ಕುಮಾರವ್ಯಾಸ ಭಾರತ/ಸಟೀಕಾ (೯.ಶಲ್ಯಪರ್ವ::ಸಂಧಿ-೩)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಶಲ್ಯಪರ್ವ: ೩ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸೂ. ಸವೆದುದಗ್ಗದ ಪಾಂಡುಸುತ ಕೌ
ರವ ಬಲಾಂಬುಧಿ ಧರ್ಮತನುಜನ
ನವಗಡಿಸಿ ಸಮರದಲಿ ಮಡಿದನು ಮಾದ್ರಭೂಪಾಲ ||ಸೂ||

ಪದವಿಭಾಗ-ಅರ್ಥ: ಸವೆದುದು(ಕ್ಷೀಣಿಸಿತು)+ ಅಗ್ಗದ(ಉತ್ತಮ, ದೊಡ್ಡ) ಪಾಂಡುಸುತ ಕೌರವ ಬಲಾಂಬುಧಿ(ಬಲ+ ಅಂಬುಧಿ= ಸೇನಾ ಸಮುದ್ರ), ಧರ್ಮತನುಜನನು+ ಅವಗಡಿಸಿ(ಅಪಮಾನಿಸಿ, ಸೋಲಿಸಿ) ಸಮರದಲಿ ಮಡಿದನು(ಸತ್ತನು) ಮಾದ್ರಭೂಪಾಲ
ಅರ್ಥ:ಪಾಂಡವರ ಮತ್ತು ಕೌರವರ ದೊಡ್ಡ ಸೇನಾ ಸಮುದ್ರ ಈ ಹದಿನೆಂಟು ದಿನಗಳ ಯುದ್ಧದಲ್ಲಿ ನಾಶವಾಗಿ ಕ್ಷೀಣಿಸಿತು. ಧರ್ಮತನುಜನಾದ ಯುಧಿಷ್ಠಿರನನ್ನು ಮಾದ್ರಭೂಪಾಲನಾದ ಶಲ್ಯನು ಯುದ್ಧದಲ್ಲಿ ಬಳಲಿಸಿ ಕೊನೆಗೆ ಅವನಿಂದಲೇ ಯುದ್ದದಲ್ಲಿ ಮಡಿದನು [೧][೨] [೩]

ಶಲ್ಯನ ಸೇನಾಧಿಪತ್ಯ[ಸಂಪಾದಿಸಿ]

