ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಸಾಧನಗಳು : ಮೊದಲನೆಯಭಾಗ : ೧೮೫೫-೧೮೫೮
ಆರನೆಯ ಅಧ್ಯಾಯ
ಸಾಧನಗಳು ; ಮೊದಲನೆಯಭಾಗ : 1855-1858.
ಪರಮಹಂಸರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ರಾಗಿ ಬಹುಮಟ್ಟಿಗೆ ರಾಮಕುಮಾರನ ಲಾಲನೆಪಾಲನೆಗಳಲ್ಲಿಯೇ ಬೆಳೆದಿದ್ದರು. ಆದ್ದರಿಂದ ಪಿತೃಸಮಾನವಾದ ಅಣ್ಣನು ದೇಹಬಿಟ್ಟ ಸುದ್ದಿಯನ್ನು ಕೇಳಿ ಅವರಿಗೆ ಹಿಡಿಯಲಾರದಷ್ಟು ದುಃಖವಾಯಿತು. ಈ ಜಗತ್ತಿನಲ್ಲಿ ಸಮಸ್ತವೂ ಅಸತ್ಯವೆಂಬುದು ಮನಸ್ಸಿಗೆ ಮತ್ತಷ್ಟು ನಾಟಿತು. ಜಗದಂಬೆಯಲ್ಲಿ ಭಕ್ತಿಯ ಪೂಜೆಯಲ್ಲಿ ಆಸಕ್ತಿಯ ಹೆಚ್ಚಾದುವು. ಇಲ್ಲಿಂದ ಮುಂದಕ್ಕೆ ಶಾಸ್ತ್ರೀಯವಾಗಿ ದೇವೀಪೂಜೆ ಮಾಡಿದಮೇಲೆ ದೇವಿಯ ಎದುರಿಗೆ ತನ್ಮಯರಾಗಿ ಕುಳಿತು ಹೊತ್ತು ಕಳೆಯುತ್ತಿದ್ದರು. ಆಗಾಗ ರಾಮಪ್ರಸಾದ ಮುಂತಾದ ದಾಸರ ಕೀರ್ತನೆಗಳನ್ನು ಹಾಡುತ್ತೆ ಹಾಡುತ್ತ ಕೇವಲ ವ್ಯಾಕುಲ ಹೃದಯ ರಾಗಿ `ತಾಯಾ, ನೀನು ರಾಮಪ್ರಸಾದರಿಗೆ ದರ್ಶನಕೊಟ್ಟೆ ; ನನಗೆ ಯಾಕೆ ದರ್ಶನಕೊಡುವುದಿಲ್ಲ? ನಾನು ಧನ, ಜನ, ಭೋಗ, ಸುಖ ಇವುಗಳಾವುದನ್ನೂ ಅಪೇಕ್ಷಿಸುವುದಿಲ್ಲ. ನನಗೆ ದರ್ಶನ ವನ್ನು ಕೊಡು' ಎಂದು ಪ್ರಾರ್ಥಿಸುವರು. ಆಗ ಅವರ ಕಣ್ಣೀರಿಂದ ಎದೆಯು ತೊಟ್ಟು ಹೋಗುತ್ತಿತ್ತು. ಹೀಗೆ ಕಾತರರಾಗಿ ಅತ್ತ ಮೇಲೆ ಹೃದಯದ ಭಾರವು ಕಡಿಮೆಯಾಗಿ ಪುನಃ ಕೀರ್ತನೆ ಹೇಳು ವುದಕ್ಕೆ ಮೊದಲು ಮಾಡುತ್ತಿದ್ದರು.
ಮಧ್ಯಾಹ್ನದಲ್ಲಿಯೂ ಸಾಯಂಕಾಲದಲ್ಲಿಯೂ ದೇವಸ್ಥಾನದ ಬಾಗಿಲುಹಾಕಿದಮೇಲೆ ಹತ್ತಿರದಲ್ಲಿದ್ದ ಒಂದು ನಿರ್ಜನವಾದಕಾಡಿಗೆ ಹೋಗಿ ದೇವಿಯ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು. ಹೃದಯನು ಅವರ ಜೊತೆಯಲ್ಲಿಯೇ ಯಾವಾಗಲೂ ಇರುತ್ತಿದ್ದನೆಂದು ಹಿಂದೆ ಹೇಳಿದ್ದೇವೆ. ಹೀಗೆ ಪರಮಹಂಸರು ರಾತ್ರಿಯ ಹೊತ್ತು ಕಾಡಿ ನೊಳಗೆ ಹೋಗುತ್ತಿದ್ದದ್ದನ್ನು ನೋಡಿ ಹೃದಯನು ಒಂದು ದಿನ ಅವ ರನ್ನು ಹಿಂಬಾಲಿಸಿ ಹೋದನು. ಅವರು ಒಂದು ಬನ್ನಿ ಯಮರದ ಕೆಳಗೆ ಜನಿವಾರವನ್ನೂ ಉಟ್ಟಿದ್ದ ಬಟ್ಟೆಯನ್ನೂ ತೆಗೆದುಹಾಕಿ ಧ್ಯಾನ ಮಾಡುತ್ತ ಕುಳಿತರು. ಅದನ್ನು ನೋಡಿ ಹೃದಯನು ಮನಸ್ಸಿನಲ್ಲಿ "ಮಾವನಿಗೆ ಹುಚ್ಚು ಹಿಡಿಯಿತೋ ಏನೋ! ಹುಚ್ಚರೇ ಹೀಗೆ ಮಾಡುವುದು ; ಧ್ಯಾನಮಾಡಿದರೆಮಾಡಲಿ : ಆದರೆ ಹೀಗೆ ಬೆತ್ತಲೆ ಯಾಗಿ ಏಕೆ ಮಾಡಬೇಕು ?" ಎಂದಂದುಕೊಂಡು ಬೇಗನೆ ಅವರ ಹತ್ತಿರ ಹೋಗಿ "ಮಾವ ! ಇದೇನಿದು! ಜನಿವಾರವನ್ನು ತೆಗೆದು ಹಾಕಿ ಉಟ್ಟ ಬಟ್ಟಗಳನ್ನೂ ಬಿಚ್ಚಿ ಹೀಗೆ ಏಕೆ ಬೆತ್ತಲೆಕೂತೆ ?" ಎಂದು ಕೇಳಿದನು. ಅದಕ್ಕೆ ಅವರು ಕಣ್ಣು ಬಿಟ್ಟು ನೋಡಿ "ನಿನಗೇನು ಗೊತ್ತೋ? ಹೀಗೆ ಪಾರಮುಕ್ತನಾಗಿಯೇ ಧ್ಯಾನಮಾಡ ಬೇಕಾದದ್ದು. ಮನುಷ್ಯನು ಜನ್ಮಾವಧಿ ದ್ವೇಷ, ಲಜ್ಜೆ, ಕುಲ, ಶೀಲ, ಭಯ, ಮಾನ, ಜಾತಿ, ಅಭಿಮಾನ ಎಂಬ ಅಷ್ಟಪಾಶಗಳಿ೦ದ ಬದ್ಧನಾಗಿರು ತ್ತಾನೆ. ಯಜ್ಯೋಪವೀತವೂ ತಾನು ಬ್ರಾಹ್ಮಣ, ಎಲ್ಲರಿಗಿಂತಲೂ ದೊಡ್ಡವನು' ಎಂಬ ಅಭಿಮಾನದ ಗುರುತು, ಮತ್ತು ಒಂದು ಪಾಶ : ತಾಯಿಯನ್ನು ಕುರಿತು ಪ್ರಾರ್ಥಿಸಬೇಕಾದರೆ ಈ ಪಾಶಗಳ ನ್ನೆಲ್ಲಾ ಕಿತ್ತು ಬಿಸಾಡಿ ಏಕಮನಸ್ಸಿನಿಂದ ಪ್ರಾರ್ಥಿಸಬೇಕು. ಆದ್ದ ರಿಂದಲೇ ಇವನ್ನೆಲ್ಲ ತೆಗೆದುಹಾಕಿದ್ದೇನೆ. ಧ್ಯಾನ ಮುಗಿದು ಹಿಂದಕ್ಕೆ ಬರುವಾಗ ಪುನಃ ಅವುಗಳನ್ನೆಲ್ಲ ಹಾಕಿಕೊಂಡು ಬರು ತ್ತೇನೆ" ಎಂದು ಹೇಳಿದನು. ಹೃದಯನು ಮಾವನಿಗೆ ಏನೇನೋ ಬುದ್ದಿ ಹೇಳಬೇಕೆಂದು ನಿಶ್ಚಯಮಾಡಿಕೊಂಡು ಹೋಗಿದ್ದನು. ಆದರೆ ಆಗ ಏನೂ ತೋಚದೆ ಸುಮ್ಮನೆ ಹೊರಟು ಬಂದುಬಿಟ್ಟನು. ದಿನಗಳು ಕಳೆದಹಾಗೆಲ್ಲ ಪರಮಹಂಸರ ಮನಸ್ಸಿನಲ್ಲಿ ದೇವತಾ ನುರಾಗವೂ, ವ್ಯಾಕುಲತೆಯೂ ವೃದ್ಧಿಯಾಗುತ್ತ ಬಂದುವು. ನಿದ್ರಾ ಹಾರಗಳು ಬೇಕಿಲ್ಲವಾದುವು; ತಲೆಯೂ ಎದೆಯ ಯಾವಾಗಲೂ ಕೆಂಪೇರಿರುತ್ತಿದ್ದುವು. ಮೈಯಲ್ಲಿ ಬೆಂಕಿ ಬಿದ್ದ ಹಾಗೆ ತಾಪವಿರುತ್ತಿತ್ತು. ಹೀಗಿರಲು ಕೆಲವು ದಿನಗಳ ಮೇಲೆ ದೇವೀಮೂರ್ತಿಯ ಪ್ರಥಮದರ್ಶನವಾಯಿತು. ಅದನ್ನು ಕುರಿತು ಪರಮಹಂಸರು ಹೀಗೆ ಹೇಳುತ್ತಿದ್ದರು:- ಒಂದುದಿನ ದೇವಿಯ ಎದುರಿಗೆ ಕೀರ್ತನೆಯನ್ನು ಹಾಡುತ್ತಾ ಹಾಡುತ್ತಾ-ಅಮ್ಮಾ, ನಾನು ಎಷ್ಟು ಪ್ರಾರ್ಥಿಸಿದರೂ ನೀನೇಕೆ ಅದನ್ನು ಕಿವಿಯಮೇಲೆ ಹಾಕಿಕೊಳ್ಳುವಹಾಗಿಲ್ಲ ? ರಾಮಪ್ರಸಾದರಿಗೆ ಪ್ರತ್ಯಕ್ಷಳಾಗಲಿಲ್ಲವೇ! ನನಗೆ ಯಾಕೆ ಆಗುವುದಿಲ್ಲ?-ಎಂದು ಬಹಳವಾಗಿ ಕೇಳಿಕೊಂಡೆ ; ಆದರೂ ದೇವಿಯ ದರ್ಶನವಾಗಲಿಲ್ಲ. ದೇವಿಯು ದರ್ಶನವಾಗದಿದ್ದ ಮೇಲೆ ಈ ಜೀವ ನಿದ್ದೇನುಪ್ರಯೋಜನವೆಂದಂದುಕೊಂಡೆ ; ಮನಸ್ಸಿಗೆ ಬಹು ಸಂಕಟವಾಯಿತು. ಕೂಡಲೆ ಗರ್ಭಗುಡಿಗೆ ಎದ್ದು ಹೋಗಿ ದೇವಿಯ ಕೈಯಲ್ಲಿದ್ದ ಕತ್ತಿಯನ್ನು ತಂದು ಹುಚ್ಚನಹಾಗೆ ಪ್ರಾಣಕಳೆದು ಕೊಳ್ಳುವುದಕ್ಕೆ ಹೋದೆನು. ಆ ಸಮಯದಲ್ಲಿ ತಾಯಿಯ ಅದ್ಭುತ ದರ್ಶನವಾಯಿತು. ಒಡನೆಯೇ ಸಂಜ್ಞಾಶೂನ್ಯನಾಗಿ ಬಿದ್ದು ಬಿಟ್ಟೆನು. ಆ ದಿನವೂ ಮರುದಿನವೂ ಏನು ನಡೆಯಿತೋ ನನಗೊಂದೂ ಗೊತ್ತಾಗಲಿಲ್ಲ. ಮನಸ್ಸಿನಲ್ಲಿ ಒ೦ದ ಪೂರ್ವವಾದ ಆನಂದವನ್ನು ಅನುಭವಿಸಿದ್ದು ಮಾತ್ರ ಜ್ಞಾಪಕವಿದೆ."
ದೇವಿಯ ಪ್ರಥಮದರ್ಶನವಾದಂದಿನಿಂದ ಪರಮಹಂಸರು ಪೂರ್ವದಂತೆ ಯಥಾವಿಧಿಯಾಗಿ ಪೂಜೆಮಾಡಲಾರದವರಾದರು. ಅವರ ಪೂಜೆಯು ವಿಚಿತ್ರವಾಗುತ್ತ ಬಂತು. ಮಾಡುವಾಗ ಒಂದು ತುತ್ತು ಅನ್ನವನ್ನು ಕೈಯಲ್ಲಿ ತೆಗೆದುಕೊಂಡು ದೇವಿಯ ಬಾಯಿಯಹತ್ತಿರಕ್ಕೆ ತೆಗೆದುಕೊಂಡು ಹೋಗಿ ತಾಯಿ, ತಿನ್ನು; ಚೆನ್ನಾಗಿದೆ, ತಿನ್ನು;” ಎಂದು ಹೇಳಿ ಆಮೇಲೆ “ ನನ್ನನ್ನು ತಿನ್ನು ಅಂತ ಹೇಳುತ್ತೀ ಏನು ? ಮೊದಲು ನಾನು ತಿನ್ನಬೇಕೆ ? ಆಗಲಿ, ತಿನ್ನುತ್ತೇನೆ” ಎಂದು ಹೇಳಿ ಅದರಲ್ಲಿ ಸ್ವಲ್ಪ ತಿಂದು ಮಿಕ್ಕಿದ್ದನ್ನು ದೇವಿಯ ಬಾಯಹತ್ತಿರ ಹಿಡಿದು " ನಾನೇನೊ ತಿ೦ದೆ, ಇನ್ನು ದೇವಿಗೆ ನೈವೇದ್ಯ ನೀನೂ ತಿನ್ನು," ಎಂದು ಹೇಳುವರು. ಅಥವಾ ಪೂಜಾಸನವನ್ನು ಬಿಟ್ಟು ತೂರಾಡುತ್ತ ದೇವಿಯ ಸಿಂಹಾಸನದ ಮೇಲೆ ಹತ್ತಿ ಗಾನ ಮಾಡುತ್ತ ದೇವಿಯ ಕೈ ಹಿಡಿದುಕೊಂಡು ಕುಣಿಯುವರು; ಹಾಸ್ಯ ಪರಿಹಾಸ್ಯ ಮಾಡುವರು; ಮಾತನಾಡುವರು; ಅಥವಾ ದೇವಿಯ ಪೂಜೆಗಾಗಿ ತಂದ ಹೂವನ್ನು ಮೊದಲು ತನ್ನ ತಲೆ, ಹೃದಯ, ಕಾಲುಗಳ ಮೇಲೆ ಪೂಜೆಮಾಡಿಕೊಂಡು ಆಮೇಲೆ ಅವನ್ನು ದೇವಿಯ ಪಾದಪದ್ಮದಲ್ಲಿ ಅರ್ಪಣಮಾಡುವರು.
ಇದನ್ನೆಲ್ಲ ನೋಡುತ್ತಿದ್ದ ಹೃದಯನು ಮನಸ್ಸಿನಲ್ಲಿ "ಮಾವ ನಿಗೆ ಖಂಡಿತವಾಗಿ ಹುಚ್ಚು ಹಿಡಿದಿರಬೇಕು; ಇಲ್ಲದೆ ಹೋದರೆ ಪೂಜೆ ಯಲ್ಲಿ ಎಲ್ಲಾದರೂ ಹೀಗೆ ಅನಾಚಾರ ಮಾಡುವುದುಂಟಿ ! ರಾಣಿಗೂ ಮಧುರಾನಾಥನಿಗೂ ಈ ವಿಧವಾದ ಪೂಜೆಯ ಸುದ್ದಿ ಗೊತ್ತಾದರೆ ಅವರೇನು ತಿಳಿದುಕೊಳ್ಳುತ್ತಾರೆ!" ಎಂದ೦ದುಕೊ೦ಡು' ಭಯಪಡು ತಿದ್ದನು. ಯಾವಾಗ ನೋಡಿದರೂ ಪರಮಹಂಸರ ಅರ್ಚನೆಯು ಹೀಗೆ ವಿಲಕ್ಷಣವಾಗಿರಲು ಅದನ್ನು ಮುಚ್ಚು ಮರೆಮಾಡುವುದು ತಾನೇ ಹೇಗೆ ? ಹೃದಯನ ಹಾಗೆಯೇ ಅನೇಕರು ಪೂಜಾಕಾಲದಲ್ಲಿ ದೇವಸ್ಥಾನಕ್ಕೆ ಬಂದು ಈ ವಿಚಿತ್ರವಾದ ಆಚರಣೆಯನ್ನು ನೋಡಿ ದೇವಸ್ಥಾನದ ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳೂ ಬಂದು ನೋಡಿದರು; ಆದರೆ ಆವೇಶಬ೦ದ೦ತಿದ್ದ ಪರಮಹಂಸರನ್ನು ಧಿಕ್ಕ ರಿಸುವುದಕ್ಕೆ ಧೈರ್ಯವಿಲ್ಲದೆ “ ಪೂಜಾರಿಗೆ ಹುಚ್ಚು ಹಿಡಿದಿದೆ, ಇಲ್ಲವೇ ಪಿಶಾಚಿ ಮೆಟ್ಟಿಕೊಂಡಿದೆ; ಹಾಗಲ್ಲದೆ ಪೂಜಾಕಾಲದಲ್ಲಿ ಯಾರೂ ಯಾವಾಗಲೂ ಹೀಗೆ ಶ್ವೇಚ್ಛಾಚಾರಮಾಡಲಾರರು; ಯಜಮಾನ ರಿಗೆ ಈ ವಿಷಯವನ್ನು ತಿಳಿಸಬೇಕು." ಎಂದೆಂದುಕೊಂಡರು. ಮಧುರಾನಾಥನಿಗೆ ಈ ವರ್ತಮಾನವು ಹೋಯಿತು. ಆತನು ತಾನೇ ಶೀಘ್ರದಲ್ಲಿ ದಕ್ಷಿಣೇಶ್ವರಕ್ಕೆ ಬರುವುದಾಗಿಯೂ ಅದುವರೆಗೆ ಅರ್ಚಕನು ತನ್ನ ಮನಸ್ಸಿಗೆ ಬಂದಂತೆ ಪೂಜೆಮಾಡುತ್ತಿರಬೇಕೆಂದೂ ಅದಕ್ಕೆ ಯಾರೂ ಯಾವವಿಧವಾದ ಪ್ರತಿಬಂಧಕ ಮಾಡಕೂಡ ದೆಂದೂ ಹೇಳಿ ಕಳುಹಿಸಿದನು. ಅದರಂತೆ ಕೆಲವು ದಿನಗಳಾದ ಮೇಲೆ ಯಾರಿಗೂ ತಿಳಿಸದೆ ಒಂದುದಿನ ಪೂಜಾಕಾಲಕ್ಕೆ ದೇವ ಸ್ಥಾನಕ್ಕೆ ಬಂದು ಸ್ವಲ್ಪ ಹೊತ್ತು ಪರಮಹಂಸರ ಪೂಜೆಯನ್ನು ದೃಷ್ಟಿಸಿ ನೋಡಿದನು. ಭಾವಾವಿಷ್ಟರಾದ ಪರಮಹಂಸರಿಗೆ ಮಧು ರಾನಾಥನು ಬಂದು ಹತ್ತಿರನಿಂತಿದ್ದು