ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೬)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: ೧೬ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ವಿಪಿನದಲಿಪಾ೦ಚಾಲೆಭಕುತಿಯ
ತಪದಲಿರೆದೂರ್ವಾಸನುಗ್ರವ
ನಪಹರಿಸಿ ಹರಿ ಮರಳಿ ಹೊಕ್ಕನು ದೋರಕಾಪುರಿಯ ||ಸೂ||
ಪದವಿಭಾಗ-ಅರ್ಥ: ವಿಪಿನದಲಿ(ಕಾಡಿನಲ್ಲಿ) ಪಾ೦ಚಾಲೆ (ದ್ರೌಪದಿಯು) ಭಕುತಿಯ ತಪದಲಿ+ ಇರೆ ದೂರ್ವಾಸನ+ ಉಗ್ರವನು(ಕೋಪವನ್ನು)+ ಅಪಹರಿಸಿ(ಇಲ್ಲದಂತೆ ಮಾಡಿ) ಹರಿ(ಕೃಷ್ಣನು) ಮರಳಿ(ಹಿಂತಿರುಗಿ ಹೋಗಿ) ಹೊಕ್ಕನು ದೋರಕಾಪುರಿಯ.
ಅರ್ಥ:ಪಾಡವರು ಕಾಡಿನಲ್ಲಿ ಇರುವಾಗ ಪಾ೦ಚಾಲೆಯಾದ ದ್ರೌಪದಿಯು ಭಕ್ತಿಯ ತಪದಲಿ ಇರಲು, ದೂರ್ವಾಸಮುನಿಯ ಉಗ್ರವನ್ನು ಕೋಪವನ್ನು ಕೃಷ್ಣನು ಇಲ್ಲದಂತೆ ಮಾಡಿ, ದ್ವಾರಕಾಪುರಿಯನ್ನು ಮರಳಿ ಹೊಕ್ಕನು.[೧][೨] [೩] [೪]

ದೂರ್ವಾಸ ಮುನಿಪತಿ ಬ೦ದು ಹೊಕ್ಕನು ಹಸ್ತಿನಾಪುರವ[ಸಂಪಾದಿಸಿ]

ಕೇಳು ಜನಮೇಜಯ ದರಿತ್ರೀ
ಪಾಲ ಪಾ೦ಡು ಕುಮಾರಕರು ವಿಪಿ
ನಾ೦ತರದೊಳನುಭವಿಸಿದರು ಸ೦ವತ್ಸರಾಷ್ಟಕವ |
ಲೀಲೆ ಮಿಗೆಯೈತ೦ದು ಯಮುನಾ
ಕೂಲದಲಿ ವರತೀರ್ಥ ಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ದರಿತ್ರೀಪಾಲ, ಪಾ೦ಡು ಕುಮಾರಕರು ವಿಪಿನಾ೦ತರದೊಳು(ಕಾಡಿನಲ್ಲಿ)+ ಅನುಭವಿಸಿದರು ಸ೦ವತ್ಸರ+ ಅಷ್ಟಕವ (ಎಂಟು ವರ್ಷ), ಲೀಲೆ (ಆನಂದ, ಸಂತೋಷ) ಮಿಗೆಯೆ (ಹೆಚ್ಚಲು)+ ಐತ೦ದು ಯಮುನಾಕೂಲದಲಿ ವರತೀರ್ಥ ಸೇವಾಶೀಲರು+ ಇದ್ದರು ಸಕಲ ಮುನಿಜನ ಸಹಿತ ಹರುಷದಲಿ.
ಅರ್ಥ:ವೈಶಂಪಾಯ ಮುನಿಯು,'ಕೇಳು ಜನಮೇಜಯ ರಾಜನೇ, ಪಾ೦ಡವರು ಕಾಡಿನಲ್ಲಿ ಎಂಟು ವರ್ಷ ವನವಾಸವನ್ನು ಅನುಭವಿಸಿದರು. ಹೀಗೆ ಬಹಳ ಸಂತೋಷದಿಂದ ಬಂದು ಯಮುನಾದಡದಲ್ಲಿ ಉತ್ತಮ ತೀರ್ಥ ಸೇವಾಶೀಲರಾದ ಅವರು ಸಕಲ ಮುನಿಜನ ಸಹಿತ ಹರ್ಷದಿಂದ ಇದ್ದರು,'ಎಂದನು
ಆ ಸುಯೋಧನ ನೇಕಛತ್ರ ವಿ
ಳಾಸದುರ್ವೀ ರಾಜ್ಯಪದ ವಿ
ನ್ಯಾಸ ವಿಭವದ ಸುಖದ ಸೌಖ್ಯವನನುಭವಿಸುತಿರಲು |
ಭೂಸುರವ್ರಜ ನಿಕರ ವರ ವಿ
ನ್ಯಾಸಮುನಿ ಜನ ಸಹಿತವರ ದೂ
ರ್ವಾಸ ಮುನಿಪತಿ ಬ೦ದು ಹೊಕ್ಕನು ಹಸ್ತಿನಾಪುರವ || ೨ ||
ಪದವಿಭಾಗ-ಅರ್ಥ: ಆ ಸುಯೋಧನನು+ ಏಕಛತ್ರ ವಿಳಾಸದ+ ಉರ್ವೀ(ವಿಸ್ತಾರವಾದ ಭೂಮಿ) ರಾಜ್ಯಪದ(ರಾಜ್ಯಪದವಿಯ) ವಿನ್ಯಾಸ ವಿಭವದ(ವೈಭವದ) ಸುಖದ ಸೌಖ್ಯವನು+ ಅನುಭವಿಸುತಿರಲು ಭೂಸುರವ್ರಜ ನಿಕರ (ಬ್ರಾಹ್ಮಣರ ಸಮೂಹ) ವರ(ಶ್ರೇಷ್ಠ) ವಿನ್ಯಾಸ ಮುನಿ ಜನ ಸಹಿತ, ವರ ದೂರ್ವಾಸಮುನಿಪತಿ ಬ೦ದು ಹೊಕ್ಕನು ಹಸ್ತಿನಾಪುರವ.
ಅರ್ಥ:ರಾಜನೇ ಕೇಳು,'ಆ ಸುಯೋಧನನು ಏಕಛತ್ರಪತಿಯಾಗಿ ವಿಲಾಸದಿಂದ ವಿಸ್ತಾರವಾದ ರಾಜ್ಯದ ರಾಜ್ಯಪದವಿಯನ್ನು ವಿನ್ಯಾಸ- ವೈಭವದ ಸುಖದ ಸೌಖ್ಯವನ್ನು ಅನುಭವಿಸುತ್ತಿರಲು, ಬ್ರಾಹ್ಮಣರ ಸಮೂಹ, ಉತ್ತಮ ವಿನ್ಯಾಸದ ಮುನಿಜನರ ಸಹಿತ, ಶ್ರೇಷ್ಠ ದೂರ್ವಾಸ ಮುನಿಪತಿಯು ಬ೦ದು ಹಸ್ತಿನಾಪುರವನ್ನು ಹೊಕ್ಕನು.
ಮುನಿಯ ಬರವನು ಕೇಳಿ ದುರ್ಯೋ
ಧನನು ಭೀಷ್ಮ ದ್ರೋಣ ಗೌತಮ
ರಿನತನಯ ಗುರುಸೂನು ವಿದುರಾದಿಗಳನೊಡಗೊ೦ಡು ||
ವಿನುತ ಭೂಸುರ ನಿವಹ ಕಾ೦ತಾ
ಜನದ ಕನ್ನಡಿ ಕಲಶ ವಾದ್ಯ
ಧ್ವನಿ ಸಹಿತಲಿದಿರಾಗಿ ಕಾಣಿಕೆಯಿತ್ತು ನಮಿಸಿದನು || ೩ ||
ಪದವಿಭಾಗ-ಅರ್ಥ: ಮುನಿಯ ಬರವನು ಕೇಳಿ ದುರ್ಯೋಧನನು ಭೀಷ್ಮ ದ್ರೋಣ ಗೌತಮರು(ಕೃಪ) + ಇನತನಯ(ಕರ್ಣ) ಗುರುಸೂನು(ಅಶ್ವತ್ಥಾಮ) ವಿದುರಾದಿಗಳನು+ ಒಡಗೊ೦ಡು ವಿನುತ(ಉತ್ತಮ) ಭೂಸುರ(ಬ್ರಾಹ್ಮಣ) ನಿವಹ(ಸಮುಹ) ಕಾ೦ತಾಜನದ (ವನಿತೆಯರ) ಕನ್ನಡಿ ಕಲಶ ವಾದ್ಯಧ್ವನಿ ಸಹಿತಲಿ+ ಇದಿರಾಗಿ ಕಾಣಿಕೆಯಿತ್ತು, ನಮಿಸಿದನು.
ಅರ್ಥ:ದುರ್ಯೋಧನನು ದುರ್ವಾಸ ಮುನಿಯ ಬರುವಿಕೆಯನ್ನು ಕೇಳಿ, ಭೀಷ್ಮ, ದ್ರೋಣ, ಕೃಪ, ಕರ್ಣ, ಗುರುಸೂನು- ಅಶ್ವತ್ಥಾಮ, ವಿದುರಾದಿಗಳನ್ನು ಒಡಗೋಡಿಕೊಂಡು ಉತ್ತಮರಾದ ಬ್ರಾಹ್ಮಣ ಸಮೂಹ ಮತ್ತೂ ವನಿತೆಯರು ಹಿಡಿದ ಕನ್ನಡಿ ಕಲಶ ವಾದ್ಯಧ್ವನಿ ಸಹಿತ ಮುನಿಗಳನ್ನು ಅರಮನೆಯ ಬಾಗಿಲಲ್ಲೇ ಎದುರುಗೊಂಡು ಸ್ವಾಗತಿಸಿ ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿದನು.
ವ೦ದನೆಯ ಕೈಗೊಳುತ ಗ೦ಗಾ
ನ೦ದನನ ಕೈ ವಿಡಿದು ಬರೆ ಕೃಪ
ಮು೦ದೆ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ |
ಬ೦ದನ೦ಗನೆ ಸಹಿತ ನಮಿಸಿದ
ನ೦ಧ ನೃಪನನು ಹರಸಿ ಹರುಷದ
ಲ೦ದು ಮುನಿ ಮ್೦ಡಿಸಿದನುನ್ನತ ಸಿ೦ಹ ಪೀಠದಲಿ || ೪ ||
ಪದವಿಭಾಗ-ಅರ್ಥ: ವ೦ದನೆಯ ಕೈಗೊಳುತ ಗ೦ಗಾನ೦ದನನ(ಭೀಷ್ಮನ) ಕೈ ವಿಡಿದು ಬರೆ(ಬರಲು) ಕೃಪ ಮು೦ದೆ, ಕರ್ಣಾದಿಗಳ ಗಡಣದಿ(ಸಮೂಹ) ಹೊಕ್ಕನು+ ಅರಮನೆಯ, ಬ೦ದನು+ ಅ೦ಗನೆ ಸಹಿತ ನಮಿಸಿದನು,+ ಅ೦ಧ ನೃಪನನು ಹರಸಿ, ಹರುಷದಲಿ+ ಅ೦ದು ಮುನಿ ಮ೦ಡಿಸಿದನು(ಕುಳಿತನು)+ ಉನ್ನತ ಸಿ೦ಹ ಪೀಠದಲಿ.
ಅರ್ಥ:ದೂರ್ವಾಸ ಮುನಿಯು ದುರ್ಯೋಧನನ ವ೦ದನೆಯನ್ನು ಸ್ವೀಕರಿಸುತ್ತಾ ಗ೦ಗಾನ೦ದನನಾದ ಭೀಷ್ಮನ ಕೈಯನ್ನು ಹಿಡಿದುಕೊಂಡು ಬರಲು, ಕೃಪನು ಮು೦ದೆ ಇದ್ದು, ಕರ್ಣಾದಿಗಳ ಸಮೂಹದೊಡನೆ ಅರಮನೆಯನ್ನು ಹೊಕ್ಕನು. ಅ೦ಧ ನೃಪ ಧೃತರಾಷ್ರ್ರನು ಅ೦ಗನೆ ಗಾಂಧಾರಿಸಹಿತ ಬ೦ದು ಮುನಿಗೆ ನಮಿಸಿದನು. ಅವನನ್ನು ಹರಸಿ, ಹರುಷದಿಂದ ಅ೦ದು ಮುನಿಯು ಉನ್ನತ ಸಿ೦ಹಾಸನದಲ್ಲಿ ಮ೦ಡಿಸಿದನು.
ಹೊಳೆವಹೊ೦ಗಳಶದಲಿ ತು೦ಬಿದ
ಜಲದಲಾ ಮುನಿಪತಿಯ ಪಾದವ
ತೊಳೆದು ಮಧುಪರ್ಕಾದಿ ಮನ್ನಣೆಯಿ೦ದ ಸತ್ಕರಿಸಿ
ಬಳಿಕ ಕುಶಲವ ಕೇಳ್ದು ಮುನಿ ಸ೦
ಕುಲವನೊಲಿದಾದರಿಸಲಿತ್ತಲು
ವೊಲವು ಮಿಗೆ ಯೆಡೆಯಾದುದಾರೋಗಣೆಗೆ ಮುನಿ ಹೊಕ್ಕ ೫
ಪದವಿಭಾಗ-ಅರ್ಥ: ಹೊಳೆವ ಹೊ೦ಗಳಶದಲಿ(ಹೊನ್ನಿನ ಕಳಶ- ಕೊಡ- ಚೊಂಬು) ತು೦ಬಿದ ಜಲದಲಿ+ ಆ ಮುನಿಪತಿಯ ಪಾದವ ತೊಳೆದು ಮಧುಪರ್ಕ+ ಆದಿ(ಮೊದಲಾದ-ಪಂಚಾಮೃತ :-. ೧. ಹಾಲು, ೨.ತುಪ್ಪ, ೩. ಮೊಸರು, ೪.ಮಧು, ೫.ಶರ್ಕರ.) ಮನ್ನಣೆಯಿ೦ದ(ಗೌರವದಿಂದ) ಸತ್ಕರಿಸಿ, ಬಳಿಕ ಕುಶಲವ ಕೇಳ್ದು(ಬಂದ ಅಥಿತಿಗಳಿಗೆ ಉಪಚರಿಸಿ 'ನೀವು ಕುಶಲವೇ? ಆರೋಗ್ಯವೇ? ಎಂದು ಕೇಳುವುದು ಉಪಚಾರ- ಶಿಷ್ಟಾಚಾರ), ಮುನಿ ಸ೦ಕುಲವನು+ ಒಲಿದು(ಪ್ರೀತಿಯಿಂದ)+ ಆದರಿಸಲು+ ಇತ್ತಲು, ವೊಲವು ಮಿಗೆ(ಪ್ರೀತಿ ಸಂತಸ ಹೆಚ್ಚಲು, ಹೆಚ್ಚಿನ ಪ್ರೀತ್ಯಾದರಕ್ಕೆ) ಯೆಡೆಯಾದುದು(ಅವಕಾಶ,ಯೆಡೆ- ಭೋಜನ - ಎಲೆಯಲ್ಲಿ ಊಟದ ಆಹಾರ ವಸ್ತುಗಳನ್ನು ಇರಿಸಿ ಬಡಿಸುವುದು)+ ಆರೋಗಣೆಗೆ(ಊಟಕ್ಕೆ) ಮುನಿ ಹೊಕ್ಕ.
ಅರ್ಥ:ಕೌರವನು ದೂರ್ವಾಸರ ಪಾದಗಳನ್ನು ಹೊಳೆಯುವ ಚಿನ್ನದ ಕಳಶದಲ್ಲಿ ತು೦ಬಿದ ಜಲದಿಂದ ಆ ಮುನಿಪತಿಯ ಪಾದವನ್ನು ತೊಳೆದು ಮಧುಪರ್ಕವೇ ಮೊದಲಾದ ಮರ್ಯಾದೆಯಿಂದ ಸತ್ಕರಿಸಿ, ಬಳಿಕ 'ಅವರ ಕುಶಲವನ್ನು' ಕೇಳಿದನು. ಮುನಿಯ ಜೊತೆಬಂದ ವಿಪ್ರ ಸಮೂಹವನ್ನು ಅವನು ಪ್ರೀತಿಯಿಂದ ಆದರಿಸಲಾಗಿ, ಇತ್ತಲು- ಭೋಜನ ಶಾಲೆಯಲ್ಲಿ, ಹೆಚ್ಚಿನ ಪ್ರೀತ್ಯಾದರಕ್ಕೆ ಯೆಡೆಯಿಟ್ಟು- ಊಟದ ಎಲೆಯನ್ನು ಇರಿಸಲು ಮುನಿಯು ಊಟಕ್ಕಾಗಿ ಒಳಹೊಕ್ಕನು.
ಷಡುರಸಾನ್ನದಲಾದರಣೆಯಿ೦
ದುಡುಗೊರೆಗಳಿ೦ತುಷ್ಠಿ ಬಡಿಸಿದ
ಪೊಡವಿಪಾಲಕ ಋಷಿಗಳಷ್ಟಾಶೀತಿ ಸಾವಿರವ |
ಕಡುಸುಖದ ಸ೦ನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನಿನಗೆ೦ದ || ೬ ||
ಪದವಿಭಾಗ-ಅರ್ಥ: ಷಡುರಸ (ಷಟ್+ ರಸ- ಷಡ್ರಸ- ಆರು ರುಚಿ)+ ಅನ್ನದಲಿ(ಊಟ)+ ಅದರಣೆಯಿ೦ದ+ ಉಡುಗೊರೆಗಳಿ೦ ತುಷ್ಠಿ(ಹೆಚ್ಚು) ಬಡಿಸಿದ ಪೊಡವಿಪಾಲಕ(ಭೂಮಿ ಒಡೆಯ- ರಾಜ) ಋಷಿಗಳ+ ಅಷ್ಟಾಶೀತಿ ಸಾವಿರವ(ಎಂಭತ್ತೆಂಟು ಸಾವಿರ) ಕಡುಸುಖದ (ಕಡು- ಅತಿ) ಸ೦ನ್ಯಾಸಿ ವೇಷದ ಮೃಡನು(ಶಿವ) ಮುದದಲಿ ಕೌರವನ ಮೈದಡವಿ ಮೆಚ್ಚಿದೆ ಮಗನೆ ಬೇಡು+ ಒಲಿದುದನು(ಇಷ್ಟವಾದುದನ್ನು) ನಿನಗೆ+ ಎ೦ದ.
  • ಟಿಪ್ಪಣಿ:-ಷಡ್ರಸ :- ೧.ಮಧುರ, ೨ ಆಮ್ಲ, .೩ ತಿಕ್ತ, .೪.ಕಟು, ೫.ಕಷಾಚಿi, ೬.ಲವಣ.(ಸಿಹಿ, ಹುಳಿ, ಉಪ್ಪು, ಖಾರ, ಒಗರು, ಕಹಿ) ಇವೇ ಆರು ರಸಗಳು.
ಅರ್ಥ:ಕೌರವನು ದೂರ್ವಾಸಮುನಿ ಮತ್ತು ಅವನ ಶಿಷ್ಯರಿಗೆ ಷಡ್ರಸದಿಂದ ಕೂಡಿದ ಊಟದ ಅದರಣೆಯಿ೦ದ ಮತ್ತು ಉಡುಗೊರೆಗಳಿ೦ದ ಹೆಚ್ಚು, ಹೆಚ್ಚು ಬಡಿಸಿ ಸಂತೋಷಗೊಳಿಸಿದ; ತನ್ನನ್ನೂ, ಎಂಭತ್ತೆಂಟು ಸಾವಿರ ಋಷಿಗಳನ್ನು ಚೆನ್ನಾಗಿ ಉಪಚರಿಸಿದುದನ್ನು ನೋಡಿ ಅತಿಸುಖಪಟ್ಟ ಸ೦ನ್ಯಾಸಿ ವೇಷದ ರುದ್ರನು, ಆನಂದದಿಂದ ಕೌರವನ ಮೈದಡವಿ,'ಮೆಚ್ಚಿದೆ ಮಗನೆ, ನಿನಗೆ ಇಷ್ಟವಾದುದನ್ನು ಕೇಳು ಕೊಡುವೆನು,' ಎ೦ದ.
ಆರಸ ಕೇಳ೦ಗೈತಳದಲಿಹ
ಪರುಷವನು ಕಲ್ಲೆ೦ದು ಟಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರ೦ದದಲಿ |
ಆರಸ ಕೌರವನೆ೦ದನಿನಿಬರು
ವೆರಸಿ ಪಾ೦ಡವರರಸಿಯುಣಲೊಡ
ನಿರದೆ ಕವಳವ ಬೇಡಿಯಭ್ಯಾಗತರು ನೀವೆ೦ದ || ೭ ||
ಪದವಿಭಾಗ-ಅರ್ಥ: ಆರಸ ಕೇಳು+ ಅ೦ಗೈತಳದಲಿ+ ಇಹ ಪರುಷವನು(ಪರುಷಮಣಿ- ಇದನ್ನು ಯಾವುದಕ್ಕೆ ತಾಗಿಸಿದರೂ ಅದು ಚಿನ್ನವಾಗುವುದು) ಕಲ್ಲೆ೦ದು ಟಕ್ಕೆಯ (ಬೆಲೆಇಲ್ಲದ) ಹರಳಿನಲಿ ಹರುಷಿಸುವ ಮೂಢ ಮನುಷ್ಯರ+ ಅ೦ದದಲಿ ಆರಸ ಕೌರವನು+ ಎ೦ದನು+ ಅನಿಬರುವೆರಸಿ(ಎಲ್ಲರೂ ವೆರಸಿ- ಸೇರಿ) ಪಾ೦ಡವರ+ ಅರಸಿಯು(ದ್ರೌಪದಿ)+ ಉಣಲು+ ಒಡನೆ+ ಇರದೆ ಕವಳವ(ಊಟವನ್ನು) ಬೇಡಿಯು+ ಅಭ್ಯಾಗತರು (ಪಾಂವರ ಬಳಿ ಅಭ್ಯಾಗತರಾಗಿ (ಅತಿಥಿಗಳಾಗಿ) ಹೋಗಿ) ನೀವು+ ಎ೦ದ.
ಅರ್ಥ:ಆರಸ ಜನಮೇಜಯನೇ ಕೇಳು,'ಸುಲಭವಾಗಿ ದೊರಕಿ, ಅ೦ಗೈ ತಳದಲ್ಲಿ ಇರುವ ಪರುಷಮಣಿಯನ್ನು ತಿಳಿದುಕೊಳ್ಳದೆ ಕಲ್ಲು ಎ೦ದು ಎಸೆದು, ಬೆಲೆಇಲ್ಲದ ಕಲ್ಲು ಹರಳಿನಲ್ಲಿ ಹರ್ಷಿಸುವ ಮೂಢ ಮನುಷ್ಯರಂತೆ ಆರಸ ಕೌರವನು, ಮುನಿಯನ್ನು ಕುರಿತು, ಪಾಂಡವರು ಎಲ್ಲರೂ ದ್ರೌಪದಿಯೂ ಸೇರಿ ಊಟಮಾದಿರಲು, ನೀವು ಒಡನೆಯೇ (ತಡಮಾಡದೆ) ಪಾಂಡವರಬಳಿ ಅಭ್ಯಾಗತರಾಗಿ (ಅತಿಥಿಗಳಾಗಿ) ಹೋಗಿ ನೀವು ಊಟವನ್ನು ಬೇಡಿರಿ,'ಎ೦ದ.
ಭೂಪ ಕೇಳೆರಡು೦ಟೆ ನಿನ್ನಾ
ಳಾಪವನು ಕೈ ಕೊ೦ಡೆನೆನುತ ಮ
ಹಾ ಪರಾಕ್ರಮಿಯೇಳನೊಡನೆದ್ದುದು ನೄಪಸ್ತೋಮ |
ತಾಪಸರು ಬಳಿವಿಡಿದು ಬರೆ ಬಳಿ
ಕಾ ಪುರವ ಹೊರವ೦ಟು ಭವ ನಿ
ರ್ಲೇಪ ಭೀಷ್ಮ ದ್ರೋಣರನು ಕಳುಹಿದನು ಮನೆಗಳಿಗೆ || ೮ ||
ಪದವಿಭಾಗ-ಅರ್ಥ: ಭೂಪ ಕೇಳು+ ಎರಡು೦ಟೆ ನಿನ್ನ+ ಆಳಾಪವನು(ಮಾತು) ಕೈ ಕೊ೦ಡೆನು(ಒಪ್ಪಿಕೊಂಡೆನು)+ ಎನುತ ಮಹಾ ಪರಾಕ್ರಮಿ(ದೂರ್ವಾಸನು)+ ಯೇಳನೆ(ಏಳಿ ಎನೆ- ಎನ್ನಲು)+ ಒಡನೆ+ ಎದ್ದುದು ನೄಪಸ್ತೋಮ, ತಾಪಸರು ಬಳಿವಿಡಿದು(ಅನುಸರಿಸಿ) ಬರೆ(ಬರಲು) ಬಳಿಕ+ ಆ ಪುರವ ಹೊರವ೦ಟು ಭವ ನಿರ್ಲೇಪ(ಸಂಸಾರ ಬಂಧನ ಇಲ್ಲದವ- ದೂರ್ವಾಸ) ಭೀಷ್ಮ ದ್ರೋಣರನು ಕಳುಹಿದನು ಮನೆಗಳಿಗೆ.
ಅರ್ಥ:ದೂರ್ವಾಸನು ಕೌರವನಿಗೆ.'ರಾಜನೇ ಕೇಳು, ನನ್ನ ಮಾತಿಗೆ ಎರಡು೦ಟೆ; ನಿನ್ನ ಮಾತನ್ನು ನೆಡೆಸಲು ಒಪ್ಪಿಕೊಂಡೆನು,' ಎನ್ನತ್ತಾ ಮಹಾ ಪರಾಕ್ರಮಿ ದೂರ್ವಾಸನು 'ಏಳಿ' ಎನ್ನಲು, ಒಡನೆಯೆ ನೃಪಸ್ತೋಮವೂ ತಾಪಸರೂ ಪ್ರಯಾಣ ಮಾಡಲು ಎದ್ದರು , ಅವರು ದೂರ್ವಾಸನನ್ನು ಅನುಸರಿಸಿ ಬರಲು ಬಳಿಕ ಆ ಪುರವನ್ನು ಹೊರಹೊರಟಾಗ ಸಂಸಾರ ಬಂಧನ ಇಲ್ಲದ ದೂರ್ವಾಸಮುನಿಯು ತಮ್ಮನ್ನು ಬೀಳ್ಕೊಡಲು ಬಂದ ಭೀಷ್ಮ ದ್ರೋಣರನ್ನು ಇನ್ನು ನೀವು ಹೋಗಿ ಎಂದು ಮನೆಗಳಿಗೆ ಕಳುಹಿದನು.
ಅಗಡು ಕೌರವ ನೊಡ್ಡಿದನಲಾ
ವಿಗಡವನು ಮುನಿಯುಗ್ರ ರೋಷದ
ಸೆಗಳಿಕೆಗೆ ಪಾ೦ಡವರುಸವಿತುತ್ತಾದರಕಟೆನುತ |
ದುಗುಡದಲಿ ಗಾ೦ಗೇಯ ವಿದುರಾ
ದಿಗಳು ಮನೆಯೊಳಗಿತ್ತಕೌರವ
ನಗುತ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ || ೯ ||
ಪದವಿಭಾಗ-ಅರ್ಥ: ಅಗಡು (ಕೀಟಲೆಯ, ತುಂಟತನದ) ಕೌರವ ನೊಡ್ಡಿದನಲಾ ವಿಗಡವನು(ಉಗ್ರವಾದ, ಭೀಕರವಾದ) ಮುನಿಯ+ ಉಗ್ರ ರೋಷದ ಸೆಗಳಿಕೆಗೆ ಪಾ೦ಡವರು ಸವಿ- ತುತ್ತಾದರು+ ಅಕಟ+ ಎನುತ ದುಗುಡದಲಿ (ಚಿಂತೆಯಲ್ಲಿ) ಗಾ೦ಗೇಯ ವಿದುರಾದಿಗಳು ಮನೆಯೊಳಗೆ,+ ಇತ್ತ ಕೌರವ ನಗುತ ಕರ್ಣಾದಿಗಳ ಗಡಣದಿ ಹೊಕ್ಕನು+ ಅರಮನೆಯ
ಅರ್ಥ:ಕೆಡುಕಿಯಾದ ಕೌರವನು ಪಾಂಡವರಿಗೆ ಭೀಕರವಾದ ಸ್ಥಿತಿಯನ್ನು ಒಡ್ಡಿದನಲಾ- ಮುನಿಯ ಉಗ್ರ ರೋಷದ ಬೆಂಕಿಯ ಸುಳಿಗೆ ಪಾ೦ಡವರು ಸವಿಯಾದ ತುತ್ತಾದರು ಅಕಟ! ಎನ್ನುತ್ತಾ ಗಾ೦ಗೇಯ ವಿದುರಾದಿಗಳು ಚಿಂತೆಯಲ್ಲಿ ಮನೆಯಲ್ಲಿದ್ದರೆ, ಇತ್ತ ಕೌರವಮು ನಗುತ್ತಾ ಕರ್ಣಾದಿಗಳ ಗುಂಪಿನೊಡನೆ ಅರಮನೆಯನ್ನು ಹೊಕ್ಕನು.

ದೂರ್ವಾಸ ಮುನಿ ಬಂದ ಧರ್ಮಜನ ಬಳಿಗೆ[ಸಂಪಾದಿಸಿ]

ಮರುದಿವಸ ಸತಿಯು೦ಡ ಸಮಯವಸ
ನರಿದು ಮುನಿಪತಿ ಬರಲು ಕಪಟದ
ನಿರಿಗೆಯನು ಬಲ್ಲೆನೆ ಯುದಿಷ್ಟಿರನೆದ್ದು ಸಭೆಸಹಿತ |
ಕಿರಿದೆಡೆಯಲಿದಿರಾಗಿ ಭಕುತಿಯ
ಹೊರಿಗೆಯಲಿ ಕುಸಿವ೦ತೆ ನೃಪ ಬ೦
ದೆರಗಿದನು ಮುನಿವರಗೆ ತನ್ನನುಜಾತರೊಡಗೂಡಿ || ೧೦ ||
ಪದವಿಭಾಗ-ಅರ್ಥ: ಮರುದಿವಸ ಸತಿಯು (ದ್ರೌಪದಿಯು)+ ಉ೦ಡ (ಊಟ ಮಾಡಿದ) ಸಮಯವಸು+ ಅರಿದು (ತಿಳಿದು) ಮುನಿಪತಿ (ದೂರ್ವಾಸನು) ಬರಲು ಕಪಟದ ನಿರಿಗೆಯನು(ಒಳಗೆ ಕಪಟ- ಮೋಸವು ನಿರಿಗೆ- ಮನದ ಮಡಿಕೆಯಲ್ಲಿ -ಮುಚ್ಚಿದ) ಬಲ್ಲೆನೆ ಯುದಿಷ್ಟಿರನು+ ಎದ್ದು ಸಭೆಸಹಿತ ಕಿರಿದೆಡೆಯಲಿ (ಹತ್ತಿರ ಬಂದಾಗ)+ ಇದಿರಾಗಿ ಭಕುತಿಯ ಹೊರಿಗೆಯಲಿ(ಭಾರದಲ್ಲಿ) ಕುಸಿವ೦ತೆ ನೄಪ ಬ೦ದು+ ಎರಗಿದನು ಮುನಿವರಗೆ (ವರ- ಶ್ರೇಷ್ಠ). ತನ್ನ+ ಅನುಜಾತರ+ ಒಡಗೂಡಿ.
ಅರ್ಥ:ದೂರ್ವಾಸ ಮುನಿಯು,ಮರುದಿವಸ ಪಾಂಡವರ ಸತಿ ದ್ರೌಪದಿಯು ಊಟ ಮಾಡಿದ ಸಮಯವಸ್ನು ತಿಳಿದು, ಧರ್ಮಜನಿದ್ದ ಕುಟೀರದ ಬಳಿ ಬರಲು, ಅವನ ಮನದಲ್ಲಿ ಮುಚ್ಚಿದ ಕಪಟದ ಮಡಿಕೆಯನ್ನು ಯುದಿಷ್ಟಿರನು ಬಲ್ಲೆನೆ? ತಿಳಿದಲ್ಲ. ಅವನು ಸಭೆಸಹಿತ ಎದ್ದು ಹತ್ತಿರ ಬಂದಾಗ ಎದುರುಗೊಂಡು ಭಕ್ತಿಯ ಭಾರದಲ್ಲಿ ಕುಸಿವ೦ತೆ ನೃಪ ಧರ್ಮಜನು ಬ೦ದು ಮುನಿಶ್ರೇಷ್ಠನಿಗೆ ತನ್ನ ಸೋದರರ ಒಡಗೂಡಿಕೊಂಡು ನಮಿಸಿದನು.
ಕುಶಲವೇ ನಿಮಗೆನುತಲೈವರ
ನೊಸಲ ನಿಜಕರದಲೆತ್ತುತ
ಲೊಸೆದು ದೌಮ್ಯಾದ್ಯಖಿಳ ಭೂಸುರ ಜನವ ಮನ್ನಿಸುತ |
ಹೊಸ ಕುಶೆಯ ಪೀಠದಲಿ ಮುನಿವೇ
ಷ್ಟಿಸಿದನರ್ಘ್ಯಾಚಮನ ಪಾದ್ಯ
ಪ್ರಸರ ಮಧುಪರ್ಕಗಳ ಮಾಡಿ ಮಹೀಶನಿ೦ತೆ೦ದ || ೧೧ ||
ಪದವಿಭಾಗ-ಅರ್ಥ: ಕುಶಲವೇ ನಿಮಗೆ+ ಎನುತಲಿ+ ಐವರ ನೊಸಲ ನಿಜಕರದಲಿ (ತನ್ನಕೈಯಿಂದ)+ ಎತ್ತುತಲಿ+ ಒಸೆದು(ಪ್ರೀತಿಯಿಂದ) ದೌಮ್ಯಾದಿ+ ಅಖಿಳ ಭೂಸುರ(ಬ್ರಾಹ್ಮಣ) ಜನವ ಮನ್ನಿಸುತ, ಹೊಸ ಕುಶೆಯ(ದರ್ಭೆಯ) ಪೀಠದಲಿ ಮುನಿ ವೇಷ್ಟಿಸಿದನು+ ಅರ್ಘ್ಯ+ ಆಚಮನ ಪಾದ್ಯ ಪ್ರಸರ (ಸಮೂಹ, ಇತ್ಯಾದಿ)ಮಧುಪರ್ಕಗಳ ಮಾಡಿ ಮಹೀಶನು (ಧರ್ಮಜನು )+ ಇ೦ತೆ೦ದ
ಅರ್ಥ:ದೂರ್ವಾಸಮುನಿಯು ಪಾಂಡವರನ್ನು ಕುರಿತು,'ಕುಶಲವೇ ನಿಮಗೆ,' ಎನ್ನತ್ತಾ ಐದು ಜನ ಪಾಂಡವರ ಹಣೆಗೆ ಕೈಹಾಕಿ ತನ್ನಕೈಯಿಂದ ಎತ್ತುತ್ತಾ ಪ್ರೀತಿಯಿಂದ ದೌಮ್ಯ ಮೊದಲಾದ ಅಖಿಲ ಬ್ರಾಹ್ಮಣ ಜನರನ್ನು ಮನ್ನಿಸುತ್ತಾ, ಹೊಸ ದರ್ಭೆಯ ಪೀಠದಲ್ಲಿ ಮುನಿಯು ಕುಳಿತನು. ನಂತರ ಧರ್ಮಜನು ಅರ್ಘ್ಯ, ಆಚಮನ, ಪಾದ್ಯ, ಮೊದಲಾಗಿ ಮಧುಪರ್ಕಗಳನ್ನು ಮಾಡಿ, ಹೀಗೆಂದನು.
ದೇಶ ಕಾನನ ವಸನ ವಲ್ಕಲ
ಭೂಸುರವ್ರಜ ಆತ್ಮ ಜನವು ಪ
ಲಾಶ ಪರ್ಣವೆ ಪಾತ್ರ ಭೋಜನ ಕ೦ದ ಮೂಲ ಫಲ |
ಈಸರಿತ್ಪಾನೀಯ ಮಜ್ಜನ
ವಾಸವೇ ಗುರುಭವನ ರಾಜ್ಯ ವಿ
ಲಾಸವೆಮ್ಮದು ಜೀಯ ಚಿತ್ತೈಸೆ೦ದ ಯಮಸೂನು || ೧೨ ||
ಪದವಿಭಾಗ-ಅರ್ಥ: ದೇಶ ಕಾನನ, ವಸನ ವಲ್ಕಲ(ಉಡುವ ಬಟ್ಟೆ ನಾರಿನದು) ಭೂಸುರವ್ರಜ ಆತ್ಮ ಜನವು(ಆಪ್ತರು ಇಲ್ಲಿರುವ ಬಡಬ್ರಾಹ್ಮಣರು) ಪಲಾಶ ಪರ್ಣವೆ(ಉಣ್ಣಲು ಮುತ್ತುಗದ ಎಲೆಯೇ) ಪಾತ್ರ, ಭೋಜನ ಕ೦ದ ಮೂಲ ಫಲ(ಊಟವು ಗೆಣಸು ಗಡ್ಡೆ ಹಣ್ಣು,) ಈ ಸರಿತ್+ ಪಾನೀಯ (ಈ ನದಿಯ ನೀರೇ ಕುಡಿಯುವ ಪಾನಿಯ ) ಮಜ್ಜನ (ಮತ್ತು ಸ್ನಾನಕ್ಕೆ), ವಾಸವೇ ಗುರುಭವನ(ಗುರುಗಳ ಪರ್ಣಕುಟೀರ) ರಾಜ್ಯ ವಿಲಾಸವು (ಈ ಬಗೆಯ ರಾಜ್ಯ ವೈಭವ)+ ಎಮ್ಮದು, ಜೀಯ ಚಿತ್ತೈಸಿ(ಚಿತ್ತವಿಟ್ಟು ಕೇಳು, ಗಮನಿಸಿ, ಚಿತ್ತಕ್ಕೆ ಕೇಳಿಸಿಕೊಳ್ಳಿ)+ ಎ೦ದ ಯಮಸೂನು(ಧರ್ಮಜ).
ಅರ್ಥ:ಧರ್ಮಜನು ಮುನಿಯನ್ನು ಕುರಿತು,'ನಮ್ಮ ರಾಜ್ಯವು ಈ ಕಾಡು, ಉಡುವ ಬಟ್ಟೆ ನಾರಿನದು, ಆಪ್ತರು ಇಲ್ಲಿರುವ (ಬಡ)ಬ್ರಾಹ್ಮಣರ ಸಮೂಹ, ಮುತ್ತುಗದ ಎಲೆಯೇ ಉಣ್ಣಲು ಪಾತ್ರೆ, ನಮ್ಮ ಭೋಜನವು ಗೆಣಸು ಗಡ್ಡೆ ಹಣ್ಣು, ಈ ನದಿಯ ನೀರೇ ಕುಡಿಯುವ ಪಾನಿಯ ಮತ್ತು ಸ್ನಾನಕ್ಕೆ, ವಾಸವು ಗುರುಗಳ ಪರ್ಣಕುಟೀರದಲ್ಲಿ, ಹೀಗೆ ನಮ್ಮದು ಈ ಬಗೆಯ ರಾಜ್ಯವೈಭವ; ಜೀಯ ಚಿತ್ತವಿಟ್ಟು ಕೇಳಿಸಿಕೊಳ್ಳಿ,' ಎ೦ದನು.
ಧಾರುಣೀಪತಿ ಹೇಳಬಹುದುಪ
ಚಾರವೇಕಿದು ರಾಜ್ಯಪದ ವಿ
ಸ್ತಾರ ವಾದುದು ರಾಜಋಷಿ ನಿನಗಾರು ಸರಿಯಿನ್ನು |
ಸಾರೆಯಾಯ್ತಸ್ತಮಯ ಸಮಯಕು
ಧಾರ ವಹ್ನಿಯ ವಿವಿಧ ಪೀಡಾ
ಕಾರಕು೦ಟೆ ಚಿಕಿತ್ಸೆಯೆ೦ದನು ಮುನಿ ನೃಪಾಲ೦ಗೆ || ೧೩ ||
ಪದವಿಭಾಗ-ಅರ್ಥ: ಧಾರುಣೀಪತಿ(ರಾಜನೇ) ಹೇಳಬಹುದು+ ಉಪಚಾರವೇಕೆ+ ಇದು ರಾಜ್ಯಪದ ವಿಸ್ತಾರವಾದುದು, ರಾಜಋಷಿ ನಿನಗಾರು ಸರಿ,+ ಯಿನ್ನು ಸಾರೆಯಾಯ್ತು(ಸಾರು-ಬಾ, ಹೊಗು, ಬಂದಿತು)+ ಅಸ್ತಮಯ ಸಮಯಕೆ+ ಉಧಾರ ವಹ್ನಿಯ (ಉಧಾರ ವಹ್ನಿಯ-> ಪ್ರಾಸಕ್ಕಾಗಿ ದೀರ್ಘ- ಮಹಾಪ್ರಾಣ; ಉದರ ವಹ್ನಿ- ಹೊಟ್ಟೆಯ ಬೆಂಕಿ) ವಿವಿಧ ಪೀಡಾಕಾರಕೆ (ಪೀಡೆ ತೊಂದರೆಗೆ)+ ಉ೦ಟೆ ಚಿಕಿತ್ಸೆ+ಯೆ+ ಎ೦ದನು ಮುನಿ ನೃಪಾಲ೦ಗೆ.
ಅರ್ಥ:ಧರ್ಮಜನ ಮಾತಿಗೆ ದೂರ್ವಾಸನು ಅವನನ್ನು ಕುರಿತು,'ಧಾರುಣೀಪತಿಯೇ ಉಪಚಾರವೇಕೆ? ಹೆಚ್ಚಿನ ಉಪಚಾರದ ಮಾತು ಏಕೆ ಹೇಳುವುದು? ಈಗ ನೀನು ಇರುವ ರಾಜ್ಯಪದವು ವಿಸ್ತಾರವಾದುದು, ನೀನು ರಾಜಋಷಿ ನಿನಗಾರು ಸರಿ ಸಮಾನರು? ಇನ್ನು ಸೂರ್ಯನ ಅಸ್ತಮಯ ಸಮಯ ಬಂದಿತು ನಮಗೆ ಹೊಟ್ಟೆಯಲ್ಲಿ ಹಸಿವಿನ ಬೆಂಕಿಯ ವಿವಿಧ ಪೀಡೆ; ಈ ಪೀಡೆಕಾರಣಕ್ಕೆ- ಪೀಡೆಯನ್ನು ಶಮನ ಮಾಡಲು ನಿನ್ನಲ್ಲಿ ಚಿಕಿತ್ಸೆ ಉ೦ಟೆ,'ಎ೦ದನು ಮುನಿ.
ಆವ ಜನ್ಮದ ಸುಕೃತಫಲ ಸ೦
ಭಾವಿಸಿದುದೊ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆ೦ದನು ನೃಪತಿ ಕೈಮುಗಿದು |
ಆ ವಿಗಡ ಮುನಿ ಬಳಿಕನುಷ್ಟಾ
ನಾವಲ೦ಬನಕೆತ್ತ ಯಮುನಾ
ದೇವಿಯರ ಹೊಗಲಿತ್ತ ನೃಪ ಕರಸಿದನು ದುರುಪದಿಯ || ೧೪ ||
ಪದವಿಭಾಗ-ಅರ್ಥ: ಆವ ಜನ್ಮದ ಸುಕೃತಫಲ ಸ೦ಭಾವಿಸಿದುದೊ(ಸಂಭವಿಸು , ಉಂಟಾಗು, ಫಲಕೊಟ್ಟಿತೋ.) ನಿಮ್ಮ ಬರವನು+ ಅದಾವ ಪಡೆವನು ಕೊಟ್ಟೆನು+ ಎ೦ದನು ನೃಪತಿ ಕೈಮುಗಿದು; ಆ ವಿಗಡ (ಶೂರ) ಮುನಿ ಬಳಿಕ+ ಅನುಷ್ಟಾನ+ ಅವಲ೦ಬನಕೆ+ ಅತ್ತ(ಕಡೆ) ಯಮುನಾದೇವಿಯರ(ನದಿ) ಹೊಗಲು+ ಇತ್ತ ನೃಪ ಕರಸಿದನು ದುರುಪದಿಯ.
ಅರ್ಥ:ಮುನಿಯು ಊಟ ಕೇಳಲು, ನೃಪತಿ ಧರ್ಮಜನು ಮುನಿಗೆ ಕೈಮುಗಿದು,'ಈ ನಿಮ್ಮ ಬೇಡಿಕೆಯು ನನ್ನ ಯಾವ ಜನ್ಮದ ಸುಕೃತಫಲದಿಂದ ಉಂಟಾಯಿತೊ! ನಿಮ್ಮ ಆಗಮನವನ್ನು ಅದು ಯಾವನು ತಾನೆ ಪಡೆಯುವನು? ಆಯಿತು ಭೋಜನವನ್ನು ಕೊಟ್ಟೆನು ಎಂದು ತಿಳಿಯಿರಿ,' ಎ೦ದನು. ಆ ಉಗ್ರಸ್ವಭಾವದ ಮುನಿ ಬಳಿಕ ಅನುಷ್ಟಾನವನ್ನು ಅವಲ೦ಬಸಿ- ಅನುಸರಿಸಿ ಯಮುನಾನದಿ ಕಡೆ ಹೊಗಲು. ಇತ್ತ ನೃಪ ಧರ್ಮಜನು ದ್ರೌಪದಿಯನ್ನು ಕರಸಿದನು.
ಅರಸಿ ಯಾರೋಗಿಸಿದ ಭಾವವ
ಬರವಿನಲಿ ನೃಪನರಿದು ಅರಸನ
ಹರುಷವಡಗಿತು ಧೈರ್ಯ ಸುಕ್ಕಿತು ಉಷ್ಣನಯನಾ೦ಬು |
ಉರಿ ಹೊಡೆದ ಕೆ೦ದಾವರೆಯವೋಲ್
ಕರಕುವಡೆದುದು ಮುಖ ಕಪೋಲಕೆ
ಕರವಿಟ್ಟನು ಮು೦ದೆಗೆಟ್ಟು ಮಹೀಶ ಚಿ೦ತಿಸಿದ || ೧೫ ||
ಪದವಿಭಾಗ-ಅರ್ಥ: ಅರಸಿಯು+ ಆರೋಗಿಸಿದ ಭಾವವ ಬರವಿನಲಿ ನೃಪನು+ ಅರಿದು ಅರಸನ ಹರುಷವು+ ಅಡಗಿತು, ಧೈರ್ಯ ಸುಕ್ಕಿತು, ಉಷ್ಣನಯನಾ೦ಬು(ಬಿಸಿ ಕಣ್ಣೀರು) ಉರಿ ಹೊಡೆದ(ಬೆಂಕಿ ತಾಗಿದ) ಕೆ೦ದಾವರೆಯವೋಲ್+ ಕರಕುವಡೆದುದು ಮುಖ, ಕಪೋಲಕೆ ಕರವಿಟ್ಟನು, ಮು೦ದೆಗೆಟ್ಟು(ಮುಂದೇನು ಮಾಡಬೇಕೆಂದು ತಿಳಿಯದೆ) ಮಹೀಶ ಚಿ೦ತಿಸಿದ.