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಶಲ್ಯರ ಸಮರಕಿವರನು
ಕೂಲವಾದರಲೈ ಕೃಪಾದಿಗಳಿತ್ತಲಾಚೆಯಲಿ ||
ಮೇಳವಿಸಿತರ್ಜುನ ನಕುಲ ಪಾಂ
ಚಾಲ ಬಲಭೀಮಾದಿಗಳು ಪದ
ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯ ಬಲ || ೧||
ಪದವಿಭಾಗ-ಅರ್ಥ: ಕೇಳು ಧೃತರಾಷ್ಟ್ರ+ ಅವನಿಪ ಭೂಪಾಲ ಶಲ್ಯರ ಸಮರಕೆ+ ಇವರು+ ಅನುಕೂಲವಾದರಲೈ ಕೃಪಾದಿಗಳು+ ಇತ್ತಲು+ ಆಚೆಯಲಿ ಮೇಳವಿಸಿತು+ ಅರ್ಜುನ ನಕುಲ ಪಾಂಚಾಲ ಬಲಭೀಮಾದಿಗಳು ಪದ ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದು+ ಉಭಯ ಬಲ.
ಅರ್ಥ:ಸಂಜಯನು ಹೇಳಿದ,'ಕೇಳು ಧೃತರಾಷ್ಟ್ರ ರಾಜನೇ, ಭೂಪಾಲಧರ್ಮರಾಯ ಮತ್ತು ಶಲ್ಯರ ಯುದ್ಧಕ್ಕೆ ಇವರು-ಕೃಪಾದಿಗಳು ಸಅಹಾಯಮಾಡಿ ಅನುಕೂಲವಾದರಲ್ಲವೇ. ಇತ್ತ ಮತ್ತು ಆಚೆಯಲ್ಲಿ ಅರ್ಜುನ, ನಕುಲ, ಪಾಂಚಾಲರು, ಬಲಭೀಮ ಮೊದಲಾದವರು ಮೇಳವಿಸಿ- ಒಟ್ಟಾಗಿ ನಿಂತರು. ಅವರೆಲ್ಲರ ಪಾದ ಘಟ್ಟನೆಯ ಧೂಳಿನಿಂದ ಜಗತ್ತೇ ಮುಳುಗೆಇತು. ಅವರ ಉಭಯ ಸೇನೆಗಳೂ ಪರಸ್ಪರ ಜೋಡಿಸಿಕೊಂಡು ಹೋರಾಡಿದರು.
ಕೆದರಿದನು ಕಲಿಭೀಮ ಬಲವಂ
ಕದಲಿ ಸಾತ್ಯಕಿ ನಕುಲರೆಡವಂ
ಕದಲಿ ಚೂಣಿಗೆ ಚಿಮ್ಮಿದರು ಪಾಂಚಾಲನಾಯಕರು |
ಮದಮುಖರನಿಕ್ಕಿದನು ಬಾಣೌ
ಘದಲಿ ಫಲುಗುಣನೊಂದು ಕಡೆಯಲಿ
ಸದೆದು ಸವರಿದರೊಂದು ಕಡೆಯಲಿ ದ್ರೌಪದೀಸುತರು || ೨ ||
ಪದವಿಭಾಗ-ಅರ್ಥ: ಕೆದರಿದನು(ಹರಡು, ರೇಗು, ಕನಲು,ಉದ್ರಿಕ್ತವಾಗು) ಕಲಿಭೀಮ ಬಲವಂಕದಲಿ(ಅಂಕ- ರಣಭೂಮಿ) ಸಾತ್ಯಕಿ ನಕುಲರು+ ಎಡವಂಕದಲಿ ಚೂಣಿಗೆ(ಎದುರುಗಡೆ) ಚಿಮ್ಮಿದರು ಪಾಂಚಾಲನಾಯಕರು ಮದಮುಖರನು+ ಇಕ್ಕಿದನು(ಹೊಡೆದನು) ಬಾಣೌಘದಲಿ ಫಲುಗುಣನು+ ಒಂದು ಕಡೆಯಲಿ ಸದೆದು(ಹೊಡೆದು) ಸವರಿದರು+ ಒಂದು ಕಡೆಯಲಿ ದ್ರೌಪದೀ ಸುತರು.
ಅರ್ಥ:ಕಲಿಭೀಮನು ರಣರಂಗದ ಬಲಗಡೆ ಆವೇಶದಿಂದ ಹೋರಾಡಿದನು. ಸಾತ್ಯಕಿ ನಕುಲರು ಮತ್ತು ಪಾಂಚಾಲನಾಯಕರು ಎಡಭಾಗದಲ್ಲಿ ಮುಂದಕ್ಕೆ ನುಗ್ಗಿದರು. ಒಂದು ಕಡೆಯಲ್ಲಿ ಫಲ್ಗುಣನು ಅಹಂಕಾರಿ ಶತ್ರುಗಳನ್ನು ಬಾಣಗಳಿಂದ ಹೊಡೆದನು. ಒಂದು ಕಡೆಯಲಿ ದ್ರೌಪದೀ ಸುತರು ಹೊಡೆದು ಸೇನೆಯನ್ನು ಸವರಿದರು.
ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ‍್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ |
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ || ೩ ||
ಪದವಿಭಾಗ-ಅರ್ಥ:ಕ್ಷಿತಿಪ ಚಿತ್ತೈಸು+ ಈಚೆಯಲಿ ಗುರುಸುತ ಸುಶರ್ಮಕ ಶಲ್ಯ ನಿನ್ನಯ ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ ಘೃತಸಮುದ್ರದ ಸೆರಗ ಸೋಂಕಿದ ಹುತವಹನ(ಬೆಂಕಿ) ಸೊಂಪಿನಲಿ ವೈರಿಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ.
ಅರ್ಥ: ರಾಜನೇ ಕೇಳು, ಈಚೆಯಲ್ಲಿ ಗುರುಸುತ ಅಶ್ವತ್ಥಾಮ, ಸುಶರ್ಮಕ, ಶಲ್ಯ, ನಿನ್ನಯ ಮಗ ಕೌರವ ಕೃತವರ್ಮ, ಕೃಪಾಚಾರ್ಯ ಮೊದಅಲಾದವರು ಶತ್ರು ಸೇನೆಯನ್ನು ಮುತ್ತಿದರು. ತುಪ್ಪದ ಸಮುದ್ರದ ಬದಿಯಲ್ಲಿ ಬೆಂಕಿ ಸೋಕಿದ ಹಾಗೆ ಉತ್ಸಾಹದಿಂದ ವೈರಿಸಮೂಹವನ್ನು ತರುಬಿದರು- ಆಕ್ರಮಿಸಿದರು. ಅವರು ಬಾಣಗಳ ಸಾರದಲ್ಲಿ- ಸಮೂಹದಲ್ಲಿ ಸೇನೆಯನ್ನು ಕಡಿದುಹಾಕಿದರು.
ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ |
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ || ೪ ||
ಪದವಿಭಾಗ-ಅರ್ಥ:ಕೆಣಕಿದಡೆ ಗುರುಸುತನನು+ ಅಡಹಾಯ್ದು+ ಎಣೆದನು+ ಅಂಬಿನಲಿ,+ ಅರ್ಜುನನ ಮಾರ್ಗಣ-ಮಹಾರಣ್ಯದಲಿ ನಡೆದುದು ಕಡಿತ ಗುರುಸುತನ, ರಣವಿಶಾರದ+ ಅರಹಿರಲೇ ನೀವು+ ಅಣಕವು+ ಏತಕೆ, ರಾಜಗುರುಗಳು ಸೆಣಸುವರೆ ಸೈರಿಸಿರೆ ನೀವೆನುತ+ ಎಚ್ಚನಾ ಪಾರ್ಥ.
ಅರ್ಥ:ಅರ್ಜುನನು ಗುರುಸುತ ಅಶ್ವತ್ಥಾಮನನ್ನು ಹೊಡೆದು ಕೆಣಕಿದಾಗ ಅವನು ಇವನಿಗೆ ಅಡಹಾಯ್ದು ಅಂಬಿನಲ್ಲಿ ಹೊಡೆದನು. ಅರ್ಜುನನ ಬಾಣಗಳ ಮಹಾ ಅರಣ್ಯದಲ್ಲಿ ಗುರುಸುತನ ಕಡಿಯುವಿಕೆಯು ನಡೆಯಿತು.(ಅರಣ್ಯದಲ್ಲಿ ಮರಗಳನ್ನು ಕಡಿದು ಕೆಡಗುವಂತೆ ಅರ್ಜುನನ ಬಾಣಗಳನ್ನು ಕಡಿದು ಕೆಡವಿದನು), ಅದಕ್ಕೆ ಅರ್ಜುನನು ಅಶ್ವತ್ಥಾಮನಿಗೆ ನೀವು ರಣವಿಶಾರದರು ಆಗಿರುವಿರಲ್ಲವೇ? ಯುದ್ಧದ ಅಣಕವು ಏತಕ್ಕೆ? ರಾಜಗುರುಗಳು ನಿಜವಾಗಿ ಸೆಣಸುವುದಾದರೆ ನೀವು ಈ ಬಾಣಗಳನ್ನು ಸೈರಿಸಿರಿ ಎನ್ನುತ್ತಾ ಪಾರ್ಥನು ಹೊಡೆದನು.
ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ |
ತಗಡುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದುವು ಗುರುಸುತನಂಬಿನಂಬುಧಿಯ || ೫ ||
ಪದವಿಭಾಗ-ಅರ್ಥ: ಮೊಗೆದವು (ತೆಗೆದುಕೊಂಡವು, ತಡೆದವು)+ ಅಶ್ವತ್ಥಾಮನು+ ಎಚ್ಚ+ ಅಂಬುಗಳನು+ ಅರ್ಜುನನಂಬು, ಪಾರ್ಥನಬಿಗಿದವು+ ಆ ನಿಮಿಷದಲಿ ಭಾರದ್ವಾಜ(ಆಶ್ವತ್ಥಾಮ) ಶರಜಾಲ(ಬಾಣಗಳು) ತಗಡುಗಿಡಿಗಳ(ತಗಡು- ಲೋಹದ ಕಿಡಿಗಳ, ಕಿಡಿಗಳ) ಸೂಸುವ+ ಉರಿಧಾರೆಗಳ ಘೃತಲೇಪನದ ಬಂಧದ ಹೊಗರು ಗಣೆ (ಗಣೆ- ಬಾಣ)ಹೂಳಿದುವು ಗುರುಸುತನ+ ಅಂಬಿನ+ ಅಂಬುಧಿಯ(ಸಮುದ್ರದ)
ಅರ್ಥ: ಗುರುಸುತ ಅಶ್ವತ್ಥಾಮನು ಹೊಡೆದ ಅಂಬುಗಳನ್ನು ಅರ್ಜುನನ ಅಂಬುಗಳು ತಡೆದವು., ಆ ನಿಮಿಷದಲ್ಲಿ ಆಶ್ವತ್ಥಾಮ ಶರಜಾಲ ಪಾರ್ಥನನ್ನು ಬಿಗಿದವು. ಲೋಹ ಕಿಡಿಗಳನ್ನು ಉಗಳುತ್ತಿರುವ ಉರಿಧಾರೆಗಳಗೆ ತುಪ್ಪ ಹಚ್ಚಿದಂತೆ ಬಂಧದ ಲೋಹ ಕಿಡಿಗಳ ಬಾಣಗಳು ಗುರುಸುತನ ಅಂಬಿನ ಸಮುದ್ರವನ್ನು ಮುಚ್ಚಿದವು
ಅರಸು ಕೇಳಡಹಾಯ್ದು ಪಾರ್ಥನ
ವರ ರಥವ ಹಿಂದಿಕ್ಕಿ ಪವನಜ
ನುರವಣಿಸಿದನು ನಕುಲ ಸಾತ್ಯಕಿ ಸಹಿತ ಗುರುಸುತನ |
ಸರಳ ಸರಿವಳೆಗಳ ಸಘಾಡದ
ಲರಿಭಟನು ನನೆದನು ಮಹೋಗ್ರದ
ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ || ೬ ||
ಪದವಿಭಾಗ-ಅರ್ಥ:ಅರಸು ಕೇಳು+ ಅಡಹಾಯ್ದು ಪಾರ್ಥನ+ ವರ ರಥವ ಹಿಂದಿಕ್ಕಿ, ಪವನಜನು(ಭೀಮನು)+ ಉರವಣಿಸಿದನು(ಆಕ್ರಮಿಸಿದನು) ನಕುಲ ಸಾತ್ಯಕಿ ಸಹಿತ ಗುರುಸುತನ ಸರಳ ಸರಿವಳೆಗಳ(ಧಾರಕಾರ ಮಳೆ) ಸಘಾಡದಲಿ(ವೇಗ, ರಭಸ )+ ಅರಿಭಟನು ನನೆದನು ಮಹೋಗ್ರದ ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ(ಸೂಠಿ- ಬಿಡುವು, ಬಿಟ್ಟ ಸೂಠಿ= ತಡಮಾಡದೆ).
ಅರ್ಥ:ಸಂಜಯನು ಹೇಳಿದ,'ಅರಸನೇ ಕೇಳು, ಪಾರ್ಥನನ್ನು ಅಡಹಾಯ್ದು ಅವನ ಉತ್ತಮ ರಥವನ್ನು ಹಿಂದಿಕ್ಕಿ ಭೀಮನು ಆಶ್ವತ್ಥಾಮಾದಿಗಳ ಮುಂದೆ ಹೋದನು. ನಕುಲ ಸಾತ್ಯಕಿ ಸಹಿತ ಅವರನ್ನು ಆಕ್ರಮಿಸಿದನು. ಗುರುಸುತನು ಬಾಣಗಳ ಧಾರಕಾರ ಮಳೆಸುರಿಸಿ ಅರಿಭಟರಾದ ಭೀಮಾದಿಗಳನ್ನುನನೆಸಿದನು; ಈ ಮಹೋಗ್ರವಾದ ಯುದ್ಧವನ್ನು ನೃಪತಿ ಕೌರವನು ಕಂಡನು. ಅವನು ಕಂಡು ರಭಸದಿಂದ ಬಿಟ್ಟ ಸೂಠಿಯಲಿ- ಉಳಿದ ಕಾರ್ಯವನ್ನು ಬಿಟ್ಟು ತಡಮಾಡದೆ ಅಲ್ಲಿಗೆ ಬಂದನು.
ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮ ಗೌತಮರು |
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ || ೭ ||
ಪದವಿಭಾಗ-ಅರ್ಥ: ರಾಯ ಹೊಕ್ಕನು ಭೀಮಸೇನನ ದಾಯ ಬಲುಹೋ ಧರ್ಮಪುತ್ರನ ದಾಯವಲ್ಲಿದು ನೂಕೆನುತ ಕೃತವರ್ಮ ಗೌತಮರು ಸಾಯಕದ ಮಳೆಗರೆದು ಕೌರವರಾಯನನು ಹಿಂದಿಕ್ಕಿ ವೇಢೆಯ( (<ಸಂ. ವೇಷ್ಟ > ಪ್ರಾ. ವೇಢ= ಆಕ್ರ ಮಣ, ಆವರಣ, ಬಂಧನ, ಬಲೆ, ಜಾಲ) ವಾಯುಜನ(ಭೀಮನ) ವಂಗಡವ(ಪಂಗಡ, ಗುಂಪು, ಸಮೂಹ) ಮುರಿದರು ತರಿದರು+ ಅರಿಬಲವ
ಅರ್ಥ: ಕೌರವರಾಯನು ತನ್ನ ವೈರಿಗಳ ಪಡೆಯನ್ನು ಹೊಕ್ಕನು. ಇದು ಭೀಮಸೇನನ ಯುದ್ಧ ಬಲುಹೋ- ಬಲವಾದುದು. ಇದು ಧರ್ಮಪುತ್ರನ ಕಾರ್ಯ- ಯುದ್ಧವಲ್ಲ. ನುಗ್ಗು, ಎನ್ನುತ್ತಾ ಕೃತವರ್ಮ ಗೌತಮರು/ಕೃಪರು ಬಾಣಗಳ ಮಳೆಗರೆದು ಕೌರವರಾಯನನ್ನು ಹಿಂದೆ ಬಿಟ್ಟು ಆಕ್ರಮಣಮಾಡಿ, ಅರಿಬಲವಾದ ಭೀಮನ ಸೇನೆಯನ್ನು ಮುರಿದರು ತರಿದರು.
ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ |
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು || ೮ ||
ಪದವಿಭಾಗ-ಅರ್ಥ:ಪಡಿಬಲಕೆ(ಬೆಂಬಲದ ದೊಡ್ಡಪಡೆ) ಹೊಕ್ಕುದು ತ್ರಿಗರ್ತರ ಗಡಣ(ಗುಂಪು) ಕೃಪ ಕೃತವರ್ಮರಿಗೆ ಸಂಗಡಿಗನು+ ಅಶ್ವತ್ಥಾಮನು+ ಈ ಹೇರಾಳ(ಬಹಳ) ದಳಸಹಿತ ಕೊಡಹಿದರು(ಚದರಿಸು,ಎರಚು,ಈಡಾಡು) ಪಾಂಡವಬಲವನು+ ಅವಗಡಿಸಿದರು(ಭಂಗಿಸು,ಸೋಲಿಸು ವಿರೋಧಿಸು) ಪವಮಾನಜನನು+ ಅಕ್ಕುಡಿಸಿ(ಕುಗ್ಗಿಸಿ) ಬೆಬ್ಬಳೆವೋಯ್ತು(ಬೆದರಿಹೊಯಿತು) ಭೀಮನ ಭಾರಣೆಯ(ಉತ್ತಮ ಮಹಿಮೆ, ಗೌರವ) ಭಟರು.
ಅರ್ಥ: ತ್ರಿಗರ್ತರ ಗುಂಪು ಜೊತೆಗೆ ಕೃಪ ಕೃತವರ್ಮರ, ಅವರ ಸಂಗಡ ಅಶ್ವತ್ಥಾಮನು, ಈ ಹೇರಾಳ ಸೇನೆಸಹಿತ, ಈ ಬೆಂಬಲದ ದೊಡ್ಡಪಡೆ ಪಾಂಡವಬಲವನ್ನು ಹೊಕ್ಕು ಕೊಡಹಿದರು; ಭೀಮನನ್ನು ಕುಗ್ಗಿಸಿ ಭಂಗಿಸಿದರು. ಭೀಮನ ಶ್ರೇಷ್ಠ ಭಟರ ಸೇನೆ ಬೆದರಿಹೊಯಿತು.
ಫಡ ಎನುತ ಪಾಂಚಾಲಬಲ ಸಂ
ಗಡಿಸಿತನಿಲಜನೊಡನೆ ಸೃಂಜಯ
ರೆಡೆಯಲಡಹಾಯಿದರು ಸುತ ಸೋಮಾದಿಗಳು ಸಹಿತ |
ಕಡೆವಿಡಿದು ಕಲಿಪಾರ್ಥನಂಬಿನ
ವಡಬನೆದ್ದುದು ಕುರುಬಲದ ಹೆ
ಗ್ಗಡಲು ಬರತುದು ಹೇಳಲೇನದ ಭೂಪ ಕೇಳೆಂದ || ೯ ||
ಪದವಿಭಾಗ-ಅರ್ಥ: ಫಡ! (ಪೌರುಷದ ಉದ್ಗಾರ) ಎನುತ ಪಾಂಚಾಲಬಲ ಸಂಗಡಿಸಿತು+ ಅನಿಲಜನೊಡನೆ ಸೃಂಜಯರು+ ಎಡೆಯಲಿ+ ಅಡಹಾಯಿದರು, ಸುತ ಸೋಮಾದಿಗಳು ಸಹಿತ ಕಡೆವಿಡಿದು ಕಲಿಪಾರ್ಥನ+ ಅಂಬಿನ ವಡಬನೆದ್ದುದು ಕುರುಬಲದ ಹೆಗ್ಗಡಲು ಬರತುದು ಹೇಳಲೇನು+ ಅದ ಭೂಪ ಕೇಳೆಂದ.
ಅರ್ಥ:ಸಂಜಯನು ರಾಜನಿಗೆ, ಏನು ಹೇಳಲಿ, ಫಡ! ಎಂದು ಪಾಂಚಾಲಸೇನೆ ಭೀಮನ ಜೊತೆಗೂಡಿತು. ಭೀಮನೊಡನೆ ಸೃಂಜಯರು, ಎಹತ್ತಿರವೇ ಅಡ್ಡಹಾದು ಸಹಾಯಕ್ಕೆ ಬಂದರು. ಅವರೊಡನೆ ಸುತ ಸೋಮಾದಿಗಳು ಸಹಿತ ಆಕಡೆ ಶಸ್ತ್ರ ಹಿಡಿದು ನಿಂತರು. ಮತ್ತೆ ಅಲ್ಲಿ ಕಲಿಪಾರ್ಥನ ಬಾಣದ ಬೆಂಕಿಯೂ ಎದ್ದಿತು. ಕುರು ಸೇನೆಯ ದೊಡ್ಡ ಕಡಲು ಬತ್ತಿಹೋಯಿತು. ಅದನ್ನು ಏನು ಹೇಳಲಿ,'ಎಂದ.
ಆ ಸಮಯದಲಿ ಬಹಳ ಶೌರ‍್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ |
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ || ೧೦ ||
ಪದವಿಭಾಗ-ಅರ್ಥ:ಆ ಸಮಯದಲಿ ಬಹಳ ಶೌರ್ಯ+ ಆವೇಶದಲಿ ನಿನ್ನಾತ ನೂಕಿದನು+ ಆ ಶಕುನಿ+ ಯೈ+ ಐವತ್ತು ಸಾವಿರ ತುರಗದಳ ಸಹಿತ ಕೇಸು+ ಉರಿಯ ಕರ್ಬೊಗೆಯವೊಲು ನಿಟ್ಟಾಸಿನ+ ಆಯುಧದ+ ಆನೆಗಳು ಕೈವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ.
ಅರ್ಥ: ಆ ಸಮಯದಲ್ಲಿ ಬಹಳ ಶೌರ್ಯ ಮತ್ತು ಆವೇಶದಲ್ಲಿ ನಿನ್ನಾತ ಕೌರವನು, ಆ ಶಕುನಿಯನ್ನು ಮುಂದೆ ನೂಕಿದನು. ಅವನೊಡನೆ ಐವತ್ತು ಸಾವಿರ ಅಶ್ವದಳ, ಕೆಂಪು ಬೆಂಕಿಯ ಕಪ್ಪು ಹೊಗೆಯಂತಿರುವ ಆನೆಗಳು, ಖಡ್ಗಹಿಡಿದ ಮಾವುತರು ಇದ್ದರು; ಅವರು ಕೌರವನು ಸನ್ನೆ ಮಾಡಿ ಕೈಬೀಸಿದಾಗ ಅಲ್ಲಿಂದ ಮುಂದೆ ವೈರಿಸೇನೆಯನ್ನು ಮೊಗೆದುವು- ನುಗ್ಗಿ ಎತ್ತಿಹಾಕಿದವು.
ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತ ಮೋಹರವ |
ಗುಜರು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ || ೧೧ ||