ಗೊತ್ತೇ ಆಗಲಿಲ್ಲ : ಹೀಗೆ ಅನನ್ಯಮನಸ್ಕರಾಗಿ ಮಾಡುತ್ತಿದ್ದ ಪೂಜೆ, ದೇವಿಯಹತ್ತಿರ ಮಗು ವಿನಹಾಗೆ ಹಟಮಾಡುವುದು, ಪೀಡಿಸುವುದು, ಮುಂತಾದನ್ನೆಲ್ಲ ನೋಡಿ ಮಧುರಾನಾಥನು ಅವೆಲ್ಲವೂ ಐಕಾಂತಿಕ ಪ್ರೇಮಭಕ್ತಿ ಯೆಂದು ತಿಳಿದುಕೊಂಡನು. ಹಾಗೆಯೇ ಸ್ವಲ್ಪ ಹೊತ್ತು ನೋಡು ತಿದ್ದು ಕೊನೆಗೆ ಭಕ್ತಿಯಿಂದ ದೇವಿಗೂ ಪರಮಹಂಸರಿಗೂ ದೀರ್ಘ ದಂಡ ನಮಸ್ಕಾರ ಮಾಡಿ ಮನೆಗೆ ಹೋಗಿ ಅಲ್ಲಿಂದ ದೇವಸ್ಥಾನದ ಅಧಿಕಾರಿಗಳಿಗೆ “ ಅರ್ಚಕರು ಹೇಗೆ ಬೇಕಾದರೆ ಹಾಗೆ ಪೂಜೆಮಾಡಲಿ: ಅವರಿಗೆ ಅಡ್ಡಿ ಮಾಡಕೂಡದು,” ಎಂದು ಕಾಗದಬರೆದನು. ರಾಣಿ ರಾಸರಣಿಗೂ ಈ ಸಮಾಚಾರಗಳೆಲ್ಲ ತಿಳಿಯಬಂದುವು.
ರಾಣಿಯು ಆಗ್ಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಆಗ ಪರಮಹಂಸರು ಸುಮಧುರವಾದ ಕಂಠದಿಂದ ಭಕ್ತಿಯುಕ್ತವಾಗಿ ಹಾಡುತ್ತಿದ್ದ ದೇವರ ಕೀರ್ತನೆಗಳನ್ನು ಕೇಳಿ ಬಹಳ ಆನಂದಪಡುತ್ತಿ ದ್ದಳು. ಒಂದುದಿನ ಹೀಗೆ ದೇವಿಯದರ್ಶನಕ್ಕೆ ಹೋಗಿದ್ದವಳು ಪರಮಹಂಸರನ್ನು ಕರೆದು ಒಂದು ಕೀರ್ತನೆಯನ್ನು ಹಾಡಬೇಕೆಂದು ಕೇಳಿಕೊಂಡಳು. ಅವರು ಹಾಡುತ್ತ ಹಾಡುತ್ತ ಭಾವಾವಿಷ್ಠರಾಗಿ "ಇಲ್ಲಿಯೂ ಅದೇಯೋಚನೆಯೆ ?" ಎಂದು ಆಕೆಗೆ ಬಲವಾಗಿ ಒ೦ದು ಪೆಟ್ಟನ್ನು ಕೊಟ್ಟರು, ಅಲ್ಲಿದ್ದವರೆಲ್ಲರೂ ಗಾಬರಿಯಾಗಿ ಕೂಗಾಡಲಾರಂಭಿಸಿದರು. ರಾಣಿಯು ತಾನು ಯಾವುದೋ ಒಂದು ಮೊಖದ್ದಮೆಯ ವಿಚಾರವಾಗಿ ಯೋಚನೆ ಮಾಡುತ್ತಿದ್ದಳು ಆದ್ದರಿಂದ ಸಿಟ್ಟಾಗದೆ ತನ್ನನ್ನು ಅರ್ಚಕರು ಶಿಕ್ಷಿಸಿದ್ದು ನ್ಯಾಯ ವಾಗಿದೆಯೆಂದು ಹೇಳಿ ಅವರೆಲ್ಲರನ್ನೂ ಸಮಾಧಾನವಾಡಿದಳು. ಚರಿತ್ರೆ ಅಂದಿನಿಂದ ಆಕೆಗೆ ತನ್ನ ಹೃದಯವನ್ನೇ ಹೊಕ್ಕು ನೋಡಿದ ಪರಮ ಹಂಸರಲ್ಲಿ ಪ್ರೇಮವೂ ಭಕ್ತಿಯೂ ಇನ್ನೂ ಹೆಚ್ಚಾದುವು. ದೇವಿಯ ದರ್ಶನವಾದ ಮೇಲೆ, ಪರಮಹಂಸರಿಗೆ ತಮ್ಮ ಮನೆ ದೇವರಾದ ರಘುವೀರನ ದರ್ಶನಮಾಡಬೇಕೆಂಬ ಇಚ್ಛೆ ಹುಟ್ಟಿತು. ಹನುಮ೦ತನಲ್ಲಿದ್ದಂಥ ಭಕ್ತಿಯಿಂದ ರಾಮಚಂದ್ರನ ದರ್ಶನಲಾಭವಾಗುವ ಸಂಭವವುಂಟೆಂದು ತೋರಿತು. ಆದ್ದರಿಂದ ತಮ್ಮಲ್ಲಿ ಹನುಮಂತನ ಭಾವಾರೋಪಮಾಡಿಕೊಂಡು ಸಾಧನೆಗೆ ಆರಂಭಿಸಿದರು. ಈ ಕಾಲದಲ್ಲಿ ಅವರು ನಿರಂತರವೂ ಆ೦ಜನೇ ಯನ ಚಿಂತೆ ಮಾಡುತ್ತ ಮಾಡುತ್ತ ತಮ್ಮನ್ನೇ ತಾವು ಮರೆತು ಹೋಗಿದ್ದರು. ಈ ವಿಚಾರವಾಗಿ ಅವರು ಹೇಳುತ್ತಿದದ್ದೇನೆಂದರೆ:- "ಆ ಕಾಲದಲ್ಲಿ ನಾನು ಆಹಾರವಿಹಾರಾದಿಗಳನ್ನೆಲ್ಲಾ ಹನುಮಂತನ ಹಾಗೆಯೇ ಮಾಡುತ್ತಿದೆ. ಮಾಡಬೇಕು ಅಂತ ಹಾಗೆ ಮಾಡುತ್ತಿರ ಲಿಲ್ಲ: ಆದರಷ್ಟಿಗದೇ ಹಾಗಾಗುತ್ತಿತ್ತು. ಹಾರಿ ಹಾರಿಕೊಂಡು ನಡೆಯುತ್ತಿದ್ದೆ. ಹಣ್ಣು ಹಂಪಲುಗಳನ್ನು ಹೊರತು ಮತ್ತೇನನ್ನೂ ತಿನ್ನುತ್ತಿರಲಿಲ್ಲ ; ಅವನ್ನೂ ಶಿಪ್ಪೆ ತೆಗೆದು ತಿನ್ನುವುದಕ್ಕೆ ಕೂಡ ಮನಸ್ಸು ಬರುತ್ತಿರಲಿಲ್ಲ : ಗಿಡದ ಮೇಲೆಯೇ ಬಹಳಕಾಲ ಇದ್ದುಬಿಡುತ್ತಿದ್ದೆ. ಮತ್ತು ಯಾವಾಗಲೂ 'ರಘುವೀರ' ' ರಘುವೀರ' ಎಂದು ಗಂಭೀರ ಸ್ವರದಿಂದ ಕಿರಿಚುತ್ತಿದ್ದೆ". ಇತ್ಯಾದಿ.
ಈ ದಾಸ್ಯ ಭಕ್ತಿ ಸಾಧನಮಾಡುವಾಗ ಅವರಿಗೆ ಮತ್ತೊಂದು ಅಪೂರ್ವವಾದ ಅನುಭವವು ಆಯಿತು. ಅದನ್ನು ಕುರಿತು ಪರಮ ಹಂಸರು ಹೇಳಿರುವುದೇನೆಂದರೆ : * ಒಂದು ದಿನ ಪಂಚವಟಿಯ ಕೆಳಗೆ ಕೂತಿದ್ದೆ. ನಾನೇನು ಆಗ ಧ್ಯಾನಮಾಡುತ್ತಿರಲಿಲ್ಲ, ಸುಮ್ಮನೆ ಕೂತಿದ್ದೆ. ಆಗ ನಿರುಪಮಯ ಜ್ಯೋತಿರ್ಮಯವಾದ ಸ್ತ್ರೀಮೂರ್ತಿ ನನ್ನ ಎದುರಿಗೆ ಪ್ರತ್ಯಕ್ಷಳಾಗಿ ಆ ಸ್ಥಳವನ್ನೆಲ್ಲ ಕಾಂತಿಯಿಂದ ತುಂಬಿ ದಳು. ಮೂರ್ತಿಯು ಮಾನವೀಮೂರ್ತಿ : ಯಾಕೆಂದರೆ ತ್ರಿನ ಯನಮುಂತಾದ ದೇವಿಯ ಲಕ್ಷಣಗಳು ಆ ಮೂರ್ತಿಗೆ ಇರಲಿಲ್ಲ. ಆದರೆ ಪ್ರೇಮ-ದುಃಖ-ಕರುಣಾ-ಸಹಿಷ್ಣುತಾ- ಪೂರ್ಣವಾದ ಆಕೆಯ ಮುಖದಲ್ಲಿದ್ದಂಥ ತೇಜಸ್ವಿತೆಯನ್ನು ಮತ್ತಾವ ದೇವೀಮೂರ್ತಿ ಯಲ್ಲಿಯೂ ನಾನು ನೋಡಿರಲಿಲ್ಲ. ಆಕೆಯು ಪ್ರಸನ್ನ ದೃಷ್ಟಿಯಿಂದ ನನ್ನ ಕಡೆಗೆ ನೋಡುತ್ತಾ ನೋಡುತ್ತಾ ಮೆಲ್ಲಮೆಲ್ಲಗೆ ನನ್ನ ಕಡೆಗೆ ಬಂದಳು. ಸ್ತ೦ಭಿತನಾಗಿ ' ಈಕೆ ಯಾರು ? ' ಎಂದು ಯೋಚಿಸು ತಿದ್ದೆ ಅಷ್ಟು ಹೊತ್ತಿಗೆ ಎಲ್ಲಿಂದಲೋ ಆಂಜನೇಯನು ಬಂದು ಆಕೆಯ ಕಾಲ ಹತ್ತಿರ ಕೂತುಕೊಂಡ. ಆಗ ನನ್ನ ಮನಸ್ಸಿಗೆ ಹಾಗೇ ಹೊಳೆಯಿತು: ಸೀತಾ ! ಜನ್ಮದುಃಖಿನೀ ಸೀತಾ !! ಜನಕ ರಾಜನಂದಿನೀ ಸೀತಾ !! ರಾಮಮಯ ಜೀವಿತಾ ಸೀತಾ !!! ಆಗ ತಾಯಿ, ತಾಯಿ, ಎಂದು ಆಕೆಯ ಕಾಲಮೇಲೆ ಬೀಳುವದಕ್ಕೆ ಹೋಗುತ್ತಿದ್ದೆ. ಅಷ್ಟರಲ್ಲಿ ಆಕೆಯು ಚಕಿತಳಾದವಳ ಹಾಗೆ ಬಂದು (ತಮ್ಮ ಶರೀರವನ್ನು ತೋರಿಸಿ) ಇದರೊಳಗೆ ಪ್ರವೇಶಮಾಡಿದಳು. ಆನಂದದಿಂದಲೂ ವಿಸ್ಮಯದಿಂದಲೂ ಬಾಹ್ಯ ಜ್ಞಾನ ಶೂನ್ಯನಾಗಿ ನೆಲದಮೇಲೆ ಬಿದ್ದುಬಿಟ್ಟೆ".
ಈ ನಾಲ್ಕು ವರ್ಷಗಳಲ್ಲಿಯೇ ಪರಮಹಂಸರು ಇನ್ನೂ ಅನೇಕ ಸಾಧನಗಳನ್ನು ಮಾಡಿದರು. ಮನಸ್ಸಿನಿಂದ ಹಣದಮೇಲಿನ ಆಸಕ್ತಿ ಯನ್ನು ದೂರಮಾಡುವುದಕ್ಕಾಗಿ ಕೆಲವು ಬಂಗಾರದ ನಾಣ್ಯಗಳನ್ನೂ ಅದರ ಜೊತೆಯಲ್ಲಿ ಸ್ವಲ್ಪ ಮಣ್ಣನ್ನೂ ಹಿಡಿದುಕೊಂಡು ಸದಸದ್ವಿಚಾರ ಮಾಡಲಾರಂಭಿಸಿ, ಸಚ್ಚಿದಾನಂದಸ್ವರೂಪವಾದ ನಿತ್ಯವಸ್ತುವನ್ನು ಪಡೆಯುವುದಕ್ಕೆ ಅದರಿಂದ ಯಾವ ಸಹಾಯವೂ ಆಗುವುದಿಲ್ಲವೆಂದು ನಿರ್ಧರಮಾಡಿಕೊಂಡು, ಮನಸ್ಸಿನಲ್ಲಿ ಅದು ದೃಢವಾಗಿಲ್ಲುವಂತೆ 'ಮಣ್ಣೇ ಚಿನ್ನ' 'ಚಿನ್ನವೇ ಮಣ್ಣ' ಎಂದು ಮೇಲಿಂದ ಮೇಲೆ ಹೇಳುತ್ತ ಅವೆರಡನ್ನೂ ಗಂಗೆಯೊಳಗೆ ಹಾಕಿ ಬಿಟ್ಟರು. ಆ ಬ್ರಹ್ಮ ಸ್ತಂಬ ಪರ್ಯ೦ತವಾಗಿರತಕ್ಕ ಸಕಲವಸ್ತು ವ್ಯಕ್ತಿಗಳೂ ಜಗನ್ಮಾ ತೆಯ ಅಂಶವೆಂಬುದನ್ನು ದೃಢಮಾಡಿಕೊಳ್ಳುವುದಕ್ಕಾಗಿ ದೇವಸ್ಥಾನ ದಲ್ಲಿ ಕಂಗಾಳಿಗಳು ಊಟಮಾಡಿ ಬಿಟ್ಟು ಹೋಗಿದ್ದ ಎಂಜಲೆಲೆ ಯಿಂದ ಕೆಲವು ಅಗಳುಗಳನ್ನು ತೆಗೆದುಕೊಂಡು ಅದೂ ದೇವಿಯ ಪ್ರಸಾದವೆಂಬ ಬುದ್ಧಿಯಿಂದ ಸ್ವೀಕರಿಸಿದರು. ಮನಸ್ಸಿನಿಂದ ಅಹಂಕಾರಾಭಿಮಾನಗಳನ್ನು ದೂರಮಾಡುವುದಕ್ಕಾಗಿಯೂ ಮತ್ತು ಹೊಲೆಯ ಮಾದಿಗ ಮುಂತಾದ ಜನಗಳಿಗಿಂತಲೂ ತಾವು ಯಾವ ಅ೦ಶದಲ್ಲಿಯೂ ದೊಡ್ಡವರಲ್ಲವೆಂದು ದೃಢಮಾಡಿಕೊಳ್ಳುವದಕ್ಕಾಗಿಯೂ ಹಲಾಲುಕೋರರು ತೊಳೆಯತಕ್ಕ ಅಶುಚಿಸ್ಥಾನವನ್ನು ಸ್ವಹಸ್ತದಿಂದ ಚೊಕ್ಕಟಮಾಡಿದರು. ಶ್ರೀಗಂಧ, ಅಮೇಧ್ಯ ಎರಡು ಪದಾರ್ಥಗಳೂ ಪಂಚಭೂತ ವಿಕಾರಗಳೆಂದು ನಿರ್ಧರಮಾಡಿ ಕೊಂಡು ನಾಲಗೆಯಿಂದ ಅಮೇಧ್ಯವನ್ನು ಮುಟ್ಟಿದರು. ಇದೇ ಮೊದಲಾದ ನಾವು ಹಿಂದೆ ಎಂದೂ ಕೇಳಿಯೇ ಅರಿಯದ ಅನೇಕ ಸಾಧನೆಗಳನ್ನು ಈ ಕಾಲದಲ್ಲಿ ಮಾಡಿದರು. ದಕ್ಷಿಣೇಶ್ವರಕ್ಕೆ ಬಂದ ಒಬ್ಬ ಸಿದ್ಧ ಪುರುಷನ ಸಹಾಯದಿಂದ ಹಠಯೋಗವನ್ನು ಅಭ್ಯಾಸಮಾಡಿದ್ರೂ ಈ ಕಾಲದಲ್ಲಿಯೇ ಶಿಷ್ಯ ಮಂಡಲಿಯಲ್ಲಿದ್ದ ಕೆಲವರು ಈ ಹಠಯೋಗದಲ್ಲಿ ಉಪದೇಶಮಾಡಿಸಿಕೊಳ್ಳಬೇಕೆಂದು ಪರಮಹಂಸರ ಹತ್ತಿರಕ್ಕೆ ಹೋಗಿದ್ದಾಗ ಅವರಿಗೆ ಹೀಗೆಂದು ಉತ್ತರ ಕೊಡುತ್ತಿದ್ದರು :-(ಆ ಸಾಧನಗಳೆಲ್ಲಾ ಈ ಕಾಲಕ್ಕಲ್ಲವೋ ! ಕಲಿಗಾಲದಲ್ಲಿ ಜೀವಿಗಳು ಅಲ್ಪಾಯುಗಳು ಮತ್ತು ಅನಗತಪ್ರಾಣರು; ಈಗ ಹಠಯೋಗ ಅಭ್ಯಾಸಮಾಡಿ ದೇಹಗಟ್ಟಿ ಮಾಡಿಕೊಂಡು, ರಾಜ ಯೋಗ ಅಭ್ಯಾಸಮಾಡಿ ಈಶ್ವರನನ್ನು ಪ್ರಾರ್ಥಿಸುವುದಕ್ಕೆ ಸಮಯ ಎಲ್ಲಿದೆ ? ಅದೂ ಅಲ್ಲದೆ ಹಠಯೋಗವನ್ನು ಅಭ್ಯಾಸಮಾಡಬೇಕಾದರೆ ಅದರಲ್ಲಿ ಸಿದ್ದನಾದ ಗುರುವಿನ ಜೊತೆಯಲ್ಲಿಯೇ ಮೂರು ಹೊತ್ತೂ ಇದ್ದುಕೊಂಡು ಊಟ ತಿಂಡಿತೀರ್ಥಗಳಲ್ಲೆಲ್ಲಾ ಅವನು ಹೇಳಿದ ಹಾಗೆ ಕೇಳಿಕೊಂಡು ಬಹುಕಾಲ ಕಠೋರ ನಿಯಮದಿಂದಿರಬೇಕು. ನಿಯಮ ಮಾಡುವುದರಲ್ಲಿ ಒಂದಿಷ್ಟು ಹೆಚ್ಚು ಕಮ್ಮಿಯಾಯಿತು ಅಂದರೆ ಏನಾದರೂ ರೋಗಗಳು ತಲೆಹಾಕಿಕೊಳ್ಳುವುವು ; ಅನೇಕ ಸಮಯಗಳಲ್ಲಿ ಇಂಥಸಾಧಕರು ಸತ್ತೇಹೋಗುವರು ಅದಕ್ಕೋಸ್ಕರ ಇದನ್ನೆಲ್ಲಾ ಮಾಡಬೇಡಿ, ಅದೂ ಅಲ್ಲದೆ, ಮನೆ ನಿರೋಧಕೋಸ್ಕರ ತಾನೇ ಪ್ರಾಣಾಯಾಮ, ಕುಂಭಕ ಇವುಗಳನ್ನೆಲ್ಲ ಮಾಡಿ ವಾಯುವನ್ನು ತಡೆದುಕೊಳ್ಳುವದು ? ದೇವರಲ್ಲಿ ಭಕ್ತಿಯಿಂದ ಧ್ಯಾನಮಾಡುತ್ತ ಹೋದರೆ ಮನಸ್ಸು, ವಾಯು ಎರಡೂ ತಮ್ಮಷ್ಟಕ್ಕೆ ತಾವೇ ನಿರುದ್ಧವಾಗುತ್ತವೆ; ನೋಡಿ ಬೇಕಾದರೆ! ಕಲಿಗಾಲದಲ್ಲಿ ಜೀವಿಗಳು ಅಲ್ಪಾಯು ಅಲ್ಪಶಕ್ತಿಗಳೆಂದು ಅಂದು ಕೊಂಡೇ ಭಗವಂತನು ಅವರಮೇಲೆ ಕೃಪೆಮಾಡಿ ಈಶ್ವರಲಾಭದ ಮಾರ್ಗವನ್ನು ಇಷ್ಟು ಸುಲಭವಾಗಿ ಮಾಡಿಕೊಟ್ಟಿದ್ದಾನೆ. ಹೆಂಡತಿ ಮಕ್ಕಳು ಹೋದರೆ ಹೊಟ್ಟೆಯಲ್ಲಿ ಯಾವ ವಿಧವಾದ ವ್ಯಾಕುಲತೆ ಇರುತ್ತದೆಯೋ ದೇವರಿಗೋಸ್ಕರವಾಗಿ ಅದೇ ವಿಧವಾದ ವ್ಯಾಕುಲತೆ-- ಇಪ್ಪತ್ತುನಾಲ್ವೇ ಗಂಟೆಯ ಹೊತ್ತು ಸಾಕು-ಯಾರಲ್ಲಿ ಯಾದರೂ ಸ್ಥಾಯಿಯಾಗಿ ಇದ್ದುಬಿಟ್ಟರೆ ಅಂಥವರಿಗೆ ಅವನು ದರ್ಶನ ಕೊಟ್ಟೇ ಕೊಡುವನು".
ಪರಮಹಂಸರು ಮೇಲೆ ಹೇಳಿದ ಕಠೋರವಾದ ಸಾಧನಗಳಿಂದಲೂ ವ್ಯಾಕುಲತೆಯಿಂದಲೂ ಅನ್ನ ತಿನ್ನದೆ, ನಿದ್ರೆ ಮಾಡದೆ, ಮೈಯಲ್ಲಿ ಉರಿ ಎಂದು ಸಂಕಟಪಡುತ್ತಿರುತ್ತ, ಆಗಾಗ್ಗೆ ಮೂರ್ಛಿತನಂತೆ ಪ್ರಜ್ಞೆ ತಪ್ಪಿ ಬೀಳುತ್ತ, ಬಡವಾಗಿ ಹೋದದ್ದನ್ನು ನೋಡಿ ಹೃದಯನೂ ಮಧುರಾನಾಥನೂ ಇವೆಲ್ಲಾ ಏನೋರೋಗದ ಲಕ್ಷಣಗಳಿರಬಹುದೆಂದು ಯೋಚಿಸಿ ಪ್ರಸಿದ್ಧರಾದ ವೈದ್ಯರನ್ನು ಕರೆತಂದು ಔಷಧಿಯನ್ನು ಕೊಡಿಸಿದರು. ರೋಗವು ಔಷಧಿಯಿಂದ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಈ ವರ್ತಮಾನವು ಕಾಮಾರ ಪುಕುರಕ್ಕೆ ತಲಪಿ ಶ್ರೀಮತಿ ಚಂದ್ರಾದೇವಿಯ ಕಿವಿಗೆ ಬಿತ್ತು. ಆಕೆಯು ಕೂಡಲೆ ಮಗನನ್ನು ತನ್ನ ಹತ್ತಿರಕ್ಕೆ ಕರೆಸಿಕೊಂಡು ಕಂಡು ಕೇಳಿದ ಔಷಧಿಗಳನ್ನೆಲ್ಲಾ ಮಾಡಿದಳು; ಜಪತಪ ಶಾಂತಿಗಳನ್ನೂ ಮಾಡಿಸಿದ್ದಾಯಿತು; ಯಾವುದರಿಂದಲೂ ಏನೂ ಆಗಲಿಲ್ಲ. ಆದರೂ ಪರಮಹಂಸರಲ್ಲಿ ಒಂದೊಂದು ಸಮಯ ಹಿಂದಿನಂತೆ ಎಲ್ಲ ರಲ್ಲಿಯೂ ಸರಳವಾದ ನಡತೆ, ದೇವಭಕ್ತಿ, ಮಾತೃಭಕ್ತಿ ಇವುಗಳು ಕಂಡು ಬರುತ್ತಿದ್ದವು. ಮತ್ತೆ ಕೆಲವು ಕಾಲಗಳಲ್ಲಿ ಎಲ್ಲ ವಿಷಯ ಗಳಲ್ಲಿಯೂ ಔದಾಸೀನ್ಯ, ಯಾರಿಗೂ ಗೊತ್ತಾಗದ ಒಂದು ವಿಷಯಕ್ಕಾಗಿ ವಿಶೇಷ ವ್ಯಾಕುಲತೆ, ಸ್ಮಶಾನಗಳಲ್ಲಿ ಹಗಲು ರಾತ್ರಿಯನ್ನದೆ ಏಕಾಕಿಯಾಗಿ ಹೋಗಿ ಕುಳಿತುಕೊಳ್ಳುವುದು, ಇದ್ದಕ್ಕಿದ್ದಹಾಗೆ. ತಾಯಿ, ತಾಯಿ, ಎಂದು ಅಳುವುದು ಇವು ಕಂಡುಬರುತ್ತಿದ್ದುವು.
ಕ್ರಮಕ್ರಮವಾಗಿ ದೇಹಸ್ಥಿತಿಯು ಮೊದಲಿನಂತೆ ಆಗುತ್ತ ಆದರೆ ಸಾಂಸಾರಿಕ ವಿಚಾರಗಳಲ್ಲಿ ಔದಾಸೀನ್ಯ ಬಾಲ್ಯ ದಲ್ಲಿ ಹೇಗೋ ಈಗ ಯೌವನದಲ್ಲಿಯೂ ಹಾಗೇ ; ಇದನ್ನೆಲ್ಲ ನೋಡಿ ಚ೦ದ್ರಾದೇವಿಯು ಮಗನಿಗೆ ಮದುವೆಮಾಡಿ ಬಿಡುವುದು ಉತ್ತಮವೆಂದು ಸ್ಥಿರಮಾಡಿಕೊಂಡಳು. ಏಕೆಂದರೆ ಮನೆಯಲ್ಲಿ ಹೆಂಡಿರು ಮಕ್ಕಳಿದ್ದರೆ ಅವರ ಸುಖದುಃಖಗಳನ್ನು ನೋಡಿಕೊಳ್ಳ ಬೇಕಾದ ಆವಶ್ಯಕತೆ ಬೀಳುವುದರಿಂದ ಸಂಸಾರದಲ್ಲಿ ಔದಾಸೀನ್ಯವು ತನ್ನಷ್ಟಕ್ಕೆ ತಾನೇ ಹೋಗುವುದೆಂದು ಭಾವಿಸಿದಳು. ಹುಚ್ಚು ಬಿಡುವವರೆಗೂ ಮದುವೆಯಾಗದು, ಮದುವೆಯಾಗುವ ವರೆಗೂ ಹುಚ್ಚು ಬಿಡದು ಎಂಬ ಸಮಚಾರಕ್ಕೆ ಬಂತು. ಮೊದಲೇ ಬಡವರು; ಹುಡುಗನಸ್ಥಿತಿ ನೋಡಿದರೆ ಹೀಗೆ! ಇದನ್ನು ಕಂಡು ಕಂಡು ಹೆಣ್ಣು ಕೊಡುವವರು ಯಾರು? ಎಷ್ಟೆಷ್ಟೋ ಕಡೆ ವಿಚಾರಿಸಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಆ ಮುದುಕಿಯು ಪುನಃ ಕೊರಗಲಾರಂಭಿಸಿದಳು. ಆಗ ಒಂದು ದಿನ ಪರಮಹಂಸರು ಭಾವಾವಿಷ್ಟರಾಗಿ “ ಅಲ್ಲಿ ಇಲ್ಲಿ ಹುಡುಕಿ ಪ್ರಯೋಜನವಿಲ್ಲ; ಜಯರಾಮಬಾಟಿದ ಶ್ರೀರಾಮ ಮುಖ್ಯ ಪಾಧ್ಯಾಯನ ಮನೆಗೆ ಹೋಗಿ ನೋಡಿರಿ; ಮದುವೆಯಾಗುವ ಹುಡುಗಿಯನ್ನು ಮುಡುಪು ಕಟ್ಟಿಟ್ಟಿದ್ದಾರೆ”. ಎಂದು ಹೇಳಿದರು. ಆಗ ಆ ಮಾತನ್ನು ಯಾರೂ ಲಕ್ಷ್ಯ ಮಾಡಲಿಲ್ಲ. ಏನಾದರೂ ಆಗಲಿ ಎದ್ದು ಹೋಗುವ ಮಾತು ಬಿದ್ದು ಹೋಗಲಿ ಎಂದು ವಿಚಾ ರಿಸುವುದಕ್ಕೆ ಹೋದರು. ಹೋಗುವುದೇತಡ, ಅವರು ಕನ್ನೆ, ಯನ್ನು ಕೊಡುವುದಕ್ಕೆ ಒಪ್ಪಿದರು. ಕೆಲವು ದಿನಗಳಲ್ಲಿ ವಿವಾಹವೂ ನೆರವೇರಿತು. (1859.)
ಮದುವೆಯಾದ ಮೇಲೆ ಪರಮಹಂಸರು ಆರೇಳು ತಿಂಗಳ ದಿವಸ ತಮ್ಮ ಊರಲ್ಲೇ ಇದ್ದರು. ಮನೆಯಲ್ಲಿದ್ದ ಬಡತನದ ತಾಪತ್ರಯಗಳನ್ನು ನೋಡಿ ಕಲ್ಕತ್ತೆಗೆ ಹಿಂತಿರುಗಿ ಬಂದು ಪುನಃ ಅರ್ಚಕನ ಕೆಲಸಕ್ಕೆ ನಿಂತರು. ಒಂದು ದಿನ ಸರಿಯಾಗಿ ಪೂಜೆ ಮಾಡಿದರೋ ಇಲ್ಲವೋ ಅವರ ಮನಸ್ಸು ದೇವರ ಪೂಜೆಯಲ್ಲಿ ಪೂರ್ತಿಯಾಗಿ ನಿಂತುಹೋಯಿತು. ತಾಯಿ, ಹೆಂಡತಿ, ಸಂಸಾರ. ಸಂಪಾದನೆ ಎಲ್ಲವೂ ಪೂರ್ತಿಯಾಗಿ ಮರೆತುಹೋದುವು. ಪುನಃ "ಏನುಮಾಡಿದರೆ ಸರ್ವದಾ ದೇವಿಯನ್ನು ನೋಡಿಯೇನು” ಎಂಬ ಯೋಚನೆಯು ಮನಸ್ಸನ್ನೆಲ್ಲ ತುಂಬಿಕೊಂಡಿತು. ಹಿಂದಿನ ಚಿಹ್ನೆಗಳೆಲ್ಲ ಮತ್ತೆ ಕಾಣಿಸಿಕೊಂಡುವು. ಎದೆ ಕೆಂಪಗಾಯಿತು; ಕಣ್ಣಿ ನಿಂದ ನೀರು ಸುರಿಯಲು ಮೊದಲಾಯಿತು ; ನಿದ್ರೆ ಹೋಯಿತು : ಗಾತ್ರ ದಾಹವು ಪ್ರಾರಂಭವಾಯಿತು.