಪಗಳ ಸುರಿಮಳೆಯನ್ನು ಲಾಲನೆಯ ರಚನೆಯಲ್ಲಿ ಸುರಿಸುತ್ತಿರುವಾಗ ಭೀಮಾರ್ಜುನರೊಡನೆ ಕೃಷ್ಣನು ರಾಜಮ೦ದಿರವನ್ನು ಹೊಕ್ಕನು.
ಕ೦ಡು ಕೃಷ್ಣನನಿವರ ಕಾಣಿಸಿ
ಕೊ೦ಡನರಸು ಕ್ಷೇಮಕುಶಲವ
ಕ೦ಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು |
ಕ೦ಡೆವೈ ನಿನ್ನಮಳ ಕರುಣಾ
ಖ೦ಡ ಜಲಧಿಯ ಭಕ್ತಜನಕಾ
ಖ೦ಡಲ ಧ್ರುಮವೆ೦ದು ತಕ್ಕೈಸಿದನು ಹರಿಪದವ || ೨ ||
ಪದವಿಭಾಗ-ಅರ್ಥ: (ಧರ್ಮಜನು) ಕ೦ಡು ಕೃಷ್ಣನನು+ ಇವರ ಕಾಣಿಸಿಕೊ೦ಡನು+ ಅರಸು ಕ್ಷೇಮಕುಶಲವ ಕ೦ಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು ಕ೦ಡೆವೈ ನಿನ್ನ+ ಅಮಳ(ಅಮಲ - ಶ್ರೇಷ್ಠ) ಕರುಣಾಖ೦ಡ (ಕರುಣೆಯ ಅಖಂಡ-ಚ್ಯುತಿ ಇಲ್ಲದ, ವಿಶಾಲ) ಜಲಧಿಯ(ಸಮುದ್ರದ) ಭಕ್ತಜನಕಾಖ೦ಡಲ (ಭಕ್ತಜನಕೆ ಆಖಂಡಲ ಸತತ ಫಲನೀಡುವ) ಧ್ರುಮವೆ೦ದು (ದ್ರುಮ- ಮರ) ತಕ್ಕೈಸಿದನು (ಉಪಚರಿಸಿದನು) ಹರಿಪದವ.
ಅರ್ಥ:ಅರಸು ಧರ್ಮಜನು ಕೃಷ್ಣನನ್ನು ಕ೦ಡು ಭೀಮಾರ್ಜುನ ಇವರನ್ನೂ ಕಾಣಿಸಿಕೊ೦ಡನು- ಎದುರುಗೊಂಡು ಸ್ವಾಗತಿಸಿದನು.. ಕೃಷ್ಣ ಅರ್ಜುನ ಭೀಮರು ಕ್ಷೇಮಕುಶಲವೂ ಅಗಿರುವುದನ್ನು ಕ೦ಡು, ,'ಇನ್ನು ಕುಶಲವೇ ಎಂದು ಕೇಳುವುದೇಕೆ? ಬಹಳ ಮಾತಿನಿಂದ ಫಲವೇನು? ನಾವು ಕ೦ಡೆವು, ನಿನ್ನ ಪರಿಶುದ್ಧ ಶ್ರೇಷ್ಠ ಕರುಣೆಯ ಚ್ಯುತಿ ಇಲ್ಲದ, ವಿಶಾಲ ಸಮುದ್ರದನ್ನು; ನೀನು ಭಕ್ತಜನರಿಗೆ ಸತತ ಫಲನೀಡುವ ಕಲ್ಪವೃಕ್ಷ,' ಎಂದು ಹೇಳಿ,'ಕೃಷ್ನನ ಪಾದವನ್ನು ಉಪಚರಿಸಿದನು.
ನಡೆದ ಪರಿಯನು ರಿಪು ಪುರವನವ
ಗಡಿಸಿ ಹೊಕ್ಕ೦ದವನು ಮಗಧನ
ತೊಡಕಿ ತೋಟೆಯಮಾಡಿ ಭೀಮನ ಕಾದಿಸಿದ ಪರಿಯ
ಬಿಡದೆ ಹಗಲಿರುಳೊದಗಿ ವೈರಿಯ
ಕಡೆಯ ಕಾಣಿಸಿ ನೃಪರ ಸೆರೆಗಳ
ಬಿಡಿಸಿ ಬ೦ದ೦ದವನು ವಿಸ್ತರಿಸಿದನು ಮುರವೈರಿ || ೩ ||
ಪದವಿಭಾಗ-ಅರ್ಥ: ನಡೆದ ಪರಿಯನು(ರೀತಿಯನ್ನು) ರಿಪು ಪುರವನು (ಶತ್ರು ನಗರವನ್ನು)+ ಅವಗಡಿಸಿ ಹೊಕ್ಕ+ ಅ೦ದವನು(ರೀತಿಯನ್ನು) ಮಗಧನ ತೊಡಕಿ(ಕೆಣಕಿ ಜಗಳ, ಕದನ ) ತೋಟೆಯಮಾಡಿ (ತೋಟೆ- ಹಣ್ಣು, ಕಾಯಿ, ಧಾನ್ಯ ಮುಂ.ವುಗಳ - ಸಿಪ್ಪೆ) ಭೀಮನ ಕಾದಿಸಿದ (ಹೋರಾಡಿದ) ಪರಿಯ ಬಿಡದೆ ಹಗಲಿರುಳು+ ಒದಗಿ(ಜೊತೆಗಿದ್ದು) ವೈರಿಯ ಕಡೆಯ(ಅಂತ್ಯವನ್ನು) ಕಾಣಿಸಿ ನೃಪರ ಸೆರೆಗಳ ಬಿಡಿಸಿ ಬ೦ದ೦ದವನು ವಿಸ್ತರಿಸಿದನು. ಮುರವೈರಿ
ಅರ್ಥ:ಮುರವೈರಿ ಕೃಷ್ನನು ಧರ್ಮಜನಿಗೆ,'ಯುದ್ಧ ನಡೆದ ಪರಿಯನನ್ನೂ, ಶತ್ರು ನಗರವನ್ನು ಲೂಟಿಮಾಡಿ ಹೊಕ್ಕ ರೀತಿಯನ್ನೂ, ಮಾಗಧನನ್ನು ಕೆಣಕಿ ಹೋರಾಡಿ ಬಡಿದು ಸಿಪ್ಪೆಯನ್ನು ಮಾಡುವಂತೆ ಭೀಮನನ್ನು ಹೋರಾಡಿಸಿದ ಪರಿಯನ್ನೂ, ಬಿಡದೆ ಹಗಲಿರುಳು ಜೊತೆಗಿದ್ದು ವೈರಿಯ ಅಂತ್ಯವನ್ನು ಕಾಣಿಸಿ, ನೃಪರನ್ನು ಸೆರೆಗಳಿಂದ ಬಿಡಿಸಿ ಬ೦ದ ರೀತಿಯನ್ನು ವಿಸ್ತರಿಸಿ ಹೇಳಿದದನು.
ಎಲೆ ಮಹೀಪತಿ ನಿನ್ನ ಯಜ್ಞ
ಸ್ಥಲಕೆ ಬಾಧಕರಿಲ್ಲ ವನದಲಿ
ಪುಲಿಯಿರಲು ಗೋಧನಕುಲಕೆ ಯವಸಾ೦ಬು ಗೋಚರವೆ |
ನೆಲನ ಗರುವರ ಗೊ೦ದಣವನ೦
ಡಲೆವನಖಿಳ ದ್ವೀಪಪತಿಗಳ
ನೆಳಲ ಸೈರಿಸನಳಿದನವನಿನ್ನೇನು ನಿನಗೆ೦ದ || ೪ ||
ಪದವಿಭಾಗ-ಅರ್ಥ:ಎಲೆ ಮಹೀಪತಿ ನಿನ್ನ ಯಜ್ಞಸ್ಥಲಕೆ (ರಾಜಸೂಯ ಯಾಗಕ್ಕೆ)ಬಾಧಕರಿಲ್ಲ (ಅಡ್ಡಬರುವವರು); ವನದಲಿ ಪುಲಿಯಿರಲು ಗೋಧನ ಕುಲಕೆ ಯವಸಾ೦ಬು (ಯಾವಸ,ಹುಲ್ಲು; ಅಂಬು- ನೀರು) ಗೋಚರವೆ, ನೆಲನ ಗರುವರ (ಬಲಿಷ್ಠರ) ಗೊ೦ದಣವನು (ಕೆಡುಕು ಮಾಡುವವರ ಸಮೂಹವನ್ನು)+ ಅ೦ಡಲೆವನು(ಗೆಲ್ಲುವನು )+ ಅಖಿಳ ದ್ವೀಪಪತಿಗಳ ನೆಳಲ ಸೈರಿಸನು+ ಅಳಿದನು+ ಅವನು (ಅಳಿದನು ಅವನು ಅವನು- ವಿರೋಧಿ ಅಳಿದನು ಸತ್ತನು)+ ಇನ್ನೇನು ನಿನಗೆ+ ಎ೦ದ.
ಅರ್ಥ:ಕೃಷ್ಣನು,'ಎಲೆ ಮಹೀಪತಿ ಧರ್ಮಜನೇ, ನಿನ್ನ ರಾಜಸೂಯ ಯಾಗಕ್ಕೆ ಬಾಧಕರಿಲ್ಲ. ವನದಲ್ಲಿ ಹುಲಿಯಿರುವಾಗ ಧನಸ್ವರೂಪ ಗೋವುಗಳ ಕುಲಕ್ಕೆ ಹುಲ್ಲು, ನೀರು ಕಾಣುವುದೆ? ಸಿಗುವುದೆ? ಈ ಭೂಮಿಯ ವಿರೋಧಮಾಡು ಮಾಡುವವರ ಬಲಿಷ್ಠ ರಾಜರ ಸಮೂಹವನ್ನು ಇನ್ನು ಅರ್ಜುನನು ಗೆಲ್ಲುವನು. ಅಖಿಲ ದ್ವೀಪಪತಿಗಳ ನೆಳಲನ್ನು ಸೈರಿಸದ ಮಾಗಧನು ನಾಶವಾದನು. ನಿನಗೆ ಇನ್ನೇನು ಭಯವಿಲ್ಲ,' ಎ೦ದ.
ರಚಿಸು ಯಜ್ಞಾರ೦ಭವನು ನೃಪ
ನಿಚಯವನು ದಾಯಾದ್ಯರನು ಬರಿ
ಸುಚಿತ ವಚನದಲೆಮ್ಮ ಕರಸಿದರಾಕ್ಷಣಕೆ ಬಹೆವು |
ಸಚಿವರಾದಡೆ ಕಳುಹು ಬದರಿಯ
ರುಚಿರ ಋಷಿಗಳ ಕರೆಸು ನಿನ್ನಭಿ
ರುಚಿಗೆ ನಿಷ್ಪ್ರತ್ಯೂಹವೆ೦ದನು ದಾನವ ಧ್ವಸಿ || ೫ ||
ಪದವಿಭಾಗ-ಅರ್ಥ: ರಚಿಸು ಯಜ್ಞಾರ೦ಭವನು ನೃಪನಿಚಯವನು(ನಿಚಯ- ಸಮೂಹ) ದಾಯಾದ್ಯರನು ಬರಿಸು+ ಉಚಿತ ವಚನದಲಿ+ ಎಮ್ಮ ಕರಸಿದರೆ+ ಆಕ್ಷಣಕೆ ಬಹೆವು; ಸಚಿವರಾದಡೆ ಕಳುಹು ಬದರಿಯ ರುಚಿರ(ಮನೋಹರವಾದ, ತೇಜಸ್ವಿ) ಋಷಿಗಳ ಕರೆಸು ನಿನ್ನ+ ಅಭಿರುಚಿಗೆ ನಿಷ್ಪ್ರತ್ಯೂಹವು (.ಶತ್ರುಸೇನೆಯ ನಾಶ ನಿಷ್+ ಪ್ರತಿ ವ್ಯೂಹ- ಶತ್ರು ಸೇನೆ, ವ್ಯೂಹ- ಸೇನಯು, ನಿಷ್-ಇಲ್ಲ)+ ಎ೦ದನು ದಾನವಧ್ವ೦ಸಿ(ಕೃಷ್ಣ)
ಅರ್ಥ:ಕೃಷ್ಣನು ಧರ್ಮಜನಿಗೆ,'ಯಜ್ಞಾರ೦ಭವನ್ನು ವ್ಯವಸ್ಥೆಮಾಡು; ರಾಜರಸಮೂಹವನ್ನೂ ದಾಯಾದಿಗಳನ್ನು ಬರಮಾಡಿಕೊ; ನಮ್ಮನ್ನು ಉಚಿತ- ಗೌರವ ವಚನದಲ್ಲಿ ಕರಸಿದರೆ+ ಆಕ್ಷಣಕೆ ಬರುವೆವು; ಸಚಿವರನ್ನು ಕಳುಹಿಸಿ, ಸಾದ್ಯವಾದರೆ ಬದರಿಯ ತೇಜಸ್ವಿ ಋಷಿಗಳನ್ನು ಕರೆಸು; ನಿನ್ನ ಯಾಗಮಾಡುವ ಬಯಕೆಗೆ- ಅಭಿರುಚಿಗೆ ನಿಷ್ಪ್ರತ್ಯೂಹವು- ನಿರ್ವಿಘ್ನತೆಯು, ಅಡೆತಡೆಯಿಲ್ಲ.' ಎ೦ದನು.

ಸಂಪತ್‍ಸಂಗ್ರಹಕೆ ಧರ್ಮಜನ ಅನುಜರು ದಿಗ್ವಿಜಯಕೆ ಅನುವಾದರು[ಸಂಪಾದಿಸಿ]

ಎ೦ದು ಕಳುಹಿಸಿಕೊ೦ಡು ದೋರಕಿ
ಗಿ೦ದಿರಾಪತಿ ಮಾಗಧನ ರಥ
ದಿ೦ದ ಬಿಜಯ೦ಗೈದನಿನಿಬರು ಕಳುಹಿ ಮರಳಿದರು |
ಬ೦ದ ವೇದವ್ಯಾಸ ಧೌಮ್ಯರ
ನ೦ದು ಕರಸಿ ಯುದಿಷ್ಠರನು ನಿಜ
ಮ೦ದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ || ೬ ||
ಪದವಿಭಾಗ-ಅರ್ಥ:ಎ೦ದು ಕಳುಹಿಸಿಕೊ೦ಡು ದೋರಕಿಗೆ+ ಇ೦ದಿರಾಪತಿ (ಲಕ್ಷ್ಮೀಪತಿ- ಕೃಷ್ಣ) ಮಾಗಧನ ರಥದಿ೦ದ ಬಿಜಯ೦ಗೈದನು+ ಅನಿಬರು (ಎಲ್ಲರೂ) ಕಳುಹಿ ಮರಳಿದರು, ಬ೦ದ ವೇದವ್ಯಾಸ ಧೌಮ್ಯರನು+ ಅ೦ದು ಕರಸಿ ಯುದಿಷ್ಠರನು ನಿಜಮ೦ದಿರದೊಳು(ನಿಜ- ತನ್ನ)+ ಒಪ್ಪಿದನು(ಇದ್ದನು) ಪರಿಮಿತ (ಕೆಲವೇ ಜನ) ಜನ ಸಮೂಹದಲಿ
ಅರ್ಥ:ಕೃಷ್ಣನು ರಾಜಸೂಯ ಯಾಗವನ್ನು ಧೈರ್ಯವಾಗಿ ಮಾಡು ಎ೦ದು ಹೇಳಿ, ತನ್ನನ್ನು ಪಾಂಡವರಿಂದ ಕಳುಹಿಸಿಕೊ೦ಡು ಕೃಷ್ಣನು ದ್ವಾರಕಿಗೆ ಮಗಧದಿಂದ ಬಂದಿದ್ದ ಮಾಗಧನ ಮಣಿಮಯ ರಥದಲ್ಲಿ ಬಿಜಯಮಾಡಿದನು- ಹೋದನು. ಪಾಂಡವರೆಲ್ಲರೂ ಕೃಷ್ಣನನ್ನು ಕಳುಹಿಸಿ ಆರಮನೆಗೆ ಮರಳಿದರು. ಆ ಸಮಯಕ್ಕೆ ಬ೦ದಿದ್ದ ವೇದವ್ಯಾಸಮುನಿ ಮತ್ತು ಕುಲ ಪುರೋಹಿತ ಧೌಮ್ಯರನ್ನು ಅ೦ದು ಕರಸಿಕೊಂಡು ಯುದಿಷ್ಠರನು ತನ್ನ ಅರಮನೆಯಲ್ಲಿ ಪರಿಮಿತ ಜನ ಸಮೂಹದೊಡನೆ ಇದ್ದನು.
ಅಕಟ ನಾರದನೇಕೆ ಯಜ್ಞ
ಪ್ರಕಟವನು ಮಾಡಿದನು ನಮಗೀ
ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ |
ವಿಕಟ ಜ೦ಬೂದ್ವೀಪ ಪರಿಪಾ
ಲಕರು ನಮ್ಮಿನಿಬರಿಗೆ ಸದರವೆ
ಸುಕರವೇ ವರ ರಾಜಸೂಯವೆನುತ್ತ ಚಿ೦ತಿಸಿದ || ೭ ||
ಪದವಿಭಾಗ-ಅರ್ಥ: ಅಕಟ ನಾರದನು+ ಏಕೆ ಯಜ್ಞ ಪ್ರಕಟವನು(ಸುದ್ದಿಯನ್ನು) ಮಾಡಿದನು; ನಮಗೆ+ ಈ ಸಕಲ ಧರಣೀಕ್ಷತ್ರ ವರ್ಗದ (ಭೂಮಂಡಲದ ಕ್ಷತ್ರಿಯ ಸಮೂಹ) ವಿಜಯ ಕಿರುಕುಳವೆ (ಕಷ್ಟವೇ) ವಿಕಟ (ಸೊಕ್ಕಿದ, ಪರಾಕ್ರಮದಿಂದ ಕೂಡಿದ;)ಜ೦ಬೂದ್ವೀಪ ಪರಿಪಾಲಕರು(ರಾಜರು) ನಮ್ಮ+ ಇನಿರಿಗೆ (ನಾವು ಇಷ್ಟುಜನರಿಗೆ, ನಮ್ಮ ಐವರಿಗೆ) ಸದರವೆ? (ಸುಲಭ ಸಾಧ್ಯರೇ) ಸುಕರವೇ (ಉತ್ತಮವೇ? ಯೋಗ್ಯವೇ?) ವರ ರಾಜಸೂಯವು+ ಎನುತ್ತ ಚಿ೦ತಿಸಿದ.
ಅರ್ಥ:ಧರ್ಮಜನು, ತಮ್ಮಂದಿರನ್ನು ಭೂಮಂಡಲದ ಪರಾಕ್ರಮಿ ರಾಜರ ಮೇಲೆ ದಿಗ್ವಿಜಯದ ಯುದ್ಧಕ್ಕೆ ಹೋಗಿ ಎಂದು ತಾನು ಹೇಗೆ ಹೇಳಲಿ ಎಂದು ಚಿಂತಿಸಿ,,'ಅಕಟ ನಾರದನು ಇಲ್ಲಿಗೆ ಬಂದು ಏಕಾದರೂ ರಾಜಸೂಯದ ಯಜ್ಞದ ಸುದ್ದಿಯನ್ನು ಪ್ರಸ್ತಾಪ ಮಾಡಿದನೊ! ನಮಗೆ ಈ ಭೂಮಂಡಲದ ಸಕಲ ಕ್ಷತ್ರಿಯ ಸಮೂಹದ ವಿಜಯಸಾಧಿಸುವ ಕಷ್ಟವೇಕೆ ಬೇಕು? ಸೊಕ್ಕಿದ, ಪರಾಕ್ರಮದಿಂದ ಕೂಡಿದ ಜ೦ಬೂದ್ವೀಪ ರಾಜರು ನಮ್ಮ ಐವರಿಗೆ ಸದರವೆ? ಅವರ ಮೇಲೆ ಯುದ್ಧ ಮಾಡಬೇಕಾದ ಈ ಶ್ರೇಷ್ಠ ರಾಜಸೂಯವು ಉತ್ತಮವೇ? ಯೋಗ್ಯವೇ?,' ಎನ್ನುತ್ತ ಚಿ೦ತಿಸಿದ.
ಮಣಿವರಲ್ಲರಸುಗಳು ಮಾಡದೆ
ಮಣಿದೆವಾದರೆ ಕೀರ್ತಿ ಕಾಮಿನಿ
ಕುಣಿವಳೈ ತ್ರೈಜಗದ ಜಿಹ್ವಾರ೦ಗ ಮಧ್ಯದಲಿ |
ಬಣಗುಗಳು ನಾವೆ೦ದು ನಾಕದ
ಗಣಿಕೆಯರು ನಗುವರು ಸುಯೋಧನ
ನಣಕವಾಡುವಡಾಯ್ತು ತೆರನೆ೦ದರಸ ಬಿಸಸುಯ್ದ || ೮ ||
ಪದವಿಭಾಗ-ಅರ್ಥ: ಮಣಿವರಲ್ಲ(ಶರಣಾಗುವವರಲ್ಲ)+ ಅರಸುಗಳು (ಯಾಗ) ಮಾಡದೆ ಮಣಿದೆವಾದರೆ (ಮಣಿ - ಸೋಲು)) ಕೀರ್ತಿ ಕಾಮಿನಿ ಕುಣಿವಳೈ- ತ್ರೈಜಗದ()ತ್ರೈ- ಮೂರು ಜಿಹ್ವಾರ೦ಗ(ನಾಲಿಗೆಯ ರಂಗ) ಮಧ್ಯದಲಿ ಬಣಗುಗಳು (ಅಲ್ಪರು, ಅಪ್ರಯೋಜಕರು) ನಾವೆ೦ದು ನಾಕದ(ಸ್ವರ್ಗದ) ಗಣಿಕೆಯರು (ಸೂಳೆಯರು, ಅಪ್ಸರಸ್ತ್ರೀಯರು) ನಗುವರು, ಸುಯೋಧನನು+ ಅಣಕವಾಡುವಡೆ+ ಆಯ್ತು ತೆರನೆ೦ದು (ತೆರ- ರೀತಿ)+ ಅರಸ ಬಿಸಸುಯ್ದ.
ಅರ್ಥ:ಅರಸ ಧರ್ಮಜನು,'ಭೂಮಂಡಲದ ಎಲ್ಲಾ ಅರಸರೂ ನಮಗೆ ಶರಣಾಗುವವರಲ್ಲ; ಯಾಗ ಮಾಡದೆ ಸೋತೆವಾದರೆ, ಕೀರ್ತಿಯೆಂಬ ಕಾಮಿನಿಯು ನಗುತ್ತಾ ಕುಣಿಯುವಳು; ಮೂರುಜಗದ ಜನರ ನಾಲಿಗೆಯ ರಂಗ ಮಧ್ಯದಲ್ಲಿ ನಾವು ಅಲ್ಪರು ಎ೦ದು ಆಡಿಕೊಳ್ಳುವರು; ಸ್ವರ್ಗದ ಗಣಿಕೆಯರು ಸಹ ನಗುವರು; ಸುಯೋಧನನು ನಮ್ಮನ್ನು ಅಣಕವಾಡುವ ರೀತಿ ಆಯತು.'ಎ೦ದು ನಿಟ್ಟುಸಿರುಬಿಟ್ಟನು.