ಪದವಿಭಾಗ-ಅರ್ಥ: ಗಜದಳದ ಘಾಡಿಕೆಗೆ ವಾಜಿವ್ರಜದ(ವಾಜಿ- ಕುದುರೆ) ವೇಢೆಗೆ(ವೇಢ- ಆಕ್ರ ಮಣ, ಆವರಣ) ಭೀಮನೇ ಗಜಬಜಿಸುವನೆ ಹೊಡೆ-ಸೆಂಡನು+ ಆಡಿದನು+ ಅಹಿತ(ಶತ್ರು) ಮೋಹರವ(ಸೇನೆಯ ) ಗುಜರು(ಸಾಮಾನ್ಯ) ಗುಲ್ಮದ(ಪೊದೆ,) ಕುಂಜರ(ಆನೆ)+ ಅಶ್ವ ವ್ರಜದ(ಸಮೂಹ) ಮೆಳೆಯು+ ಒಣಗಿದುದು, ಪವಮಾನಜ(ಭೀಮ) ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ.
ಅರ್ಥ: ಗಜದಳದ ಆಕ್ರಮಣಕ್ಕೆ, ಕುದುರೆ ದಳದ ಸಮೂಹದ ಆಕ್ರಮಣಕ್ಕೆ ಭೀಮನು ಗಾಬರಿಯಾಗುವನೇ ಗಜಬಜಿಸುವನೆ? ಹೊಡೆಸೆಂಡನ ಆಟದಂತೆ ಅವುಗಳನ್ನು ಹೊಡೆದು ಆಡಿದನು. ಸಾಮಾನ್ಯದ ಗಿಡಗಂಟಿಯ ಪೊದೆಯಂತಿರುವ ಶತ್ರುಗಳ ಸೇನೆಯು ಭೀಮನ ಪರಾಕ್ರಮದ ಬೆಂಕಿಯ ಶಿಖಿಯ ಝಳ ನಿಮಿಷದಲಿ ಝೊಂಪಿಸಿತು(ಹಬ್ಬಿತು?); ಆನೆ, ಅಶ್ವ ಸಮೂಹಗಳು ನಾಶವಾಗಿ ಬಿದಿರು ಮೆಳೆಯು ಬೆಂಕಿಯ ಶಾಖಕ್ಕೆ ಒಣಗಿದಂತೆ ನಿಮಿಷದಲ್ಲಿ ಒಣಗಿದವು.
ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ |
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ || ೧೨ ||
ಪದವಿಭಾಗ-ಅರ್ಥ: ಅಳಿದುದೈ(ಸತ್ತವು) ನೂರು+ ಆನೆ, ಸಾವಿರ ಬಲುಗುದುರೆ, ರಥ ಮೂರು ಸಾವಿರ, ನೆಲಕೆ ಕೈವರ್ತಿಸಿತು(ಕೈಬಿಡು); ಭೀಮನ ಹೊಯ್ಲ ಹೋರಟೆಗೆ ಬಿಲುಹರಿಗೆ ಸಬಳದ ಪದಾತಿಯ ತಲೆಯ ತೊಡಸಿದನು+ ಎಂಟು ಲಕ್ಕವನು+ ಉಳಿದ ಬಲ ವೋಲೈಸುತಿರ್ದುದು(ಓಲೈಸು- ) ಘನ ಪಲಾಯನವ
ಅರ್ಥ:ರಾಜನೇ, 'ಕೌರವನ ಸೇನೆಯ ನೂರು ಆನೆಗಳು, ಸಾವಿರ ಬಲಿಷ್ಠ ಕುದುರೆಗಳು ಸತ್ತವು; ಮೂರು ಸಾವಿರ ರಥ ನೆಲಕೆ ಬಿದ್ದವು; ಭೀಮನ ಹೊದೆತ ಹೋರಾಟಕ್ಕೆ ಬಿಲ್ಲಿನ ಪ್ರಯೋಗಕ್ಕೆ ಎಂಟು ಲಕ್ಸ್ಷ ಸಬಳದ/ಭರ್ಜಿಯ ಪದಾತಿಗಳ ತಲೆಯ ತಗೆದನು. ಉಳಿದ ಬಲ/ಸೇನೆ ಘನ ಪಲಾಯನವ ದಾರಿ ಹಿಡಿಯಿತು- ಓಡಿಹೋಯಿತು,'ಎಂದನು.
ತಡೆದನಶ್ವತ್ಥಾಮ ಭೀಮನ
ಕಡುಹನಾ ಸಹದೇವ ನಕುಲರ
ನಡುಗಿಸಿದನುಡುಗಿಸಿದನಾಟೋಪವನು ಪವನಜನ |
ಇಡಿದುದಂಬರವಂಬಿನಲಿ ಕೈ
ಗಡಿಯನಂಬಿನ ಲಕ್ಷ್ಯಭೇದವ
ನುಡಿಯಬಲ್ಲವನಾರು ಗುರುನಂದನನ ಸಮರದಲಿ || ೧೩ ||
ಪದವಿಭಾಗ-ಅರ್ಥ: ತಡೆದನು+ ಅಶ್ವತ್ಥಾಮ ಭೀಮನ ಕಡುಹನು+ ಆ ಸಹದೇವ ನಕುಲರ ನಡುಗಿಸಿದನು+ ಉಡುಗಿಸಿದನು+ ಆಟೋಪವನು ಪವನಜನ ಇಡಿದುದು(ತುಂಬಿತು)+ ಅಂಬರವು+ ಅಂಬಿನಲಿ ಕೈಗಡಿಯನು+ ಅಂಬಿನ ಲಕ್ಷ್ಯಭೇದವ ನುಡಿಯಬಲ್ಲವನು,+ ಆರು ಗುರುನಂದನನ ಸಮರದಲಿ.
ಅರ್ಥ:ಆಗ ಅಶ್ವತ್ಥಾಮನು ಭೀಮನ ಸಂಹಾರವನ್ನು ತಡೆದನು. ಆ ಸಹದೇವ ನಕುಲರನ್ನು ನಡುಗಿಸಿದನು. ಪವನಜಬೀಮನ ಆಟಾಟೋಪವನ್ನು ಉಡುಗಿಸಿದನು/ಕುಗ್ಗಿಸಿದನು. ಗುರುನಂದನ ಅಶ್ವತ್ಥಾಮನ ಸಮರದಲ್ಲಿ ಆಕಾಶವು ಬಾಣಗಳಿಂದ ತುಂಬಿತು. ಅವನು ಕೈಗಡಿಯದೆ/ಬಿಡುವಿಲ್ಲದೆ ಬಿಡುವ ಬಾಣಗಳ ಲಕ್ಷ್ಯಭೇದವನ್ನು ವಿವರಿಸ ಬಲ್ಲವನು ಯಾವನಿದ್ದಾನೆ.
ಪವನಜನನೆಂಟಂಬಿನಲಿ ಪಾಂ
ಡವಸುತರನೈವತ್ತರಲಿ ಯಾ
ದವನನಿಪ್ಪತ್ತಂಬಿನಲಿ ಮಾದ್ರೀಕುಮಾರಕರ |
ಕವಲುಗೋಲಿಪ್ಪತ್ತರಲಿ ಮುರಿ
ದವಗಡಿಸಿ ಪಾಂಚಾಲ ಸೃಂಜಯ
ನಿವಹವನು ನೂರಂಬಿನಲಿ ಕೆಡೆಯೆಚ್ಚು ಬೊಬ್ಬಿರಿದ || ೧೪ ||
ಪದವಿಭಾಗ-ಅರ್ಥ: ಪವನಜನನು+ ಎಂಟು+ ಅಂಬಿನಲಿ ಪಾಂಡವಸುತರನು+ ಐವತ್ತರಲಿ ಯಾದವನನು+ ಇಪ್ಪತ್ತು+ ಅಂಬಿನಲಿ ಮಾದ್ರೀಕುಮಾರ ಕರಕವಲುಗೋಲ+ ಇಪ್ಪತ್ತರಲಿ ಮುರಿದು+ ಅವಗಡಿಸಿ ಪಾಂಚಾಲ ಸೃಂಜಯ ನಿವಹವನು ನೂರು+ ಅಂಬಿನಲಿ ಕೆಡೆಯೆ+ ಎಚ್ಚು ಬೊಬ್ಬಿರಿದ.
ಅರ್ಥ:ಅಶ್ವತ್ಥಾಮನು, ಪವನಜ ಭೀಮನನ್ನುಎಂಟು+ ಅಂಬುಗಳಲ್ಲಿ, ಪಾಂಡವಸುತರನ್ನು ಐವತ್ತು ಬಾಣಗಳಲ್ಲಿ, ಯಾದವ ಸಾತ್ಯಕಿಯನ್ನು ಇಪ್ಪತ್ತು ಅಂಬಗಳಲ್ಲಿ, ಮಾದ್ರೀಕುಮಾರಾದ ನಕುಲ ಸಹದೇವರನ್ನು ಇಪ್ಪತ್ತು ಕರಕವಲುಬಾಣಗಳಿಂದ ಮುರಿದು ಹಿಮ್ಮಟ್ಟಿಸಿ, ಪಾಂಚಾಲ ಸೃಂಜಯ ಸಮೂಹವನ್ನು ನೂರು ಅಂಬಗಳಲ್ಲಿ ಬೀಳುವ ಹಾಗೆ ಹೊಡೆದು ಬೊಬ್ಬಿರಿದನು.
ಏನ ಹೇಳುವೆ ಗಜಘಟಾಪ್ರತಿ
ಮಾನದಲಿ ಕೋದಂಬುಗಳು ಹಿಂ
ಡಾನೆಗಳನೇಳೆಂಟನೊದೆದೋಡಿದವು ಪಂಚಕವ |
ಭಾನುರಶ್ಮಿಗಳಂಧಕಾರದ
ಮಾನಗರ್ವವ ಮುರಿವವೊಲು ಗುರು
ಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ || ೧೫ ||
ಪದವಿಭಾಗ-ಅರ್ಥ: ಏನ ಹೇಳುವೆ ಗಜಘಟಾ ಪ್ರತಿಮಾನದಲಿ(ಸಮಾನ) ಕೋದ+ ಅಂಬುಗಳು ಹಿಂಡು+ ಆನೆಗಳನು+ ಏಳೆಂಟನೊದೆದು+ ಓಡಿದವು ಪಂಚಕವ ಭಾನುರಶ್ಮಿಗಳ+ ಅಂಧಕಾರದ ಮಾನಗರ್ವವ ಮುರಿವವೊಲು ಗುರುಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ.
ಅರ್ಥ:ಸಂಜಯನು,'ಏನನ್ನು ಹೇಳಲಿ, ಆನೆಗಳ ಸಮೂಹದಲ್ಲಿ ಸಮಾನವಾಗಿ ಕೋದ- ಸಾಲಾಗಿ ಚುಚ್ಚಿದ ಅಂಬುಗಳ ಹೊಡೆತಕ್ಕೆ, ಏಳೆಂಟು ಹಿಂಡು ಆನೆಗಳು ಪಂಚಕದ ಸಿಹಿತಿಂಡಿಯನ್ನು ಒದೆದು ಓಡಿದವು. ಸೂರ್ಯನರಶ್ಮಿಗಳು ಅಂಧಕಾರವನ್ನು ತಡೆದು ಮಾನಗರ್ವವನ್ನು ಮುರಿಯುವಂತೆ, ಗುರುಪುತ್ರನ ಬಾಣಗಳು ಬಲುಮೆಳೆಯ ಹಾಗೆ ಸುರಿದು, ಕರಿಘಟೆಗಳನ್ನು ಸವರಿದವು,' ಎಂದನು.
ತಾಗಿದವು ಕಂದದಲಿ ನಾಳಿಕೆ
ಗಾಗಿ ಹೊರವಂಟಶ್ವನಿಕರವ
ನೀಗಿದವು ಶರವೊಂದು ಸಾವಿರ ರಥಹಯಾವಳಿಯ |
ಬೀಗಿದವು ಕಾಲಾಳ ಕಬಳಿಸಿ
ತೇಗಿದವು ಚತುರಂಗವನು ವಿನಿ
ಯೋಗಿಸಿದವಂತಕನ ಮನೆಗಂಬುಗಳು ಗುರುಸುತನ || ೧೬ ||
ಪದವಿಭಾಗ-ಅರ್ಥ: ತಾಗಿದವು ಕಂದದಲಿ( ಮಾದಕತೆ, ನಶೆ) ನಾಳಿಕೆಗಾಗಿ(ಆದಳಿತ, ಒಂದು ಘಳಿಗೆ), ಹೊರವಂಟ(ಮುಂದೆಬಂದ)+ ಅಶ್ವ-ನಿಕರವ ನೀಗಿದವು ಶರವೊಂದು ಸಾವಿರ ರಥ-ಹಯ+ ಆವಳಿಯ(ಆವಳಿ- ಸಮೂಹ) ಬೀಗಿದವು(ಬೀಗು- ಸುಡು) ಕಾಲಾಳ ಕಬಳಿಸಿ ತೇಗಿದವು ಚತುರಂಗವನು, ವಿನಿಯೋಗಿಸಿದವು+ ಅಂತಕನ ಮನೆಗೆ+ ಅಂಬುಗಳು ಗುರುಸುತನ
ಅರ್ಥ:ಗುರುಸುತ ಅಶ್ವತ್ಥಾಮನ ಬಾಣಗಳು ನಾಳಿನ ಆಳ್ವಿಕೆಗಾಗಿ ಮಾದಕ ಶಕ್ತಿಯಿಂದ ಶತ್ರುಗಳನ್ನು ತಾಗಿದವು, ಮುಂದೆಬಂದ ಅಶ್ವ ಸಮೂಹವನ್ನು ನೀಗಿದವು/ನಾಶಮಾಡಿದವು. ಶರವೊಂದು/ಒಂದೇ ಭಾಣ ಸಾವಿರ ರಥಗಳ, ಹಯ/ಕುದುರೆಗಳ ಸಮೂಹವನ್ನು ನಾಶಮಾಡಿತು; ಕಾಲಾಳುಗಳನ್ನು ಕಬಳಿಸಿ/ನುಂಗಿ ತೇಗಿದವು; ಹೀಗೆ ಚತುರಂಗಸೇನೆಯನ್ನೂ ಅಂತಕನ/ಯಮನ ಮನೆಗೆ ವಿನಿಯೋಗಿಸಿದವು- ಕಳಿಸಿದವು.
ಕಡಿವಡೆದುದಿನ್ನೂರು ಗಜ ಧರೆ
ಗುಡಿದು ಬಿದ್ದುದು ತೇರು ಸಾವಿರ
ವಡಗುದರಿಯಾಯ್ತಶ್ವಚಯ ಸಾವಿರದ ಮೂನೂರು |
ಕಡುಗಲಿಗಳರುವತ್ತು ಸಾವಿರ
ವೊಡಲನಿಕ್ಕಿತು ಪಾಯದಳವು
ಗ್ಗಡದ ಡಾವರ ಡಿಳ್ಳವಾದುದು ವೈರಿಸುಭಟರಿಗೆ || ೧೭ ||
ಪದವಿಭಾಗ-ಅರ್ಥ:ಕಡಿವಡೆದುದು+ ಇನ್ನೂರು ಗಜ, ಧರೆಗೆ+ ಉಡಿದು ಬಿದ್ದುದು ತೇರು ಸಾವಿರವು+ ಅಡಗುದರಿಯಾಯ್ತು(ಅಡಗು- ಮಾಂಸ)+ ಅಶ್ವಚಯ ಸಾವಿರದ ಮೂನೂರು, ಕಡುಗಲಿಗಳು+ ಅರುವತ್ತು ಸಾವಿರ+ ವೊ+ ಒಡಲನಿಕ್ಕಿತು, ಪಾಯದಳವು+ ಅಗ್ಗಡದ(ಬೆಂಗಾಡು- ಮರುಭೂಮಿ) ಡಾವರ( ದುಂಡಾವರ್ತಿ, ಬರಗಾಲ) ಡಿಳ್ಳವಾದುದು(ಶಿಥಿಲತೆ, ಸಡಿಲು ೨ ದಿಗಿಲು,) ವೈರಿಸುಭಟರಿಗೆ.
ಅರ್ಥ: ಇನ್ನೂರು ಆನೆಗಳು ಭೂಮಿಗೆ ಕಡಿದು ಬಿದ್ದವು; ಸಾವಿರ ತೇರು ಮುರಿದು ಬಿದ್ದವು; ಸಾವಿರದ ಮೂನೂರು ಕುದುರೆಗಳ ಸಮೂಹ ಸತ್ತುಬಿದ್ದು ಮಾಂಸವಾದವು; ಅರುವತ್ತು ಸಾವಿರ ಕಡುಗಲಿ ಭಟರು ದೇಹವನ್ನು ನೆಲಕ್ಕೆ ಕೊಟ್ಟರು- ಮಡಿದರು. ಕೌರವನ ಪಾಯದಳವು- ಕಾವಲು ಸೇನೆಯು ಬೆಂಗಾಡಿನ ಬರಗಾಲಕ್ಕೆ ಸಿಕ್ಕಿದಂತೆ ವೈರಿಸುಭಟರಿಗೆ ಸಿಕ್ಕಿ ಕ್ಷೀಣವಾಯಿತು.
ಮತ್ತೆ ಕವಿದುದು ಪಾಂಡುಬಲವರು
ವತ್ತು ಸಾವಿರ ಕುದುರೆ ನೂರಿ
ಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ |
ಸತ್ತಿಗೆಯ ಸಾಲಿನಲಿ ಧರಣಿಯ
ಕಿತ್ತು ಮಗುಚುವ ವಾದ್ಯರಭಸದ
ಲೆತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ || ೧೮ ||
ಪದವಿಭಾಗ-ಅರ್ಥ: ಮತ್ತೆ ಕವಿದುದು ಪಾಂಡುಬಲವು+ ಅರುವತ್ತು ಸಾವಿರ ಕುದುರೆ ನೂರಿಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ ಸತ್ತಿಗೆಯ(ಛತ್ರಿ) ಸಾಲಿನಲಿ ಧರಣಿಯ ಕಿತ್ತು ಮಗುಚುವ ವಾದ್ಯರಭಸದಲಿ+ ಎತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ.
ಅರ್ಥ:ಪಾಂಡವರ ಸೇನೆ ಮತ್ತೆ ಕೌರವನ ಸೇನೆಯನ್ನು ಮತ್ತಿತು. ಪಾಂಡವರ ಬಲವು ಅರುವತ್ತು ಸಾವಿರ ಕುದುರೆ, ನೂರಿಪ್ಪತ್ತು ಗಜಗಳು, ನೂರು ಮೀರಿದ ರಥಗಳು, ಲಕ್ಷ ಪಾಯದಳ/ ಸೇನೆ ಚಾಮರ ಛತ್ರಿಗಳನ್ನು ಹಿಡಿದು ಸಾಲಿನಲ್ಲಿ ಭೂಮಿಯು ಕಿತ್ತು ಮಗುಚುವಂತೆ ವಾದ್ಯರಭಸದ ಸದ್ದು ಮಾಡುತ್ತಾ ಗುರುತನುಜ ಅಶ್ವತ್ಥಾಮನ ರಥದ ಸಮ್ಮುಖಕ್ಕೆ- ಎದುರಿಗೆ ದಂಡೆತ್ತಿ ನುಗ್ಗಿತು.
ಇತ್ತ ಹೇಳಿಕೆಯಾಯ್ತು ಹಯವಿ
ಪ್ಪತ್ತು ಸಾವಿರ ದಂತಿಘಟೆಯೈ
ವತ್ತು ನಾನೂರೇಳು ರಥ ಸಾವಿರದ ನಾನೂರು |
ತೆತ್ತಿಗರು ಕಾಲಾಳು ಲಕ್ಕವು
ಹತ್ತಿತಲ್ಲಿಯ ವಾದ್ಯರವ ಕೀ
ರಿತ್ತು ಕಮಲಭವಾಂಡ ವಿಪುಲ ಕಟಾಹಖರ್ಪರವ || ೧೯ ||
ಪದವಿಭಾಗ-ಅರ್ಥ: ಇತ್ತ(ಕೌರವನ ಕಡೆ) ಹೇಳಿಕೆಯಾಯ್ತು ಹಯವು(ಕುದುರೆ)+ ಇಪ್ಪತ್ತು ಸಾವಿರ, ದಂತಿಘಟೆಯು ಐವತ್ತು, ನಾನೂರ+ ಏಳು ರಥ, ಸಾವಿರದ ನಾನೂರು ತೆತ್ತಿಗರು(ಆಳು, ರಕ್ಷಕ) ಕಾಲಾಳು ಲಕ್ಕವು, ಹತ್ತಿತು+ ಅಲ್ಲಿಯ ವಾದ್ಯರವ, ಕೀರಿತ್ತು(ಕೂಗು, ಅರಚು) ಕಮಲಭವಾಂಡ(ಜಗತ್ತು) ವಿಪುಲ ಕಟಾಹ(ಅರ್ಧಗೋಲ- ನಗಾರಿ) ಖರ್ಪ(ಚಿಪ್ಪು, ಕಪಾಲ)ರವ(ತಮ್ಮಟೆಯ ಸದ್ದು) ಹೇಳಿಕೆಯಾಯ್ತು
ಅರ್ಥ: ಇತ್ತ ಈ ಕಡೆ- ಕೌರವನ ಕಡೆ ಹೇಳುವುದಾದರೆ ಶಲ್ಯ ಮತ್ತು ಅಶ್ವತ್ಥಾನಿಗೆ ಬೆಂಬಲವಾಗಿ ಇಪ್ಪತ್ತು ಸಾವಿರ ಕುದುರೆ, ಆನೆಗಳು ಐವತ್ತು, ನಾನೂರ ಏಳು ರಥ, ಸಾವಿರದ ನಾನೂರು ರಕ್ಷಕ ಪಡೆ, ಲಕ್ಷ ಕಾಲಾಳು ಸೇನೆ ಎದುರಿಸಿದಾಗ ಅಲ್ಲಿಯ ವಾದ್ಯಗಳ ಸದ್ದು ಆರ್ಬಟಿಸಿತು,ಬಹಳಷ್ಟು ನಗಾರಿ), ತಮ್ಮಟೆಯ ಸದ್ದು ಜಗತ್ತುನ್ನು ಕೀರಿತ್ತು- ಆವರಿಸಿತ್ತು.
ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ |
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ || ೨೦ ||
ಪದವಿಭಾಗ-ಅರ್ಥ:ಉರವಣಿಸಿತು(ಪರಾಕ್ರಮ ತೋರಿತು)+ ಇದು(ಈ ಕೌರವಸೇನೆ) ಗುರುಸುತನ(ಅಶ್ವತ್ಥಾಮನ) ಹಿಂದಿರಿಸಿ ಪರಬಲದ+ ಅಭಿಮುಖಕೆ ಮೋಹರಿಸಿ ನಿಂದುದು, ಕಂಡನು+ ಇತ್ತಲು ಶಲ್ಯನು+ ಆ ಬಲವ ಧುರಕೆ(ಯುದ್ಧಕ್ಕೆ) ನಾವಿರೆ ಸೇನೆಯ+ ಉಪಸಂಹಾರಿಸಬಹುದೇ(ಹಿಂದೆ ಸರಿಯಬಹುದೇ/), ದ್ರೋಣ ಭೀಷ್ಮಾದ್ಯರಿಗೆ ನಗೆಗೆ+ ಎಡೆ ನಾವು+ ಅಹೆವೆ(ನಾವು ಇರುವೆವಲ್ಲವೇ) ತೆಗೆ+ ಯೆ+ ಎನುತ ನಡೆತಂದ.
ಅರ್ಥ:ಈ ಕೌರವಸೇನೆ ಗುರುಸುತನಾದ ಅಶ್ವತ್ಥಾಮನನ್ನು ಹಿಂದಕ್ಕೆ ಇರಿಸಿಕೊಂಡು ಪರಬಲವಾದ ಪಾಂಡವ ಸೇನೆಯ ಅಭಿಮುಖಕ್ಕೆ ಒಟ್ಟುಗೂಡಿಕೊಂಡು ಪರಾಕ್ರಮ ತೋರಿ ನಿಂತಿತು, ಇತ್ತ ದೂರದಲ್ಲಿ ಯುದ್ಧಮಾಡುತ್ತಿದ್ದ ಶಲ್ಯನು ಇದನ್ನು ಕಂಡನು. ಆ ಪ್ರಬಲವಾದ ಯುದ್ಧಕ್ಕೆ ನಾವು ಇರುವಾಗ ಸೇನೆಯನ್ನು ಮುಂದೆಬಿಟ್ಟು ಮಹಾರಥನು ಹಿಂದೆಸರುಯಬಹುದೇ? ಈ ಕ್ರಮ ಹಿಂದೆ ಹಿಮ್ಮಟ್ಟದೆ ಯುದ್ಧಮಾಡಿದ (ಸ್ವರ್ಗದಲ್ಲಿರುವ) ದ್ರೋಣ ಭೀಷ್ಮ ಮೊದಲಾದವರ ನಗೆಗೆ ಎಡೆಮಾಡಿ ಕೊಡುವುದು. ನಾವು ಇಲ್ಲಿ ಸೇನಾಧಿಪಿಯಾಗಿ ಇದ್ದೇವೆ, ತೆಗೆ,' ಎನ್ನುತ್ತಾ ಶಲ್ಯನು ಮುಂದೆ ಬಂದನು.

