ಶಲ್ಯಪರ್ವ: ೦೧. ಒಂದನೆಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

<ಕುಮಾರವ್ಯಾಸ ಭಾರತ

ಶಲ್ಯಪರ್ವ: ೦೧. ಒಂದನೆಯ ಸಂಧಿ[ಸಂಪಾದಿಸಿ]

ಸೂ.ರಾಯಕೇಳೈ ಕದನದಲಿ ರಾ
ಧೇಯನವಸಾನದಲಿ ಕೌರವ
ರಾಯ ದಳಪತಿಯಾಗಿ ಹೊಕ್ಕನು ಶಲ್ಯನಾಹವವ



ಹೇಳರೇ ಭೀಷ್ಮಾದಿ ಹಿರಿಯರು

ಮೇಲುದಾಯವ ಬಲ್ಲವರು ಹೆ

ಚ್ಚಾಳುತನದಲಿ ಹಿಗ್ಗಿಕಂಡಿರೆ ಜಯದ ಜಾರುಗಳ

ಮೇಲಣಾಹವದೊಳಗೆ ದೇಹವ

ಬೀಳುಕೊಂಡನು ಶಲ್ಯನಲ್ಲಿಂ

ಮೇಲೆ ದೊರೆಗೇನಾದುದೆಂಬುದನರಿಯೆ ನಾನೆಂದ ೧



ಮರುಳೆ ಸಂಜಯ ಗಾಳಿಯಲಿ ಕುಲ

ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು

ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ

ಕುರುಪತಿಯ ಪಾಡೇನು ಮಾದ್ರೇ

ಶ್ವರನ ಮತ್ಸರವೇನು ಸಾಕಂ

ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ ೨



ಬೇಯದೆನ್ನೆದೆ ಶೋಕವಹ್ನಿಯ

ಬಾಯಲಕಟಾ ಕರ್ಣ ಕೌರವ

ರಾಯನಳಿವಿನಲುಳಿವ ಪುತ್ರದ್ರೋಹಿಯಾರಿನ್ನು

ಸಾಯಿಸುವ ಸಾವಂಜಿತೆನಗೆ ಚಿ

ರಾಯು ತೊಡರಿಕ್ಕಿದೆನು ಮಾರ್ಕಂ

ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ ೩



ಹದುಳಿಸೈ ರಾಜೇಂದ್ರ ನೀ ಬಿ

ತ್ತಿದ ವಿಷದ್ರುಮ ಫಲಿತವಾಯಿತು

ಬೆದರಲೇಕಿನ್ನನುಭವಿಸು ಸಾಕುಳಿದ ಮಾತೇನು

ಕದನದಲಿ ಸುತೆ(ಸುತ?)ನಿಧಿಯ ಹೋಗಾ

ಡಿದೆ ನಿಜಾನ್ವಯ ಕಲ್ಪತರುವನು

ಮದಕರಿಗೆಮಾರಿದೆಯೆನುತ ನೆಗಹಿದನು ಭೂಪತಿಯ ೪



ಮಲಗಿಸಿದನೊರವೇಳ್ವ ನಯನ

ಸ್ಥಳವ ನೇವರಿಸಿದನು ಶೋಕಾ

ನಲನ ತಾಪಕೆ ತಂಪನೆರೆದನು ನೀತಿಮಯರಸದ

ಅಳಲಶ್ರವಮಾಡಿದೆ ನದೀಸುತ

ನಳಿವಿನಲಿ ಗುರು ಕರ್ಣ ಶಲ್ಯರ

ಕಳವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ ೫



ಅಹುದು ಸಂಜಯ ಶೋಕಶಿಖಿ ನೆರೆ

ದಹಿಸಿತೆನ್ನನು ಬೆಂದ ವಸ್ತುಗೆ

ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ

ಮಿಹಿರಸುತ ಪರಿಯಂತ ಕಥೆ ನಿ

ರ್ವಹಿಸಿ ಬಂದುದು ಶಲ್ಯಕೌರವ

ರೆಹಗೆ ನೆಗಳಿದರದನು ವಿಸ್ತರವಾಗಿ ಹೇಳೆಂದ ೬