ಅರ್ಥ:ಅರಸ ಧರ್ಮಜನ ಆಜ್ಞೆಯಂತೆ ದ್ರೌಪದಿ ಬಂದಳು. ಅರಸಿ ದ್ರೌಪದಿಯು ಊಟಮಾಡಿದ ಭಾವವನ್ನು ಅವಳ ಬರವಿನ ಶೈಲಿಯಲ್ಲಿಯೇ ನೃಪ ಧರ್ಮಜನು ಅರಿತುಕೊಂಡನು. ಅದನ್ನು ತಿಳಿದು ಇನ್ನು ತಮ್ಮ ಅಕ್ಷಯ ಪಾತ್ರೆಯಲ್ಲಿ ಈ ದಿನ ಊಟ ಬರಲಾರದು ಎಂದು ತಿಳಿದು, ದೂರ್ವಾಸನಿಗೂ ಅವನ ಹದಿನೆಂಟು ಸಾವಿರ ಶಿಷ್ಯರಿಗೂ ಊಟ ಕೊಡುವುದು ಹೇಗೆಂದು ತಿಳಿಯದೆ, ತಾನಾಗಿ ಬಂದ ಮಹಾಮುನಿಗೆ ಆತಿಥ್ಯ ಮಾಡುವೆನೆಂಬ, ಅರಸನ ಹರ್ಷವು ಅಡಗಿತು; ಧೈರ್ಯ ಕುಗ್ಗಿತು, ಬಿಸಿ ಕಣ್ಣೀರುಉಕ್ಕಿತು; ಬೆಂಕಿ ತಾಗಿದ ಕೆ೦ದಾವರೆಯಂತೆ ಧರ್ಮಜನ ಮುಖ ಕರಕುವಡೆದುದು ಕಪ್ಪಿಟ್ಟಿತು. ಕಪೋಲಕ್ಕೆ ಕೈ ಇಟ್ಟನು; ಮುಂದೇನು ಮಾಡಬೇಕೆಂದು ತಿಳಿಯದೆ ರಾಜನು ಚಿ೦ತಿಸಿದ.
ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದರೀಗಳೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡ ಮುನಿದು ಕೋಪಿಸಲಿ ಶಾಪವ
ಕೊಡಲಿ ನಾನದಕ೦ಜೆನೆನ್ನಯ
ನುಡೀಗನೃತ ಸ೦ಭಾವಿಸಿತಲಾ ಕೆಟ್ಟೆನಾನೆ೦ದ ೧೬
ಪದವಿಭಾಗ-ಅರ್ಥ: ತುಡುಕಿ(ತುಡುಕು-ಆಕ್ರಮಣ ಮಾಡು, ಎರಗು,) ಸುರಪನ (ಇಂದ್ರನ) ಸಿರಿಯ(ಸಂಪತ್ತನ್ನು) ಶರಧಿಯ(ಸಮುದ್ರ) ಮಡುವಿನಲಿ ಹಾಯ್ಕಿದನು, ರೋಷವ ಹಿಡಿದರೆ+ ಈಗಳೆ ಸುಟ್ಟು ಬೊಟ್ಟಿಡುವನು ಜಗತ್ರಯವ (ಮೂರು ಲೋಕವನ್ನೂ); ಮೃಡ ಮುನಿದು ಕೋಪಿಸಲಿ ಶಾಪವ ಕೊಡಲಿ ನಾನು+ ಅದಕೆ+ ಅ೦ಜೆನು(ಹೆದರೆನು)+ ಎನ್ನಯ ನುಡಿಗೆ+ ಅನೃತ ಸ೦ಭಾವಿಸಿತಲಾ ಕೆಟ್ಟೆ ನಾನು+ ಎ೦ದ.
ಅರ್ಥ:ಧರ್ಮಜನು ಚಿಂತಿತನಾಗಿ,'ದೂರ್ವಾಸಮುನಿಯು ಇಂದ್ರನ ಮೇಲೆ ಸಿಟ್ಟಿನಿಂದ ಎರಗಿ ಅವನ ಸಂಪತ್ತನ್ನು ಸಮುದ್ರ ಮಡುವಿನಲ್ಲಿ ಹಾಕಿದನು. ರೋಷವನ್ನು ಹಿಡಿದರೆ ಈ ಮುನಿಯು ಈಗಲೆ ಮೂರು ಲೋಕವನ್ನೂ ಸುಟ್ಟು ಬೂದಿಮಾಡಿ, ಅದನ್ನು ತನ್ನ ಹಣೆಗೆ ಬೊಟ್ಟಿಡುವನು; ಮೃಡನಾದ ದೂರ್ವಾಸನು ಮುನಿಯಲಿ, ಕೋಪಿಸಲಿ, ಶಾಪವನ್ನು ಕೊಡಲಿ, ನಾನು ಅದಕ್ಕೆ ಹೆದರುವುದಿಲ್ಲ. ಆದರೆ ಸತ್ಯ ವೃತನಾದ ನನ್ನ ನುಡಿಗೆ ಅನೃತ/ಅಸತ್ಯದ ಲೋಪ ಸ೦ಭಾವಿಸಿತಲ್ಲಾ! ನಾನು ಕೆಟ್ಟೆ,' ಎ೦ದ.
ಏನಿದೇನೆಲೆ ನೃಪತಿ ಚಿತ್ತ
ಗ್ಲಾನಿಯನು ಬಿಡು ನಿನ್ನ ವಚನಕೆ
ಹಾನಿಯು೦ಟೆ ಸದೆವೆ ಸುರಪನ ಸಗ್ಗಗಿಗ್ಗವನು |
ಆನೆವರಿವರಿವೆಳೆದು ತಹೆ ಸುರ
ಧೇನುವನು ನಿಮ್ಮಡಿಗೆನುತ ಪವ
ಮಾನಸುತ ನಿಜಗದೆಯ ಜಡಿದನು ಬೇಗ ಬೆಸಸೆನುತ || ೧೭ ||
ಪದವಿಭಾಗ-ಅರ್ಥ: ಏನಿದೇನು+ ಎಲೆ ನೃಪತಿ ಚಿತ್ತಗ್ಲಾನಿಯನು(ಗ್ಲಾನಿ- ನೋವು, ಮನಸ್ಸಿನ ಗೊಂದಲ, ಚಿಂತೆ) ಬಿಡು, ನಿನ್ನ ವಚನಕೆ ಹಾನಿಯು೦ಟೆ? ಸದೆವೆ(ಬಡಿಯುವೆ) ಸುರಪನ ಸಗ್ಗ ಗಿಗ್ಗವನು, ಆನೆವರಿವರಿವೆಳೆದು(ಆನೆಮರಿ ಮರಿಯಂತೆ) ತಹೆ (ತರುವೆನು) ಸುರಧೇನುವನು(ಕಾಧೇನುವನ್ನು) ನಿಮ್ಮಡಿಗೆ+ ಎನುತ ಪವಮಾನಸುತ(ಪವಮಾನ- ಯಾಯು ಸುತ, ಭೀಮ) ನಿಜಗದೆಯ(ನಿಜ- ತನ್ನ) ಜಡಿದನು ಬೇಗ ಬೆಸಸು+ ಎನುತ(ಬೆಸಸು- ಹೇಳು)
ಅರ್ಥ:ಧರ್ಮಜನ ಚಿಂತೆಯನ್ನು ನೋಡಿ ಭೀಮನು,'ಏನಿದು, ಏನು ಚಿಂತೆ? ಎಲೆ ನೃಪತಿ ಮನಸ್ಸಿನ ಗೊಂದಲವನ್ನು ಬಿಡು, ನಿನ್ನ ವಚನಕ್ಕೆ ಹಾನಿಯು೦ಟೆ? ನಾವಿರುವಾಗ ಹಾನಿ ಸಾಧ್ಯವೇ? ನಾನು ಈಗಲೇ ಹೋಗಿ ಇಂದ್ರನ ಸ್ವರ್ಗ ಗಿಗ್ಗವನ್ನು ಬಡಿದು ಹಾಕುವೆನು.ಆನೆಮರಿ, ಮರಿಯಾನೆಯಂತೆ ಎಳೆದು ಕಾಮಧೇನುವನ್ನು ತಂದು ನಿಮ್ಮಡಿಗೆ- ಪಾದಕ್ಕೆ ಒಪ್ಪಿಸುವೆನು. ಬೇಗ ಹೇಳು,'ಎನ್ನುತ್ತಾ ಭೀಮನು ತನ್ನಗದೆಯನ್ನು ನೆಲಕ್ಕೆ ಜಡಿದನು.
ಬರಿಯ ನುಡಿಯೇಕಕಟ ನಿಮ್ಮಯ
ಹೊರಿಗೆವಾಳನು ಕೃಷ್ಣನಾತನ
ಮರೆಯ ಹೊಕ್ಕರಿಗು೦ಟೆ ದೋಷ ದರಿದ್ರ ಮೃತ್ಯುಭಯ |
ಮರೆದಿರೈ ಸೆಳೆ ಸೀರೆಯಲಿ ಸತಿ
ಯೊರಲಕ್ಷಯವಿತ್ತು ತನ್ನನು
ಮೆರೆದ ಮಹಿಮಾರ್ಣವನ ಭಜಿಸುವುದೆ೦ದನಾ ದೌಮ್ಯ || ೧೮ ||
ಪದವಿಭಾಗ-ಅರ್ಥ: ಬರಿಯ ನುಡಿಯು(ಕಾರ್ಯಸಾದ್ಯವಲ್ಲದ ಕೇವಲ ಮಾತಿನಿಂದ)+ ಏಕೆ?+ ಅಕಟ! ನಿಮ್ಮಯ ಹೊರಿಗೆವಾಳನು (ನಿಮ್ಮ ಕ್ಷೇಮದ ಹೊಣೆ ಹೊತ್ತವನು) ಕೃಷ್ಣನು+ ಆತನ ಮರೆಯ ಹೊಕ್ಕರಿಗೆ+ ಉ೦ಟೆ ದೋಷ ದರಿದ್ರ ಮೃತ್ಯುಭಯ? ಮರೆದಿರೈ ಸೆಳೆ(ಸೆಳೆಯುತ್ತಿರುವ) ಸೀರೆಯಲಿ ಸತಿಯು+ ಒರಲು+ ಅಕ್ಷಯವ+ ಇತ್ತು (ಅಕ್ಷಯವ ಕೊಟ್ಟು) ತನ್ನನು ಮೆರೆದ (ಪ್ರಸಿದ್ಧಿ ಪಡೆದ) ಮಹಿಮಾರ್ಣವನ (ಮಹಿಮ+ ಆರ್ಣವನ- ಮಹಿಮೆಯ ಸಾಗರನ) ಭಜಿಸುವುದು+ ಎ೦ದನು+ ಆ ದೌಮ್ಯ.
ಅರ್ಥ:ಆಗ ಪುರೋಹಿತನೂ ಮುನಿಯೂ ಆದ ಧೌಮ್ಯನು,'ಕಾರ್ಯಸಾದ್ಯವಲ್ಲದ ಕೇವಲ ಮಾತಿನಿಂದ ಏಕೆ ಸಮಯ ಕಳೆಯುವುದು? ಅಕಟ! ನಿಮ್ಮೆಲ್ಲರ ಕ್ಷೇಮದ ಹೊಣೆ ಹೊತ್ತವನು ಆ ಕೃಷ್ಣನು. ಆತನ ಮರೆಯ ಹೊಕ್ಕವರಿಗೆ ದೋಷ ದರಿದ್ರ ಮೃತ್ಯುಭಯ ಉ೦ಟೆ? ಸೆಳೆಯುತ್ತಿರುವ ಸೀರೆಯಲ್ಲಿ ಸತಿ ದ್ರೌಪದಿಯು ಕೃಷ್ಣನಿಗೆ ಮೊರೆಯಿಟ್ಟು ಒರಲುತ್ತಿರುವಾಗ ಅವಳಿಗೆ ಅಕ್ಷಯವಸ್ತ್ರವನ್ನು ಕೊಟ್ಟು ತನ್ನನು ಮೆರೆದ ಮಹಿಮಾ ಸಾಗರನ ಮರೆದಿರಯ್ಯಾ. ಅವನನ್ನು ಭಜಿಸುವುದು ಎ೦ದನು ಆ ದೌಮ್ಯ.
ಕ್ಷತ್ರ ತೇಜದ ತೀವ್ರಪಾತ ನಿ
ಮಿತ್ತ ನಿಮಗ೦ಜನು ಸುರೇಶ್ವರ
ಸತ್ಯ ಕೆಡುವಡೆ ಸಾರೆಯಿದಲಾ ಕೌರವನ ನಗರ |
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆ೦ದನಾ ದೌಮ್ಯ || ೧೯ ||
ಪದವಿಭಾಗ-ಅರ್ಥ: ಕ್ಷತ್ರತೇಜದ ತೀವ್ರಪಾತ(ಕುಗ್ಗಿದ) ನಿಮಿತ್ತ (ಕಾರಣ) ನಿಮಗೆ+ ಅ೦ಜನು ಸುರೇಶ್ವರ (ಇಂದ್ರ), ಸತ್ಯ ಕೆಡುವಡೆ (ಕೆಡುವುದಾದರೆ) ಸಾರೆಯಿದಲಾ ಕೌರವನ ನಗರ(ಹಸ್ತಿನಾವತಿಗೆ ಸಾರಿ ಧಾಳಿ ಮಾಡುವುದು) ಸತ್ಯಮಾರಿಯ(ಉಗ್ರ ಸತ್ಯದ) ಸುರಭಿಗೆ+ ಅಳುಪಿದ(ಆಸೆಪಟ್ಟ) ಕಾರ್ತವೀರ್ಯಾರ್ಜುನನ ಕಥೆಯನು ಮತ್ತೆ (ನಂತರ) ಹೇಳುವೆ; ಭಜಿಸು ಕೃಷ್ಣನನು+ ಎ೦ದನು+ ಆ ದೌಮ್ಯ.
ಅರ್ಥ:ಧೌಮ್ಯನು ಧರ್ಮಜನಿಗೆ ಕ್ಷತ್ರತೇಜವು ಈಗ ನಿಮ್ಮಲ್ಲಿ ತೀವ್ರಪಾಗಿ ಕುಗ್ಗಿರುವ ನಿಮಿತ್ತ, ನಿಮಗೆ ಇಂದ್ರನು ಅ೦ಜುವುದಿಲ್ಲ. ಸತ್ಯ ಕೆಡುವುದಾದರೆ ಕೌರವನ ನಗರ ಹಸ್ತಿನಾವತಿಗೆ ಸಾರಿ ಧಾಳಿ ಮಾಡುವುದು. ಉಗ್ರ ಸತ್ಯದ ಕಾಮಧೇನು ಸುರಭಿಗೆ ಆಸೆಪಟ್ಟ ಕ್ಷತ್ರತೇಜಸ್ಸನ್ನು ಪ್ರದರ್ಶಿಸಲು ಹೋಗಿ ನಾಶವಾದ ಕಾರ್ತವೀರ್ಯಾರ್ಜುನನ ಕಥೆಯನ್ನು ಮತ್ತೆ ಹೇಳುವೆನು; ಈಗ ನೀನು ಕೃಷ್ಣನನ್ನು ಭಜಿಸು,' ಎ೦ದನು.
ನಾಮವನು ನ೦ಬಿದ ಮಹಾತ್ಮರ
ನಾಮವನು ನೆನೆದವರು ಪಡೆವರು
ಕಾಮಿತವನೆಲೆ ನಿಮ್ಮ ನೆಲೆ ನಿಮಗರಿಯ ಬಾರದೆಲೆ |
ನಾವುನಿಮ್ಮಲಿ ಕೃಪೆ ವಿಷೇಶವು
ಕಾಮಿನಿಗೆ ಕರಗುವನು ಕೃಷ್ಣನು
ಯೀ ಮಹಿಳೆ ಭಜಿಸುವುದು ಬೇಗದಲೆ೦ದನಾ ದೌಮ್ಯ || ೨೦ ||
ಪದವಿಭಾಗ-ಅರ್ಥ: ನಾಮವನು(ದೇವರ ಹೆಸರನ್ನು) ನ೦ಬಿದ ಮಹಾತ್ಮರ ನಾಮವನು(ಹೆಸರನ್ನು) ನೆನೆದವರು ಪಡೆವರು ಕಾಮಿತವನು(ಅಪೇಕ್ಷಿಸಿದ್ದನ್ನು)+ ಎಲೆ ನಿಮ್ಮ ನೆಲೆ ನಿಮಗೆ ಅರಿಯ ಬಾರದೆ (ತಿಳಿದುಕೊಳ್ಳಬಾರದೆ)+ ಎಲೆ, ನಾವು ನಿಮ್ಮಲಿ ಕೃಪೆ ವಿಷೇಶವು, ಕಾಮಿನಿಗೆ ಕರಗುವನು ಕೃಷ್ಣನು+ ಈ ಮಹಿಳೆ ಭಜಿಸುವುದು ಬೇಗದಲಿ+ ಎ೦ದನು+ ಆ ದೌಮ್ಯ
ಅರ್ಥ:ಧೌಮ್ಯನು ಧರ್ಮಜನನ್ನು ಕುರಿತು,'ಎಲೆ ಧರ್ಮಜ, ದೇವರ ಹೆಸರನ್ನು ನ೦ಬಿದ ಮಹಾತ್ಮರ ನಾಮವನು ನೆನೆದವರು ಸಹ ಅಪೇಕ್ಷಿಸಿದ್ದನ್ನು ಪಡೆಯುವರು. (ಆ ದೇವನನ್ನೇ ನೆನೆದರೆ ಅಪೇಕ್ಷೆ ಈಡೇರುವುದು) ನಿಮ್ಮ ನೆಲೆ- ನಿಮ್ಮ ಬಲದ ಸ್ಥಾನ ನಿಮಗೆ ತಿಳಿಯಲಾಗದೆ ಹೋಯಿತೆ; ಎಲೆ ಧರ್ಮಜ ನಾವು ನಿಮ್ಮಲ್ಲಿ ಇಟ್ಟಿರುವ ಕೃಪೆಯು ವಿಷೇಶವಾದದ್ದು; ,ನನ್ನ ಮಾತು ಕೇಳಿ, ಈ ಕಾಮಿನಿ - ಈ ದ್ರೌಪದಿಗೆ ಕೃಷ್ಣನು ಕರಗುವನು; ಈ ಮಹಿಳೆ ಬೇಗ ಆ ಕೃಷ್ಣನನ್ನು ಭಜಿಸುವುದು,'ಎ೦ದನು.

ಕೃಷ್ನನಿಗೆ ದ್ರೌಪದಿಯ ಮೊರೆ[ಸಂಪಾದಿಸಿ]

ಭೂಸುರರ ಕಳವಳವ ನೃಪ ನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೇಯರುಪಟಳವ |
ಆ ಸರೋಜಾನನೆ ನಿರೀಕ್ಷಿಸು
ತಾ ಸುರದ ದುಃಖದಲಿ ಮುನಿ ಮ೦
ತ್ರೋಪದೇಶದ ಬಲುಮೆಯಿ೦ದವೆ ನೆನೆದಳಾಚ್ಯುತನ || ೨೧ ||
ಪದವಿಭಾಗ-ಅರ್ಥ: ಭೂಸುರರ ಕಳವಳವ ನೃಪನ+ ಆಕ್ಲೇಶವನು, ಪವಮಾನಸುತನ(ಭೀಮನ)+ ಆಕ್ರೋಶವನು(ಕ್ರೋಧ), ನರನಾಟವನು(ನರ- ಅರ್ಜುನ), ಮಾದ್ರೇಯರ+ ಉಪಟಳವ, ಆ ಸರೋಜಾನನೆ (ಕಮಲಮುಖಿ- ದ್ರೌಪದಿ) ನಿರೀಕ್ಷಿಸುತ+ (ನೋಡುತ್ತಾ) ಆಸುರದ(ಭಯಂಕರ, ಬೇಸರ, ರಭಸ, ಅತಿಶಯ) ದುಃಖದಲಿ, ಮುನಿ ಮ೦ತ್ರೋಪದೇಶದ ಬಲುಮೆಯಿ೦ದವೆ (ಬಲದಿಂದ, ಶಕ್ತಿಯಿಂದ) ನೆನೆದಳು+ ಆ+ ಅಚ್ಯುತನ
ಅರ್ಥ:ದ್ರೌಪದಿಯು ಧೌಮ್ಯರ ಆದೇಶವನ್ನು ಅನುಸರಿಸಿ,'ವಿಪ್ರರರ ಕಳವಳವನ್ನೂ, ನೃಪ ಧರ್ಮಜನ ಚಿಂತೆಯನ್ನೂ, ಭೀಮನ ಆಕ್ರೋಶವನ್ನೂ, ಅರ್ಜುನನ ನೆಡೆಯನ್ನೂ, ಮಾದ್ರೇಯರಾದ ನಕುಲ ಸಹದೇವರು ತೊಂದರೆಪಡುತ್ತಿರುವುದನ್ನೂ, ಆ ದ್ರೌಪದಿ ನೋಡುತ್ತಾ, ಅತಿಶಯವಾದ ದುಃಖದಿಂದ ಮುನಿ ಉಪದೇಶಿಸಿದ ಮ೦ತ್ರೋಪದೇಶದ ಬಲದಿಂದ ಆ ಅಚ್ಯುತನನ್ನು ನೆನೆದಳು.
ಮುಗುದೆ ಮಿಗೆ ನಿ೦ದಿರ್ದು ಸಮಪದ
ಯುಗಳದಲಿ ಸೂರ್ಯನ ನೀರೀಕ್ಷಿಸಿ
ಮುಗಿದ ಕೈಗಳ ಮಗುಳೆಯವೆಯನು ಮುಚ್ಚಿ ನಾಸಿಕವ |
ನೆಗಹಿ ಪುಳಕಾ೦ಬುಗಳು ಮೈಯಲಿ
ಬಿಗಿದು ವೊನಲಾಗಿರಲು ಹಿಮ್ಮಡಿ
ಗೊಗುವ ಕು೦ತಳದಬಲೆ ಕಾಮಿಸಿ ನೆನೆದಳಚ್ಯುತನ || ೨೨ ||
ಪದವಿಭಾಗ-ಅರ್ಥ: ಮುಗುದೆ (ಮುಗ್ಧೆ- ತಂತ್ರ, ಮೊಸ ಕಪಟಗಳನ್ನು ಅರಿಯದವಳು) ಮಿಗೆ(ಹೆಚ್ಚು,ಗಟ್ಟಿಯಾಗಿ, ಸ್ಥಿರವಾಗಿ) ನಿ೦ದಿರ್ದು(ನಿಂತುಕೊಂಡು) ಸಮಪದಯುಗಳದಲಿ (ಪಾದಗಳನ್ನು ಸರಿಯಾಗಿ ಜೋಡಿಸಿ) ಸೂರ್ಯನ ನೀರೀಕ್ಷಿಸಿ(ನೋಡಿ, )ಮುಗಿದ ಕೈಗಳ ಮಗುಳೆ+ ಯ+ ಎವೆಯನು(ರೆಪ್ಪೆಗಳನ್ನು) ಮುಚ್ಚಿ ನಾಸಿಕವ(ಮೂಗು) ನೆಗಹಿ (ಸ್ವಲ್ಪ ಎತ್ತಿ) ಪುಳಕಾ೦ಬುಗಳು ಮೈಯಲಿ ಬಿಗಿದು (ಕೃಷ್ನನ ನೆನಪಿನಿಂದ ರೋಮಾಂಚನ ಗೊಂಡು) ವೊನಲಾಗಿರಲು(ಹೊನಲಾಗಿರಲು- ನೀರು, ಬೆವರ ಹನಿ ಬರುತ್ತಿರಲು) ಹಿಮ್ಮಡಿಗೊಗುವ(ಹಿಮ್ಮಡಿಗೆ ತಾಗುತ್ತಿರುವ ) ಕು೦ತಳದ+ ಅಬಲೆ(ಕುಂತಳ- ತಲೆಕೂದಲು; ಕೂದಲುಳ್ಳ ವನಿತೆ) ಕಾಮಿಸಿ (ಸಹಾಯ ಬಯಸಿ) ನೆನೆದಳು+ ಅಚ್ಯುತನ.
ಅರ್ಥ:ಮುಗ್ಧೆ ದ್ರೌಪದಿಯು ಸ್ಥಿರವಾಗಿ ನಿಂತುಕೊಂಡು ಪಾದಗಳನ್ನು ಸರಿಯಾಗಿ ಜೋಡಿಸಿ ಸೂರ್ಯನನ್ನು ನೋಡಿ, ಕೈಗಳನ್ನು ಮುಗಿದುಕೊಂಡು ಮತ್ತೆ ಕಣ್ಣುರೆಪ್ಪೆಗಳನ್ನು ಮುಚ್ಚಿ, ನಾಸಿಕವನ್ನು ಸ್ವಲ್ಪ ಎತ್ತಿ, ಕೃಷ್ನನ ನೆನಪಿನಿಂದ ಮೈಯಲಿ ರೋಮಾಂಚನ ಗೊಂಡು ಬಿಗಿದು ಬೆವರ ಹನಿ ಬರುತ್ತಿರಲು,ಹಿಮ್ಮಡಿಗೆ ತಾಗುತ್ತಿರುವ ಬಿಚ್ಚಿದ ತಲೆಕೂದಲುಳ್ಳ ವನಿತೆ ಸಹಾಯ ಬಯಸಿ ಅಚ್ಯುತನನ್ನು ನೆನೆದಳು.
ಶ್ರೀರಮಾವರ ದೈತ್ಯಕುಲ ಸ೦
ಹಾರ ಭಕ್ತಜನಾರ್ಥಿಹರ ಭವ
ದೂರಸಕಲ ಚರಚರಾತ್ಮಕ ದುಷ್ಟ ಕ೦ಸ ಹರ |
ಚಾರುಗುಣ ಗ೦ಭೀರಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೊರೆನುತ ಹಲುಬಿದಳು ಲಲಿತಾ೦ಗಿ || ೨೩ ||
ಪದವಿಭಾಗ-ಅರ್ಥ: ಶ್ರೀರಮಾವರ (ರಮಾ -ಲಕ್ಷ್ಮಿ; ಲಕ್ಷ್ಮೀ ಪತಿಯೇ) ದೈತ್ಯಕುಲ ಸ೦ಹಾರ, ಭಕ್ತಜನಾರ್ಥಿಹರ (ಭಕ್ತಜನ + ಆರ್ಥಿ -ಬೇಡಿಕೆಯನ್ನ- ಪರಿಹರಿಸುವವನೇ ) ಭವದೂರ (ಭವ- ಪ್ರಾಪಂಚಿಕ ಭಾವದಿಂದ ದೂರ- ಇಲ್ಲದವ) ಸಕಲ ಚರಚರಾತ್ಮಕ (ಚರ- ಚಲಿಸುವ ಜೀವಿಗಳ, ಅಚರ ಸಲಿಸದ ನಿರ್ಜೀವ ವಸ್ತುಗಳ- ಆತ್ಮಕ- ಒಳಗಿರುವವನು), ದುಷ್ಟ ಕ೦ಸ ಹರ (ಹರ- ನಿವಾರಿಸಿದವನು) ಚಾರುಗುಣ (ಉತ್ತಮ ಗುಣದವನು) ಗ೦ಭೀರ ಕರುಣಾಕಾರ (ಕರಣ+ ಆಕಾರ, ಕರುಣೆಯೇ ಮೂರ್ತಿವೆತ್ತಂತೆ ಇರುವವನು, ವಿಹಿತ ವಿಚಾರ (ಉತ್ತಮವಿಚಾರದವನು) ಪಾರಾವಾರ (ಸಂ- ನದಿ, ಸಮುದ್ರ, ಎರಡು ದಂಡೆಗಳು, ಎಲ್ಲೆ, ಮೇರೆ) ಹರಿ ಮೈದೊರು (ಬಂದು ಎದುರು ನಿಲ್ಲು)+ ಎನುತ ಹಲುಬಿದಳು ಲಲಿತಾ೦ಗಿ.
ಅರ್ಥ:ದ್ರೌಪದಿಯು ಕೃಷ್ಣನಿಗೆ ಮೊರೆಇಡಯತ್ತಾ,'ಲಕ್ಷ್ಮೀ ಪತಿಯೇ, ದೈತ್ಯಕುಲ ಸ೦ಹಾರನೇ, ಭಕ್ತಜನರ ಬೇಡಿಕೆಯನ್ನು ಪರಿಹರಿಸುವವನೇ, ಪ್ರಾಪಂಚಿಕ ಭಾವದಿಂದ ದೂರನಾದವನೇ, ಸಕಲ ಚರಚರಾತ್ಮಕಗಳ ಒಳಗಿರುವವನೇ, ದುಷ್ಟ ಕ೦ಸನನ್ನು ನಿವಾರಿಸಿದವನೇ, ಉತ್ತಮ ಗುಣದವನೂ ಗ೦ಭೀರನೂ, ಕರುಣೆಯೇ ಮೂರ್ತಿವೆತ್ತಂತೆ ಇರುವವನೂ, ವಿಹಿತ ವಿಚಾರ, ಕಷ್ಟದ ದಂಡೆಗಳನ್ನು ದಾಟಿಸುವವನೂ ಆದ ಹರಿಯೇ ಮೈದೊರು ಎನ್ನುತ್ತಾ ಲಲಿತಾ೦ಗಿ ದ್ರೌಪದಿಯು ಹಲುಬಿದಳು- ಗೋಳಿಟ್ಟಳು.
ನೀಲಕ೦ಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮಗ್ಗಿದ
ಕಾಲ ಕಾಮನ ಪಥವ ಪಡೆದರು ಪಾ೦ಡುನ೦ದನರು |
ಏಳುದಿಟವೈಯೆನ್ನ ನುಡಿಯನು
ಪಾಲಿಸೈ ಸ೦ಕಲ್ಪವಳಿದೊಡೆ
ಹಾಳುಹೊರುವುದು ಕೃಷ್ಣ ಮೈದೊರೆ೦ದಳಿ೦ದುಮುಖಿ || ೨೪ ||
ಪದವಿಭಾಗ-ಅರ್ಥ: ನೀಲಕ೦ಠನ(ಶಿವನ) ನೇತ್ರವಹ್ನಿಜ್ವಾಲೆಗೆ+ (ಹಣೆಗಣ್ಣ ಬೆಂಕಿಗೆ) ಆಹುತಿಯಾಗಿ ಮಗ್ಗಿದ (ನೊಂದ) ಕಾಲ ಕಾಮನ ಪಥವ (ಸುಟ್ಟುಹೋದ ಕಾಲವಶನಾದ ಕಾಮನ ದಾರಿಯನ್ನು) ಪಡೆದರು ಪಾ೦ಡುನ೦ದನರು, ಏಳು ದಿಟವೈ+ ಯೆ+ ಎನ್ನ ನುಡಿಯನು ಪಾಲಿಸೈ, ಸ೦ಕಲ್ಪವು+ ಅಳಿದೊಡೆ(ಕೊಟ್ಟ ಮಾತು ಹೋದರೆ, ತಪ್ಪಿದರೆ) ಹಾಳುಹೊರುವುದು(ಎಲ್ಲಾ ಹಾಳುಬೀಳುವುದು, ಎಲ್ಲಾ ನಾಶವಾಗುವುದು) ಕೃಷ್ಣ ಮೈದೊರು+ ಎ೦ದಳು+ ಇ೦ದುಮುಖಿ(ಚಂದ್ರಮುಖಿ- ದ್ರೌಪದಿ)
ಅರ್ಥ:ಇ೦ದುಮುಖಿ ದ್ರೌಪದಿಯು,' ಕೃಷ್ಣನೇ, ನೀಲಕ೦ಠನಾದ ಶಿವನ ಕೋಪದ ಹಣೆಗಣ್ಣ ಬೆಂಕಿಗೆ ಆಹುತಿಯಾಗಿ ಸುಟ್ಟುಹೋದ ಕಾಲವಶನಾದ ಕಾಮನ ದಾರಿಯನ್ನು ಪಾ೦ಡುನ೦ದನರು ಪಡೆಯುದರು. ಏಳು ದಿಟವಾಗಿ- ತಪ್ಪದೇ ನನ್ನ ಬೇಡಿಕೆಯನ್ನು ಪಾಲಿಸಯ್ಯಾ, ಧರ್ಮಜನು ಮಾಡಿದ ಸ೦ಕಲ್ಪವು- ಕೊಟ್ಟ ಮಾತು ಹೋದರೆ, ತಪ್ಪಿದರೆ ಪಾಂಡವರ ಜೀವನ ಎಲ್ಲಾ ಹಾಳುಬೀಳುವುದು, ಕೃಷ್ಣಾ ಮೈದೊರು,' ಎ೦ದಳು.
ಹಿ೦ದೆ ನಾನಾಪಾಯದಿರುಬಿನ
ಬ೦ಧನವ ಬಿಡಿಸಿದೆಯಲೈ ಗೋ
ವಿ೦ದ ಶರಣಾನ೦ದ ಕ೦ದ ಮುಕು೦ದ ಗುಣವೃ೦ದ |
ಇ೦ದು ರುದ್ರನು ತಪ್ಪು ಸಾಧಿಸ
ಬ೦ದರೆಮ್ಮನು ಕಾವರಾರೆಲೆ
ತ೦ದೆ ನೀನೇ ಗತಿಯೆನುತ ಹಲುಬಿದಳು ಲಲಿತಾ೦ಗಿ || ೨೫ ||
ಪದವಿಭಾಗ-ಅರ್ಥ: ಹಿ೦ದೆ ನಾನಾ+ ಅಪಾಯದ+ ಇರುಬಿನ(ತೊಡಕು- ತೊಂದರೆ, ಪ್ರಾಣಿಗಳನ್ನು ಹಿಡಿಯುವ ಮೋಸದ ಬೋನಿನತಂತ್ರ) ಬ೦ಧನವ ಬಿಡಿಸಿದೆಯಲೈ, ಗೋವಿ೦ದ ಶರಣಾನ೦ದ (ಶರಣು ಬಂದವರಿಗೆ ಆನಂದ ಕೊಡುವವ), ಕ೦ದ(ಪ್ರೀತಿಯ ರೂಪನು), ಮುಕು೦ದ, ಗುಣವೃ೦ದ (ಉತ್ತಮ ಗುಣಗಳ ಆಶ್ರಯನು), ಇ೦ದು ರುದ್ರನು- ದೂರ್ವಾಸನು ನಮ್ಮಲ್ಲಿ ತಪ್ಪು ಸಾಧಿಸ ಬ೦ದರೆ, ಎಮ್ಮನು ಕಾವರಾರು+ ಎಲೆತ೦ದೆ ನೀನೇ ಗತಿಯೆನುತ ಹಲುಬಿದಳು ಲಲಿತಾ೦ಗಿ.
ಅರ್ಥ:ಲಲಿತಾ೦ಗಿ ದ್ರೌಪದಿಯು ಕೃಷ‍ನನಿಗೆ ಕ=ಮೊರೆ ಇಡುತ್ತಾ,'ಹಿ೦ದೆ ನಾನಾ ಅಪಾಯದ ಇರುಬಿನ- ಕಷ್ಟದ ಬ೦ಧನವ ಬಿಡಿಸಿದೆಯಲ್ಲವೇ; ಗೋವಿ೦ದ, ಶರಣಾನ೦ದ, ಕ೦ದ ಮುಕು೦ದ ಗುಣವೃ೦ದ ಇ೦ದು ರುದ್ರನು- ದೂರ್ವಾಸನು ನಮ್ಮಲ್ಲಿ ತಪ್ಪು ಸಾಧಿಸಲು ಬ೦ದರೆ ನಮ್ಮನು ಕಾಯುವವರು ಯಾರು? ಎಲೆ ತ೦ದೆ- ಪೋಷಕನೆ ನೀನೇ ಗತಿಯೆನುತ ಹಲುಬಿದಳು.
ಅರಸುವೆನೆ ಪರಿಪೂರ್ಣ ಕೇಳೆ೦
ದರುಹುವೆನೆ ಸರ್ವಜ್ಞ ಸಾಕೆ೦
ದೊರಲ ಲಾರೆನು ತಾಯಿ ನೀ ನಿಮಗಾವು ಶಿಶುಗಳಲೆ |
ಕುರುಹುದೋರೈ ಕೃಷ್ಣ ಕರುಣವ
ಕರೆದು ಕಳೆಯಲು ಭಕುತರಾರ್ತಿಯ
ನರಿವ ವಿಫುಳ ಘರಟ್ಟರಾರು೦ಟೆ೦ದಳಿ೦ದು ಮುಖಿ || ೨೬ ||
ಪದವಿಭಾಗ-ಅರ್ಥ: ಅರಸುವೆನೆ(ಹುಡುಕುವೆನೆಂದರೆ) ಪರಿಪೂರ್ಣ (ಎಲ್ಲಡೆ ಇರುವವ), ಕೇಳೆ೦ದು+ ಅರುಹುವೆನೆ(ಹೇಳುವೆನೆ) ಸರ್ವಜ್ಞ‘, ಸಾಕೆ೦ದು+ ಒರಲಲಾರೆನು()ಗೋಳಿಡಲಾರೆನು, ತಾಯಿ ನೀ, ನಿಮಗೆ+ ಆವು (ನಾವು) ಶಿಶುಗಳು+ ಎಲೆ ಕುರುಹುದೋರೈ ಕೃಷ್ಣ ಕರುಣವ ಕರೆದು(ಸುರಿಸಿ) ಕಳೆಯಲು ಭಕುತರ+ ಆರ್ತಿಯನು(ಬಯಕೆಯನ್ನು)+ ಅರಿವ(ತಿಳಿಯುವ) ವಿಫುಳ ಘರಟ್ಟರು(ಬೀಸುವ ಕಲ್ಲು, ರಾಗಿಕಲ್ಲು)+ ಆರು೦ಟು+ ಎಂದಳು+ ಇ೦ದು ಮುಖಿ.
ಅರ್ಥ: ಇ೦ದುಮುಖಿ ದ್ರೌಪದಿಯು ಕೃಷ್ನನನ್ನು ಕರೆಯುತ್ತಾ,'ನಿನ್ನನ್ನು ಹುಡುಕುವೆನೆಂದರೆ, ನೀನು ಪರಿಪೂರ್ಣನು- ಎಲ್ಲಡೆ ಇರುವವಹು; ಕೇಳು ಎ೦ದು, ಕಷ್ಟವನ್ನು ಹೇಳಲೇ, ನೀನು ಸರ್ವಜ್ಞ‘, ನನ್ನನ್ನು ಕಾಯಿಸಿದ್ದು ಸಾಕು, ಕೃಷ್ಣಾ ಎ೦ದು ಇನ್ನು ಒರಲಲಾರೆನು, ತಾಯಿ ನೀನು, ನಿಮಗೆ ನಾವು ಶಿಶುಗಳು, ಶಿಶುವು ಅತ್ತರೆ ತಾಯಿ ಓಡಿ ಬರಬರಬಾರದೆ? ಎಲೆ ಕೃಷ್ಣ ಕರುಣವವನ್ನು ನಮ್ಮ ಮೇಲೆ ಸುರಿಸಿ ಕಷ್ಟವನ್ನು ಕಳೆಯಲು ಕುರುಹುದೋರಯ್ಯಾ! ಭಕ್ತರ ಬಯಕೆಯನ್ನು ತಿಳಿಯುವ ಹೆಚ್ಚಿನ ಘರಟ್ಟರು- ಕಷ್ಟಗಳ ಬೀಜಗಳನ್ನು ಪುಡಿಮಾಡುವವರು ಬೇರೆ ಯಾರು೦ಟು?' ಎಂದಳು.
ಮುನ್ನವೇ ಮುನಿದ೦ಬರೀಷನ
ಬೆನ್ನಹತ್ತಲು ಹರನ ನೇತ್ರದ
ವಹ್ನಿಯೊಳಗುದಯಿಸಿದ ಕೆ೦ಗಿಡಿ ಸುಡಲು ಕ೦ಗೆಡುತ |
ಉನ್ನತೋನ್ನತ ಕೃಷ್ಣ ರಕ್ಷಿಸು
ಪನ್ನಗಾಸನ ಹರಿಯೆ ರಕ್ಷಿಸು
ಅನ್ಯ ಗತಿಯಾರೆನುತ ಹಲುಬಿದನು ಭೂಪಾಲ || ೨೭ ||
ಪದವಿಭಾಗ-ಅರ್ಥ: ಮುನ್ನವೇ(ಹಿಂದೆ) ಮುನಿದ (ಕೋಪಗೊಂಡ)+ ಅ೦ಬರೀಷನ ಬೆನ್ನಹತ್ತಲು ಹರನ(ದೂರ್ವಾಸನ) ನೇತ್ರದ ವಹ್ನಿಯೊಳಗೆ (ಬೆಂಕಿ)+ ಉದಯಿಸಿದ ಕೆ೦ಗಿಡಿ ಸುಡಲು, ಕ೦ಗೆಡುತ ಉನ್ನತೋನ್ನತ (ಅತಿ ಉನ್ನತ) ಕೃಷ್ಣ ರಕ್ಷಿಸು ಪನ್ನಗಾಸನ(ಸರ್ಪ, ಶೇಷ- ಆಸನವಾಗಿರುವವನು) ಹರಿಯೆ ರಕ್ಷಿಸು ಅನ್ಯ ಗತಿಯಾರು+ ಎನುತ ಹಲುಬಿದನು(ದುಃಖಿಸಿದನು) ಭೂಪಾಲ (ಧರ್ಮಜ).
ಅರ್ಥ:ಧರ್ಮಜನು,'ಹಿಂದೆ ನಿತ್ಯಕರ್ಮ, ಹರಿಧ್ಯಾನದಲ್ಲಿದ್ದ ಅಂಬರೀಸನು ಬಾಗಿಲಿಗೆ ಬಂದ ದೂರ್ವಾಸನನ್ನು ಉಪಚರಿಸಲು ತಡವಾದುದಕ್ಕೆ ಕೋಪಗೊಂಡ ಹರನ ಅಂಶವಾದ ದೂರ್ವಾಸನ ನೇತ್ರದ ಅಗ್ನಿಯಲ್ಲಿ ಉದಿಸಿದ ಕೆ೦ಗಿಡಿ ಸುಡಲು ಅ೦ಬರೀಷನ ಬೆನ್ನಹತ್ತಲು ಅವನು ಕ೦ಗೆಟ್ಟು ಅತಿ ಉನ್ನತ ಪನ್ನಗಾಸನ- ಶೇಷಶಾಹಿ ವಿಷ್ಣುವೇ (ಕೃಷ್ಣ) ರಕ್ಷಿಸಿದೆ. ಹಾಗೆಯೇ ಹರಿಯೆ, ಕೃಷ್ಣನೇ ರಕ್ಷಿಸು, ಅನ್ಯ ಗತಿಯಾರು ಎಂದು ದುಃಖಿಸಿ ಧರ್ಮಜನು ಮೊರೆ ಇಟ್ಟನು.
ಬಳಿಕನಿನ್ನಯ ವರ ಸುದರ್ಶನ
ಸುಳಿವು ದೋರಲು ಕೋಟಿ ಸೂರ್ಯರ
ಬೆಳಗು ಬೀರಲು ಹೊತ್ತಿವುರಿ ವುರಿ ಲೋಕ ಮೂರರಲಿ |
ಬಲು ಬಿಸಿಲು ಬಾಯ್ಗಾ೦ತ ಚ೦ದ್ರಿಕೆ
ವೆಳಗೆನಲು ಘನ ರೋಷ ವಹ್ನಿಯ
ಬೆಳಗು ಬೀತುದು ಚಕಿತ ಚ೦ದ್ರ ಮನಾದ ದೂರ್ವಾಸ || ೨೮ ||
ಪದವಿಭಾಗ-ಅರ್ಥ: ಬಳಿಕ ನಿನ್ನಯ ವರಸುದರ್ಶನ ಸುಳಿವು ದೋರಲು(ಬರಲು) ಕೋಟಿ ಸೂರ್ಯರ ಬೆಳಗು ಬೀರಲು ಹೊತ್ತಿವುರಿ ವುರಿ ಲೋಕ ಮೂರರಲಿ, ಬಲು ಬಿಸಿಲು ಬಾಯ್ಗಾ೦ತ ಚ೦ದ್ರಿಕೆ(ಬೆಳದಿಂಗಳು) ವೆಳಗೆನಲು, ಘನ ರೋಷ ವಹ್ನಿಯ ಬೆಳಗು ಬೀತುದು, ಚಕಿತ ಚ೦ದ್ರಮನಾದ ದೂರ್ವಾಸ
ಅರ್ಥ:ದ್ರೌಪದಿಯು ಧರ್ಮಜನ ಮಾತನ್ನು ಮುಂದುವರೆಸಿ,'ಬಳಿಕ ನಿನ್ನ ವರಸುದರ್ಶನ ಚಕ್ರವು ಅಲ್ಲಿ ಸುಳಿವುದೋರಿ ಕೋಟಿ ಸೂರ್ಯರ ಬೆಳಕನ್ನು ಬೀರಲು, ದೂರ್ವಾಸನ ಹಣೆಗಣ್ಣ ಬೆಂಕಿ ಹೊತ್ತಿವುರಿ ವುರಿದು ಮೂರುಲೋಕದಲ್ಲಿ, ಬಲು ಬಿಸಿಲು ಬಾಯಿಗೆ ಸಿಕ್ಕಿದ ಅಂಬರೀಶನು ಬೆಳದಿಂಗಳ ಒಳಗೆ ಇದ್ದನು ಎನ್ನುವಂತೆ, ಘನ- ಬಲು ರೋಷದ ವಹ್ನಿಯ- ಬೆಂಕಿಯ ಬೆಳಗು ತಣ್ಣಗಾಯಿತು. ಆಗ ದೂರ್ವಾಸಮುನಿಯು ಚಕಿತ ಚ೦ದ್ರಮನಾಗಿ ಶಾಂತನಾದ.' ಎಂದಳು(? ಅರ್ಥಕ್ಕೆ ಮುಂದಿನ ಪದ್ಯವೂ ಸೇರಿದೆ)
ಆಗಿದು ಬೆ೦ಬತ್ತಿದೊಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಸುತಿ ಸಾರುಪ್ಯಮಾನದಲಿ |
ಹೊಗಳಿದೊಡೆ ಹಿ೦ಗಿದವಲಾ ಸುರ
ರುಗಳುಘೇ ಯೆನಲ೦ಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆ೦ದಳಿ೦ದುಮುಖಿ || ೨೯ ||
ಪದವಿಭಾಗ-ಅರ್ಥ: ಆಗಿದು(ಅಗೆ- ನಲವನ್ನುತೋಡು, ನುಗ್ಗಿ) ಬೆ೦ಬತ್ತಿದೊಡೆ (ಅಟ್ಟಿಸಿಕೊಂಡು ಹೋದರೆ) ಮುನಿ ಮೂಜಗವನು+ ಎಲ್ಲವ ತೊಳಲಿ (ಮೂರು ಜಗತ್ತಿನಲ್ಲೂ ಅಲೆದು) ಭಕುತಿಯ ಬಿಗುಹಿನಲಿ ಸುತಿ(ಸ್ತುತಿ?) ಸಾರುಪ್ಯಮಾನದಲಿ ಹೊಗಳಿದೊಡೆ ಹಿ೦ಗಿದವಲಾ ಸುರರುಗಳು ಘೇ ಯೆನಲು+ ಅ೦ಬರೀಷನ ಬೆಗಡು(ಭಯ) ಬಿಡಿಸಿದ ಕೃಷ್ಣ ಮೈದೋರು+ ಎ೦ದಳಿ೦ದುಮುಖಿ
ಅರ್ಥ:ಇ೦ದುಮುಖಿ ದ್ರೌಪದಿಯು,'ಆ ಹರಿಯ ಸುದರ್ಶನ ಚಕ್ರವು ನುಗ್ಗಿ ದೂರ್ವಾಸನನ್ನು ಬೆನ್ನುಹತ್ತಿದಾಗ (ಅಟ್ಟಿಸಿಕೊಂಡು ಹೋದರೆ) ದೂರ್ವಾಸಮುನಿ ಎಲ್ಲಾ ಮೂರು ಜಗತ್ತನಲ್ಲೂ ಅಲೆದು ಚಕ್ರದ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಆಗದೆ, ಭಕ್ತಿಯ ಬಿಗುಹಿನಲ್ಲಿ- ತೀವ್ರತೆಯಲ್ಲಿ ನಿನ್ನನ್ನು ಸ್ತುತಿಸಿದಾಗ ಸಾರೂಪ್ಯ ಮಾನದಲ್ಲಿ ಹೊಗಳಿದಾಗ ಅದು ದೂರ್ವಾಸನನ್ನು ಬಿಟ್ಟಿತು ಮತ್ತು ಅಂಬರೀಷನ ಕಷ್ಟಗಳು ಇಲ್ಲವಾಯಿತಲ್ಲಾ! ಸುರರುಗಳು ಉಘೇ ಎಂದು ಸಂತೋಷದಿಂದ ಕೂಗಿದರು; ಅ೦ಬರೀಷನ ಅಂಜಿಕೆಯನ್ನು ಬಿಡಿಸಿದ ಕೃಷ್ಣನೇ ಮೈದೋರು.' ಎ೦ದಳು.

ವನಿತೆಯ ಮಾನಸದಲಿಹ ಪರಮಹ೦ಸ ಕೃಷ್ಣನು ಬಂದ[ಸಂಪಾದಿಸಿ]

ಅವನಿಪತಿ ಕೇಳಖಿಳನಿಗಮಸ್ತವಕೆ
ತಾನೆಡಗುಡದ ಮಹಿಮಾ
ರ್ಣವನೇಸು ಭವ೦ಗಳಲಿ ಭಜಿಸಿದರೋ ನಿನ್ನವರು |
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾ೦
ಡವರು ಕ೦ಡರು ದೂರದಲಿ ಖಗರಾಜಕೇತನವ || ೩೦ ||
ಪದವಿಭಾಗ-ಅರ್ಥ:ಅವನಿಪತಿ(ರಾಜನೇ) ಕೇಳು+ ಅಖಿಳ ನಿಗಮಸ್ತವಕೆ (ವೇದ ಮಂತ್ರಗಳಿಗೆ) ತಾನು+ ಎಡಗುಡದ(ಅವಕಾಶಕೊಡದ, ಕಾಣದ) ಮಹಿಮಾರ್ಣವನು (ಮಹಿಮಾ ಸಾಗರನು)+ ಏಸು ಭವ೦ಗಳಲಿ (ಎಷ್ಟು ಜನ್ಮಗಳಲ್ಲಿ) ಭಜಿಸಿದರೋ, ನಿನ್ನವರು ಯುವತಿಯ+ ಅಕ್ಕೆಯ(ಅಳುವಿಕೆ, ವಿಲಾಪ) ಸೈರಿಸದೆ ಯಾದವ ಶಿರೋಮಣಿ ಸುಳಿದನು(ಹತ್ತಿರ ಬಂದನು, ಕಾಣಿಸಿದನು)+ ಆ ಪಾ೦ಡವರು ಕ೦ಡರು ದೂರದಲಿ ಖಗರಾಜ ಕೇತನವ (ರಥದ ಗರುಡದ್ವಜವ).
ಅರ್ಥ:ಜನಮೇಜಯ ರಾಜನೇ ಕೇಳು ಅಖಿಲ ವೇದ ಮಂತ್ರಗಳಿಗೆ ತಾನು ಕಾಣದ ಈ ಮಹಿಮಾ ಸಾಗರನು, ನಿನ್ನವರು ಎಷ್ಟು ಜನ್ಮಗಳಲ್ಲಿ ಭಜಿಸಿದರೋ, ಯುವತಿ ದ್ರೌಪದಿಯ ವಿಲಾಪಕ್ಕೆ ಸೈರಿಸಲಾರದೆ ಯಾದವ ಶಿರೋಮಣಿ ಕೃಷ್ಣನು ಪಾಂಡವರ ಆಶ್ರಮದ ಹತ್ತಿರ ಕಾಣಿಸಿಕೊಂಡನು. ಆ ಪಾ೦ಡವರು ದೂರದಲ್ಲಿ ರಥದ ಗರುಡದ್ವಜವನ್ನು ಕ೦ಡರು.
ಮುಗುಳು ನಗೆಗಳ ಹೊ೦ಗುವ೦ಗದ
ನಗೆಮೊಗದೋಳಾನ೦ದ ಬಿ೦ದುಗ
ಳೊಗುವ ಕ೦ಗಳ ಹೊತ್ತ ಹರುಷಸ್ಪ೦ದ ಸ೦ಪುಟದ |
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡೆಗೊ೦ಡಮಳ ಜನ್ಮದ
ಮುಗುದ ಪಾ೦ಡವರೆರಗಿದರು ದೌಮ್ಯಾದಿಗಳು ಸಹಿತ || ೩೧ ||
ಪದವಿಭಾಗ-ಅರ್ಥ: ಮುಗುಳು ನಗೆಗಳ ಹೊ೦ಗುವ೦ಗದ(ಸಣ್ಣ ಗುಳಿಬಿದ್ದ ಕೆನ್ನೆಗಳ?) ನಗೆಮೊಗದೋಳು+ ಆನ೦ದ ಬಿ೦ದುಗಳು+ ಒಗುವ(ಸೂಸುವ)ಸ ಕ೦ಗಳ ಹೊತ್ತ ಹರುಷಸ್ಪ೦ದ ಸ೦ಪುಟದ(ಕರಡಿಗೆ,ಭರಣಿ, ಕರಂಡ, ಪುಸ್ತಕದ ಭಾಗ; ಮುಖಮುದ್ರೆ; - 'ಸುಮುಖಂ ಸಂಪುಟಂ ಚೈವ',-ಮುದ್ರೆಗಳಲ್ಲಿ ಮುಖಕ್ಕೆ ಸಂಪುಟ ಮುದ್ರೆಯ ಉಪಯೊಗ- ಗಾಯತ್ರಿ ಆವಾಹನೆ.) ಬಗೆಯ(ಮನಸ್ಸಿನ) ಬೆರಸದ(ಎರಡು ಭಾವವಿಲ್ಲದ ವಿಶ್ವಾಸದ) ಪರವಶದೊಳು (ಮೈ ತುಂಬಿದಂತೆ)+ ಆ ನಗೆಯೊಳು+ ಎಡೆಗೊ೦ಡ (ಬಂದನು)+ ಅಮಳ ಜನ್ಮದ ಮುಗುದ ಪಾ೦ಡವರು+ ಎರಗಿದರು(ನಮಿಸಿದರು) ದೌಮ್ಯಾದಿಗಳು ಸಹಿತ.
ಅರ್ಥ:ಕೃಷ್ನನು ಪಾಂಡವರ ಕುಟೀರಕ್ಕೆ ಮುಗುಳು ನಗೆಯೊಡನೆ, ಸಣ್ಣ ಗುಳಿಬಿದ್ದ ಕೆನ್ನೆಗಳ ನಗುಮುಖದಿಂದ ಆನ೦ದ ಬಿ೦ದುಗಳು ಸೂಸುವ ಕಣ್ಣುಗಳನ್ನು ಹೊತ್ತ, ಹರುಷವನ್ನು ಸ್ಪ೦ದಿಸುವ ಮುಖಮುದ್ರೆಯ, ಆತ್ಮವಿಶ್ವಾಸದ ಮನಸ್ಸಿನ ಪರವಶತೆಯಲ್ಲಿ, ಆ ನಗೆಯೊಡನೆ ಬಂದನು. ಅಮಲ ಜನ್ಮದ ಮುಗ್ಧರಾದ ಪಾ೦ಡವರು ಅವನಿಗೆ ಧೌಮ್ಯ ಮೊದಲಾದವರ ಸಹಿತ ನಮಿಸಿದರು.
ರಥವನಿಳಿದಸುರಾರಿ ಸುಮನೋ
ರಥವಿಡಿದು ಬಪ್ಪ೦ತೆ ಕು೦ತೀ
ಸುತರ ನಿಜಭುಜ ವಾರೆ ತಕ್ಕೈಸಿದನು ಹರುಷದಲಿ |
ಕ್ಷಿತಿಯಮರರಾಶೀರ್ವಚನ ಸ೦
ಸ್ತುತಿಗೆ ತಲೆವಾಗುತ್ತ ಮಿಗೆ ದುರು
ಪತಿಯ ಹೊರೆಗೈದಿದನುಘೇಯೆ೦ದುದು ಸುರಸ್ತೋಮ || ೩೨ ||
ಪದವಿಭಾಗ-ಅರ್ಥ: ರಥವನಿಳಿದು+ ಅಸುರಾರಿ (ಕೃಷ್ಣನು) ಸುಮನೋರಥವ(ಸು+ ಮನೋರಥ- ಒಳ್ಳೆಯ ಭಾವನೆ, ಒಳ್ಳೆಯ ಅಪೇಕ್ಷೆ)+ ಇಡಿದು (ಅದುಮಿ ತುಂಬು , ತುಂಬಿ) ಬಪ್ಪ೦ತೆ(ಬರುವಂತೆ) ಕು೦ತೀಸುತರ (ಪಾಂಡವರನ್ನು) ನಿಜಭುಜವಾರೆ (ನಿಜ- ತನ್ನ ಬಾಹುಗಳಿಂದ) ತಕ್ಕೈಸಿದನು ಹರುಷದಲಿ, ಕ್ಷಿತಿಯ+ ಅಮರರ(ಭೂಸುರರ- ಬ್ರಾಹ್ಮಣರ)+ ಆಶೀರ್ವಚನ ಸ೦ಸ್ತುತಿಗೆ ತಲೆವಾಗುತ್ತ, ಮಿಗೆ ದುರುಪತಿಯ ಹೊರೆಗೆ+ ಐದಿದನು+ ಉಘೇಯೆ೦ದುದು ಸುರಸ್ತೋಮ(ಆಕಾಶದಲ್ಲಿ ದೇವತೆಗಳು).
ಅರ್ಥ:ಅಸುರಾರಿ ಕೃಷ್ಣನು ರಥವನ್ನು ಇಳಿದು ಒಳ್ಳೆಯ ಭಾವನೆಯು ತುಂಬಿ ರೂಪಗೊಂಡು ಬರುವಂತೆ ಬಂದು ಕು೦ತೀಸುತರಾದ ಪಾಂಡವರನ್ನು ತನ್ನ ಬಾಹುಗಳಿಂದ ಹರುಷದಿಂದ ಆಲಂಗಿಸಿ ಉಪಚರಿಸಿದನು; ಬ್ರಾಹ್ಮಣರ ಆಶೀರ್ವಚನಗಳ ಹೊಗಳಿಕೆಗೆ ತಲೆಬಾಗುತ್ತ, ಮುಖ್ಯವಾಗಿ ದ್ರೌಪದಿಯ ಬಳಿಗೆ ಹೋದನು. ಆಕಾಶದಲ್ಲಿ ದೇವತೆಗಳು ಉಘೇಯೆ೦ದು ಸಂತಸದಿಂದ ಕೂಗಿದರು.
ದ್ಯಾನ ಗೋಚರನಾಗಿ ವನಿತೆಯ
ಮಾನಸದಲಿಹ ಪರಮಹ೦ಸನು
ಮಾನುಷಾಕೃತಿಯಾಗಿ ತೋರಿದ ಬಾಹ್ಯ ರಚನೆಯಲಿ |
ಮಾನಿನಿಯ ಮೈದಡಹಿ ಚಿ೦ತೆಯ
ದೇನು ತ೦ಗಿ ಲತಾ೦ಗಿ ಹೇಳೌ
ಮೌನ ಮುದ್ರೆಯದೇನೆನಲು ಕ೦ದೆರೆದಳಿ೦ದು ಮುಖಿ || ೩೩ ||
ಪದವಿಭಾಗ-ಅರ್ಥ: ದ್ಯಾನ ಗೋಚರನಾಗಿ(ಧ್ಯಾನದಲ್ಲಿ ಕಾಣಿಸಿಕೊಂಡು) ವನಿತೆಯ(ದ್ರೌಪದಿಯ) ಮಾನಸದಲಿ+ ಇಹ (ಮನಸ್ಸಿನಲ್ಲಿ ಇರುವ) ಪರಮಹ೦ಸನು(ಪರಮ- ಶ್ರೇಷ್ಠ- ಉನ್ನತ;-ಸೊ- ಹಂ- ಸೊ-ಸಃ- ಅದು- ಆತ್ಮ, ಹಂ- ಅಹಂ- ನಾನು; ಆತ್ಮಸ್ವರೂಪನು) ಮಾನುಷಾಕೃತಿಯಾಗಿ (ಮಾನವನ ರೂಪದಲ್ಲಿ) ತೋರಿದ ಬಾಹ್ಯ ರಚನೆಯಲಿ (ಹೊರ ಜಗತ್ತಿನ ರಚನೆಯಲ್ಲಿ), ಮಾನಿನಿಯ (ದ್ರೌಪದಿಯ) ಮೈದಡಹಿ (ಮೈಯನ್ನು ಸವರಿ ಧ್ಯಾನದಿಂದ ಎಚ್ಚರಿಸಿ) ಚಿ೦ತೆಯು+ ಅದೇನು ತ೦ಗಿ ಲತಾ೦ಗಿ, ಹೇಳೌ ಮೌನ ಮುದ್ರೆಯು+ ಅದೇನು+ ಎನಲು ಕ೦ದೆರೆದಳು+ ಇಂದುಮುಖಿ- ದ್ರೌಪದಿ.
ಅರ್ಥ:ಶ್ರೀಹರಿಯಾದ ಕೃಷ್ಣನು ದ್ರೌಪದಿಯ ದ್ರೌಪದಿಯ ಧ್ಯಾನದಲ್ಲಿ ಕಾಣಿಸಿಕೊಂಡು ಅವಳ ಮನಸ್ಸಿನಲ್ಲಿ ಇರುವ ಆತ್ಮಸ್ವರೂಪನಾದ ಪರಮಹ೦ಸನು ಅಲ್ಲಿ ಹೊರ ಜಗತ್ತಿನ ರಚನೆಯಲ್ಲಿ ಮಾನವನ ರೂಪದಲ್ಲಿ ತೋರಿಕೊಂಡನು. ಮಾನಿನಿ ದ್ರೌಪದಿಯ ಮೈಯನ್ನು ಸವರಿ, ಅವಳನ್ನು ಧ್ಯಾನದಿಂದ ಎಚ್ಚರಿಸಿ, ತ೦ಗಿ ಲತಾ೦ಗಿ ಅದೇನು ಚಿ೦ತೆಯು, ನನ್ನನ್ನು ಏಕೆ ಕರೆದೆ, ಹೇಳವ್ವಾ; ಮೌನ ಮುದ್ರೆಯು ಅದೇನು? ಯಾಕೆ ಮೌನ? ಎನ್ನಲು, ಇಂದುಮುಖಿ ದ್ರೌಪದಿ ಕಣ್ಣು ಬಿಟ್ಟಳು- ನೋಡಿದರೆ ಎದುರಿಗೆ ಶ್ರೀ ಕೃಷ್ಣ!
ಉಬ್ಬಿದಳು ಹರುಷದಲಿ ದುಗುಡದ
ಕೊಬ್ಬು ಮುರಿದುದು ಪುಳಕ ವಾರಿಯೊ
ಳೊಬ್ಬುಳಿಯೊಳೊಡೆಹಾಯ್ದು ನಿ೦ದವು ನಯನವಾರಿಗಳು |
ಸಭ್ಯತಾಲತೆ ಹೂತು ಹಸರಿಸಿ
ಹಬ್ಬಿ ಫಲವಾದ೦ತೆಕಾಯವ
ನಿಬ್ಬರದಲೀಡಾಡಿದಳು ಹರಿಪದ ಪಯೋಜದಲಿ || ೩೪ ||
ಪದವಿಭಾಗ-ಅರ್ಥ: ಉಬ್ಬಿದಳು ಹರುಷದಲಿ, ದುಗುಡದ ಕೊಬ್ಬು ಮುರಿದುದು, ಪುಳಕ ವಾರಿಯೊಳು+ ಉಬ್ಬುಳಿಯೊಳು (ಉಕ್ಕುತ್ತಿರುವುದರಲ್ಲಿ)+ ಒಡೆಹಾಯ್ದು (ಹೊರಹೊಮ್ಮಿ) ನಿ೦ದವು ನಯನವಾರಿಗಳು(ಆನಂದ ಭಾಷ್ಪ), ಸಭ್ಯತಾ- ಲತೆ(ಬಳ್ಳಿ) ಹೂತು(ಹೂವು ಬಿಟ್ಟು) ಹಸರಿಸಿ ಹಬ್ಬಿ ಫಲವಾದ೦ತೆ, ಕಾಯವ(ತನ್ನ ದೇಹವನ್ನು) ನಿಬ್ಬರದಲಿ (ನಿಬ್ಬೆರಗಿನಿಂದ ಅತ್ಯಾಶ್ಚರ್ಯದಿಂದ)+ ಈಡಾಡಿದಳು(ಹೊರಳಿದಳು) ಹರಿಪದ ಪಯೋಜದಲಿ(ಪಯೋಜ- ಪಯ- ನೀರು , ಜ - ಹುಟ್ಟಿದ ಕಮಲ, ಕೃಷ್ಣನ ಪಾದಪದ್ಮದಲ್ಲಿ)
ಅರ್ಥ:ದ್ರೌಪದಿಯು ತಾನು ನೆನೆದ ಕೃಷ್ಣ ತನ್ನ ಎದುರಲ್ಲೇ ನಿಂತಿರುವುದನ್ನು ಕಂಡು ಹರ್ಷದಿಂದ ಉಬ್ಬಿಹೋದಳು. ದುಗುಡದ- ಚಿಂತೆ ಎಂಬ ದುಷ್ಟನ ಕೊಬ್ಬು- ಅಹಂಕಾರ ಮುರಿಯಿತು. ತನ್ನ ದೇವನ ದರ್ಶನದಿಂದ ರೋಮಾಚನ ಹೊಂದಿ- ಪುಳಕಗೊಂಡು ಮೈ ಬೆವರ ಹನಿಯಲ್ಲಿ ತೊಯ್ದಿತು. ಆನಂದ ಭಾಷ್ಪಗಳು ಹೊರಹೊಮ್ಮಿ ನಿ೦ತವು. ಸಭ್ಯತೆ(ಮುಗ್ಧಭಕ್ತಿ) ಎಂಬ ಬಳ್ಳಿ ಹೂವುಬಿಟ್ಟು ಹಸರಾಗಿ ಚಿಗುರಿ ಹಬ್ಬಿ ಫಲವಾದ೦ತೆ ಆಯಿತು. ದ್ರೌಪದಿಯು ಅವನಿಗೆ ಅಡ್ಡಬಿದ್ದು ನಿಬ್ಬೆರಗಿನಿಂದ ಕೃಷ್ಣನ ಪಾದಪದ್ಮದಲ್ಲಿ ಹೊರಳಾಡಿದಳು.
ಧರಣಿಯನು ಬಿಡದಳೆದು ಹೆಚ್ಚಿದ
ಚರಣವಿದು ಸುರನದಿಯ ಸೃಜಿಸಿದ
ಚರಣವಿದು ಕಲ್ಲಾದಹಲ್ಯಾ ಶಾಪ ನಿರುಹರಣ |
ಚರಣವಿದು ಕಾಳೀ೦ಗ ಮರ್ದನ
ಚರಣವಿದು ಶಕಟ ಪ್ರಭ೦ಜನ
ಚರಣವಿದೆಲಾಯೆನುತ ಕೊ೦ಡಾಡಿದಳು ಹರಿ ಪದವ || ೩೫ ||
ಪದವಿಭಾಗ-ಅರ್ಥ: ಧರಣಿಯನು(ಭೂಮಿಯನ್ನು) ಬಿಡದೆ+ಅಳೆದು ಹೆಚ್ಚಿದ(ವಿಶಾಲವಾಗಿ ಬೆಳೆದ ) ಚರಣವು (ಪಾದವು)+ ಇದು. ಸುರನದಿಯ (ಗಂಗೆಯ) ಸೃಜಿಸಿದ (ಹೊಮ್ಮಿಸಿದ) ಚರಣವಿದು, ಕಲ್ಲಾದ+ ಅಹಲ್ಯಾ ಶಾಪ ನಿರುಹರಣ(ವಿಮೋಚನೆ ಮಾಡಿದ) ಚರಣವಿದು, ಕಾಳೀ೦ಗ ಮರ್ದನ(ತುಳಿದ) ಚರಣವಿದು, ಶಕಟ ಪ್ರಭ೦ಜನ ಚರಣವಿದೆಲಾ! + ಯೆನುತ ಕೊ೦ಡಾಡಿದಳು ಹರಿ ಪದವ (ಪಾದಗಳನ್ನು).
ಅರ್ಥ:ದ್ರೌಪದಿಯು ಕೃಷ್ನನ ಪಾದಗಳನ್ನು ಹಿಡಿದುಕೊಂಡು,'ವಾಮನನಾಗಿ ಬಲಿಯು ದಾನಮಾದಿದ ಮೂರುಪಾದಗಳಲ್ಲಿ ಮೊದಲ ಪಾದವಾಗಿ ಭೂಮಿಯನ್ನು ಬಿಡದೆ ಅಳೆದು ವಿಶಾಲವಾಗಿ ಬೆಳೆದ ಪಾದವು ಇದು; ಆ ಸಮಯದಲ್ಲಿ ವಿಷ್ಣುವಿನ ಬೆರಳಿಗೆ ಜಗದಅಂಚು ತಾಗಿದಾಗ ಆ ಬೆರಳಿನಿಂದ ಗಂಗೆಯನ್ನು ಹೊಮ್ಮಿಸಿದ ಚರಣವು ಇದು; ಗೌತಮನ ಶಾಪದಿಂದ ಕಲ್ಲಾದ ಅಹಲ್ಯಾ ಶಾಪ ವಿಮೋಚನೆ ಮಾಡಿದ ಚರಣವು ಇದು; ಕೃಷ್ಣನು ಬಾಲಕನಾಗಿದ್ದಾಗ ಕಾಳೀ೦ಗ ಮರ್ದನ ಮಾಡಿದ ಚರಣವಿದು; ಕೃಷ್ಣನು ಶಿಶುವಾಗಿದ್ದಾಗ ಅವನನ್ನು ಕಂಸನ ಆಜ್ನೆಯಂತೆ ಕೊಲ್ಲಲು ಬಂದ ಶಕಟಾಸುರನನ್ನು ಪ್ರಭ೦ಜನ- ಭಂಗಿಸಿದ ಚರಣವಿದೆಲಾ! ಎನ್ನುತ್ತಾ ಕೃಷ್ನನ ಪಾದಗಳನ್ನು ಕೊ೦ಡಾಡಿದಳು.
ಸ್ತೋತ್ರಕೀಗಳು ಸಮಯವೇ ಹೇ
ಳೇತಕೀ ಸ್ತುತಿ ತ೦ಗಿ ಚಿತ್ತದೊ
ಳಾತುರವಿದೇನೆನುತ ಹಿಡಿದೆತ್ತಿದನು ಮಸ್ತಕವ |
ಬೀತ ತರು ಶುಕ ನಿಕರಕೀವುದೆ
ಔತಣವ ಸಲೆ ತುಷ್ಟಿ ಬಡಿಸುವ
ನೀತಿಯನು ನೀ ಬಲ್ಲೆಯೆ೦ದಳು ಕಮಲಮುಖಿ ನಗುತ || ೩೬ ||
ಪದವಿಭಾಗ-ಅರ್ಥ: ಸ್ತೋತ್ರಕೆ+ ಈಗಳು ಸಮಯವೇ ಹೇಳು+ ಏತಕೀ ಸ್ತುತಿ ತ೦ಗಿ, ಚಿತ್ತದೊಳು (ಮನದಲ್ಲಿ)+ ಆತುರವು (ಗಾಬರಿ)+ ಇದೇನು+ ಎನುತ ಹಿಡಿದೆತ್ತಿದನು ಮಸ್ತಕವ (ತಲೆಯನ್ನು), ಬೀತ (ಫಲಕೊಟ್ಟು ಫಲವಿಲ್ಲದ- ಮುಗಿದ) ತರು (ಮರ) ಶುಕ(ಗಿಳಿ) ನಿಕರಕೆ (ಸಮೂಹಕ್ಕೆ)+ ಈವುದೆ (ಕೊಡುವುದೆ) ಔತಣವ(ಊಟವನ್ನು), ಸಲೆ ಮತ್ತೆ ಹೆಚ್ಚಾಗಿ ತುಷ್ಟಿ (ಹೊಟ್ಟೆತುಂಬ) ಬಡಿಸುವ ನೀತಿಯನು ನೀ ಬಲ್ಲೆಯೆ೦ದಳು ಕಮಲಮುಖಿ ನಗುತ.
ಅರ್ಥ:ಕೃಷ್ಣನು ದ್ರೌಪದಿನ್ನು ಕುರಿತು,'ತಂಗಿ,'ನನ್ನ ಸ್ತೋತ್ರಕ್ಕೆ ಈಗ- ಇದು ಸಮಯವೇ? ಹೇಳು ಏತಕ್ಕಾಗಿ ನನ್ನನ್ನು ಈ ರೀತಿ ಸ್ತುತಿಮಾಡುತ್ತಿರುವೆ? ತ೦ಗಿ, ನಿನ್ನ ಮನದಲ್ಲಿರುವ ಗಾಬರಿ ಯಾವ ಕಾರಣಕ್ಕೆ? ಇದೇನು ನಿನ್ನ ಚಿಂತೆ ಎನ್ನುತ್ತಾ, ದ್ರೌಪದಿಯ ತಲೆಯನ್ನು ತನ್ನ ಪಾದದಿಂದ ಹಿಡಿದೆತ್ತಿದನು.' ಅದಕ್ಕೆ ದ್ರೌಪದಿಯು 'ಫಲಕೊಟ್ಟು ಮುಗಿದ ಫಲವಿಲ್ಲದ- ಮರವು ಗಿಳಿ ಸಮೂಹಕ್ಕೆ ಊಟವನ್ನು ಕೊಡುವುದೆ? (ನನ್ನಲ್ಲಿರುವ ಅಕ್ಷಯ ಪಾತ್ರೆಯೆಂಬ ಮರ, ಫಲ-ಊಟವನ್ನು ಕೊಟ್ಟು ಈದಿನಕ್ಕೆ ಬೀತುಹೋಗಿದೆ, ಇನ್ನು ಫಲ ಕೊಡಲಾರದು. ಈಗ ಗಿಳಿಗಳ ಸಮೂಹ- ಋಷಿಸಮೂಹ ಊಟ ಕೇಳುತ್ತಿದೆ.) ಮತ್ತೆ ಹೆಚ್ಚಿನವಿಚಾರ, ಹೊಟ್ಟೆತುಂಬ ಬಡಿಸುವ ನೀತಿಯನ್ನು ನೀನೆ ಬಲ್ಲೆ,'ಎಂದಳು ನಗುತ್ತಾ ಕಮಲಮುಖಿ ದ್ರೌಪದಿ.
ಶೌರಿ ಕೇಳ್ ಸಾಕ್ಷಾತು ಶಿವನವ
ತಾರವಹ ದೂರ್ವಾಸಮುನಿ ಪರಿ
ವಾರ ಸಹಿತೈತ೦ದೊಡಭ್ಯಾಗತೆಯ ನೃಪನಿತ್ತ |
ತೀರಿದಕ್ಷಯದನ್ನವಿ೦ದು ಮ
ಹಾ ಋಷಿಯ ಘನ ರೋಷವಹ್ನಿಗು
ಪಾರ ನಿನ್ನಯ ಮೈದುನನ ತನುವೆ೦ದಳಿ೦ದುಮುಖಿ || ೩೭ ||
ಪದವಿಭಾಗ-ಅರ್ಥ: ಶೌರಿ (ಶೂರಸೇನನ ವಂಶದವನು, ಅವನ ಮೊಮ್ಮಗ, ಕೃಷ್ಣ) ಕೇಳ್ ಸಾಕ್ಷಾತು ಶಿವನ+ ಅವತಾರವು+ ಅಹ(ಆಗಿರುವ) ದೂರ್ವಾಸಮುನಿ ಪರಿವಾರ ಸಹಿತ+ ಐತ೦ದೊಡೆ (ಬಂದರೆ- ಬಂದಾಗ)+ ಅಭ್ಯಾಗತೆಯ (ಅತಿಥಿಯಾಗಿ ಬಂದವನು) ನೄಪನು+ ಇತ್ತ (ಕೊಟ್ಟ, ಔತಣಕ್ಕೆ ಆಹ್ವಾನ ಕೊಟ್ಟ), ತೀರಿದ+ ಅಕ್ಷಯದ+ ಅನ್ನವ+ ಇ೦ದು ಮಹಾ ಋಷಿಯ ಘನ ರೋಷವಹ್ನಿಗೆ (ಹ್ನಿ- ಬೆಂಕಿ)+ ಉಪಾರ(ಉಪಾಹಾರ, ಊಟ) ನಿನ್ನಯ ಮೈದುನನ ತನುವು (ದೇಹ)+ ಎ೦ದಳು+ ಇ೦ದುಮುಖಿ (ದ್ರೌಪದಿ)
ಅರ್ಥ: ಇ೦ದುಮುಖಿ ದ್ರೌಪದಿಯು,'ಕೃಷ್ಣಾ ಕೇಳು ಸಾಕ್ಷಾತು ಶಿವನ ಅವತಾರವಾದ ದೂರ್ವಾಸ ಮುನಿಯು ಪರಿವಾರ ಸಹಿತ ಇಲ್ಲಿಗೆ ಬಂದಾಗ,ಅತಿಥಿಯಾಗಿ ಬಂದವನಿಗೆ ನೃಪ ಧರ್ಮಜನು ಔತಣಕ್ಕೆ ಆಹ್ವಾನ ಕೊಟ್ಟನು. ಒಪ್ಪಿ ಸ್ನಾನಕ್ಕೆ ಯಮುನೆಗೆ ಹೋಗಿದ್ದಾರೆ. ಅದರೆ ನನ್ನ ಊಟ ಮುಗಿದು ಬರಿದಾದ- ಅಕ್ಷಯದ ಪಾತ್ರೆ ಅನ್ನವನ್ನು ಕೊದುವುದು ತೀರಿದೆ- ಮುಗಿದಿದೆ. ಈಗ ಯಮುನೆಯಿಂದ ಬರುವ ಋಷಿ ಸಮೂಹಕ್ಕೆ ಔತಣ ಕೊಡಲಾರದ ಸ್ಥಿತಿ ಇದೆ. ಹಾಗಾಗಿ ಇ೦ದು ಹಸಿದ ಮಹಾಋಷಿಯ ಘನ ರೋಷದ ಬೆಂಕಿಗೆ ಉಪಾಹಾರವಾಗಿ ನಿನ್ನಯ ಮೈದುನ ಧರ್ಮಜನ ದೇಹವು ಬಲಿಯಾಗುವ ಸ್ಥಿತಿ ಇದೆ,'ಎ೦ದಳು.
ನಾವು ಹಸಿದೈತ೦ದರೀ ಪರಿ
ದೇವಿ ನಾನಾ ದೂರ ದೂರುವು
ದಾವುದುಚಿತವು ಹೇಳೆನಲು ನಡನಡುಗಿ ಕೈ ಮುಗಿದು |
ದೇವ ನಿಮ್ಮಯ ಹಸಿ ವು ಕಳೆವೊಡೆ
ಭಾವ ಶುದ್ದಿಯ ಭಕುತಿ ಬೇಹುದು
ನಾವು ಚ೦ಚಲ ಚಿತ್ತರೆ೦ದಳು ಕಮಲಮುಖಿ ನಗುತ || ೩೮ ||
ಪದವಿಭಾಗ-ಅರ್ಥ: ನಾವು ಹಸಿದು+ ಐತ೦ದರೆ (ಬಂದರೆ)+ ಈ ಪರಿ ದೇವಿ, ನಾನಾ ದೂರ ದೂರುವುದು+ ಆವುದು(ಯಾವ ಉಚಿತ ನೀತಿ?)+ ಉಚಿತವು, ಹೇಳು+ ಎನಲು, ನಡನಡುಗಿ ಕೈ ಮುಗಿದು, ದೇವ ನಿಮ್ಮಯ ಹಸಿವು ಕಳೆವೊಡೆ ಭಾವ ಶುದ್ದಿಯ ಭಕುತಿ ಬೇಹುದು, ನಾವು ಚ೦ಚಲ ಚಿತ್ತರು+ ಎ೦ದಳು ಕಮಲಮುಖಿ ನಗುತ.
ಅರ್ಥ:ದ್ರೌಪದಿಯು ಧರ್ಮಜನ ಧರ್ಮ ಸಂಕಟವನ್ನು ಹೇಳಿದರೆ, ಕೃಷ್ನನು,'ನಾವು ಹಸಿದು ಬಂದರೆ ದೇವಿ ದ್ರೌಪದೀ ನೀನು ಈ ಪರಿಯಾಗಿ ನಾನಾ ಬಗೆಯ (ದೂರ್ವಾಸರ ಮೇಲೆ) ದೂರನ್ನು ದೂರುವುದು ಯಾವ ಉಚಿತ ನೀತಿ? ಹೇಳು,' ಎನ್ನಲು, ಕಮಲಮುಖಿ ದ್ರೌಪದಿಯು ಅವನ ಇಂಗಿತ ಅರ್ಥವಾಗದೆ ನಡನಡುಗಿ ಕೈ ಮುಗಿದು, ದೇವ ನಿಮ್ಮ ಹಸಿವನ್ನು ಕಳೆಯಲು, ಭಾವ ಶುದ್ದಿಯ ಭಕ್ತಿ ಬೇಕು; ನಾವು ಚ೦ಚಲ ಮನಸ್ಸಿನವರು,'ಎ೦ದಳು ನಗುತ್ತಾ.
ಮಾತುಗಳು ಸೊಗಸುವುದೆ ಹಸಿವಿ೦
ದಾತುರರಿಗೆಲೆ ತ೦ಗಿ ತಾರೌ
ಪ್ರೀತಿವಿದರೊಲಿದಿತ್ತುದೇ ಕ್ಷುಧೆ ಗಮೃತ ಪು೦ಜವದು |
ಏತಕೀ ಜ೦ಜಡವೆನಲು ಜಲ
ಜಾತ ಮುಖಿಕ೦ಪಿಸುತ ಕುಮುದಾ
ರಾತಿ ಕೊಟ್ಟಾ ಸ್ಥಾಲಿಯನು ತಡವಿದಳು ಕರದಿ೦ದ || ೩೯ ||
ಪದವಿಭಾಗ-ಅರ್ಥ: ಮಾತುಗಳು ಸೊಗಸುವುದೆ ಹಸಿವಿ೦ದ+ ಆತುರರಿಗೆ+ ಎಲೆ ತ೦ಗಿ ತಾರೌ ಪ್ರೀತಿವಿದರು+ ಒಲಿದು+ ಇತ್ತುದೇ ಕ್ಷುಧೆಗೆ+ ಅಮೃತ ಪು೦ಜವು+ ಅದು, ಏತಕೆ+ ಈ ಜ೦ಜಡವು+ ಎನಲು ಜಲಜಾತಮುಖಿ (ಕಮಲಮುಖಿ- ದ್ರೌಪದಿ) ಕ೦ಪಿಸುತ (ನಡುಗುತ್ತಾ) ಕುಮುದಾರಾತಿ (ಕುಮುದ- ಕನ್ನೈದಿಲೆ- ರಾತ್ರಿ ಅರಳುವುದು- ಸೂರ್ಯನನ್ನು ಕಂಡು ಮುಚ್ಚುವುದು- ಆ ಕನ್ನಯದಿಲೆಯ ಆರಾತಿ-> ಶತ್ರು- ಸೂರ್ಯ) ಕೊಟ್ಟ+ ಆ ಸ್ಥಾಲಿಯನು (ಅಕ್ಷಯ ಪಾತ್ರೆಯನ್ನು) ತಡವಿದಳು ಕರದಿ೦ದ (ಖಅಲಿಯಾಗಿದೆ ಎಂದು ತೋರಿಸಲು ಕೈಯಿಂದ ತಡವಿ ತೋರಿಸಿದಳು)
  • ಟಿಪ್ಪಣಿ:(ಇನ್ನೊಂದು-ಗ್ರಂಥ ಪಾಠದಲ್ಲಿ- "ಕುಮುದಾರಾತಿ ಕೊಟ್ಟಾ ಸ್ಥಾಲಿಯನು ತಂದಿತ್ತಳಿದೆ ಎನುತ" ಎಂದಿದೆ, ಅಕ್ಷಯ ಪಅತ್ರೆಯು ಖಾಲಿಯಾಗಿದೆ ನೋಡು ಎಂದು- 'ತಂದು ಇತ್ತಳು ಇದೆ'- ಎನುತ"
ಅರ್ಥ:ಕೃಷ್ನನು,'ಹಸಿದವರಿಗೆ ಹೊಗಳಿಕೆಯ ಮಾತುಗಳು ಸೊಗಸುವುದೆ? ಎಲೆ ತ೦ಗಿ, ಹಸಿವಿ೦ದ ಉಣ್ಣಲು ಆತುರರಾದವರಿಗೆ ಕೇವಲ ಮಾತು ಹೊಟ್ಟೆತುಂಬುವುದೆ? ತಾರವ್ವಾ ಪ್ರೀತಿಯುಳ್ಳವರು ಒಲಿದು ಕೊಟ್ಟಿದ್ದೇ ಹಸಿವಿಗೆ ಅದು ಅಮೃತ ಪು೦ಜವು. ಏಕೆ ಈ ಜ೦ಜಡವು-ತಡ- ಹಿಂಜರಕೆ ಎನ್ನಲು, ಕಮಲಮುಖಿ- ದ್ರೌಪದಿಯು ನಡುಗುತ್ತಾ ಸೂರ್ಯನು ಕೊಟ್ಟ ಆ ಅಕ್ಷಯ ಪಾತ್ರೆಯನ್ನು ತಂದು ಖಾಲಿಯಾಗಿದೆ ಎಂದು ತೋರಿಸಲು ಕೈಯಿಂದ ತಡವಿ ತೋರಿಸಿದಳು. (ಅವಳು- ಬಯಸಿ ತಡವಿದಾಗ ಬಯಸಿದ ಅಹಾರ ಅದರಲ್ಲಿ ಬರುವುದು- ಆಗ ಬರಲಿಲ್ಲ.)

ಕೃಷ್ಣನು ಪಾತ್ರೆಯಲ್ಲಿದ್ದ ಕಿಂಚಿತ್ ಪಾಕ ಶೇಷವನ್ನು ತಿಂದು ತೇಗಿ ತಾಪಸಿಗಳ ಹೊಟ್ಟೆ ತುಂಬಿಸಿದನು[ಸಂಪಾದಿಸಿ]

ಕ೦ಡು ಕಿ೦ಚಿತ್ ಪಾಕ ಶೇಷವ
ಕೊ೦ಡು ಬ೦ದೊಡೆ ಕೃಷ್ಣನದ ಕೈ
ಗೊ೦ಡು ಸವಿದನು ತಣಿದು ತಲೆ ದೂಗಿದನು ತೇಗಿದನು |
ಪಾ೦ಡವರ ಪತಿಕರಿಸಿ ನಲಿವುತ
ಜಾ೦ಡ ನುಡಿದನು ಹೃದಯ ಕ್ಷುಧೆಯನು
ಖ೦ಡಿಸಿದೆಯಲಾಯೆನುತ ಕೊ೦ಡಾಡಿದನು ದ್ರೌಪದಿಯ೦ || ೪೦ ||
ಪದವಿಭಾಗ-ಅರ್ಥ:ಕ೦ಡು ಕಿ೦ಚಿತ್ ಪಾಕ ಶೇಷವ ಕೊ೦ಡು ಬ೦ದೊಡೆ ಕೃಷ್ಣನದ ಕೈಗೊ೦ಡು ಸವಿದನು, ತಣಿದು ತಲೆ ದೂಗಿದನು ತೇಗಿದನು, ಪಾ೦ಡವರ ಪತಿಕರಿಸಿ (ದಯೆತೋರು, ಅನುಗ್ರಹಿಸು) ನಲಿವುತ (ಸಂತಸಪಟ್ಟು)+ ಅಜಾ೦ಡ (ಬ್ರಹ್ಮಾಂಡನು, ಬ್ರಹ್ಮಾಂಡವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡವನು) ನುಡಿದನು ಹೃದಯ ಕ್ಷುಧೆಯನು ಖ೦ಡಿಸಿದೆಯಲಾ (ಹೊಗಲಾಡಿಸಿದಯಲ್ಲಾ,)+ ಯೆ+ ಎನುತ ಕೊ೦ಡಾಡಿದನು ದ್ರೌಪದಿಯ.
  • ಟಿಪ್ಪಣಿ: ಎಲ್ಲರಿಗೂ ಬಡಿಸಿದ ನಂತರ ಅನ್ನದ ಪಾತ್ರೆಯಲ್ಲಿ ಒಂದು ತುತ್ತು ಅನ್ನವನ್ನಾದರೂ ಬಿಡಬೇಕು; ಪೂರ್ಣ ಖಾಲಿ ಮಾಡಬಾರದು ಎಂಬ ಹಿಂದೂ ಸಂಪ್ರದಾಯ ಇದೆ. ಆ ಶೇಷ ಅನ್ನಕ್ಕೆ- ಆಹಾರಕ್ಕೆ "ದ್ರೌಪದಿ ಶೇಷ " ಎಂದು ಹೆಸರು.
ಅರ್ಥ:ದ್ರೌಪದಿಯು ಪಾತ್ರೆಯಲ್ಲಿದ್ದ ಕಿ೦ಚಿತ್ ಪಾಕ ಶೇಷವನ್ನು- ಪಾತ್ರೆಯಲ್ಲಿದ್ದ ಸ್ವಲ್ಪ ಅಡಿಗೆಯ ತುತ್ತನ್ನು (ಚೂರನ್ನು) ಕ೦ಡು, ಅದನ್ನೇ ತೆಗೆದುಕೊ೦ಡು ಬ೦ದು,'ನೊಡು ಇಷ್ಟೇ' ಎಂದು ಅದನ್ನು ಕೊಟ್ಟಳು; ಕೃಷ್ಣನು ಅದನ್ನೇ ತೆಗೆದುಕೊಂಡು ಸವಿದನು; ಅವನು ಅಷ್ಟರಿಂದಲೇ ತಣಿದು ತಲೆ ದೂಗಿದನು, ತೇಗಿದನು. ಪಾ೦ಡವರನ್ನು ಅನುಗ್ರಹಿಸಿ ಸಂತಸಪಟ್ಟು ಅಜಾ೦ಡನಾದ ಕೃಷ್ನನು ನನ್ನ ಹೃದಯದ ಹಸಿವನ್ನು ಖ೦ಡಿಸಿದೆಯಲಾ ಎನ್ನುತ್ತಾ ದ್ರೌಪದಿಯನ್ನು ಕೊ೦ಡಾಡಿದನು.
ಅರಸ ಕೇಳೀಚೆಯಲಿ ಮನದು
ಬ್ಬರದ ತನುವಿನ ತಳಿತ ರೋಮದ
ಭರದ ತುಷ್ಠಿಯ ಬಳಿಯ ತೇಗುವಹಿಗ್ಗುವಳ್ಳೆಗಳ |
ಕೊರಳಿಗಡರುವ ಹೊಟ್ಟೆಗಳ ಋಷಿ
ವರರು ಸಹ ದೂರ್ವಾಸ ಮುನಿಯ
ಚ್ಚರಿಯವಾಳುತ ತನ್ನೊಳರಿದನು ಮುರಹರನ ಬರವ || ೪೧ ||
ಪದವಿಭಾಗ-ಅರ್ಥ: ಅರಸ ಕೇಳು+ ಈಚೆಯಲಿ ಮನದ+ ಉಬ್ಬರದ ತನುವಿನ (ದೇಹದ) ತಳಿತ (ಚಿಗುರಿದ, ಎದ್ದುನಿಂತ) ರೋಮದ ಭರದ(ತುಂಬಿದ- ವೇಗದ; ಭಾರ, ಹೊರೆ; ಹೆಚ್ಚಳ, ವೇಗ) ತುಷ್ಠಿಯ (ಅತಿಯಾದ, ತೃಪ್ತಿಯಾದ) ಬಳಿಯ(ದಾರಿ, ಮಾರ್ಗ) ತೇಗುವ ಹಿಗ್ಗುವ + ಅಳ್ಳೆಗಳ( ಹೊಟ್ಟೆಯ ಪಕ್ಕ- ಮೂಗಿನ) ಕೊರಳಿಗೆ+ ಅಡರುವ (ತಾಗುವ) ಹೊಟ್ಟೆಗಳ ಋಷಿವರರು ಸಹ ದೂರ್ವಾಸ ಮುನಿಯ+ ಅಚ್ಚರಿಯವ+ ಆಳುತ(ಆಶ್ಚರ್ಯಪಡುತ್ತಾ) ತನ್ನೊಳು+ ಅರಿದನು ಮುರಹರನ (ಕೃಷ್ಣನ) ಬರವ (ಆಗಮನ, ಬರುವಿಕೆಯನ್ನು).
ಅರ್ಥ:ವೈಶಂಪಾನ ಮುನಿ ಹೇಳಿದ,'ಜನಮೇಜಯ ಅರಸನೇ ಕೇಳು, ಈಚೆ ಯಮುನೆಯ ದಡದಲ್ಲಿ ದೂರ್ವಾಸ ಮುನಿಯು ಮತ್ತು ಅವನ ಜೊತೆ ಬಂದ ಋಷಿವರರು ಮನದಲ್ಲಿ ಹೊಟ್ಟೆತುಂಬಿದ ಸಂತಸದ ಉಬ್ಬರಿಸಿದ ದೇಹದ, ಎದ್ದುನಿಂತ ರೋಮದ ಭರದಲ್ಲಿ, ತೃಪ್ತಿಗೂ ಮೀರಿ ಅತಿಯಾದ ಆಹಾರ ಸೇವನೆಯಂತೆ ಗಂಟಲ ಮಾರ್ಗದಲ್ಲಿ ತೇಗುವ, ಹಿಗ್ಗುವ ಹೊಟ್ಟೆಯ ಪಕ್ಕಗಳ, ಕೊರಳಿಗೆ ತಾಗುವ ಹೊಟ್ಟೆಗಳನ್ನು ಹೊತ್ತು ಆಶ್ಚರ್ಯಪಡುತ್ತಾ ಇರಲು, ದೂರ್ವಾಸನು ತನ್ನೊಳಗೆ ಕೃಷ್ಣನ ಬರುವಿಕೆಯನ್ನು ಅರಿತನು.
ಬ೦ದನೇ ಗೋವಿ೦ದ ಭಕುತರ
ಬ೦ಧುವಲ್ಲಾತನೊಳು ಮನಸಿಗೆ
ಸ೦ದ ಮನುಜರ ಸೆಣಸೆ ಮಾಣಿಪರಾರು ಭುವನದಲಿ |
ಎ೦ದೆನುತ ದೂರ್ವಾಸ ಮುನಿಪತಿ
ಬ೦ದು ಕ೦ಡನು ಪರ್ಣಶಾಲೆಯ
ಲ೦ದು ಕು೦ತೀಸುತ ಸಹಾಯನ ಕೃಷ್ಣರಾಯನನು || ೪೨ ||
ಪದವಿಭಾಗ-ಅರ್ಥ: ಬ೦ದನೇ ಗೋವಿ೦ದ ಭಕುತರಬ೦ಧುವಲ್ಲಾ (ಭಕುತರಬ೦ಧುವಲ್ಲವೇ!) + ಆತನೊಳು ಮನಸಿಗೆ ಸ೦ದ (- ಸೇರಿದ) ಮನುಜರ ಸೆಣಸೆ ಮಾಣಿಪರಾರು(ಮಣಿಸುವವರು, ಸೋಲಿಸುವವರು ಭುವನದಲಿ (ಈ ಭೂಮಿಯಲ್ಲಿ), ಎ೦ದು+ ಎನುತ ದೂರ್ವಾಸ ಮುನಿಪತಿ ಬ೦ದು ಕ೦ಡನು ಪರ್ಣಶಾಲೆಯಲಿ+ ಅ೦ದು ಕು೦ತೀಸುತ ಸಹಾಯನ ಕೃಷ್ಣರಾಯನನು.
ಅರ್ಥ:ಆಗ ದೂರ್ವಾಸಮುನಿಯು ತನ್ನಲ್ಲಿ,'ಬ೦ದನೇ ಗೋವಿ೦ದ - ಆ ಕೃಷ್ನನು, ಭಕ್ತರ ಬ೦ಧುವಲ್ಲವೇ! ಆತನ ಮನಸಿಗೆ ಸ೦ದ- ಸೇರಿದ ಜನರೆಡನೆ ಸೆಣಸೆ- ಹೋರಾಡಿ ಸೋಲಿಸುವವರು ಈ ಭೂಮಿಯಲ್ಲಿ ಯಾರಿದ್ದಾರೆ! ಯಾರೂ ಇಲ್ಲ. ಎ೦ದು ಹೇಳುತ್ತಾ ದೂರ್ವಾಸ ಮುನಿಪತಿಯು ಬ೦ದು ಪರ್ಣಶಾಲೆಯಲ್ಲಿ ಅ೦ದು ಕು೦ತೀಸುತರ ಸಹಾಯಕನಾದ ಕೃಷ್ಣರಾಯನನ್ನು ಕ೦ಡನು.
ಕಾಣುತಿದಿರೆದ್ದಸುರ ಮರ್ಧನ
ಕಾಣಿಕೆಯ ಕೊಟ್ಟೆರಗಿ ಹೋ ಹೋ
ಸ್ಥಾಣುವಿನ ಬರುವೆತ್ತಣಿ೦ದಾಯ್ತೆನುತ ಕೈ ಮುಗಿಯೆ |
ಮಾಣು ಮಾಧವ ನಿಲ್ಲು ಮಾನವ
ನಾಣೆಯದ ನಾಟಕದ ನುಡಿಯಿದು
ಜಾಣ ನೀನಹೆಯೆನುತ ಮುನಿ ಹಾಯ್ದಪ್ಪಿದನು ಹರಿಯ || ೪೩ ||
ಪದವಿಭಾಗ-ಅರ್ಥ: ಕಾಣುತ+ ಇದಿರೆದ್ದು+ ಅಸುರಮರ್ಧನ ಕಾಣಿಕೆಯ ಕೊಟ್ಟು+ ಎರಗಿ ಹೋ ಹೋ! ಸ್ಥಾಣುವಿನ(ರುದ್ರನ, ಶಿವನ) ಬರುವು+ ಎತ್ತಣಿ೦ದಾಯ್ತು+ ಎನುತ ಕೈ ಮುಗಿಯೆ, ಮಾಣು (ಬೇಡ) ಮಾಧವ ನಿಲ್ಲು, ಮಾನವನ+ ಆಣೆಯದ (ಅಪ್ಪಣೆ, ಪ್ರತಿಜ್ಞಾ ಸೂಚಕವಾದ ಮಾತು) ನಾಟಕದ ನುಡಿಯಿದು, ಜಾಣ ನೀನು+ ಅಹೆ (ಆಗಿರುವೆ)+ ಯೆನುತ ಮುನಿ ಹಾಯ್ದು (ನುಗ್ಗಿ, ಓಡಿಬಂದು)+ ಅಪ್ಪಿದನು ಹರಿಯ(ಕೃಷ್ಣನನ್ನು).
ಅರ್ಥ:ದೂರ್ವಾಸ ಮುನಿಯು ಬಂದುದನ್ನು ಕಾಣುತ್ತಲೆ ಅಸುರಮರ್ಧನ ಕೃಷ್ನನು ಗೌರವದಿಂದ ಅವನೆದಿರು ಎದ್ದು ಕಾಣಿಕೆಯನ್ನು ಕೊಟ್ಟು ಕಾಲಿಗೆ ಎರಗಿ ಹೋ ಹೋ! ಶಿವಸ್ವರೂಪನ ಬರುವಿಕೆಯು ಎತ್ತಣಿ೦ದಾಯ್ತು- ಯಾವಕಡೆಯಿಂದ ಬಂದಿರಿ? ಎನ್ನುತ್ತಾ ಕೈ ಮುಗಿಯಲು, ದೂರ್ವಾಸನು ಬೇಡ ಮಾಧವ ನಿಲ್ಲು, ಮಾನವನ ಅಡ್ಡಬೀಳುವ, ಅಪ್ಪಣೆ ಬೇಡುವ ನಾಟಕದ ನುಡಿಯಿದು, ಅದೆಲ್ಲಾ ಬೇಡ, ನೀನು ಜಾಣನಾಗಿರುವೆ ಎನ್ನುತ್ತಾ ಮುನಿ ಮುಂದೆನುಗ್ಗಿ ಕೃಷ್ಣನನ್ನು ಅಪ್ಪಿಕೊಂಡನು.
ಯತಿಗಳೈತರೆ ಗಾರುಹತ್ಯ
ಪ್ರತತಿ ವ೦ದಿಸಬೇಹುದಾ ಪ
ದ್ದತಿಯ ತೋರುವ ಪ೦ಥವೈಸಲೆ ನೀನು ಮನ್ನಿಪುದು |
ಅತಿ ಸಹಜವೈ ಕೃಷ್ಣ ಕುಳ್ಳಿರು
ಸತಿ ಶೀರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತ ಮುನಿಪ ಮ೦ಡಿಸಿದ || ೪೪ ||
ಪದವಿಭಾಗ-ಅರ್ಥ: ಯತಿಗಳು+ ಐತರೆ (ಬರಲು) ಗಾರುಹತ್ಯ(ಗಾರು- ಹಿಂಸೆ, ನಿಂದೆ,ಒರಟು, ನಯವಿಹೀನ), ಪ್ರತತಿ(ಹರಹು, ವಿಸ್ತಾರ, ಸಮೂಹ) ವ೦ದಿಸಬೇಹುದು+ ಆ ಪದ್ದತಿಯ ತೋರುವ ಪ೦ಥವು (ದಾರಿ)+ ಐಸಲೆ ನೀನು ಮನ್ನಿಪುದು ಅತಿ ಸಹಜವೈ, ಕೃಷ್ಣ ಕುಳ್ಳಿರು, ಸತಿ ಶೀರೋಮಣಿ ಕುಳ್ಳಿರೈ, ವ್ಯಾಹೃತ (ವ್ಯಾಪಕವಾಗಿ- ಹೃತ- ಅಪಹರಿಸಲ್ಪಟ್ಟವ,ತೊಂದರೆಗೊಳಗಾಗಿ ಕಷ್ಟದಲ್ಲಿರುವವ- ಯುಧಿಷ್ಟಿರ ?) ಗೃಹಸ್ಥನು ಕುಳ್ಳಿರಿ+ ಎನುತ ಮುನಿಪ ಮ೦ಡಿಸಿದ (ಕುಳಿತನು).
ಅರ್ಥ:ದುರ್ವಾಸನು ಹೇಳಿದ,'ಯತಿಗಳು ಬಂದಾಗ ಎದ್ದು ವಂದಿಸದಿದ್ದರೆ, ನಿಂದೆ, ಒರಟು, ನಯವಿಹೀನತೆಯಾಗುವುದು. ಜನರು ಸಮೂಹದವರು ವ೦ದಿಸಬೇಕಾದ್ದು ಸರಿ. ಆ ಪದ್ದತಿಯ ತೋರುವ ದಾರಿಯನ್ನು ನಿಜಕ್ಕೂ ನೀನು ಮನ್ನಿಪುದು ಅತಿ ಸಹಜವು; ಕೃಷ್ಣಾ, ಕುಳ್ಳಿರು, ಸತಿ ಶೀರೋಮಣಿ ದ್ರೌಪದಿ ಕುಳಿತುಕೊಳ್ಳುವುದು, ವ್ಯಾಹೃತ ಗೃಹಸ್ಥನಾದ ಯುಧಿಷ್ಠಿರ ಅವನ ಸಹಚರರು ಕುಳಿತುಕೊಳ್ಳಿ, ಎನ್ನುತ್ತಾ ದೂರ್ವಾಸ ಮುನಿಪನು ದರ್ಭಾಸನದಲ್ಲಿ ಕುಳಿತನು.
ತು೦ಬಿ ಕುಳ್ಳಿರ್ದಖಿಳ ಮುನಿ ನಿಕು
ರು೦ಬ ಸಭೆಯೊಳಗಿದ್ದ ಮುನಿಪ೦
ಗ೦ಬುಜಾನನೆ ನಮಿಸೆ ಹರಸಿದನೈದೆಯಾಗೆನುತ |
ಹ೦ಬಲಿಸುತಿಹ ನಿಗಮ ಶಾಸ್ತ್ರಗ
ಳಿ೦ಬು ಗಾಣದ ಗಾಡ ದೈವದ
ಬೆ೦ಬಳಿಯಲಿರಲಿನ್ನದಾವುದಸಾದ್ಯ ನಿಮಗೆ೦ದ || ೪೫ ||
ಪದವಿಭಾಗ-ಅರ್ಥ: ತು೦ಬಿ ಕುಳ್ಳಿರ್ದು+ ಅಖಿಳ ಮುನಿ ನಿಕುರು೦ಬ (ಎಲ್ಲಾ ಮನಿಗಳ ಸಮುಹ) ಸಭೆಯೊಳಗಿದ್ದ ಮುನಿಪ೦ಗೆ+ ಅ೦ಬುಜಾನನೆ (ದ್ರೌಪದಿ)ನಮಿಸೆ ಹರಸಿದನು+ ಐದೆಯಾಗು (ಮುತ್ತೈದೆಯಾಗಿರು) ಎನುತ, ಹ೦ಬಲಿಸುತಿಹ ನಿಗಮ ಶಾಸ್ತ್ರಗಳ+ ಇ೦ಬು+ ಗ+ (ಸುಳಿವು, ರಹಸ್ಯ) ಕಾಣದ ಗಾಡ (ದಟ್ಟ, ಬಲಿಷ್ಠವಾದ) ದೈವದ ಬೆ೦ಬಳಿಯಲಿ+ ಇರಲು+ ಇನ್ನದಾವುದು+ ಅಸಾದ್ಯ ನಿಮಗೆ+ ಎ೦ದ
ಅರ್ಥ:ಧರ್ಮಜನ ಪರ್ಣಶಾಲೆಯ ಮಂಟಪದಲ್ಲಿ ಎಲ್ಲರೂ ತು೦ಬಿ ಎಲ್ಲಾ ಮನಿಗಳ ಸಮೂಹ ಕುಳಿತಾಗ, ಸಭೆಯೊಳಗಿದ್ದ ಮುನಿಪನಿಗೆ ಅ೦ಬುಜಾನನೆ ದ್ರೌಪದಿ ಬಂದು ನಮಿಸಲು 'ಮುತ್ತೈದೆಯಾಗಿರು' ಎಂದು ಮುನಿ ಹರಸಿದನು. ಮುನಿಯು,'ಅನೇಕ ಉನ್ನತರು ಹ೦ಬಲಿಸುತ್ತಿರುವ ನಿಗಮ ಶಾಸ್ತ್ರಗಳ ರಹಸ್ಯವನ್ನು ಕಾಣಲಾಗದ ಬಲವಾದ ದೈವದ ಬೆ೦ಬಲದಲ್ಲಿ ನೀವು ಇರಲು ನಿಮಗೆ ಇನ್ನು ಯಾವುದು ತಾನೆ ಅಸಾದ್ಯವು,'ಎ೦ದ
ಮೈ ವಶವ ಮಾಡದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ |
ಕಾವನೈ ನಿಮ್ಮೈವರನು ಕೈ
ಗಾವನೇ ವರರಾಜ್ಯ ಲಕುಮಿಯ
ಕೈವಿಡಿವ ಸ೦ಕಲ್ಪ ಸಿದ್ದಿಪುದೆ೦ದನಾ ಮುನಿಪ || ೪೬ ||
ಪದವಿಭಾಗ-ಅರ್ಥ: ಮೈವಶವ (ಮೈ- ದೇಹ, ವಶ- ಅಧೀನ) ಮಾಡದಿರಲೇ (ಮಾಡದಿರಲೋಸ್ಕರವೇ) ಪರದೈವ+ ಅವನು, ಕುರುಕುಲದ ಬೇರನು ಕೊಯ್ವನು+ ಈ ಹರಿ ಬಳಿ (ಹೆಚ್ಚಿಗೆ, ಕೊಡಬೇಕಾದ್ದಕ್ಕಿಂತ ಸ್ವಲ್ಪ ಹೆಚ್ಚು; ಗ್ರಾಮ್ಯ- ಬಳಿ ಕೊಡಿರಿ, ಇನ್ನೂ ಸ್ವಲ್ಪ ಹೆಚ್ಚುಕೊಡಿ.) ಸಲಿಸಿ ಭೀಮಾರ್ಜುನಾಸ್ತ್ರದಲಿ, ಕಾವನೈ ನಿಮ್ಮೈವರನು ಕೈಗಾವನೇ ವರರಾಜ್ಯ ಲಕುಮಿಯ ಕೈವಿಡಿವ (ವರ- ಶ್ರೇಷ್ಠ; ವರರಾಜ್ಯ ಲಕ್ಷ್ಮಿಯ ಕೈಹಿಡಿಯುವ) ಸ೦ಕಲ್ಪ ಸಿದ್ದಿಪುದೆ೦ದನು+ ಆ ಮುನಿಪ
ಅರ್ಥ:ದೂರ್ವಾಸನು ಪಾಂಡವರನ್ನು ಕುರಿತು,'ನಿಮ್ಮನ್ನು ಪರರ ಅಧೀನ ಮಾಡದಿರಲು ಪರದೈವವಾದ ಕೃಷ್ನನು ಇರುವನು. ಅವನು ಕುರುಕುಲದ ಬೇರನ್ನು ಕೊಯ್ಯುವನು. ಈ ಹರಿ- ಕೃಷ್ನನು ಬಳಿಯನ್ನು- ಕೊಡಬೇಕಾದ್ದಕ್ಕಿಂತ ಹೆಚ್ಚಿನದನ್ನು ಭೀಮಾರ್ಜುನಾಸ್ತ್ರದಲ್ಲಿ ಸಲ್ಲಿಸಿ, ನಿಮ್ಮ ಐವರನ್ನೂ ಕಾಪಾಡುವನು, ಕಾಯುವನು. ಅವನು ನಿಮ್ಮನ್ನು ಕೈಹಿಡಿದು ಕಾಯುವವನೇ ಸರಿ. ನಿಮಗೆ ನಿಮ್ಮ ವರರಾಜ್ಯಲಕ್ಷ್ಮಿಯ ಕೈಹಿಡಿಯುವ ಸ೦ಕಲ್ಪ ಸಿದ್ದಿಸುವುದು.' ಎ೦ದನು.*
ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಕಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಿನಸಖನ ಪರಾ೦ಬು ರಾಸಿಯ
ನಿಲುಕುದೈತನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆ೦ದ ಯಮಸೂನು || ೪೭ ||
ಪದವಿಭಾಗ-ಅರ್ಥ: ಎಲೆ ಮುನೀಶ್ವರ ನಿಮ್ಮ ನುಡಿಯು+ ಅಸ್ಕಲಿತವು+ ಇದು ಇಹ-ಪರದ ಗತಿ, ನಿನ್ನ+ ಒಲವು(ಪ್ರೀತಿ, ಬೆಂಬಲ) ಕೃಷ್ಣನ ಕೂರ್ಮೆಯಿರಲು(ಕೂರ್ಮೆ ಪ್ರೀತಿ)+ ಇನ್ನಾವುದು+ ಅರಿದು (ಆಗದು, ಅಸಾದ್ಯ; ಹರಿಯದು, ಭಾರವನ್ನು ಎತ್ತಲು ಹರಿಯದು- ಗ್ರಾಮ್ಯ; ಅದರ ರೂಪಾಂತರ- ಅರಿದು)+ ಎಮಗೆ, ನಳಿನಸಖನು(ಸೂರ್ಯನು)+ ಅಪರಾ೦ಬುರಾಸಿಯ(ಪಶ್ಚಿಮ ಸಮುದ್ರವನ್ನು) ನಿಲುಕುತೈದನೆ(ತಲುಪುತ್ತಿದ್ದಾನೆ) ಹಸಿದುದು+ ಈ ಮುನಿಬಳಗವು+ ಅರೋಗಣೆಗೆ (ಔತಣಕ್ಕೆ) ಚಿತ್ತವಿಸೆ೦ದ(ಮನಸ್ಸುಮಾಡಿ ಬನ್ನಿ) ಯಮಸೂನು.
  • ಟಿಪ್ಪಣಿ:ಕೃಷ್ಣನು ಸೂರ್ಯನು ಕೊಟ್ಟ ಅಕ್ಷಯ ಪಾತ್ರೆಯಿಂದ ಪಾಕಶೇಷವನ್ನು ಉಂಡಾಗ- ಆ ಪಾತ್ರೆ ಮತ್ತೆ ಕ್ರಯಾಶಿಲವಾಗಿ ಆಹಾರವನ್ನು ಕೊಡಲು ಆರಂಭಿಸಿತು ಎನ್ನುವುದು ಅಧ್ಯಾಹಾರ- ಹಾಗೆಂದು ಭಾವಿಸಿಕೊಳ್ಳಬೇಕು.
ಅರ್ಥ:ಧರ್ಮಜನು, ದೂರ್ವಾಸ ಮುನಿಗೆ,'ಎಲೆ ಮುನೀಶ್ವರ ನಿಮ್ಮ ನುಡಿಯು ತಪ್ಪಲಾರದು. ಇದು ಇಹ-ಪರದ ಗತಿ, ನಿಮ್ಮು ಒಲವು, ಕೃಷ್ಣನ ಪ್ರೀತಿ ನಮ್ಮ ಮೇಲೆ ಇರಲು, ನಮಗೆ ಇನ್ನಾವುದು ತಾನೇ ಅಸಾಧ್ಯ; ಸೂರ್ಯನು ಪಶ್ಚಿಮ ಸಮುದ್ರವನ್ನು ತಲುಪುತ್ತಿದ್ದಾನೆ. ಈ ಮುನಿಬಳಗವು ಹಸಿದಿರುವುದು; ಔತಣಕ್ಕೆ ಮನಸ್ಸುಮಾಡಿ ಬನ್ನಿ,' ಎಂದ.
ಬೇರು ನೀರು೦ಡಾಗ ದಣಿಯವೆ
ಭೂರುಹದ ಶಾಖೋಪ ಶಾಖೆಗ
ಳೋರಣೆಯ ನಿಜದೇಹವ೦ಗೋಪಾ೦ಗವೆ೦ದೆನಿಪ |
ಶ್ರೀರಮಣ ಸ೦ತುಷ್ಟ ನಾದೊಡೆ
ಬೇರೆ ಭೋಜನವೆಮಗೆ ಬೇಹುದೇ
ಭೂರಮಣ ಕೇಳೆನುತ ಮತ್ತಿ೦ತೆ೦ದನಾ ಮುನಿಪ || ೪೮ ||
ಪದವಿಭಾಗ-ಅರ್ಥ: ಬೇರು ನೀರು+ ಉ೦ಡಾಗ ದಣಿಯವೆ(ತಣಿಯವೆ- ತೃಪ್ತಿ ಪಡುವುದಿಲ್ಲವೇ?) ಭೂರುಹದ (ಮರದ) ಶಾಖೆ+ ಉಪ ಶಾಖೆಗಳು+ ಓರಣೆಯ (ಒಪ್ಪವಾಗಿ ಜೋಡಿಸಿದ) ನಿಜದೇಹವು+ ಅ೦ಗೋಪಾ೦ಗವೆ೦ದು+ ಎನಿಪ ಶ್ರೀರಮಣ (ಕೃಷ್ಣನು) ಸ೦ತುಷ್ಟನಾದೊಡೆ ಬೇರೆ ಭೋಜನವು+ ಎಮಗೆ ಬೇಹುದೇ? (ಬೇಕೇ?-ಬೇಕಾಗುವುದೇ? ಬೇಡ) ಭೂರಮಣ (ರಾಜನೇ) ಕೇಳು+ ಎನುತ ಮತ್ತೆ+ ಇ೦ತೆ೦ದನು+ ಆ ಮುನಿಪ
ಅರ್ಥ:ದೂರ್ವಾಸನು ಧರ್ಮಜನಿಗೆ,'ರಾಜನೇ, ಬೇರು ನೀರು ಉ೦ಡಾಗ ಮರದ ರೆಂಬೆಕೊಂಬೆಗಳು ತೃಪ್ತಿ ಪಡುವುದಿಲ್ಲವೇ? (ನಾವೆಲ್ಲರೂ)ಒಪ್ಪವಾದ (ತನ್ನ) ವಿಷ್ಣುವಿನ ದೇಹದ ಅ೦ಗೋಪಾ೦ಗವೆ೦ದು ಎನ್ನಿಸಿರುವಾಗ, ಶ್ರೀರಮಣನಾದ ಕೃಷ್ಣನು ಉಂಡು ಸ೦ತುಷ್ಟನಾದರೆ ನಮಗೆ ಬೇರೆ ಭೋಜನವು ಬೇಕಾಗುವುದೇ?- ಇಲ್ಲ, ಬೇಡ.' ಕೇಳು ಎನ್ನತ್ತಾ ಮತ್ತೆ ಆ ಮುನಿಯು ಹೀಗೆ ಹೇಳಿದನು.
ಮೃಷ್ಟ ಭೋಜನದಿ೦ದ ನಾವ್ ಸ೦
ತುಷ್ಟರಾಗೊಲಿದುದನು ಬೇಡೆನೆ
ದುಷ್ಟ ಕೌರವ ನಮ್ಮನಟ್ಟಿದ ದೂರ್ತವಿದ್ಯೆಯಲಿ |
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾ೦ಡವರು ಹರಿಪದ
ನಿಷ್ಟರನು ನಿಲುಕುವನೆ ದುರ್ಜನನೆ೦ದನಾ ಮುನಿಪ || ೪೯ ||
ಪದವಿಭಾಗ-ಅರ್ಥ: ಮೃಷ್ಟ (ಸವಿಯಾದ,ರುಚಿಕರವಾದ) ಭೋಜನದಿ೦ದ ನಾವ್ ಸ೦ತುಷ್ಟರಾಗಿ+ ಒಲಿದುದನು ಬೇಡು+ ಎನೆ, ದುಷ್ಟ ಕೌರವ ನಮ್ಮನು+ ಅಟ್ಟಿದ ದೂರ್ತವಿದ್ಯೆಯಲಿ, ಕಷ್ಟವೇ ಕೈಗಟ್ಟಿತಲ್ಲದೆ, ಕೆಟ್ಟರೇ ಪಾ೦ಡವರು, ಹರಿಪದ ನಿಷ್ಟರನು ನಿಲುಕುವನೆ ದುರ್ಜನನು+ ಎ೦ದನು+ ಆ ಮುನಿಪ.
ಅರ್ಥ:ಆ ಮುನಿಪ ದೂರ್ವಾಸನು,ಧರ್ಮಜನನ್ನು ಕುರಿತು,'ಕೌರವನು ನೀಡಿದ ಸವಿಯಾದ ಭೋಜನದಿ೦ದ ನಾವು ಸ೦ತುಷ್ಟರಾಗಿ, ಕೌರವನಿಗೆ, ಇಷ್ಟವಾದುದನ್ನು ಕೇಳು ಎನ್ನಲು, ಆ ದುಷ್ಟ ಕೌರವನು ನಮ್ಮನು ದೂರ್ತವಿದ್ಯೆಯಿಂದ ಊಟವನ್ನು ಕೇಳಲು ಇಲ್ಲಿಗೆ ಅಟ್ಟಿದನು- ಕಳಿಸಿದನು. ಆದರೆ ಅದರಿಂದ ನಾವು ನಿಮ್ಮನು ಹರಸಿದ್ದರಿಂದ, ಕೌರವನಿಗೆ ಕಷ್ಟವೇ ಕೈಗಟ್ಟಿತು- ಕೈಗೆ ಸಿಕ್ಕಿತು. ಅದಲ್ಲದೆ ಪಾ೦ಡವರು ಕೆಟ್ಟರೇ- ತೊಂದರೆಗೆ ಒಳಗಾದರೇ? ಇಲ್ಲ!. ಹರಿಪದ ನಿಷ್ಟರಾದವರನ್ನು ಸರಿಗಟ್ಟಲು ದುರ್ಜನನಾದವನು ಆ ಮಟ್ಟಕ್ಕೆ ಏರುವನೇ? ಇಲ್ಲ.' ಎ೦ದನು.

೫೦[ಸಂಪಾದಿಸಿ]

ಎ೦ದು ಹರಿಯನು ಹೊಗಳಿ ನಾನಾ
ಚ೦ದದಲಿ ಪಾ೦ಡವರ ತಿಳುಹಿ ಮು
ನೀ೦ದ್ರ ತನ್ನಾಶ್ರಮಕೆ ಸರಿದನು ತಾಪಸರು ಸಹಿತ |
ಅ೦ದು ಕು೦ತೀ ನ೦ದನರಿಗಾ
ನ೦ದ ಸುಖವನು ಕರೆದು ದೇವ ಮು
ಕು೦ದ ಬಿಜಯ೦ಗೈದು ಹೊಕ್ಕನು ದೋರಕಾಪುರಿಯ || ೫೦ ||

ಪದವಿಭಾಗ-ಅರ್ಥ: ಎ೦ದು ಹರಿಯನು ಹೊಗಳಿ, ನಾನಾಚ೦ದದಲಿ ಪಾ೦ಡವರ ತಿಳುಹಿ, ಮುನೀ೦ದ್ರ ತನ್ನಾಶ್ರಮಕೆ ಸರಿದನು ತಾಪಸರು ಸಹಿತ, ಅ೦ದು ಕು೦ತೀ ನ೦ದನರಿಗೆ+ ಆನ೦ದ ಸುಖವನು ಕರೆದು (ಸುರಿಸಿ), ದೇವ ಮುಕು೦ದ ಬಿಜಯ೦ಗೈದು (ಹೋಗಿ) ಹೊಕ್ಕನು ದೋರಕಾಪುರಿಯ.
ಅರ್ಥ:ದೂರ್ವಾಸ ಮುನಿಯು, ಹೀಗೆ ತಾನು ಬಂದ ವಿಷಯ ಹೇಳಿ, ಕೃಷ್ಣನನ್ನು ಹೊಗಳಿ, ನಾನಾರೀತಿಯಲ್ಲಿ ಪಾ೦ಡವರಿಗೆ ನೀತಿಯನ್ನು ತಿಳುಹಿಸಿ, ಮುನೀ೦ದ್ರ ದೂರ್ವಾಸನು ತನ್ನ ಆಶ್ರಮಕ್ಕೆ ತಪಸ್ವಿಗಳ ಸಹಿತ ಹೋದನು. ಅ೦ದು ಕು೦ತೀ ನ೦ದನರಾದ ಪಾಂಡವರಿಗೆ ಆನ೦ದ ಸುಖವನು ಸುರಿಸಿ, ದೇವ ಮುಕು೦ದ ಕೃಷ್ನನು ಹೋಗಿ ದ್ವಾರಕಾಪುರವನ್ನು ಹೊಕ್ಕನು.

♠♠♠

ನೋಡಿ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
  2. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
  3. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು