ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಸಾಧನಾ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು


ಐದನೆಯ ಅಧ್ಯಾಯ

ಸಾಧನಾ

ಶ್ರೀ ರಾಮಕೃಷ್ಣ ಪರಮಹಂಸರವರು ಕಲ್ಕತ್ತೆಗೆ ಬಂದು ದಕ್ಷಿ ಹೇಶ್ವರದಲ್ಲಿ ನಿಂತಾಗಿನಿಂದ ಅವರ “ಸಾಧನಕಾಲ” ವಾರಂಭ ನಾಯಿತೆಂದು ಹೇಳಬಹುದು. ಅವರು ಕಾಳೀದೇವಸ್ಥಾನದಲ್ಲಿ ಅರ್ಚಕರ ಕೆಲಸವನ್ನು ವಹಿಸಿದಮೇಲೆ ಹನ್ನೆರಡು ವರ್ಷಕಾಲ ವಿಧ ವಿಧವಾದ ಸಾಧನಗಳನ್ನು ಕೈಕೊಂಡು ಅವುಗಳಲ್ಲಿ ಸಿದ್ದರಾದದ್ದನ್ನು ವಿವರಿಸುವುದಕ್ಕೆ ಮೊದಲು "ಸಾಧನ” ವೆಂದರೇನು ಎಂಬುದನ್ನು ಇಲ್ಲಿ ಸ್ವಲ್ಪ ವಿಚಾರಮಾಡುತ್ತೇವೆ.

“ಸರ್ವ೦ಖಲ್ವಿದಂಬ್ರಹ್ಮ"––ಜಗತ್ತಿನಲ್ಲಿರುವ ಸ್ಥೂಲ, ಸೂಕ್ಷ್ಮ, ಚೇತನ, ಅಚೇತನ, ವಸ್ತುಗಳೆಲ್ಲವೂ ಒ೦ದೇ ಅದ್ವಯಬ್ರಹ್ಮ ವಸ್ತು : ಕಲ್ಲು, ಮಣ್ಣು, ಮನುಷ್ಯ, ಪಶು, ಗಿಡ, ಮರ, ದೇವತೆಗಳು ಈ ಸಮಸ್ತವೂ ಬೇರೆಬೇರೆಯಾಗಿ ಕಂಡರೂ ಅವೆಲ್ಲವೂ ಒಂದೇ ವಸ್ತು ಎಂದು ಶಾಸ್ತ್ರವು ಹೇಳುತ್ತದೆ. ಅದೇ ಮಾತನ್ನೇ ಜ್ಞಾನಿಗಳು "ಅ೦ತಾ ರಾಮಮಯಂ, ಈ ಜಗಮಂತಾ ರಾಮಮಯಂ" ಎಂದು ಹೇಳಿದ್ದಾರೆ. ಆದರೆ ಎಷ್ಟು ಪರೀಕ್ಷಿಸಿ ನೋಡಿದರೂ ಜಗತ್ತಿನಲ್ಲಿ ಬೇರೆಬೇರೆ ಪದಾರ್ಥಗಳು ಕಾಣುವುದೇ ಹೊರತು ನಮಗೆ ದೇವರು ಎಲ್ಲಿಯೂ ಕಂಡುಬರುವುದಿಲ್ಲ. ಹೀಗಾಗಲು ನಮ್ಮಭ್ರಾಂತಿಯೇ ಕಾರಣ; ಭ್ರಾಂತಿಗೆ ಅಜ್ಞಾನವೇ ಕಾರಣ ; ಎಂದಿನವರೆಗೆ ಅಜ್ಞಾನವು ನಾಶವಾಗಿ ಜ್ಞಾನ ಹುಟ್ಟುವುದಿಲ್ಲವೋ ಅ೦ದಿನವರೆಗೂ ಜಗತ್ಸಂಬಂಧವಾದ ನಮ್ಮ ತಿಳಿವಳಿಕೆಯು ಭ್ರಾಂತಿಯುಕ್ತವಾದದ್ದೆಂದು ನಮಗೆ ಗೊತ್ತಾಗುವುದಿಲ್ಲ. ಸ್ವಪ್ನದಲ್ಲಿ ಕಾಣುವುದೆಲ್ಲಾ ಆಗ್ಗೆ ನಿಜವೆಂದೇ ತೋರುತ್ತಿರುತ್ತದೆ. ಅದು ಮಿಥ್ಯೆಯೆಂದು ಗೊತ್ತಾಗಬೇಕಾದರೆ ನಮಗೆ ಎಚ್ಚರವಾಗಿ ಜಾಗೃದವಸ್ಥೆಯೊಡನೆ ಅದನ್ನು ಹೋಲಿಸಿ ನೋಡಬೇಕು. ಅಲ್ಲಿಯವರೆಗೂ ಅದು ನಿಜನಾಗಿಯೇ ಕಾಣುತ್ತಿರುತ್ತದೆ. ಇಂಥ ಭ್ರಾಂತಿಜನಕವಾದ ಅಜ್ಞಾನವು ನಾಶವಾಗಿ ಈಶ್ವರಸಾಕ್ಷಾತ್ಕಾರವಾಗುವಂತೆ ನಾವು ಮಾಡ ಬೇಕಾದ ಪ್ರಯತ್ನಕ್ಕೆ 'ಸಾಧನ' ವೆಂದು ಹೆಸರು. ಈ ಪ್ರಯತ್ನವನ್ನು ಮುಖ್ಯವಾಗಿ ಜ್ಞಾನಮಾರ್ಗ, ಭಕ್ತಿ ಮಾರ್ಗವೆಂದು ಎರಡು ಭಾಗ ಮಾಡಬಹುದು. ಅವುಗಳಲ್ಲಿ ಜ್ಞಾನ ಮಾರ್ಗವು ಬಹುಕಠಿಣ. ಜನ್ಮಜನ್ಮಾಂತರದ ಕುಸಂಸ್ಕಾರಗಳಿಂದ ತುಂಬಿದ ಮನಸ್ಸುಳ್ಳ ಮನುಷ್ಯ ನಾಮಾನ್ಯನಿಗೆ ಈ ಮಾರ್ಗವನ್ನು ಅವಲಂಬನೆಮಾಡುವುದು ಅಸಾಧ್ಯ. ಭಕ್ತಿ ಮಾರ್ಗವು ಅಷ್ಟು ಕ್ಲೇಶಕರವಾದದ್ದಲ್ಲ. ಪ್ರತಿಯೊಬ್ಬನೂ ಅವನವನ ಯೋಗ್ಯತಾನುಸಾರವಾಗಿ ಈ ಮಾರ್ಗವನ್ನು ಅವಲಂಬಿಸಬಹುದು. ಕಲಿಯುಗಕ್ಕೆ ಈ ಮಾರ್ಗವನ್ನೇ ದೇವರು ವಿಧಿಸಿದ್ದಾನೆಂದು ಪರಮಹಂಸರು ಹೇಳುತ್ತಿದ್ದರು. ಈ ಮಾರ್ಗಗಳು ಬೇರೆಬೇರೆ ಎಂದು ಹೇಳಿದರೂ ಕೊನೆಗೆ ಅವೆರಡೂ ಒಂದೇ ಸ್ಥಳದಲ್ಲಿ ಕೂಡುತ್ತವೆ. ಜ್ಞಾನ ಮಾರ್ಗಾವಲಂಬಿಯೂ ಭಕ್ತಿಮಾರ್ಗಾವಲಂಬಿಯೂ ಇಬ್ಬರೂ ಕೊನೆಗೆ ಈಶ್ವರ ಸಾಕ್ಷಾತ್ಕಾರವನ್ನು ಪಡೆಯುತ್ತಾರೆ.

ಲೋಕಹಿತಾರ್ಥವಾಗಿ ಈಶ್ವರನು ಮನುಷ್ಯ ಜನ್ಮವನ್ನು ತಾಳಿ ಆತನೂ ಸಾಧನೆ ಮಾಡಬೇಕಾಗುತ್ತದೆ. (ಅವತಾರ ಪುರುಷರ ಜೀವನ ಚರಿತ್ರೆಗಳಲ್ಲಿ ಸಾಧಕಭಾವಾಲೋಚನೆಯನ್ನು ವಿಸ್ತಾರವಾಗಿ ಮಾಡಿಲ್ಲ. ಆದರೂ ರಾಮಾಯಣ, ಭಾಗವತ ಮುಂತಾದ ಗ್ರಂಥಗಳನ್ನು ವಿಮರ್ಶೆಮಾಡಿ ಓದಿದವರಿಗೆ ರಾಮ, ಕೃಷ್ಣ ಮೊದಲಾದ ಅವತಾರ ಪುರುಷರೂ ಸಾಧನೆ ಮಾಡಿದರೆಂಬುದು ಗೊತ್ತಾಗದೇ ಇರಲಾರದು). ಜ್ಞಾನಸ್ವರೂಪನೂ, ಮಾಯಾತೀತನೂ, ಆದ ಪರಮಾತ್ಮನೂ ಕೂಡ ಆಜ್ಞಾನಮಾಯೆಗಳಿಂದ ಮುಕ್ತನಾಗಲು ಸಾಧನೆ ಮಾಡುತ್ತಾನೆಂಬುದು ವಿಚಿತ್ರವಾಗಿ ಕಾಣ ಬಹುದು. ಆದರೆ ಇದರಲ್ಲಿ ವೈಚಿತ್ಯವೇನೂ ಇಲ್ಲ. ಏಕೆಂದರೆ, ಕರುಣಾಸಾಗರನಾದ ಈಶ್ವರನು ಧರ್ಮಸಂಸ್ಥಾಪನೆಗಾಗಿ ಮನುಷ್ಯ ಜನ್ಮವೆತ್ತುವಾಗ ಮಾನವದೇಹಕ್ಕೂ ಮನಸ್ಸಿಗೂ ಸ್ವಾಭಾವಿಕವಾದ ದೌರ್ಬಲ್ಯವನ್ನು ತಾನಾಗಿಯೇ ಸ್ವೀಕಾರಮಾಡುತ್ತಾನೆ. ಹೀಗೆ. ಮಾನುಷ ಸಾಮಾನ್ಯವಾದ ಅಸಂಪೂರ್ಣತೆಯನ್ನು ಧಾರಣಮಾಡದೆ ಹೋದರೆ ಈಶ್ವರನು ಅವತಾರಮಾಡುವುದೇ ಒಂದು ವಿಧವಲ್ಲಿ ನಿರರ್ಥಕವಾಗುತ್ತದೆ. ಹೇಗೆಂದರೆ, ಮಾನವ ಸುಲಭವಾದ ದೌರ್ಬಲ್ಯವನ್ನು ವಹಿಸಿ, ಸಾಧನಮೂಲಕ ಆ ದೌರ್ಬಲ್ಯವನ್ನು ಧ್ವಂಸಮಾಡಿ “ ಕ್ಷುದ್ರಂ ಹೃದಯ ದೌರ್ಬಲ್ಯಂ ತ್ವಕ್ಕೊತಿಷ್ಟ” ಎಂದು ಜನಗಳಿಗೆ ಬೋಧಿಸಿದರೆ ತಾನೇ ಅವರು ದೌರ್ಬಲ್ಯವನ್ನು ಬಿಡುವುದು ಸಾಧ್ಯವೆಂದು ತಿಳಿದು ಸಾಧನಮಾಡುವರು. ಇಲ್ಲದೇ ಹೋದರೆ “ ಆತನೇನು ಸರ್ವಶಕ್ತ! ದೌರ್ಬಲ್ಯವು ಅವನಿಗೇನಿದೆ! ಆತನು ಏನಾದರೂ ಮಾಡಬಹುದು, ಅದೆಲ್ಲಾ ನಮಗೆ ಸಾಧ್ಯವೇ ?” ಎಂದು ನಿರಾಶರಾಗಿ ಆತನು ಉಪದೇಶಮಾಡಿದ ಸಾಧನ ಪಥದಲ್ಲಿ ಒಂದು ಹೆಜ್ಜೆಯನ್ನೂ ಇಡದೇ ಹೋಗಬಹುದು. ಅವತಾರ ಪುರುಷರು ಸಾಮಾನ್ಯರಂತೆ ಸಾಧನ ಮಾಡುವುದು ಆವಶ್ಯಕವಾದರೂ ಅವರಿಗೂ ಸಾಮಾನ್ಯರಿಗೂ ವಿಶೇಷ ಪ್ರಭೇದವಿದೆ. ಸಾಮಾನ್ಯರು ಪೂರ್ವಜನ್ಮಸಂಸ್ಕಾರದೊಡನೆ ಹುಟ್ಟುವುದರಿಂದ ಸಾಧನ ಮಾಡುವುದರಲ್ಲಿ ಬೆನ್ನಿಗೆ ಬೀಸುವಕಲ್ಲನ್ನು ಕಟ್ಟಿಕೊಂಡು ಈ ಜುವವರಂತೆ ಇರುತ್ತಾರೆ. ಅವತಾರ ಪುರುಷರಿಗೆ ಈ ವಿಧವಾದ ಪೂರ್ವಜನ್ಮ ಸಂಸ್ಕಾರ ರೂಪವಾದ ಹೊರೆಯಿರುವುದಿಲ್ಲ. ಸಾಮಾನ್ಯ ಜನರು ಸ್ವಾರ್ಥಪರರಾಗಿಯೂ ಸ್ವಸುಖಾಭಿಲಾಷಿಗಳಾಗಿಯೂ ಇರುತ್ತಾರೆ. ಹೀಗಿರುವುದರಿಂದ ವಿಷಯಗಳಿಗೆ ದಾಸರಾಗಿರುತ್ತಾರೆ. ಒಂದೊಂದುವೇಳೆ ವಿಷಯ ವಾಸನೆಯನ್ನು ಬಿಡಬೇಕೆಂದು ಅವರಿಗೆ ಮನಸ್ಸಾದರೂ ವಿಷಯ ವಾಸನೆಯು ಅವರನ್ನು ಬಿಡುವುದಿಲ್ಲ. ವಿಷಯ ವಾಸನೆಯನ್ನು ತ್ಯಾಗ ಮಾಡಬೇಕಾದರೆ ಅವರು ಮನಸ್ಸಿ ನೊಡನೆ ಬಹುಕಾಲ ಘೋರಯುದ್ಧ ಮಾಡಬೇಕಾಗುತ್ತದೆ. ಅವತಾರ ಪುರುಷರ ಮಾತೇ ಬೇರೆ. ಸ್ವಸುಖನಿರಭಿಲಾಷೆಯೂ, ಪರಹಿತಾಕಾಂಕ್ಷೆಯೂ, ವೈರಾಗ್ಯವೂ ಅವರ ಹುಟ್ಟುಗುಣಗಳಾಗಿರುತ್ತವೆ. ಆದ್ದರಿಂದ ಸಾಮಾನ್ಯರು ನೂರುಜನ್ಮಗಳಲ್ಲಿ ಮಾಡಿದರೂ ತೀರದಷ್ಟು ಸಾಧನೆಯನ್ನು ಒಂದೇಜನ್ಮದ ಅತ್ಯಲ್ಪ ಕಾಲದಲ್ಲಿ ಅವತಾರ ಪುರುಷರು ಮಾಡಿ ಮುಗಿಸಿ ಬಿಡುತ್ತಾರೆ. ಅವರು ಮಾಡುವ ಸಾಧನೆಯಲ್ಲಿ ಒಂದಂಶವನ್ನು ಮಾಡಿದರೂ ಸಾಮಾನ್ಯರು ಧನ್ಯರಾಗುತ್ತಾರೆ. ಸಾಧನಪಥದಲ್ಲಿ ಒಂದು ಹೆಜ್ಜೆಯನ್ನಾದರೂ ಇಟ್ಟಿರತಕ್ಕ ವಾಚಕರಿಗೆ ಶ್ರೀ ಶ್ರೀರಾಮಕೃಷ್ಣ ಪರಮಹಂಸರ ಸಾಧನಚರಿತ್ರೆಯನ್ನು ಓದಿದ ಮೇಲೆ ಅವರು ಮಹಾಪುರುಷರೆಂಬುದು ಗೊತ್ತಾಗದೆ ಇರದು.