ತೆಗೆದುದಾಚೆಯಲವರ ಬಲ ಜಗ

ದಗಲದುಬ್ಬಿನ ಬೊಬ್ಬೆಯಲಿ ಮೊರೆ

ಮುಗಿಲಮದದಂದದಲಿ ಮೊಳಗುವ ವಾದ್ಯರಭಸದಲಿ

ಬಿಗಿದಮೋನದ ಬೀತ ಹರುಷದ

ಹೊಗೆಯ ಮೋರೆಯ ಹೊತ್ತುವೆದೆಗಳ

ದುಗುಡದೊಗ್ಗಿನ ನಮ್ಮ ಮೋಹರ ತೆಗೆದುದೀಚೆಯಲಿ ೭



ಸಿಡಿದು ಕರ್ಣನ ತಲೆ ಧರಿತ್ರಿಗೆ

ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ

ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ

ಹಡಪಿಗರು ಚಾಮರದ ಚಾಹಿಯ

ರೊಡನೆ ನೆಲಕುರುಳಿದರು ಸಾರಥಿ

ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ ೮



ಬಂದು ಕರ್ಣನ ಹಾನಿ ಕೌರವ

ವೃಂದವನು ವೇಢೈಸಿತೇ ಹಾ

ಯೆಂದು ಕೃಪಗುರುಸುತರು ರಥವನು ಬಿಟ್ಟು ಸೂಠಿಯಲಿ

ತಂದು ಬಾಚಿಸಿದರಸನಿರವೆಂ

ತೆಂದುಸುರನಾರೈದು ವಿಧಿಯನು

ನಿಂದಿಸಿದರವಧಾನ ಜೀಯವಧಾನ ಜೀಯೆನುತ ೯



ತಳಿತಳಿದು ಪನ್ನೀರನಕ್ಷಿಗೆ

ಚಳೆಯವನು ಹಿಡಿದೆತ್ತಿ ಗುರುಸುತ

ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು

ಘಳಿಲನೆದ್ದನು ಕರ್ಣ ತೆಗೆಸೈ

ದಳವನಿರುಳಾಯ್ತೆಂದು ಶೋಕದ

ಕಳವಳದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ ೧೦



ರಾಯ ಹದುಳಿಸು ಹದುಳಿಸಕಟಾ

ದಾಯಿಗರಿಗೆಡೆಗೊಟ್ಟಲಾ ನಿ

ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ

ವಾಯುಜನ ಜಠರದಲಿ ತೆಗೆಯಾ

ಜೀಯ ನಿನ್ನನುಜರನು ಪಾರ್ಥನ

ಬಾಯಲುಗಿ ಸೂತಜನನೆಂದರು ಜರೆದು ಕುರುಪತಿಯ ೧೧



ಏನು ಗುರುಸುತ ಮಡಿದನೇ ತ

ನ್ನಾನೆ ಬವರದಲಕಟ ಕುಂತೀ

ಸೂನುವೇಕೈ ತಪ್ಪು ಮಾಡಿದನೇ ಮಹಾದೇವ

ಭಾನುಸನ್ನಿಭ ಸರಿದನೇ ತ

ಪ್ಪೇನು ಪಾರ್ಥನ ಬಸುರಲೆನ್ನ ನಿ

ಧಾನವಿದ್ದುದು ತೆಗೆವೆನೈಸಲೆಯೆಂದು ಕಂದೆರೆದ ೧೨



ತಾಪವಡಗಿತು ಮನದ ಕಡುಹಿನ

ಕೋಪ ತಳಿತುದು ಭೀಮ ಪಾರ್ಥರ

ರೂಪು ಮುಖದಲಿ ಕರ್ಣ ದುಶ್ಯಾಸನರ ಕಲ್ಪಿಸಿದ

ಭೂಪ ಕೇಳೈ ಪಾಳಯಕೆ ಕುರು

ಭೂಪ ಬಂದನು ನಾಳೆ ಕರ್ಣೋ

ತ್ಥಾಪನವಲಾ ಎನುತ ಹೂಕ್ಕನು ಭದ್ರಮಂಟಪವ ೧೩



ಶಕುನಿ ಕೃಪ ಗುರುಸೂನು ಕೃತವ

ರ್ಮಕ ಸುಕೇತು ಸುಶರ್ಮ ಸಮಸ

ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ

ಸಕಲ ಸುಭಟರು ಸಹಿತ ದಳನಾ

ಯಕರು ಬಂದರು ಕರ್ಣಹಾನಿ

ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ ೧೪



ಹಿಮದ ಹೊಯ್ಲಲಿ ಸೀದು ಸಿಕ್ಕಿದ

ಕಮಲವನದಂದದಲಿ ಹತವಿ

ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ

ಸುಮುಖತಾವಿಚ್ಚೇದ ಕಲುಷ

ಸ್ತಿಮಿತರಿರವನು ಕಂಡು ನಾಳಿನ

ಸಮರಕೇನುದ್ಯೋಗವೆಂದನು ಕೃಪನ ಗುರುಸುತನ ೧೫



ಅರಸ ಕರ್ಣಚ್ಛೇದವೇ ಜಯ

ಸಿರಿಯ ನಾಸಾಚ್ಛೇದವಿನ್ನರ

ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ

ಗುರುನದೀಸುತರಳಿದ ಬಳಿಕೀ

ಧರೆಗೆ ನಿನಗಸ್ವಾಮ್ಯ ಕರ್ಣನ

ಮರಣದಲಿ ನೀನರ್ಧದೇಹನು ಭೂಪ ಕೇಳೆಂದ ೧೬



ಆ ವೃಕೋದರ ನರರೊಳಂತ

ರ್ಭಾವ ದುಶ್ಯಾಸನಗೆ ತನ್ಮಯ

ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ

ಕೈವಿಡಿಯಲೇ ಕರ್ಣನಿಹನೆಂ

ದಾವು ನಿಶ್ಚಯಿಸಿದೆವು ಕರ್ಣನ

ಸಾವ ನಾಳಿನೊಳರಿವೆನೆಂದನು ನಿನ್ನ ಮಗ ನಗುತ ೧೭



ನಾವು ಹೊಯ್ದಾಡುವೆವು ಭುಜಸ

ತ್ವಾವಲಂಬವ ತೋರುವೆವು ಕ

ರ್ಣಾವಸಾನವ ಕಂಡು ಬಳಿಕುಗುಳುವೆವು ತಂಬುಲವ

ನೀವು ಸೇನಾಪತ್ಯವನು ಸಂ

ಭಾವಿಸಿರೆ ಸಾಕಿನ್ನು ಮಿಗಿಲಾ

ದೈವಕೃತ ಪೌರುಷವ ನಾಳಿನೊಳರಿಯಬಹುದೆಂದು ೧೮



ಧರಣಿಪತಿ ಚಿತ್ತೈಸು ಸೇನಾ

ಧುರವನೀವುದು ಮದ್ರಭೂಪತಿ

ಗೆರವಲಾ ಜಯಲಕ್ಶ್ಮಿ ಬಳಿಕಾ ಪಾಂಡುತನಯರಿಗೆ

ಸುರನದೀಜ ದ್ರೋಣ ರಾಧೇ

ಯರಿಗೆ ಸರಿಮಿಗಿಲಿಂದು ಮಾದ್ರೇ

ಶ್ವರನುಳಿಯೆ ದೊರೆಯಾರು ದಿಟ್ಟರು ನಮ್ಮಥಟ್ಟಿನಲಿ ೧೯



ನೀವು ಕಟಕಾಚಾರ್ಯಪುತ್ರರು

ನೀವಿರಲು ಕೃಪನಿರಲು ದಳವಾಯ್

ನಾವಹೆವೆ ನೀವಿಂದು ತೇಜೊದ್ವಯದಲಧಿಕರಲೆ

ನಾವು ತರುವಾಯವರೆನಲು ಜಯ

ಜೀವಿಗಳು ನೀವನ್ಯಗುಣಸಂ

ಭಾವಕರಲಾ ಎಂದನಶ್ವತ್ಥಾಮ ಶಲ್ಯಂಗೆ ೨೦



ಉಚಿತವಿತರೇತರಗುಣಸ್ತುತಿ

ರಚನೆ ಗುಣಯುಕ್ತರಿಗೆ ವಿಜಯೋ

ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ

ಅಚಲ ಮೂರರ ಪೈಸರದ ಬಲ

ನಿಚಯ ನಮ್ಮದು ವೀರ ಸುಭಟ

ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ ೨೧



ಸುರನದೀಜ ದ್ರೋಣ ಕೃಪರೀ

ಕುರುಬಲಕೆ ಕಟ್ಟೊಡೆಯರವರಿ

ಬ್ಬರ ಪರೋಕ್ಷದಲಾರವಿಲ್ಲಿಯ ಹಾನಿವೃದ್ಧಿಗಳು

ಗುರುಸುತನೊ ಶಲ್ಯನೊ ಚಮೊಮು

ಖ್ಯರನು ನೀವೇ ಬೆಸಸಿಯೆಂದನು

ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ ೨೨



ಆದಡಾ ಭೀಷ್ಮಾದಿ ಸುಭಟರು

ಕಾದಿ ನೆಗ್ಗಿದ ಕಳನ ಹೊಗುವಡೆ

ಕೈದುಕಾರರ ಕಾಣೆನೀ ಮಾದ್ರೇಶ ಹೊರಗಾಗಿ

ಈ ದುರಂತದ ಸಮರಜಯ ನಿನ

ಗಾದಡೊಳ್ಳಿತು ಶಲ್ಯನಲಿ ಸಂ

ಪಾದಿಸಿರೆ ಸೇನಾಧಿಪತ್ಯವನರಸ ಕೇಳೆಂದ ೨೩



ತರಸಿ ಮಂಗಳವಸ್ತುಗಳನಾ

ದರಿಸಿ ಭದ್ರಾಸನದಲೀತನ

ನಿರಿಸಿ ನೃಪ ವಿಸ್ತರಿಸಿದನು ಮೂರ್ಧಾಭಿಷೇಚನವ

ಮೊರೆವ ವಾದ್ಯದ ಸಿಡಿಲ ಧರಣೀ

ಸುರರ ಮಂತ್ರಾಕ್ಷತೆಯ ಮಳೆಗಳೊ

ಳಿರುಳನುಗಿದವು ಮುಕುಟಮಣಿರಾಜಿಗಳ ಮಿಂಚುಗಳು ೨೪



ಆದುದುತ್ಸವ ಕರ್ಣಮರಣದ

ಖೇದವುಕ್ಕಿತು ಹಗೆಗೆ ಕಾಲ್ದೊಳೆ

ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ

ಬೀದಿವರಿದುದು ಬಿಂಕ ನನೆಕೊನೆ

ವೋದುದಾಶಾಬೀಜ ಲಜ್ಜೆಯ

ಹೋದ ಮೊಗಿಗೆ ಕದಪ ಹೊಯ್ದನು ನಿನ್ನ ಮಗನೆಂದ ೨೫



ಕಾಣಿಕೆಯನಿತ್ತಖಿಳ ಸುಭಟ

ಶ್ರೇಣಿ ಕಂಡದು ನುಡಿಯ ಹಾಣಾ

ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ

ಪ್ರಾಣಚುಳಕೋದಕದ ಚೇಷ್ಟೆಯ

ಹೂಣಿಗರು ವಿಜಯಾಂಗನೋಪ

ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ ೨೬



ಪತಿಕರಿಸಿದೈ ವೀರಸುಭಟ

ಪ್ರತಿತ (ಪ್ರತತಿ?) ಮಧ್ಯದಲೆಮ್ಮನಹಿತ

ಚ್ಯುತಿಗೆ ಸಾಧನವೆಂದು ನಿಜಸೇನಾಧಿಪತ್ಯದಲಿ

ಕೃತಕವಿಲ್ಲದೆ ಕಾದುವೆನು ಯಮ

ಸುತರೊಡನೆ ಜಯಸಿರಿಗೆ ನೀನೇ

ಪತಿಯೆನಿಸಿ ತೋರಿಸುವೆನೆಂದನು ಶಲ್ಯ ಕುರುಪತಿಗೆ ೨೭



ಉಬ್ಬಿದನಲೈ ಮಧುರವಚನದ

ಹಬ್ಬದಲಿ ನಿನ್ನಾತನಿತ್ತಲು

ತುಬ್ಬಿನವದಿರು ತಂದು ಬಿಸುಟರು ನಿಮ್ಮ ಪಾಳೆಯದ

ಸರ್ಬ (ಸಬ್ಬ?) ವೃತ್ತಾಂತವನು ಗಾಢದ

ಗರ್ಭ (ಗಬ್ಬ?) ಮುರಿದುದು ಕೃಷ್ಣರಾಯನ

ನೆಬ್ಬಿಸಿದನಿರುಳವನಿಪತಿ ಬಿನ್ನೈಸಿದನು ಹದನ ೨೮



ದೇವ ಚಿತ್ತೈಸಿದಿರೆ ಬೊಪ್ಪನ

ಭಾವನನು ಸೇನಾಧಿಪತ್ಯದ

ಲೋವಿದರಲೇ ಶಲ್ಯ ಮಾಡಿದ ಭಾಷೆಯವರೊಡನೆ

ಆವನಂಘೈಸುವನೊ ಪಾರ್ಥನೊ

ಪಾವಮಾನಿಯೊ ನಕುಲನೋ ಸಹ

ದೇವನೋ ತಾನೋ ನಿದಾನಿಸಲರಿಯೆ ನಾನೆಂದ ೨೯



ಕಲಹವೆನ್ನದು ದಳಪತಿಗೆ ತಾ

ನಿಲುವೆನೆಂದನು ಭೀಮನೆನ್ನನು

ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ

ಸಲುಗೆಯೆನಗೆಂದನು ನಕುಲನೆ

ನ್ನೊಲವಿನರ್ತಿಯಿದೆನ್ನ ಕಳುಹಿದ

ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ ೩೦



ಹರಿಯದರ್ಜುನನಿಂದ ಭೀಮನ

ನೆರವಣಿಗೆ ನೋಯಿಸದು ನಕುಲನ

ಹೊರಿಗೆಯೊದಗದು ಸೈರಿಸದು ಸಹದೇವನಾಟೊಪ

ಇರಿವಡಾ ಮಾದ್ರೇಶನನು ನೆರೆ

ಮುರಿವಡೆಯು ನಿನಗಹುದು ನಿನ್ನನು

ತರುಬಿದವರೇ ಕಷ್ಟರೆಂದನು ನಗುತ ಮುರವೈರಿ ೩೧



ಲೇಸನಾಡಿದೆ ಕೃಷ್ಣ ಶಲ್ಯಂ

ಗೀಸು ಬಲುಹುಂಟಾದಡನುಜರು

ಘಾಸಿಯಾದರು ಹಿಂದೆ ಭೀಷ್ಮಾದಿಗಳ ಬವರದಲಿ

ಈ ಸಮರಜಯವೆನಗೆ ನಾಳಿನೊ

ಳೈಸಲೇ ನಳ ನಹುಷ ಭರತ ಮ

ಹೀಶ ವಂಶೋತ್ಪನ್ನ ತಾನೆಂದನು ಮಹೀಪಾಲ ೩೨



ತಾಯಿ ಹೆರಳೇ ಮಗನ ನಿನ್ನನು

ನಾಯಕನೆ ಲೋಕೈಕವೀರರ

ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ

ರಾಯ ನೀ ಕ್ಷತ್ರಿಯನು ಸೇಸೆಯ

ತಾಯೆನುತ ತೂಪಿರಿದು ಕಮಲದ

ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ ೩೩



ಸಂದವೈ ಹದಿನೇಳು ರಾತ್ರಿಗ

ಳಿಂದಿನಿರುಳಾ ಸೇನೆ ನಿರ್ಭಯ

ದಿಂದ ನಿದ್ರಾವ್ಯಸನನಿರ್ಭರ ಪೂರ್ಣ ಹರುಷದಲಿ

ಸಂದುದೀ ನಿನ್ನವರು ರಾಧಾ

ನಂದನವ್ಯಪಗಮನನಷ್ಟಾ

ನಂದವಿಹ್ವಲಕರಣರಿದ್ದರು ಭೂಪ ಕೇಳೆಂದ ೩೪



ಆ ಶಿಖಂಡಿಯ ತೋರಿ ಸರಳಿನ

ಹಾಸಿಕೆಯಲೊಬ್ಬನನು ಮಾತಿನ

ವಾಸಿಯಿಂದೊಬ್ಬನನು ಮುನ್ನಿನ ಕುಲವನೆಚ್ಚರಿಸಿ

ಘಾಸಿ ಮಾಡಿದನೊಬ್ಬನನು ಧರ

ಣೀಶ ಚೇಷ್ಟೆಯಲೊಬ್ಬನನು ಕೃಪೆ

ಯೇಸು ಘನವೋ ವೀರನಾರಾಯಣಗೆ ಭಕ್ತರಲಿ ||೩೫ ||[೧][೨]

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.