ಶಲ್ಯನ ಪರಾಕ್ರಮ[ಸಂಪಾದಿಸಿ]

ದಳವ ತೆಗೆತೆಗೆ ತಾನಿರಲು ಕುರು
ಬಲಕೆ ಬೀಯವೆ ಕೌರವೇಂದ್ರನ
ಕೆಲಬಲದ ಸುಯಿಧಾನದಲಿ ಕೃಪಗುರುಸುತಾದಿಗಳ |
ನಿಲಲಿ ಶಕುನಿಯ ತುರಗದಳ ಹಿ
ನ್ನೆಲೆಗೆ ಹೋಗಲಿ ರಾಯದಳವೆ
ಮ್ಮಳವ ನೋಡುತ್ತಿರಲಿಯೆಂದನು ಶಲ್ಯ ಕುರುಪತಿಗೆ || ೨೧ ||
ಪದವಿಭಾಗ-ಅರ್ಥ: ದಳವ ತೆಗೆತೆಗೆ ತಾನಿರಲು ಕುರುಬಲಕೆ ಬೀಯವೆ(ಬೀತುಹೋಗುವುದೇ, ದುರ್ಬಲವಾಗುವುದೆ?) ಕೌರವೇಂದ್ರನ ಕೆಲಬಲದ ಸುಯಿಧಾನದಲಿ ಕೃಪಗುರುಸುತಾದಿಗಳ ನಿಲಲಿ ಶಕುನಿಯ ತುರಗದಳ ಹಿನ್ನೆಲೆಗೆ ಹೋಗಲಿ ರಾಯದಳವು+ಎಮ್ಮ+ ಅಳವ(ಅಳವು- ಶಕ್ತಿ) ನೋಡುತ್ತಿರಲಿಯೆಂದನು ಶಲ್ಯ ಕುರುಪತಿಗೆ.
ಅರ್ಥ:ಶಲ್ಯನು ಕುರುಪತಿಗೆ, ಕೌರವ ರಾಜನ ಕಾವಲುದಳವನ್ನು ತೆಗೆ- ತೆಗೆ. ತಾನು ಇರುವಾಗ ಕುರುಸೇನೆ ದುರ್ಬಲವಾಗುವುದೆ? ಆಗದು. ಕೌರವೇಂದ್ರನ ಅಕ್ಕಪಕ್ಕಗಳಲ್ಲಿ ಎಚ್ಚರಿಕೆಯ ಕಾವಲಿಗೆ ಕೃಪ,ಗುರುಸುತ ಅಶ್ಯತ್ಥಾಮ ಮೊದಲಾದವರು ನಿಲ್ಲಲಿ. ಶಕುನಿಯ ಕುದುರೆಯ ದಳ ಹಿನ್ನೆಲೆಗೆ ಹೋಗಲಿ. ಕೌರವರಾಯನ ಪಾಯದಳವು ನಮ್ಮ ಸಾಮರ್ಥ್ಯವನ್ನು ನೋಡುತ್ತಿರಲಿ,'ಎಂದನು .
ಕೇಳು ಕೃಪ ಕೃತವರ್ಮ ಗುರುಸುತ
ಕೇಳು ಶಕುನಿ ಸುಶರ್ಮ ಸಾಲ್ವನೃ
ಪಾಲ ರಾಯನ ಮಂತ್ರಿ ಸಚಿವ ಪಸಾಯ್ತರಾದವರು |
ಕೇಳಿರೈ ಭೀಷ್ಮಾದಿ ಸುಭಟರ
ಕಾಳೆಗವ ಕಂಡಿರಿ ಮದೀಯ ಕ
ರಾಳ ಕದನೋತ್ಸವವ ನೋಡುವುದೆಂದನಾ ಶಲ್ಯ || ೨೨ ||
ಪದವಿಭಾಗ-ಅರ್ಥ: ಕೇಳು ಕೃಪ ಕೃತವರ್ಮ ಗುರುಸುತ(ಅಶ್ಯತ್ಥಾಮ) ಕೇಳು ಶಕುನಿ ಸುಶರ್ಮ ಸಾಲ್ವನೃಪಾಲ ರಾಯನ ಮಂತ್ರಿ ಸಚಿವ ಪಸಾಯ್ತರಾದವರು (ಸಾಮಂತರಾಜರು) ಕೇಳಿರೈ ಭೀಷ್ಮಾದಿ ಸುಭಟರ ಕಾಳೆಗವ ಕಂಡಿರಿ ಮದೀಯ(ನನ್ನ) ಕರಾಳ ಕದನೋತ್ಸವವ(ಉಗ್ರ ಯುದ್ಧದ ಸಂಭ್ರಮವನ್ನು) ನೋಡುವುದು+ ಎಂದನಾ ಶಲ್ಯ.
ಅರ್ಥ:ಶಲ್ಯನು,'ಕೇಳು ಕೃಪ, ಕೃತವರ್ಮ, ಅಶ್ಯತ್ಥಾಮರೇ ಕೇಳಿರಿ, ಕೇಳು, ಶಕುನಿ, ಸುಶರ್ಮ, ಸಾಲ್ವನೃಪಾಲ, ರಾಯನ ಮಂತ್ರಿಗಳು, ಸಚಿವರು, (ಸಾಮಂತರಾಜರು, ಕೇಳಿರಯ್ಯಾ! ಸುಭಟರಾದ ಭೀಷ್ಮಾದಿ ಕಾಳೆಗವನ್ನು ಕಂಡಿರುವಿರಿ. ಈಗ ನನ್ನ ಉಗ್ರ ಯುದ್ಧದ ಸಂಭ್ರಮವನ್ನು ನೀವು ನೋಡುವುದು,' ಎಂದನು.
ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ |
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ || ೨೩ ||
ಪದವಿಭಾಗ-ಅರ್ಥ:ತರಿಸಿ ಕಾಂಚನಮಯ(ಚಿನ್ನಮಯ) ರಥವ ಸಂವರಿಸಿದನು, ಟೆಕ್ಕೆಯವನು(ಬಾವುಟ)+ ಎತ್ತಿಸಿ ಸರಳ(ಭಾಣ) ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ, ಬಿರುದನು+ ಒದರುವ ಪಾಠಕರ ಮೋಹರಕೆ ಮಣಿಕಾಂಚನವ(ರತ್ನ ಮತ್ತು ಹಣ) ಮೊಗೆದು+ ಇತ್ತು+ ಅರರೆ ಕರೆಯೋ ಧರ್ಮಜನನೆಂದು+ ಉಬ್ಬಿದನು ಶಲ್ಯ.
ಅರ್ಥ:ಕೌರವ ಮತ್ತು ಅವನ ಕಡೆಯವರಿಗೆ ನನ್ನ ಯುದ್ಧವನ್ನು ನೋಡುತ್ತಿರಿ ಎಂದು ಶಲ್ಯನು ಹೇಳಲು, ಕೌರವನು ಕಾಂಚನಮಯವಾದ ರಥವ ತರಿಸಿ, ಅದನ್ನು ವಿಶೇಷವಾಗಿ ಸಿದ್ಧಗೊಳಿಸಿದನು. ಬಾವುಟವನ್ನು ಎತ್ತರಕ್ಕೆ ಎತ್ತಿಸಿ ಕಟ್ಟಿಸಿದನು. ಬಾಣಗಳನ್ನು ತುಂಬಿದ ಬಂಡಿಗಳನ್ನು ಅವನ ರಥದ ಎಡಬಲದಲ್ಲಿ ಇರುವಂತೆ ಜೋಡಿಸಿದನು. ಶಲ್ಯನ ಬಿರುದನ್ನು ಕೂಗುವ ಪಾಠಕರ ಸಮೂಹವನ್ನು ರತ್ನಮಣಿ ಮತ್ತು ಹಣವನ್ನು ಬೊಗಸೆಯಲ್ಲಿ ಮೊಗೆದು ಅವರಿಗೆ ಕೊಟ್ಟು ಜೊತೆಗೂಡಿಸಿದನು. ಆಗ ಶಲ್ಯನು,'ಅರರೆ! ಕರೆಯೋ ಧರ್ಮಜನನು,' ಎಂದು ಉಬ್ಬಿ ಕೂಗಿದನು.
ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರು ನಿಲುವೆನವರೊಡನೆ |
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ || ೨೪ ||
ಪದವಿಭಾಗ-ಅರ್ಥ: ರಾಯ(ಧರ್ಮರಾಯ) ನಿಲುವನೊ ಮೇಣು(ಮತ್ತೆ, ಅಥವಾ) ಪಾರ್ಥನೊ, ವಾಯುಸುತನೋ, ನಿಮ್ಮ ಮೂವರೊಳು+ ಆಯುಧವ ಕೊಂಡು(ಹಿಡಿದು)+ ಆರು(ಯಾರು) ಹೊಕ್ಕರು(ಯುದ್ಧಕ್ಕೆ) ನಿಲುವೆನು,+ ಅವರೊಡನೆ ನಾಯಕರು ಮಿಕ್ಕವರೊಡನೆ ಬಿಲುಸಾಯಕವನು(ಸಾಯಕ-ಸಂ ೧ ಬಾಣ,ಶರ, ಕತ್ತಿ, ಖಡ್ಗ, ವ್ಯವಸಾಯ)+ ಒಡ್ಡಿದಡೆ ಕೌರವರಾಯನಾಣೆ+ ಯೆ+ ಎನುತ್ತ ಮದವೇರಿದನು ಕಲಿಶಲ್ಯ.
ಅರ್ಥ:ವೀರನಾದ ಶಲ್ಯನು,'ಧರ್ಮರಾಯನು ಯುದ್ಧಕ್ಕೆ ನಿಲ್ಲುವನೊ, ಅಥವಾ ಪಾರ್ಥನೊ, ವಾಯುಸುತ ಭೀಮನೋ, ನಿಮ್ಮ ಮೂವರಲ್ಲಿ ಆಯುಧವನ್ನು ಹಿಡಿದುಕೊಂಡು ಯಾರು ಯುದ್ಧಕ್ಕೆ ಬರುತ್ತೀರಿ ಬನ್ನಿ, ಅವರನ್ನು ನಾನು ಎದುರಿಸಿ ನಿಲ್ಲುವೆನು; ಅವರೊಡನೆ ಅಲ್ಲದೆ ಮಿಕ್ಕ-ಬೇರೆ ನಾಯಕರೊಡನೆ ಬಿಲ್ಲನ್ನು ಒಡ್ಡಿದರೆ ಕೌರವರಾಯನಾಣೆ,' ಎನುತ್ತ ಮದವೇರಿ ಆರ್ಭಟಿಸಿದನು. (ತಾನು ಕರೆದ ಆ ಮೂವರೊಡನೆ ಮಾತ್ರಾ ಯುದ್ಧ ಮಾಡುವುದು- ಬೇರೆಯವರೊಡನೆ ಮಾಡುವುದಿಲ್ಲ -ಅವರೇ ಬರಲಿ, ಎಂದು ಶಲ್ಯನು ಹೇಳಿದನು.)
ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ |
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ || ೨೫ ||
ಪದವಿಭಾಗ-ಅರ್ಥ:ಬೆರಳ ತುಟಿಗಳ ಬೊಬ್ಬೆ ಮಿಗಲು(ಹೆಚ್ಚಲು)+ ಅಬ್ಬರಿಸಿದವು ನಿಸ್ಸಾಳತತಿ(ಒಂದು ಬಗೆಯ ಚರ್ಮವಾದ್ಯ, ತತಿ- ಸಮೂಹ), ಜರ್ಝರ, ಮೃದಂಗದ ಪಣಹ, ಪಟಹದ ಗೌರು+ಗ+ ಕಹಳೆಗಳ, ಉರು(ಬಹಳ) ರಭಸವು+ ಅಳ್ಳಿರಿಯೆ(ಅಳ್ಳು- ಹೊಟ್ಟೆ) ರಥಚೀತ್ಕರಣೆ ರಥಹಯ ಹೇಷಿತದ ನಿಷ್ಠುರ ನಿನಾದದಲಿ(ಸದ್ದು)+ ಔಕಿ(ನುಗ್ಗು, ವೇಗವಾಗಿ) ಹೊಕ್ಕನು ಶಲ್ಯನು+ ಆಹವವ(ಯುದ್ಧ- ರಣರಂಗ).
ಅರ್ಥ:ಶಲ್ಯನು ಯುದ್ಧಕ್ಕೆ ಹೊಡುವಾಗ, ಭಟರು, ಸೇವಕರು ಬೆರಳನ್ನು ತುಟಿಗಳಲ್ಳಿಟ್ಟು ಸಿಟಿ ಹೊಡೆದು ಬೊಬ್ಬೆ- ಗದ್ದಲ ಎಬ್ಬಿಸಿದರು. ಅದು ಹೆಚ್ಚಾಗುತ್ತಿದ್ದಂತೆ, ರಣವಾದ್ಯಗಳಾದ ನಿಸ್ಸಾಳಗಳಗುಂಪು,, ಜರ್ಝರ, ಮೃದಂಗದ ಪಣಹ- ಬಡಿತ, ಪಟಹದ ಗೌರು- ಕಹಳೆಗಳ- ಊದುವಿಕೆ, ಬಹಳ ರಭಸದ ಸದ್ದು ಹೊಟ್ಟೆ ಬಿರಿಯುವಂತೆ ಅಬ್ಬರಿಸಿದವು. ಅದರೊಡನೆ ರಥಗಳು ಓಡುವ ಚೀತ್ಕರಣೆಯ ಸದ್ದು, ರಥಹಯ/ ಕುದುರೆಗಳ ಹೇಷಾರವ, ಈ ನಿಷ್ಠುರವಾದ/ ಕಥಿಣವಾದ ಸದ್ದಿನಲ್ಲಿ ಶಲ್ಯನು ರಭಸದಿಂದ ಯುದ್ಧಕ್ಕೆ ರಣರಂಗವನ್ನು ಹೊಕ್ಕನು.
ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು |
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತೆ ಕೊಂಡಾಡಿತ್ತು ಕುರುಸೇನೆ || ೨೬ ||
ಪದವಿಭಾಗ-ಅರ್ಥ:ದಳಪತಿಯ ಸುಮ್ಮಾನಮುಖ(ಸಂತೋಷದ- ಗರ್ವದ ಮುಖ) ಬೆಳಬೆಳಗುತದೆ, ಗಂಗಾಕುಮಾರನ(ಭೀಷ್ಮನ) ಕಳಶಜನ(ದ್ರೋಣನ) ರಾಧಾತನೂಜನ(ಕರ್ಣನ) ರಂಗಭೂಮಿಯಿದು ಕಳನನು(ರಣರಂಗದ)+ ಇದನು(ಈ)+ ಆಕ್ರಮಿಸುವಡೆ ವೆಗ್ಗಳೆಯ(ಶ್ರೇಷ್ಠ) ಮಾದ್ರಮಹೀಶನು+ ಅಲ್ಲದೆ ಕೆಲರಿಗೇನು+ ಅಹುದು+ ಎನುತೆ ಕೊಂಡಾಡಿತ್ತು ಕುರುಸೇನೆ.
ಅರ್ಥ: ದಳಪತಿಯಾದ ಶಲ್ಯನ ಸಂತೋಷ ಮತ್ತು ಗರ್ವತುಂಬಿದ ಮುಖ ಬೆಳಬೆಳಗುತದೆ- ಪ್ರಖಾಶಿಸುತ್ತಿದೆ; ಭೀಷ್ಮನ, ದ್ರೋಣನ, ಕರ್ಣನ, ರಂಗಭೂಮಿ ಈ ಕುರುಕ್ಷೇತ್ರವಿದು, ಈ ರಣರಂಗವನ್ನು ಆಕ್ರಮಿಸುವುದಾದರೆ ಶ್ರೇಷ್ಠ ಮಾದ್ರಮಹೀಶನಾದ ಶಲ್ಯನು ಅಲ್ಲದೆ ಬೇರೆಯವರಿಗೇನು ಸಾಧ್ಯ?+ ಎನ್ನುತ್ತಾ ಕುರುಸೇನೆಯು ಶಲ್ಯನನ್ನು ಕೊಂಡಾಡಿತ್ತು.
ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇವ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು || ೨೭ ||
ಪದವಿಭಾಗ-ಅರ್ಥ:ಪೂತು(ಭಲೇ) ಮಝರೇ ಶಲ್ಯ ಹೊಕ್ಕನೆ ಸೂತಜನ(ಕರ್ಣನ) ಹರಿಬದಲಿ (ಕಾರ್ಯ, ಕರ್ತವ್ಯ, ಕಾಳಗ) ವೀರವ್ರಾತ (ವೀರರ ಸಮೂಹ) ಗಣನೆಯೊಳು+ ಈತನು+ ಒಬ್ಬನೆ, ಹಾ ಮಹಾದೇವ ಧಾತುವೊಳ್ಳಿತು ದಿಟ್ಟನೈ ನಿರ್ಭೀತ ಗರ್ವಿತನು+ ಇವನು+ ಎನುತ ಭಟರು+ ಈತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು.
ಅರ್ಥ: ಶಲ್ಯನ ಆರ್ಭಟಕ್ಕೆ ಸೇನೆಯ ವೀರರು 'ಭಲೇ ಮಝರೇ ಶಲ್ಯ! ಇವನು ಕರ್ಣನ ಕಾರ್ಯದಲ್ಲಿ ಹೊಕ್ಕನೆ? ವೀರರ ಸಮೂಹದಲ್ಲಿ ಗಣನೆಮಾಡಿದರೆ ಈತ ಒಬ್ಬನೆ ಕರಣನಿಗೆ ಸಮ., ಹಾ ಮಹಾದೇವ! ಇವನ ಶಕ್ತಿ ಚೆನ್ನಾಗಿದೆ. ಶಲ್ಯನು ದಿಟ್ಟನೈ- ಧೀರನೇಸಿ. ಇವನು ನಿರ್ಭೀತ, ಗರ್ವಿತನು, ಇವನು', ಎನ್ನುತ್ತಾ. ಭಟರು ಮತ್ತು ಸಾತ್ಯಕಿ ಸೋಮಕಾದಿ ವೀರರು ಈತನನ್ನೂ ಹೊಗಳಿದರು.
ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ |
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ || ೨೮ ||
ಪದವಿಭಾಗ-ಅರ್ಥ:ತಡೆದು ನಿಂದನು ಪರಬಲವ ನಿಮ್ಮೊಡೆಯನು ಆವೆಡೆ ಸೇನೆ ಕದನವ ಕೊಡಲಿ ಕೊಂಬವನಲ್ಲ/ಸ್ವೀಕರಿಸುವವನಲ್ಲ ಕೈದುವ ಸೆಳೆಯೆನು+ ಉಳಿದರಿಗೆ ಪೊಡವಿಗೊಡೆಯನು ಕೌರವೇಶ್ವರನೊಡನೆ ಸಲ್ಲದು ಗಡ ಶರಾಸನ ವಿಡಿಯ(ಧನುವ- ಹಿಡಿಯ ಹೇಳು) ಹೇಳು+ ಆ ಧರ್ಮಜನನೆಂದು+ ಉರುಬಿದನು ಶಲ್ಯ
ಅರ್ಥ:ಶಲ್ಯನು ಶತ್ರುಬಲವನ್ನು/ ಸೇನೆಯನ್ನು ತಡೆದು ನಿಂತನು. ಅವನು,'ಪಾಂಡವ ಸೇನೆಗೆ ನಿಮ್ಮ ಒಡೆಯನು ಯಾವಕಡೆ ಇದ್ದಾನೆ? ಸಾಮಾನ್ಯ ಸೇನೆಉ ಕದನವನ್ನು ಕೊಟ್ಟರೆ, ನಾನು ಆಯುದ್ಧವನ್ನು ಸ್ವೀಕರಿಸುವವನಲ್ಲ. ರಾಜನನ್ನು ಬಿಟ್ಟು ಉಳಿದರಿಗೆ ಆಯಧವನ್ನು ಸೆಳೆಯುವುದಿಲ್ಲ. ರಾಜ್ಯದ ದೊರೆ ಕೌರವೇಶ್ವರನೊಡನೆ ನೇರ ಶರಾಸನ/ಯುದ್ಧ ಕೂಡದು ಗಡ! ಸೇನಾಧಿಪತಿ ನಾನು ಇದ್ದೇನೆ. ಆ ಧರ್ಮಜನಿಗೆ ಧನುವನ್ನು ಹಿಡಿದು ಯುದ್ಧಕ್ಕೆ ಬರಲು ಹೇಳು,' ಎಂದು ಆರ್ಭಟಿಸಿದನು.
ಚೆಲ್ಲಿತದು ನಾನಾಮುಖಕೆ ನಿಂ
ದಲ್ಲಿ ನಿಲ್ಲದೆ ಸೃಂಜಯಾದ್ಯರ
ನಲ್ಲಿ ಕಾಣೆನು ಸೋಮಕರ ಪಾಂಚಾಲಮೋಹರವ |
ಕೆಲ್ಲೆಯಲಿ ಭೀಮಾರ್ಜುನರು ಬಲು
ಬಿಲ್ಲನೊದರಿಸೆ ಕದನಚೌಪಟ
ಮಲ್ಲ ತಾನಿದಿರಾಗಿ ನಿಂದನು ಪಾಂಡವರ ರಾಯ || ೨೯ ||
ಪದವಿಭಾಗ-ಅರ್ಥ: ಚೆಲ್ಲಿತು+ ಅದು ನಾನಾಮುಖಕೆ, ನಿಂದಲ್ಲಿ ನಿಲ್ಲದೆ ಸೃಂಜಯ+ ಆದ್ಯರನು+ ಅಲ್ಲಿ ಕಾಣೆನು ಸೋಮಕರ ಪಾಂಚಾಲ ಮೋಹರವ ಕೆಲ್ಲೆಯಲಿ(ಪಕ್ಕದಲ್ಲಿ) ಭೀಮಾರ್ಜುನರು ಬಲುಬಿಲ್ಲನು+ ಒದರಿಸೆ ಕದನಚೌಪಟಮಲ್ಲ ತಾನು+ ಇದಿರಾಗಿ ನಿಂದನು ಪಾಂಡವರ ರಾಯ.
ಅರ್ಥ:ಸಂಜಯ ಹೇಳಿದ,'ಶಲ್ಯನ ಪಂಥ ನಿಂತಲ್ಲಿ ನಿಲ್ಲದೆ ನಾನಾ ಕಡೆಗೆ ಹರಡಿತು. ಅಲ್ಲಿ ಸೃಂಜಯ ಮೊದಲಾದವರನ್ನೂ, ಸೋಮಕರ ಪಾಂಚಾಲರ ಸೇನೆಯನ್ನೂ ಕಾಣಲಿಲ್ಲ. ಪಕ್ಕದಲ್ಲಿ ಭೀಮಾರ್ಜುನರು ತಮ್ಮ ದೊಡ್ಡ ಬಿಲ್ಲನ್ನು ಠೇಂಕಾರ ಮಾಡಲು, ಕದನಚೌಪಟಮಲ್ಲ- ಯುದ್ಧವಿಶಾರದನಾದ ಪಾಂಡವರ ರಾಯನು ತಾನೇ ಶಲ್ಯನಿಗೆ ಇದಿರಾಗಿ ನಿಂತನು .
ಜೀಯ ಬುಧನ ಪುರೂರವನ ಸುತ
ವಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ |
ಜೇಯವೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಂದುದು ವಂದಿಜನಜಲಧಿ || ೩೦ ||
ಪದವಿಭಾಗ-ಅರ್ಥ:ಜೀಯ, ಬುಧನ ಪುರೂರವನ ಸುತವು+ ಆಯುವಿನ, ನಹುಷನ, ಯಯಾತಿಯ ದಾಯಭಾಗದ(ದಾಯಾದಿಗಳ ಭಾಗ) ಭೋಗನಿಧಿಯು+ ಅವತರಿಸಿದೈ ಧರೆಗೆ (ಭೂಮಿಗೆ), ಜೇಯವು ಎನಿಸಿದೆ ಜೂಜಿನಲಿ, ರಣ+ ಅಜೇಯನು/ ರಣ+ ಜೇಯನು(ಗೆಲ್ಲಲ್ಟವನು= ಸೋತವನು ಎನಿಸಿದೆ)+ ಅಹನು(ಆಗುವನು) ಈ ಕೌರವನು ನಿನ್ನ+ ಆಯತಿಯ(ಸಾಮರ್ಥ್ಯ) ಸಂಭಾವಿಸು+ ಎಂದುದು ವಂದಿಜನಜಲಧಿ (ವಂದಮಾಘದರು- ಹೊಗಳುಭಟರು.).
ಅರ್ಥ:ಧರ್ಮಜನು ಯುದ್ಧಕ್ಕೆ ಸನ್ನದ್ಧನಾಗಿ ಬಂದಾಗ, ಹೊಗಳುಭಟರು ಧರ್ಮಜನಿಗೆ,'ಜೀಯ, ನೀನು, ಬುಧನ ಪುರೂರವನ ಸುತನಾದ ಆಯುವಿನ, ನಹುಷನ, ಯಯಾತಿಯ ಈ ಮಹಾವೀರರ ದಾಯಾದಿಯಾಗಿ ಅವರ ವಂಶದಲ್ಲಿ ರಾಜ/ಭೋಗನಿಧಿಯಾಗಿ ಅವತರಿಸಿ ಈ ಭೂಮಿಗೆ ಬಂದವನು.ಜೂಜಿನಲ್ಲಿ ಸೋತವನು ಎನಿಸಿದೆ, ಈಗ ಅಜೇಯನಾದ ಕೌರವನು ನಿನ್ನಿಂದ ಯುದ್ಧದಲ್ಲಿ ಜಯಿಸಲ್ಪಟ್ಟವನು(ಸೋತವನು) ಆಗುವನು ಎಂಬುದನ್ನು ಈ ನಿನ್ನ ಸಾಮರ್ಥ್ಯದಿಂದ ಸಂಭವಿಸುವಂತೆ ಮಾಡು' ಎಂದು ಹೊಗಳಿದರು.
ಹರಿಗೆ ಹೊಡವಂಟಸ್ತ್ರ ಶಿಕ್ಷಾ
ಗುರುವ ಮನದಲಿ ನೆನೆದು ಹೊಸ ಬಿಲು
ದಿರುವನೇರಿಸಿ ಮಿಡಿದು ನಿಜ ಸಾರಥಿಯ ಬೋಳೈಸಿ |
ವರ ರಥವ ನೂಕಿದನು ಪವನಜ
ನರ ನಕುಲ ಸಹದೇವ ಸಾತ್ಯಕಿ
ಬರಲು ಬಲನೆಡವಂಕದಲಿ ನರನಾಥನಿದಿರಾದ || ೩೧ ||
ಪದವಿಭಾಗ-ಅರ್ಥ:ಹರಿಗೆ ಹೊಡವಂಟು,(ಪೊಡಮಟ್ಟು- ನಮಿಸಿ)+ ಅಸ್ತ್ರ ಶಿಕ್ಷಾಗುರುವ(ದ್ರೋಣ) ಮನದಲಿ ನೆನೆದು, ಹೊಸ ಬಿಲು+ದಿ+ತಿರುವನು(ನಾಣು- ಬಿಲ್ಲಿನ ದಾರ)+ ಏರಿಸಿ ಮಿಡಿದು ನಿಜ(ತನ್ನ) ಸಾರಥಿಯ ಬೋಳೈಸಿ(ಸಂತೈಸಿ. ಹೊಗಳಿ), ವರ(ಶ್ರೇಷ್ಠ) ರಥವ ನೂಕಿದನು, ಪವನಜ, ನರ, ನಕುಲ, ಸಹದೇವ, ಸಾತ್ಯಕಿ ಬರಲು ಬಲನ+ ಎಡವಂಕದಲಿ ನರನಾಥನು+ ಇದಿರಾದ.
ಅರ್ಥ:ಧರ್ಮರಾಯನು ಮನಸ್ಸಿನಲ್ಲಿ ಕೃಷ್ಣನಿಗೆ ನಮಿಸಿ, ನಂತರ ಅಸ್ತ್ರ ಶಿಕ್ಷಾಗುರುವಾದ ದ್ರೋಣರನ್ನು ಮನದಲ್ಲಿ ನೆನೆದು, ಬಿಲ್ಲಿಗೆ ಹೊಸ ದಾರ- ನಾಣನ್ನು ಏರಿಸಿ, ಅದನ್ನು ಮಿಡಿದು ಠೇಂಕಾರಮಾಡಿ, ತನ್ನ ಸಾರಥಿಯನ್ನು ಹೊಗಳಿ, ಶ್ರೇಷ್ಠವಾದ ರಥವನ್ನು ಮುಂದೆ ನೂಕಿದನು. ಅವನ ಎಡಬಲದಲ್ಲಿ ಪವನಜ- ಭೀಮ, ಅರ್ಜುನ, ನಕುಲ, ಸಹದೇವ, ಸಾತ್ಯಕಿ ಬರುತ್ತರಲು ನರನಾಥನಾದ ಧರ್ಮಜನು ಶಲ್ಯನಿಗೆ ಎದುರಾದನು.

