ವಿರಾಟಪರ್ವ: ೦೮. ಎಂಟನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಕರ್ಣಾಟ ಭಾರತ ಕಥಾಮಂಜರಿ, ವಿರಾಟಪರ್ವ: ೦೮/ ಎಂಟನೆಯ ಸಂಧಿ[ಸಂಪಾದಿಸಿ]

ಸೂ: ರಾಯ ರಿಪುಬಲಜಲಧಿ ವಡಬನ

ಜೇಯನರ್ಜುನನಖಿಳ ಕೌರವ

ರಾಯ ದಳವನು ಜಯಿಸಿದನು ಸಮ್ಮೋಹನಾಸ್ತ್ರದಲಿ


ಮರಳಿದವು ತುರು ಮಾರಿಗೌತಣ

ಮರಳಿ ಹೇಳಿತು ಹಸಿದ ಹೆಬ್ಬುಲಿ

ಮೊರೆಯ ದನಿದೋರಿದವು ಹುಲುಮೃಗವೇನನುಸುರುವೆನು

ಧರಣಿಪನ ಹಿಂದಿಕ್ಕಿ ಸೌಬಲ

ದುರುಳ ದುಶ್ಶಾಸನ ಜಯದ್ರಥ

ರುರುಬಿದರು ತರುಬಿದರು ಪರಬಲ ಕಾಲಭೈರವನ ೧


ಹತ್ತುಸಾವಿರ ರಥ ಸಹಿತ ಭಟ

ರೊತ್ತಿ ಕವಿದರು ಲಗ್ಗೆವರೆಯಲಿ

ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ

ಸತ್ತಿಗೆಯ ಸಾಲುಗಳೊಳಂಬರ

ಕೆತ್ತುದೆನೆ ಕುಲಶೈಲ ನಿಚಯದ

ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು ೨


ಚಂಬಕನ ಹರೆ ಡಕ್ಕೆ ಡಮರುಗ

ಬೊಂಬುಳಿಯ ಗೋಮುಖದ ಡೌಡೆಯ

ಕೊಂಬು ಕಹಳೆಯ ರಾಯ ಗಿಡಿಮಿಡಿ ಪಟಹ ಡಿಂಡಿಮದ

ತಂಬಟದ ನಿಸ್ಸಾಳವಂಬರ

ತುಂಬಿದುದು ನೆಲ ಕುಸಿಯೆ ಬಲವಾ

ಡಂಬರದಲರ್ಜುನನ ಮುಸುಕಿತು ದೊರೆಯ ಸನ್ನೆಯಲಿ ೩


ಮರಳಿದವು ತುರುವೆಂಬ ಗರ್ವದ

ಗಿರಿಗೆ ಕೋ ಕುಲಿಶವನು ಸೇನೆಯ

ನೊರೆಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ

ಅರಸನಲುಕಿದನೆಂಬ ಜಯದು

ಬ್ಬರದ ಬೆಳೆಸಿರಿಗಿದೆ ನಿದಾಘದ

ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು ೪


ಮೊಗಕೆ ಹರಿಗೆಯನೊಡ್ಡಿ ಕಾಲಾ

ಳಗಿದು ಕವಿದುದು ಸರಳ ಪರಿಯಲಿ

ಬಿಗಿದು ಬಿಲ್ಲಾಳೌಕಿತುರವಣಿಸಿದರು ಸಬಳಿಗರು

ಉಗಿದಡಾಯುಧದಲಿರಿದರು ಭಾ

ಷೆಗಳ ರಾವ್ತರು ಕೆಂಗರಿಯ ಕೋ

ಲುಗಳ ಹೆಮ್ಮಳೆಗರೆದು ಕವಿದರು ಜೋದರುರವಣಿಸಿ ೫


ಅರರೆ ರಾವುತು ರಾವುತೆಂಬ

ಬ್ಬರಣೆ ಮಸಗಿದುದೊಂದು ದೆಸೆಯಲಿ

ಸರಿಸ ಸಬಳಿಗ ಪೂತು ಪಾಯಕುಯೆಂಬ ಕಳಕಳಿಕೆ

ಧಿರುರೆ ಸಾರಥಿ ಹಳು ಹಳೆಂಬ

ಬ್ಬರಣೆ ಮಸಗಿದುದೊಂದು ಕಡೆಯಲಿ

ಕರಿಘಟೆಯ ಕಡುಹೊಂದು ಕಡೆಯಲಿ ಮುಸುಕಿತರ್ಜುನನ ೬


ಸುರಪನಡವಿಯ ಚುಚ್ಚಿದೊಡೆ ಸುರ

ರರಮನೆಯ ಗಾಯಕರ ಗೆಲಿದೊಡೆ

ಜರಡು ತಂತ್ರದ ಮೀನನೆಚ್ಚೊಡೆ ರಾಯ ಕಟಕದಲಿ

ಗೊರವನೊಳು ಕಾದಿದೊಡೆ ಹೆಂಗುಸ

ನಿರುಳು ಕದ್ದೋಡಿದೊಡೆ ದಿಟ

ನೀ ಧುರಕೆ ಧೀರನೆ ಪಾರ್ಥ ಫಡಯೆನುತೆಚ್ಚರತಿರಥರು ೭


ಭಂಡರುಲಿದೊಡೆ ಗರುವರದ ಮಾ

ರ್ಕೊಂಡು ನುಡಿವರೆ ಸಾಕಿದೇತಕೆ

ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ

ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ

ಗಂಡುಗೆಡದಿರಿ ನಿಮ್ಮ ಬಗೆಗಳ

ಕಂಡು ಬಲ್ಲೆನೆನುತ್ತ ಫಲುಗುಣನೆಚ್ಚನತಿರಥರ ೮


ಗುರುಸುತನ ಬಳಿ ರಥವನೈಸಾ

ವಿರವ ಕೊಂದನು ಕರ್ಣನೊಡೆನೆಯ

ವರ ಮಹಾರಥರೆಂಟು ಸಾವಿರವನು ರಣಾಗ್ರದಲಿ

ಗುರು ನದೀಜರ ಬಳಿ ರಥವ ಸಾ

ವಿರವ ಕೃಪ ಸೈಂಧವ ಸುಯೋಧನ

ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ೯


ತುರಗ ದಳವೆಂಬತ್ತು ಸಾವಿರ

ಕರಿಘಟೆಯನೈವತ್ತು ಸಾವಿರ

ವರರಥವ ಹುಡಿ ಮಾಡಿದನು ಹನ್ನೆರಡು ಸಾವಿರವ

ಧುರಕೆ ವೆಗ್ಗಳವಾದ ರಥಿಕರ

ಶಿರವ ತರಿದನು ಮೂರು ಕೋಟಿಯ

ನರಸು ಕಾಲಾಳುಗಳ ಗಣನೆಯನರಿಯೆ ನಾನೆಂದ ೧೦


ಸವಗ ಸೀಳಿತು ಕೃಪನ ಭೀಷ್ಮನ

ಕವಚ ಹರಿದುದು ದ್ರೋಣ ನೊಂದನು

ರವಿಯ ಮಗ ಮಸೆಗಂಡನಶ್ವತ್ಥಾಮ ಮೈಮರೆದ

ಅವನಿಪತಿಗೇರಾಯ್ತು ಸಲೆ ಸೈಂ

ಧವ ಶಕುನಿ ದುಶ್ಶಾಸನಾದಿಗ

ಳವಯವದಲಂಬುಗಳನಾಯ್ದರು ತೋದ ರಕುತದಲಿ ೧೧


ಕದಿವಡೆದುದಾ ಚೂಣಿಬಲ ಬೆಂ

ಗೊಡದ ನಾಯಕರಾಂತು ತಮಗಿ

ನ್ನೊಡಲುಗಳ ಮೇಲಾಶೆಯೇಕಿನ್ನೆನುತ ಮಿಗೆ ಮಸಗಿ

ಸೆಡೆದು ಸೊಪ್ಪಾದಖಿಳ ಸುಭಟರ

ಗಡಣವನು ಮೇಳೈಸಿ ಮಗುಳವ

ಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರಾಜ್ಞೆಯಲಿ ೧೨



ಖತಿಯಲಶ್ವತ್ಥಾಮನೀ ರವಿ

ಸುತನ ಜರೆದನು ಗಾಯವಡೆದೈ

ಪ್ರತಿಭಟನ ಭಾರವಣೆ ಲೇಸೇ ಕರ್ಣ ನೀನರಿವೈ

ಅತಿಬಲನು ನೀನಹಿತ ಬಲ ವನ

ಹುತವಹನು ನೀನಿರಲು ಕುರು ಭೂ

ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ ೧೩


ಭಟನು ನಾನಿರಲುಭಯ ರಾಯರ

ಕಟಕದೊಳಗಿನ್ನಾವನೆಂದು

ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ

ಭಟನು ಫಲುಗುಣನಹನು ತೋರಾ

ಪಟುತನವನೆಲೆಯಪಜಯ ಸ್ತ್ರೀ

ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ ೧೪


ಆಗಲೇರಿಸಿ ನುಡಿದ ನುಡಿ ತಾ

ನೀಗಳೇನಾಯಿತ್ತು ನುಡಿಗಳ

ತಾಗನರಿಯದೆ ತರಿಚುಗೆಡೆವರೆ ಗರುವರಾದವರು

ಈಗಳಾವ್ ಹಾರುವರು ಕ್ಷತ್ರಿಯ

ನಾಗಿ ನೀನರ್ಜುನನ ತುರುಗಳ

ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ ೧೫


ಎಲವೊ ಗರುಡಿಯ ಕಟ್ಟಿ ಸಾಮವ

ಕಲಿಸಿ ಬಳಿಕಾ ಕೋಲ ಮಕ್ಕಳ

ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ

ಕಲಹವೇತಕೆ ಕಾಣ ಬಹುದೆಂ

ದಲಘು ಭುಜಬಲ ಭಾನುಸುತ ಕಡು

ಮುಳಿದು ಫಡ ಫಡ ಪಾರ್ಥ ಮೈದೋರೆನುತ ಮಾರಾಂತ ೧೬


ಇತ್ತಲಿತ್ತಲು ಪಾರ್ಥ ನಿಲು ನಿಲು

ಮುತ್ತಯನ ಹಾರುವರನಂಜಿಸಿ

ಹೊತ್ತುಗಳೆದೊಡೆ ಹೋಹುದೇ ಕೈದೋರು ಮೈದೋರು

ತೆತ್ತಿಗರ ಕರೆ ನಿನ್ನ ಬೇರನು

ಕಿತ್ತು ಕಡಲೊಳು ತೊಳೆವ ರಿಪುಭಟ

ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ ೧೭


ಉಂಟು ನೀನಾಹವದೊಳಗೆ ಗೆಲ

ಲೆಂಟೆದೆಯಲಾ ನಿನ್ನ ಹೋಲುವ

ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ

ಟೆಂಟಣಿಸದಿದಿರಾಗು ನಿನ್ನಯ

ಸುಂಟಿಗೆಯನಿತ್ತಖಿಳ ಭೂತದ

ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳೆಂದ ೧೮


ಚಕಿತಚಾಪರು ಗಾಢ ಬದ್ಧ

ಭ್ರುಕುಟಿ ಭೀಷಣಮುಖರು ರೋಷ

ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ

ವಿಕಟ ಶೌರ್ಯೋತ್ಕಟ ಮಹಾ ನಾ

ಯಕರು ನಿಷ್ಠುರ ಸಿಂಹ ಗರ್ಜನೆ

ವಿಕಳಿತಾಚಲ ಸನ್ನಿವೇಶರು ಹೊಕ್ಕು ತರುಬಿದರು ೧೯


ಪೂತುರೇ ಬಿಲುಗಾರ ಮಝರೇ

ಸೂತನಂದನ ಬಾಣ ರಚನಾ

ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ

ಆತುಕೊಳ್ಳೈ ನಮ್ಮ ಬಲುಮೆಗ

ಳೇತರತಿಶಯವೆನುತ ಸರಳಿನ

ಸೇತುವನು ಕಟ್ಟಿದನು ಗಗನಾಂಗಣಕೆ ಕಲಿಪಾರ್ಥ ೨೦


ಮೇಲುಗೈಯಹೆ ಬಿರುದರೊಳು ಬಿ

ಲ್ಲಾಳು ನೀನಹೆ ಚಾಪವಿದ್ಯಾ

ಭಾಳನೇತ್ರನ ಗರುಡಿಯಲ್ಲಾ ಕಲಿತ ಮನೆ ನಿನಗೆ

ಕೋಲು ನಮ್ಮವು ಕೆಲವು ಸಮಗೈ

ಯಾಳೆ ನಿಮಗಾವೆನುತ ನೋಟಕ

ರಾಲಿ ಝೋಂಮಿಡೆ ಕರ್ಣ ತುಳುಕಿದನಂಬಿನಂಬುಧಿಯ ೨೧


ಅಹಹ ಫಲುಗುಣ ನೋಡಲಮ್ಮೆನು

ಬಹಳ ಬಾಣಾದ್ವೈತವಾದುದು

ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ

ರಹವ ಮಾಡದಿರೆಲವೊ ತನಗಿದು

ಗಹನವೇ ನೋಡೆನುತ ನರನತಿ

ಸಹಸದಲಿ ಕೆದರಿದನು ಕರ್ಣನ ಬಾಣಪಂಜರವ ೨೨


ವೀರನಲ್ಲಾ ಬನದ ರಾಜ ಕು

ಮಾರನಲ್ಲಾ ಕೌರವನ ಬಡಿ

ಹೋರಿಯಲ್ಲಾ ತಿರಿದಿರೈ ದಿಟವೇಕಚಕ್ರದಲಿ

ನಾರಿಯರ ನಾಟಕದ ಚೋಹವ

ನಾರು ತೆಗೆದರು ಪಾರ್ಥ ನಿನಗೀ

ಶೌರಿಯದ ಸಿರಿಯೆಂತೆನುತ ತೆಗೆದೆಚ್ಚನಾ ಕರ್ಣ ೨೩


ಬಲುಗಡಿಯನಹೆ ಬೇಟೆಗಾರರ

ಬಳಗವುಳ್ಳವನಹೆ ವಿರೋಧಿಯ

ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿ ಕಾರ್ಯದಲಿ

ತಲೆಯ ತೆರುವವನಹೆ ಕುಭಾಷೆಗೆ

ಮುಳಿವವರು ನಾವಲ್ಲ ಸೈರಿಸು

ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸರಿವಳೆಯ ೨೪


ಅದ್ದನೋ ಬಾಣಾಂಬುಧಿಯಲೊಡೆ

ಬಿದ್ದನೋ ವಿತಳದಲಿ ಮೇಣ್ವಿಧಿ

ಕದ್ದನೋ ಕೈವಾರವೇತಕೆ ಕಾಣೆನಿನಸುತನ

ತಿದ್ದಿತಾತನ ದೆಸೆ ನದೀಸುತ

ನಿದ್ದನಾದೊಡೆ ಕೌರವೇಂದ್ರನ

ಹೊದ್ದ ಹೇಳೆಂದೊದರುತಿರ್ದುದು ಕೂಡೆ ಕುರುಸೇನೆ ೨೫


ಇಡಿದ ಮೋಡದ ಮುತ್ತಿಗೆಯ ಮೇ

ಲೊಡೆದು ಮೂಡುವ ರವಿಯವೋಲ್ ನೆರೆ

ಕಡಿದು ಶರಪಂಜರವ ಮುಸುಕಿದನರ್ಜುನನ ರಥವ

ನಡುಗಿದನು ವೈರಾಟ ಹಯವಡಿ

ಗಡಿಗೆ ನೊಂದವು ಹನುಮನಂಬರ

ವೊಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ ೨೬


ಸೋಲವಾಯಿತು ಕರ್ಣಗೆಂಬರ

ನಾಲಗೆಯ ಕೊಯ್ಯೆಲವೊ ಬಿಡು ಬಿ

ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಭೂಪತಿಯ

ಭಾಳದಕ್ಕರ ತೊಡೆಯಿತೋ ತೆಗೆ

ಕಾಳಗವನೆಂದಖಿಳ ಕುರುಬಲ

ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಯಲಿ ೨೭


ಅರಿಭಟನ ಶಿರಜಾಲವನು ಸಂ

ಹರಿಸಿದನು ನಿಮಿಷದಲಿ ಫಲುಗುಣ

ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ

ಶರಚತುಷ್ಟಯದಿಂದ ಕರ್ಣನ

ಕರದ ಬಿಲ್ಲನು ಕಡಿಯೆ ಭಗ್ನೋ

ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ ೨೮


ಓಟವೇ ಅಪಜಯದ ಬೊಡ್ಡಿಯ

ಬೇಟವೇ ಬೆಸಗೊಳ್ಳಿರೈ ಒಳ

ತೋಟಿಗೊತ್ತಾಳಹುದು ನಾಲಗೆಯೀಗಳೇನಾಯ್ತು

ಆಟವಿಕ ಭೂಪತಿಯ ಕೀರ್ತಿಯ

ಕೂಟಣಿಗರೊಗ್ಗಾಯ್ತು ತೆಗೆ ಮರು

ಳಾಟವಿನ್ನೇಕೆನುತ ಪಾರ್ಥನ ತಾಗಿದನು ದ್ರೋಣ ೨೯


ಇದಿರುಗೊಳ್ಳೈ ಪಾರ್ಥ ವಿಪ್ರರಿ

ಗದಟುತನವೆಲ್ಲಿಯದು ಕರ್ಣನ

ಸದೆಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ

ಕದನದಲಿ ನೀ ನೋಡು ಕೈ ಸಾ

ರಿದವು ಗಡ ಕಾಮಾರಿ ಹಿಡಿವ

ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ ೩೦


ಇದಿರುಗೊಂಡೆನು ವಂದಿಸಿದೆನೆ

ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ

ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ

ಹೃದಯ ನಿಮ್ಮದು ಕಾಳಗಕೆ ನಿ

ಮ್ಮಿದಿರೊಳಾಳೇ ತಾನು ಕರುಣಾ

ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ ೩೧


ವಿನಯವುಚಿತವೆ ತತ್ತ ಸಮರದ

ಮೊನೆಯೊಳಾರಿದಿರಾದಡಿರಿವುದು

ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು

ತನುಜ ಸೈರಿಸು ಸೈರಿಸೆಂದೆ

ಚ್ಚನು ನಿರಂತರ ಬಾಣ ವರುಷವ

ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ ೩೨


ಭಾವಿಸಲು ಪ್ರತಿಬಿಂಬದಲಿ ಬೇ

ರಾವುದತಿಶಯವುಂಟು ನೀವೆನ

ಗಾವ ಪರಿಯನು ಕಲಿಸಿದಿರಿ ನಿಮಗೊಪ್ಪಿಸುವೆನದನು

ನೀವು ನೋಡುವದೆನುತ ನರನೆಸ

ಲಾವುದಂಬರವಾವುದವನಿಯ

ದಾವುದರಿ ಬಲವೆನಲು ಹಬ್ಬಿತು ಪಾರ್ಥ ಶರಜಾಲ ೩೩


ವಿಷಯ ಲಂಪಟತನದಲಾವ್ ನಿ

ರ್ಮಿಸಿದೆವಶ್ವತ್ಥಾಮನನು ನ

ಮ್ಮೆಸೆವ ಮೋಹದ ಕಂದನೈಯೆಲೆಪಾರ್ಥ ನೀನೆಮಗೆ

ಎಸುಗೆಗಾರರದಾರಿಗೀ ಶರ

ವಿಸರ ಸಂಭವಿಸುವುದಿದಾರಿಗೆ

ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ ೩೪


ಎನುತ ಸುರಿದನು ಸರಳ ಸಾರವ

ನನಲ ಗರ್ಭದ ಬಾಯ ಧಾರೆಗ

ಳನಿಲ ಗರ್ಭದ ಗರಿಗಳಶನಿಯ ಗರ್ಭ ಮಿಂಟೆಗಳ

ಮೊನೆಯ ಬಂಬಲುಗಿಡಿಯ ಹೊರಗಿನ

ತನಿಹೊಗೆಯ ಹೊದರುಗಳ ಪುಂಖ

ಧ್ವನಿಯ ದಟ್ಟಣೆ ಮಿಗಲು ಕವಿದವು ದ್ರೋಣನಂಬುಗಳು ೩೫


ದೇವ ಭಾರದ್ವಾಜ ಬಲು ವಿ

ದ್ಯಾ ವಿಷಯ ನವರುದ್ರ ಘನ ಶ

ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ

ಕೋವಿದನು ಶರತಿಮಿರವನು ಗಾಂ

ಡೀವಿಯಗಣಿತ ಬಾಣ ಭಾನು ಕ

ರಾವಳಿಯಲಪಹರಿಸಿದನು ಸುರರಾಜಸುತ ನಗುತ ೩೬


ಹಿಳುಕನೀದುದೊ ಗಗನವಂಬಿನ

ಜಲಧಿ ಜರಿದುದೊ ಪಾರ್ಥನೆಂಬ

ಗ್ಗಳ ವಿರಿಂಚನ ಬಾಣ ಸೃಷ್ಟಿಯೊ ಬಲ್ಲನಾವವನು

ಇಳೆಯ ಮರ್ತ್ಯರು ಶಿವ ಶಿವಾ ತೆಗೆ

ಫಲುಗುಣಗೆ ಸರಿಯೆಂಬವರ ಬಾಯ್

ಹುಳಿವುದೋ ಗುಣಕೇಕೆ ಮತ್ಸರವೆಂದುದಮರಗಣ ೩೭


ಬಳಿಕ ಪಾರ್ಥನ ಬಾಣದಲಿ ಬಸ

ವಳಿಯೆ ಸಾರಥಿ ಮೆಲ್ಲ ಮೆಲ್ಲನೆ

ತೊಲಗಿಸಿದನಾ ರಥವನಿತ್ತಲು ಕರ್ಣನೀಕ್ಷಿಸಿದ

ಎಲೆಲೆ ಕಟಕಾಚಾರ್ಯ ಗೆಲಿದನು

ಫಲುಗುಣನನಿನ್ನೇನು ಕೌರವ

ಬಲದ ಹಗೆ ಹರಿವಾಯ್ತು ರಾಜಾಭ್ಯುದಯವಿನ್ನೆಂದ ೩೮


ಫಡ ಫಡೆಲವೊ ಕರ್ಣ ಸಾರಥಿ

ಮಡಿದರೇನದು ಸೋಲವೇ ಕಾ

ಳ್ಗೆಡೆಯದಿರು ನೋಡಾದಡಯ್ಯನ ಹರಿಬದಾಹವವ

ನುಡಿಗೆ ತೆರನಾಯ್ತೆಂಬ ಖುಲ್ಲರ

ಬೆಡಗ ನೋಡೆನುತುಗ್ರ ಚಾಪವ

ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ ೩೯


ಆವುದೈ ನೀನರಿದ ಬಿಲು ವಿ

ದ್ಯಾ ವಿಷಯ ಘನ ಚಾಪ ವೇದಾ

ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು

ಕೋವಿದರ ಭೂಸುರರ ಯುಕ್ತಿಯ

ನೀವು ಕೊಂಡಿರೆ ಶಸ್ತ್ರವಿದ್ಯಾ

ಭಾವ ಗೋಷ್ಠಿಯ ಬಲ್ಲಡರಿಯೆಂದೆಚ್ಚನರ್ಜುನನ ೪೦


ಅಕ್ರಮವ ತಿರಿಭುವನ ವಿದ್ಯಾ

ಚಕ್ರವರ್ತಿಗಳೆಂದು ನೀವೀ

ವಿಕ್ರಮದ ಮಾತಿನಲಿ ಮೇಗರೆ ಮೆರೆವ ಭಟರುಗಳೆ

ಶಕ್ರನಳುಕುವ ಬಾಹುಬಲ ರಿಪು

ಚಕ್ರದೊಳಗಿನ್ನಾರಿಗುಂಟದು

ವಕ್ರ ಭಣಿತೆಗೆ ಸಲುವುದಶ್ವತ್ಥಾಮನೆನುತೆಚ್ಚ ೪೧


ಅರ್ಜುನನ ಶರವಿದ್ಯೆ ವಿವರಿಸೆ

ದುರ್ಜಯವಲಾ ಗರುವತನದಲಿ

ಗರ್ಜಿಸಿದೊಡೇನಹುದೆನುತ ಗುರುಸೂನು ಹರುಷದಲಿ

ನಿರ್ಜರರು ಮಝ ಭಾಪುರೆನಲಾ

ವರ್ಜಿಸಿದ ತಿರುವಿನಲಿ ಸಂಗರ

ನಿರ್ಜಿತೇಂದ್ರಿಯನೆಸಲು ಕಣೆಗಳು ಕವಿದವಂಬರಕೆ ೪೨


ಗುರುತನೂಜನಲಾ ವಿಭಾಡಿಸಿ

ಹುರುಳುಗೆಡಿಸಲು ಬಹುದೆ ನೋಡು

ತ್ತರ ಸುಯೋಧನ ಸೈನ್ಯಶರಧಿಯ ಗುಂಪಿನತಿಬಲರ

ಹರನ ಸರಿದೊರೆಯಸ್ತ್ರ ವಿದ್ಯಾ

ಧರರು ಮರ್ತ್ಯರೊಳಾರು ಲೇಸೆಂ

ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ ೪೩


ಗುರುಸುತನ ಶರಜಾಲವನು ಸಂ

ಹರಿಸಿ ಮಗುಳಸ್ತ್ರೌಘವನು ವಿ

ಸ್ತರಿಸಿದನು ಕಲಿಪಾರ್ಥನೀತನ ಸರಳುಗಳ ಸವರಿ

ತರಣಿ ಬಿಂಬವ ನಭವ ಹೂಳ್ದುದು

ಗುರುಸುತನ ಸಾಮರ್ಥ್ಯವಿಂತಿ

ಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ ೪೪


ತೀರವರ್ಜುನನಂಬು ರಣದಲಿ

ತೀರಿದವು ಗುರುಸುತನ ಶರ ಕೈ

ವಾರವೇ ಕೈಗುಂದಿ ನಿಂದನು ದ್ರೋಣನಂದನನು

ಮೇರು ಮೊಗದಿರುಹಿತ್ತಲಾ ರಣ

ಧೀರನಶ್ವತ್ಥಾಮ ಸೋತನು

ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ ೪೫


ತಂದೆ ಮಕ್ಕಳು ಸೋತರಿನ್ನೇ

ನೆಂದು ಮುಯ್ಯಾನದಿರು ನಿಲು ನಿ

ಲ್ಲೆಂದು ಕೃಪನಡ ಹಾಯ್ದು ಪಾರ್ಥನ ರಥವ ತರುಬಿದನು

ಬಂದ ಪರಿ ಲೇಸೆನುತ ಫಲುಗುಣ

ನೊಂದು ಕನಲಂಬಿನಲಿ ಗುರುಗಳಿ

ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ೪೬


ತರಹರಿಸಿ ಶರವೈದರಲಿ ಸಂ

ಹರಿಸಿ ಕೊಳ್ಳೆಂದೆಚ್ಚೊಡೀತನ

ತುರಗವನು ತಾಗಿದವು ನೊಂದವು ರಥದ ವಾಜಿಗಳು

ಕೆರಳಿ ಫಲುಗುಣನರ್ಧ ಚಂದ್ರದ

ಸರಳಿನಲಿ ಸಾರಥಿಯ ತುರಗವ

ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ ೪೭


ಎಲೆಲೆ ಕರ್ಣ ದ್ರೋಣ ಗುರುಸುತ

ರಲಘು ಭುಜಬಲ ಕೃಪನು ಹೊಕ್ಕಿರಿ

ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ

ಗೆಲುವನೊಬ್ಬನೆ ನಮ್ಮ ಬಲದಲಿ

ನಿಲುಕಿ ಹಿಂಗುವ ಸುಭಟರಿನಿಬರು

ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ ೪೮


ಬಾಯ ಬಿಟ್ಟುದು ಸಕಲ ಕೌರವ

ರಾಯದಳ ವಡಮುಖದಲದಟರು

ಹಾಯಿದರು ತಡವೇನು ತೆರದೆರಸಾಯ್ತು ಕುರುಸೇನೆ

ಕಾಯಬೇಕೆಂದೆನುತ ವರ ಗಾಂ

ಗೇಯ ಚಾಪವ ಮಿಡಿದು ಬೆರಳಲಿ

ಸಾಯಕವ ತೂಗುತ್ತ ತಡೆದನು ಪಾರ್ಥನುರವಣೆಯ ೪೯


ಓಡಿದವರಲ್ಲಲ್ಲಿ ಧೈರ್ಯವ

ಮಾಡಿತಚ್ಚಾಳೊಗ್ಗಿನಲಿ ಹುರಿ

ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ

ಕೂಡೆ ಗರಿಗಟ್ಟಿತು ಚತುರ್ಬಲ

ಜೋಡು ಮಾಡಿತು ಕವಿದುದೀತನ

ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ ೫೦


ತೊಲಗು ರಾಯ ಪಿತಾಮಹನ ಖತಿ

ಬಲುಹು ತೆತ್ತಿಗರಹರೆ ರುದ್ರನ

ನಳಿನನಾಭನ ಕರೆಸು ನೀ ಶಿಶು ಸಾರು ಸಾರೆನುತ

ಉಲಿವ ಬಳಿಯ ಮಹಾರಥರ ಕಳ

ಕಳದ ಕಹಳೆಯ ಪಾಠಕರ ಗಾ

ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ೫೧


ಪೂತುರೇ ಕಲಿ ಪಾರ್ಥ ಭುವನ

ಖ್ಯಾತನಾದೈ ಕಂದ ದ್ರೋಣನ

ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು

ಬೀತುದೇ ನಿಮ್ಮವಧಿ ಕುರುಕುಲ

ಜಾತವನು ಹರೆಗಡಿದು ನಿಮ್ಮಯ

ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ ೫೨


ನಿಮ್ಮ ಕಾರುಣ್ಯಾವಲೋಕನ

ವೆಮ್ಮ ಸಿರಿ ಬೇರೆಮಗೆ ಕಾಳಗ

ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ

ಬಿಮ್ಮು ಬೀಸರವಹುದೆ ನಿಮ್ಮಯ

ಸೊಮ್ಮಿನವರಿಗೆ ಬೇರೆ ರಾಜ್ಯದ

ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ ೫೩


ಎಸಲು ಪಾರ್ಥನ ಬಾಣವನು ಖಂ

ಡಿಸುತ ಸೂತನನೆರಡರಲಿ ಕೀ

ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ

ನಿಶಿತ ಶರವೆಂಟರಲಿ ಕವಚವ

ಕುಸುರಿದರಿದನು ನರನ ವಕ್ಷದ

ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ ೫೪


ಅರಿಯ ಶರಹತಿಗುತ್ತರನ ತನು

ಬಿರಿಯೆ ಬಸವಳಿದನು ಕಪೀಶ್ವರ

ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ

ಮರೆದು ಮಲಗಿದ ಸೂತನನು ನಾ

ಲ್ಕೆರಡು ಗಳಿಗೆಯು ಬೀಸಿ ಮೂಗಿನೊ

ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ ೫೫


ಕವಳವಿದ ಕೋ ಬಾಣ ಶಸ್ತ್ರಾ

ನಿವಹ ಧಾರಾಸ್ತಂಭವಿನ್ನಾ

ಹವದೊಳಂಜದಿರೆನುತೆ ಕೊಡಲುತ್ತರನು ದುಗುಡದಲಿ

ಬವರದಾದಿಯನರಿಯದನ ಕೊಂ

ದವನು ನೀನೋ ಭೀಷ್ಮನೋಯೆವ

ಲವನ ನುಡಿಗರ್ಜುನನು ನಗುತಪರಾಧವುಂಟೆಂದ ೫೬


ಹದುಳಿಸಿನ್ನಂಜದಿರು ಬಾಣೌ

ಘದ ವಿದಾರಣವಿದು ವಿಚಾರಿಸ

ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು

ಒದೆದು ಕೊಳುತೈದಾನೆ ಸಿಂಧದ

ತುದಿಯ ಹನುಮನು ವಜ್ರಮಯ ದೇ

ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ ೫೭


ಎಂದು ಮೂರಂಬಿನಲಿ ಗಂಗಾ

ನಂದನನ ಮುಸುಕಿದನು ಸಾರಥಿ

ನೊಂದನಾ ಧ್ವಜ ದಂಡವುಡಿದುದು ರಥ ವಿಸಂಚಿಸಿತು

ಮುಂದುಗೆಟ್ಟನು ಭೀಷ್ಮನಹುದೋ

ತಂದೆಯೆನುತಾರಂಬಿನಲಿ ಖತಿ

ಯಿಂದ ಪಾರ್ಥನನೆಸಲು ಥಟ್ಟುಗಿದಂಬು ಹಾರಿದವು ೫೮


ಒರತುದರ್ಜುನನೊಡಲಿನಲಿ ದುರು

ದುರಿಸಿ ಸುರಿದುದು ಅರುಣಮಯ ಜಲ

ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ

ತರಿದನೆಡೆಯಲಿ ಭೀಷ್ಮನುರೆ ಬೊ

ಬ್ಬಿರಿದು ಬಳಿಕಾಗ್ನೇಯ ಬಾಣದ

ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ ೫೯


ವರುಣ ಬಾಣದಲಸ್ತ್ರವನು ಸಂ

ಹರಿಸಿದನು ಕಲಿ ಭೀಷ್ಮನೊಬ್ಬೊ

ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು

ಹರಿಸಿದರು ಕೌಬೇರ ಮಾರುತ

ನಿರುತಿ ಯಮ ಪುರುಹೂತ ಶಂಕರ

ಪರಿ ಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು ೬೦


ಮಲೆತು ನಿಲುವೊಡೆ ಭೀಷ್ಮನಲ್ಲದೆ

ಕೆಲರು ಪಾರ್ಥನ ದಿವ್ಯ ಬಾಣಾ

ವಳಿಯ ಗಾರಾಗಾರಿಗಿದಿರೇ ಭೀಷ್ಮನುರವಣೆಗೆ

ಕಲಿ ಧನಂಜಯನಲ್ಲದಿದಿರಲಿ

ನಿಲುವರುಂಟೇ ಭುಜಗ ಸುರ ನರ

ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು ೬೧


ಪೂತು ಪಾಯಕು ಪಾರ್ಥ ಬಿಲು ವಿ

ದ್ಯಾತಿಶಯದಲಿ ಭೀಷ್ಮನೀ ಪುರು

ಹೂತನಮರಾರಿಗಳ ಮಿಕ್ಕರಲಾ ಮಹಾದೇವ

ಈತಗಳು ಜನಿಸಿದೊಡೆ ಹಿಂದೆ ಮ

ಹೀತಳವ ಕದ್ದೊಯ್ವನೇ ಖಳ

ಸೀತೆ ಬನದಲಿ ನವೆವಳೇಯೆನುತಿರ್ದುದಮರಗಣ ೬೨


ಹಿಂದೆ ಕರ್ಣನ ಕೈಮೆಯನು ಗುರು

ನಂದನನ ಬಿಲುಗಾರತನವನು

ಮಂದರೋಪಮ ಧೈರ್ಯವಾಚಾರಿಯನ ಪರಿಣತೆಯ

ಇಂದು ಕೃಪನಗ್ಗಳಿಕೆಯನು ನಲ

ವಿಂದ ಕಂಡೆನಿದಾರ ಪರಿಯ

ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ ೬೩


ಎನೆ ಕುಮಾರಕ ಕಾರ್ತವೀರ್ಯಾ

ರ್ಜುನನಾತನ ತೋರ ತೋಳಿನ

ಬನವ ಕಡಿದನು ವೀರಭಾರ್ಗವ ರಾಮನತಿ ಬಲನು

ಮುನಿದು ಮಲೆತೊಡೆ ಭೀಷ್ಮನಾತನ

ಮನಕೆ ಭೀತಿಯನಿತ್ತನೀತನೊ

ಳೆನಗೆ ಸರಿನೂಕುವದೆ ಕಾಳಗವೆಂದನಾ ಪಾರ್ಥ ೬೪


ಮತ್ತೆ ಗಂಗಾಸೂನು ಪಾರ್ಥನ

ತೆತ್ತಿಸಿದನೈದಂಬಿನಲಿ ರಥ

ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ

ಹುತ್ತಕುರಗನು ಬಗಿದು ಹೊಗುವವೊ

ಲುತ್ತರಿಸಿದವು ಸರಳು ಮಿಗೆ ಧೃತಿ

ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ ೬೫


ನರನ ಶರದಲಿ ಭೀಷ್ಮನೆದೆ ತನು

ಬಿರಿಯೆ ಮೈ ಝೋಂಪಿಸಿತು ಸಲೆ ತರ

ಹರಿಸಲರಿಯದೆ ಮಲಗಿ ನಿಂದನು ರಥದ ಕಂಬುಗೆಯ

ಅರರೆ ಸೋತನು ಭೀಷ್ಮನಿನ್ನೇ

ನುರಿದುದೋ ಕುರುಸೇನೆ ಯಾವೆಡೆ

ದೊರೆಯೆನುತ ಬಾಯ್ಬಿಡಲು ಕೌರವರಾಯ ಮಾರಾಂತ ೬೬


ಸೀಳು ನಾಯ್ಗಳ ಬಾಯ ಕೆಲಬಲ

ದಾಳ ಹಂಗಿನ ದೊರೆಯೆ ಸುಭಟರ

ಸೋಲವದು ರಾಯರಿಗೆ ಸೋಲವೆ ನೂಕು ನೂಕೆನುತ

ಕೋಲ ಹೊದೆಗಳ ಕೆದರಿ ಸಿಂಧದ

ಮೇಲೆ ಹಾವನು ಹಾಯ್ಕಿ ಸಾರಥಿ

ಮೇಳವಿಸಲವನಿಪನ ರಥವನು ನೆರೆದುರತಿರಥರು ೬೭


ಕಲಕಿ ಕೆದರಿದ ಬಲಜಲಧಿಯೊ

ಬ್ಬುಳಿಗೆ ಬಂದುದು ತಳಿತ ಸತ್ತಿಗೆ

ಗಳ ವಿಡಾಯಿಯಲಳ್ಳಿರಿವ ನಿಸ್ಸಾಳ ಕೋಟಿಗಳ

ಉಲಿವ ಕಹಳೆಯ ಬೈಗುಳೆಡಗೈ

ತಳದ ಬಾಯ್ಬಲಗೈಯನೊಲವುತ

ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ ೬೮


ಒಗ್ಗು ಮುರಿಯದೆ ಸೇನೆ ಮೊಳಗುವ

ಲಗ್ಗೆವರೆಯಲಿ ಹೆಣನ ತುಳಿದೊಡೆ

ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ

ಹುಗ್ಗಿಗರ ಬಲುಹುರಿಯ ನಿಗುಚುವೆ

ನಿಗ್ಗುವೆನು ನಿಲ್ಲೆನುತ ಸೇನೆಯ

ನಗ್ಗಡಲೊಳಿಕ್ಕಿದನು ಫಲುಗುಣನಗಣಿತಾಸ್ತ್ರದಲಿ ೬೯


ವೀರರಿದಿರಹ ಹೊತ್ತು ರಣ ಮೈ

ಲಾರರಾದರು ಮರಳಿ ತೆಗೆವುತ

ಭೈರವನ ಸಾರೂಪ್ಯವಾದರು ಪೂತು ಮಝರೆನುತ

ಕೌರವನು ಕರ್ಣಾದಿಗಳ ನುಡಿ

ಯೋರೆ ಹದರಿನೊಳವಗಡಿಸಿ ಹೊಂ

ದೇರ ದುವ್ವಾಳಿಸುತ ಮೂದಲಿಸಿದನು ಫಲುಗುಣನ ೭೦


ಬಾಲ ವೃದ್ಧರ ವಿಪ್ರರನು ನೀ

ಕಾಳಗದೊಳೋಡಿಸಿದೆನೆಂದೇ

ಮೇಲು ಪೋಗಿನಲಿರಲು ಬೇಡೆಲೆ ಪಾರ್ಥ ಮರುಳಾದೈ

ಆಳಿದಡವಿಯ ರಾಜ್ಯವಲ್ಲದೆ

ಮೇಲೆ ಧರಣಿಯ ಬಯಸಿದೊಡೆ ನಿಮ

ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ ೭೧


ಗಾರುಗೆಡೆಯದಿರೆಲವೊ ಸತ್ಯವ

ಮೀರಲಮ್ಮದೆ ಲೋಕ ನಿನ್ನನು

ದೂರ ಬೇಕೆಂದಡವಿಯೊಕ್ಕೆವು ಹೊಲ್ಲೆಯೇನಿದಕೆ

ಜಾರಿ ಹೋಯಿತ್ತವಧಿಯಿನ್ನೀ

ಮೀರಿ ಗಳಹುವ ನಿನ್ನ ಗಂಟಲ

ನೂರಿ ರಾಜ್ಯವ ತೆಗೆವೆ ಸೈರಿಸೆನ್ನುತ್ತ ನರನೆಚ್ಚ ೭೨


ಅರಿಯೆ ನೀನೆಲೆ ಮರುಳೆ ಗರುಡನ

ತರವಳಿಕೆಯಲಿ ಹಾವು ಕನ್ನವ

ಕೊರೆದು ಬದುಕುವದೇ ವೃಥಾ ಕಕ್ಕುಲಿತೆ ನಿನಗೇಕೆ

ತರಿದು ತಿರಿಕಲ್ಲಾಡುವೆನು ನಿ

ಮ್ಮುರುವರೈವರ ಶಿರವನರ್ಜುನ

ಬರಿದೆ ಗಳಹುದಿರೆನುತ ಕೌರವರಾಯ ತೆಗೆದೆಚ್ಚ ೭೩


ಗರುಡ ನೀನಹೆ ನಿನ್ನ ಪಕ್ಕವ

ಮುರಿದು ಹೆಡತಲೆಗಡರಿ ಬೆನ್ನೆಲು

ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯೆ

ತರಹರಿಸಿ ಕಲಿಯಾಗುಯೆಂದ

ಬ್ಬರಿಸಿ ಕೌರವನೆದೆಯನುಗುಳಿದ

ನೆರಡು ಬಾಣದೊಳರುಣ ಜಲದೊರೆತೆಗಳ ಕಾಣಿಸಿದ ೭೪


ನವ ನಿಕಾರಿಯ ವಲ್ಲಿ ಸೀರೆಗ

ಳವಯವದ ರಕುತದಲಿ ತೋದವು

ಜವವಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ

ಕವಿದನರ್ಜುನನೋಡದಿರು ಕೌ

ರವ ಪಲಾಯನವಕಟಕಟ ಪಾ

ರ್ಥಿವರ ಪಂಥವೆ ಮರಳಿ ನಿಂದಿರು ಕೊಲುವದಿಲ್ಲೆಂದ ೭೫


ಮಾತು ಹಳಸದ ಮುನ್ನ ಕೈಗಳು

ಸೋತು ತೆಗೆದವೆ ಹೊಳ್ಳುವಾತಿದು

ನೀತಿಯೇ ನರಪತಿಗಳಿಗೆ ಬಹು ಭಂಗವನ್ವಯಕೆ

ಭೀತನಲ್ಲದೆ ಕಾದಿ ಮಡಿದನ

ಮಾತುಗಳಲಾ ಪುಣ್ಯಕಥನವು

ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ ೭೬


ಹುರುಳುಗೆಟ್ಟುದು ಗರುವತನವೆಂ

ದರಸ ನಾಚಿದನಧಿಕ ಶೌರ್ಯೋ

ತ್ಕರುಷೆಯಲಿ (ಪಾ: ತ್ಕರ್ಷೆಯಲಿ) ಕಲಿಯಾಗಿ ನಿಂದನು ಮತ್ತೆ ಕಾಳಗಕೆ

ದೊರೆಯ ದುಗುಡವ ಕಂಡು ತಮ ತಮ

ಗುರವಣಿಸಿದರು ಸಕಲ ಸುಭಟರು

ಹೊರಳಿಗಟ್ಟಿತು ಸೇನೆ ನಿಚ್ಚಟರಳಿವ ನಿಶ್ಚಯಿಸಿ ೭೭


ನೊಂದನವನಿಪ ನಿಂದು ಪಾರ್ಥನ

ಕೊಂದು ತೋರುವೆನೆಂದು ರವಿಸುತ

ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು

ಒಂದು ಕಡೆಯಲಿ ಮಸಗಿದರು ಗುರು

ನಂದನನು ವೃಷಸೇನ ಸೈಂಧವ

ರೊಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು ೭೮


ಗುರು ಚಡಾಳಿಸಿ ಹೊಕ್ಕನೊಮ್ಮಿಂ

ಗುರವಣಿಸಿದನು ಬಾಹ್ಲಿಕನು ಭಾ

ಸುರ ಕಳಿಂಗ ಸುಕೇತು ಭೂರಿಶ್ರವನು ದುಸ್ಸಹನು

ನರನ ಮುತ್ತಿದರೊಂದು ಕಡೆಯಲಿ

ತೆರಳಿಕೆಯ ತೇರಿನಲಿ ಬಲ ಮೋ

ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ ೭೯


ಅಂಗವಿಸಿತರಿ ಸೇನೆ ಲೋಕವ

ನುಂಗಿ ಕುಣಿಯಲು ಬಗೆವ ಭರ್ಗನ

ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದಲಿ

ಭಂಗಿತರ ಮರುವಲಗೆಯಲಿ ಸ

ರ್ವಾಂಗಬಲ ಜೋಡಿಸಿತು ನಮ್ಮುಳಿ

ವಿಂಗೆ ಹದನೇನೆನುತ ಮತ್ಸ್ಯನ ಸೂನು ಚಿಂತಿಸಿದ ೮೦


ನೆರೆದ ತಿಮಿರದ ಥಟ್ಟು ಸೂರ್ಯನ

ತೆರಳಿಚುವವೊಲ್ ಮೇಘ ಘಟೆಗಳು

ಮುರಿದು ಮೋಹರವೌಕಿ ಪವನನ ಸೆರಗ ಹಿಡಿವಂತೆ

ತೆರಳೊದತ್ತಂಬರಿಸಿ ಕುರುಬಲ

ವೊರಲಿ ಹೆಣನನು ತುಳಿದು ಮೇಲ

ಬ್ಬರಿಸಿ ಬರೆ ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ ೮೧


ಎಸಲು ಸನ್ಮೋಹನದ ಶರ ಪಸ

ರಿಸಿತು ಬಲದಲಿ ಬಹಳ ನಿದ್ರಾ

ವ್ಯಸನ ವಿಹ್ವಲಿತಾಂತರಂಗರು ಮೈಯ್ಯನೊಲೆದೊಲೆದು

ಉಸುರ ಸಂಚದ ನಾಡಿಯವಗಾ

ಹಿಸಲು ಕೊರೆದರು ಗುರುಕಿಡುತ ತಲೆ

ಮುಸುಕಿನಲಿ ನೆರೆ ತೆಕ್ಕೆಗೆಡೆದುದು ನಿಖಿಳ ಕುರುಸೇನೆ ೮೨


ತನುವನೊಲೆದವು ದಡದಡಿಸಿ ಕಿವಿ

ಗೊನೆಯ ಜೋಲಿಸಲಲ್ಲಿ ಮಡಿಗಾ

ಲಿನಲಿ ಕುಸಿದವು ಕೊರಳ ಮರಳಿಚಿ ಕೈಯ್ಯನೊಳಗಿಟ್ಟು

ತೊನೆದು ಕೆಡೆದವು ಜೋಧರಾಗಳು

ಕನಲಿ ಕೆಡೆದರು ಗುರು ನದೀಜರ

ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು ೮೩


ದೃಗುಯುಗಳವರೆದೆರೆಯೆ ರೋಮಾ

ಳಿಗಳು ತೆಕ್ಕೆಯ ಸಾರೆ ಕೊರಳರೆ

ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು

ಬಿಗುವು ಸಹಿತವೆ ಹೊನ್ನ ಮರಗೋ

ಡುಗಳ ಮೇಲಡಗೆಡೆದು ನಿದ್ರಾ

ಮುಗುದರಾದರು ರಾವುತರು ತೂಕಡಿಸಿದವು ತುರಗ ೮೪


ಬಿಲು ಸೆಳೆಯೆ ಕೈದುಗಳು ಕೈಯಿಂ

ಚಲಿಸಲೊಬ್ಬರನೊಬ್ಬರತ್ತಲು

ಮಲಗಿ ಬೆಂಬತ್ತಳಿಕೆ ಬದಿಯೊಳಗಡಸಿ ತೋಳುಗಳ

ತಲೆಯೊಳಾನಿಸಿ ಗುರುಗುರಿಸಿ ರಥ

ದೊಳಗೆ ಸಾರಥಿವೆರಸಿ ನಿದ್ರಾ

ಕುಳರು ಜೊಮ್ಮಿನ ಮೇಲೆ ಮೈಮರೆದಿರ್ದರತಿರಥರು ೮೫


ಸರಳ ಸೊಕ್ಕವಗಡಿಸಿ ಸಲೆ ಮೈ

ಮರೆದನಿತ್ತಲು ದ್ರೋಣ ರಥದಲಿ

ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ

ಕರದ ಬಿಲು ಶರ ಸರಿಯೆ ಕಂಗಳು

ಮುರಿಯೆ ಕರ್ಣನು ಕೆನ್ನೆಗೆದೆಯೊಳು

ದುರುಳ ದುರ್ಯೋಧನ ಸಹಿತ ಮೈಮರೆದುದರಿಸೇನೆ ೮೬


ಸೇನೆ ಮೈಮರೆದೊರಗಿದದಟ ನಿ

ಧಾನವೊಗೆದರುಹಿತ್ತು ನಿದ್ರಾ

ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ

ಏನ ಹೇಳುವೆನದನು ಕದನದ

ಕಾನನದೊಳತಿರಥರು ವಿಜಯ ವಿ

ಹೀನಬಲ ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು ೮೭


ಕನಸು ಮೇಣೆಚ್ಚರು ಸುಷುಪ್ತಿಗ

ಳೆನಿಪವಸ್ಥಾ ತ್ರಿತಯದಲಿ ಜೀ

ವನು ವಿಸಂಚಿಸಿ ಬೀಳ್ವನಲ್ಲದೆ ಶರಕೆ ಸಿಲುಕುವನೆ

ಇನಿತು ಬಲ ತೂಕಡಿಸಿ ಝೋಂಪಿಸಿ

ತನಿಗೆಡೆಯೆ ಭಾಗೀರಥೀ ನಂ

ದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ ೮೮


ಎಣಿಸುವರೆ ಏಕಾದಶಾಕ್ಷೋ

ಹಿಣಿಯ ಬಲವನು ಪಾರ್ಥನೊಬ್ಬನೆ

ರಣದೊಳಗೆಡಹಿದನು ಮೋಹನ ಮಂತ್ರ ಬಾಣದಲಿ

ಕುಣಿದು ಕುಸುಮದ ಸರಿವುಗಳ ಸಂ

ದಣಿಯನಮರರು ಸೂಸಿದರು ಫಲು

ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ ೮೯


ಇಳಿದು ದ್ರೋಣನ ಚರಣ ಕಮಲಂ

ಗಳಿಗೆ ತನ್ನಯ ನೊಸಲ ಚಾಚಿದ

ನಳವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ

ಸುಲಿದು ಕರ್ಣನ ಮುಕುಟ ಪಟ್ಟೆಯ

ಸೆಳೆದು ದುರ್ಯೋಧನನ ವಸ್ತ್ರವ

ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ ೯೦


ಧರಣಿಪಾಲರ ಮುಕುಟವನು ಕ

ತ್ತರಿಸಿ ದುಶ್ಶಾಸನನ ಘನ ಶಿರ

ವರದ ರತ್ನವನುಡಿದು ಭೂರಿಶ್ರವ ಜಯದ್ರಥರ

ಹೊರಳಿಚಿದನು ವಿಶೋಕ ಕುವರರ

ಹುರುಳುಗೆಡಿಸಿದನಖಿಳ ರಾಯರ

ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ ೯೧


ಫಲುಗುಣನ ನೇಮದಲಿ ರಥದಿಂ

ದಿಳಿದನುತ್ತರನವನಿಪನ ಕೋ

ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ

ಸುಲಲಿತಾಂಬರ ರತ್ನಭೂಷಣ

ಗಳನು ಕೊಂಡಡರಿದನು ರಥವನು

ಬಿಲುದುಡುಕಿ ಗಾಂಗೇಯನಡಹಾಯ್ದನು ಧನಂಜಯನ ೯೨


ಎರಡು ಶರದಲಿ ಚಾಪವನು ಕ

ತ್ತರಿಸಿ ಭೀಷ್ಮನ ನಿಲಿಸಿ ಕೌರವ

ಧರಣಿಪಾಲನ ಮುಕುಟವನು ಮೂರಂಬಿನಲಿ ಕಡಿದು

ತಿರುಗಿದನು ಕಲಿಪಾರ್ಥ ನಗುತು

ತ್ತರ ಸಹಿತ ಬನ್ನಿಯಲಿ ಕೈದುವ

ನಿರಿಸಿ ಮುನ್ನಿನ ಹುಲು ರಥದಿ ನಿಜನಗರಿಗೈತಂದ || ೯೩ ||[೧][೨]

  • @@@@@@@@@@@@@@@@@

ನೋಡಿ[ಸಂಪಾದಿಸಿ]

ವಿರಾಟಪರ್ವ:ಸಂಧಿಗಳು>: ೧೦

ಪರ್ವಗಳು[ಸಂಪಾದಿಸಿ]

<ಕುಮಾರವ್ಯಾಸ ಭಾರತ - ಪರ್ವಗಳು-> <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.