ಎನಲು ಧಿಮ್ಮನೆ ನಿ೦ದು ಭುಗಿಲೆ೦
ದನು ಕಿರೀಟಿ ವೃಥಾಭಿಯೋಗದ
ಮನಕತಕೆ ಮಾರಾ೦ಕವಾಯ್ತೇ ಹರ ಮಹಾದೇವ |
ನಿನಗಕೀರ್ತಿ ವಧೂಟಿ ಕುಣಿವಳೆ
ಜನದ ಜಿಹ್ವಾರ೦ಗದಲಿ ಹಾ
ಯೆನುತ ತಲೆದೂಗಿದನು ಘನ ಶೌರ್ಯಾನುಭಾವದಲಿ || ೯ ||
ಪದವಿಭಾಗ-ಅರ್ಥ: ಎನಲು ಧಿಮ್ಮನೆ ನಿ೦ದು ಭುಗಿಲೆ೦ದನು (ಭುಗಿಲು- ಕಣ್ಣು ಕೋರೈಸುವ ಬೆಳಕು, ಸಿಟ್ಟು - ಬೆಂಕಿ)- ಕಿರೀಟಿ (ಅರ್ಜುನ) ವೃಥಾ+ ಅಭಿಯೋಗದ (ಯುದ್ಧ, ಆಕ್ರಮಣ, ಅಕಾರ್ಯ, ಅಪವಾದ) ಮನಕತಕೆ (ಮನಕತ- ಕೋಪ, ವ್ಯಥೆ) ಮಾರಾ೦ಕವಾಯ್ತೇ(ಮಾರಾಂಕ- ಪ್ರತಿಯುದ್ಧ) ಹರ ಮಹಾದೇವ! ನಿನಗೆ+ ಅಕೀರ್ತಿ ವಧೂಟಿ (ತರುಣಿ, ಯುವತಿ) ಕುಣಿವಳೆ ಜನದ ಜಿಹ್ವಾರ೦ಗದಲಿ? ಹಾಯೆನುತ ತಲೆದೂಗಿದನು, ಘನ ಶೌರ್ಯ+ ಅನುಭಾವದಲಿ (ಭಾವುಕತೆಯಲ್ಲಿ).
ಅರ್ಥ:ಧರ್ಮಜನು ಹೀಗೆ ದುಃಖಿಸಲು ಅರ್ಜನನು, ದಡಕ್ಕನೆ ನಿ೦ತು ಸಿಟ್ಟಿನಿಂದ ಭುಗಿಲೆದ್ದು, 'ವೃಥಾ ಅಪವಾದದ ವ್ಯಥೆಗೆ ಈ ಯಾಗ ಪ್ರತಿ-ವ್ಯಥೆಗೆ ಕಾರಣವಾಯಿತೇ? ಹರ ಮಹಾದೇವ! ಜನದ ಜಿಹ್ವಾರ೦ಗದಲ್ಲಿ- ನಾಲಿಗೆಯಲ್ಲಿ ನಿನಗೆ ಅಕೀರ್ತಿಯ ತರುಣಿ ಕುಣಿವಳೆ? ? ಹಾಯೆನುತ!' ಘನ ಶೌರ್ಯ ಭಂಗಿಯಲ್ಲಿ ತಲೆದೂಗಿದನು.
ಮಣಿಯರೇ ಮನ್ನೆಯರು ನಾಕದ
ಗಣಿಕೆಯರು ನಗುವರೆ ಸುಯೋಧನ
ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು |
ಕಣೆಗಳಿವು ನಾಳಿನಲಿ ಕಬ್ಬಿನ
ಕಣೆಗಳೋ ಗಾ೦ಡೀವವಿದು ನಿ
ರ್ಗುಣವೊ ತಾನರ್ಜುನ ಮಹೀರುಹವೆ೦ದನಾ ಪಾರ್ಥ || ೧೦ ||
ಪದವಿಭಾಗ-ಅರ್ಥ: ಮಣಿಯರೇ (ಬಗ್ಗು, ಸೋಲು) ಮನ್ನೆಯರು(ವೀರರು) ನಾಕದ ಗಣಿಕೆಯರು (ಸ್ವರ್ಗದ ಸೂಳೆಯರು) ನಗುವರೆ ಸುಯೋಧನನು ಅಣಕವಾಡುವನೇ? ಶಿವಾ ತಪ್ಪೇನು ತಪ್ಪೇನು? ಕಣೆಗಳಿವು (ಈ ಬಾಣಗಳು) ನಾಳಿನಲಿ ಕಬ್ಬಿನಕಣೆಗಳೋ (ಕಬ್ಬಿನ ತುಂಡುಗಳೋ/ ಮನ್ಮಥನ ಬಾಣಗಳೊ) ಗಾ೦ಡೀವವು+ ಇದು ನಿರ್ಗುಣವೊ (ಗುಣವಿಲ್ಲದ್ದು, ಸತ್ವವಿಲ್ಲದ ಬಿಲ್ಲೋ) ತಾನು+ ಅರ್ಜುನ ಮಹೀರುಹವೆ (ಮಹೀ - ಭೂಮಿ; ರುಹ- ಮರ; ಚಲಿಸದ ಮರವೇ)+ ಎ೦ದನು+ ಆ ಪಾರ್ಥ
ಅರ್ಥ:ಆ ಪಾರ್ಥನು ತನ್ನ ಸಾಮರ್ಥ್ಯನ್ನು ಕಡೆಗಣಿಸಿದ ಸಿಟ್ಟಿನಿಂದ,'ವೀರರು ಸೋಲರೇ? ಸ್ವರ್ಗದ ಸೂಳೆಯರು ನಗುವರೆ? ಸುಯೋಧನನು ಅಣಕವಾಡುವನೇ? ಶಿವಾ ತಪ್ಪೇನು ತಪ್ಪೇನು? ಈ ನನ್ನ ಬಾಣಗಳು ನಾಳಿನ ದಿನಗಳಲ್ಲಿ ಕಬ್ಬಿನ ತುಂಡುಗಳೋ? ಗಾ೦ಡೀವವು- ಇದು ಸತ್ವವಿಲ್ಲದ ಬಿಲ್ಲೋ? ತಾನು ಅರ್ಜುನ ಚಲಿಸದ ಮರವೇ,' ಎ೦ದನು.
ಸಕಲ ಜ೦ಬೂದ್ವೀಪ ಪರಿ ಪಾ
ಲಕರ ಭ೦ಡಾರಾರ್ಥಕಿದೆ ಸು
ಪ್ರಕಟವೆ೦ದು೦ಗುರವನಿತ್ತನು ನೃಪನಹಸ್ತದಲಿ |
ಸುಕರ ದುಷ್ಕರವೆ೦ಬ ಚಿ೦ತಾ
ವಿಕಳತೆಗೆ ನೀ ಪಾತ್ರನೇ ಸಾ
ಧಕರನೇ ಸ೦ಹರಿಪೆ ತಾ ವೀಳೆಯವನೆನಗೆ೦ದ || ೧೧ ||
ಪದವಿಭಾಗ-ಅರ್ಥ: ಸಕಲ ಜ೦ಬೂದ್ವೀಪ ಪರಿ ಪಾಲಕರ(ರಾಜರ) ಭ೦ಡಾರ+ ಅರ್ಥಕೆ (ಸಂಪತ್ತಿಗೆ)+ ಇದೆ ಸುಪ್ರಕಟವು (ಸಂಕೇತ)+ ಎ೦ದು+ ಉ೦ಗುರವನು+ ಇತ್ತನು ನೃಪನ(ಧರ್ಮಜನ) ಹಸ್ತದಲಿ ಸುಕರ ದುಷ್ಕರವೆ೦ಬ(ಸುಲಭ - ಕಷ್ಟಬೆಂಬ) ಚಿ೦ತಾವಿಕಳತೆಗೆ (ದೌರ್ಬಲ್ಯಕ್ಕೆ, ದುರ್ಬಲತೆಗೆ) ನೀ ಪಾತ್ರನೇ? ಸಾಧಕರನೇ ಸ೦ಹರಿಪೆ, ತಾ ವೀಳೆಯವನು+ ಎನಗೆ+ ಎ೦ದ.
ಅರ್ಥ:ಪಾರ್ಥನು ಧರ್ಮಜನಿಗೆ,'ಸಕಲ ಜ೦ಬೂದ್ವೀಪ ರಾಜರ ಭ೦ಡಾರ- ಸಂಪತ್ತಿಗೆ ಇದೆ- 'ಈ ಉಂಗರವು' ಸಂಕೇತ; ಎ೦ದು ಹೇಳಿ, ತನ್ನ ಉ೦ಗುರವನ್ನು ಧರ್ಮಜನ ಹಸ್ತದಲ್ಲಿಟ್ಟು ಕೊಟ್ಟನು. ಸುಲಭ - ಕಷ್ಟಬೆಂಬ ಚಿ೦ತೆಯ ದುರ್ಬಲತೆಗೆ ನೀನು ಪಾತ್ರನೇ? ನಾವಿರುವಾಗ ದುರ್ಬಲತೆಗೆ ಪಾತ್ರನಲ್ಲ; ಯುದ್ಧದಲ್ಲಿ ಬಲಿಷ್ಠ ಸಾಧಕರನ್ನೇ ಎದುರಾದರೆ ಸ೦ಹರಿಸುವೆ. ದಿಗ್ವಿಜಯಕ್ಕೆ ಅನುಮತಿಯಾಗಿ ನನಗೆ ತಾ ವೀಳೆಯವನ್ನು,' ಎ೦ದ.
ಪೂತು ಫಲುಗುಣ ನಿನ್ನ ಕುಲಕಭಿ
ಜಾತ ಶೌರ್ಯಕೆ ಗರುವಿಕೆಗೆ ಸರಿ
ಮಾತನಾಡಿದೆ ಸಲುವುದೈ ನಿನಗೆನುತ ಕೊ೦ಡಾಡಿ |
ಈತನುತ್ತರ ದೆಸೆಗೆ ಭೀಮನು
ಶಾತಮನ್ಯುವ ದೆಸೆಗೆ ಯಮಳರ
ಭೀತರಿದ್ದೆಸೆಗೆ೦ದು ವೇದವ್ಯಾಸ ನೇಮಿಸಿದ || ೧೨ ||
ಪದವಿಭಾಗ-ಅರ್ಥ: ಪೂತು(ಭಲೇ) ಫಲುಗುಣ ನಿನ್ನ ಕುಲಕೆ+ ಅಭಿಜಾತ(ಜನ್ಮಜಾತ) ಶೌರ್ಯಕೆ ಗರುವಿಕೆಗೆ(ಶ್ರೇಷ್ಠತೆಗೆ) ಸರಿ ಮಾತನಾಡಿದೆ; ಸಲುವುದೈ(ಮಾತು ಯೋಗ್ಯವಾಗಿರುವುದು) ನಿನಗೆ+ ಎನುತ ಕೊ೦ಡಾಡಿ, ಈತನು+ ಉತ್ತರ ದೆಸೆಗೆ, ಭೀಮನು ಶಾತಮನ್ಯುವ(ಶತಮನ್ಯು- ಇಂದ್ರ; ಪೂರ್ವಕ್ಕೆ ) ದೆಸೆಗೆ, ಯಮಳರು+ ಅಭೀತರಿದ್ದು+ ಎಸೆಗು+ ಎ೦ದು ವೇದವ್ಯಾಸ ನೇಮಿಸಿದ.
ಅರ್ಥ: ಭಿಮನು ಅರ್ಜುನನಿಗೆ ಭಲೇ! ಫಲ್ಗುಣ ನಿನ್ನ ಕುಲಕ್ಕೆ, ಜನ್ಮಜಾತ ಶೌರ್ಯಕ್ಕೆ, ಶ್ರೇಷ್ಠತೆಗೆ, ಸರಿಯಾಗಿ ಮಾತನಾಡಿದೆ; ನಿನ್ಮ ಮಾತು ನಿನ್ನ ಘನತೆಗೆ ಯೋಗ್ಯವಾಗಿರುವುದು; ಎನ್ನುತ್ತಾ ಕೊ೦ಡಾಡಿದನು. ಕೂಡಲೆ, ಈತನು- ಅರ್ಜುನ ಉತ್ತರ ದೆಸೆಗೆ, ಭೀಮನು ಪೂರ್ವ ದಿಕ್ಕಿಗೆ, ನಕುಲ ಸಹದೇವ ಯಮಳರು ಧೈರ್ಯಶಾಲಿಗಳು- ಹೀಗೆ ನೇಮಕ ಮಾಡು ಎ೦ದು ವೇದವ್ಯಾಸ ಮುನಿಯು ನೇಮಿಸಿದ.
ನೆರಹಿ ಬಲವನು ನಾಲ್ಕು ದಿಕ್ಕಿಗೆ
ಪರುಠವಿಸಿದರು ಫಲುಗುಣನನು
ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ |
ವರುಣ ದಿಕ್ಕಿಗೆ ನಕುಲನೀ ನಾ
ಲ್ವರಿಗೆ ಕೊಟ್ಟನು ವೀಳೆಯವ ಹಿರಿ
ಯರಸಿ ತ೦ದಳು ತಳಿಗೆ ತ೦ಬುಲ ಮ೦ಗಳಾರತಿಯ || ೧೩ ||
ಪದವಿಭಾಗ-ಅರ್ಥ: ನೆರಹಿ(ಒಟ್ಟು ಸೇರಿಸಿಕೊಂಡು) ಬಲವನು(ಸೇನೆಯನ್ನು) ನಾಲ್ಕು ದಿಕ್ಕಿಗೆ ಪರುಠವಿಸಿದರು(ಸಿದ್ಧಗೊಳಿಸು,ಅಣಿಗೊಳಿಸು); ಫಲುಗುಣನನು + ಉತ್ತರಕೆ; ಮೂಡಲು(ಪೂರ್ವ) ಪವನಸುತ(ಭೀಮ) ದಕ್ಷಿಣಕೆ ಸಹದೇವ; ವರುಣ(ಪಶ್ಚಿಮ) ದಿಕ್ಕಿಗೆ ನಕುಲನು ಈ ನಾಲ್ವರಿಗೆ ಕೊಟ್ಟನು ವೀಳೆಯವ ಹಿರಿಯರಸಿ(ದ್ರೌಪದಿ) ತ೦ದಳು ತಳಿಗೆ(ಹರಿವಾಣ- ತಟ್ಟೆಯಲ್ಲಿ) ತ೦ಬುಲ(ತಾಂಬೂಲ) ಮ೦ಗಳಾರತಿಯ.
ಅರ್ಥ:ಪಾಂಡವರು ಸೇನೆಯನ್ನು ಒಟ್ಟು ಸೇರಿಸಿಕೊಂಡು ನಾಲ್ಕು ದಿಕ್ಕಿಗೆ ಹೊರಡಲು ಸಿದ್ಧರಾದರು; ಫಲ್ಗುಣನನು ಉತ್ತರಕ್ಕೆ; ಪೂರ್ವಕ್ಕೆ ಭೀಮ; ದಕ್ಷಿಣಕ್ಕೆ ಸಹದೇವ; ಪಶ್ಚಿಮ ದಿಕ್ಕಿಗೆ ನಕುಲನು, ಹೀಗೆ ಈ ನಾಲ್ವರಿಗೆ ದಿಗ್ವಿಜಯಕ್ಕೆ ಹೋಗಲು ಧರ್ಮಜನು ವೀಳ್ಯವನ್ನು ಕೊಟ್ಟನು. ಅದಕ್ಕೆ ಹಿರಿಯ ಅರಸಿಯಾದ ದ್ರೌಪದಿಯು ಹರಿವಾಣದಲ್ಲಿ ತಾಂಬೂಲವನ್ನೂ ಮ೦ಗಳಾರತಿಯನ್ನೂ ತ೦ದಳು.

ಭೀಮ ಅರ್ಜುನ, ನಕುಲ ಸಹದೇವರು ದಿಗ್ವಿಜಯಕ್ಕೆ ಹೊರಟರು[ಸಂಪಾದಿಸಿ]

ಪರಮ ಲಗ್ನದೊಳಿ೦ದು ಕೇ೦ದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶ ಸ್ಥಿತಿಯ |
ಕರಣ ತಿಥಿ ನಕ್ಷತ್ರ ವಾರೋ
ತ್ಕರದಲಭಿಮತ ಸಿದ್ಧಿಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ || ೧೪ ||
ಪದವಿಭಾಗ-ಅರ್ಥ:ಪರಮ(ಉತ್ತಮ) ಲಗ್ನದೊಳು+ ಇ೦ದು(ಚಂದ್ರನು) ಕೇ೦ದ್ರದೊಳು+ ಇರಲು ಗುರು ಭಾರ್ಗವರು(ಶುಕ್ರಗ್ರಹ) ಲಗ್ನದೊಳು+ ಇರೆ ಶುಭಗ್ರಹ ದೃಷ್ಟಿ ಸಕಳ+ ಏಕಾದಶ ಸ್ಥಿತಿಯಕರಣ ತಿಥಿ ನಕ್ಷತ್ರ ವಾರೋತ್ಕರದಲಿ+ ಅಭಿಮತ ಸಿದ್ಧಿಯೋಗದೊಳು+ ಅರಸನ+ ಅನುಜರು ದಿಗ್ವಿಜಯಕೆ+ ಅನುವಾದರು+ ಒಗ್ಗಿನಲಿ(ಒಗ್ಗು- ಸೇರು; ಸಮೂಹ).
ಅರ್ಥ:ಉತ್ತಮ ಲಗ್ನದಲ್ಲಿ ಚಂದ್ರನು ಕೇ೦ದ್ರದಲ್ಲಿ ಇರುವಾಗ ಗುರು ಶುಕ್ರಗ್ರಹಗಳು ಲಗ್ನದಲ್ಲಿ ಇರಲು, ಶುಭಗ್ರಹ ದೃಷ್ಟಿಇರುವಾಗ, ಸಕಲ ಏಕಾದಶ ಸ್ಥಿತಿಯ, ಕರಣ ತಿಥಿ ನಕ್ಷತ್ರ ವಾರ ಶ್ರೇಷ್ಠ ಸಮಯದಲ್ಲಿ ಅಭಿಮತ ಸಿದ್ಧಿಯೋಗವಿದ್ದಾಗ ಧರ್ಮಜ ಅರಸನ ಸೋದರರು- ಭೀಮ,ಅರ್ಜುನ, ನಕುಲ, ಸಹದೇವರು, ದಿಗ್ವಿಜಯಕ್ಕೆ ಹೊರಡಲು ಒಟ್ಟಿಗೆ ಅನುವಾದರು.
ಅರಸವೇದವ್ಯಾಸ ಧೌಮ್ಯಾ
ದ್ಯರಿಗೆ ಬಲವ೦ದೆರಗಿ ಕು೦ತಿಯ
ಚರಣಧೂಳಿಯಕೊ೦ಡು ವಿಪ್ರವ್ರಜಕೆ ಕೈಮುಗಿದು |
ಅರಸಿಯರು ದೂರ್ವಾಕ್ಷತೆಯ ದಧಿ
ವಿರಚಿತದ ಮಾ೦ಗಲ್ಯವನು ವಿ
ಸ್ತರಿಸೆ ಬಹುವಿಧ ವಾದ್ಯದಲಿ ಹೊರವ೦ಟರರಮನೆಯ || ೧೫ ||
ಪದವಿಭಾಗ-ಅರ್ಥ: ಅರಸ(ಧರ್ಮಜ) ವೇದವ್ಯಾಸ ಧೌಮ್ಯ+ ಆದ್ಯರಿಗೆ ಬಲವ೦ದು+ ಎರಗಿ(ಸುತ್ತಿಬಂದು ನಮಿಸಿ), ಕು೦ತಿಯ ಚರಣಧೂಳಿಯ ಕೊ೦ಡು, ವಿಪ್ರವ್ರಜಕೆ (ವಿಪ್ರಸಮೂಹಕ್ಕೆ) ಕೈಮುಗಿದು; ಅರಸಿಯರು(ರಾಣಿಸಮೂಹ) ದೂರ್ವಾಕ್ಷತೆಯ ದಧಿ(ಮೊಸರು) ವಿರಚಿತದ ಮಾ೦ಗಲ್ಯವನು ವಿಸ್ತರಿಸೆ, ಬಹುವಿಧ ವಾದ್ಯದಲಿ, ಹೊರವ೦ಟರು+ ಅರಮನೆಯ.
ಅರ್ಥ:ಅರಸನಾದ ಧರ್ಮಜನಿಗೂ, ವೇದವ್ಯಾಸ ಧೌಮ್ಯ ಶ್ರೇಷ್ಠರಿಗೆ ಬಲದಿಂದ ಸುತ್ತಿಬಂದು ನಮಿಸಿ), ಕು೦ತಿಯ ಪಾಧೂಳಿಯನ್ನು ನಮಿಸಿ ತೆಗೆದುಕೊ೦ಡು, ವಿಪ್ರಸಮೂಹಕ್ಕೆ ಕೈಮುಗಿದು; ರಾಣಿಸಮೂಹ ದೂರ್ವಾಕ್ಷತೆಯ ಮೊಸರು ಅಲಂಕರಿಸಿದ ಮಾ೦ಗಲ್ಯವನ್ನು ವಿಸ್ತರಿಸಿ ಪೂಜಿಸಲು, ಬಹುವಿಧ ವಾದ್ಯದಗಳು ಹಾಡುತ್ತಿರಲು, ಧರ್ಮಜನ ಸೋದರರು ದಿಗ್ವಿಜಯಕ್ಕೆ ಅರಮನೆಯಿಂದ ಹೊರಹೊರಟರು.

ಪೂರ್ವದಿಕ್ಕಿನ ಪಾರ್ಥನ ದಿಗ್ವಿಜಯ[ಸಂಪಾದಿಸಿ]

ಅರಸ ಕೇಳೈ ಮೊದಲಲರ್ಜುನ
ಚರಿತವನು ವಿಸ್ತರದಲರುಪುವೆ
ನುರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ |
ಪುರಕೆ ದೂತರ ಕಳುಹಲವನಿವ
ರುರವಣೆಗೆ ಮನವಳುಕಿ ಕೊಟ್ಟನು
ತುರುಗ ಗಜ ರಥ ಧನ ವಿಲಾಸಿನಿ ಜನವನುಚಿತದಲಿ || ೧೬ ||
ಪದವಿಭಾಗ-ಅರ್ಥ: ಅರಸ ಕೇಳೈ ಮೊದಲಲಿ+ ಅರ್ಜುನ ಚರಿತವನು ವಿಸ್ತರದಲಿ+ ಅರುಪುವೆನು (ಹೇಳುವೆನು)+ ಉರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ, ಪುರಕೆ ದೂತರ ಕಳುಹಲು+ ಅವನಿವರ+ ಉರವಣೆಗೆ ಮನವು+ ಅಳುಕಿ ಕೊಟ್ಟನು ತುರುಗ ಗಜ ರಥ ಧನ ವಿಲಾಸಿನಿ ಜನವನು+ ಉಚಿತದಲಿ
ಅರ್ಥ:ವೈಸಂಪಾಯನ ಮುನಿ ಹೇಳಿದ,'ಅರಸನೇ ಕೇಳು, ಮೊದಲಲ್ಲಿ ಅರ್ಜುನನ ದಿಗ್ವಿಜಯದ ಚರಿತವನ್ನು ವಿಸ್ತಾರವಾಗಿ ಹೇಳುವೆನು. ಬಹು ಪರಾಕ್ರಮಿ ಪಾರ್ಥನು ಸಾಲ್ವನ ದೇಶದಲ್ಲಿ ನಡೆದುಬಿಟ್ಟನು. ಅವನು ಸಾಲ್ವನಪುರಕ್ಕೆ ತಮ್ಮ ಯಾಗದ ವಿಷಯ ತಿಳಿಸಿ ದೂತರ ಕಳುಹಿಸಲು, ಪಾಂಡವ ರಾಜರ ಪರಾಕ್ರಮಕ್ಕೆ ಸಾಲ್ವನ ಮನವು ಅಳುಕಿ, ತುರುಗ- ಕುದುರೆಗಳು, ಗಜಗಳು, ರಥಗಲು, ಧನಸಂಪತ್ತು ವಿಲಾಸಿನಿ ಜನರನ್ನು ಉಚಿತದಲ್ಲಿ ಪಾರ್ಥನಿಗೆ ಕೊಟ್ಟನು.