ಧರ್ಮಜ ಶಲ್ಯರ ಯುದ್ಧ[ಸಂಪಾದಿಸಿ]

ಮಾವನವರೇ ನಿಮ್ಮ ಹಿಂಸೆಗೆ
ನಾವು ಕಡುಗೆವು ಕ್ಷತ್ರಜಾತಿಯ
ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ |
ನೀವು ಸೈರಿಸಬೇಕು ನಮ್ಮ ಶ
ರಾವಳಿಯನೆನುತವನಿಪತಿ ಬಾ
ಣಾವಳಿಯ ಕೆದರಿದನು ಸೇನಾಪತಿಯ ಸಮ್ಮುಖಕೆ || ೩೨ ||
ಪದವಿಭಾಗ-ಅರ್ಥ:,'ಮಾವನವರೇ ನಿಮ್ಮ ಹಿಂಸೆಗೆ ನಾವು ಕಡುಗೆವು(ಕಡುಗು= ಬಯಕೆ, ಬಯಸೆವು) ಕ್ಷತ್ರಜಾತಿಯ ಜೀವನವಲೇ ಕಷ್ಟವು+ ಇದು ಕಾರ್ಪಣ್ಯತರವಾಗಿ(ಸಂಕೋಚ, ಮನಸ್ಸನ್ನು ಚಿಕ್ಕದು ಮಾಡಿಕೊಳ್ಳದೆ) ನೀವು ಸೈರಿಸಬೇಕು ನಮ್ಮ ಶರಾವಳಿಯನು+ ಎನುತ+ ಅವನಿಪತಿ ಬಾಣಾ++ ಆವಳಿಯ(ಸಮೂಹ) ಕೆದರಿದನು ಸೇನಾಪತಿಯ ಸಮ್ಮುಖಕೆ.
ಅರ್ಥ: ಧರ್ಮಜನು ಶಲ್ಯನನ್ನು ಕುರಿತು,'ಮಾವನವರೇ ನಿಮ್ಮನ್ನು ಹಿಂಸೆಮಾಡಲು ನಾವು ಬಯಸುವುದಿಲ್ಲ. ಆದರೆ ನಮ್ಮ ಕ್ಷತ್ರಜಾತಿಯ ಜೀವನವ ಧರ್ಮವಲ್ಲವೇ; ನಿಮ್ಮನ್ನು ಹೊಡೆಯುವುದು ನಮಗೆ ಕಷ್ಟ. ಕಾರ್ಪಣ್ಯತರವಾಗಿ ಬೇಸರ ಮಾಡಿಕೊಳ್ಳದೆ ನೀವು ನಮ್ಮ ಶರಗಳ ಸಮೂಹದ ಹೊಡೆತವನ್ನು ಸೈರಿಸಬೇಕು,' ಎನ್ನುತ್ತಾ ರಾಜ ಧರ್ಮಜನು ಬಾಣಗಳನ್ನು ಸೇನಾಪತಿ ಶಲ್ಯನ ಸಮ್ಮುಖಕ್ಕೆ ಚದುರಿಸಿ ಹಾಕಿದನು.
ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಶಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ |
ಜನಪ ಧರ್ಮದ ಹಿಂಸೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ್ವದ ಗಾಢವೈಸೆನುತೆಚ್ಚನಾ ಶಲ್ಯ || ೩೩ ||
ಪದವಿಭಾಗ-ಅರ್ಥ:ನಿನಗೆ ಮಾತುಳರು+ ಆವು(ನಾವು- ದೊಡ್ಡವರು ತಮಗೆ ಬಹುವಚನ ಉಪಯೋಗಿಸಿ ಕೊಳ್ಳುವರು.) ಮಾಣಲಿ(ಹೋಗಲಿ ಬೇಡ) ಮುನಿಯೆ(ನೀನು ಸಿಟ್ಟಾದರೆ)+ ಎಮಗೆ ಮೊರೆಯಲ್ಲ(ದೊರೆ= ಸಮಾನ), ದುಶ್ಶಾಸನ ಜಯದ್ರಥರು+ ಅಲ್ಲಲಾ ಸಂಬಂಧಿಗಳು, ನಿನಗೆ ಜನಪ(ರಾಜ) ಧರ್ಮದ ಹಿಂಸೆ ಬಂದುದು ನಿನಗೆ, ಸಾಕು+ ಅದನು+ ಆಡಲೇತಕೆ ಮನದ ಗರ್ವದ ಗಾಢವು+ ಐಸೆ(ಇದೆ ನಿಜ)+ ಎನುತ+ ಎಚ್ಚನು+ ಆ ಶಲ್ಯ.
ಅರ್ಥ:ಅದಕ್ಕೆ ಶಲ್ಯನು ಧರ್ಮಜನನ್ನು ಕುರಿತು,'ನಿನಗೆ ನಾವು ಸೋದರಮಾವಂದಿರು. ಅದು ಹೋಗಲಿ ಬೇಡ, ನೀನು ಸಿಟ್ಟಿನಿಂದ ಯುದ್ಧ ಮಾಡುವುದಾದರೆ ನೀನು ನಮಗೆ ಸರಸಾಟಿಯಲ್ಲ. ನಿನಗೆ ದುಶ್ಶಾಸನ, ಜಯದ್ರಥರು ಸಂಬಂಧಿಗಳಾಗಿರಲಿಲ್ಲವೇ? ಅವರನ್ನು ಕೊಂದೆಯಲ್ಲಾ. ರಾಜನೇ ನಿನಗೆ ಧರ್ಮದಂತೆ, ಹಿಂಸೆಯ ದೋಷ ಬಂದಿರುವುದು. ಸಾಕು ಅದನ್ನು ಸುಮ್ಮನೆ ಮಾತಾಡುವುದು ಏತಕ್ಕೆ? ನಿನ್ನ ಮನದಲ್ಲಿ ಗರ್ವದ ಗಾಢವು, ದಟ್ಟವಾಗಿ ತುಂಬಿದೆ ಎನ್ನುತ್ತಾ ಆ ಶಲ್ಯನು ಧರ್ಮಜನಿಗೆ ಬಾಣಗಳಿಂದ ಹೊಡೆದನು.
ಅರಸ ಕೇಳ್ ಶಲ್ಯನ ಯುಧಿಷ್ಠಿರ
ಧರಣಿಪನ ಸಂಗ್ರಾಮವಂದಿನ
ಸುರನದೀನಂದನನ ದ್ರೋಣನ ಸೂತಸಂಭವನ |
ನರನ ಭೂರಿಶ್ರವನ ಭೀಮನ
ಕುರುಪತಿಯ ವೃಷಸೇನ ಸೌಭ
ದ್ರರ ಸಮಗ್ರಾಹವವ ಮರಸಿತು ಹೇಳಲೇನೆಂದ || ೩೪ ||
ಪದವಿಭಾಗ-ಅರ್ಥ: ಅರಸ ಕೇಳ್ ಶಲ್ಯನ ಯುಧಿಷ್ಠಿರಧರಣಿಪನ ಸಂಗ್ರಾಮವು+ ಅಂದಿನ ಸುರನದೀನಂದನನ(ಭೀಷ್ಮನ) ದ್ರೋಣನ ಸೂತಸಂಭವನನ(ಕರ್ಣನ)+ ಅರನ ಭೂರಿಶ್ರವನ, ಭೀಮನ, ಕುರುಪತಿಯ ವೃಷಸೇನ, ಸೌಭದ್ರರ, ಸಮಗ್ರ+ ಆಹವವ(ಈ ಎಲ್ಲಾ ಯುದ್ಧಗಳ) ಮರಸಿತು ಹೇಳಲಿ+ ಏನ+ ಎಂದ
ಅರ್ಥ: ಧೃತರಾಷ್ಟ್ರ ಅರಸನೇ ಕೇಳು, ಶಲ್ಯನ ಮತ್ತು ಯುಧಿಷ್ಠಿರ ಅರಸನ ಯುದ್ಧವು ಅಂದಿನ- ಹಿಂದೆ ಆದ ಭೀಷ್ಮನ, ದ್ರೋಣನ, ಕರ್ಣನ, ಅರನ ಭೂರಿಶ್ರವನ, ಭೀಮನ ಮತ್ತು ಕುರುಪತಿ ಕೌರವನ ವೃಷಸೇನ ಮತ್ತು ಸುಭದ್ರೆಯ ಮಗ ಅಭಿಮನ್ಯವಿನ, ಸಮಗ್ರ- ಈ ಎಲ್ಲಾ ಯುದ್ಧಗಳನ್ನೂ ಮರಸಿತು. (ಆ ಎಲ್ಲಾ ಯುದ್ಧಕ್ಕಿಂತ ಮಿಗಲಾಗಿತ್ತು.) ಏನನ್ನು ಹೇಳಲಿ ಎಂದನು, ಸಂಜಯ.
ದಿಟ್ಟನೈ ಭೂಪತಿಗಳಲಿ ಜಗ
ಜಟ್ಟಿಯೈ ನಿನಗಸ್ತ್ರವಿದ್ಯವ
ಕೊಟ್ಟವನ ನಾ ಬಲ್ಲೆನದನಿನ್ನಾಡಿ ಫಲವೇನು |
ತೊಟ್ಟ ಜೋಹದ ವಾಸಿಯೆಂಬುದ
ಬಿಟ್ಟು ನಮಗೊಡ್ಡುವುದು ನಿನ್ನೊಡ
ವುಟ್ಟಿದರನಿಬ್ಬರನೆನುತ ತೆಗೆದೆಚ್ಚನಾ ಶಲ್ಯ || ೩೫ ||
ಪದವಿಭಾಗ-ಅರ್ಥ: ದಿಟ್ಟನೈ ಭೂಪತಿಗಳಲಿ ಜಗಜಟ್ಟಿಯೈ ನಿನಗೆ+ ಅಸ್ತ್ರವಿದ್ಯವ ಕೊಟ್ಟವನ ನಾ ಬಲ್ಲೆನು+ ಅದನು+ ಇನ್ನು+ ಆಡಿ ಫಲವೇನು ತೊಟ್ಟ ಜೋಹದ (ಮೋಸದ ವೇಷ, ಸೋಗು, ಬಿನ್ನಹ, ವಿಜ್ಞಾಪನೆ) ವಾಸಿಯೆಂಬುದ (ಶಿಷ್ಯ) ಬಿಟ್ಟು ನಮಗೆ+ ಒಡ್ಡುವುದು ನಿನ್ನ+ ಒಡವುಟ್ಟಿದರನು+ ಇಬ್ಬರನು+ ಎನುತ ತೆಗೆದೆಚ್ಚನು+ ಆ ಶಲ್ಯ
ಅರ್ಥ:ಶಲ್ಯನು ಧರ್ಮಜನನ್ನು ಕುರಿತು,'ನೀನು ದಿಟ್ಟನೇಸರಿ- ಧೈರ್ಯಶಾಲಿ, ರಾಜರುಗಳಲ್ಲಿ ಜಗಜಟ್ಟಿಯೇ ಅಹುದು; ನಿನಗೆ ಅಸ್ತ್ರವಿದ್ಯವನ್ನು ಕಲಿಸಿ ಕೊಟ್ಟವನನ್ನು ನಾನು ಬಲ್ಲೆನು. ಅದನ್ನು ಇನ್ನು ಹೇಳಿ ಫಲವೇನು? ನೀನು ದ್ರೋಣನ ಶಿಷ್ಯ ಎಂಬ ಸೊಕ್ಕು- ಸೋಗನ್ನು ಬಿಟ್ಟು ನಮಗೆ ನಿನ್ನ ಒಡಹುಟ್ಟಿದ ಭೀಮ ಅರ್ಜುನ ಈ ಇಬ್ಬರನ್ನು ಎದುರಿಗೆ ತಂದು ಒಡ್ಡುವುದು, ನಿನ್ನಿಂದ ನನ್ನನ್ನು ಎದುರಿಸಲು ಆಗದು,' ಎನ್ನುತ್ತಾ ತೆಗೆದು ಬಾಣದಿಂದ ಧರ್ಮಜನನ್ನು ಹೊಡೆದನು.
ಮಾವ ಭೀಮಾರ್ಜುನರ ಭಾರಣೆ
ಗಾವ ನಿಲುವನು ಸಾಕದಂತಿರ
ಲೀ ವಿಚಿತ್ರ ಕಳಂಬ ಖಂಡನ ಪಂಡಿತತ್ವವನು |
ನೀವು ತೋರಿರೆ ಸಾಕು ಸಾಮ
ರ್ಥ್ಯಾವಲಂಬನವುಳ್ಳಡೀ ಶ
ಸ್ತ್ರಾವಳಿಯ ಸೈರಿಸಿಯೆನುತ ಯಮಸೂನು ತೆಗೆದೆಚ್ಚ || ೩೬ ||
ಪದವಿಭಾಗ-ಅರ್ಥ: ಮಾವ ಭೀಮಾರ್ಜುನರ ಭಾರಣೆಗೆ+ ಆವ(ಗೌರವ, ಮಹಿಮೆಗೆ ಯಾವನು) ನಿಲುವನು ಸಾಕು+ ಅದಂತಿರಲ+ ಈ ವಿಚಿತ್ರ ಕಳಂಬ(ಬಾಣ) ಖಂಡನ ಪಂಡಿತತ್ವವನು ನೀವು ತೋರಿರೆ ಸಾಕು ಸಾಮರ್ಥ್ಯ+ ಅವಲಂಬನವುಳ್ಳಡೆ+ ಈ ಶಸ್ತ್ರ+ ಆವಳಿಯ ಸೈರಿಸಿ+ಯೆ+ ಎನುತ ಯಮಸೂನು ತೆಗೆದೆಉ+ ಎಚ್ಚ.
ಅರ್ಥ:ಧರ್ಮಜನು,'ಮಾವ ಭೀಮಾರ್ಜುನರ ಮಹಿಮೆ- ಪರಾಕ್ರಮಕ್ಕೆ ಯಾವನು ನಿಲ್ಲುವನು, ನಿಮಗೆ ಅವರನ್ನು ಎದುರಿಸಲು ಆಗದು. ಸಾಕು ಅದು ಹಾಗಿರಲಿ; ಈ ವಿಚಿತ್ರ ಬಾಣವನ್ನು ಖಂಡಿಸಿ ಪಂಡಿತತ್ವವನ್ನು ನೀವು ತೋರಿಸಿರೆ, ಸಾಕು. ನಿಮಗೆ ಸಾಮರ್ಥ್ಯ ಅವಲಂಬನವಿದ್ದರೆ ಈ ಶಸ್ತ್ರಗಳ ಸಮೂಹವನ್ನು ಸೈರಿಸಿಕೊಳ್ಳಿ,' ಎನ್ನುತ್ತಾ ಯಮಸೂನು ಬಾಣಗಳಿಂದ ತೆಗೆದು ಹೊಡೆದನು.
ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ |
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ || ೩೭ ||
ಪದವಿಭಾಗ-ಅರ್ಥ:ಧರಣಿಪತಿಯ+ ಅಂಬುಗಳನು+ ಎಡೆಯಲಿ ತರಿದು ತುಳುಕಿದನು+ ಅಂಬಿನ+ ಉಬ್ಬಿನ ಗರಿಯ(ಬಾಣದ ಬುಡದಲ್ಲಿ ಕಟ್ಟಿದ ಗರಿಗಳು), ಗಾಳಿಯ ದಾಳಿ ಪೈಸರಿಸಿದುದು(ಹಿಮ್ಮೆಟ್ಟು, ಹಿಂಜರಿ) ಪರ್ವತವ ಮೊರೆವ ಕಣೆ ಮಾರ್ಗಣೆಗಳನು ಕತ್ತರಿಸಿದವು ಬಳಿಯ+ ಆಂಬುಗಳು ಪಡಿಸರಳ(ಆಕ್ರಮಿಸಿದ ಸರಳು- ಬಾಣ) ತೂಳಿದಡೆ(ತೂಳು- ಬೆನ್ನಟ್ಟು, ಹಿಂಬಾಲಿಸು )+ ಎಚ್ಚರು+ ಎಚ್ಚರು ಮೆಚ್ಚಲು+ ಉಭಯ ಬಲ(ಸೇನೆ).
ಅರ್ಥ:ಧರಣಿಪತಿ ಧರ್ಮಜನ ಬಾಣಗಳನ್ನು ಮಧ್ಯದಲ್ಲಿ ಕತ್ತರಿಸಿ, ಶಲ್ಯನು ಉಬ್ಬಿದ ಗರಿಯ ಬಾಣಗಳನ್ನು ತುಳುಕಿದನು- ತುಂಬಿದನು.ಪರ್ವತವ ಗಾಳಿಯ ದಾಳಿಯನ್ನು ಹಿಮ್ಮಟ್ಟಿಸಿ ವಾಯುವೇಗಕ್ಕೂ ಹೆಚ್ಚಿನ ವೇಗದಲ್ಲಿ ಹೋದವು. ಮೊರೆವ-ಸುಯ್ಯೆಂದು ಸದ್ದು ಮಾಡುವ ಬಾಣಗಳು, ಅದಕ್ಕೆ ಬಂದ ಪ್ರತಿ ಮಾರ್ಗಣೆಗಳನ್ನು ಕತ್ತರಿಸಿದವು. ಬಳಿಯ ಆಂಬುಗಳು ಆಕ್ರಮಿಸಿದ ಬಾಣಗಳನ್ನು ಬೆನ್ನಟ್ಟಿದರೆ, ಎಚ್ಚರ, ಎಚ್ಚರ, ಎಂದು ಎರಡು ಸೇನೆಯ ಭಟರು ಮೆಚ್ಚಿ ಕೂಗುತ್ತಿದ್ದರು.
ಸೈರಿಸಾದಡೆಯೆನುತ ಮುಳಿದು ಮ
ಹೀರಮಣ ಮದ್ರಾಧಿಪನನೆ
ಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
ಕೂರಲಗು ಸೀಸಕವ ಕವಚವ
ಹೋರುಗಳೆದವು ನೆತ್ತರಿನ ಬಾ
ಯ್ಧಾರೆಗಳ ತೋರಿದವು ದಳಪತಿಯಪರಭಾಗದಲಿ ೩೮
ಪದವಿಭಾಗ-ಅರ್ಥ: ಸೈರಿಸು+ ಆದಡೆ+ ಯೆನುತ ಮುಳಿದು(ಸಿಟ್ಟಿನಿಂದ) ಮಹೀರಮಣ ಮದ್ರಾಧಿಪನನು+ ಎಚ್ಚಿ+ ಆರಿದನು(ಹೊಡೆದು ಆರ್ಭಟಿಸಿದನು) ಮಗುಳ+ ಎಚ್ಚು ಪುನರಪಿ+ಯೆ+ ಎಚ್ಚು(ಹೊಡೆದು) ಮಗುಳ್+ ಎಸಲು+ ಕೂರಲಗು ಸೀಸಕವ ಕವಚವ ಹೋರುಗಳೆದವು, ನೆತ್ತರಿನ ಬಾಯ್ಧಾರೆಗಳ ತೋರಿದವು, ದಳಪತಿಯ ಪರಭಾಗದಲಿ(ಎದೆಯ ಬದಿಯಲ್ಲಿ)
ಅರ್ಥ:ಮಹೀರಮಣ ಧರ್ಮಜನು ಸಾಧ್ಯವಾದರೆ ಸಹಿಸಿಕೊ ಯೆನ್ನುತ್ತಾ ಸಿಟ್ಟಿನಿಂದ ಮದ್ರಾಧಿಪ ಶಲ್ಯನನ್ನು ಹೊಡೆದು ಆರ್ಭಟಿಸಿದನು. ಮತ್ತೆ ಮತ್ತೆ ಹೊಡೆದು ಹೊಡೆದು, ಅದರಮೇಲೆ ಪುನಃ ಹೊಡೆಯಲು ಬಾಣದ ಕೂರಲಗು ಶಲ್ಯನ ಸೀಸಕ- ಕವಚವನ್ನು ತೂತುಮಾಡಿ ಹೋರುಗಳೆದವು. ಆಗ ಅದರಿಂದ ದಳಪತಿ ಶಲ್ಯನ ಪರಭಾಗದಲ್ಲಿ ನೆತ್ತರಿನ/ ರಕ್ತದ ಬಾಯ್ಧಾರೆಗಳು ಕಂಡವು.
ಪ್ರಳಯಪವನನ ಹೊಯ್ಲಿನಲಿ ಕಳ
ವಳಿಸಿದಮರಾದ್ರಿಯವೊಲುದುರಿದ
ಬಿಲುಸರಳ ಹೆಗಲೋರೆಗೊರಳರೆಮುಚ್ಚುಗಣ್ಣುಗಳ |
ತಳಿತ ರಕ್ತಾಂಕುರದ ಬಳಕೆಗೆ
ಬಳಲಿದಿಂದ್ರಿಯಕುಳದ ಮೂರ್ಛಾ
ವಿಲಸಿತಾಂಗದ ಶಲ್ಯನಿದ್ದನು ರಥದ ಮಧ್ಯದಲಿ || ೩೯ ||
ಪದವಿಭಾಗ-ಅರ್ಥ: ಪ್ರಳಯ-ಪವನನ(ಗಾಳಿ) ಹೊಯ್ಲಿನಲಿ(ಹೊಡೆತ) ಕಳವಳಿಸಿದ+ ಅಮರಾದ್ರಿಯವೊಲು+ ಉದುರಿದ ಬಿಲುಸರಳ ಹೆಗಲ+ ಓರೆಗೊರಳ+ ಅರೆಮುಚ್ಚುಗಣ್ಣುಗಳ ತಳಿತ ರಕ್ತಾಂಕುರದ ಬಳಕೆಗೆ ಬಳಲಿದ+ ಇಂದ್ರಿಯಕುಳದ(ಕುಳ- ಇಲ್ಲದ, ಹೀನ) ಮೂರ್ಛಾವಿಲಸಿತ+ ಅಂಗದ ಶಲ್ಯನಿದ್ದನು ರಥದ ಮಧ್ಯದಲಿ.
ಅರ್ಥ:ಪ್ರಳಯಕಾಲದ ಬಿರುಗಾಳಿಯ ಹೊಡೆತದಲ್ಲಿ ಕಳವಳಿಸಿ ಚಿತೆಗೀಡಾದ ಅಮರಾದ್ರಿಯಾದ ದೇವಗಿರಿ ಅಥವಾ ಹಿಮಾಲಯದಂತೆ ಕೈಯಿಂದ ಜಾರಿದ ಬಿಲ್ಲು ಬಾಣದ, ಹೆಗಲಮೇಲೆ ಹೊರಳಿದ ಓರೆ ಕೊರಳ, ಅರೆಮುಚ್ಚಿದ ಕಣ್ಣುಗಳ, ತೊಯಿದ ರಕ್ತದ ಕಲೆಗಳಿಂದಕೂಡಿ ಆಯುಧಗಳ ಬಳಕೆಗೆ ಆಗದಷ್ಟು ಬಳಲಿದ, ಇಂದ್ರಿಯಗಳಪ್ರಜ್ಞೆ ಇಲ್ಲದ ಮೂರ್ಛಾವಿಲಸಿತವಾದ ಅಂಗಾಗಗಳ ಶಲ್ಯನು ರಥದ ಮಧ್ಯದಲ್ಲಿ ಇದ್ದನು. (ಶಲ್ಯನು ಧರ್ಮಜನ ಬಾಣದ ಹೊಡೆತಕ್ಕೆ ಮೂರ್ಛೆಹೋಗಿ ರಥದಲ್ಲಿ ಒರಗಿದ್ದನು.)
ಅರಸ ಕೇಳೈ ಮರವೆಗಾತ್ಮನ
ನೆರವ ಕೊಟ್ಟು ಮುಹೂರ್ತಮಾತ್ರಕೆ
ಮರಳಿಚಿದವೊಲು ಕಂದೆರೆದು ನೋಡಿದನು ಕೆಲಬಲನ |
ಸರಳ ಕಿತ್ತೌಷಧಿಯ ಲೇಪನ
ನೊರಸಿದನು ತೊಳೆತೊಳೆದು ನೂತನ
ವರ ದುಕೂಲವನುಟ್ಟು ಕೊಂಡನು ನಗುತ ವೀಳೆಯವ || ೪೦ ||
ಪದವಿಭಾಗ-ಅರ್ಥ: ಅರಸ ಕೇಳೈ ಮರವೆಗೆ+ ಆತ್ಮನ ನೆರವ ಕೊಟ್ಟು ಮುಹೂರ್ತಮಾತ್ರಕೆ ಮರಳಿಚಿದವೊಲು ಕಂದೆರೆದು ನೋಡಿದನು; ಕೆಲಬಲನ ಸರಳ ಕಿತ್ತು + ಔಷಧಿಯ ಲೇಪನನ+ ಒರಸಿದನು ತೊಳೆತೊಳೆದು ನೂತನ ವರ ದುಕೂಲವನು+ ಉಟ್ಟು ಕೊಂಡನು ನಗುತ ವೀಳೆಯವ.
ಅರ್ಥ:ಧೃತರಾಷ್ಟ್ರ ಅರಸನೇ ಕೇಳು,' ಮೈಮರವೆಗೆ ಆತ್ಮನ ಬಲವನ್ನು ಕೊಟ್ಟು, ಮುಹೂರ್ತಮಾತ್ರದಲ್ಲಿ ಮರಳಿಚಿದಂತೆ, ಶಲ್ಯನು ಕಣ್ಣನ್ನು ತೆರೆದು ಆಚೆ ಈಚೆ ನೋಡಿದನು; ಅಕ್ಕಪಕ್ಕ ಚುಚ್ಚಿದ್ದ ಬಾಣಗಳನ್ನು ಕಿತ್ತು ಔಷಧಿಯನ್ನು ಲೇಪನ ಮಾಡಿಕೊಂಡನು.ರಕ್ತವನ್ನು ಒರಸಿದನು; ಅದನ್ನು ತೊಳೆದು ತೊಳೆದು ಹಸದಾದ ಉತ್ತಮ ದುಕೂಲವನ್ನು ಉಟ್ಟು, ನಂತರ ನಗುತ್ತಾ ಶಕ್ತಿದಾಯಕ ವೀಳೆಯವನ್ನು ತೆಗೆದುಕೊಂಡನು.
ತುಡುಕಿದನು ಬಿಲುಸರಳನಕಟವ
ಗಡಿಸಿದನಲಾ ಧರ್ಮಸುತನು
ಗ್ಗಡದಲೊಂದು ಮುಹೂರ್ತವಾಯಿತೆ ಹಗೆಗೆ ಸುಮ್ಮಾನ |
ತೊಡಕಿದೆಡೆಗೆ ಜಯಾಪಜಯ ಸಂ
ಗಡಿಸುವುವು ತಪ್ಪೇನು ಯಮಸುತ
ಹಿಡಿ ಧನುವನನುವಾಗೆನುತ ಮೂದಲಿಸಿದನು ಶಲ್ಯ |\ ೪೧ ||
ಪದವಿಭಾಗ-ಅರ್ಥ:ತುಡುಕಿದನು(ಸೆಳೆದುಕೊಂಡನು) ಬಿಲುಸರಳನು+ ಅಕಟ+ ಅವಗಡಿಸಿದನಲಾ(ಸೋಲಿಸು ಅಪಮಾನಿಸು,) ಧರ್ಮಸುತನು+ ಉಗ್ಗಡದಲಿ(ಉತ್ಕಟತೆ,)+ ಒಂದು ಮುಹೂರ್ತವಾಯಿತೆ ಹಗೆಗೆ ಸುಮ್ಮಾನ(ಮೇಲಾಟದ ಗೌರವ), ತೊಡಕಿದ+ ಎಡೆಗೆ ಜಯಾಪಜಯ ಸಂಗಡಿಸುವುವು ತಪ್ಪೇನು, ಯಮಸುತ ಹಿಡಿ ಧನುವನು+ ಅನುವಾಗು+ ಎನುತ ಮೂದಲಿಸಿದನು ಶಲ್ಯ.
ಅರ್ಥ:ಶಲ್ಯನು ಮೈಮರವೆಯಿಂದ ಎಚ್ಚತ್ತು ಸುಧಾರಿಸಿಕೊಂಡು, ಬಿಲ್ಲನ್ನೂ ಬಾಣಗಳನ್ನೂ ಸೆಳೆದು ತೆಗೆದುಕೊಂಡನು. ಅಕಟ! ಧರ್ಮಸುತನು ತನ್ನನ್ನು ಸೋಲಿಸಿ ಅಪಮಾನಿಸಿದನಲ್ಲಾ. ತನಗೆ ಉತ್ಕಟತೆಯ ಮೈಮರೆವು ಒಂದು ಮುಹೂರ್ತವಾಯಿತೆ? ಶತ್ರುವಿಗೆ ಸುಮ್ಮಾನವಾಯಿತೇ? ಯುದ್ಧಕ್ಕೆ ತೊಡಗಿದ ಸಂದರ್ಭದಲ್ಲಿ ಜಯಾಪಜಯಗಳು ಸಂಭವಿಸುವುವು; ಅದರಲ್ಲಿ ತಪ್ಪೇನು? ಸಹಜ, ಎಂದು ತನಗೇ ತಾನೇ ಸಮಾಧಾನ ಮಾಡಿಕೊಂಡು, ಶಲ್ಯನು,'ಯಮಸುತ ಧರ್ಮಜನೇ ಹಿಡಿ ಧನುಸ್ಸನ್ನು, ಅನುವಾಗು+ ಎನ್ನುತ್ತಾ ಧರ್ಮಜನನ್ನು ಮೂದಲಿಸಿದನು.
  • ಟಿಪ್ಪಣಿ:(ಧರ್ಮಯುದ್ಧದಲ್ಲಿ, ಶಸ್ತ್ರ ಹಿಡಿಯದೆ ಇರುವವರನ್ನು ಹೊಡೆಯುವುದಿಲ್ಲ. ಮೈಮರೆತವರನ್ನು, ಬಿದ್ದವರನ್ನು, ಶರಣಾಗತರಾದವರನ್ನು ಹೊಡೆಯುವುದಿಲ್ಲ. ಇದು ಒಪ್ಪಂದ).
ನರನ ರಥವದೆ ಮರೆಯಹೊಗು ಮುರ
ಹರನ ಮರೆವೊಗು ಭೀಮಸೇನನ
ಕರಸಿ ನೂಕು ಶಿಖಂಡಿ ಸಾತ್ಯಕಿ ಸೃಂಜಯಾದಿಗಳ |
ಅರಸುಗುರಿಗಳ ಹೊಯ್ಸು ಗೆಲುವಿನ
ಗರುವನಾದಡೆ ನಿಲ್ಲೆನುತಲು
ಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ || ೪೨ ||
ಪದವಿಭಾಗ-ಅರ್ಥ: ನರನ ರಥವದೆ ಮರೆಯ ಹೊಗು, ಮುರಹರನ ಮರೆವೊಗು, ಭೀಮಸೇನನ ಕರಸಿ ನೂಕು, ಶಿಖಂಡಿ ಸಾತ್ಯಕಿ ಸೃಂಜಯಾದಿಗಳ ಅರಸುಗುರಿಗಳ ಹೊಯ್ಸು ಗೆಲುವಿನ ಗರುವನಾದಡೆ ನಿಲ್ಲು+ ಎನುತಲಿ+ ಉಬ್ಬರಿಸಿ ಮಾದ್ರಾಧೀಶನು+ ಎಚ್ಚನು(ಹೊಡೆದನು) ಧರ್ಮನಂದನನ.
ಅರ್ಥ:ಶಲ್ಯನು ವೀರಾವೇಶದಿಂದ ಧರ್ಮಜನಿಗೆ,'ಅರ್ಜುನನ ರಥವು ಅಲ್ಲಿದೆ ಅವನ ಮರೆಹೊಗು; ಕೃಷ್ಣನ ಮರೆಹೊಗು, ಇಲ್ಲವೇ ಭೀಮಸೇನನ ಕರಸಿ ಯುದ್ಧವನ್ನು ನೂಕು- ಮುಂದುವರೆಸು; ಶಿಖಂಡಿ, ಸಾತ್ಯಕಿ, ಸೃಂಜಯಾದಿ ಅರಸುಗಳಿಂದ ಗುರಿ ಹೊಡೆಸು; ಇಲ್ಲವೇ ಈಗ ನೀನು ಗೆಲುವನ್ನು ಪಡೆದೆ ಎಂದು ಗರ್ಪಡುವವನಾದರೆ ನನ್ನೊಡನೆ ಯುದ್ಧಕ್ಕೆ ನಿಲ್ಲು ಎನ್ನುತ್ತಾ ಉತ್ಸಾಹಿಸಿ ಮಾದ್ರಾಧೀಶ ಶಲ್ಯನು ಧರ್ಮನಂದನನನ್ನು ಬಾಣಗಳಿಂದ ಹೊಡೆದನು.
ಏನ ಹೇಳುವೆ ಭಟನ(ವೀರನ) ಶರ ಸಂ
ಧಾನವನು ಪುಂಖಾನುಪುಂಖವಿ
ಧಾನವನು ಝೇಂಕಾರಶರಜಾಳಪ್ರಸಾರಣವ |
ಆ ನಿರಂತರ ಸರಳ ಸಾರದ
ಸೋನೆ ಸದೆದುದು ಧರ್ಮಸುತನ ರ
ಣಾನುರಾಗವ ತೊಳೆದುದದ್ಭುತವಾಯ್ತು ನಿಮಿಷದಲಿ || ೪೩ ||
ಪದವಿಭಾಗ-ಅರ್ಥ:ಏನ ಹೇಳುವೆ ಭಟನ ಶರ ಸಂಧಾನವನು ಪುಂಖ+ ಅನುಪುಂಖ(ಪುಂಖ - ಬಾಣದ ಹಿಂದೆಕಟ್ಟದ ಗರಿ; ಒಂದರ ಹಿಂದೆ ಮತ್ತೊಂದು) ವಿಧಾನವನು ಝೇಂಕಾರ ಶರಜಾಳ ಪ್ರಸಾರಣವ ಆ ನಿರಂತರ ಸರಳ ಸಾರದ ಸೋನೆ ಸದೆದುದು(ಸದೆ- ಹೊಡೆ) ಧರ್ಮಸುತನ ರಣಾನುರಾಗವ(ಯುದ್ಧದ ಬಯಕೆ) ತೊಳೆದುದದ್ಭುತವಾಯ್ತು ನಿಮಿಷದಲಿ
ಅರ್ಥ: ಸಂಜಯನು,'ವೀರನಾದ ಶಲ್ಯನ ಶರ ಸಂಧಾನವನ್ನು ಏನೆಂದು ವರ್ಣಿಸಲಿ; ಅದು ಅದ್ಭುತವಾದುದು, ಪುಂಖಾನುಪುಂಖ ವಿಧಾನವನು- ಒಂದರ ಹಿಂದೆ ಮತ್ತೊಂದು ಬಾಣದಂತೆ ತೆರವಿಲ್ಲದೆ ಬಿಡುವನು. ಅವು ಝೇಂಕಾರಮಾಡುತ್ತಾ ಶರಜಾಲವು ಪ್ರಸಾರವಾಗುತ್ತಿದ್ದವು. ಆ ನಿರಂತರ ಸರಳ ಸಾರದ ಸೋನೆ-ಮಳೆ ಧರ್ಮಜನ ಯುದ್ಧದ ಬಯಕೆಯನ್ನು ನಿಮಿಷದಲ್ಲಿ ಸದೆದುದಲ್ಲದೆ ತೊಳೆದುಹಾಕಿ ಅದ್ಭುತವಾಯ್ತು.
ಸರಳ ಮುರಿಯೆಸಲಾ ಸರಳ ಕ
ತ್ತರಿಸಿ ಹತ್ತಂಬಿನಲಿ ರಾಯನ
ಬರಿಯ ಕವಚವ ಹರಿಯಲೆಚ್ಚನು ಮೂರು ಬಾಣದಲಿ |
ಶಿರದ ಸೀಸಕವನು ನಿಘಾತದ
ಲೆರಡು ಶರದಲಿ ಮತ್ತೆ ಭೂಪತಿ
ಯುರವನಗುಳಿದನೆಂಟರಲಿ ಮಗುಳೆಚ್ಚು ಬೊಬ್ಬಿರಿದ || ೪೪ ||
ಪದವಿಭಾಗ-ಅರ್ಥ: ಸರಳ ಮುರಿಯೆ+ ಎಸಲು(ಎಸಲು- ಬಾಣ ಹೊಡೆಯಲು)+ ಆ ಸರಳ ಕತ್ತರಿಸಿ ಹತ್ತು+ ಅಂಬಿನಲಿ ರಾಯನ ಬರಿಯ ಕವಚವ ಹರಿಯಲು+ ಎಚ್ಚನು ಮೂರು ಬಾಣದಲಿ, ಶಿರದ ಸೀಸಕವನು ನಿಘಾತದಲಿ+ ಎರಡು ಶರದಲಿ ಮತ್ತೆ ಭೂಪತಿಯ+ ಉರವನು+ ಅಗುಳಿದನು+ ಎಂಟರಲಿ ಮಗುಳೆ(ಮತ್ತೆ)+ ಎಚ್ಚು ಬೊಬ್ಬಿರಿದ.
ಅರ್ಥ:ಶಲ್ಯನು,ತಾನು ಬಿಟ್ಟ ಬಾಣವನ್ನು ಧರ್ಮಜನು ಮುರಿದು ಬಾಣ ಹೊಡೆಯಲು, ಆ ಸರಳನ್ನು ಶಲ್ಯನು ಕತ್ತರಿಸಿ, ಹತ್ತು ಅಂಬಗಳಿಂದ ಧರ್ಮರಾಯನ ಬರಿಯ ಕವಚವು ಹರಿಯುವಂತೆ ಮೂರು ಬಾಣಗಳಿಂದಹೊಡೆದನು; ಎರಡು ಶರಗಳಿಂದ ಧರ್ಮಜನ ತಲೆಯ ರಕ್ಷಕ ಸೀಸಕವನ್ನು ಹೊಡೆದು, ಮತ್ತೆ ಭೂಪತಿ ಧರ್ಮಜನ ಎದೆಯನ್ನು ಎಂಟು ಬಾಣಗಳಿಂದ ನಾಟುವಂತೆ ಮತ್ತೆ ಹೊಡೆದು ಬೊಬ್ಬಿರಿದನು.
ಗರುಡತುಂಡದ ಹತಿಗೆ ಫಣಿಯೆದೆ
ಬಿರಿವವೊಲು ಯಮಸುತನ ತನು ಜ
ರ್ಜ್ಜರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ
ಮುರಿದ ಕಂಗಳ ಮಲಗಿನಲಿ ಪೈ
ಸರದ ಗಾತ್ರದ ಗಾಢವೇದನೆ (೪೫
ಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ ೪೫
ಪದವಿಭಾಗ-ಅರ್ಥ: ಗರುಡತುಂಡದ ಹತಿಗೆ(ಹೊಡೆತಕ್ಕೆ) ಫಣಿಯ+ ಎದೆ ಬಿರಿವವೊಲು ಯಮಸುತನ ತನು(ದೇಹ) ಜರ್ಜ್ಜರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ(ರಕ್ತ) ಮುರಿದ ಕಂಗಳ ಮಲಗಿನಲಿ ಪೈಸರದ(ವಿಸ್ತಾರ, ವ್ಯಾಪ್ತಿ, ಹರಹು) ಗಾತ್ರದ ಗಾಢ (ತೀವ್ರವಾದ)ವೇದನೆಯು+ ಉರವಣಿಸೆ(ತೀವ್ರವಾಗಲು) ಸೊಂಪು(ಎಚ್ಚರ ಸಂತಸ)+ ಅಡಗಿ ನಿಮಿಷ ಮಹೀಶ ಮೈಮರೆದ.
ಅರ್ಥ: ಗರುಡ ಪಕ್ಷಿಗಳ ತುಂಡದ ಹೊಡೆತಕ್ಕೆ ಸರ್ಪದ ಎದೆ ಬಿರಿಯುವಂತೆ ಧರ್ಮಜನ ದೇಹ ಜರ್ಜ್ಜರಿತವಾಯಿತು. ಜೋಡಿಸಿದ ಕವಚದ ಜರುಗಿ ರಕ್ತವು ಜಿಗಿಯಲು- ಹೊರಹೊಮ್ಮಲು, ಮುರಿದ- ಅರ್ಧಮುಚ್ಚಿದ ಕಣ್ಣುಗಳು ಮಲಗಿದಂತೆ ಬಾಣದ ಪೆಟ್ಟಿನ ವ್ಯಾಪ್ತಿ ಗಾತ್ರಗಳು ಧರ್ಮಜನಿಗೆ ಬಹಳ ವೇದನೆಯು ಹೆಚ್ಚಾಗಿ ಮನದಸೊಂಪು ಒಂದು ನಿಮಿಷ ಅಡಗಿತು.ಹೀಗೆ ಮಹೀಶ ಧರ್ಮಜನು ಶಲ್ಯನ ಬಾಣದ ಪೆಟ್ಟಿನಿಂದ ಮೈಮರೆತನು.
ಬಿದ್ದನಾಚೆಯ ದೊರೆ ಸುಯೋಧನ
ಗೆದ್ದನಿನ್ನೇನೆನುತ ಸುಭಟರ
ನದ್ದಿತತಿಸುಮ್ಮಾನಸಾಗರ ನಿನ್ನ ಮೋಹರವ |
ಅದ್ದರೋ ಶೋಕಾಂಬುಧಿಯಲೊಡೆ
ಬಿದ್ದರೋ ಭೀಮಾರ್ಜುನರಿಗುಸು
ರಿದ್ದುದೋ ಬರಹೇಳೆನುತ ಬೊಬ್ಬಿರಿದನಾ ಶಲ್ಯ || ೪೬ ||
ಪದವಿಭಾಗ-ಅರ್ಥ: ಬಿದ್ದನು+ ಆಚೆಯ ದೊರೆ, ಸುಯೋಧನ ಗೆದ್ದನು+ ಇನ್ನೇನು+ ಎನುತ ಸುಭಟರನು+ ಅದ್ದಿತು+ ಅತಿ ಸುಮ್ಮಾನಸಾಗರ ನಿನ್ನ ಮೋಹರವ, ಅದ್ದರೋ ಶೋಕಾಂಬುಧಿಯಲಿ+ ಒಡೆಬಿದ್ದರೋ ಭೀಮಾರ್ಜುನರಿಗೆ+ ಉಸುರಿದ್ದುದೋ ಬರಹೇಳು+ ಎನುತ ಬೊಬ್ಬಿರಿದನು+ ಆ ಶಲ್ಯ.
ಅರ್ಥ:'ಆಚೆಯ ಶತ್ರುಗಳ ದೊರೆ ಬಿದ್ದನು/ ಇಲ್ಲವಾದನು, ಸುಯೋಧನನು ಗೆದ್ದನು, ಇನ್ನೇನು ಯುದ್ಧ ಉಳಿಯಿತು, ಎನ್ನುತ್ತಾ ನಿನ್ನ ಕೌರವನ ಸುಭಟಸೇನೆ ಅತಿ ಸುಮ್ಮಾನಸಾಗರದಲ್ಲಿ- ಸಂತೊಷದ ಸಮುದ್ರದಲ್ಲಿ ಮುಳುಗಿತು. ಶತ್ರುಗಳು ಶೋಕಸಾಗರದಲ್ಲಿ ಮುಳುಗಿದರೋ, ಆ ಶಲ್ಯನು ಆಗ. ಒಡೆದು ಸೋತುಬಿದ್ದರೋ, ಧರ್ಮಜನಿಗೆ ಉಸುರು ಇದೆಯೋ- ಇಲ್ಲವೋ, ಭೀಮಾರ್ಜುನರಿಗೆ ಬರಹೇಳು ಎನ್ನುತ್ತಾ ಬೊಬ್ಬಿರಿದನು- ಆರ್ಭಟಿಸಿದನು.
ಗಜಬಜಿಸಿದುದು ವೈರಿಸುಭಟ
ವ್ರಜ ನಕುಲ ಸಹದೇವ ಸಾತ್ಯಕಿ
ವಿಜಯ ಧೃಷ್ಟದ್ಯುಮ್ನ ಭೀಮ ದ್ರೌಪದೀಸುತರು
ವಿಜಿತನೋ ವಿಗತಾಸುವೋ ಧ
ರ್ಮಜನ ಹದನೇನೆನುತ ಚಿಂತಾ
ರಜನಿಯಲಿ ಕಂಗೆಟ್ಟುದಾ ಬಲವರಸ ಕೇಳೆಂದ ೪೭
ಪದವಿಭಾಗ-ಅರ್ಥ:ಗಜಬಜಿಸಿದುದು ವೈರಿಸುಭಟ ವ್ರಜ( ಪಾಂಡವರ ಸೇನಯಲ್ಲಿ), ನಕುಲ ಸಹದೇವ ಸಾತ್ಯಕಿ ವಿಜಯ(ಅರ್ಜುನ) ಧೃಷ್ಟದ್ಯುಮ್ನ, ಭೀಮ, ದ್ರೌಪದೀಸುತರು, ವಿಜಿತನೋ, ವಿಗತಾಸುವೋ, ಧರ್ಮಜನ ಹದನು+ ಏನು+ ಎನುತ ಚಿಂತಾ-ರಜನಿಯಲಿ(ಕತ್ತಲೆ) ಕಂಗೆಟ್ಟುದು+ ಆ ಬಲವು(ಸೇನೆ)+ ಅರಸ ಕೇಳೆಂದ.
ಅರ್ಥ:ಸಂಜಯನು ಅರಸನೇ ಕೇಳು,'ಹೀಗೆ ಧರ್ಮಜನು ಮೂರ್ಛೆಹೋಗಲು, ಪಾಂಡವರ ಸೇನಯಲ್ಲಿ ಗುಸು- ಗುಸು, ಗಜಬಜಿ ಮಾತಗಳ ಸದ್ದು ಕೇಳಿಸಿತು. , ನಕುಲ, ಸಹದೇವ, ಸಾತ್ಯಕಿ, ಅರ್ಜುನ, ಧೃಷ್ಟದ್ಯುಮ್ನ, ಭೀಮ, ದ್ರೌಪದೀಸುತರು, ಧರ್ಜನು ಕೇವಲ ಸೋಲಿಸಲ್ಪಟ್ಟಣೋ ಅಥವಾ ಜೀವಬಿಟ್ಟನೋ, ಧರ್ಮಜನ ಪರಿಸ್ಥತಿ ಏನು? ಎನ್ನತ್ತಾ ಆ ಸೇನೆಗೆ ಚಿಂತೆಯ ಕತ್ತಲೆಯು ಕವಿದು ಅವರು ಕಂಗೆಟ್ಟರು,'ಎಂದ.

ಶಲ್ಯನ ವಧೆ[ಸಂಪಾದಿಸಿ]

ಕ್ಷಣಕೆ ಮರಳೆಚ್ಚತ್ತನಸ್ತ್ರ
ವ್ರಣವ ತೊಳೆದರು ಘಾಯದಲಿ ಕೇ
ವಣಿಸಿದರು ದಿವ್ಯೌಷಧಿಯ ಗಂಧಾನುಲೇಪದಲಿ |
ರಣವಿಜಯ ನವ ವಸನ ಮಣಿಭೂ
ಷಣ ಪರಿಷ್ಕೃತನಾಗಿ ತಿರುವಿನ
ಗೊಣೆಯವನು ನೇವರಿಸಿದನು ಸಂತೈಸಿ ಸಂಹನವ || ೪೮ ||
ಪದವಿಭಾಗ-ಅರ್ಥ:ಕ್ಷಣಕೆ ಮರಳಿ+ ಎಚ್ಚತ್ತನು+ ಅಸ್ತ್ರವ್ರಣವ ತೊಳೆದರು, ಘಾಯದಲಿ ಕೇವಣಿಸಿದರು(ತುಂಬಿದರು) ದಿವ್ಯೌಷಧಿಯ ಗಂಧ+ ಅನುಲೇಪದಲಿ, ರಣವಿಜಯ ನವ ವಸನ ಮಣಿಭೂಷಣ ಪರಿಷ್ಕೃತನಾಗಿ ತಿರುವಿನಗೊಣೆಯವನು ನೇವರಿಸಿದನು ಸಂತೈಸಿ ಸಂಹನವ(ನಾಶ, ದೇಹ,).
ಅರ್ಥ:ಧರ್ಮಜನು ಆ ಕ್ಷಣದಲ್ಲಿ ಮರಳಿ ಎಚ್ಚತ್ತನು. ಅಸ್ತ್ರದಿಂದ ಆದ ವ್ರಣ-ಘಾಯವನ್ನು ಸೇವಕರು ತೊಳೆದರು; ಘಾಯದಲ್ಲಿ ದಿವ್ಯೌಷಧಿಯ ಗಂಧವನ್ನು ಅನುಲೇಪಿದಸಿದರು, ರಣವಿಜಯಕ್ಕಾಗಿ ಧರ್ಮಜನು ಹೊಸ ವಸ್ತ್ರಗಳನ್ನೂ, ಮಣಿಭೂಷಣಗಳನ್ನೂ ಪರಿಷ್ಕೃತನಾಗಿ- ಧರಿಸಿ ಬಿಲ್ಲಿನ ತುದಿಯ ದಾರ ಕಟ್ಟುವ ತಿರುವಿನ ಗೊಣೆಯದ ನಾಣನ್ನು ಸರಿಪಡಿಸಿ ನೇವರಿಸಿದನು.
ಮರವೆ ಮಸುಳಿತೆ ಭೂಮಿಪತಿ ಕಂ
ದೆರೆದಿರೇ ಭೀಮಾರ್ಜುನರು ನಿ
ಮ್ಮಿರಿತಕೊದಗಿದರಿಲ್ಲಲಾ ನೀವೇಕೆ ರಣವೇಕೆ
ನೆರೆ ಧನುರ್ವೇದಾರ್ಥಸಾರವ
ನರಿವೆಯಾದರೆ ಕೊಳ್ಳೆನುತ ಬಿಡೆ
ತರಿದನೆಂಟಂಬಿನಲಿ ಧ್ವಜ ರಥ ಹಯವನಾ ಶಲ್ಯ ೪೯
ಪದವಿಭಾಗ-ಅರ್ಥ: ಮರವೆ(ಸ್ಮೃತಿ) ಮಸುಳಿತೆ(ಮಂಕಾಯಿತೆ), ಭೂಮಿಪತಿ ಕಂದೆರೆದಿರೇ(ಕಣ್ಣು ತೆರೆದಿರೇ?)? ಭೀಮ+ ಅರ್ಜುನರು ನಿಮ್ಮ+ ಇರಿತಕೆ+ ಒದಗಿದರಿಲ್ಲಲಾ, ನೀವೇಕೆ? ರಣವೇಕೆ? ನೆರೆ ಧನುರ್ವೇದಾರ್ಥ ಸಾರವನು+ ಅರಿವೆಯಾದರೆ ಕೊಳ್ಳೆನುತ ಬಿಡೆ ತರಿದನು+ ಎಂಟು+ ಅಂಬಿನಲಿ ಧ್ವಜ ರಥ ಹಯವನಾ ಶಲ್ಯ.
ಅರ್ಥ:ಶಲ್ಯನು ಧರ್ಮಜನು ಎಚ್ಚರಾದುದನ್ನು ನೋಡಿ,'ರಾಜಾ,ನನ್ನಬಾನದ ಹೊಡೆತಕ್ಕ ನಿನ್ನ ಸ್ಮೃತಿ ಮಂಕಾಯಿತೆ?, ರಾಜನೇ ಕಣ್ಣು ತೆರೆದಿರೇ? ಭೀಮ, ಅರ್ಜುನರು ನಿಮ್ಮ ಕಷ್ಟಕ್ಕೆ -ನೋವಿಗೆ ಒದಗಿದೆ ಹೋದರಲ್ಲಾ! ನೀವೇಕೆ? ನಿಮಗೆ ಯುದ್ಧವೇಕೆ? ಶಲ್ಯನು, ಅದಕ್ಕೂ ಮಿಗಿಲಾಗಿ 'ಧನುರ್ವೇದಾರ್ಥ ಸಾರವನ್ನು ತಿಳಿದಿರುವೆಯಾದರೆ ತೆಗೆದುಕೊಳ್ಳು,' ಎನ್ನತ್ತಾ ಬಿಡದೆ ಎಂಟು ಅಂಬಿಗಳಿಂದ ಧ್ವಜ ರಥ ಕುದುರೆಗಳನ್ನು ತರಿದನು.
ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮರಳೆಚ್ಚನು ಯುಧಿಷ್ಠಿರನ |
ಮನನ ಶಾಸ್ತ್ರ ಶ್ರವಣ ನಿಮಯಾ
ಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ || ೫೦ ||
ಪದವಿಭಾಗ-ಅರ್ಥ:ಧನುವನು+ ಎರಡು+ ಅಂಬಿನಲಿ ಮಗುಳೆ+ ಎಚ್ಚನು ಮಹೀಶನ ಸಾರಥಿಯ ಮೈನನೆಯೆ ನವ ರುಧಿರದಲಿ, ಮರಳೆ+ ಎಚ್ಚನು ಯುಧಿಷ್ಠಿರನ, ಮನನ ಶಾಸ್ತ್ರ ಶ್ರವಣ ನಿಮಯ+ ಆಸನ ಸಮಾಧಿ ಧ್ಯಾನ ವಿದ್ಯಾವಿನಯವು+ ಅಲ್ಲದೆ ರಣದ ಜಂಜಡವು+ ಏಕೆ ನಿಮಗೆ+ ಎಂದ.
ಅರ್ಥ:ಶಲ್ಯನು ಅಷ್ಟಕ್ಕೆ ನಿಲ್ಲದೆ ಧರ್ಮಜನ ಧನಸ್ಸನ್ನು ಎರಡು ಬಾಣಗಳಿಂದ ಮತ್ತೆ ಹೊಡೆದನು. ನಂತರ ಯುಧಿಷ್ಠಿರನ ಸಾರಥಿಯನ್ನು ರಕ್ತದಲ್ಲಿ ಮೈ ನೆನೆಯವಂತೆ ಹೊಡೆದನು. ಶಲ್ಯನು ಧರ್ಮಜನನ್ನು ಕುರಿತು,ನೀನು ಯೋಗದ ಮನನ, ಶಾಸ್ತ್ರ ಶ್ರವಣ, ನಿಮಯ, ಆಸನ, ಸಮಾಧಿ, ಧ್ಯಾನ, ವಿದ್ಯೆ, ವಿನಯ ಇವುಗಳು ಅಲ್ಲದೆ ರಣರಂದಲ್ಲಿ ಯುದ್ಧದ ಜಂಜಡದ ಕಷ್ಟ ನಿಮಗೆ ಏಕೆ ಬೇಕು?,'ಎಂದ.
ಉಡಿದು ಬಿದ್ದುದು ಚಾಪ ಸಾರಥಿ
ಕಡಿವಡೆದು ರಥ ನುಗ್ಗುನುಸಿಯಾ
ಯ್ತಡಗುದರಿಯಾಯ್ತಶ್ವಚಯ ಸಜ್ಜೋಡು ತಡಿ ಸಹಿತ |
ನಡುಗಿತರಿಬಲವವನಿಪತಿ ಕಾ
ಲ್ನಡೆಗೆ ಬಂದನು ಮತ್ತೆ ರಥವಂ
ಗಡವ ಮೇಳೈಸಿದನು ನಗುತಡರಿದನು ಮಣಿರಥವ || ೫೧ ||
ಪದವಿಭಾಗ-ಅರ್ಥ: ಉಡಿದು(ಮುರಿದು) ಬಿದ್ದುದು ಚಾಪ ಸಾರಥಿ ಕಡಿವಡೆದು(ಗಾಯಗೊಂಡು) ರಥ ನುಗ್ಗುನುಸಿಯಾಯ್ತ,+ ಅಡಗುದರಿಯಾಯ್ತು(ಅಡಗು- ಮಾಂಸ)+ ಅಶ್ವಚಯ ಸಜ್ಜೋಡು ತಡಿ ಸಹಿತ ನಡುಗಿತು+ ಅರಿಬಲವು+ ಅವನಿಪತಿ ಕಾಲ್ನಡೆಗೆ ಬಂದನು, ಮತ್ತೆ ರಥವಂಗಡವ ಮೇಳೈಸಿದನು ನಗುತ+ ಅಡರಿದನು ಮಣಿರಥವ.
ಅರ್ಥ:ಶಲ್ಯನ ಬಾಣದ ಹೊಡೆತಕ್ಕೆ ಬಿಲ್ಲು ಮುರಿದು ಬಿದ್ದಿತು. ಸಾರಥಿಯು ಗಾಯಗೊಂಡನು; ರಥವು ನುಗ್ಗುನುಸಿಯಾಗಿ ಪುಡಿಪುಡಿಯಾಯಿತು. ಉತ್ತಮಜೋಡು ಕುದುರೆಗಳು ತಡಿ ಸಹಿತ ಮಾಂಸದ ಮುದ್ದೆಯಾದವು. ಪಾಂಡವ-ಶತ್ರುಬಲವು ಹೆದರಿ ನಡುಗಿತು. ಅವನಿಪತಿ ಧರ್ಮಜನು ರಥವನ್ನು ಬಿಟ್ಟು ಕಾಲು ನಡಿಗೆಯಿಂದ ಬಂದನು. ಅವನು ಮತ್ತೆ ರಥವನ್ನು ಅದರ ಅಂಗಗಳನ್ನು ಜೋಡಿಸಿಕೊಂಡನು. ನಂತರ ಗಾಬರಿ ಇಲ್ಲದೆ ನಗುತ್ತಾ ಹೊಸ ಮಣಿರಥವನ್ನು ಅಡರಿದನು- ಏರಿದನು.
ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ |
ಉಬ್ಬಿದನು ಸತ್‌ಕ್ಷತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬಿನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ || ೫೨ ||
ಪದವಿಭಾಗ-ಅರ್ಥ:ಬೊಬ್ಬಿರಿದುದು+ ಆ ಸೇನೆ ರಾಯನ ಸರ್ಬದಳ ಜೋಡಿಸಿತು ಸೋಲದ ಮಬ್ಬು ಹರೆದುದು ಜಯದ ಜಸವೇರಿದನು ನರನಾಥ ಉಬ್ಬಿದನು (ಉತ್ಸಾಹಗೊಂಡನು) ಸತ್‌ಕ್ಷತ್ರತೇಜದ ಗರ್ಭ ಗಾಡಿಸಿತಾರಿ ಮಿಡಿದನು ತೆಬ್ಬಿನಸ್ತ್ರವ(ತೆಬ್ಬು- ನೆಗೆ,ದಾಟು,ಕುಪ್ಪಳಿಸು ಜಿಗಿ,) ತೂಗಿ ತುಳುಕಿದನು+ ಅಂಬಿನ+ ಅಂಬುಧಿಯ
ಅರ್ಥ:ಧರ್ಮಜನು ಚೇತನಗೊಂಡುದನ್ನು ನೋಡಿ ಅವನ ಆ ಸೇನೆ ಬೊಬ್ಬಿರಿದು ಆರ್ಭಟಿಸಿತು. ಧರ್ಮರಾಯನ ಪಾಯದಳ ವ್ಯವಸ್ಥಿತವಾಗಿ ಜೋಡಿಸಿಕೊಂಡು ಯುದ್ಧಕ್ಕೆ ನಿಂತಿತು. ಸೋಲಿನ ಮಬ್ಬು ಹರಿದುಹೋಯಿತು. ನರನಾಥ ಧರ್ಜನು ಜಯದ ಯಶಸ್ಸನ್ನು ಏರಿದನು, ಉತ್ಸಾಹಗೊಂಡನು. ಸಚ್ಚಾರಿತ್ರ್ಯದ ಕ್ಷತ್ರತೇಜದ ಒಳಗಿನ ಕಾಂತಿ ಗಾಡಿಸಿತು- ಮುಖದಲ್ಲಿ ತುಂಬಿತು. ಅವನು ಮೇಲೆ ಎತ್ತಿದ ಅಸ್ರವನ್ನು - ಬಿಲ್ಲನ್ನು ಮಿಡಿದನು- ನಾಣನ್ನು ಠೇಂಕಾರ ಮಾಡಿದನು. ನಂತರ ಬಿಲ್ಲನ್ನು ತೂಗಿ ಬಾಣಗಳ ಸಮುದ್ರವನ್ನೇ ಶಲ್ಯನಮೇಲೆ ತುಳುಕಿದನು- ಸುರಿಸಿದನು.
ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗೀ ಸರಳು
ಕೈದುಕಾತಿಯರುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ ೫೩
ಪದವಿಭಾಗ-ಅರ್ಥ:ಕಾದುಕೊಳು ಮಾದ್ರೇಶ ಕುರುಬಲವ+ ಐದಿಬರಲಿ(ಐದಿ = ಬಂದು, ಬಂದೇ ಬರಲಿ?)+ ಇಂದಿನಲಿ ನಿನ್ನಯ ಮೈದುನನ ಕಾಣಿಕೆಯಲೇ ಸಂಘಟನೆಗೆ+ ಈ ಸರಳು ಕೈದುಕಾತಿಯರುಂಟೆ ಕರೆ ನೀನು+ ಐದಲು+ ಆರೆಯೆ(ಎದುರಿಸು)+ ಎನುತ್ತ ಮೂನೂರೈದು ಶರದಲಿ ಕಡಿದನು+ ಆ ಸಾರಥಿಯ ರಥ ಹಯವ.
ಅರ್ಥ:ಹೀಗೆ ಯುದ್ಧಕ್ಕೆ ಸಿದ್ಧನಾದ ಧರ್ಮಜನು ಶಲ್ಯನಿಗೆ,'ಮಾದ್ರೇಶ, ನಿನ್ನನ್ನು ನೀನು ಕಾದುಕೊ- ಕಾಪಾಡಿಕೋ; ಕುರುಸೇನೆಯೇ ಒಟ್ಟಾಗಿ ಬರಲಿ. ಇಂದು ನಿನ್ನ ಮೈದುನ ಪಾಂಡುವಿನ ಕಾಣಿಕೆಯು; ಸಂಘಟನೆಗೆ ಈ ಬಾಣ ಕೈದುಕಾತಿಯರು- ಯುದ್ಧವಿಶಾರದರು ಇದ್ದಾರೆಯೇ?- ನೀನು ಅವರನ್ನು ಬರಲು ಕರೆ; ಎದುರಿಸು ಎನ್ನುತ್ತಾ ಮುನ್ನೂರಾ ಐದು ಬಾಣಗಳಿಂದ ಅವನ ಆ ಸಾರಥಿಯನ್ನೂ ರಥವನ್ನೂ ಕುದುರೆಯನ್ನೂ ಕಡಿದನು.
ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರು ಬೊಬ್ಬಿರಿದರಸವೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ ೫೪
ಪದವಿಭಾಗ-ಅರ್ಥ:ತೇರು ಹುಡಿಹುಡಿಯಾಯ್ತು ಹೂಡಿದ ವಾರುವಂಗಳು(ಕುದುರೆಗಳು)+ ಅಲ್ಲಿ ಕಾಣೆನು ಸಾರಥಿಯ ತಲೆ ನೆಲದೊಳು+ ಅದ್ದುದು ಮಿದುಳ ಜೊಂಡಿನಲಿ, ಆರು(ಕೂಗಿ) ಬೊಬ್ಬಿರಿದು+ ಅರಸ+ ವೆ+ ಎಸಲು(ಹೊಡೆಯಲು)+ ಉಬ್ಬಾರದಲಿ(ಉಬ್ಬರ- ಅತಿಶಯ, ಉದ್ವೇಗ) ಕಣೆಯು+ ಅಡಸಿದವು(ತಾಗಿದವು, ಹೊಕ್ಕವು) ಕೈವಾರವು(ಹೊಗಳಿಕೆ ೨ ಸಾಮರ್ಥ್ಯ, ಬಾಹುಬಲ )+ ಏಕೆ ಛಡಾಳಿಸಿತು(ಪ್ರಜ್ವಲಿಸು) ಚಪಳತೆ ಯುಧಿಷ್ಠಿರನ.
ಅರ್ಥ:ಸಂಜಯ ಹೇಳಿದ,'ಧರ್ಮಜನ ಹೊಡೆತಕ್ಕೆ ಶಲ್ಯನ ರಥ ಹುಡಿಹುಡಿಯಾಯ್ತು; ಅವನ ರಥಕ್ಕೆ ಹೂಡಿದ ಕುದುರೆಗಳನ್ನು ನಾನು ಅಲ್ಲಿ ಕಾಣಲಿಲ್ಲ (ಸತ್ತು ಬಿದ್ದಿದ್ದವು). ಸಾರಥಿಯ ತಲೆ ನೆಲದಲ್ಲಿ ಮಿದುಳ ಜೊಂಡಿನಲಿ ಅದ್ದಿ ಬಿದ್ದಿತ್ತು. ಅರಸ ಧರ್ಮಜನು ಕೂಗಿ ಬೊಬ್ಬಿರಿದು ಹೊಡೆಯಲು ಅತಿಶಯವಾಗಿ ಬಾಣಗಳು ಹೊಕ್ಕವು. ಧರ್ಮಜನ ಸಾಮರ್ಥ್ಯ, ಬಾಹುಬಲ, ಚಪಲತೆ- ಚುರಕುತನ ಅದೇಕೋ ಪ್ರಜ್ವಲಿಸಿತು,' ಎಂದನು
ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಲೈಸಿತಕ್ಷಿಯಲಿ |
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ || ೫೫ ||
ಪದವಿಭಾಗ-ಅರ್ಥ: ಅರಸ ಕೇಳೈ ಬಳಿಕ ಮಾದ್ರೇಶ್ವರನ ರಥ ಸಾರಥಿ ವಿಸಂಚಿಸಲು+ ಉರಿದನು+ ಅಧಿಕಕ್ರೋಧಶಿಖಿ ಪಲ್ಲೈಸಿತು(ಚಿಗುರು)+ ಅಕ್ಷಿಯಲಿ; ಕುರುಬಲದ ತಲ್ಲಣವನು+ ಉರೆ ಸಂಹರಿಸಿ ಹರಿಗೆಯ+ ಅಡಾಯುಧದಲಿ+ ಅರಿ ಧರಣಿಪನ ಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ.
ಅರ್ಥ: ಅರಸನೇ ಕೇಳು.'ಮಾದ್ರೇಶ್ವರನ ರಥ ಸಾರಥಿ ನಾಶವಾಗಲು, ಬಳಿಕ ಅವನು ಕೋಪದಿಂದ ಉರಿದನು. ಅವನ ಕಣ್ಣಿನಲ್ಲಿ ಅಧಿಕವಾದ ಕ್ರೋಧದ ಬೆಂಕಿ ಉದ್ಭವಿಸಿತು; ಕುರುಸೇನೆಯ ತಲ್ಲಣ- ಕಳವಳವನ್ನು ಬಹಳಷ್ಟು ಸಂಹರಿಸಿ- ಕಡಿಮೆಮಾಡಿ, ಅವನು ಗುರಾಣಿಯನ್ನೂ ಅಡಾಯುಧವಾದ ಈಟಿಯನ್ನೂ ಹಿಡಿದು ಶತ್ರುವಾದ ಧರಣಿಪ ಯುಧಷ್ಠಿರನ ಮೇಲೆ ಹಾಯ್ದು ರಥವನ್ನೂ ಕುದುರೆಗಳನ್ನೂ ಹೊಡೆದನು.
ವಾರುವನ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೆಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ |
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕಸಾವಿರವ || ೫೬ ||
ಪದವಿಭಾಗ-ಅರ್ಥ:ವಾರುವನ(ಕುದುರೆ) ವೈಚಿತ್ರಗತಿಯ ನಿಹಾರದಲಿ ಸಾರಥಿ ನರೆಂದ್ರನ ತೇರ ತಿರುಗಿಸಿದನು; ವಿಘಾತಿಯಲಿ(ಪೆಟ್ಟು ಬೀಳದಂತೆ)+ ಒಂದು ಬಾಹೆಯಲಿ, ಆರಿ(ಶತ್ರು) ಹೊಯ್ದನು ಹಯವನು+ ಅಗ್ಗದ ವಾರಣಾವಳಿಗಳ ಪದಾತಿಯ ತೇರ ತೆಕ್ಕೆ(ಟೆಕ್ಕೆ- ಬಾವುಟ)ಯನು+ ಇಕ್ಕಿದನು(ಇಕ್ಕು - ಹೊಡೆ) ಪ್ರತ್ಯೇಕ ಸಾವಿರವ.
ಅರ್ಥ:ಶಲ್ಯನು ನೆಡೆದು ಬಂದು ಹೊಡೆಯಲು,ಸಾರಥಿಯು ಕುದುರೆಯನ್ನು ವೈಚಿತ್ರಗತಿಯ ಸಂಚಲನೆಯಲ್ಲಿ ನರೆಂದ್ರ ಧರ್ಮಜನ ರಥವನ್ನು ಪೆಟ್ಟು ಬೀಳದಂತೆ ಒಂದು ಬದಿಗೆ ತಿರುಗಿಸಿದನು; ಶತ್ರು ಶಲ್ಯನು ನಂತರ ಅಡ್ಡ ಬಂದ ಕುದುರೆಗಳನ್ನು ಹೊಡೆದನು, ಶ್ರೇಷ್ಠ ಆನೆಗಳನ್ನು, ಪ್ರತ್ಯೇಕ ಸಾವಿರವ ಪದಾತಿಗಳನ್ನು, ರಥ, ಬಾವುಟಗಳನ್ನು ಹೊಡೆದು ಕೆಡವಿದನು.
ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ |
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ || ೫೭ ||
ಪದವಿಭಾಗ-ಅರ್ಥ: ಮಲೆತ ಧೃಷ್ಟದ್ಯುಮ್ನನನು ಭಯಗೊಳಿಸಿ, ಸೋಮಕ ಸೃಂಜಯರನು+ ಅಪ್ಪಳಿಸಿದನು; ಸಾತ್ಯಕಿ ಯುಧಾಮನ್ಯು+ ಉತ್ತಮೌಂಜಸರ ದಳದೊಳು+ ಓಡಿಸಿ ಮುರಿದು ಚಾತುರ್ಬಲವ ಸವರಿ, ಶಿಖಂಡಿ ನಕುಲರ ಹೊಲಬು+ಗೆ+ ಕೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ.
ಅರ್ಥ:ಶಲ್ಯನು ತನ್ನನ್ನು ಎದುರಿಸಿದ ಧೃಷ್ಟದ್ಯುಮ್ನನನ್ನು ಭಯಪಡುವಣತೆ ಹೊಡೆದು, ಸೋಮಕ ಸೃಂಜಯರನ್ನು ಅಪ್ಪಳಿಸಿದನು; ಸಾತ್ಯಕಿ ಯುಧಾಮನ್ಯು ಮತ್ತು ಉತ್ತಮೌಂಜಸರನ್ನು ಮುರಿದು-ಸೋಲಿಸಿ ಸೇನೆಯ ಮರೆಗೆ ಓಡಿಸಿ, ಚತುರ್ಬಲಸೇನೆಯನ್ನು ಸವರಿದನು. ನಂತರ ಶಿಖಂಡಿ ನಕುಲರನ್ನು ಬಳಲಿಸಿ ಮಹೀಪತಿ ಧರ್ಮಜನ ಎದುರು ನಿಂತು ಹೋರಾಟಕ್ಕೆ ಸಿದ್ಧನಾದನು.
ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರೆಲೈ ತನುತ್ರ ರಥಂಗಳಿಲ್ಲೆಮಗೆ |
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ ||೫೮
ಪದವಿಭಾಗ-ಅರ್ಥ: ಎಸು((ಹೊರಹೊರಡು ಹೊಡಿ,ಹೊರದೂಡು) ಯುಧಿಷ್ಠಿರ ಹಲಗೆ(ಗುರಾಣಿ) ಖಡ್ಗವ ಕುಸುರಿದು+ ಅರಿಯಾ(ತಿಳಿದಿಲ್ಲವೇ), ಚಾಪವಿದ್ಯಾ(ಬಿಲ್ಲವಿದ್ಯೆಯಲ್ಲಿ) ಕುಶಲನೆಂಬರೆಲೈ; ತನುತ್ರ(ಕವಚ) ರಥಂಗಳು+ ಇಲ್ಲ+ ಎಮಗೆ; ಅಸುವ(ಪ್ರಾಣ) ತಡೆವರೆ(ಉಳಿಸಲು) ರಣಪಲಾಯನವ(ಯುದ್ಧಭೂಮಿಯಿಂದ ಓಡುವುದು)+ ಎಸೆವುದೇ ಕ್ಷತ್ರಿಯರಿಗೆ+ ಅತಿಸಾಹಸಿಕನು+ ಆದಡೆ ನಿಲ್ಲೆನುತ ಮೂದಲಿಸಿದನು ಶಲ್ಯ.
ಅರ್ಥ:ಶಲ್ಯನು ರಥಸಾರಥಿಗಳನ್ನು ಕಳೆದುಕೊಂಡು,ಗುರಾಣಿ,ಖಡ್ಗ ಹಿಡಿದು ಎದುರುಬಂದವರನ್ನೆಲ್ಲಾ ಸೋಲಿಸಿ ಧರ್ಮಜನ ಎದುರು ನಿಂತು,'ಯುಧಿಷ್ಠಿರನೇ ಗುರಾಣಿ ಖಡ್ಗವ ಚಮತ್ಕಾರವನ್ನು ತಿಳಿದಿಲ್ಲವೇ?, ನಿನಗೆ ಬಿಲ್ಲುವಿದ್ಯೆಯಲ್ಲಿ ಕುಶಲನೆಂಬರು; ಎಲೈ ಧರ್ಮಜಾ, ನಮಗೆ ಕವಚ ರಥಗಳು ಇಲ್ಲ; ಪ್ರಾಣ ಉಳಿಸಿಕೊಳ್ಳಲು ಯುದ್ಧಭೂಮಿಯಿಂದ ಓಡುವುದೇ? ಇಲ್ಲ. ಯುದ್ಧಮಾಡುವುದೇ ಕ್ಷತ್ರಿಯರಿಗೆ ಧರ್ಮ; ನೀನು ಅತಿ ಸಾಹಸಿಯಾದರೆ ಯುದ್ಧಕ್ಕೆ (ಖಡ್ಗ ಹಿಡಿದು)ನಿಲ್ಲು,'ಎನ್ನತ್ತಾ ಧರ್ಮಜನನ್ನು ಶಲ್ಯನು ಮೂದಲಿಸಿದನು.
ಅಕಟಕಟ ಧರ್ಮಜನನೀ ಕಂ
ಟಕಕೆ ಕೈವರ್ತಿಸಿದರೇ ಪಾ
ತಕರು ಪಾಂಡವರೆನುತ ಕುರುಬಲವೆಲ್ಲ ಸಮತಳಿಸೆ |
ವಿಕಟರೋಷಶಿಖಿಸ್ಫುಲಿಂಗ
ಪ್ರಕಟ ಭೀಷಣಸಹಿತ ಕೌಕ್ಷೇ (ಕತ್ತಿ,ಖಡ್ಗ)
ಯಕವ ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ || ೫೯ ||
ಪದವಿಭಾಗ-ಅರ್ಥ:ಅಕಟಕಟ ಧರ್ಮಜನನು+ ಈ ಕಂಟಕಕೆ ಕೈವರ್ತಿಸಿದರೇ, ಪಾತಕರು ಪಾಂಡವರು+ ಎನುತ ಕುರುಬಲವೆಲ್ಲ ಸಮತಳಿಸೆ ವಿಕಟ ರೋಷಶಿಖಿ ಸ್ಫುಲಿಂಗ+ ಪ್ರಕಟ ಭೀಷಣ ಸಹಿತ ಕೌಕ್ಷೇಯಕವ (ಕತ್ತಿ,ಖಡ್ಗ) ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ
ಅರ್ಥ:ಹೀಗೆ ಖಡ್ಗವನ್ನು ಹಿಡಿದು ಶಲ್ಯನು ಧರ್ಮಜನ ಮೇಲೆ ಆಕ್ರಮಣ ಮಾಡಲು ಸಿದ್ಧನಾದಾಗ, ಅಕಟಕಟ ಧರ್ಮಜನನ್ನು ಈ ಕಂಟಕಕ್ಕೆ ನೂಕಿದರೇ? ಪಾಂಡವರು ಪಾತಕರು ಎನ್ನುತ್ತಾ ಶತ್ರುಯಗಳಾದ ಕುರುಸೇನೆಯವರೆಲ್ಲ ಸಮತಳಿಸಿ ಕೋಗಿದರು. ಆಗ ಕೂಡಲೆ ಅತಿಯಾದ ರೋಷದ ಬೆಂಕಿಯ ಕಿಡಿಗಳನ್ನು ಹೊರಸೂಸಯತ್ತಾ ಭೀಮನು ನುಗ್ಗಿಬಂದು, ಶಲ್ಯನ ಭೀಷಣವಾದ/ಭಯಂಕರವಾದ ಖಡ್ಗವನ್ನು ಖಂಡಿಸಿ, ಭೂಮಿಯೇ ಬಿರಿಯುವಂತೆ ಬೊಬ್ಬಿರಿದನ.
ಲೇಸ ಮಾಡಿದೆ ಭೀಮ ಕಟ್ಟಾ
ಳೈಸಲೇ ನೀನವರೊಳಗೆ ನಿ
ನ್ನಾಸೆಯಲ್ಲಾ ಧರ್ಮಪುತ್ರನ ಸತ್ವಸಂಪದಕೆ |
ಐಸೆ ಬಳಿಕೇನೆನುತ ಶಲ್ಯಮ
ಹೀಶ ಮುರಿಯಲು ಹೊಸ ರಥವ ಮೇ
ಳೈಸಿ ಸಾರಥಿ ಸಂಧಿಸಿದನವಧಾನ ಜೀಯೆನುತ || ೬೦ ||
ಪದವಿಭಾಗ-ಅರ್ಥ: ಲೇಸ ಮಾಡಿದೆ ಭೀಮ, ಕಟ್ಟಾಳೈಸಲೇ ನೀನು+ ಅವರೊಳಗೆ, ನಿನ್ನಾಸೆಯಲ್ಲಾ ಧರ್ಮಪುತ್ರನ ಸತ್ವಸಂಪದಕೆ ಐಸೆ ಬಳಿಕ+ ಏನೆನುತ ಶಲ್ಯಮಹೀಶ ಮುರಿಯಲು ಹೊಸ ರಥವ ಮೇಳೈಸಿ ಸಾರಥಿ ಸಂಧಿಸಿದನು+ ಅವಧಾನ ಜೀಯೆನುತ
ಅರ್ಥ:ಶಲ್ಯನು ತನ್ನ ಆಯುಧವನ್ನು ಮುರಿದ ಭೀಮನನ್ನು ಕುರಿತು,'ಒಳ್ಲೆಯ ಕೆಲಸ ಮಾಡಿದೆ, ಭೀಮ. ಅವರೊಳಗೆ ನೀನು ನಿಜಕ್ಕೂ ಕಟ್ಟಾಳೇ ಸರಿ,' ಎಂದನು. ' ಧರ್ಮಪುತ್ರನ ಸತ್ವಸಂಪದಕೆ ತರುವುದು ನಿನ್ನ ಆಸೆಯಲ್ಲವೇ? ಅದು ಸರಿ. ಆದರೆ ಈ ಬಳಿಕ ಏನು? ಎನ್ನುತ್ತಾ ಶಲ್ಯಮಹೀಶನು ತನ್ನ ರಥ, ಕತ್ತಿ ಮುರಿಯಲು, ಹೊಸ ರಥವನ್ನು ಸಿದ್ಧಪಡಿಸಿ ಸಾರಥಿಯನ್ನು ಹೊಂದಿಸಿಕೊಂಡು, ಕೌರವನಿಗೆ ಅವಧಾನ- ಎಚ್ಚರ! ಜೀಯ; ಎನ್ನುತ್ತಾ ಧರ್ಮಜನನ್ನು ಯುದ್ಧಕ್ಕೆ ಸಂಧಿಸಿದನು.
ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ |
ಪೃಥೆಯ ಮಕ್ಕಳ ರಣಪರಾಕ್ರಮ
ವೃಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ್ಮಜನ || ೬೧ ||
ಪದವಿಭಾಗ-ಅರ್ಥ:ಶಲ್ಯನು ರಥಕ್ಕೆ ಬಂದು ಪಸಾಯವನು(ಉಡುಗೊರೆ, ಸಂಭಾವನೆ) ಸಾರಥಿಗೆ ಕೊಟ್ಟನು ಚಾಪಶರವನು(ಬಿಲ್ಲು ಬಾಣಗಳನ್ನು) ರಥದೊಳಗೆ ತುಂಬಿದನು. ನಂಬಿಸಿದನು ಸುಯೋಧನನ, ಪೃಥೆಯ(ಕುಂತಿ) ಮಕ್ಕಳ ರಣ ಪರಾಕ್ರಮವೃಥೆ ಕಣಾ, ಕರ್ಣಾದಿ ಸುಭಟ ವ್ಯಥೆಯ ನಿಲಿಸುವೆನು+ ಎನುತ ಮೂದಲಿಸಿದನು ಧರ್ಮಜನ.
ಅರ್ಥ:ಶಲ್ಯನು ರಥಕ್ಕೆ ಬಂದು ಸಾರಥಿಗೆ ಉಡುಗೊರೆ, ಸಂಭಾವನೆಗಳನ್ನು ಕೊಟ್ಟನು. ಬಿಲ್ಲು ಬಾಣಗಳನ್ನು ರಥದೊಳಗೆ ತುಂಬಿದನು. ಸುಯೋಧನನ್ನು ಕುಂತಿಯ ಮಕ್ಕಳ ರಣ ಪರಾಕ್ರಮವು ವೃಥಾ- ಪ್ರಯೋಜನವಿಲ್ಲ ಕಣಾ, ಎಂದು ಹೇಳಿ ನಂಬಿಸಿದನು. ತಾನು (ಧರ್ಜನನ್ನು ಕೊಂದು) ಕರ್ಣ ಮೊದಲಾದ ಸುಭಟರು ಸತ್ತ ವ್ಯಥೆಯನ್ನು ನಿಲ್ಲಿಸುವೆನು ಎಂದು ಹೇಳಿ ಅವನು ಧರ್ಮಜನನ್ನು ಮೂದಲಿಸಿದನು.
ಸಾರಥಿಗೆ ಸೂಚಿಸಿ ನೃಪಾಲನ
ಸಾರೆ ದುವ್ವಾಳಿಸಲು ಮಿಗೆ ನೃಪ
ನೋರೆಗೊಂಡನು ತಿರುಗೆ ತಿರುಗಿದನೊಲೆದೊ(ನೊಲೆದು)|
ಚೂರಿಸುವ ನಾರಾಚವಿಕ್ರಮ
ದೋರಣೆಗೆ ನಾರಾಚಿಸಿತು ವಿ
ಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ || ೬೨ ||
ಪದವಿಭಾಗ-ಅರ್ಥ: ಸಾರಥಿಗೆ ಸೂಚಿಸಿ ನೃಪಾಲನ ಸಾರೆ ದುವ್ವಾಳಿಸುಲು(ತೀವ್ರಗತಿ, ನಾಗಾಲೋಟ), ಮಿಗೆ ನೃಪ ನೋರೆಗೊಂಡನು ತಿರುಗೆ ತಿರುಗಿದನು+ ಒಲೆದನು (+ ಒಲೆದು) ಚೂರಿಸುವ(ಚುಚ್ಚುವ? ಚೂರಿ+ ಇಸುವ ಸಣ್ಣ ಕತ್ತಿಯಿಂದ ಹೊಡೆಯುವ?) ನಾರಾಚ(ಉದ್ದವಾದ ಐದುಗರಿಗಳಿಂದ ಕೂಡಿಕೊಂಡಿರುವ ಒಂದು ಬಗೆಯ ಬಾಣ, ಈಟಿ) ವಿಕ್ರಮ ದೋರಣೆಗೆ ನಾರಾಚಿಸಿತು (ಬಿಲ್ಲು ಬಾಣಗಳ ವಿದ್ಯೆಯನ್ನು ತೋರಿಸು) ವಿಸ್ತಾರದಲಿ ವಿಸ್ತರಿಸಿದನು ಜಯಸಮರ ಸಾಹಸವ
ಅರ್ಥ:ಶಲ್ಯನು ಸಾರಥಿಗೆ ಸೂಚಿಸಿ ಧರ್ಮಜ ನೃಪಾಲನ ಬಳಿಗೆ ಸಾರಲು ತೀವ್ರಗತಿಯಿಂದ ಹೋಗಲು ಹೇಳಿದನು. ಹಾಗೆ ಹೋಗಲು ಶಲ್ಯನು ತಿರುಗಲು, ನೃಪಧರ್ಮಜನು ಓರೆಗೊಂಡು ತಪ್ಪಿಸಿ ತಿರುಗಿದನು; ಶಲ್ಯನು ಒಲೆದರೆ, ನೃಪನು ಒಲೆದು ಚೂರಿಸುವ- ಚೂಪಾದ ಉದ್ದವಾದ ಐದುಗರಿಗಳಿಂದ ಕೂಡಿಕೊಂಡಿರುವ ಬಾಣಗಳಿಂದ ಹೊಡೆದನು. ಶಲ್ಯನು ಅದರಿಂದ ತಪ್ಪಸಿಕೊಳ್ಳುವ ವಿಕ್ರಮ- ಪರಾಕ್ರಮದ ದೋರಣೆಗೆ ಒಪ್ಪುವಂತೆ ಬಿಲ್ಲು ಬಾಣಗಳ ವಿದ್ಯೆಯನ್ನು ವಿಸ್ತಾರದಲಿ ವಿಸ್ತರಿಸಿ ಜಯಸಮರ ಸಾಹಸವನ್ನು ತೋರಿಸಿದನು.
ಹಿಂದೆ ಕರ್ಣನು ಫಲುಗುಣನು ಬಳಿ
ಕಿಂದು ಶಲ್ಯಯುಧಿಷ್ಠಿರರು ಸಾ
ನಂದದಲಿ ಸಮತಳಿಸಿ ಕಾದಿದರುಭಯಬಲ ಹೊಗಳೆ |
ಇಂದು ಮಾದ್ರಾಧೀಶ್ವರಗೆ ಯಮ
ನಂದನನು ಯಮಸುತಗೆ ಪಡಿ ತಾ
ಸಂದನೈ ಮಾದ್ರಾಧಿಪತಿಯೆಂದುದು ಭಟಸ್ತೋಮ || ೬೩ ||
ಪದವಿಭಾಗ-ಅರ್ಥ: ಹಿಂದೆ ಕರ್ಣನು ಫಲುಗುಣನು ಬಳಿಕ+ ಇಂದು ಶಲ್ಯ ಯುಧಿಷ್ಠಿರರು ಸಾನಂದದಲಿ(ಚೆನ್ನಾಗಿ) ಸಮತಳಿಸಿ ಕಾದಿದರು+ ಉಭಯಬಲ ಹೊಗಳೆ; ಇಂದು ಮಾದ್ರಾಧೀಶ್ವರಗೆ ಯಮನಂದನನು, ಯಮಸುತಗೆ ಪಡಿ(ಸಮಸಾಟಿ) ತಾಸಂದನೈ ಮಾದ್ರಾಧಿಪತಿಯು+ ಎಂದುದು ಭಟಸ್ತೋಮ(ವೀರರ ಸೇನೆ).
ಅರ್ಥ: ಈ ಯುದ್ಧವನ್ನು ನೋಡುತ್ತಿದ್ದ ವೀರರ ಸೇನೆ,'ಹಿಂದೆ ಕರ್ಣ ಮತ್ತು ಫಲ್ಗುಣರ ಯುದ್ಧ, ಬಳಿಕ ಇಂದು ಶಲ್ಯ ಮತ್ತು ಯುಧಿಷ್ಠಿರರ ಯುದ್ಧ ಚೆನ್ನಾಗಿ ಸಮ- ಸಮವಾಗಿ ಕಾದಾಡಿದರು, ಎಂದು ಎರಡೂ ಸೇನೆಯವರು ಹೊಗಳಲು; ಇಂದು ಮಾದ್ರಾಧೀಶ್ವರ ಶಲ್ಯನಿಗೆ- ಯಮನಂದನ ಧರ್ಮಜನು, ಯಮಸುತ ಧರ್ಮಜನಿಗೆ- ಸಮಸಾಟಿಯಾಗಿ ತಾನು ಮಾದ್ರಾಧಿಪತಿಯು ಸಂದನು- ಒಪ್ಪಿದನು ಎಂದು ಸೇನಾಭಟರ ಸಮೂಹ ಹೊಗಳಿತು.
ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು |
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಟ್ಟನು ಹಸಾದದ ಮಧುರವಚನದಲಿ || ೬೪ ||
ಪದವಿಭಾಗ-ಅರ್ಥ: ಅರಸ ಕೇಳೈ ಕೃಷ್ಣಶಕ್ತಿಸ್ಫುರಣವು+ ಐಸಲೆ; ನಿಮ್ಮ ಬಲ ಸಂಹರಣಕೆ+ ಆವುದು ಬೀಜ? ನಿರ್ದೈವರ ವಿಲಾಸವು+ ಇದು ಹರಿ ಯುಧಿಷ್ಠಿರ ನೃಪನ ನೆಕ್ಕಟಿ(ಪ್ರತ್ಯೇಕ)+ ಗ+ ಕರೆದು ನಿಜಶಕ್ತಿ ಪ್ರಯೋಗವನು+ ಒರೆದಡೆ(ಹೇಳಿದರೆ)+ ಒಡಬಟ್ಟನು(ಒಪ್ಪಿದನು) ಹಸಾದದ ಮಧುರವಚನದಲಿ(ಪ್ರೀತಿಯಿಂದ).
ಅರ್ಥ:ಸಂಜಯನು ಹೇಳಿದ,'ಅರಸನೇ ಕೇಳಯ್ಯಾ, ಪಾಂಡವರಿಗೆ ಕೃಷ್ಣಶಕ್ತಿಸ್ಫುರಣವು ಇದೆಯಲ್ಲವೇ, ನಿಮ್ಮ ಬಲವನ್ನು (ಸಂಹಾರ) ಸಂಹರಣಮಾಡಲು. ಈ ಸೋಲು ಸಂಹಾರಕ್ಕೆ ಯಾವುದು ಬೀಜ? ನಿರ್ದೈವರ- ದೈವ ಬಲವಿಲ್ಲದವರ ವಿಲಾಸವು ಇದು- ನಿಮ್ಮದು. ಕೃಷ್ಣನು ಯುಧಿಷ್ಠಿರ ನೃಪನನ್ನು ಪ್ರತ್ಯೇಕ ಕರೆದು ಧರ್ಮಜನಲ್ಲಿದ್ದ ಶಕ್ತಿಆಯುಧವನ್ನು ಪ್ರಯೋಗಿಸಲು ಹೇಳಿದರೆ ಅವನು ಅದಕ್ಕೆ ಅವನು 'ಹಸಾದ'/ನಿಮ್ಮ ಪ್ರಸಾದ- ಆಶಿರ್ವಾದ ಎಂದು ಮಧುರ ವಚನದಲ್ಲಿ- ಪ್ರೀತಿಯಿಂದ ಒಪ್ಪಿದನು.
ಆಯಿದನು ಶಸ್ತ್ರಾಸ್ತ್ರದಲಿ ದಿ
ವ್ಯಾಯುಧವನರೆಬಳಿದ ವರ ತಪ
ನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ |
ಬಾಯಿಧಾರೆಯ ತೈಲಲೇಪನ
ದಾಯತದ ಚೌರಿಗಳ ರಿಪುಭಟ
ನಾಯುಷದ ಕಡೆವಗಲ ಭುಕ್ತಿಯ ಶಕ್ತಿಯನು ನೃಪತಿ || ೬೫ ||
ಪದವಿಭಾಗ-ಅರ್ಥ: ಆಯಿದನು(ಆರಿಸಿಕೊಂಡನು) ಶಸ್ತ್ರಾಸ್ತ್ರದಲಿ ದಿವ್ಯಾಯುಧವನು+ ಅರೆಬಳಿದ(ಲೇಪಿಸಿದ) ವರ ತಪನೀಯ(ಸುಡುವ) ರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ ಬಾಯಿಧಾರೆಯ(ಹರಿತವಾದ ಬಾಯಿಯುಳ್ಳ) ತೈಲಲೇಪನದ+ ಆಯತದ(ಉಚಿತವಾದ) ಚೌರಿಗಳ ರಿಪುಭಟನ+ ಆಯುಷದ ಕಡೆವಗಲ ಭುಕ್ತಿಯ(ಭೋಜನ, ತಿನ್ನುವ) ಶಕ್ತಿಯನು ನೃಪತಿ(ಧರ್ಮಜ).
ಅರ್ಥ:ನೃಪತಿ ಧರ್ಮಜನು ರಥದಲ್ಲಿದ್ದ ಶಸ್ತ್ರಾಸ್ತ್ರಗಳಲ್ಲಿ ದಿವ್ಯಾಯುಧವನ್ನು ಆರಿಸಿಕೊಂಡನು. ಅದು ಅರೆಬಳಿದ ಉತ್ತಮ ಸುಡುವ ರೇಖೆಯುಳ್ಳದ್ದು, ಕುಣಿವ ಚಿಕ್ಕಗಂಟೆಯನ್ನು ಹೊಳೆಯುವ ಹೊಂಗರಿಯನ್ನೂ, ಎಣ್ಣೆ ಹಚ್ಚಿದ ಹರಿತವಾದ ಬಾಯಿಧಾರೆಯುಳ್ಳ ಉಚಿತವಾದ ಚೌರಿಗಳಿಂದ ಅಲಂಕೃತವಾದ, ಶತ್ರುಭಟನ ಆಯುಷ್ಯದ ಕಡೆಯ ಹಗಲನ್ನು ತಿನ್ನುವ ಶಕ್ತಿ ಆಯುಧವು. ಅದನ್ನು ಧರ್ಮಜನು ಆರಿಸಿಕೊಂಡನು.
ತುಡುಕಿದನು ಹೊಸರವಿಯ ತೇಜದ
ದಡಿಯನುಗಿದಂದದಲಿ ಹೊಳೆ ಹೊಳೆ
ವುಡುನಿಕರವುಚ್ಚಳಿಪವೊಲು ಮಣಿಮಯದ ಕಾಂತಿಗಳ |
ಕುಡಿಮೊನೆಯ ಪಡಿಮುಖದಲೊದರುವ
ಕಿಡಿಯ ಘಂಟಾರವದ ರಭಸದ
ಝಡಪದಲಿ ಜೋಡಿಸಿದ ಶಕ್ತಿಯಲಿಟ್ಟನವನೀಶ || ೬೬ ||
ಪದವಿಭಾಗ-ಅರ್ಥ: ತುಡುಕಿದನು(ಸೆಳೆದುಕೊಂಡನು) ಹೊಸರವಿಯ(ಉದಯ ರವಿ) ತೇಜದ ದಡಿಯನು(ಕೋಲು, ಬಡಿಗೆ)+ ಉಗಿದ+ ಅಂದದಲಿ(ರೀತಿಯಲ್ಲಿ) ಹೊಳೆ ಹೊಳೆವ+ ಉಡುನಿಕರವ+ ಉಚ್ಚಳಿಪವೊಲು ಮಣಿಮಯದ ಕಾಂತಿಗಳ ಕುಡಿಮೊನೆಯ ಪಡಿಮುಖದಲಿ+ ಒದರುವ ಕಿಡಿಯ ಘಂಟಾರವದ(ರವ- ಸದ್ದು) ರಭಸದ ಝಡಪದಲಿ(ಒತ್ತಾಗಿ?) ಜೋಡಿಸಿದ ಶಕ್ತಿಯಲಿ+ ಇಟ್ಟನು(ಹೊಡೆದನು)+ ಅವನೀಶ(ಧರ್ಮಜ)
ಅರ್ಥ:ಧರ್ಮಜನು ಬಡಿಗೆಯನ್ನು ಸೆಳೆದುಕೊಳ್ಳುವ ರೀತಿಯಲ್ಲಿ ರಥದಲ್ಲಿದ್ದ ಶಕ್ತ್ಯಾಯಧವನ್ನು ಸೆಳೆದುಕೊಂಡನು. ಉದಯಿಸುವ ಸೂರ್ಯನ ತೇಜಸ್ಸಿನಿಂದ ಕೂಡಿದ ಹೊಳೆ ಹೊಳೆಯುತ್ತಿರುವ ನಕ್ಷತ್ರಗಳ ಗುಚ್ಚದಂತಿರುವ ಮಣಿಮಯವಾದ ಕಾಂತಿಗಳುಳ್ಳ ಚೂಪಾದಮೊನೆಯ ಎದುರುಮುಖದಲ್ಲಿ ಕಿಡಿಗಳನ್ನು ಸುರಿಸುವ, ಘಂಟೆಯ ಸದ್ದುಮಾಡುವ ರಭಸದ ಝಡಪದಲ್ಲಿ ಜೋಡಿಸಿದ ಆ ಶಕ್ತಿಯ ಆಯುಧದಲ್ಲಿ ಶಲ್ಯನಿಗೆ ಹೊಡೆದನು.
ಇದಿರೊಳೆಚ್ಚನು ಶಲ್ಯನಂಬಿನ
ಹೊದೆ ಸವೆಯೆ ಹರಿತಪ್ಪ ಶಕ್ತಿಯ
ತುದಿಗೆ ಕಬಳಗ್ರಾಸವಾದುದಲೈ ವಿಚಿತ್ರವಲಾ |
ಹೊದರುಗಿಡಿಗಳ ಕೇಸುರಿಯ ಹಾ
ರದಲಿ ಹರಿತಂದಹಿತ ದಳಪತಿ (೬೭
ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ || ೬೭ ||
ಪದವಿಭಾಗ-ಅರ್ಥ: ಇದಿರೊಳು+ ಎಚ್ಚನು ಶಲ್ಯನ+ ಅಂಬಿನ ಹೊದೆ(ರಾಶಿ) ಸವೆಯೆ(ಇಲ್ಲವಾಗಲು), ಹರಿತಪ್ಪ(ಬರುತ್ತಿರುವ) ಶಕ್ತಿಯತುದಿಗೆ ಕಬಳಗ್ರಾಸವಾದುದಲೈ(ಕಬಳಗ್ರಾಸ- ಊಟ. ಆಹಾರ) ವಿಚಿತ್ರವಲಾ ಹೊದರು(ಗುಂಪು ಗುಚ್ಛ)+ ಗಿ+ ಕಿಡಿಗಳ ಕೇಸುರಿಯ ಹಾರದಲಿ ಹರಿತಂದ+ ಅಹಿತ(ಶತ್ರು) ದಳಪತಿಯ+ ಎದೆಯನು+ ಒದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ.
ಅರ್ಥ:ಶಲ್ಯನು ಬಿಟ್ಟ ಬಾಣಗಳ ರಾಶಿ ಧರ್ಮಜನಿಂದ ನಾಶವಾಗಲು, ಧರ್ಮಜನು ಇದಿರಿನಲ್ಲಿದ್ದ ಶಲ್ಯನಿಗೆ ಶಕ್ತ್ಯಾಯುಧದಿಂದ ಹೊಡೆದನು. ಅವನು ಹೊಡೆದಾಗ ಶಲ್ಯನ ಕಡೆ ನುಗ್ಗಿಬಂದ ಶಕ್ತಿಯತುದಿಗೆ ಶಲ್ಯನು ಊಟದ ತುತ್ತಾದನು. ಶಲ್ಯನು ಶಕ್ತ್ಯಾಯುಧಕ್ಕೆ ಬಲಿಯಾದುದು ವಿಚಿತ್ರವೇಸರಿ. ಹೊದರುಕಿಡಿಗಳಿಂದ ಕೂಡಿ ಕೆಂಪು ಹಾರದಹಾಗೆ ವೇಗವಾಗಿ ನುಗ್ಗಿಬಂದ ಆಯುಧ ಶತ್ರುದಳಪತಿ ಶಲ್ಯನ ಎದೆಯನ್ನು ಒದ್ದು ಕೆಡವಿ ಮುಂದುವರಿದು ನಾಲ್ಕು ಮುಷ್ಟಿಯಷ್ಟು ಆಳಕ್ಕೆ ನೆಲಕ್ಕೆ ನೆಟ್ಟಿತು.
ಕಾರಿದನು ರುಧಿರವನು ಧರಣಿಗೆ
ಹಾರಿ ಬಿದ್ದನು ಮಾದ್ರಪತಿಯೆದೆ
ಡೋರಿನಲಿ ಡಾವರಿಸಿದವು ರಕ್ತಾಂಬುಧಾರೆಗಳು |
ಮೀರಿತಸು ಕಂಠವನು ನಾಸಿಕ
ಕೇರಿದುದು ನಿಟ್ಟುಸುರು ನಿಮಿಷಕೆ
ಚೀರಿದುದು ಕುರುರಾಯದಳ ಶಲ್ಯಾವಸಾನದಲಿ || ೬೮ ||
ಪದವಿಭಾಗ-ಅರ್ಥ: ಕಾರಿದನು ರುಧಿರವನು(ರಕ್ತವನ್ನು) ಧರಣಿಗೆ(ನೆಲಕ್ಕೆ) ಹಾರಿ ಬಿದ್ದನು ಮಾದ್ರಪತಿಯ+ ಎದೆ ಡೋರಿನಲಿ(ಡೊಗರು ) ಡಾವರಿಸಿದವು( ಆವರಿಸು) ರಕ್ತಾಂಬು ಧಾರೆಗಳು(ಅಂಬು- ನೀರು) ಮೀರಿತು+ ಅಸು(ಪ್ರಾಣ) ಕಂಠವನು ನಾಸಿಕಕೆ (ಮೂಗಿಗೆ)+ ಏರಿದುದು ನಿಟ್ಟುಸುರು(ಉದ್ದದ ಉಸಿರು ಬಿಟ್ಟು ಪ್ರಾಣಹೋಯಿತು) ನಿಮಿಷಕೆ (ನಿಮಿಷದಲ್ಲಿ- ಸಮಯದಲ್ಲಿ) ಚೀರಿದುದು ಕುರುರಾಯ ದಳ(ಸೇನೆ) ಶಲ್ಯಾ+ ಅವಸಾನದಲಿ.
ಅರ್ಥ:ಶಕ್ತ್ಯಾಯಧದ ಹೊಡೆತಕ್ಕೆ ಶಲ್ಯನು ರಕ್ತವನ್ನು ಕಾರಿದನು; ನೆಲಕ್ಕೆ ಹಾರಿ ಬಿದ್ದನು; ಮಾದ್ರಪತಿಯ ಎದೆ ಡೊಗರಿನಲ್ಲಿ ರಕ್ತ ಜಲದ ಧಾರೆಗಳು ಆವರಿಸಿದವು. ಪ್ರಾಣ ಕಂಠವನ್ನು ಮೀರಿ ಮೂಗಿಗೆ ಏರಿತು, ಉದ್ದದ ಉಸಿರುಬಿಟ್ಟಾಗ ಪ್ರಾಣಹೋಯಿತು. ಆ ಸಮಯದಲ್ಲಿ ಕುರುರಾಯನ ಸೇನೆ ಶಲ್ಯನ ಸಾವನ್ನು ಕಂಡು ದುಃಖದಿಂದ ಚೀರಿತು.

ಶಲ್ಯನ ತಮ್ಮನ ಆಕ್ರಮಣ[ಸಂಪಾದಿಸಿ]

ಅಹಹ ಸೇನಾಪತಿಯ ಮಗ್ಗುಲು
ಮಹಿಗೆ ಬಿದ್ದುದು ಬೆಚ್ಚಿತೀಚೆಯ
ಬಹಳಬಲರಿನ್ನಾರು ಕುರುಸೇನಾಧುರಂಧರರು |
ಮಿಹಿರಸುತ ಗುರು ಭೀಷ್ಮರಲಿ ಸ
ನ್ನಿಹಿತನಾದನು ಶಲ್ಯನೆನೆ ಕಿಂ
ಗಹನವೀ ರಣವೆನುತ ಶಲ್ಯಾನುಜನು ಮಾರಾಂತ || ೬೯ ||
ಪದವಿಭಾಗ-ಅರ್ಥ: ಅಹಹ ಸೇನಾಪತಿಯ ಮಗ್ಗುಲು ಮಹಿಗೆ ಬಿದ್ದುದು, ಬೆಚ್ಚಿತು+ ಈಚೆಯ ಬಹಳ ಬಲರು+ ಇನ್ನಾರು ಕುರುಸೇನಾ ಧುರಂಧರರು ಮಿಹಿರಸುತ(ಸೂರ್ಯನ ಮಗ- ಕರ್ಣ) ಗುರು ಭೀಷ್ಮರಲಿ ಸನ್ನಿಹಿತನಾದನು ಶಲ್ಯನು+ ಎನೆ ಕಿಂ+ ಗಹನವು(ಎಷ್ಟುಒಂದು ಕ್ಲಿಷ್ಟವಾದುದು ಗೊಂದಲವಾದುದು)+ ಈ ರಣವು(ಯುದ್ಧವು)+ ಎನುತ ಶಲ್ಯ+ ಅನುಜನು ಮಾರಾಂತ.
ಅರ್ಥ: ಅಹಹ! ಶಲ್ಯ ಸೇನಾಪತಿಯ ಮಗ್ಗುಲು(ದೇಹ) ಭೂಮಿಗೆ ಬಿದ್ದಿತು, ಈಚೆಯ ಕೌರವಸೇನೆಯು ಬೆಚ್ಚಿತು. ಬಹಳ ಬಲವುಳ್ಳವರು ಕುರುಸೇನೆಯಲ್ಲಿ ಇನ್ನಾರು ಇದ್ದಾರೆ? ಧುರಂಧರರಾದ ಕರ್ಣ, ಗುರುದ್ರೋಣ, ಭೀಷ್ಮರಲ್ಲಿ ಸಮಾನನಾದವನು ಶಲ್ಯನು ಎನ್ನುತ್ತಿರಲು, ಎಷ್ಟೊಂದು ಕ್ಲಿಷ್ಟವಾದುದು ಈ ರಣವು ಎನ್ನತ್ತಾ ಶಲ್ಯನ ತಮ್ಮನು ಪಾಂಡವಸೇನೆಯನ್ನು ಎದುರಿಸಿದನು.
ಗೆಲವು ನಿನಗಾಯ್ತರಸ ಹರಿಬಕೆ
ನಿಲುಕಿದೆನ್ನನು ಸಂತವಿಸಿ ನಿಜ
ಬಲದಲೊಸಗೆಯ ಮಾಡಿಸಾ ಮಾದ್ರೇಶಮಾರಣವ |
ಅಳುಕದಿದಿರಾಗೆನುತ ಬಾಣಾ
ವಳಿಯ ತವಿಸೆ ನಿರಂತರಾಸ್ತ್ರದ
ಜಲನಿಧಿಗೆ ವಡಬಾಗ್ನಿಯಾದನು ನಗುತ ಯಮಸೂನು || ೭೦ ||
ಪದವಿಭಾಗ-ಅರ್ಥ: ಗೆಲವು ನಿನಗಾಯ್ತು+ ಅರಸ, ಹರಿಬಕೆ(ಕರ್ತವ್ಯ, ಹೊಣೆಗಾರಿಕೆ, ಕಾಳಗ) ನಿಲುಕಿದ+ ಎನ್ನನು ಸಂತವಿಸಿ ನಿಜ ಬಲದಲಿ+ ಒಸಗೆಯ(ಹಬ್ಬದೂಟ) ಮಾಡಿಸು+ ಆ ಮಾದ್ರೇಶ ಮಾರಣವ ಅಳುಕದೆ(ಹೆದರದೆ)+ ಇದಿರಾಗು+ ಎನುತ ಬಾಣಾವಳಿಯ ತವಿಸೆ(ಅಪ್ಪು, ಆಲಂಗಿಸು) ನಿರಂತರ+ ಅಸ್ತ್ರದ ಜಲನಿಧಿಗೆ(ಸಮುದ್ರ) ವಡಬಾಗ್ನಿಯಾದನು ನಗುತ ಯಮಸೂನು.
ಅರ್ಥ:ಶಲ್ಯನ ತಮ್ಮನು ಧರ್ಮಜನಿಗೆ,'ಅರಸನೇ, ನಿನಗೆ ಅಣ್ನನಮೇಲೆ ಗೆಲುವಾಯಿತು. ಕಾಳಗಮಾಡಬೇಕಾದ ಕರ್ತವ್ಯಕ್ಕೆ ನಿಲುಕಿರುವ ನನ್ನನ್ನು ಯುದ್ಧದಲ್ಲಿ ಸಮಾಧಾನ ಪಡಿಸಿ ನಿನ್ನ ಸೇನೆಯಲ್ಲಿ ಆ ಮಾದ್ರೇಶ ಶಲ್ಯನ ಮಾರಣದ ಹಬ್ಬದೂಟ ಮಾಡಿಸು. ಹೆದರದೆ ಎದುರು ನಿಲ್ಲು,'ಎನ್ನುತ್ತಾ ಬಾಣಗಳ ಮಳೆಯನ್ನು ಧರ್ಮಜನ ಮೇಲೆ ಸುರಿಸಿ ಮುಚ್ಚಿದನು. ಆ ನಿರಂತರ ಅಸ್ತ್ರದ ಸಮುದ್ರಕ್ಕೆ ಯಮಸೂನು ನಗುತ ಬಡಬಾಗ್ನಿಯಾದನು, ಬೆಂಕಿಯಾದನು.
ಆತನಸ್ತ್ರವ ಮುರಿಯೆಸುತ ರಥ
ಸೂತ ಹಯವನು ತರಿದು ಬಾಣ
ವ್ರಾತದಲಿ ಶಲ್ಯಾನುಜನ ಹೂಳಿದನು ಹರಹಿನಲಿ |
ಈತನನು ಕೆಡಹಿದನು ಸಾಲ್ವಮ
ಹೀತಳಾಧಿಪನವನ ಹರಿಬಕೆ
ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ || ೭೧ ||
ಪದವಿಭಾಗ-ಅರ್ಥ:ಆತನ+ ಅಸ್ತ್ರವ ಮುರಿಯೆ+ ಎಸುತ(ಹೊಡೆದು) ರಥ, ಸೂತ, ಹಯವನು ತರಿದು(ಕಡಿದು) ಬಾಣವ್ರಾತದಲಿ(ವ್ರಾತ- ಸಮೂಹ) ಶಲ್ಯಾನುಜನ ಹೂಳಿದನು ಹರಹಿನಲಿ(ವಿಸ್ತಾರದಲ್ಲಿ), ಈತನನು ಕೆಡಹಿದನು ಸಾಲ್ವ ಮಹೀತಳಾಧಿಪನು(ರಾಜ)+ ಅವನ ಹರಿಬಕೆ ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ(ದೇವತೆಗಳ ಸಮೂಹ)
ಅರ್ಥ:ಧರ್ಮಜನು ಶಲ್ಯನ ತಮ್ಮನ ಅಸ್ತ್ರಗಳನ್ನು ಮುರಿದು ನಾಶಪಿಸಿ, ಮತ್ತೆ ಬಾಣಗಳಿಂದ ಹೊಡೆದು ಅವನ ರಥ, ಸಾರಥಿ, ಕುದುರೆಗಳನ್ನು ಕಡಿದು, ಬಾಣಗಳ ಸಮೂಹಹದಲ್ಲಿ ಶಲ್ಯಾನುಜನನ್ನು ಸಂಪೂರ್ಣವಾಗಿ ಮುಚ್ಚಿದನು, ಮತ್ತು ಈತನನ್ನು ಕೊಂದು ಕೆಡವಿದನು. ಸಾಲ್ವ ರಾಜನು ಅವನ ಸಹಾಯಕ್ಕೆ ಬಂದು ಭೂತಳೇಶ ಧರ್ಮನನ್ನು ಕೆಣಕಿ ಶ್ರೇಷ್ಠ ದೇವಲೋಕದ ವಾಸಿಗರನ್ನು ಕಂಡನು, ಸತ್ತು ಸ್ವರ್ಗಕ್ಕೆ ಹೋದನು.
ಆರಿ ಹೊಕ್ಕುದು ಶಲ್ಯನೃಪಪರಿ
ವಾರ ಮಾದ್ರದ ನಾಯಕರು ಜು
ಜ್ಜಾರ ಮನ್ನೆಯ ಮಂಡಳಿಕ ಸಾಮಂತಸಂದೋಹ |
ಭೂರಿಬಲ ಸಾಲ್ವನ ಭಟಾವಳಿ
ಯಾರುಭಟೆಯಲಿ ನೂಕಿದುದು ವಿ
ಸ್ತಾರಿಸಿತಲೈ ಧರ್ಮನಂದನನೊಡನೆ ಬಲುಸಮರ || ೭೨ ||
ಪದವಿಭಾಗ-ಅರ್ಥ: ಆರಿ(ಆರು- ಕೂಗು, ಆರ್ಭಟಿಸಿ) ಹೊಕ್ಕುದು ಶಲ್ಯನೃಪ ಪರಿವಾರ ಮಾದ್ರದ ನಾಯಕರು ಜುಜ್ಜಾರ ಮನ್ನೆಯ(ಜುಜ್ಜಾರ-ಯುವಕ? ಜರ್ಜರಿತ? , ಮನ್ನೆಯ- ಹೆಸರುವಾಸಿ) ಮಂಡಳಿಕ ಸಾಮಂತ ಸಂದೋಹ, ಭೂರಿಬಲ ಸಾಲ್ವನ ಭಟಾವಳಿಯ+ ಆರುಭಟೆಯಲಿ ನೂಕಿದುದು ವಿಸ್ತಾರಿಸಿತಲೈ ಧರ್ಮನಂದನನೊಡನೆ ಬಲುಸಮರ.
ಅರ್ಥ:ನಂತರ,ಕೌರವಸೇನೆಯ ಶಲ್ಯನೃಪನ ಪರಿವಾರ, ಮಾದ್ರದೇಶದ ನಾಯಕರು, ಆರ್ಭಟಿಸಿ ಹೊಕ್ಕುಪಾಂಡವ ಸೇನೆಯನ್ನು ಹೊಕ್ಕರು. ಜೊತೆಗೆ ಯುವಕರಾದ ಹೆಸರುವಾಸಿ ಮಂಡಳಿಕರು, ಸಾಮಂತ ರಾಜರ ಸಮೂಹ,ದೊಡ್ಡಸೇನೆ ಮತ್ತು ಸಾಲ್ವನ ಭಟರ ಸೈನ್ಯ ಆರ್ಭಟದಿಂದ ಮುಂದೆ ನುಗ್ಗಿತು. ಹೀಗೆ ಧರ್ಮನಂದನನೊಡನೆ ದೊಡ್ಡಸಮರ ವಿಸ್ತರಿಸಿತು.

ಕೌರವನ ಆಟಾಟೋಪ[ಸಂಪಾದಿಸಿ]

ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ |
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ಯೆನುತ ಹೊಕ್ಕನು ಲಳಿಯ ಲಗ್ಗೆಯಲಿ || ೭೩ ||
ಪದವಿಭಾಗ-ಅರ್ಥ:ಕೇಳಿದನು ಕುರುರಾಯ ಮಾದ್ರನೃಪಾಲನ+ ಅವಸಾನವನು, ಕರಸಿದನು+ ಆಳು(ಸೈನಿಕ) ಕುದುರೆಯ ರಥ ಮದೋತ್ಕಟ ಗಜಘಟಾವಳಿಯ, ಮೇಳವದ ಮೋಡಿಯಲಿ ರಥ ದುವ್ವಾಳಿಸುತು(ತೀವ್ರಗತಿ, ವೇಗವಾದ ನಡೆ) ಫಡ ಪಾಂಡುತನುಜರ ಸಾಲ ಹೊಯ್ ಹೊಯ್ಯೆ+ ಎನುತ ಹೊಕ್ಕನು ಲಳಿಯ(ಗುಂಪುಕಟ್ಟು; ಗುಂಪು ಸೇರು) ಲಗ್ಗೆಯಲಿ(ಮುತ್ತಿಗೆ, ಧಾಳಿ).
ಅರ್ಥ: ಕುರುರಾಯ- ಕೌರವನು ಮಾದ್ರನೃಪಾಲ ಶಲ್ಯನ ಸಾವಿನ ವಿಚಾರವನನು ಕೇಳಿದನು. ಸೈನಿಕನ್ನೂ ಕುದುರೆಯ ರಥ ಮದವೇರಿದ ಗಜಗಲ ಸಮೂಹವನ್ನು ಕರಸಿದನು; ಮೇಳವದ- ಒಗ್ಗಟ್ಟಾಗಿ ಕೂಡಿಕೊಂಡ ಮೋಡಿಯಲ್ಲಿ ರಥಗಳು ತೀವ್ರಗತಿಯಲ್ಲಿ ಓಡಿದವು. ಫಡ! ಪಾಂಡವರ ಸಾಲನ್ನು- ಸೇನಯನ್ನು ಹೊಯ್ ಹೊಯ್ಯೆ- ಹಡಿ ಹೊಡಿ ಎನ್ನುತ್ತಾ, ಹೊಕ್ಕನು ಗುಂಪಾಗಿ ಒಗ್ಗೂಡಿ ಧಾಳಿಯಿಟ್ಟವು.
ರಾಯನೊಡನೆ ಸಮಸ್ತ ಬಲವಡು
ಪಾಯಲೌಕಿತು ಪಾರ್ಥ ಸಾತ್ಯಕಿ
ವಾಯುಸುತರಾಚೆಯಲಿ ಮೇಳೈಸಿತ್ತು ನೃಪಸೇನೆ |
ಸಾಯಕದ ಸೂಠಿಗಳ ಸಬಳದ
ಪಾಯದಳ ರಥ ವಾಜಿ ಗಜಘಟೆ
ಲಾಯಶುದ್ಧದ ತೇಜಿ ಹೊಕ್ಕವು ವಾಘೆಸರಿಸದಲಿ || ೭೪ ||
ಪದವಿಭಾಗ-ಅರ್ಥ: ರಾಯನೊಡನೆ ಸಮಸ್ತ ಬಲವು+ ಅಡುಪಾಯಲಿ(ಅಡುಪಾಯ- ಸೆಣಸಾಟ)+ ಔಕಿತು, ಪಾರ್ಥ ಸಾತ್ಯಕಿ ವಾಯುಸುತರು+ ಆಚೆಯಲಿ ಮೇಳೈಸಿತ್ತು ನೃಪಸೇನೆ, ಸಾಯಕದ(ಕತ್ತಿ, ಖಡ್ಗ) ಸೂಠಿಗಳ(ಶೂರರ) ಸಬಳದ (ದೊಡ್ಡ ಈಟಿ, ಭರ್ಜಿ) ಪಾಯದಳ(ರಾಜನ ಕಾವಲುದಳ) ರಥ ವಾಜಿ(ಕುದುರೆ) ಗಜಘಟೆ ಲಾಯಶುದ್ಧದ ತೇಜಿ(ಲಾಯದಿಂದ ಬಂದ ಶುದ್ಧ ವೇಗದ ಕುದುರೆಗಳು ) ಹೊಕ್ಕವು ವಾಘೆ(ಲಗಾಮು, ಕಡಿವಾಣ) ಸರಿಸದಲಿ(ಅನುಸರಿಸಿ ನಡೆಯಲ್ಲಿ, ಸಾಲಾಗಿ)
ಅರ್ಥ: ಕೌರವರಾಯನೊಡನೆ ಅವನ ಸಮಸ್ತ ಸೇನೆಯೂ, ಹೋರಾಟ ಸೆಣಸಾಟಗಳಲ್ಲಿ ನುಗ್ಗಿದವು. ಪಾರ್ಥ, ಸಾತ್ಯಕಿ, ವಾಯುಸುತ- ಭೀಮರು ಆಚೆಯ ಸೇನೆಯಲ್ಲಿ ಮೇಳೈಸಿತ್ತು- ಒಗ್ಗೂಡಿತ್ತು. ನೃಪನ ಸೇನೆ, ಕತ್ತಿ, ಖಡ್ಗಗಳನ್ನು ಹಿಡಿದ ಶೂರರು ಮತ್ತು ದೊಡ್ಡ ಈಟಿ, ಭರ್ಜಿ ಪಾಯದಳ, ರಥ, ಕುದುರೆ, ಗಜಸೇನೆ ಲಾಯದಿಂದ ಬಂದ ಶುದ್ಧ ವೇಗದ ಕುದುರೆಗಳು ವಾಘೆಯ ಹತೋಟಿಯಲ್ಲಿ ಸಾಲು ಸಾಲಾಗಿ ರಣರಂಗವನ್ನು ಹೊಕ್ಕವು.
ಥಟ್ಟನೊಡಹೊಯ್ದವನಿಪತಿ ಜಗ
ಜಟ್ಟಿಗಳ ಕೆಣಕಿದನು ನಕುಲನ
ನಟ್ಟಿದನು ಸಹದೇವನಡಹಾಯ್ದರೆ ವಿಭಾಡಿಸಿದ |
ಬಿಟ್ಟ ಧೃಷ್ಟದ್ಯುಮ್ನನನು ಹುಡಿ
ಗುಟ್ಟಿದನು ಸಾತ್ಯಕಿಯ ಜೋಡಿನ
ಲೊಟ್ಟಿದನು ಕೂರಂಬುಗಳನುಬ್ಬಿನಲಿ ಕುರುರಾಯ || ೭೫ ||
ಪದವಿಭಾಗ-ಅರ್ಥ: ಥಟ್ಟನೆ+ ಒಡಹೊಯ್ದು+ ಅವನಿಪತಿ ಜಗಜಟ್ಟಿಗಳ ಕೆಣಕಿದನು, ನಕುಲನನು+ ಅಟ್ಟಿದನು ಸಹದೇವನು+ ಅಡಹಾಯ್ದರೆ ವಿಭಾಡಿಸಿದ, ಬಿಟ್ಟ ಧೃಷ್ಟದ್ಯುಮ್ನನನು, ಹುಡಿಗುಟ್ಟಿದನು ಸಾತ್ಯಕಿಯ, ಜೋಡಿನಲಿ+ ಒಟ್ಟಿದನು ಕೂರಂಬುಗಳನು+ ಉಬ್ಬಿನಲಿ ಕುರುರಾಯ
ಅರ್ಥ:ಕುರುರಾಯನು ಥಟ್ಟನೆ ಬಲವಾಗಿ ಹೊಡದು ಅವನಿಪತಿಧರ್ಜನನ್ನೂ ಜಗಜಟ್ಟಿಗಳನ್ನೂ ಕೆಣಕಿದನು. ನಕುಲನನ್ನು ಹೊಡೆದು ಓಡಿಸಿದನು; ಸಹದೇವನು ಅಡ್ಡಬಂದು ಎದುರಿಸಿದರೆ ಅವನನ್ನು ಹೊಡೆದನು; ಸಹದೇವನನ್ನು ಧೃಷ್ಟದ್ಯುಮ್ನನ್ನು ಹುಡಿಗುಟ್ಟಿ- ಬಳಲಿಸಿ ಬಿಟ್ಟು,ಸಾತ್ಯಕಿಯನ್ನು ಕೂರಂಬುಗಳನು ಜೋಡಿಗಳಲ್ಲಿ ತುಂಬಿದನು; ಹೀಗೆ ಕೌರವನು ಉಬ್ಬಿನಲ್ಲಿ- ಹೆಮ್ಮೆ ಅಹಂಕಾರದಿಮದ ಅವರನ್ನು ಸೋಲಿಸಿದನು;
ಮರಳಿ ಪಂಚದ್ರೌಪದೇಯರ
ಪರಿಭವಿಸಿದನು ಧರ್ಮಪುತ್ರನ
ತೆರಳಿಚಿದ ಸಹದೇವ ನಕುಲರ ಮತ್ತೆ ಸೋಲಿಸಿದ |
ವರ ಯುಧಾಮನ್ಯೂತ್ತಮೌಜರ
ಹೊರಳಿಸಿದನವನಿಯಲಿ ಭೀಮಾ
ದ್ಯರಿಗೆ ಭೀತಿಯ ಬೀರಿದನು ಬೇಸರದೆ ಕುರುರಾಯ || ೭೬ ||
ಪದವಿಭಾಗ-ಅರ್ಥ:ಮರಳಿ ಪಂಚದ್ರೌಪದೇಯರ ಪರಿಭವಿಸಿದನು ಧರ್ಮಪುತ್ರನ ತೆರಳಿಚಿದ(ತೆರಳು- ಹೋಗಿಸು) ಸಹದೇವ ನಕುಲರ ಮತ್ತೆ ಸೋಲಿಸಿದ+ ಅವರ ಯುಧಾಮನ್ಯ+ ಉತ್ತಮೌಜರ ಹೊರಳಿಸಿದನು+ ಅವನಿಯಲಿ(ಅವನಿ- ಭೂಮಿ) ಭೀಮ+ ಆದ್ಯರಿಗೆ ಭೀತಿಯ ಬೀರಿದನು ಬೇಸರದೆ ಕುರುರಾಯ.
ಅರ್ಥ: ಕುರುರಾಯ ಕೌರವನು ಪುನಃ ದ್ರೌಪದಿಯ ಐದು ಮಕ್ಕಳನ್ನೂ ಸೋಲಿಸಿದನು. ಧರ್ಮಪುತ್ರ ಯುಧಿಷ್ಠಿರನನ್ನು ಯುದ್ಧದಿಂದ ಹಿಮ್ಮಟ್ಟುವಂತೆ ಮಾಡಿದನು. ಸಹದೇವ ನಕುಲರನ್ನು ಮತ್ತೆ ಸೋಲಿಸಿದನು. ಅವರ ಕಡೆಯ ಯುಧಾಮನ್ಯು ಉತ್ತಮೌಜರರನ್ನು ಭೂಮಿಯಲ್ಲಿ ಹೊರಳಿಸಿದನು. ಭೀಮನೇ ಮೊದಲಾದವರಿಗೆ ಭೀತಿಯು ಹುಟ್ಟುವಂತೆ ಶಲ್ಯನ ಮರಣದ ಬೇಸರದಲ್ಲಿ - ಸಿಟ್ಟಿನಲ್ಲಿ ಯುದ್ಧಮಾಡಿದನು.
ಕೆದರುತದೆನಮ್ಮವರ ದಳದೊರೆ
ಯದಟು ಸುಕ್ಕಿತು ರಾಯನೊಬ್ಬನೆ
ಕದನದಲಿ ಕೈದೋರಿ ಭಂಗಿಸಿದನು ಮಹಾರಥರ
ಹೊದರು ತಳಿತುದು ಲಗ್ಗೆವರೆ ಮೋ
ನದಲಿ ಮಗುಳ್ದುವು ಪಾರ್ಥ ದಿವ್ಯಾ
ಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ ||೭೭ ||[೧][೨]
ಪದವಿಭಾಗ-ಅರ್ಥ:ಕೆದರುತದೆ ನಮ್ಮವರ ದಳ(ನಮ್ಮವರ ಸೇನೆ ಕೆದರಿ ಚಲ್ಲಾಪಿಲ್ಲಿಯಾಗಿದೆ) ದೊರೆಯ+ ಅದಟು (ಅದಟು- ಪರಾಕ್ರಮ) ಸುಕ್ಕಿತು(ಕುಗ್ಗಿತು) ರಾಯನು+ ಒಬ್ಬನೆ ಕದನದಲಿ ಕೈದೋರಿ ಭಂಗಿಸಿದನು(ಹಿಮ್ಮಟಿಸಿದನು) ಮಹಾರಥರ, ಹೊದರು(ಪೊದೆ, ಹೊದರು- ಗಿಡ) ತಳಿತುದು(ಚಿಗುರಿತು- ಚಿಗುರೀತು?- ಬಳಲಿದ ಕೌರವನು ಮತ್ತೆ ಶಕ್ತಿಪಡೆಯಬಹುದು) ಲಗ್ಗೆವರೆ(ಲಗೆ+ ವರೆ- ಬರೆ- ಬರಲು; ಧಾಳಿಗೆ ಬರಲು, ಮಾಡಲು) ಮೋನದಲಿ(ಮೌನ, ಸಿಟ್ಟು.) ಮಗುಳ್ದುವು(ಮಗುಳ್- ಹಿಂತಿರುಗಿ ಬಾ), ಪಾರ್ಥ ದಿವ್ಯಾಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ
ಅರ್ಥ:ಉಳಿದ ಜೊತೆಯವರು ಬಳಲಿ ಕೌರವರಾಯನು ಯುದ್ಧಕ್ಕೆ ಒಬ್ಬನೆ ಆದ. ಅವನು ಒಬ್ಬನೆ ಯುದ್ಧದಲ್ಲಿ ಕೈದೋರಿ- ಶೌರ್ಯತೋರಿಸಿ ಮಹಾರಥರನ್ನು ಹಿಮ್ಮಟಿಸಿದನು. ಅವನ ಪರಾಕ್ರಮವೂ ಕುಗ್ಗಿತು. ಬಾಡಿದ ಪೊದೆ ಚಿಗುರೀತು,- ಪುನಃ ಕೌರವನು ಸಿಟ್ಟಿನ್ನಲ್ಲಿ ಧಾಳಿಗೆ ಬರಬಹುದು, ನಮ್ಮವರ ಸೇನೆ ಕೆದರಿ ಚಲ್ಲಾಪಿಲ್ಲಿಯಾಗಿದೆ. ಪಾರ್ಥನೇ ದಿವ್ಯಾಸ್ತ್ರದಿಂದ ಅವನನ್ನು ಎದುರಿಸು ಎಂದು ಕೃಷ್ಣನು ಹೇಳಿದನು.

ಕಾವ್ಯ ವಾಚನ ಮುಕ್ತಾಯದ ಕೊನಯಲ್ಲಿ ಮಾಡುವ ಪ್ರಾರ್ಥನೆ[ಸಂಪಾದಿಸಿ]

ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜ ಬಲದಿ |
ಕಾದಿ ಗೆಲಿದನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ||
(ಅರ್ಥ:-ಕುಮಾರವ್ಯಾಸನ ಮುಂಡಿಗೆಗಳು)

♠♠♠
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ ವೀರನಾರಾಯಣ ಚರಣಾರವಿಂದ
ಮಕರಂದ ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಶಲ್ಯಪರ್ವಂ ಸಮಾಪ್ತಮಾದುದು*
@@@@@@@**@@@@@@@

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ



ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.