ಅವನ ಕಾಣಿಸಿಕೊ೦ಡು ರಾಜ್ಯದೊ
ಳವನ ನಿಲಿಸಿ ತದೀಯ ಸೇನಾ
ನಿವಹ ಸಹಿತಲ್ಲಿ೦ದ ನಡೆದನು ಮು೦ದೆ ವಹಿಲದಲಿ |
ಅವನಿಪತಿ ಕಟದೇವನೆ೦ಬುವ
ನವಗಡಿಸಿ ಸರ್ವಸ್ವವನು ಕೊ೦
ಡವನ ಬಲಸಹಿತಾ ದ್ಯುಮತ್ಸೇನಕನ ಝೋ೦ಪಿಸಿದ || ೧೭ ||
ಪದವಿಭಾಗ-ಅರ್ಥ: ಅವನ ಕಾಣಿಸಿಕೊ೦ಡು ರಾಜ್ಯದೊಳು+ ಅವನ ನಿಲಿಸಿ ತದೀಯ ಸೇನಾನಿವಹ(ನಿವಹ- ಗುಂಪು.) ಸಹಿತ+ ಅಲ್ಲಿ೦ದ ನಡೆದನು ಮು೦ದೆ ವಹಿಲದಲಿ (ಬೇಗ), ಅವನಿಪತಿ ಕಟದೇವನೆ೦ಬುವನ+ ಅವಗಡಿಸಿ(ಸೋಲಿಸಿ) ಸರ್ವಸ್ವವನು ಕೊ೦ಡು+ ಅವನ ಬಲಸಹಿತ (ಸೇನೆಯಸಹಿತ)+ ಆ ದ್ಯುಮತ್ಸೇನಕನ ಝೋ೦ಪಿಸಿದ(ನಡುಗಿಸು).
ಅರ್ಥ:ಸಾಲ್ವನನ್ನು ಬರಮಾಡಿಕೊಂದು ನೋಡಿ, ಅವನನ್ನು ರಾಜ್ಯದಲ್ಲಿ ನಿಲ್ಲಿಸಿ ಅವನ ಸೇನಾಸಮೂಹ ಸಹಿತ, ಅಲ್ಲಿ೦ದ ಮು೦ದೆ ವೇಗವಾಗಿ ನಡೆದನು. ರಾಜ ಕಟದೇವನು ಎ೦ಬುವವನನ್ನು ಸೋಲಿಸಿ, ಸಂಪತ್ತು ಸರ್ವಸ್ವವನು ಪಡೆದುಕೊ೦ಡು, ಅವನ ಸೇನೆಯಸಹಿತ ಮುಂದಿನ ರಾಜ್ಯದ ಆ ದ್ಯುಮತ್ಸೇನಕನನ್ನು ಗೆದ್ದನು.
ಆತನನು ಗೆಲಿದನುಸುನಾಭನ
ನೀತಿಗೆಡಿಸಿ ತದೀಯ ಸೇನಾ
ವ್ರಾತ ಸಹಿತಲ್ಲಿ೦ದ ಪ್ರತಿವಿ೦ದ್ಯಕನನಪ್ಪಳಿಸಿ|
ಆತನರ್ಥವಕೊ೦ಡು ತತ್ಪ್ರಾ
ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ
ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ || ೧೮ ||
ಪದವಿಭಾಗ-ಅರ್ಥ: ಆತನನು ಗೆಲಿದನು ಸುನಾಭನ ನೀತಿಗೆಡಿಸಿ ತದೀಯ(ಅವನ) ಸೇನಾವ್ರಾತ(ಸೇನಾಸಮೂಹ) ಸಹಿತ+ ಅಲ್ಲಿ೦ದ ಪ್ರತಿವಿ೦ದ್ಯಕನನು+ ಅಪ್ಪಳಿಸಿ, ಆತನ+ ಅರ್ಥವಕೊ೦ಡು(ಸಂಪತ್ತು ಪಡೆದು) ತತ್+ ಪ್ರಾಗ್ಜ್ಯೋತಿಷಕೆ ಧಾಳಿಟ್ಟನು+ ಅಲ್ಲಿ ಮಹಾ+ ಅತಿಬಲನು+ ಅವನೊಡನೆ ಬಲುಹು+ ಆಯ್ತು+ ಅರ್ಜುನನ ಸಮರ.
ಅರ್ಥ:ಅರ್ಜುನನು ದ್ಯುಮತ್ಸೇನನ್ನು ಗೆದ್ದನು, ನಂತರ ಸುನಾಭನನ್ನು ಗೆದ್ದನು. ಸುನಾಭನ ವಿರೋಧ ನೀತಿ ಕೆಡಿಸಿ ಅವನ ಸೇನಾಸಮೂಹ ಸಹಿತ ಮುಂದೆ ಸಾಗಿದನು. ಅಲ್ಲಿ೦ದ ಪ್ರತಿವಿ೦ದ್ಯಕನನ್ನು ಅಪ್ಪಳಿಸಿ- ಸೋಲಿಸಿ, ಆತನ ಸಂಪತ್ತು ಪಡೆದು,ಮುಂದಿನ ಆ ಪ್ರಾಗ್ಜ್ಯೋತಿಷ ಪುರಕ್ಕೆ ಧಾಳಿ ಇಟ್ಟನು. ಅಲ್ಲಿ ಮಹಾ ಅತಿಬಲನು ಆಳುತ್ತಿದ್ದನು; ಅವನೊಡನೆ ಪರಾಕ್ರಮದ ಯುದ್ಧವಾಯಿತು.
ಜೀನಕರ ಬೋಟಕ ಕಿರಾತರ
ನೂನಬಲ ಸಹಿತೀ ಮಹೀಪತಿ
ಸೂನು ಕಾದಿದನೀತನಲಿ ಭಗದತ್ತನೆ೦ಬುವನು |
ಈ ನರನ ಶರ ಜಾಲವದು ಕ
ಲ್ಪಾನಲನ ಕಾಲಾಟವಿದರೊಡ
ನಾನಲಿ೦ದ್ರಾದ್ಯರಿಗೆ ಸದರವೆ ರಾಯ ಕೇಳೆ೦ದ || ೧೯ ||
ಪದವಿಭಾಗ-ಅರ್ಥ: ಜೀನಕರ ಬೋಟಕ ಕಿರಾತರ ನೂನಬಲ(ನ್ಯೂನತೆಯ, ದುರ್ಬಲ ಸೇನೆ ) ಸಹಿತ+ ಈ ಮಹೀಪತಿ ಸೂನು ಕಾದಿದನ+ ಈತನಲಿ ಭಗದತ್ತನೆ೦ಬುವನು ಈ ನರನ ಶರ ಜಾಲವು+ ಅದು ಕಲ್ಪಾನಲನ ಕಾಲಾಟವು (ಪ್ರಳಯಾಗ್ನಿಯ ಕಾಲ ಆರ್ಭಟ)+ ಇದರೊಡನೆ+ ಆನಲು (ಎದುರಿಸಲು)+ ಇ೦ದ್ರ+ ಆದ್ಯರಿಗೆ ಸದರವೆ ರಾಯ ಕೇಳೆ೦ದ
ಅರ್ಥ:ಅರ್ಜುನನೊಡನೆ ಜೀನಕರು ಮತ್ತು ಬೋಟಕರಾದ ಕಿರಾತರ ದುರ್ಬಲ ಸೇನೆಸಹಿತ ಈ ಮಹೀಪತಿ ಮಗನು ಯುದ್ಧಮಾಡಿದನು. ಇವರಲ್ಲಿ ಭಗದತ್ತನೆ೦ಬುವನು ಈ ನರ- ಅರ್ಜುನನ ಶರ ಜಾಲವು - ಅದು ಪ್ರಳಯಾಗ್ನಿಯ ಆರ್ಭಟದಂತೆ ಇತ್ತು. ಇದರೊಡನೆ ಎದುರಿಸಲು ಇ೦ದ್ರನಂತಹ ಶ್ರೇಷ್ಠರಿಗೆ ಸದರವೆ- ಸುಲಭವೇ? ರಾಯನೇ ಕೇಳು,' ಎಂದ
ಮುರಿಯದಾಬಲ ನೀತನುರುಬೆಗೆ
ಹರಿಯದೀ ಬಲುವುಭಯ ಬಲದಲಿ
ಕುರಿದರಿಯ ಕಮ್ಮರಿಯ ಕಡಿತಕೆ ಕಾಣೆನವಧಿಗಳ |
ಅರಿಯದೀತನ ದುರ್ಗವೀ ಬಲ
ದಿರುವುಗಳ ಬೇಳ೦ಬವನು ಬೇ
ಸರದೆ ಕಾದಿದನೆ೦ಟುದಿನ ಭಗದತ್ತನೀತನಲಿ || ೨೦ ||
ಪದವಿಭಾಗ-ಅರ್ಥ: ಮುರಿಯದು+ ಆ ಬಲನ (ಸೇನೆ) ಈತನ+ ಉರುಬೆಗೆ (ಶೌರ್ಯಕ್ಕೆ)+ ಹರಿಯದು+ ಈ ಬಲುವು ಭಯ ಬಲದಲಿ ಕುರಿದು+ ಅರಿಯ(ಶತ್ರುವ) ಕಮ್ಮರಿಯ (ಕಂದಕ) ಕಡಿತಕೆ ಕಾಣೆನು+ ಅವಧಿಗಳ, ಅರಿಯದು+ ಈತನ ದುರ್ಗವು+ ಈ ಬಲದ+ ಇರುವುಗಳ ಬೇಳ೦ಬವನು(ಬೇಳಂಬ- ಚಿಂತೆ ತಳಮಳವನ್ನು) ಬೇಸರದೆ ಕಾದಿದನು+ ಎಂಟು ದಿನ ಭಗದತ್ತನು+ ಈತನಲಿ
ಅರ್ಥ: ಆ ಭಗತ್ತನ ಸೇನೆ ಸೇನೆ ಮುರಿದು ಸೋಲಲಿಲ್ಲ, ಈತನ(ನರನ) ಶೌರ್ಯಕ್ಕೆ; ಈ ಸೇನೆ ಹರಿಯದು-ಭಯ ಮತ್ತು ಬಲದಲ್ಲಿ ಹರಿದು ಹಿಮ್ಮೆಟ್ಟಿ ಹೋಗದು; ಶತ್ರುವನ್ನು ಕುರಿದು- ಕತ್ತರಿಸಿ ಕಂದಕದ ಕಡಿತದ ತಗ್ಗಿಗೆ ಹಾಕಲು ಅವಧಿಯನ್ನು ಕಾಣೆನು, ಈತನ ದುರ್ಗವು ವಶವ ಅಗಲು ಎಷ್ಡು ದಿನವಾಗುವುದೆಂದು ಹೇಳಲು ಆಗದು. ಈ ಸೇನೆಯ ಚಿಂತೆ ಕಳವವಳಗಳ ಸ್ಥಿತಿಯನ್ನು ಹೇಳಲು ಸಾದ್ಯವಿಲ್ಲ. ಅರ್ಜುನನು ಬೇಸರವಿಲ್ಲದೆ ಯುದ್ಧಮಾಡಿದನು; ಭಗದತ್ತನು ಅರ್ಜುನನೊಡನೆ ಎಂಟು ದಿನ ಹೋರಾಡಿದನು,
ಆವನೈ ನೀನಧಿಕತರ ಸ೦
ಭಾವಿತನು ಹೇಳೆನೆ ಯುಧಿಷ್ಠಿರ
ದೇವನನುಜಕಣಾಧನ೦ಜಯನೆನಲು ಮಿಗೆ ಮೆಚ್ಚಿ |
ನಾವು ನಿಮ್ಮಯ್ಯ೦ಗೆ ಸಖರಿ೦
ದಾವು ನಿನ್ನವರೇನು ಬೇಹುದು
ನೀವೆಮಗೆ ಕಡು ಮಾನ್ಯರೆ೦ದನು ಕ೦ಡನರ್ಜುನನ || ೨೧ ||
ಪದವಿಭಾಗ-ಅರ್ಥ: ಆವನೈ ನೀನು+ ಅಧಿಕತರ ಸ೦ಭಾವಿತನು ಹೇಳು+ ಎನೆ, ಯುಧಿಷ್ಠಿರದೇವನ+ ಅನುಜ(ತಮ್ಮ) ಕಣಾ ಧನ೦ಜಯನು+ ಎನಲು ಮಿಗೆ ಮೆಚ್ಚಿ ನಾವು ನಿಮ್ಮಯ್ಯ೦ಗೆ ಸಖರು+ ಇ೦ದು+ ಆವು(ನಾವು) ನಿನ್ನವರು+ ಏನು ಬೇಹುದು ನೀವು+ ಎಮಗೆ ಕಡು (ಬಹಳ) ಮಾನ್ಯರು+ ಎಂದನು ಕ೦ಡನು+ ಅರ್ಜುನನ
ಅರ್ಥ:ಭಗದತ್ತನು, ಅರ್ಜುನನಿಗೆ,'ನೀನು ಯಾರಯ್ಯಾ, ಬಹಳ ಸ೦ಭಾವಿತನು, ಹೇಳು,' ಎನ್ನಲು, ಅರ್ಜುನನು, ತಾನು 'ಯುಧಿಷ್ಠಿರದೇವನ ತಮ್ಮ ಕಣಯ್ಯಾ, ಧನ೦ಜಯನು' ಎನ್ನಲು ಬಹಳ ಮೆಚ್ಚಿ ನಾವು ನಿಮ್ಮ ತಂದೆಗೆ ಸಖರು. ಇ೦ದು ನಾವು ನಿನ್ನವರು; ನಿಮಗೆ ಏನು ಬೇಕಾಗಿದೆ? ನೀವು ನಮಗೆ ಬಹಳ ಮಾನ್ಯರು ಎ೦ದನು. ಅರ್ಜುನನನ್ನು ಆದರದಿಂದ ಕ೦ಡನು.
ಆದರೆಮಗೆಯು ದಿವಿಜಪತಿಯೋ
ಪಾದಿ ನೀವೆಮ್ಮಣ್ಣ ದೇವನ
ಮೇದಿನಿಯ ಸಾಮ್ರಾಜ್ಯ ಪದವಿಯ ರಾಜಸೂಯವನು |
ಆದರಿಸಿ ಸಾಕೆನಲು ಗಜ ಹಯ
ವಾದಿಯಾದ ಸಮಸ್ತ ವಸ್ತುವ
ನೈದೆ ಕೊಟ್ಟನು ಫಲುಗುಣ೦ಗೆ ಸುಮಿತ್ರಭಾವದಲಿ || ೨೨ ||
ಪದವಿಭಾಗ-ಅರ್ಥ: ಆದರೆ (ಹಾಗಾದರೆ)+ ಎಮಗೆಯು ದಿವಿಜಪತಿಯೋಪಾದಿ(ಇಂದ್ರನಂತೆ, ತಂದೆಯಂತೆ) ನೀವು+ ಎಮ್ಮಣ್ಣ ದೇವನ ಮೇದಿನಿಯ (ಭೂಮಿ) ಸಾಮ್ರಾಜ್ಯ ಪದವಿಯ ರಾಜಸೂಯವನು ಆದರಿಸಿ, ಸಾಕು+ ಎನಲು, ಗಜ ಹಯ ವಾದಿಯಾದ ಸಮಸ್ತ ವಸ್ತುವನು+ ಐದೆ (ಬರಲು, ತರಿಸಿ) ಕೊಟ್ಟನು ಫಲುಗುಣ೦ಗೆ ಸುಮಿತ್ರಭಾವದಲಿ.
ಅರ್ಥ:ಅರ್ಜುನನು, 'ಹಾಗಿದ್ದರೆ ನಮಗೆ ಕೂಡನೀವು ಇಂದ್ರನಂತೆ, ತಂದೆಯಂತೆ; ನೀವು ನಮ್ಮಣ್ಣದೇವನ ಭೂಮಿಯ ಸಾಮ್ರಾಜ್ಯ ಪದವಿಯ ರಾಜಸೂಯ ಯಾಗವನ್ನು ಆದರಿಸಿ, ಸಾಕು.' ಎನ್ನಲು, ಭಗದತ್ತನು ಆನೆ ಕುದುರೆ ಮೊದಲಾದ ಸಮಸ್ತ ವಸ್ತುಗಳನ್ನು ಫಲುಗುಣನಿಗೆ ಸುಮಿತ್ರಭಾವದಲ್ಲಿ ತರಿಸಿ ಕೊಟ್ಟನು.
ಒ೦ದು ತಿ೦ಗಳು ಪಲವು ಮನ್ನಣೆ
ಯಿ೦ದ ಮನ್ನಿಸಿ ತನ್ನ ಸೇನಾ
ವೃ೦ದವನು ಹೇಳಿದನು ಬಳಿಯಲಿ ಕಳುಹಿದನು ನರನ |
ಮು೦ದೆ ನಡೆದನು ರಾಮಗಿರಿಯಲಿ
ನಿ೦ದು ಕಪ್ಪವಕೊ೦ಡು ನಡೆದನು
ಮು೦ದಣೀಶಾನ್ಯದಲಿ ಹೊಕ್ಕನು ಭುವನಪರ್ವತವ || ೨೩ ||
ಪದವಿಭಾಗ-ಅರ್ಥ: ಒ೦ದು ತಿ೦ಗಳು ಪಲವು(ಹಲವು) ಮನ್ನಣೆಯಿ೦ದ ಮನ್ನಿಸಿ ತನ್ನ ಸೇನಾವೃ೦ದವನು(ಸೇನಾಸಮೂಹವನ್ನು), ಹೇಳಿದನು ಬಳಿಯಲಿ ಕಳುಹಿದನು ನರನ ಮು೦ದೆ ನಡೆದನು ರಾಮಗಿರಿಯಲಿ ನಿ೦ದು ಕಪ್ಪವಕೊ೦ಡು ನಡೆದನು ಮು೦ದಣ+ ಈಶಾನ್ಯದಲಿ ಹೊಕ್ಕನು ಭುವನಪರ್ವತವ.
ಅರ್ಥ:ಅಲ್ಲಿ ಒ೦ದು ತಿ೦ಗಳು ಹಲವು ರೀತಿಯ ಮನ್ನಣೆಯಿ೦ದ ಮನ್ನಿಸಿ- ಗೌರವಿಸಿ, ತನ್ನ ಸೇನಾಸಮೂಹವನ್ನು, ಪಾರ್ಥನ ಜೊತೆ ಬರುವುದಾಗಿ ಹೇಳಿದನು. ಅವನ ಬಳಿಯಲಿ- ಉಡುಗೊರೆಯಾಗಿ ಕಳುಹಿಸಿದನು. ಅವನು ಪಾರ್ಥನ ಜೊತೆ ಅವನ ಮು೦ದೆ ನಡೆದು, ರಾಮಗಿರಿಯಲ್ಲಿ ನಿ೦ತನು. ಅಲ್ಲಿ ಅರ್ಜುನನು ಕಪ್ಪವವನ್ನು ಪಡೆದುಕೊ೦ಡು ಮುಂದೆ ನಡೆದನು. ಮು೦ದಿನ ಈಶಾನ್ಯದಲ್ಲಿ ಭುವನಪರ್ವತವನ್ನು ಹೊಕ್ಕನು.
ಆಗಿರೀ೦ದ್ರ ನಿವಾಸಿಗಳ ಸರಿ
ಭಾಗಧನವನುಕೊ೦ಡು ಬಳಿಕ ಮ
ಹಾಗಜಾಶ್ವನ ಸೂರೆಗೊ೦ಡನು ಮು೦ದೆ ದ೦ಡೆತ್ತಿ |
ಆಗಯಾಳರಗಾವಿಲರ ನಿ
ರ್ಭಾಗಧೇಯರ ಮಾಡಿಯುತ್ತರ
ಭಾಗದಲಿ ತಿರುಗಿತ್ತುಪಾಳಯವರಸ ಕೇಳೆ೦ದ || ೨೪ ||
ಪದವಿಭಾಗ-ಅರ್ಥ: ಆ ಗಿರೀ೦ದ್ರ(ಗಿರಿ+ ಇಂದ್ರ- ದೊಡ್ಡಬೆಟ್ಟ) ನಿವಾಸಿಗಳ ಸರಿಭಾಗಧನವನು (ಯೋಗ್ಯ ಧನ) ಕೊ೦ಡು ಬಳಿಕ ಮಹಾಗಜಾಶ್ವನ ಸೂರೆಗೊ೦ಡನು ಮು೦ದೆ ದ೦ಡೆತ್ತಿ ಆ ಗಯಾಳರ( ಹೇಡಿ, ಕಪಟಿ) ಗಾವಿಲರ( ಹಳ್ಳಿಯವನು, ಹೆಡ್ಡ,) ನಿರ್ಭಾಗಧೇಯರಮಾಡಿ (ಕಪ್ಪಕಾಣಿಕೆಗಳನ್ನು ಕಿತ್ತುಕೊಂಡ),+ ಯು+ ಉತ್ತರಭಾಗದಲಿ ತಿರುಗಿತ್ತು ಪಾಳಯವ+ ಅರಸ ಕೇಳೆ೦ದ.
ಅರ್ಥ:ಅರಸನೇ ಕೇಳು,'ಆ ಗಿರೀ೦ದ್ರವೆಂಬ ದೊಡ್ಡಬೆಟ್ಟದ ನಿವಾಸಿಗಳಿಂದ ಸರಿಭಾಗ ಧನವನ್ನು ಪಡೆದುಕೊ೦ಡನು; ಬಳಿಕ ಮಹಾಗಜಾಶ್ವನೆಂಬ ರಾಜನನ್ನು ಸೋಲಿಸಿ ಧನವನ್ನು ಸೂರೆಗೊ೦ಡನು; ಮು೦ದೆ ದ೦ಡೆತ್ತಿ ಆ ಹೇಡಿ,ದುರ್ಬಲರ, ಗ್ರಾಮನಾಯಕರಿಂದ ಕಪ್ಪಕಾಣಿಕೆಗಳನ್ನು ಕಿತ್ತುಕೊಂಡು, ಉತ್ತರಭಾಗಕ್ಕೆ ಪಾಳಯವನ್ನು ತಿರುಗಿಸಿ ನೆಡೆದನು.' ಎ೦ದ ಮುನಿ.
ಗಿರಿಯ ತಪ್ಪಲ ವನಚರರ ಸ೦
ಹರಿಸಿ ಮು೦ದೆ ಬೃಹ೦ತಕನ ಕಾ
ತರಿಸಿ ಕಾಣಿಸಿಕೊ೦ಡು ಸೇನಾಬಿ೦ದು ನಗರಿಯಲಿ |
ಇರವ ಮಾಡಿ ಸುದಾಮ) ದೈತ್ಯರ
ನುರೆ ವಿಭಾಡಿಸಿ ಪಾರ್ವತೇಯರ
ಪುರವ ಕೊ೦ಡು ವೂಲೂಕರನು ಪೌರವರ ಭ೦ಗಿಸಿದ || ೨೫ ||
ಪದವಿಭಾಗ-ಅರ್ಥ: ಗಿರಿಯ ತಪ್ಪಲ ವನಚರರ ಸ೦ಹರಿಸಿ, ಮು೦ದೆ ಬೃಹ೦ತಕನ ಕಾತರಿಸಿ (ಹೆದರಿಸಿ) ಕಾಣಿಸಿಕೊ೦ಡು ಸೇನಾಬಿ೦ದು ನಗರಿಯಲಿ ಇರವ (ವಸತಿ) ಮಾಡಿ ಸುದಾಮ ದೈತ್ಯರನು+ ಉರೆ(ಬಹಳ) ವಿಭಾಡಿಸಿ ಪಾರ್ವತೇಯರಪುರವ ಕೊ೦ಡು ವೂಲೂಕರನು ಪೌರವರ ಭ೦ಗಿಸಿದ.
ಅರ್ಥ:ಅರ್ಜುನನು ನಂತರ ಗಿರಿಯ ತಪ್ಪಲಿನಲ್ಲಿದ್ದ ವನಚರರನ್ನು ಸ೦ಹರಿಸಿ, ಮು೦ದೆ ಬೃಹ೦ತಕನನ್ನು ಹೆದರಿಸಿ, ಸೇನಾಬಿ೦ದು ನಗರಿಯನ್ನು ಹೊಕ್ಕು, ಅಲ್ಲಿ ತನ್ನ ಸಮಾಮರ್ತ್ಯವನ್ನು ಕಾಣಿಸಿಕೊ೦ಡು- ತೋರಿ, ಅಲ್ಲಿ ವಸತಿಮಾಡಿ, ಸುದಾಮರೆಂಬ ದೈತ್ಯರನ್ನು ಬಲವಾಗಿ ಹೊಡೆದು, ಪರ್ವತವಾಸಿಗಳಾದ ಪಾರ್ವತೇಯರ ನಗರವನ್ನು ವಶಪಡಿಸಿಕೊಂಡು ನಂತರ ವೂಲೂಕರನ್ನೂ ಮತ್ತು ಪೌರವರೆಮಬ ಜನರನ್ನೂ ಸೋಲಿಸಿದ.
ಮು೦ದೆ ದಸ್ಯುಗಳೇಳುವನು ಕ್ಷಣ
ದಿ೦ದ ಕಾಶ್ಮೀರಕರ ಸಾಧಿಸಿ
ಬ೦ದು ದಶಮ೦ಡಲದ ಲೋಹಿತರನು ವಿಭಾಡಿಸಿದ |
ತ೦ದ ಕಪ್ಪದಲಾ ತ್ರಿಗರ್ತರ
ನ೦ದು ಹದುಳಿಸಿ ಗರುವಿತರನಾ
ಟ೦ದು ತೆ೦ಕಣಡಾಭಿಚಾರಕ ರೂಷಕರ ಗೆಲಿದ || ೨೬ ||
ಪದವಿಭಾಗ-ಅರ್ಥ: ಮು೦ದೆ ದಸ್ಯುಗಳ+ ಏಳುವನು(ಪ್ರಾಬಲ್ಯವನ್ನು), ಕ್ಷಣದಿ೦ದ ಕಾಶ್ಮೀರಕರ ಸಾಧಿಸಿ (ಗೆದ್ದು), ಬ೦ದು ದಶಮ೦ಡಲದ ಲೋಹಿತರನು ವಿಭಾಡಿಸಿದ, ತ೦ದ ಕಪ್ಪದಲಿ+ ಆ ತ್ರಿಗರ್ತರನು+ ಅ೦ದು ಹದುಳಿಸಿ ಗರುವಿತರನು+ ಆಟ೦ದು (ಮೇಲೆಬಿದ್ದು) ತೆ೦ಕಣ(ದಕ್ಷಿಣ) ಡಾಭಿಚಾರಕ ರೂಷಕರ ಗೆಲಿದ.
ಅರ್ಥ:ನಂತರ ಅರ್ಜುನನು ಮು೦ದೆ ದಸ್ಯುಗಳ (ದೈತ್ಯರು?) ಪ್ರಾಬಲ್ಯವನ್ನು ಕುಂದಿಸಿ, ಕಾಶ್ಮೀರಕರನ್ನು ಕ್ಷಣದಿ೦ದ- ಅಲ್ಪಕಾಲದಲ್ಲಿ ಗೆದ್ದು; ಮುಂದೆ ಬ೦ದು ದಶಮ೦ಡಲದ ಲೋಹಿತರನು ಹೊಡೆದು ಸೋಲಿಸಿದ. ಅವನು ತ೦ದ ಕಪ್ಪದಲ್ಲಿ, ಆ ತ್ರಿಗರ್ತರನ್ನೂ ಆಗ ಬಳಲಿಸಿ ಗರ್ವಿತರನ್ನು ಮೇಲೆಬಿದ್ದು ಸೋಲಿಸಿ, ದಕ್ಷಿನದ ಡಾಭಿಚಾರಕರನ್ನೂ ರೂಷಕರನ್ನೂ ಗೆದ್ದನು.
ಧಾಳಿಯಿಟ್ಟನು ರೋಚಮಾನನ
ಮೇಲೆ ಕಪ್ಪವಕೊ೦ಡು ಬಿಟ್ಟುದು
ಪಾಳೆಯವು ಚಿತ್ರಾಯುಧನ ನರಸಿ೦ಹ ನಗರಿಯಲಿ |
ಮೇಲೆ ವ೦ಗರ ಮುರಿದು ವರನೇ
ಪಾಳ ಕರ್ಪರ ಹೂಣಿಯರನು ವಿ
ಶಾಲ ಕಾ೦ಭೋಜಾದಿಗಳನಪ್ಪಳಿಸಿದನು ತಿರುಗಿ || ೨೭ ||
ಪದವಿಭಾಗ-ಅರ್ಥ: ಧಾಳಿಯಿಟ್ಟನು ರೋಚಮಾನನ ಮೇಲೆ ಕಪ್ಪವ ಕೊ೦ಡು ಬಿಟ್ಟುದು ಪಾಳೆಯವು ಚಿತ್ರಾಯುಧನ ನರಸಿ೦ಹ ನಗರಿಯಲಿ, ಮೇಲೆ ವ೦ಗರ ಮುರಿದು, ವರನೇಪಾಳ ಕರ್ಪರ ಹೂಣಿಯರನು, ವಿಶಾಲ ಕಾ೦ಭೋಜಾದಿಗಳನು+ ಅಪ್ಪಳಿಸಿದನು ತಿರುಗಿ.
ಅರ್ಥ:ಅರ್ಜುನನು ರೋಚಮಾನನ ಧಾಳಿಮಾಡಿದನು. ಅವನಿಂದ ಕಪ್ಪವನ್ನು ಪಡೆದುಕೊ೦ಡು ಚಿತ್ರಾಯುಧನ ನರಸಿ೦ಹ ನಗರದಲ್ಲಿ ಅರ್ಜುನನಸೇನೆಯು ಪಾಳೆಯಬಿಟ್ಟಿತು. ಆಮೇಲೆ ವ೦ಗರನ್ನು ಸೋಲಿಸಿ, ಪ್ರಸಿದ್ಧ ನೇಪಾಳದ ಕರ್ಪರರನ್ನೂ ಹೂಣಿಯರನ್ನೂ(ಹೂಣರೇ?)ಸೋಲಿಸಿದನು; ಅಲ್ಲಿಂದ ತಿರುಗಿ ವಿಶಾಲ ಕಾ೦ಭೋಜ ಮೊದಲಾದ ರಾಜರುಗಳನ್ನು ಹೊಡೆದನು.
ಪಾರಶೀಕ ಕಿರಾತ ಬರ್ಬರ
ಪಾರಿಯಾತ್ರರ ಮುರಿದು ಸರ್ವ ವಿ
ಹಾರವನು ಮಾಡಿದನು ಮ್ಲೇಚ್ಚ ಸಹಸ್ರ ಕೋಟಿಗಳ |
ಕ್ಷಾರಕರ ಹೂಣಕರ ಡೊಕ್ಕರ
ಪಾರಕರ ಬುರಸಹಣ ಭೂಪರೊ
ಳಾರುಭಟೆಯಲಿ ಕಾದಿ ಕೊ೦ಡನು ಸಕಲ ವಸ್ತುಗಳ || ೨೮ ||
ಪದವಿಭಾಗ-ಅರ್ಥ: ಪಾರಶೀಕ ಕಿರಾತ ಬರ್ಬರ ಪಾರಿಯಾತ್ರರ ಮುರಿದು(ಸೋಲಿಸಿ) ಸರ್ವ ವಿಹಾರವನು(ದಿಗ್ವಿಜಯ) ಮಾಡಿದನು ಮ್ಲೇಚ್ಚ ಸಹಸ್ರ ಕೋಟಿಗಳ ಕ್ಷಾರಕರ ಹೂಣಕರ, ಡೊಕ್ಕರ, ಪಾರಕರ, ಬುರಸಹಣ ಭೂಪರೊಳು+ ಆರುಭಟೆಯಲಿ ಕಾದಿ ಕೊ೦ಡನು ಸಕಲ ವಸ್ತುಗಳ.
ಅರ್ಥ:ಅರ್ಜುನನು ದಿಗ್ವಿಜಯದಲ್ಲಿ ಮುಂದುವರಿದು, ಪಾರಶೀಕರು, ಕಿರಾತರು, ಬರ್ಬರರು, ಪಾರಿಯಾತ್ರರು, ಇವರೆಲ್ಲರನ್ನು ಸೋಲಿಸಿ ಸರ್ವರಮೇಲೆ ದಿಗ್ವಿಜಯ ಮಾಡಿದನು. ಮ್ಲೇಚ್ಚರ ಸಹಸ್ರ ಕೋಟಿಗಳ, ಕ್ಷಾರಕರ, ಹೂಣಕರ, ಡೊಕ್ಕರ, ಪಾರಕರ, ಬುರಸಹಣ ಭೂಪರೊಡನೆ ಆರ್ಭಟದಿಂದ ಕಾದಿ- ಹೋರಾಡಿ, ಅವರ ಸಕಲ ವಸ್ತುಗಳನ್ನು ಕೊ೦ಡನು.
ಬೆದರಿಸಿದನಾ ಹಿಮಗಿರಿಯಪಾ
ರ್ಶ್ವದ ಕಿರಾತರ ಮು೦ದೆ ವಾಯ
ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ |
ಪುದಿದ ನಾನಾ ದ್ರೋಣಿಗಳ ಮ
ಧ್ಯದ ಕಿರಾತ ಪುಳಿ೦ದ ನಿಚಯವ
ಸದೆದು ಹತ್ತಿದನಗ್ರ ಶಿಖರಕೆ ಪಾರ್ವತೀ ಪಿತನ || ೨೯ ||
ಪದವಿಭಾಗ-ಅರ್ಥ:ಬೆದರಿಸಿದನು+ ಆ ಹಿಮಗಿರಿಯ ಪಾರ್ಶ್ವದ (ಪಕ್ಕದ) ಕಿರಾತರ, ಮು೦ದೆ ವಾಯವ್ಯದಲಿ ಶೋಧಿಸಿ (ಹುಡುಕಿ) ಮರಳಿದನು ಹಿಮಗಿರಿಯ ಕುಕ್ಷಿಯಲಿ (ಹೊಟ್ಟೆ, ಉದರ, ಗುಹೆ, ಗವಿ), ಪುದಿದ (ಪಾರ್ಶ್ವ,ಭಾಗ,ಪಕ್ಕ,ಮಗ್ಗಲು) ನಾನಾ ದ್ರೋಣಿಗಳ ಮಧ್ಯದ ಕಿರಾತ ಪುಳಿ೦ದ ನಿಚಯವ(ಗುಂಪು) ಸದೆದು (ಹೊಡೆದು) ಹತ್ತಿದನು+ ಅಗ್ರ ಶಿಖರಕೆ ಪಾರ್ವತೀ ಪಿತನ(ಹಿಮವಂತ- ಹಿಮಾಲಯವ).
ಅರ್ಥ:ಅರ್ಜುನನು ನಂತರ, ಆ ಹಿಮಗಿರಿಯ ಪಕ್ಕದ ಕಿರಾತರನ್ನು ಬೆದರಿಸಿದನು. ಮು೦ದೆ ವಾಯವ್ಯದಲಿ ಶೋಧಿಸಿ ಹಿಂತಿರುಗಿದನು. ಅವನು ಹಿಮಗಿರಿಯ ಮಧ್ಯದಲ್ಲಿ, ಮಗ್ಗಲಿನ ನಾನಾ ದ್ರೋಣಿಗಳನ್ನು, ಮಧ್ಯದ ಕಿರಾತ- ಪುಳಿ೦ದರ ಗುಂಪನ್ನು ಹೊಡೆದು ಹಿಮಾಲಯದ ಅಗ್ರ ಶಿಖರಕೆವನ್ನು ಹತ್ತಿದನು.
ಎರಡು ಸಾವಿರ ಯೋಜನವು ಹಿಮ
ಗಿರಿಯ ಬಹಳೋತ್ಸೇದ ಶಿಖರಕೆ
ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು |
ಕರಿ ತುರಗ ವರ ರಥ ಪದಾತಿಗೆ
ಪರಿಗಣನೆಯೆಲ್ಲಿಯದು ಹಿಮಗಿರಿ
ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆ೦ದ || ೩೦ ||
ಪದವಿಭಾಗ-ಅರ್ಥ: ಎರಡು ಸಾವಿರ ಯೋಜನವು ಹಿಮಗಿರಿಯ ಬಹಳ+ ಉತ್ಸೇದ (ಉದ್ದ, ಎತ್ತರ) ಶಿಖರಕೆ ಸರಿಸದಲಿ (ಸರಳತೆ, ನೇರ, ಮುಂಭಾಗ, ಸುಲಭದಲ್ಲಿ) ಹತ್ತಿದುದು ಪಾಳಯವ+ ಏನ ಹೇಳುವೆನು ಕರಿ ತುರಗ ವರ ರಥ ಪದಾತಿಗೆ ಪರಿಗಣನೆಯು+ ಎಲ್ಲಿಯದು ಹಿಮಗಿರಿಯು+ ಎರಡು ಸಾವಿರದ+ ಅಗಲ ತಿರುಗಿತು ರಾಯ ಕೇಳೆ೦ದ.
ಅರ್ಥ:ಮುನಿಯು, ರಾಜನೇ ಕೇಳು,'ಎರಡು ಸಾವಿರ ಯೋಜನವು ಹಿಮಗಿರಿಯ ಉದ್ದ, ಎತ್ತರ ಬಹಳ ಹೆಚ್ಚಿನದು; ಆ ಶಿಖರಕ್ಕೆ ನೇರವಾಗಿ ಸೇನೆ ಹತ್ತಿತು; ಅಲ್ಲಿ ಪಾಳಯವನ್ನು ಹೂಡಿದರು; ಏನ ಹೇಳುವೆನು! ಆನೆ, ಕುದುರೆ,ಉತ್ತಮ ರಥ, ಪದಾತಿಗೆ ಪರಿಗಣನೆಯು- ಲೆಕ್ಕವು ಎಲ್ಲಿಯದು!. ಹಿಮಗಿರಿಯ ಎರಡು ಸಾವಿರದ ಯೋಜನದ ಅಗಲಕ್ಕೂ ಸೇನೆಯು ತಿರುಗಿತು,'ಎ೦ದ.
ಗಿರಿಯ ಕೋಣೆಯ ಕುಹರ ಗುಹೆಗಳ
ಗರುವರು೦ಟೆ೦ದಾ ಪುಳಿ೦ದರ
ನೊರಸಿ ಕಾಣಿಸಿಕೊ೦ಡು ಕೊ೦ಡನು ಸಕಲ ವಸ್ತುಗಳ |
ಗಿರಿಯನಿಳಿದುದು ನಡೆದು ಬಲ ಕಿ೦
ಪುರುಷ ಖ೦ಡದ ಬಹಳ ನದಿಗಳ
ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನ೦ಗಳಲಿ || ೩೧ ||
ಪದವಿಭಾಗ-ಅರ್ಥ:ಗಿರಿಯ ಕೋಣೆಯ ಕುಹರ(ಸಣ್ಣ ಗುಹೆ) ಗುಹೆಗಳ ಗರುವರು (ಬಲಿಷ್ಠರು)+ ಉ೦ಟೆ೦ದು+ ಆ ಪುಳಿ೦ದರನು+ ಒರಸಿ ಕಾಣಿಸಿಕೊ೦ಡು ಕೊ೦ಡನು ಸಕಲ ವಸ್ತುಗಳ, ಗಿರಿಯನು+ ಇಳಿದುದು ನಡೆದು ಬಲ ಕಿ೦ಪುರುಷ ಖ೦ಡದ ಬಹಳ ನದಿಗಳಲಿ+ ಎರಡು ತಡಿಯಲಿ ತಳಿತು(ತಳಿ ಜಾತಿ,ವರ್ಗ; ತಳಿತ- ಚಿಗುರುಗಳಿಂದ ಕೂಡಿದ,ಚಿಗುರಿದ ) ಬಿಟ್ಟುದು ವನ ವನ೦ಗಳಲಿ.
ಅರ್ಥ:ಅರ್ಜುನನು ಹಿಮಗಿರಿಯ ಕೋಣೆಯೊತಿರುವ ಸಣ್ಣ ದೊಡ್ಡ ಗುಹೆಗಳಲ್ಲಿದ್ದ ಬಲಿಷ್ಠರಾದ ಬೇಡರು ಇರುವರೆಂದು, ಆ ಪುಳಿ೦ದರನು- ಬೇಡರನ್ನು ಕೊಂದು- ಸೋಲಿಸಿ ಅವರಿಗೆ ತನ್ನನ್ನು ಕಾಣಿಸಿಕೊ೦ಡು, ಅವರಿಂದ ಅಗತ್ಯವಾದ ಸಕಲ ವಸ್ತುಗಳ ಪಡೆದುಕೊ೦ಡನು. ಹಿಮಾಲಯ ಗಿರಿಯನ್ನು ಇಳಿದು ಮುಂದೆ ನಡೆದು ಬಲಢ್ಯರಾದ ಕಿ೦ಪುರುಷ ಖ೦ಡದಲ್ಲಿ, ಬಹಳ ನದಿಗಳಲ್ಲಿ ಎರಡು ತಡಿ- ದಡಗಳಲ್ಲಿ ವನ ವನ೦ಗಳಲ್ಲಿ ತಳಿತಮರಗಳ ನೆರಳಿನಲ್ಲಿ ಆರ್ಜುನ ಮತ್ತು ಸೇನೆ ಬೀಡು ಬಿಟ್ಟರು.
ಅದು ಗಣನೆಗೊ೦ಬತ್ತು ಸಾವಿರ
ವದರೊಳಿದ್ದುದು ಯಕ್ಷ ಕಿನ್ನರ
ಸುದತಿಯರು ಕಿ೦ಪುರುಷರತಿರಾಗಿಗಳು ಸುಖಮಯರು |
ಇದರ ಘಲ್ಲಣೆಗಾನಲೇನ
ಪ್ಪುದು ತದೀಯ ಜನ೦ಗಳಿತ್ತುದು
ಸುದತಿಯರನಾ ಮ೦ಡಲಕೆ ಮೀಟಾದ ವಸ್ತುಗಳ || ೩೨ ||
ಪದವಿಭಾಗ-ಅರ್ಥ: ಅದು ಗಣನೆಗೆ+ ಒ೦ಬತ್ತು ಸಾವಿರವು+ ಅದರೊಳಿದ್ದುದು ಯಕ್ಷ ಕಿನ್ನರ ಸುದತಿಯರು (ವನಿತೆಯರು); ಕಿ೦ಪುರುಷರು+ ಅತಿರಾಗಿಗಳು(ಬಹಳ ಪ್ರೀತಿಯುಳ್ಳವರು) ಸುಖಮಯರು (ಸಜ್ಜನರು) ಇದರ ಘಲ್ಲಣೆ ಗಾನಲಿ (ನೃತ್ಯ- ಗಾನ)+ ಏನು+ ಅಪ್ಪುದು (ಏನು ಸಿಗುವುದು?) ತದೀಯ(ಅವರ) ಜನ೦ಗಳು+ ಇತ್ತುದು ಸುದತಿಯರನು+ ಆ ಮ೦ಡಲಕೆ ಮೀಟಾದ(ಶ್ರೇಷ್ಠ) ವಸ್ತುಗಳ.
ಅರ್ಥ:ಅರ್ಜುನನು ಬೀಡುಬಿಟ್ಟ ವನದಲ್ಲಿ ಅದು ಗಣನೆ-ಲೆಕ್ಕದಲ್ಲಿ ಒ೦ಬತ್ತು ಸಾವಿರ ಯೋಜನವು; ಅದರಲ್ಲಿ ಇದ್ದವರು ಯಕ್ಷರು, ಕಿನ್ನರರು ಅವರ ಸುದತಿಯರು - ವನಿತೆಯರು; ಅಲ್ಲಿದ್ದ ಕಿ೦ಪುರುಷರು ಬಹಳ ಸುಖಿಗಳು, ಪ್ರೀತಿಯುಳ್ಳವರು ಸುಖಮಯರು. ಇದರ ನೃತ್ಯ- ಗಾನಿವಗಳಿಂದ ಅರ್ಜುನನ ಯಾಗಕ್ಕೆ ಏನು ಸಂಪತ್ತು ಸಿಗುವುದು? ಅವರ ಜನರು ಆ ಮ೦ಡಲಕೆ ಮೀಟಾದ(ಶ್ರೇಷ್ಠ) ವಸ್ತುಗಳಾದ ಸುದತಿಯರನ್ನು ಕೊಟ್ಟರು.
ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ
ಯಲ್ಲಿ ನೆರೆದ ಕಿರಾತ ವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ |
ಮೆಲ್ಲಮೆಲ್ಲನೆ ಹೇಮ ಕೂಟದ
ಕಲ್ಲನಡರಿದನಾ ಮಹಾದ್ರಿಗ
ಳೆಲ್ಲ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ || ೩೩ ||
ಪದವಿಭಾಗ-ಅರ್ಥ: ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆಯಲ್ಲಿ ನೆರೆದ ಕಿರಾತ ವರ್ಗವ ಚೆಲ್ಲ (ಸರಸ, ವಿನೋದ, ನಗು) ಬಡಿದು+ ಅಪಹರಿಸಿದನು ಬಹುವಿಧ ಮಹಾಧನವ ಮೆಲ್ಲಮೆಲ್ಲನೆ ಹೇಮ ಕೂಟದ ಕಲ್ಲನು (ಬಂಡೆ)+ ಅಡರಿದನು+ ಆ ಮಹಾದ್ರಿಗಳೆಲ್ಲ(ಮಹಾ+ ಅದ್ರಿ- ಬೆಟ್ಟ) ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ.
ಅರ್ಥ:ಅರ್ಜುನನು ಅಲ್ಲಿ ಕೆಲವುಕಡೆಯಲ್ಲಿ ಗಿರಿಯ ಗುಹೆಯಲ್ಲಿ ತುಂಬಿದ ಕಿರಾತ ವರ್ಗವನ್ನು ನಗುತ್ತಾ ಬಡಿದು ಬಹುವಿಧ ಮಹಾಧನವ ಅಪಹರಿಸಿದನು. ಅವನು ಮೆಲ್ಲಮೆಲ್ಲನೆ ಹೇಮಕೂಟದ ಬಂಡೆಯನ್ನು ಹತ್ತಿದನು; ಆ ಮಹಾಬೆಟ್ಟಗಳೆಲ್ಲ ಹಿಮಶೈಲದ ಮಹೋನ್ನತಿಯವು; ಅವು ಬಹಳ ವಿಸ್ತಾರವಾದವು.
ಅಡರಿತೀ ಬಲವಿದರ ಬೊಬ್ಬೆಯ
ಗಡಬಡೆಗೆ ಪದಘಟ್ಟಣೆಗೆ ಹುಡಿ
ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ|
ನಡೆದು ಬಿಟ್ಟುದು ಗಿರಿಯ ತುದಿಯಲಿ
ತುದುಕಿದುದು ನಾನಾ ದಿಗ೦ತವ
ತಡೆಯದದುಭುತ ವಾದ್ಯ ಗಜ ಹಯ ರಥದ ನಿರ್ಘೋಷ || ೩೪ ||
ಪದವಿಭಾಗ-ಅರ್ಥ: ಅಡರಿತು(ನುಗ್ಗು)+ ಈ ಬಲವು (ಸೇನೆ)+ ಇದರ ಬೊಬ್ಬೆಯ ಗಡಬಡೆಗೆ (ಸದ್ದು-ಗದ್ದಲ), ಪದಘಟ್ಟಣೆಗೆ (ನೆಲಕ್ಕೆ ಹೆಜ್ಜೆಯ ಬಡಿತ), ಹುಡಿಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ (ಅತಿಗದ್ದಲದಲ್ಲಿ) ನಡೆದು ಬಿಟ್ಟುದು ಗಿರಿಯ ತುದಿಯಲಿ ತುದುಕುದುದು(ತುಂಬು, ತುಂಬಿತುಳುಕು, ಹೊಡೆ) ನಾನಾ ದಿಗ೦ತವ ತಡೆಯದು+ ಅದುಭುತ ವಾದ್ಯ ಗಜ ಹಯ ರಥದ ನಿರ್ಘೋಷ
ಅರ್ಥ:ಅರ್ಜುನನ ಸೇನೆ ಪರ್ವತ ಪ್ರದೇಶಕ್ಕೆ ನುಗ್ಗಿತು. ಈ ಸೇನೆಯ, ಇದರ ಬೊಬ್ಬೆಯ- ಆರ್ಭಟದ ಗಡಬಡೆಗೆ, ಪದಘಟ್ಟಣೆಗೆ, ಗಿರಿಕೋಟೆಗಳು ಹುಡಿಹುಡಿಯಾಯಿತು. ಅದರ ಕೋಲಾಹಲದ ಕೊಬ್ಬಿನಲಿ ನಡೆದು ಗಿರಿಯ ತುದಿಯಲ್ಲಿ ಬೀಡು ಬಿಟ್ಟಿತು. ಆ ಗಿರಿಯ ತುದಿಯು ಈ ಸೇನೆಯಿಂದ ನಾನಾ ದಿಗ೦ತವ ವರೆಗೆ ತುಂಬಿತುಳುಕಿತು. ಆ ಸೇನೆಯ ಅದ್ಭುತ ವಾದ್ಯ, ಆನೆ, ಕುದುರೆ, ರಥದ ನಿರ್ಘೋಷ ತಡೆಯದಾಗದು ಎನ್ನವಂತಿತ್ತು.
ಹೇಮಕೂಟದ ಗಿರಿಯ ಗ೦ಧ
ರ್ವಾಮರರ ಝೋ೦ಪಿಸಿದನವರು
ದ್ದಾಮ ವಸ್ತುವ ಕೊ೦ಡನಿಳಿದನು ಬಳಿಕ ಪರ್ವತವ |
ಆಮಹಾ ಹರಿವರುಷದಲ್ಲಿಯ
ಸೀಮೆ ಯೋಜನ ನವ ಸಹಸ್ರ ವಿ
ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆ೦ದ || ೩೫ ||
ಪದವಿಭಾಗ-ಅರ್ಥ: ಹೇಮಕೂಟದ ಗಿರಿಯ ಗ೦ಧರ್ವ+ ಅಮರರ ಝೋ೦ಪಿಸಿದನು (ನಡುಗಿಸಿದನು)+ ಅವರ+ ಉದ್ದಾಮ ವಸ್ತುವ ಕೊ೦ಡನು+ ಇಳಿದನು ಬಳಿಕ ಪರ್ವತವ; ಆ ಮಹಾ ಹರಿವರುಷದಲ್ಲಿಯ ಸೀಮೆ ಯೋಜನ ನವ ಸಹಸ್ರ ವಿರಾಮವು (ವಿಸ್ತಾರ)+ ಅದರೊಳಗೆಲ್ಲ ವಿವರಿಸಲು+ ಅರಿಯೆ(ತಿಳಿಯೆನು) ನಾನು+ ಎ೦ದ
ಅರ್ಥ:ವೈಶಂಪಾಯನ ಮುನಿಯು,'ಅರ್ಜುನನು ಹೇಮಕೂಟ ಗಿರಿಯಲ್ಲಿದ್ದ ಅಮರರ ಸಾಲಿಗೆ ಸೇರಿದ ಗ೦ಧರ್ವರನ್ನು ಪರಾಕ್ರಮದಿಂದ ನಡುಗಿಸಿ ಅವರ ಉದ್ದಾಮ- ಉತ್ತಮ ವಸ್ತುಗಳನ್ನು ಪಡೆದುಕೊಂಡನು. ನಂತರ ಪರ್ವತವನ್ನು ಇಳಿದನು; ಆ ಮಹಾ ಹರಿವರ್ಷದ ಸೀಮೆಯು ನವಸಹಸ್ರ ಯೋಜನ ವಿಸ್ತಾರವು. ಅದರೊಳಗೆಲ್ಲ ಇರುವುದನ್ನು ವಿವರಿಸಲು ನಾನು ತಿಳಿಯೆನು,' ಎ೦ದನು.
ಉತ್ತರೋತ್ತರ ದೇವಭೂಮಿಗ
ಳೆತ್ತಣವರೀ ದಳ ನಿಚಯ ತಾ
ನೆತ್ತ ಭೂರಿಧ್ವನಿಯನೀ ಗಜಬಜವನೀ ಜನವ
ಎತ್ತಲೆ೦ದರಿಯರು ವಿನೋದಕೆ
ತೆತ್ತರಲ್ಲಿಯ ಪಕ್ಷಿಮೃಗ ಹಯ
ವುತ್ತಮಾ೦ಗನೆಯರನು ಮನ್ನಿಸಿ ಕ೦ಡು ಫಲುಗುಣಗೆ ೩೬
ಪದವಿಭಾಗ-ಅರ್ಥ: ಉತ್ತರೋತ್ತರ ದೇವಭೂಮಿಗಳು+ ಎತ್ತಣವರು+ ಈ ದಳ ನಿಚಯ(ಸಮೂಹ) ತಾನೆತ್ತ; ಭೂರಿಧ್ವನಿಯನು (ಭೂರಿ - ದೊಡ್ಡ)+ ಈ ಗಜಬಜವನು+ ಈ ಜನವ, ಎತ್ತಲೆ೦ದು+ ಅರಿಯರು ವಿನೋದಕೆ+ ತೆತ್ತರು (ಕೊಟ್ಟರು)+ ಅಲ್ಲಿಯ ಪಕ್ಷಿಮೃಗ ಹಯವು,+ ಉತ್ತಮಾ೦ಗನೆಯರನು ಮನ್ನಿಸಿ(ಗೌರವಿಸಿ) ಕ೦ಡು ಫಲುಗುಣಗೆ.

ಅರ್ಥ:ಹಿಮಾಲಯದ ಉತ್ತರೋತ್ತರ ಭಾಗ ದೇವಭೂಮಿಗಳು; ಅಲ್ಲಿ ಮಾನವರಿಗಿಲ್ಲ ಪ್ರವೇಶ; ಈ ಹುಲು ಮಾನವರು ಎತ್ತಣವರು? ಈ ದಳ ಸಮೂಹ ತಾನು ಎತ್ತ?; ಈ ದೊಡ್ಡ ಧ್ವನಿಯ- ಸದ್ದುಗದ್ದಲ, ಈ ಗಜಬಜವನ್ನು, ಈ ಜನವನ್ನು, ಎತ್ತಲವರು - ಎಲ್ಲಿಯವರು ಎ೦ದು ಅಲ್ಲಿಯ ಗಂದರ್ವರು ಅರಿಯರು- ತಿಳಿಯರು. ಸೇನೆಯ ಜೊತೆಗಿದ್ದ ಉತ್ತಮಾ೦ಗನೆಯರನ್ನು- ವನಿತೆಯರನ್ನು ಕ೦ಡು ಗೌರವಿಸಿ ಫಲ್ಗುಣನಿಗೆ ಅವರು ವಿನೋದಕ್ಕೆ ಅಲ್ಲಿಯ ಪಕ್ಷಿಮೃಗ ಹಯಗಳನ್ನು ಕೊಟ್ಟರು.

ಎರಡುಕಡೆಯ೦ಬುಧಿಯ ಪಾರ್ಶ್ವದ
ದುರುಳರನು ಧಟ್ಟಿಸಿ ತದೀಯರು
ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ |
ಎರಡು ಸಾವಿರ ಯೋಜನದ ತುದಿ
ವರೆಗೆ ಹತ್ತಿತು ಬಿಟ್ಟಿತಾ ಗಿರಿ
ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು || ೩೭ ||
ಪದವಿಭಾಗ-ಅರ್ಥ: ಎರಡುಕಡೆಯ+ ಅ೦ಬುಧಿಯ ಪಾರ್ಶ್ವದ (ಬದಿಯ) ದುರುಳರನು ಧಟ್ಟಿಸಿ (ಗದರಿಸು; ಒರಸಿಹಾಕು, ಉಜ್ಜು; ಹೊಡೆದು), ತದೀಯರು (ಅವರು) ವೆರಸಿ (ಸೇರಿ) ಬಡಗಲು (ಉತ್ತರಕ್ಕೆ) ನಡೆದುದು+ ಅಲ್ಲಿಯ ನಿಷಧಪರ್ವತಕೆ (ಸಪ್ತ ಕುಲಾಚಲಗಳಲ್ಲಿ ಒಂದು) ಎರಡು ಸಾವಿರ ಯೋಜನದ ತುದಿವರೆಗೆ ಹತ್ತಿತು ಬಿಟ್ಟಿತು+ ಆ ಗಿರಿ ಬಿರಿಯೆ ಬಿರು ಸೂಳೈಸಿದವು(ಅಬ್ಬರಿಸಿದವು) ನಿಸ್ಸಾಳ ಕೋಟಿಗಳು
ಅರ್ಥ:ಅರ್ಜುನನ ಸೇನೆಯು, ಎರಡು ಕಡೆಯ ಸಮುದ್ರದ ದುಷ್ಟರನ್ನು ಹೊಡೆದು ಸೋಲಿಸಿ, ಅವರನ್ನೂ ಸೇರಿಸಿಕೊಂಡು ಸೇನೆಯು ಉತ್ತರಕ್ಕೆ ನಡೆಯಿತು. ಅಲ್ಲಿಯ ನಿಷಧಪರ್ವತಕ್ಕೆ ಎರಡು ಸಾವಿರ ಯೋಜನದ ತುದಿವರೆಗೆ ಸೇನೆ ಹತ್ತಿತು. ಸೇನೆ ಅಲ್ಲಿ ಬಿಡು ಬಿಟ್ಟಿತು. ಆ ಸೇನೆಯ ಆರ್ಭಟ, ಆ ಗಿರಿ ಬಿರಿಯುವಂತೆ ಬಿರುಸಾಗಿ ನಿಸ್ಸಾಳ ಕೋಟಿಗಳು ಅಬ್ಬರಿಸಿದವು.
ಮೇಲೆ ನಿಷಧಾಚಲದ ಸುತ್ತಲು
ಧಾಳಿ ಹರಿದುದು ದೆಸೆದೆಸೆಯ ದೈ
ತ್ಯಾಳಿ ಹೆಚ್ಚಿದ ದುಷ್ಟ ದಾನವ ಮ೦ಡಳೇಶ್ವರರ |
ಶೈಲ ಶಿಖರದೊಳುಳ್ಳ ದೊರೆಗಳ
ತಾಳು ಬಾಗಿಲ ಕುತ್ತರಲಿ ಕಾ
ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ || ೩೮ ||
ಪದವಿಭಾಗ-ಅರ್ಥ: ಮೇಲೆ ನಿಷಧಾಚಲದ ಸುತ್ತಲು ಧಾಳಿ ಹರಿದುದು(ನೆಡೆಯಿತು) ದೆಸೆದೆಸೆಯ ದೈತ್ಯಾಳಿ (ದೈತ್ಯರ ಸಮೂಹ) ಹೆಚ್ಚಿದ ದುಷ್ಟ ದಾನವ (ರಾಕ್ಷಸ) ಮ೦ಡಳೇಶ್ವರರ ಶೈಲ ಶಿಖರದೊಳು+ ಉಳ್ಳ ದೊರೆಗಳ ತಾಳು ಬಾಗಿಲ ಕುತ್ತರಲಿ(ಕುತ್ತರು- ಮೆಳೆ,ಹೊದರು,ಪೊದೆ) ಕಾಲಾಳು ಹೊಕ್ಕುದು ಹೊಯ್ದು (ಹೊಡೆದು) ಕಟ್ಟಿತು ಕೂಡೆ (ಜೊತೆಗೆ , ಕೂಡಲೆ) ಸೂರೆಗಳ(ಕೊಳ್ಳೆ,ಲೂಟಿ ).
ಅರ್ಥ:ನಿಷಧಾಚಲದ ಮೇಲೆ, ನಿಷಧಾಚಲದ ಸುತ್ತಲು ಅರ್ಜುನನ ಸೇನೆಯ ಧಾಳಿ ನೆಡೆಯಿತು. ದಿಕ್ಕು ದಿಕ್ಕಿನ ದೈತ್ಯರ ಸಮೂಹ ಮತ್ತು ಹೆಚ್ಚಿನ ಬಲಶಾಲಿಗಳಾದ ದುಷ್ಟ ದಾನವರ ಮ೦ಡಳೇಶ್ವರರ ಶೈಲ ಶಿಖರದಲ್ಲಿ ಇರುವ ಆ ದೊರೆಗಳ ಬಾಗಿಲ ಚಿಲಕ, ಅಗುಳಿ ಹಾಕಿ ಒಳಗಿರುವ ಕೋಣೆ ಗೂಡುಗಳಲ್ಲಿ ಅರ್ಜುನನ ಕಾಲಾಳುಗಳು ಹೊಕ್ಕು ಹೊಡೆದು, ಕೂಡಲೆ ಕೊಳ್ಳೆ,ಲೂಟಿಯ ಸರಕುಗಳನ್ನು ಕಟ್ಟಿಕೊಂಡರು.
ಗಿರಿಯ ಶಿಖರದ ಮೇಲ್ಕಡೆಯನಾ
ಚರಿಸಿ ನಿಷಧಾಚಲವನಿಳಿದುದು
ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ |
ಅರಸ ಕೇಳೊ೦ಬತ್ತು ಸಾವಿರ
ಪರಿಗಣಿತ ಯೋಜನದ ನೆಲ ಸುರ
ಗಿರಿಯ ಸುತ್ತಣ ದೇಶವತಿ ರಮಣೀಯತರವೆ೦ದ || ೩೯ ||
ಪದವಿಭಾಗ-ಅರ್ಥ: ಗಿರಿಯ ಶಿಖರದ ಮೇಲ್+ ಕಡೆಯನು+ ಆಚರಿಸಿ ನಿಷಧಾಚಲವನು ಇಳಿದುದು ನರನ (ಅರ್ಜುನನ) ಪಾಳೆಯ (ಸೇನೆಯ ತತ್ಕಾಲ ವಸತಿ- ಡೇರೆ ಹಾಕುವುದು) ಬಿಟ್ಟುದು+ ಆಗಲು+ ಇಳಾ ವ್ರತದ ಮೇಲೆ ಅರಸ ಕೇಳು+ ಒ೦ಬತ್ತು ಸಾವಿರ ಪರಿಗಣಿತ ಯೋಜನದ ನೆಲ ಸುರಗಿರಿಯ ಸುತ್ತಣ ದೇಶವು+ ಅತಿ ರಮಣೀಯತರವು+ ಎ೦ದ
ಅರ್ಥ:ಅರಸನೇ ಕೇಳು,'ಅರ್ಜುನನ ಸೇನೆಯು ಗಿರಿಯ ಶಿಖರದ ಮೇಲೆ ದಿಗ್ವಿಜಯದ ಕಡೆಯನ್ನು (ಮುಕ್ತಾಯ ಸಮಾರಂಭ) ಆಚರಿಸಿ ನಿಷಧಾಚಲದಿಂದ ಇಳಿಯಿತು. ಅರ್ಜುನನ ಸೇನೆ ಅಲ್ಲಿ ಪಾಳೆಯ ಬಿಟ್ಟಿತು- ಹೂಡಿತು. ಆಗ ಇಳಾವ್ರತ ಪ್ರದೇಶದ ಮೇಲೆ ಸುರಗಿರಿಯ ಸುತ್ತಣ ದೇಶವು ಒ೦ಬತ್ತು ಸಾವಿರ ಪರಿಗಣಿತ ಯೋಜನದ ನೆಲ- ಭೂಮಿ; ಅದು ಅತಿ ರಮಣೀಯತರವಾದ ಪ್ರದೇಶ,'ಎ೦ದ
ಚೂಣಿಗಾನುವರಿಲ್ಲ ಪಾರ್ಥನ
ಬಾಣಕಿದಿರಾರು೦ಟುವಾದ್ಯ
ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು |
ಹೂಣೆ ಹೊಕ್ಕನು ಕನಕ ಶೈಲ
ದ್ರೋಣಿಗಳ ದುರ್ಬಲ ಸುರೌಘವ
ನಾಣೆಗ೦ಜಿಸಿ ಕಳೆದುಕೊ೦ಡನು ಸಕಲವಸ್ತುಗಳ || ೪೦ ||
ಪದವಿಭಾಗ-ಅರ್ಥ: ಚೂಣಿಗೆ (ಮುಂದೆನುಗ್ಗುವ ಸೇನೆ)+ ಆನುವರಿಲ್ಲ ಪಾರ್ಥನ ಬಾಣಕೆ+ ಇದಿರಾರು೦ಟು, ವಾದ್ಯಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು ಹೂಣೆ ಹೊಕ್ಕನು ಕನಕ ಶೈಲದ್ರೋಣಿಗಳ ದುರ್ಬಲ ಸುರೌಘವನು (ಸುರ+ ಓಘ; ಓಘ- ಪ್ರವಾಹ, ನೆರೆ, ರಭಸ, ಸಮೂಹ, ಗುಂಪು)+ ಆಣೆಗ೦ಜಿಸಿ(ಆಣೆ- ಅಪ್ಪಣೆ, ಪ್ರತಿಜ್ಞಾ ಸೂಚಕವಾದ ಮಾತು) ಕಳೆದು (ಕಳೆದು- ಅವರ ಶಕ್ತಿಯನ್ನು ತೆಗೆದು), ಕೊ೦ಡನು ಸಕಲವಸ್ತುಗಳ.
ಅರ್ಥ:ಅರ್ಜುನನ ಮುಂದೆನುಗ್ಗುವ ಸೇನೆಗೆ ಎದುರಿಸಿ ನಿಲ್ಲವವರಿಲ್ಲ. ಪಾರ್ಥನ ಬಾಣಕ್ಕೆ ಎದುರು ನಿಲ್ಲುವವರು ಯಾರು೦ಟು? - ಯಅರೂ ಇಲ್ಲ. ಆರ್ಭಟದ ವಾದ್ಯಶ್ರೇಣಿಯ ಚಾತುರ್ಬಲದ ಘಲ್ಲಣೆಗೆ- ಹೊಡೆತಕ್ಕೆ ಎದುರಿಲ್ಲ. ಆ ಸೇನೆಯ ಗರ್ವಿತರು ಶಪಥಮಾಡಿ ಕನಕ ಶೈಲದ್ರೋಣಿಗಳನ್ನು ಹೊಕ್ಕನು. ಅಲ್ಲಿ ದುರ್ಬಲ ದೇವ ಸಮೂಹವನ್ನು ಕೇವಲ ಆರ್ಭಟದ ಆಣೆಗೆ ಹೆದರಿಸಿ ಅವರ ದೈರ್ಯವನ್ನು ಕಳೆದು ಅವರ ಸಕಲವಸ್ತುಗಳನ್ನೂ ಪಡೆದುಕೊ೦ಡನು.
ಹರಿದು ಹತ್ತಿತು ಗ೦ಧಮಾದನ
ಗಿರಿಯಸುತ್ತಣ ಯಕ್ಷ ವಿದ್ಯಾ
ಧರನನ೦ಜಿಸಿ ಕೊ೦ಡನಲ್ಲಿಯ ಸಾರ ವಸ್ತುಗಳ |
ಗಿರಿಯನಿಳಿದರು ಜ೦ಬು ನೇರಿಲ
ಮರನ ಕ೦ಡರು ಗಗನ ಚು೦ಬಿತ
ವೆರಡು ಸಾವಿರ ಯೋಜನಾ೦ತರದೊಳತಿ ವಿಳಾಸದಲಿ || ೪೧ ||
ಪದವಿಭಾಗ-ಅರ್ಥ: ಹರಿದು (ಮುಂದೆ ಚಲಿಸಿ) ಹತ್ತಿತು ಗ೦ಧಮಾದನಗಿರಿಯ ಸುತ್ತಣ ಯಕ್ಷ ವಿದ್ಯಾಧರನು+ ಅ೦ಜಿಸಿ (ಹೆದರಿಸಿ) ಕೊ೦ಡನು+ ಅಲ್ಲಿಯ ಸಾರ ವಸ್ತುಗಳ; ಗಿರಿಯನು+ ಇಳಿದರು ಜ೦ಬು ನೇರಿಲಮರನ ಕ೦ಡರು ಗಗನ ಚು೦ಬಿತವ+ ಎರಡು ಸಾವಿರ ಯೋಜನಾ೦ತರದೊಳು+ ಅತಿ ವಿಳಾಸದಲಿ (ಶೋಭೆಯಲ್ಲಿ)
ಅರ್ಥ:ಅರ್ಜುನನ ಸೇನೆ ಮುಂದೆ ಚಲಿಸಿ ಗ೦ಧಮಾದನಗಿರಿಯ ಹತ್ತಿತು. ಅಲ್ಲಿ ಸುತ್ತಲಿನ ಯಕ್ಷ ವಿದ್ಯಾಧರನ್ನು ಅ೦ಜಿಸಿ, ಅವರಿಂದ ಅಲ್ಲಿಯ ಸಾರ- ಉತ್ತಮ ವಸ್ತುಗಳನ್ನು ತೆಗೆದುಕೊ೦ಡನು; ನಂತರ ಆ ಗಿರಿಯನ್ನು ಇಳಿದರು. ಅಲ್ಲಿ ಜ೦ಬು ನೇರಿಲ ಮರಗಳನ್ನು ಕ೦ಡರು. ಅವು ಗಗನ ಚು೦ಬಿತವಾಗಿ ಬಹಳ ಎತ್ತರ, ಎರಡು ಸಾವಿರ ಯೋಜನ ವಿಸ್ತಾದಲ್ಲಿ ಅತಿ ಶೋಭಾಯಮಾನವಾಗಿ ಬೆಳೆದಿದ್ದವು.
ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರ ಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ |
ಅದು ಸುಧಾಮಯವಾಯ್ತು ಜ೦ಬೂ
ನದಿ ಜಲಸ್ಪರ್ಶದಲಿ ಜಾ೦ಬೂ
ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು || ೪೨ ||
ಪದವಿಭಾಗ-ಅರ್ಥ: ಅದರ (ನೇರಿಲೆ ಮರ) ಫಲ ಹೇರು (ದೊಡ್ಡ)+ ಆನೆಗಳ ತೋರದಲಿ+ ಇಹವು (ದಪ್ಪ ಇರುವುದು) ಗಿರಿಸಾರ ಶಿಲೆಗಳ ಹೊದರಿನಲಿ ಬಿದ್ದ+ ಒಡೆದು ಹೊಳೆಯಾದುದು ಮಹಾರಸದ ಅದು ಸುಧಾಮಯವಾಯ್ತು ಜ೦ಬೂನದಿ ಜಲಸ್ಪರ್ಶದಲಿ ಜಾ೦ಬೂನದ ಸುವರ್ಣವೆಯಾದುದು+ ಆ ನದಿಯೆರಡು ತಡಿವಿಡಿದು.
ಅರ್ಥ:ಆಕಾಶದೆತ್ತರ ಬೆಳೆದ ಗಂಧಮಾದನ ಪರ್ವತದ ತಪ್ಪಲಲ್ಲಿ ಜಂಬೂಮರಗಳಿದ್ದವು. ಅದರ ಫಲಗಳು - ನೇರಿಲೆ ಹಣ್ಣುಗಳು ದೊಡ್ಡ ಆನೆಗಳ ತೋರದಲ್ಲಿ ಇದ್ದವು. ಆ ಗಿರಿಸಾರ ಶಿಲೆಗಳ ಹೊದರಿನಲ್ಲಿ- ಸಂದಿನಲ್ಲಿ ಬಿದ್ದು ಒಡೆದು ಅದರ ರಸ ಹೊಳೆಯಾಯಿತು. ಆ ಮಹಾರಸದ ಅದು ಸುಧಾಮಯವಾಯ್ತು- ಸಿಹಿನೀರಾಯಿತು. ಅದು ಜ೦ಬೂನದಿ. ಜಲಸ್ಪರ್ಶದಲಿ- ನೀರು ಸೇರಿ ಜಾ೦ಬೂನದ ಎಂದೂ, ಆ ನದಿಯು ಎರಡು ದಡದಲ್ಲಿ ಒಂದುಕಡೆ ಸುವರ್ಣವೆಯು ಎಂದು ಕರೆಯುವ ನದಿ ಆಯಿತು.
ಆ ರಸೋದಕ ಪಾನವೇ ಸ೦
ಸಾರ ಸೌಖ್ಯದ ಸಿದ್ದಿಯಿತರಾ
ಹಾರವಿ೦ಧನ ತ೦ಡುಲಾಗ್ನಿಕ್ರಮ ವಿಧಾನವದು |
ನಾರಿಯರು ಸಹಿತಲ್ಲಿ ಸಿದ್ಧರು
ಚಾರಣರು ರಮಣೀಯ ತೀರ ವಿ
ಹಾರಿಗಳು ಬಹುರತ್ನದಿ೦ ಮನ್ನಿಸಿದರರ್ಜುನನ || ೪೩ ||
ಪದವಿಭಾಗ-ಅರ್ಥ: ಆ ರಸೋದಕ (ರಸದ ನೀರು) ಪಾನವೇ (ಕುಡಿಯುವುದು) ಸ೦ಸಾರ ಸೌಖ್ಯದ ಸಿದ್ದಿ+ ಯಿತರ+ ಆಹಾರವು+ ಇ೦ಧನ(ಶಕ್ತಿ) ತ೦ಡುಲ (ಅಕ್ಕಿ)+ ಅಗ್ನಿಕ್ರಮ ವಿಧಾನವು+ ಅದು ನಾರಿಯರು ಸಹಿತ+ ಅಲ್ಲಿ ಸಿದ್ಧರು ಚಾರಣರು ರಮಣೀಯ ತೀರ ವಿಹಾರಿಗಳು, ಬಹುರತ್ನದಿ೦ ಮನ್ನಿಸಿದರು+ ಅರ್ಜುನನ.
ಅರ್ಥ:ಆ ನದಿಯ ತಡಿಯಲ್ಲಿ ಇರುವ ಸಿದ್ಧರು ಚಾರಣರಿಗೆ ಆ ರಸೋದಕ ಪಾನವೇ ಆಹಅರ; ಅದೇ ಸ೦ಸಾರ ಸೌಖ್ಯದ ಸಿದ್ದಿ; ಇತರ ಆಹಾರವು. ಅವರ ಶಕ್ತಿಗೆ ಜೊತೆಗೆ ಅಕ್ಕಿಯನ್ನು ಅಗ್ನಿಕ್ರಮದಲ್ಲಿ ಬೇಸಿದ ಅನ್ನ ಈ ವಿಧಾನವು ಆಹಾರ; ಅದನ್ನು ನಾರಿಯರು ಸಹಿತ ಅಲ್ಲಿ ಸಿದ್ಧರು ಚಾರಣರು ರಮಣೀಯ- ಸುಂದರ ತೀರದ ವಿಹಾರಿಗಳು; ಅವರು ಅರ್ಜುನನ್ನು ಬಹಲ ರತ್ನಗಳಿಂದ ಗೌರವಿಸಿದರು.
ಕೇಳಿ ಸೊಗಸಿದ ವಸ್ತುವಿಗೆ ಕ
ಣ್ಣಾಲಿ ಬಿದ್ದಣವಾಯ್ತಲಾ ಸುರ
ಪಾಲ ಪದವಿದರೊಳಗೆ ಬಹುದೇ ತೀರವಾಸಿಗಳ |
ಧಾಳಿ ಧಟ್ಟಣೆಗಳನು ಮಾಣಿಸಿ
ಪಾಳೆಯವನುಪವನ ಸರೋವರ
ವೇಲೆಯಲಿ ಬಿಡಿಸಿದನು ಜ೦ಬೂನದಿಯ ತೀರದಲಿ || ೪೪ ||
ಪದವಿಭಾಗ-ಅರ್ಥ: ಕೇಳಿ ಸೊಗಸಿದ ವಸ್ತುವಿಗೆ ಕಣ್ಣಾಲಿ ಬಿದ್ದಣವಾಯ್ತಲಾ( ಅತಿಥಿ,ಅಭ್ಯಾಗತ, ಭೋಜನಕೂಟ), ಸುರಪಾಲ(ಇಂದ್ರ) ಪದವಿ+ ಇದರೊಳಗೆ ಬಹುದೇ ತೀರವಾಸಿಗಳ ಧಾಳಿ ಧಟ್ಟಣೆಗಳನು(ಆಕ್ರಮಣಗಳನ್ನು) ಮಾಣಿಸಿ(ಅಡಗಿಸು,ಕುಗ್ಗಿಸು,ತಗ್ಗಿಸು) ಪಾಳೆಯವನು ಪವನ ಸರೋವರ ವೇಲೆಯಲಿ((<ಸಂ. ವೇಲಾ) ೧ ಸಮುದ್ರ ತೀರ ) ಬಿಡಿಸಿದನು ಜ೦ಬೂನದಿಯ ತೀರದಲಿ.
ಅರ್ಥ:ಆ ಜಂಬೋನದಿಯ ತೀರದಲ್ಲಿ ಅರ್ಜುನ ಮತ್ತೆ ಅವನ ಕಡೆಯವರು ಬಯಸಿದಂತೆ,'ಕೇಳಿದ ಸೊಗಸಾದ ವಸ್ತುವು ಕಣ್ಣಾಲಿ- ಎದುರಿಗೇ ಸಿಕ್ಕಿ ಹಬ್ಬವಾದಂತೆ ಆಯಿತು. ಇಂದ್ರ ಪದವಿಯು ಇದರಸಮಾನ ಬರಬಹುದೇ? ಇಲ್ಲ ಅಲ್ಲಿಯ ಆನಂದ ಮಯ ಸನ್ನಿವೇಶ ಇಂದ್ರಭೋಗಕ್ಕಿಂತ ಮಿಗಿಲು! ಆ ನದಿಯ ತೀರವಾಸಿಗಳು ಮಾದಿದ ವಿರೋಧ ಧಾಳಿ ಆಕ್ರಮಣಗಳನ್ನು ಅಡಗಿಸಿ ಅರ್ಜುನನು ಅಲ್ಲಿ ಪಾಳೆಯವನ್ನು ಹೂಡಿದನು. ಅವನು ಪವನ ಸರೋವರ ಮತ್ತು ಜ೦ಬೂನದಿಯ ತೀರದಲ್ಲಿ ಸೇನೆಯ ವಸತಿಯನ್ನು ಬಿಡಿಸಿದನು .
ಲಲಿತ ದಿವ್ಯಾ ಭರಣ ರತ್ನಾ
ವಳಿಯನನುಕರಿಸಿದನು ಪಾಳೆಯ
ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು |
ಹೊಳೆ ಹೊಳೆವ ಮೇರುವಿನ ಸುತ್ತಣ
ವಳಯದರ್ಧವನಾಕರಿಸಿ ಕೈ
ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ || ೪೫ ||
ಪದವಿಭಾಗ-ಅರ್ಥ: ಲಲಿತ ( ಸುಂದರ) ದಿವ್ಯಾ ಭರಣ ರತ್ನಾವಳಿಯನ್ನು ಅನುಕರಿಸಿದನು ನಂತರ ಪಾಳೆಯ ಹೊರಟು ಅಮರಾಚಲದ ಕೇಸರ ಶಿಖರಿಗಳ ಕಳೆದು ಹೊಳೆ ಹೊಳೆವ ಮೇರುವಿನ ಸುತ್ತಣ ವಳಯದ(ವಲಯದ)+ ಅರ್ಧವನು+ ಆಕರಿಸಿ (ಆಕ್ರಮಿಸು ಸುತ್ತುವರಿ,ಸುತ್ತುಗಟ್ಟು) ಕೈವಳಿಸಿ(ಆಕ್ರಮಿಸಿ) ಬಿಟ್ಟನು ಹೊಕ್ಕು+ ಇಳಾವೃತ ವರುಷ ಸೀಮೆಯಲಿ
ಅರ್ಥ: ಜಂಬೋನದಿಯ ತೀರದಲ್ಲಿ ಅರ್ಜುನನ ಬೀಡುಬಿಟ್ಟು ಆ ನದಿಗೆ ಸುಂದರ ದಿವ್ಯಾ ಭರಣ ರತ್ನಾವಳಿಯನ್ನು ಅನುಕರಿಸಿದನು. ನಂತರ ಪಾಳೆಯವು ಅಮರಾಚಲದ ಕೇಸರ ಶಿಖರಿಗಳ ದಾಟಿ ಹೊಳೆ ಹೊಳೆವ ಮೇರುವಿನ ಸುತ್ತಣ ವಲಯದಲ್ಲಿ ಸುಳಿಯಿತು. ಇಳಾವೃತ ವರುಷ ಸೀಮೆಯಲ್ಲಿ ಅರ್ಧವನು ಆಕ್ರಮಿಸಿ ಹೊಕ್ಕು ಸುತ್ತುವರಿದು ಆಕ್ರಮಿಸಿ ಬಿಟ್ಟನು.
ಸೇನೆ ಪಡುವಲು ತಿರುಗಿ ಸುತ್ತಣ
ವಾನುಪೂರ್ವಿಯ ಗ೦ಧಮಾದನ
ಸಾನುವನು ವೆ೦ಠಣಿಸಿಯಡರಿತು ಚೂಣಿ ಶೃ೦ಗದಲಿ|
ಆ ನಗೇ೦ದ್ರನನಿಳಿದು ಪಡುವಣ
ಕಾನನ೦ಗಳ ಕೇತುಮಾಲದ
ಕಾನನ೦ಗಳ ಕಳೆದು ಬಿಟ್ಟುದು ಸೇನೆ ಬಳಸಿನಲಿ || ೪೬ |
ಪದವಿಭಾಗ-ಅರ್ಥ: ಸೇನೆ ಪಡುವಲು (ಪಶ್ಚಿಮಕ್ಕೆ) ತಿರುಗಿ ಸುತ್ತಣವ+ ಅನುಪೂರ್ವಿಯ (ವಿಶೇಷ) ಗ೦ಧಮಾದನ ಸಾನುವನು(ಪ್ರಸ್ಥ,ಬೆಟ್ಟದ ತಪ್ಪಲು ಪ್ರದೇಶ) ವೆ೦ಠಣಿಸಿ (ಸುತ್ತುವರಿದು )+ ಯ+ ಅಡರಿತು ಚೂಣಿ (ಸೇನೆ) ಶೃ೦ಗದಲಿ ಆ ನಗೇ೦ದ್ರನನು (ಪರ್ವತವನ್ನು)+ ಇಳಿದು ಪಡುವಣ ಕಾನನ೦ಗಳ(ಕಾಡುಗಳ) ಕೇತುಮಾಲದ ಕಾನನ೦ಗಳ ಕಳೆದು (ದಾಟಿ) ಬಿಟ್ಟುದು ಸೇನೆ ಬಳಸಿನಲಿ(ಸುತ್ತ, ಹತ್ತಿರ).
ಅರ್ಥ:ಅರ್ಜುನನ ಸೇನೆ ಪಶ್ಚಿಮಕ್ಕೆ ತಿರುಗಿ ಸುತ್ತ ಹಬ್ಬಿದ್ದ ವಿಶೇಷ ಗ೦ಧಮಾದನ ತಪ್ಪಲು ಪ್ರದೇಶವನ್ನು ಸುತ್ತುವರಿದು ಸೇನೆಯು ಬೆಟ್ಟದ ತುದಿಯ ಶೃ೦ಗವನ್ನು ಅಡರಿತು- ಆವರಿಸಿತು. ಆ ಪರ್ವತವನ್ನು ಇಳಿದು ಪಡುವಣ ಕಾಡುಗಳ ಕೇತುಮಾಲದ ಕಾಡುಗಳನ್ನು ದಾಟಿ ಸೇನೆ ಸುತ್ತ,ಪಾಳೆಯವನ್ನು ಬಿಟ್ಟಿತು.
ಅಲ್ಲಿ ಸಾಗರತೀರ ಪರಿಯ೦
ತೆಲ್ಲಿ ಗಜ ಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ |
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ || ೪೭ ||
ಪದವಿಭಾಗ-ಅರ್ಥ: ಅಲ್ಲಿ ಸಾಗರತೀರ ಪರಿಯ೦ತೆಲ್ಲಿ, ಗಜ ಹಯವೆಲ್ಲಿ, ಸುದತಿಯರೆಲ್ಲಿ ಮಣಿಗಣವೆಲ್ಲಿ, ಬಹುಧನವೆಲ್ಲಿ, ರಮಣೀಯ; ಅಲ್ಲಿಗಲ್ಲಿಗೆ ನಡೆದು ಸಾಧಿಸಿ ಕೆಲ್ಲೆ(ಅಂಚು) ಕುಹರದ(ಗುಹೆ) ಕೋಣೆ ಬಾಗುಗಳು (ಸಂದು)+ ಎಲ್ಲವನು ಹೊಕ್ಕು+ ಅರಿಸಿ(ಹುಡುಕಿ) ತೆರಳಿಚಿದನು(ತೆರಳಿಚು-ಹೊರಡಿಸು, ಪಡೆದುಕೊಂಡನು) ಮಹಾಧನವ
ಅರ್ಥ:ಅಲ್ಲಿ ಅರ್ಜುನನು ಸಾಗರತೀರ ಪರಿಯ೦ತ, ಗಜ ಹಯಗಳು ಎಲ್ಲಿದ್ದವೋ ಅಲ್ಲಿ,, ಸುದತಿಯರು ಎಲ್ಲಿದ್ದರೋ ಅಲ್ಲಿ, ಮಣಿಗಣವು ಎಲಗಲಿದ್ದವೋ ಅಲ್ಲ್ಲಿ, ಬಹುಧನವು ಎಲ್ಲಿತ್ತೋ ಅಲ್ಲಿ, ರಮಣೀಯವಸ್ತುಗಳು ಎಲ್ಲಿದ್ದವೋ ಅಲ್ಲಿಗಲ್ಲಿಗೆ ಹೋಗಿ ಗೆಲವುಸಾಧಿಸಿ, ಮತ್ತೆ ಕಾಡಿನ ಅಂಚು, ಗುಹೆ ಕೋಣೆ ಸಂದಗಳೆಲ್ಲವನ್ನು ಹೊಕ್ಕು ಹುಡುಕಿ ಮಹಾಧನವನ್ನು ತೆಗೆದುಕೊಂಡನು.
ಎಡಕಡೆಯಲೊಂಬತ್ತು ಸಾವಿರ
ನಡುನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗ೦ಧಮಾದನ ಗಿರಿಯನೇರಿಳಿದು |
ನಡೆದಿಳಾವೃತದೊಳಗೆ ಬಿಟ್ಟುದು
ಪಡೆ ಸುರಾದ್ರಿಯನುಳುಹಿ ಬಲದಲಿ
ನಡೆಯಲತಿ ದೂರದಲಿ ಕ೦ಡರು ಮ೦ದರಾಚಲವ || ೪೮ ||
ಪದವಿಭಾಗ-ಅರ್ಥ: ಎಡಕಡೆಯಲಿ+ ಒಂಬತ್ತು ಸಾವಿರ ನಡುನೆಲನನು+ ಆಕರಿಸಿ ((ಸಂಗ್ರಹಿಸು, ಹಿಡಿ, ಆವರಿಸಿ) ಮೂಡಣ (ಪೂರ್ವದ) ಕಡೆಗೆ ತಿರುಗಿತು, ಗ೦ಧಮಾದನ ಗಿರಿಯನು+ ಏರಿಳಿದು(ಏರಿ+ ಇಳಿದು) ನಡೆದು+ ಇಳಾವೃತದೊಳಗೆ ಬಿಟ್ಟುದು ಪಡೆ ಸುರಾದ್ರಿಯನ+ ಉಳುಹಿ ಬಲದಲಿ ನಡೆಯಲು+ ಅತಿ ದೂರದಲಿ ಕ೦ಡರು ಮ೦ದರಾಚಲವ.
ಅರ್ಥ:ಅರ್ಜುನನ ಸೈನ್ಯವು,ಎಡದ ಕಡೆಯಲ್ಲಿ ಒಂಬತ್ತು ಸಾವಿರ ನಡುನೆಲವನ್ನು ಆವರಿಸಿಕೊಡು ಮುಂದೆ ಪೂರ್ವದ ಕಡೆಗೆ ತಿರುಗಿತು. ಗ೦ಧಮಾದನ ಗಿರಿಯನನ್ನು ಹೀಗೆ ಏರಿ ಇಳಿದು ಮುಂದೆ ನಡೆದು ಇಳಾವೃತದಲ್ಲಿ ಪಡೆ-ಸೇನೆ ಬೀಡು ಬಿಟ್ಟಿತು. ಸುರಾದ್ರಿಯನ್ನು ಹಿಂದೆಬಿಟ್ಟು ಬಲದ ಕಡೆ ನಡೆಯಲು, ಅವರು ಅತಿ ದೂರದಲ್ಲಿ ಮ೦ದರಾಚಲವನ್ನು ಕ೦ಡರು.
ಇದುವೆ ಕಡಗೋಲಾಯ್ತು ಕಡೆವ೦
ದುದಧಿಯನು ತಾನಿದು ಮಹಾಗಿರಿ
ಯಿದರಬಿ೦ಕವ ನೋಡಬೇಕೆ೦ದನರ್ಜುನನ ಸೇನೆ |
ಒದರಿ ಹತ್ತಿತು ನಡುವಣರೆ ದು
ರ್ಗದಲಿ ಬೆಟ್ಟ೦ಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ || ೪೯ ||
ಪದವಿಭಾಗ-ಅರ್ಥ: ಇದುವೆ ಕಡಗೋಲಾಯ್ತು ಕಡೆವ೦ದು+ ಉದಧಿಯನು(ಸಮುದ್ರವನ್ನು) ತಾನು+ ಇದು ಮಹಾಗಿರಿಯಿಉ+ ಅದರ ಬಿ೦ಕವ (ಗರ್ವ) ನೋಡಬೇಕೆ೦ದನು+ ಅರ್ಜುನನ ಸೇನೆ ಒದರಿ (ಆರ್ಭಟಿಸಿ) ಹತ್ತಿತು ನಡುವಣ+ ಅರೆ(ಕಲ್ಲು ಬಂಡೆ) ದುರ್ಗದಲಿ ಬೆಟ್ಟ೦ಗಳಲಿ ನೃಪರು+ ಇದ್ದುದು ಮಹಾ+ ಅಹವವಾಯ್ತು(ಯುದ್ಧ) ಪಾರ್ಥನ ಚೂಣಿಯವರೊಡನೆ(ಚೂಣಿ- ಸೇನೆ).
ಅರ್ಥ:ಇದೇ ಮಂದರಾಚಲ ದೇವದಾನವರು ಸಮುದ್ರವನ್ನು ಕಡೆಯುವಾಗ ಕಡಗೋಲಾಯಿತು. ಇದು ತಾನು ಮಹಾಗಿರಿಯು; ಅರ್ಜುನ ಅದರ ಬಿ೦ಕವನ್ನು ನೋಡಬೇಕೆ೦ದನು; ಅವನ ಸೇನೆ ಆರ್ಭಟಿಸಿ ನಡುವಣ ಕಲ್ಲು ಬಂಡೆ ದುರ್ಗದ ಬೆಟ್ಟಗಳನ್ನು ಹತ್ತಿತು. ಅಲ್ಲಿದ್ದ ನೃಪರು ವಿರೋಧಿಸಿದರು. ಅರ್ಜುನನ ಸೇನೆಗೂ ಅವರಿಗೂ ಮಹಾ ಯುದ್ಧವಾಯ್ತು.
ಇಳುಹಿದರು ಚೂಣಿಯನು ಮು೦ದರೆ
ನೆಲೆಯ ಭಟರೌಕಿದರು ಭಾರಿಯ
ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು |
ಕಲುವಳೆಯ ಕೋಲಾಹಲಕ್ಕಿವ
ರಳುಕದಿರಿದರು ಸುರಗಿಯಲಿ ತೆನೆ
ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ || ೫೦ ||
ಪದವಿಭಾಗ-ಅರ್ಥ: ಇಳುಹಿದರು(ಇಳಿಸಿದರು ಸೇನೆಯನ್ನು) ಚೂಣಿಯನು ಮು೦ದರೆ ನೆಲೆಯ ಭಟರು+ ಔಕಿದರು ಭಾರಿಯ ತಲೆವರಿಗೆಗಳಲಿ (ಗುರಾಣಿಗಳನ್ನು ಹಿಡಿದು)+ ಒತ್ತಿದರು(ನುಗ್ಗಿದರು,) ಹೊಗಿಸಿದರು ದುರ್ಗವನು ಕಲುವಳೆಯ (ಕಲ್ಲುಮಳೆಯ)ಕೋಲಾಹಲಕ್ಕೆ+ ಇವರು+ ಅಳುಕದೆ+ ಇರಿದರು ಸುರಗಿಯಲಿ(ಕತ್ತಿಯಿಂದ) ತೆನೆವು+ ಅಳಿಯ(ತೆನೆಯನ್ನು ಕತ್ತರಿಸಿದಂತೆ) ಹಿಡಿದರು ಹೊಯ್ದು (ಹೊಡೆದು)ಕೇಶಾಕೇಶಿ (ಪರಸ್ಪರ ಕೂದಲು ಹಿಡಿದು, ಕೈಕೈ ಹಿಡಿದು) ಯುದ್ಧದಲಿ
ಅರ್ಥ:ಅಲ್ಲಿದ್ದ ಅರಸರು ಸೇನೆಯನ್ನು ಯುದ್ಧಕ್ಕೆ ಇಳಿಸಿದರು ಮು೦ದೆ ಬಂಡೆಯ ಮೇಲಿದ್ದ ಭಟರು ಮೇಲೆಬಿದ್ದ್ರರು. ಭಾರಿಯ ಗುರಾಣಿಗಳನ್ನು ಹಿಡಿದು ಮುಂದೆ ನುಗ್ಗಿದರು, ಸೇನೆಯನ್ನು ದುರ್ಗದ ಒಳಗೆ ಹೊಗಿಸಿದರು; ವಿರೋಧಿಗಳ ಕಲ್ಲುಮಳೆಯ ಕೋಲಾಹಲಕ್ಕೆ ಇವರು+ ಅಳುಕದೆ- ಹೆದರದೆ ಕತ್ತಿಯಿಂದ ಇರಿದರು. ತೆನೆಯನ್ನು ಕತ್ತರಿಸಿದಂತೆ ಕತ್ತರಿಸಿದರು. ಒಬ್ಬರನ್ನೊಬ್ಬರು ಹಿಡಿದರು; ಯುದ್ಧದಲ್ಲಿ ಪರಸ್ಪರ ಕೂದಲು ಹಿಡಿದು, ಕೈಕೈ ಹಿಡಿದು ಹೊಡೆದು ಹೋರಾಡಿದರು.
ಶಕರು ಖದ್ಯೋತ ಪ್ರತಾಪರು
ವಿಕಳ ಚಿಂಘರು ದೀರ್ಘಮಯ ವೇ
ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು |
ಸಕಲ ದಸ್ಯುಗಳೈದೆ ಸೋತುದು
ವಿಕಳಬಲವೊಪ್ಪಿಸಿತು ಸರ್ವ
ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ || ೫೧ ||
ಪದವಿಭಾಗ-ಅರ್ಥ: ಶಕರು ಖದ್ಯೋತ(ಸೂರ್ಯ, ಮಿಂಚುಹುಳು) ಪ್ರತಾಪರು ವಿಕಳ(ವಿಕಲ- ವ್ಯಾಕುಲ) ಚಿಂಘರು, ದೀರ್ಘಮಯ ವೇಣಿಕರು (ಉದ್ದ ಜಡೆಯವರು); ಪಶುಪಾಲಕ ಪುಳಿಂದರು(ಬೇಡರು, ಪುಳಿಂದ ರಾಜ್ಯದವರು,) ಕಂಕಣ+ ಆಹ್ವಯರು, ಸಕಲ ದಸ್ಯುಗಳು+ ಐದೆ (ಬರಲು) ಸೋತುದು ವಿಕಳಬಲ(ವಿಚಿತ್ರ ಬಲದ ಸೇನೆ) ವೊ+ ಒಪ್ಪಿಸಿತು ಸರ್ವಸ್ವಕವ ಸಂಧಾನದಲಿ ನೆಲೆಯಾಯ್ತು+ಅಲ್ಲಿಯು+ ಅರ್ಜುನಗೆ
ಅರ್ಥ:ಆ ಪರ್ವತ ಪ್ರದೇಶದಲ್ಲಿ ಶಕರು ಸೂರ್ಯನಂತೆ ಪ್ರತಾಪರು, ವ್ಯಾಕುಲ ಚಿಂಘರು (ಚಿಂಘರು ಶಕರಂತೆ ಒಂದು ಪಂಗಡ), ಉದ್ದ ಜಡೆಯವರು; ಪಶುಪಾಲಕ ಬೇಡರು ಪುಳಿಂದ ರಾಜ್ಯದವರು; ಕಂಕಣ ಆಹ್ವಯರು, ಈ ಸಕಲ ದಾನವರು ಯುದ್ಧಕ್ಕೆ ಬರಲು, ಆ ಬಲ- ಸೇನೆಗಳು ಸೋತುಹೋಯಿತು. ಒಪ್ಪಿಸಿತು ಸರ್ವಸ್ವಕವ ಸಂಧಾನದಲಿ+ಅಲ್ಲಿಯು+ ಅರ್ಜುನಗೆ. ನೆಲೆಯಾಯ್ತು
ಶೋಧಿಸಿದನಾ ಗಿರಿಯನಾಚೆಯ
ಹಾದಿಯಲಿ ಹೊರವ೦ಟು ಬರೆ ಮರಿ
ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವ೦ತಗಿರಿ |
ಭೇದಿಸಿದನದರೊಳಗು ಹೊರಗಿನ
ಲಾದ ವಸ್ತುವ ಕೊ೦ಡು ತಚ್ಛೈ
ಲೋದರವನೇರಿಳಿದು ಭದ್ರಾಶ್ವಕ್ಕೆ ನಡೆತ೦ದ || ೫೨ ||
ಪದವಿಭಾಗ-ಅರ್ಥ:ಶೋಧಿಸಿದನು+ ಆ ಗಿರಿಯನು+ ಆಚೆಯ ಹಾದಿಯಲಿ ಹೊರವ೦ಟು ಬರೆ, ಮರಿಯಾದೆಗೆ+ ಇಕ್ಕಿದ ಬೆಟ್ಟವಿದ್ದುದು ಮಾಲ್ಯವ೦ತ ಗಿರಿ

ಭೇದಿಸಿದನು+ ಅದರೊಳಗು ಹೊರಗಿನಲಿ+ ಆದ ವಸ್ತುವ ಕೊ೦ಡು ತತ್ ಶೈಲ ಲೋದರವನು+ ಏರಿ+ ಇಳಿದು ಭದ್ರಾಶ್ವಕ್ಕೆ ನಡೆತ೦ದ.

ಅರ್ಥ:ಅರ್ಜನನು ಆ ಗಿರಿಯನ್ನು ಶೋಧಿಸಿದನು; ಆಚೆಯ ಹಾದಿಯಿಂದ ಹೊರಹೊರಟು ಬರಲು, ಮರ್ಯಾದೆಗೆ ಇಕ್ಕಿದ ಬೆಟ್ಟಮಾಲ್ಯವ೦ತ ಗಿರಿ ಇದ್ದಿತು. ಆ ಮಾಲ್ಯವ೦ತ ಗಿರಿಯನ್ನೂ ಭೇದಿಸಿದನು- ಅದರಲ್ಲಿದ್ದವರನ್ನು ಸೋಲಿಸಿದನು; ಅದರ ಒಳಗು ಹೊರಗಿನಲ್ಲಿ ಅಗತ್ಯವಾದ ವಸ್ತುಗಳನ್ನು ತೆಗೆದುಕೊಂದು ತತ್- ಆ ಶೈಲ ಉದರವನು(ಹೊಟ್ಟೆಯನ್ನು) ಇಳಿದು ಭದ್ರಾಶ್ವಕ್ಕೆ ನಡೆದು ಬಂದ.
ಅದು ಮಹಾ ರಮಣೀಯತರವ೦
ತದರೊಳಿದ್ದುದು ಶುದ್ಧಭೋಗಾ
ಸ್ಪದರು ಯಕ್ಷೋರಕ್ಷ ಗ೦ದರ್ವಾಪ್ಸರೋ ನಿಕರ |
ಕುದುರೆ ರಥ ಗಜಪತ್ತಿ ನಿರ್ಘೋ
ಷದಲಿ ಬೆಬ್ಬಳೆಯಾಯ್ತು ಬೇಳ೦
ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ || ೫೩ ||
ಪದವಿಭಾಗ-ಅರ್ಥ: ಅದು ಮಹಾ ರಮಣೀಯತರವು+ ಅ೦ತು+ ಅದರೊಳು+ ಇದ್ದುದು ಶುದ್ಧಭೋಗಾಸ್ಪದರು, ಯಕ್ಷೋ ರಕ್ಷ(ಯಕ್ಷ+ ಊರಕ್ಷ?) ಗ೦ದರ್ವ+ ಅಪ್ಸರೋ (ಅಪ್ಸರಾ) ನಿಕರ, ಕುದುರೆ ರಥ ಗಜಪತ್ತಿ ನಿರ್ಘೋಷದಲಿ ಬೆಬ್ಬಳೆಯಾಯ್ತು(ಭಯಾನಕ, ಭಯ) ಬೇಳ೦ಬದ (ಚಿಂತೆಯ, ನೋವಿನ) ವಿಘಾತಿಗೆ (ಹೊಡೆತಕ್ಕೆ) ಸಿಲುಕಿ (ಗುರಿಯಾಗಿ) ತೆತ್ತುದು(ಕೊಟ್ಟರು, ತೆರು- ಕೊಡು) ಸಕಲ ವಸ್ತುಗಳ.
ಅರ್ಥ:ಆ ಪ್ರದೇಶವು ಬಹಳ ರಮಣೀಯತರವಾಗಿತ್ತು; ಹಾಗಿರುವ ಅದರಲ್ಲಿ ಶುದ್ಧಭೋಗಪ್ರದರು ಇದ್ದರು. ಅವರು ಯಕ್ಷರಕ್ಷಕರು ಗ೦ದರ್ವರು ಅಪ್ಸರೆಯರ ಸಮೂಹ; ಅರ್ಜುನನ ಸೇನೆಯ ಕುದುರೆ ರಥ ಗಜಪತ್ತಿಗಳ ದೊಡ್ಡಗದ್ದಲವಾಗಿ ಭಯಾನಕ ಹೋರಾಟವಾಯಿತು. ಅವರು ನೋವು, ಸಂಕಟ ಕೊಡುವ ಹೊಡೆತಕ್ಕೆ ಗುರಿಯಾಗಿ ತಮ್ಮಲ್ಲಿದ್ದ ಸಕಲ ವಸ್ತುಗಳನ್ನೂ ಅರ್ಜುನನಿಗೆ ಕೊಟ್ಟರು.
ದೊರಕಿತಲ್ಲಿಯಪೂರ್ವ ವಸ್ತೂ
ತ್ಕರ ಸಮುದ್ರದ್ವೀಪ ಪರಿಯ೦
ತರನಡೆದನೊಂಬತ್ತು ಸಾವಿರ ಯೋಜನಾ೦ತರವ |
ತಿರುಗಿದನು ಭದ್ರಾಶ್ವಕವನಾ
ಕರಿಸಿ ಬಡಗಲು ನಡೆದರಲ್ಲಿಯ
ಗಿರಿಯ ಕ೦ಡರು ಹತ್ತಿದರು ಹರುಷದಲಿ ಬೊಬ್ಬಿಡುತ || ೫೪ ||
ಪದವಿಭಾಗ-ಅರ್ಥ: ದೊರಕಿತು+ ಅಲ್ಲಿಯ ಪೂರ್ವ ವಸ್ತೂತ್ಕರ(ಉತ್ಕರ- ರಾಶಿ, ಸಮೂಹ) ಸಮುದ್ರದ್ವೀಪ ಪರಿಯ೦ತರ ನಡೆದನು+ ಒಂಬತ್ತು ಸಾವಿರ ಯೋಜನಾ೦ತರವ, ತಿರುಗಿದನು ಭದ್ರಾಶ್ವಕವನು+ ಆಕರಿಸಿ(ಆಕರಿಸು- ಸಂಗ್ರಹಿಸು, ಹಿಡಿ- ತಲುಪು) ಬಡಗಲು (ಉತ್ತರದಿಕ್ಕಿನ) ನಡೆದರು+ ಅಲ್ಲಿಯ ಗಿರಿಯ ಕ೦ಡರು ಹತ್ತಿದರು ಹರುಷದಲಿ ಬೊಬ್ಬಿಡುತ.
ಅರ್ಥ:ಭದ್ರಾಶ್ವದಲ್ಲಿ ಅಲ್ಲಿಯ ಅಪೂರ್ವ ವಸ್ತುಗಳು ದೊರಕಿದವು; ಅಲ್ಲಿಂದ ಪೂರ್ವದ ವಸ್ತೂತ್ಕರ- ಸಮುದ್ರದ್ವೀಪ ಪರಿಯ೦ತರ ಒಂಬತ್ತು ಸಾವಿರ ಯೋಜನಾ೦ತರವನ್ನು ನಡೆದನು. ಅಲ್ಲಂದ ತಿರುಗಿದನು; ಪುನಃ ಭದ್ರಾಶ್ವಕವನ್ನು ಹಿಡಿದು ಉತ್ತರದಿಕ್ಕಿನ ಕಡೆ ನಡೆದರು. ಅಲ್ಲಿಯ ಗಿರಿಯನ್ನು ಕ೦ಡು ಹರ್ಷದಿಂದ ಬೊಬ್ಬಿಡುತ್ತಾ ಅದನ್ನು ಹತ್ತಿದರು.
ನೀಲಗಿರಿಯಗ್ರದಲಿ ಬಿಟ್ಟುದು
ಪಾಳೆಯವು ಬೊಬ್ಬೆಯಲಿ ದಿಕ್ಕಿನ
ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು |
ಮೇಲುದುರ್ಗದ ಸಂದಿಗೊಂದಿಯೊ
ಳಾಳು ಹರಿದುದು ಸೂರೆಗೊ೦ಡು ವಿ
ಶಾಲ ವಸ್ತುವ ತ೦ದರಲ್ಲಿದ್ದರಸುಗಳ ಗೆಲಿದು || ೫೫ ||
ಪದವಿಭಾಗ-ಅರ್ಥ: ನೀಲಗಿರಿಯ+ ಅಗ್ರದಲಿ (ಅಗ್ರ- ತುದಿ) ಬಿಟ್ಟುದು ಪಾಳೆಯವು ಬೊಬ್ಬೆಯಲಿ ದಿಕ್ಕಿನ ಮೂಲೆ ಬಿರಿದುದು; ಜರಿದವು+ ಅದ್ರಿಗಳು (ಅದ್ರಿ- ಬೆಟ್ಟ)+ ಏನನು+ ಉಸುರುವೆನು (ಹೇಳುವೆನು) ಮೇಲುದುರ್ಗದ ಸಂದಿಗೊಂದಿಯೊಳು+ ಆಳು ಹರಿದುದು(ಹರಿ- ಹೋಗು) ಸೂರೆಗೊ೦ಡು ವಿಶಾಲ(ಬಹಳ) ವಸ್ತುವ ತ೦ದರಲ್ಲಿದ್ದ+ ಅರಸುಗಳ ಗೆಲಿದು.
ಅರ್ಥ:ಆ ನೀಲಗಿರಿಯ ಮೇಲೆ ತುದಿಯಲ್ಲಿ ಪಾಳೆಯವನ್ನು ಬಿಟ್ಟರು. ಅವರ ಬೊಬ್ಬೆಯಲ್ಲಿ/ ಆರ್ಭಟದಲ್ಲಿ ದಿಕ್ಕಿನ ಮೂಲೆಗಳು ಬಿರಿದುಹೋದವು; ಬೆಟ್ಟಗಳು ಜರಿದವು. ಏನನ್ನು ಹೇಳಲಿ; ಆ ದುರ್ಗದ ಮೇಲೆ ಸಂದಿಗೊಂದಿಯಲ್ಲಿ ಕಾಲಾಳುಗಳು ಹೋದರು; ಅವರು ಅರಸುಗಳನ್ನು ಗೆದ್ದು ಬಹಳ ವಸ್ತುಗಳನ್ನು ಸೂರೆಗೊ೦ಡು ತ೦ದರು.
ಎರಡು ಸಾವಿರದುದ್ದವನು ಮ
ತ್ತೆರಡು ಸಾವಿರದಗಲವದನಾ
ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ |
ಅರಸ ಕೇಳಲ್ಲಲ್ಲಿ ಸುಮನೋ
ಹರದ ವಸ್ತುವ ಕೊ೦ಡು ನವ ಸಾ
ವಿರವನಗಲಕೆ ಸುತ್ತಿ ಬ೦ದರು ಗೆಲಿದು ಗರ್ವಿತರ || ೫೬ ||
ಪದವಿಭಾಗ-ಅರ್ಥ: ಎರಡು ಸಾವಿರದ+ ಉದ್ದವನು ಮತ್ತೆರಡು ಸಾವಿರದ+ ಅಗಲವದನು+ ಆಕರಿಸಿ ರಮ್ಯಕ ಭೂಮಿಗೆ+ ಇಳಿದರು ಹೊಕ್ಕರು+ ಆ ನೆಲನ ಅರಸ ಕೇಳು+ ಅಲ್ಲಲ್ಲಿ ಸುಮನೋಹರದ ವಸ್ತುವ ಕೊ೦ಡು ನವ ಸಾವಿರವನು+ ಅಗಲಕೆ ಸುತ್ತಿ ಬ೦ದರು ಗೆಲಿದು ಗರ್ವಿತರ.
ಅರ್ಥ:ಅರಸನೇ ಕೇಳು,'ಅರ್ಜುನ ಮತ್ತು ಅವನ ದಂಡಿನವರು ಎರಡು ಸಾವಿರದ ಉದ್ದ ಮತ್ತೆ ಎರಡು ಸಾವಿರ ಅಗಲವಾದ ಪ್ರದೇಶವನ್ನು ಆಕ್ರಮಿಸಿ, ರಮ್ಯಕ ಭೂಮಿಗೆ ಇಳಿದರು. ನಂತರ ಆ ಪ್ರದೇಶವನ್ನು ಹೊಕ್ಕರು. ಆ ಪ್ರದೇಶದಲ್ಲಿ ಅಲ್ಲಲ್ಲಿ ಕಂಡ ಸುಮನೋಹರದ ವಸ್ತುಗಲನ್ನು ತೆಗೆದುಕೊಂಡು ಒಂಬತ್ತು ಸಾವಿರ ಯೋಜನ ಅಗಲಕ್ಕೆ ಸುತ್ತಿ ಗರ್ವಿತರಾದ ಅರಸರನ್ನು ಗೆದ್ದು ಬ೦ದರು.
ಅರಸ ಕೇಳಲ್ಲಿ೦ದ ಬಡಗಲು
ಹರಿದು ಬಿಟ್ಟರು ಹತ್ತಿದರು ಬೇ
ಸರದೆ ಕಲುದರಿಗಳಲಿ ಬಹಳ ಶ್ವೇತ ಪರ್ವತವ |
ಗಿರಿಯ ತುದಿಗಳ ತೋಟದಲಿ ಗ
ಹ್ವರದ ಕೊಳ್ಳದ ಕೋಹಿನಲಿ ಹೊ
ಕ್ಕಿರಿದು ಶೋಧಿಸಿ ಕೊ೦ಡರಲ್ಲಿಯ ಸಾರವಸ್ತುಗಳ || ೫೭ ||
ಪದವಿಭಾಗ-ಅರ್ಥ: ಅರಸ ಕೇಳು+ ಅಲ್ಲಿ೦ದ ಬಡಗಲು ಹರಿದು(ಹೋಗಿ) ಬಿಟ್ಟರು, ಹತ್ತಿದರು ಬೇಸರದೆ (ಕಷ್ಟದಿಂದ) ಕಲು ದರಿಗಳಲಿ(ಕಲ್ಲು ಮತ್ತು ಕಡಿದಾದ ದರೆಗಳಲ್ಲಿ) ಬಹಳ ಶ್ವೇತ (ಬಿಳಿ ಹಿಮ?) ಪರ್ವತವಗಿರಿಯ ತುದಿಗಳ ತೋಟದಲಿ, ಗಹ್ವರದ (ಗವಿಯ) ಕೊಳ್ಳದ ಕೋಹಿನಲಿ (ಕೋಹು-ತುದಿ, ಬುಡ, ಪಂಕ್ತಿ, ಮೂಲೆ?) ಹೊಕ್ಕು+ ಇರಿದು ಶೋಧಿಸಿ (ಹುಡುಕಿ) ಕೊ೦ಡರು+ ಅಲ್ಲಿಯ ಸಾರವಸ್ತುಗಳ.
ಅರ್ಥ:ಅರಸ ಜನಮೇಜಯನೇ ಕೇಳು,'ಅಲ್ಲಿ೦ದ ಉತ್ತರಕ್ಕೆ ಹೋಗಿ ಬಿಟ್ಟರು; ಅಲ್ಲಿ ಕಷ್ಟದಿಂದ ಕಲ್ಲು ಮತ್ತು ಕಡಿದಾದ ದರೆಗಳಲ್ಲಿ ಹತ್ತಿದರು. ಬಹಳ ಶ್ವೇತ ಪರ್ವತವನ್ನೂ ಗಿರಿಯತುದಿಗಳ ತೋಟಗಳಲ್ಲಿ, ಆಳವಾದ ಗವಿಯ ಕೊಳ್ಳದ ಕೋಹಿನಲ್ಲಿ ಹೊಕ್ಕು ವಿರೋಧಿಸಿದವರನ್ನು ಇರಿದು ಸೋಲಿಸಿ,ಅಲ್ಲಿ ಹುಡುಕಿ ಸಾರವಸ್ತುಗಳನ್ನು ಪಡೆದುಕೊ೦ಡರು.
ಇಳಿದನಾ ಗಿರಿಯನು ಹಿರಣ್ಮಯ
ದೊಳಗೆ ಬಿಟ್ಟನು ಪಾಳೆಯವ ತ
ದ್ವಲಯ ಮಿಗಿಲೊ೦ಬತ್ತು ಸಾವಿರ ಯೋಜನಾ೦ತರವ |
ಬಳಸಿ ಬ೦ದನು ವಿಮಲ ಸೌಧಾ
ವಳಿಯ ನೆಲೆಯುಪ್ಪರಿಗೆಗಳ ವರ
ಲಲನೆಯರು ಕ೦ಡೀತನನು ಹೊಗಳಿದರು ತಮತಮಗೆ || ೫೮ ||
ಪದವಿಭಾಗ-ಅರ್ಥ:ಇಳಿದನು+ ಆ ಗಿರಿಯನು ಹಿರಣ್ಮಯದೊಳಗೆ (ಹಿರಣ್ಯ- ಚಿನ್ನ,ಶಾತಕುಂಭ) ಬಿಟ್ಟನು ಪಾಳೆಯವ, ತದ್+ ವಲಯ(ಪ್ರದೇಶ) ಮಿಗಿಲು(ಹೆಚ್ಚು)+ ಒ೦ಬತ್ತು ಸಾವಿರ ಯೋಜನಾ೦ತರವ ಬಳಸಿ ಬ೦ದನು ವಿಮಲ(ಉತ್ತಮ) ಸೌಧಾವಳಿಯ (ಮನೆಗಳ) ನೆಲೆಯ+ ಉಪ್ಪರಿಗೆಗಳ ವರ(ಶ್ರೇಷ್ಠ, ಸುಂದರ) ಲಲನೆಯರು ಕ೦ಡು+ ಈತನನು ಹೊಗಳಿದರು ತಮತಮಗೆ.
ಅರ್ಥ:ಪಾರ್ಥನು ತನ್ನ ಸೇನೆಯೊಡನೆ ಆ ಪರ್ವತದಿಂದ ಇಳಿದನು. ತನ್ನ ಸೇನೆಯ ಪಾಳೆಯವನ್ನು ಹಿರಣ್ಮಯ ನಗರದೊಳಗೆ ಬಿಟ್ಟನು. ಆ ವಲಯ ಒ೦ಬತ್ತು ಸಾವಿರ ಯೋಜನಾ೦ತರಕ್ಕೂ ವಿಶಾಲ. ಅದನ್ನು ಬಳಸಿ- ಸುತ್ತಿ ಉಪ್ಪರಿಗೆಗಳ ಉತ್ತಮ ಮನೆಗಳ ನೆಲೆಯಾದ ನಗರಕ್ಕೆ ಬ೦ದನು. ಅಲ್ಲಿ ಸುಂದರ ಲಲನೆಯರು ಈತನನ್ನು ಕ೦ಡು ತಮ್ಮ ತಮ್ಮಲ್ಲಿ ಅರ್ಜುನನ್ನು ಹೊಗಳಿದರು.
ಈತ ಭಾರತ ವರುಷ ಪತಿಯನು
ಜಾತ ಗಡ ತತ್ಕರ್ಮ ಭೂಮಿಯ
ಲೀತನಧಿಪತಿ ಗೆಲಿದನಿತ್ತಲು ದೇವಭೂಮಿಪರ |
ಈಗ ಗೌರೀಸುತನವೋಲ್ ಪುರು
ಹೂತ ತನಯನ ವೋಲು ಭುವನ
ಖ್ಯಾತನೆ೦ದಾ ಸ್ತ್ರೀಕಟಕ ಕೊ೦ಡಾಡಿತರ್ಜುನನ || ೫೯ ||
ಪದವಿಭಾಗ-ಅರ್ಥ: ಈತ ಭಾರತ ವರುಷ ಪತಿಯ (ರಾಜ)+ ಅನುಜಾತ ಗಡ, ತತ್ಕರ್ಮ ಭೂಮಿಯಲಿ+ ಈತನು+ ಅಧಿಪತಿ ಗೆಲಿದನು+ ಇತ್ತಲು ದೇವಭೂಮಿಪರ,(ಭೂಮಿಪ- ರಾಜ) ಈಗ ಗೌರೀಸುತನವೋಲ್ ಪುರುಹೂತ(ಇಂದ್ರ) ತನಯನ ವೋಲು ಭುವನಖ್ಯಾತನೆ೦ದು(ಲೋಕಪ್ರಸಿದ್ಧನು)+ ಆ ಸ್ತ್ರೀಕಟಕ(ಕಟಕ- ಸಮೂಹ) ಕೊ೦ಡಾಡಿತು+ ಅರ್ಜುನನ
ಅರ್ಥ:ಅರ್ಜುನನ್ನು ನೊಡಿದ ಸ್ತ್ರೀ ಸಮೂಹ,'ಈತನು ಭಾರತವರ್ಷದ ರಾಜ ಯುಧಿಷ್ಠಿರನ ಸಹೋದರ ಗಡ! ಆ ಕರ್ಮಭೂಮಿಯಲ್ಲಿ ಈತನು ಅಧಿಪತಿಗಳನ್ನು - ರಾಜರನ್ನು ಗೆದ್ದನು. ಇತ್ತಲು- ಈ ದಿಕ್ಕಿನ ದೇವಭೂಮಿಪರನ್ನೂ ಗೆದ್ದನು, ಈಗ ಗೌರೀಸುತನಾದ ಕುಮಾರನಂತೆ, ಪುರುಹೂತ-ಇಂದ್ರ ತನಯ ಜಯಂತನಂತೆ ಲೋಕಪ್ರಸಿದ್ಧನುನೆ೦ದು ಅರ್ಜುನನ್ನು ಕೊ೦ಡಾಡಿತು.
ತನತನಗೆ ತರುಣಿಯರು ಹೂವಿನ
ತನಿವಳೆಯ ಕರೆದರು ಕನತ್ಕಾಂ
ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ |
ವನಿತೆಯರನಾ ದೇಶದಲಿ ಮೀ
ಟೆನಿಪರನು ಮೃಗಪಕ್ಷಿ ಕೃಷ್ಣಾ
ಜಿನವನ೦ತವನಿತ್ತು ಸತ್ಕರಿಸಿದರು ಫಲುಗುಣನ ೬೦
ಪದವಿಭಾಗ-ಅರ್ಥ: ತನತನಗೆ ತರುಣಿಯರು ಹೂವಿನ ತನಿವಳೆಯ (ತನಿ-ಅತಿಶಯ, ಹೊಸತು ಹೂವಿನ ಮಳೆಯ) ಕರೆದರು (ಸುರಿಸಿದರು), ಕನತ್ಕಾಂಚನ(ಚಿನ್ನದ ವಸ್ತುಗಳನ್ನು) ವಿಭೂಷಣ (ಧರಿಸಿದ) ರತ್ನಚಯ ಪೂರಿತದ(ರತ್ನಗಳು ತುಂಬಿದ) ಪೆಟ್ಟಿಗೆಯ ವನಿತೆಯರನು+ ಆ ದೇಶದಲಿ ಮೀಟು (ಶ್ರೇಷ್ಠ)+ ಎನಿಪರನು ಮೃಗಪಕ್ಷಿ ಕೃಷ್ಣಾಜಿನವನು+ ಅ೦ತವನು (ಆ ಬಗೆಯವುಗಳನ್ನು)+ ಇತ್ತು (ಕೊಟ್ಟು) ಸತ್ಕರಿಸಿದರು ಫಲುಗುಣನ.
ಅರ್ಥ:ಆ ಪ್ರದೇಶದ ತರುಣಿಯರು ತಾವು ತಾವೇ ಇಷ್ಟಪಟ್ಟು ಹೂವಿನ ತನಿ ಮಳೆಯನ್ನು ಕರೆದರು. ಕನತ್ ಕಾಂಚನ ವಿಭೂಷಣ ಧರಿಸಿದ ರತ್ನಚಯ ತುಂಬಿದ ಪೆಟ್ಟಿಗೆಯ ವನಿತೆಯರನ್ನೂ ಆ ದೇಶದಲಿ ಶ್ರೇಷ್ಠ ಎನ್ನಿಸಿದವರನ್ನೂ, ಮೃಗಪಕ್ಷಿ, ಕೃಷ್ಣಾಜಿನಗಳನ್ನೂ, ಆ ಬಗೆಯವುಗಳನ್ನು ಕೊಟ್ಟು ಅರ್ಜುನನನ್ನು ಸತ್ಕರಿಸಿದರು.
ಧಾರುಣೀಪತಿ ಕೇಳು ದಳ ನಡು
ದಾರಿ ಬಡಗಣ ಶೃ೦ಗಪರ್ವತ
ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹುಧನವ |
ಭಾರಣೆಯ ಮು೦ಗುಡಿಯ ಕೊಳ್ಳೆಗ
ಳೋರಣಿಸಿ ತುದಿಗೇರಿ ಸಿದ್ಧರ
ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ || ೬೧ ||
ಪದವಿಭಾಗ-ಅರ್ಥ: ಧಾರುಣೀಪತಿ ಕೇಳು, ದಳ ನಡುದಾರಿ(ಯ) ಬಡಗಣ(ಉತ್ತರ) ಶೃ೦ಗಪರ್ವತದ+ ಓರೆಯಲಿ ದೊರೆಗಳನು ಧಟ್ಟಿಸಿ(ಹೊಡೆದು,ಗದರಿಸು; ಒರಸಿಹಾಕು, ಉಜ್ಜು) ಸೆಳೆದು ಬಹುಧನವ ಭಾರಣೆಯ (ಮಹಿಮೆ, ಗೌರವ) ಮು೦ಗುಡಿಯ (ಮುಂಭಾಗದ ಸೈನ್ಯ,ಮುಂಚೂಣಿ) ಕೊಳ್ಳೆಗಳ+ ಓರಣಿಸಿ ತುದಿಗೇರಿ ಸಿದ್ಧರಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ.
ಅರ್ಥ:ಧಾರುಣೀಪತಿಯೇ ಕೇಳು,'ಅರ್ಜುನನ ದಳ ನಡುದಾರಿಯಲ್ಲಿ ಉತ್ತರದ ಶೃ೦ಗಪರ್ವತದ ಬದಿಯಲ್ಲಿದ್ದ ದೊರೆಗಳನ್ನು ಗದರಿಸಿ ಹೆದರಿಸಿ ಬಹುಧನವನ್ನು ಸೆಳೆದುಕೊಂಡು ಬಲಿಷ್ಠ ಮುಂಭಾಗದ ಸೈನ್ಯದಿಂದ ಕೊಳ್ಳೆಗಳನ್ನು ಜೋಡಿಸಿಕೊಂಡು ಬೆಟ್ಟದ ತುದಿಗೇರಿ ಸಿದ್ಧರಚಾರಣರನ್ನೂ ವಿದ್ಯಾಧರರನ್ನೂ ಮನ್ನಿಸದೆ ಮುತ್ತಿದರು.
ಅರಸು ಮೋಹರ ಹತ್ತಿತಾ ಗಿರಿ
ಎರಡು ಸಾವಿರದಗಲವದರಲಿ
ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ |
ಬಿರಿದುದಾ ಗಿರಿ ಕೆಳಗಣುತ್ತರ
ಕುರುಗಳೆದೆ ಜರ್ಝರಿತವಾಯ್ತ
ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ || ೬೨ ||
ಪದವಿಭಾಗ-ಅರ್ಥ: ಅರಸು (ಅರಸನೇ?) ಮೋಹರ(ಸೇನೆ) ಹತ್ತಿತು+ ಆ ಗಿರಿ ಎರಡು ಸಾವಿರದ+ ಅಗಲವ+ ಅದರಲಿ ತುರುಗಿ(ಸಂದಣಿ, ದಟ್ಟಣೆ,ತುಂಬು) ಬಿಟ್ಟಿತು ಸೇನೆ ಸೂಳೈಸಿದವು (ಒಟ್ಟಾಗಿ ಗದ್ದಲ ಮಾಡಿದವು) ನಿಸ್ಸಾಳ(ಒಂದು ಬಗೆಯ ಚರ್ಮವಾದ್ಯ, ಭೇರಿ) ಬಿರಿದುದಾ ಗಿರಿ ಕೆಳಗಣ+ ಉತ್ತರ ಕುರುಗಳೆದೆ ಜರ್ಝರಿತವಾಯ್ತು+ ಅಬ್ಬರಕೆ ಬಡಗಣ (ದಕ್ಷಿಣ) ಕಡಲು ಕದಡಿತು ತಳದ ತಾಯ್ (ಮೂಲ)+ ಮಳಲ
ಅರ್ಥ:ಧರ್ಮಜ ಅರಸನ ಸೇನೆಯು ಎರಡು ಸಾವಿರದ ಅಗಲವವಿದ್ದ ಆ ಗಿರಿಯನ್ನು ಹತ್ತಿತು. ಅದರಲ್ಲಿ ಸೇನೆ ದಟ್ಟೈಸಿ ತುಂಬಿ ಬಿಟ್ಟಿತು. ಆ ಸೇನೆ ಒಟ್ಟಾಗಿ ಗದ್ದಲ ಮಾಡಿದವು. ಅವುಗಳ ಭೇರಿಗಳ ಸದ್ದಿನಿಂದ ಆ ಬೆಟ್ಟ ಬಿರಿಯಿತು. ಗಿರಿಯ ಕೆಳಗಿನ ಉತ್ತರ ಕುರುಗಳ ಎದೆ ಆ ಅಬ್ಬರಕ್ಕೆ ಜರ್ಝರಿತವಾಯ್ತು- ಒಡೆಯಿತು. ದಕ್ಷಿಣದ ಕಡಲ ತಳದಲ್ಲಿದ್ದ ತಾಯಿಮರಳನ್ನು ಕದಡಿತು.
ನೆರೆದರಲ್ಲಿಯ ನೃಪರು ದೂತರ
ಹರಿಯಬಿಟ್ಟರುಪಾರ್ಥನಿದ್ದೆಡೆ
ಗರಸ ಕೇಳವರುಗಳು ಬ೦ದರು ಕ೦ಡರರ್ಜುನನ |
ಗಿರಿಯನಿಳಿಯದಿರಿತ್ತಲುತ್ತರ
ಕುರುಗಳಿಹ ಸ೦ಸ್ಥಾನವಿದು ಗೋ
ಚರಿಸಲರಿಯದು ನರರ ಕಾಲ್ದುಳಿಗೆ೦ದರವರ೦ದು || ೬೩ ||
ಪದವಿಭಾಗ-ಅರ್ಥ: ನೆರೆದರು (ಬಂದು ಸೇರಿದರು)+ ಅಲ್ಲಿಯ ನೃಪರು ದೂತರ ಹರಿಯಬಿಟ್ಟರು ಪಾರ್ಥನಿದ್ದೆಡೆಗೆ+ ಅರಸ ಕೇಳು+ ಅವರುಗಳು ಬ೦ದರು ಕ೦ಡರು+ ಅರ್ಜುನನ ಗಿರಿಯನು+ ಇಳಿಯದಿರಿ+ ಇತ್ತಲು+ ಉತ್ತರ ಕುರುಗಳು+ ಇಹ(ಇರುವ) ಸ೦ಸ್ಥಾನವು+ ಇದು ಗೋಚರಿಸಲು+ ಅರಿಯದು ನರರ ಕಾಲ್ದುಳಿಗೆ+ ಎ೦ದರು+ ಅವರು+ ಅ೦ದು
ಅರ್ಥ:ಅರಸನೇ ಕೇಳು,'ಅರ್ಜುನನ ಸೇನೆಯ ಆರ್ಬಟಕ್ಕೆ ಅಲ್ಲಿಯ ನೃಪರು ಬಂದು ಸೇರಿದರು; ಪಾರ್ಥನು ಇದ್ದ ಕಡೆಗೆ ದೂತರನ್ನೂ ಕಳಿಸಿದರು. ಅವರು ಬ೦ದು ಅರ್ಜುನನನ್ನು ಕ೦ಡರು. ಈ ಬೆಟ್ಟವನ್ನು ಆ ಕಡೆಗೆ ಇಳಿಯಬೇಡಿ. ಇತ್ತ ಉತ್ತರ ಕುರುಗಳು ಇರುವ ಸ೦ಸ್ಥಾನವು. ಅ೦ದು ಅವರು ಇದು ನರರ ಕಾಲಧೂಳಿಗೆ ಒಗ್ಗದು, ಕಣ್ಣಿಗೆ ಗೋಚರಿಸದು- ಕಾಣದು ಎ೦ದರು.
ಅಲ್ಲದಾಕ್ರಮಿಸಿದರೆ ನಿನಗವ
ರಲ್ಲಿಕಾಣಿಕೆ ದೊರಕಲರಿಯದು
ಬಲ್ಲಿದವರುತ್ತರದ ಕುರುಗಳು ನಿನಗೆಬಾ೦ಧವರು |
ಗೆಲ್ಲದಲಿ ಫಲವಿಲ್ಲ ಸಾಹಸ
ವಲ್ಲಿ ಮೆರೆಯದು ಮರ್ತ್ಯ ದೇಹದೊ
ಳಲ್ಲಿ ಸುಳಿವುದು ಭಾರವೆ೦ದರು ಚರರು ಪಲುಗುಣಗೆ || ೬೪ ||
ಪದವಿಭಾಗ-ಅರ್ಥ: ಅಲ್ಲದೆ (ಒಪ್ಪದೆ)+ ಆಕ್ರಮಿಸಿದರೆ ನಿನಗೆ+ ಅವರಲ್ಲಿ ಕಾಣಿಕೆ ದೊರಕಲು+ ಅರಿಯದು(ತಿಳಿಯದು, ಆಗದು) ಬಲ್ಲಿದವರು (ಬಲಿಷ್ಠರು )+ ಉತ್ತರದ ಕುರುಗಳು ನಿನಗೆ ಬಾ೦ಧವರು, ಗೆಲ್ಲದಲಿ ಫಲವಿಲ್ಲ, ಸಾಹಸವಲ್ಲಿ ಮೆರೆಯದು ಮರ್ತ್ಯ(ಮಾನವ- ರಕ್ತ ಮಾಂಸದ ) ದೇಹದೊಳು+ ಅಲ್ಲಿ ಸುಳಿವುದು ಭಾರವೆ೦ದರು ಚರರು ಪಲುಗುಣಗೆ.
ಅರ್ಥ:ಪಲ್ಗುಣನಿಗೆ ಬಂದ ಚಾರರು,'ನಮ್ಮ ಮಾತಿಗೆ ಒಪ್ಪದೆ, ಆಕ್ರಮಿಸಿದರೆ ನಿನಗೆ ಅವರಲ್ಲಿ ಕಾಣಿಕೆ ದೊರಕುವುದಿಲ್ಲ; ಅವರು ಬಲಿಷ್ಠರು, ಉತ್ತರದ ಕುರುಗಳು ನಿನಗೆ ಬಾ೦ಧವರು- ಬಂಧುಗಳು, ಅವರನ್ನು ಗೆಲ್ಲುವುದರಲ್ಲಿ ಫಲವಿಲ್ಲ; ಸಾಹಸವು ಅಲ್ಲಿ ಮೆರೆಯದು (ಫಲಕೊಡದು); ಮರ್ತ್ಯ ದೇಹದಲ್ಲಿದ್ದು ಅಲ್ಲಿ ಸುಳಿಯುವುದು- ಪ್ರವೇಶಿಸುವುದು ಅಪಾಯಕರ,' ಎ೦ದರು.
ಮಾಣಲದು ನಮಗವರು ಬ೦ಧು
ಶ್ರೇಣಿಗಳು ಗಡ ಹೋಗಲದು ಕ
ಟ್ಟಾಣೆಯಾವುದು ನಿಮ್ಮದೇಶದೊಳುಳ್ಳ ವಸ್ತುಗಳ |
ವಾಣಿಯವ ಮಾಡದೆ ಸುಯಜ್ಞದ
ಕಾಣಿಕೆಯನೀವುದು ಯುಧಿಷ್ಠಿರ
ನಾಣೆ ನಿಮಗೆನೆ ತ೦ದುಕೊಟ್ಟರು ಸಕಲ ವಸ್ತುಗಳ || ೬೫ ||
ಪದವಿಭಾಗ-ಅರ್ಥ: ಮಾಣಲು (ಹೋಗಲು/, ಬೇಡವೆಂದರೆ)+ ಅದು ನಮಗೆ+ ಅವರು ಬ೦ಧುಶ್ರೇಣಿಗಳು ಗಡ! ಹೋಗಲಿ (ಅಲ್ಲಿಗೆ ಹೋಗುವುದು ಬೇಡ ಹೋಗಲಿ)+ ಅದು ಕಟ್ಟಾಣೆಯಾವುದು ನಿಮ್ಮದೇಶದೊಳು+ ಉಳ್ಳ ವಸ್ತುಗಳ ವಾಣಿಯವ (ಶಬ್ದ, ಧ್ವನಿ, ಮಾತು, ನುಡಿ, ಗಾನ, ಸಂಗೀತ) ಮಾಡದೆ ಸುಯಜ್ಞದ ಕಾಣಿಕೆಯನು+ ಈವುದು ಯುಧಿಷ್ಠಿರನಾಣೆ ನಿಮಗೆ+ ಎನೆ ತ೦ದುಕೊಟ್ಟರು ಸಕಲ ವಸ್ತುಗಳ.
ಅರ್ಥ:ಅರ್ಜುನನು ನೀವು ಬೇಡವೆಂದರೆ ಅದು ನಮಗೆ ಬೇಡ; ಅವರು ನಮಗೆ ಬ೦ಧುಶ್ರೇಣಿಗಳು ಗಡ! ಹೋಗಲಿ; ಅದು ಕಟ್ಟಾಣೆಯಾವುದು? ನಿಮ್ಮದೇಶದಲ್ಲಿ ಇರುವ ವಸ್ತುಗಳನ್ನು (ವಿರೋಧ) ಮಾತನಾಡದೆ ಉತ್ತಮ ವಸ್ತುಗಳನ್ನು ಸುಯಜ್ಞದ ಕಾಣಿಕೆಯನ್ನು ಕೊಡುವುದು ಯುಧಿಷ್ಠಿರನಾಣೆ ನಿಮಗೆ! ಎನ್ನಲು ಸಕಲ ವಸ್ತುಗಳನ್ನೂ ತ೦ದುಕೊಟ್ಟರು.

ದಿಗ್ವಿಜಯ ಮುಗಿಸಿ ಪಾರ್ಥನು ಇ೦ದ್ರಪ್ರಸ್ಥಕ್ಕೆ ಬಂದನು[ಸಂಪಾದಿಸಿ]

ತಿರುಗಿತಲ್ಲಿ೦ದತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿ೦ದಿಳಾವೃತದಿ೦ದ ದಕ್ಷಿಣಕೆ |
ಭರದಿನೈದುತ ಹರಿವರುಷ ಕಿ೦
ಪುರುಷವನು ದಾಟುತ ಹಿಮಾನ್ವಿತ
ಗಿರಿಯನೇರಿದುದಿಳಿದು ಬ೦ದುದು ತೆ೦ಕ ಮುಖವಾಗಿ || ೬೬ ||
ಪದವಿಭಾಗ-ಅರ್ಥ:ತಿರುಗಿತು+ ಅಲ್ಲಿ೦ದ+ ಅತ್ತ ಪಾಳೆಯ ಮುರಿದುಬಿಟ್ಟು ಹಿರಣ್ಮಯವನು+ ಆಕರಿಸಿ ರಮ್ಯಕದಿ೦ದ+ ಇಳಾವೃತದಿ೦ದ ದಕ್ಷಿಣಕೆ ಭರದಿಂ (ವೇಗವಾಗಿ)+ ನೈ+ ಐದುತ(ಬರತ್ತಾ) ಹರಿವರುಷ ಕಿ೦ಪುರುಷವನು ದಾಟುತ, ಹಿಮಾನ್ವಿತಗಿರಿಯನು (ಹಿಮದಿಂದ ತುಂಬಿದ)+ ಏರಿದುದು+ ಇಳಿದು ಬ೦ದುದು ತೆ೦ಕಣ(ದಕ್ಷಿಣ) ಮುಖವಾಗಿ.
ಅರ್ಥ:ಅರ್ಜುನನ ಸೇನೆ ಅಲ್ಲಿ೦ದ ತಿರುಗಿತು; ಅತ್ತ ಪಾಳೆಯವನ್ನು ತೆಗೆದುಬಿಟ್ಟು ಅಲ್ಲಿಂದ ಹಿರಣ್ಮಯವನು ಪ್ರವೇಶಿಸಿ ರಮ್ಯಕಕ್ಕೆ ಬಂದು, ನಂತರ ಇಳಾವೃತದಿ೦ದ ದಕ್ಷಿಣಕೆ ವೇಗವಾಗಿ ಬರತ್ತಾ ಹರಿವರುಷ ಕಿ೦ಪುರುಷವನ್ನು ದಾಟುತ್ತಾ, ಹಿಮಾನ್ವಿತಗಿರಿಯನ್ನು ಏರಿ, ಅಲ್ಲಿಂದ ಇಳಿದು ದಕ್ಷಿಣ ಮುಖವಾಗಿ ಬ೦ದುದು.
ಕಳುಹಿ ಕಳೆದನು ಹಿ೦ದೆ ಕೂಡಿದ
ಬಲವನವರವರೆಲ್ಲ ಯಾಗ
ಸ್ಥಳಕೆ ಬಹ ನೇಮದಲಿ ಹರಿದುದು ನಿಜಪುರ೦ಗಳಿಗೆ |
ನೆಲನನಗಲದ ವಸ್ತುವಿದನೆ೦
ತಳವಡಿಸಿದನೊ ಶಿವಯೆನುತ ಸುರ
ರುಲಿಯೆ ಹೊಕ್ಕನು ಪಾರ್ಥನಿ೦ದ್ರಪ್ರಸ್ಥ ಪುರವರದ || 67 ||
ಪದವಿಭಾಗ-ಅರ್ಥ:ಕಳುಹಿ ಕಳೆದನು ಹಿ೦ದೆ ಕೂಡಿದ ಬಲವನು (ಸೇನೆಯನ್ನು)+ ಅವರ+ ಅವರೆಲ್ಲ ಯಾಗಸ್ಥಳಕೆ ಬಹ (ಬರುವ) ನೇಮದಲಿ ಹರಿದುದು, ನಿಜ ಪುರ೦ಗಳಿಗೆ (ತಮ್ಮ ನಗರಕ್ಕೆ) ನೆಲನನ+ ಅಗಲದ ವಸ್ತುವಿದನು+ ಎಂತು(ಹೇಗೆ)+ ಅಳವಡಿಸಿದನೊ, ಶಿವಯೆನುತ ಸುರರು+ ಉಲಿಯೆ ಹೊಕ್ಕನು ಪಾರ್ಥನು+ ಇ೦ದ್ರಪ್ರಸ್ಥ ಪುರವರವ.
ಅರ್ಥ:ಅರ್ಜುನನು ಈ ಹಿ೦ದೆ ಕೂಡಿಸಿದ ಸೇನೆಯನ್ನು ಅವರ ಅವರ ರಾಜ್ಯಕ್ಕೆ ಕಳುಹಿ ಕಳೆದನು. ಅವರಿಗೆಲ್ಲಾ ರಾಜಸೂಯ ಯಾಗಸ್ಥಳಕ್ಕೆ ಪುನಃ ಬರುವ ಆಜ್ಞೆಮಾಡಿದನು; ಸೇನೆ ತಮ್ಮ ತಮ್ಮ ಪ್ರದೇಶಕ್ಕೆ ಹರಿದು ಹೋಯಿತು. ಅರ್ಜುನನು ತಂದ ನೆಲದಷ್ಟು ಅಗಲದ ವಸ್ತುಗಳನ್ನು ಹೇಗೆ ಅಳವಡಿಸಿದನೊ- ಜೋಡಿಸಿಟ್ಟನೋ, ಶಿವಯೆನುತ ದೇವತೆಗಳು ಹೇಳುತ್ತಿರಲು ಪಾರ್ಥನು ಇ೦ದ್ರಪ್ರಸ್ಥ ಪುರವನ್ನು ಹೊಕ್ಕನು.

ನೋಡಿ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೧)
  2. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೨) -- ೭- ೧೧ -೨೦೨೦-

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು